Friday, April 18, 2025

ಲೀಪ್ ಮೂಲಕ ವೈಯಕ್ತಿಕ ಪರಿಣಾಮಕಾರಿತ್ವ ಅಭಿವೃದ್ಧಿ ತರಬೇತಿ ಕಾರ್ಯಕ್ರಮ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ `ಕಲಿಕೆ, ತೊಡಗಿಸಿಕೊಳ್ಳಿವಿಕೆ, ವರ್ತನೆ ಮತ್ತು ಕಾರ್ಯಕ್ಷಮತೆ(ಲೀಪ್) ಮೂಲಕ ವೈಯಕ್ತಿಕ ಪರಿಣಾಮಕಾರಿತ್ವ ಅಭಿವೃದ್ಧಿ' ಎಂಬ ವಿಷಯ ಕುರಿತು ಎರಡು ತರಬೇತಿ ಕಾರ್ಯಕ್ರಮಗಳನ್ನು ಏ.೧೫ ರಿಂದ ೧೬ರವರೆಗೆ ಮತ್ತು ಏ. ೧೭ ರಿಂದ ೧೮ ರವರೆಗೆ ವಿಐಎಸ್‌ಎಲ್‌ನ ಭದ್ರಾ ಅತಿಥಿಗೃಹದಲ್ಲಿ ಆಯೋಜಿಸಲಾಗಿತ್ತು. 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ `ಕಲಿಕೆ, ತೊಡಗಿಸಿಕೊಳ್ಳಿವಿಕೆ, ವರ್ತನೆ ಮತ್ತು ಕಾರ್ಯಕ್ಷಮತೆ(ಲೀಪ್) ಮೂಲಕ ವೈಯಕ್ತಿಕ ಪರಿಣಾಮಕಾರಿತ್ವ ಅಭಿವೃದ್ಧಿ' ಎಂಬ ವಿಷಯ ಕುರಿತು ಎರಡು ತರಬೇತಿ ಕಾರ್ಯಕ್ರಮಗಳನ್ನು ಏ.೧೫ ರಿಂದ ೧೬ರವರೆಗೆ ಮತ್ತು ಏ. ೧೭ ರಿಂದ ೧೮ ರವರೆಗೆ ವಿಐಎಸ್‌ಎಲ್‌ನ ಭದ್ರಾ ಅತಿಥಿಗೃಹದಲ್ಲಿ ಆಯೋಜಿಸಲಾಗಿತ್ತು. 
    ಪ್ರತ್ಯೇಕವಾಗಿ ೪೩ ಮತ್ತು ೩೬ ಉದ್ಯೋಗಿಗಳನ್ನು ಒಳಗೊಂಡಂತೆ ಆಯೋಜಿಸಲಾಗಿತ್ತು. ಮೊದಲ ತರಬೇತಿ ಕಾರ್ಯಕ್ರಮ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ ಮತ್ತು ಎರಡನೇ ತರಬೇತಿ ಕಾರ್ಯಕ್ರಮ ಮುಖ್ಯ ಮಹಾಪ್ರಬಂಧಕ(ಸ್ಥಾವರ) ಕೆ.ಎಸ್ ಸುರೇಶ್ ಉದ್ಟಾಟಿಸಿದರು. 
    ರಾಂಚಿಯ ಮ್ಯಾನೇಜ್‌ಮೆಂಟ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಜನರಲ್ ಮ್ಯಾನೇಜರ್ (ಶೈಕ್ಷಣಿಕ ಮತ್ತು ಹಿರಿಯ ಬೋಧಕ ಸದಸ್ಯರು) ಡಾ. ಪ್ರಣವ್ ಕುಮಾರ್, ತರಬೇತಿಯನ್ನು ಪರಿಣಾಮಕಾರಿಯಾಗಿ ನಡೆಸಿಕೊಟ್ಟರು. ತರಬೇತಿ ಗುಂಪು ಚಟುವಟಿಕೆಗಳು, ಮನಶಾಸ್ತ್ರದ ಪರೀಕ್ಷೆಗಳು, ಗುಂಪು ಚರ್ಚೆ ಮತ್ತು ವಿಷಯ ಮಂಡನೆಗಳು ಒಳಗೊಂಡಿತ್ತು. 
    ತರಬೇತಿ ಕಾರ್ಯಕ್ರಮ ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದೊಂದಿಗೆ ಕೈಗೊಳ್ಳಲಾಗಿತ್ತು. ಕಿರಿಯ ಪ್ರಬಂಧಕ (ಎಚ್.ಆರ್, ಎಚ್.ಆರ್ ಎಲ್ &ಡಿ) ಎಮ್.ಎಲ್. ಯೋಗೀಶ್ ಪ್ರೋಟೋಕಾಲ್ ಅಧಿಕಾರಿಯಾಗಿದ್ದರು. 

ಕ್ರೈಸ್ತರಿಂದ ಶುಭ ಶುಕ್ರವಾರ ಆಚರಣೆ

ವಿವಿಧ ಚರ್ಚ್ ಗಳಲ್ಲಿ ಮುಂಜಾನೆಯಿಂದಲೇ ಪ್ರಾರ್ಥನೆ ಸಲ್ಲಿಕೆ 

ಭದ್ರಾವತಿ  ತಾಲೂಕಿನ ವಿವಿಧ ಚರ್ಚ್ ಗಳಲ್ಲಿ ಶುಕ್ರವಾರ ಗುಡ್ ಫ್ರೈಡೆ ಆಚರಿಸಲಾಯಿತು. ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ಪುಣ್ಯಕ್ಷೇತ್ರದಲ್ಲಿ ಮುಂಜಾನೆಯಿಂದಲೇ ಭಕ್ತರು ಪ್ರಾರ್ಥನೆ ಸಲ್ಲಿಸಿದರು.
    ಭದ್ರಾವತಿ : ತಾಲೂಕಿನ ವಿವಿಧ ಚರ್ಚ್ ಗಳಲ್ಲಿ ಶುಕ್ರವಾರ ಗುಡ್ ಫ್ರೈಡೆ ಆಚರಿಸಲಾಯಿತು. ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ಪುಣ್ಯಕ್ಷೇತ್ರದಲ್ಲಿ ಮುಂಜಾನೆಯಿಂದಲೇ ಭಕ್ತರು ಪ್ರಾರ್ಥನೆ ಸಲ್ಲಿಸಿದರು. 
    ಉಪವಾಸ ಆಚರಿಸಿ, ಪ್ರಾರ್ಥನೆ, ದಾನ ಧರ್ಮಗಳಲ್ಲಿ ನಿರತರಾಗಿದ್ದರು. ಮಧ್ಯಾಹ್ನ ಮೂರು ಗಂಟೆಗೆ ಯೇಸುಕ್ರಿಸ್ತರ ಪಾಡು-ಮರಣದ ಘಟನೆಯನ್ನು ಶಿಲುಬೆ ಹಾದಿಯ ಮೂಲಕ ಸ್ಮರಿಸಿದರು. ಭಕ್ತರನ್ನು ೧೪ ಗುಂಪುಗಳಾಗಿ ವಿಂಗಡಿಸಿ ಒಂದೊಂದು ಸ್ಥಳದಲ್ಲಿ ಒಂದೊಂದು ಗುಂಪು ಶಿಲುಬೆಯನ್ನು ಹೊತ್ತು ನಡೆಯುವ ಮೂಲಕ ಸ್ಮರಿಸಲಾಯಿತು. 
    ಒಂದೊಂದು ಸ್ಥಳದಲ್ಲಿಯೂ ಒಂದೊಂದು ಉದ್ದೇಶದಂತೆ ಪ್ರಪಂಚದಲ್ಲಿ ಶಾಂತಿ ನೆಲೆಸಲು, ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡುವಂತೆ, ರಾಜಕಾರಣಿಗಳು ಉತ್ತಮ ಆಡಳಿತ ನಡೆಸುವಂತೆ, ಸರ್ಕಾರಿ ನೌಕರರು ಸಾರ್ವಜನಿಕರ ಸಂಕಷ್ಟಕ್ಕೆ ಸಹಕರಿಸುವಂತೆ ಮತ್ತು ಇತರ ವಿಷಯಗಳ ಕುರಿತು ಪ್ರಾರ್ಥಿಸಲಾಯಿತು. 
    ಶಿವಮೊಗ್ಗ ಧರ್ಮಕ್ಷೇತ್ರದ ವಿವಿಧ ಆಯೋಗಗಳ ಆಯೋಜಕರಾದ ಫಾದರ್ ಸೈಮನ್ ಪಿಂಟೋ, ಧರ್ಮ ಕೇಂದ್ರದ ಗುರುಗಳಾದ ಫಾದರ್  ಸ್ಟೀವನ್ ಡೇಸಾ, ಫಾದರ್ ಎಡ್ಗರ್, ಧರ್ಮಭಗೀನಿಯರು ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು.

ಗಾರ್ಮೆಂಟ್ಸ್ ಕಾರ್ಖಾನೆ ಮಹಿಳಾ ಕಾರ್ಮಿಕರಿಗೆ ಆರೋಗ್ಯ ಸಮಸ್ಯೆ ಹೆಚ್ಚು : ಮುನ್ನಚ್ಚರಿಕೆ ವಹಿಸಿ

ತರೀಕೆರೆ ವಿಕಸನ ಸಂಸ್ಥೆಯ ಸಂಯೋಜಕಿ ವಿಭಾವರ್ಗೀಸ್ ಮನವಿ 

ಭದ್ರಾವತಿ ತಾಲೂಕಿನ ಸಿದ್ದಾಪುರ ಹೊಸೂರು ವ್ಯಾಪ್ತಿಯ ಸುಮಾರು ೧೦ ಗ್ರಾಮಗಳಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಹಾಗು ಗ್ರಾಮಸ್ಥರಿಗಾಗಿ ಎಫ್‌ಜಿಎಚ್‌ಆರ್‌ರವರ ಸಹಕಾರದೊಂದಿಗೆ ತರೀಕೆರೆ ವಿಕಸನ ಸಂಸ್ಥೆ ಮತ್ತು ಆರೋಗ್ಯ ಇಲಾಖೆಯವರ ಸಂಯುಕ್ತಾಶ್ರಯದಲ್ಲಿ  ಆರೋಗ್ಯ ಜಾಗೃತಿ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ: ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಮಹಿಳೆಯರಿಗೆ ಹೆಚ್ಚು ಶ್ರಮ, ಮಾನಸಿಕ ಒತ್ತಡ, ಚರ್ಮದ ಕಾಯಿಲೆಗಳು, ಶ್ವಾಸಕೋಶದ ಕಾಯಿಲೆಗಳು ಹಾಗೂ ಗರ್ಭಕೋಶದ ಸಮಸ್ಯೆಗಳು ಉಂಟಾಗುತ್ತವೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ ಎಂದು ತರೀಕೆರೆ ವಿಕಸನ ಸಂಸ್ಥೆಯ ಸಂಯೋಜಕಿ ವಿಭಾವರ್ಗೀಸ್ ಹೇಳಿದರು. 
    ಅವರು ತಾಲೂಕಿನ ಸಿದ್ದಾಪುರ ಹೊಸೂರು ವ್ಯಾಪ್ತಿಯ ಸುಮಾರು ೧೦ ಗ್ರಾಮಗಳಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಹಾಗು ಗ್ರಾಮಸ್ಥರಿಗಾಗಿ ಎಫ್‌ಜಿಎಚ್‌ಆರ್‌ರವರ ಸಹಕಾರದೊಂದಿಗೆ ತರೀಕೆರೆ ವಿಕಸನ ಸಂಸ್ಥೆ ಮತ್ತು ಆರೋಗ್ಯ ಇಲಾಖೆಯವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಜಾಗೃತಿ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. 


    ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಮತ್ತು ಸಮುದಾಯದ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ತಜ್ಞ ವೈದ್ಯರುಗಳಿಂದ ಸೂಕ್ತ ಚಿಕಿತ್ಸೆ ಕೊಡಿಸಿ ಆ ಮೂಲಕ ಆರೋಗ್ಯವಂತ ಜೀವನ ನಡೆಸುವಂತೆ ಪೇರೇಪಿಸುವುದು  ಹಾಗು ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದು ವಿಕಸನ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು. 
    ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಕೆಲಸದ ಜೊತೆಗೆ ಕುಟುಂಬದ ಜವಾಬ್ದಾರಿಯನ್ನು ನಿಭಾಹಿಸುತ್ತಿದ್ದಾರೆ. ಅಲ್ಲದೆ ಅವರ ಒತ್ತಡದ ಜೀವನದಲ್ಲಿ ಆರೋಗ್ಯದ ಕಡೆ ಗಮನಕೊಡುವುದು ಕಷ್ಟವಾಗಿದೆ. ಈಗಾಗಲೇ ಇಂತಹ ೮೦ ಮಹಿಳೆಯರನ್ನು ಗುರುತಿಸಿ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗಿದೆ ಎಂದರು.  
    ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್ ಮಾತನಾಡಿ, ವಿಕಸನ ಸಂಸ್ಥೆಯಿಂದ ನಮ್ಮ ವಾರ್ಡ್ ವ್ಯಾಪ್ತಿಯ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸುತ್ತಿರುವುದು ತುಂಬಾ ಸಂತೋಷಕರ ಸಂಗತಿಯಾಗಿದೆ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಹಾಗೂ ಗ್ರಾಮಸ್ಥರು ಇದರ ಸಮಪಯೋಗ ಪಡೆದುಕೊಂಡು ಆರೋಗ್ಯವಂತ ಸದೃಢ ಸಮಾಜ ನಿರ್ಮಿಸಲು ಸಹಕರಿಸಬೇಕೆಂದು ಮನವಿ ಮಾಡಿದರು. 



    ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ  ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಎಚ್.ಎಲ್ ವರ್ಷ ಮಾತನಾಡಿ, ಮಹಿಳೆಯರು ಮೊದಲು ಕಾಯಿಲೆ ಬರದಂತೆ ಮುಂಜಾಗ್ರತೆ ವಹಿಸಬೇಕು. ಈ ನಿಟ್ಟಿನಲ್ಲಿ ಪೌಷ್ಟಿಕ ಆಹಾರ ಸೇವನೆ, ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು. ಆರೋಗ್ಯವಂತ ಕುಟುಂಬ ನಿರ್ಮಿಸಿಕೊಂಡರೆ ಆಸ್ಪತ್ರೆಗಳಿಗೆ ತಿರುಗುವುದು ತಪ್ಪುತ್ತದೆ. ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಎಷ್ಟೋ ಜನರು ಕಾಯಿಲೆ ಪ್ರಾಥಮಿಕ ಹಂತದಲ್ಲಿರುವಾಗಲೇ ತೋರಿಸುವುದಿಲ್ಲ. ಬದಲಿಗೆ ಉಲ್ಬಣವಾದ ಮೇಲೆ ತೋರಿಸುತ್ತಾರೆ. ಇದರಿಂದ ಹಣ, ಆರೋಗ್ಯ ಮತ್ತು ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ ಎಂದರು.
    ಶಿಬಿರದಲ್ಲಿ ಉಜ್ಜನಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅರ್ಭಿಯಾ ಅಂಜುಮ್, ಚರ್ಮರೋಗ ತಜ್ಞ ಡಾ. ಭರತ್ ಬಂಗೇರಾ, ಶಿವಮೊಗ್ಗ ಜನರಲ್ ಮೆಡಿಸಿನ್ ಮತ್ತು ಮಧುಮೇಹ ತಜ್ಞೆ ಡಾ. ಎಸ್.ಆರ್ ಸಂಹಿತ ತಪಾಸಣಾ ವೈದ್ಯರಾಗಿ ಭಾಗವಹಿಸಿದ್ದರು.  ಸುಮಾರು ೨೦೦ಕ್ಕೂ ಹೆಚ್ಚು ಜನರು ತಪಾಸಣೆ ಸಮಪಯೋಗ ಪಡೆದುಕೊಂಡರು.  


    ಹಿರಿಯ ಆರೋಗ್ಯ ನಿರೀಕ್ಷಕ ಆನಂದಮೂರ್ತಿ, ಮುಖ್ಯ ಶಿಕ್ಷಕರಾದ ಲಿಂಗರಾಜ್, ಚೇತನ ಮತ್ತು ಕಿರಿಯ ಆರೋಗ್ಯ ಮಹಿಳಾ ಕಾರ್ಯಕರ್ತರಾದ ಸೆಲ್ವಿ. ಮಂಗಳ, ಪೂರ್ಣಿಮಾ, ರಶ್ಮಿ, ಶೃತಿ, ಆಶಾಕಾರ್ಯಕರ್ತರಾದ ಪುಷ್ಪ ಅಂಗನವಾಡಿ ಕಾರ್ಯಕರ್ತೆ ರೇಷ್ಮೆ ವಿಕಸನ ಸಂಸ್ಥೆ ಅಧ್ಯಕ್ಷ ಎ.ಎಮ್ ವರ್ಗೀಸ್ ಕ್ಲೀಟಸ್, ಜಿ.ಎನ್ ಸಿಂಹಾ, ಕ್ರಿಸ್ತ ದಯಾಕುಮಾರ್, ಲಿಲ್ಲಿ ವರ್ಗೀಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವಿಕಸನ ಸಂಸ್ಥೆಯ ಪ್ರಭಾವತಿ ಪ್ರಾರ್ಥಿಸಿ, ಎಲ್. ಮುಕುಂದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.  

Thursday, April 17, 2025

ಗುಜರಿ ವ್ಯಾಪಾರಿಯನ್ನು ಸುಲಿಗೆ ಮಾಡಿದ್ದ ನಾಲ್ವರ ಸೆರೆ : ಗ್ರಾಮಾಂತರ ಪೊಲೀಸರ ಯಶಸ್ವಿ ಕಾರ್ಯಾಚರಣೆ

ಗುಜರಿ ವ್ಯಾಪಾರಿ ಅಡ್ಡಗಟ್ಟಿ ಲಕ್ಷಾಂತರ ರು. ಮೌಲ್ಯದ ಗುಜರಿ ವಸ್ತುಗಳನ್ನು ಸುಲಿಗೆ ಮಾಡಿದ್ದ ೪ ಜನರನ್ನು ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
    ಭದ್ರಾವತಿ: ಗುಜರಿ ವ್ಯಾಪಾರಿ ಅಡ್ಡಗಟ್ಟಿ ಲಕ್ಷಾಂತರ ರು. ಮೌಲ್ಯದ ಗುಜರಿ ವಸ್ತುಗಳನ್ನು ಸುಲಿಗೆ ಮಾಡಿದ್ದ ೪ ಜನರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
    ಶಿವಮೊಗ್ಗ ಆರ್.ಎಂ.ಎಲ್ ನಗರ ನಿವಾಸಿ, ಗುಜರಿ ವ್ಯಾಪಾರಿ ಪಾಂಡುರಂಗ ಎಂಬುವರು ಮಾ.೨೫ರಂದು ತಾಲೂಕಿನ ರಾಮಿನಕೊಪ್ಪ ಕ್ರಾಸ್ ಹತ್ತಿರ ಓಮ್ನಿ ಕಾರನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಬೆಳಗಿನ ಜಾವ ಸುಮಾರು ೬.೩೫ರ ಸಮಯದಲ್ಲಿ ಯಾರೋ ೪ ಜನರು ೨ ಮೋಟಾರು ಬೈಕುಗಳಲ್ಲಿ ಬಂದು ಅಡ್ಡ ಹಾಕಿ ತಡೆದು ಸುಮಾರು ೩.೫೦ ಲಕ್ಷ ರು. ಮೌಲ್ಯದ ಸುಮಾರು ೯೦೦ ಕೆ.ಜಿ. ತೂಕದ ಹಿತ್ತಾಳೆ ಮತ್ತು ತಾಮ್ರದ ಗುಜರಿ ವಸ್ತುಗಳನ್ನು ಸುಲಿಗೆ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 
    ಈ ಸುಲಿಗೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ ಹಾಗು ಕಾರ್ಯಪ್ಪರವರು ಪೊಲೀಸ್ ಉಪಾಧೀಕ್ಷಕ  ಕೆ.ಆರ್ ನಾಗರಾಜುರವರ ಮಾರ್ಗದರ್ಶನದಲ್ಲಿ  ಗ್ರಾಮಾಂತರ ಪೊಲೀಸ್ ಠಾಣೆ ನಿರೀಕ್ಷಕ ಜಗದೀಶ್ ಸಿ ಹಂಚಿನಾಳ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶ್ರೀಶೈಲಕೆಂಚಣ್ಣವರ, ಚಂದ್ರಶೇಖರ್, ದಿವಾಕರ್ ರಾವ್, ಮಂಜುನಾಥ್, ಈರಯ್ಯ, ರೇವಣ್ಣಸಿದ್ದಪ್ಪಗೌಡ, ವಿಜಯಕುಮಾರ ಡಿ.ಸಿ ಮತ್ತು ಸಂತೋಷಕುಮಾರ್ ಅವರನ್ನೊಳಗೊಂಡ ವಿಶೇಷ ತಂಡ ರಚಿಸಿದ್ದರು. 
    ಕಾರ್ಯಾಚರಣೆ ಕೈಗೊಂಡಿದ್ದ ತಂಡ ನಗರದ ಹೊಸಮನೆ ಭೋವಿ ಕಾಲೋನಿ ನಿವಾಸಿ, ಗುಜರಿ ವ್ಯಾಪಾರಿ ಕವಿರಾಜ್ (೨೧), ಶಿವಮೊಗ್ಗ ತುಂಗಾನಗರ ಗೋಪಾಲ ಎಕ್ಸ್‌ಟೆನ್ಸನ್ ನಿವಾಸಿ, ಜಿಮ್ ಟ್ರೈನರ್ ಮುಬಾರಕ್(೨೪), ಬಾರಂದೂರು ಗ್ರಾಮದ ನಿವಾಸಿ ಅಜಿತ್ @ ಘಟ್ಟ(೧೯) ಮತ್ತು  ಕಬಳಿಕಟ್ಟೆ ನಿವಾಸಿ, ಕೃಷಿಕ ಮಂಜುನಾಥ @ ಮಂಜು(೨೧) ಎಂಬುವರನ್ನು ಬಂಧಿಸಲಾಗಿದೆ. 
    ಬಂಧಿತರಿಂದ ಸುಲಿಗೆ ಮಾಡಿದ್ದ ೭೦೦ ಕೆ.ಜಿ ತೂಕದ ಹಿತ್ತಾಳೆ ಮತ್ತು ತಾಮ್ರದ ಗುಜರಿ ವಸ್ತುಗಳನ್ನು, ಸುಮಾರು ೩ ಲಕ್ಷ ರು. ಮೌಲ್ಯದ ಒಂದು ಟಾಟಾ ಎಸಿಇ ವಾಹನ ಮತ್ತು ಸುಮಾರು ೮೫ ಸಾವಿರ ರು. ಮೌಲ್ಯದ  ಒಂದು ಪಲ್ಸರ್ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು ೭.೩೫ ಲಕ್ಷ ರು. ಮೌಲ್ಯದ ಸ್ವತ್ತು ವಶಪಡಿಸಿಗೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ತಂಡವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಭಿನಂದಿಸಿದೆ. 

ಪಿ.ಎಂ.ಶ್ರೀ ಯೋಜನೆಗೆ ಆಯ್ಕೆಯಾದ ತಾಲೂಕಿನ ೨ನೇ ಹಿರಿಯ ಪ್ರಾಥಮಿಕ ಶಾಲೆ

ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದ ಎದುರು ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪಕ್ಕದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
    ಭದ್ರಾವತಿ: ಹಳೇನಗರದ ಕನಕಮಂಟಪ ಮೈದಾನದ ಎದುರು ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪಕ್ಕದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈ ಬಾರಿ ಕೇಂದ್ರ ಸರ್ಕಾರದ ಪಿ.ಎಂ.ಶ್ರೀ ಯೋಜನೆಗೆ ಆಯ್ಕೆಯಾಗಿದೆ. 
    ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಧ್ಯೇಯದೊಂದಿಗೆ ಕೇಂದ್ರ ಸರ್ಕಾರ ಪ್ರತಿ ವರ್ಷ ತಾಲೂಕಿನಲ್ಲಿ ಒಂದೊಂದು ಶಾಲೆಯನ್ನು ಪ್ರಧಾನ ಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ(ಪಿ.ಎಂ.ಶ್ರೀ) ಯೋಜನೆಯಡಿ ಅಭಿವೃದ್ಧಿಪಡಿಸುತ್ತಿದೆ. ೨೦೨೩-೨೪ನೇ ಸಾಲಿನಲ್ಲಿ ತಾಲೂಕಿನ ಮೈದೊಳಲು ಗ್ರಾಮದ ಸರ್ಕಾರಿ ಶಾಲೆಯಈ ಯೋಜನೆಗೆ ಆಯ್ಕೆಯಾಗಿತ್ತು. ೨೦೨೪-೨೫ನೇ ಸಾಲಿನಲ್ಲಿ ಈ ಶಾಲೆ ಆಯ್ಕೆಯಾಗಿದೆ. 
    ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಶಾಲೆಯ ಮುಖ್ಯ ಶಿಕ್ಷಕ ಮೊಹಿದ್ದಿನ್‌ರವರು, ಈ ಶಾಲೆಯಲ್ಲಿ ಎಲ್‌ಕೆಜಿ ತರಗತಿಯಿಂದ ೮ನೇ ತರಗತಿವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇದು ಮಾದರಿ ಶಾಲೆಯಾಗಿದ್ದು, ಕಳೆದ ವರ್ಷ ಎಲ್‌ಕೆಜಿ ಮತ್ತು ೧ನೇ ತರಗತಿಗೆ ಆಂಗ್ಲ ಮಾಧ್ಯಮ ಆರಂಭಿಸಲಾಗಿತ್ತು. ಆದರೆ ಈ ಬಾರಿ ಪ್ರಸಕ್ತ ಸಾಲಿನಲ್ಲಿ ಎಲ್‌ಕೆಜಿ, ಯುಕೆಜಿ, ೧ ಮತ್ತು ೨ ಹಾಗು ೬ ತರಗತಿಗೆ ಆಂಗ್ಲ ಮಾಧ್ಯಮ ಆರಂಭಿಸಲಾಗುವುದು ಎಂದರು.   
    ಈ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಪಿ.ಎಂ.ಶ್ರೀ ಯೋಜನೆ ಸಹಕಾರಿಯಾಗಿದೆ. ಶಾಲೆಯಲ್ಲಿ  ಸಮರ್ಪಕವಾಗಿ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಹಾಗು ಶಾಲೆಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರದ ಅನುದಾನ ನೆರವಾಗಲಿದೆ. ಈ ಯೋಜನೆಗೆ ತಾಲೂಕಿನ ೨೫ ರಿಂದ ೩೦ ಶಾಲೆಗಳು ಪೈಪೋಟಿ ನಡೆಸಿದ್ದವು. ಈ ಯೋಜನೆ ಪಡೆಯುವ ನಿಟ್ಟಿನಲ್ಲಿ ಅನುಸರಿಸಬೇಕಾದ ಎಲ್ಲಾ ಮಾನದಂಡಗಳನ್ನು ಈ ಶಾಲೆ ಹೊಂದಿದೆ. ಈ ಹಿನ್ನಲೆಯಲ್ಲಿ ಈ ಶಾಲೆಯನ್ನು ಕೇಂದ್ರ ಸರ್ಕಾರವೇ ನೇರವಾಗಿ ಆಯ್ಕೆ ಮಾಡಿದೆ ಎಂದರು. 
    ಈ ಶಾಲೆ ಆಯ್ಕೆಯಾಗುವಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹಾಗು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿಯವರ ಮಾರ್ಗದರ್ಶನ ಹೆಚ್ಚಿನದ್ದಾಗಿದೆ. ಪೋಷಕರು ಈ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸುವ ಮೂಲಕ ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದ್ದಾರೆ. 

ಅಪ್ರಾಪ್ತ ವಯಸ್ಸಿನ ಬಾಲಕ ಅಪಾಯಕಾರಿ ರೀತಿಯಲ್ಲಿ ವಾಹನ ಚಾಲನೆ : ೨೫ ಸಾವಿರ ರು. ದಂಡ



ಭದ್ರಾವತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನೋರ್ವ ಅಪಾಯಕಾರಿ ರೀತಿಯಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪ್ರಕಟಿಸಲಾಗಿರುವ ಚಿತ್ರ. 
    ಭದ್ರಾವತಿ : ಅಪ್ರಾಪ್ತ ವಯಸ್ಸಿನ ಬಾಲಕನೋರ್ವ ಅಪಾಯಕಾರಿ ರೀತಿಯಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಹಿನ್ನಲೆಯಲ್ಲಿ ಸ್ಥಳೀಯ  ನ್ಯಾಯಾಲಯ ವಾಹನ ಮಾಲೀಕರಿಗೆ ೨೫ ಸಾವಿರ ರು. ದಂಡ ವಿಧಿಸಿದೆ. 
    ಕಳೆದ ಸುಮಾರು ಒಂದು ತಿಂಗಳ ಹಿಂದೆ ಸಿದ್ದರೂಢನಗರದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನೋರ್ವ ರಾತ್ರಿ ವೇಳೆ ಅಪಾಯಕಾರಿಯಾಗಿ ವಾಹನ ಚಾಲನೆ ಮಾಡಿದ್ದು, ಈ ಘಟನೆಗೆ ಸಂಬಂಧಿಸಿದ ದೃಶ್ಯಾವಳಿಯ ತುಣುಕು ಶಿವಮೊಗ್ಗ ಜಿಲ್ಲಾ ಪೊಲೀಸ್ ಸಾಮಾಜಿಕ ಜಾಲತಾಣ ಫೇಸ್‌ಬುಕ್ ನಲ್ಲಿ ಪ್ರಕಟಿಸಲಾಗಿತ್ತು. ಇದನ್ನು ಪರಿಶೀಲನೆ ನಡೆಸಿದ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸ್ಥಳೀಯ ಸಂಚಾರಿ ಪೊಲೀಸರಿಗೆ ಆದೇಶಿಸಿದ್ದರು. 
    ಈ ಹಿನ್ನಲೆಯಲ್ಲಿ ಸಂಚಾರಿ ಪೊಲೀಸರು ದಂಡ ವಿಧಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ವಾಹನ ಮಾಲೀಕರಿಗೆ ೨೫ ಸಾವಿರ ರು. ದಂಡ ವಿಧಿಸಿದ್ದಾರೆ. 
    ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಸಂಚಾರಿ ಪೊಲೀಸ್ ಠಾಣೆಯ ಉಪ ನಿರೀಕ್ಷಕಿ ಶಾಂತಲರವರು, ಕಾನೂನು ಉಲ್ಲಂಘಿಸಿ ಅಥವಾ ಅಪಾಯಕಾರಿ ರೀತಿಯಲ್ಲಿ ವಾಹನ ಚಾಲನೆ ಮಾಡುವುದು ತಪ್ಪು. ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಚಾಲನೆ ಮಾಡಲು ವಾಹನಗಳನ್ನು ನೀಡಬಾರದು. ಒಂದು ವೇಳೆ ಯಾರಿಗಾದರೂ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಸೆರೆ ಹಿಡಿದಿರುವ ಘಟನೆಯ ದೃಶ್ಯಾವಳಿ ತುಣುಕು ಅಥವಾ ಚಿತ್ರ ಶಿವಮೊಗ್ಗ ಜಿಲ್ಲಾ ಪೊಲೀಸ್ ಸಾಮಾಜಿಕ ಜಾಲತಾಣಗಳಿಗೆ ಅಥವಾ ಹೊಸದಾಗಿ ಸ್ಥಳೀಯ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಆರಂಭಿಸಲಾಗಿರುವ ಫೇಸ್‌ಬುಕ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವುದು. ಇತ್ತೀಚೆಗೆ ನಗರದಲ್ಲಿ ವಾಹನಗಳ ಮಿತಿ ೫೦ ಕಿ.ಲೋ. ಮೀಟರ್ ಮೀರಿದ್ದು, ಇಂತಹ ವಾಹನಗಳನ್ನು ಸ್ಪೀಡ್ ರಾಡರ್ ಗನ್ ಮೂಲಕ ಪತ್ತೆ ಹಚ್ಚಿ ೧೦೦೦ ರು. ದಂಡ ವಿಧಿಸಲಾಗುವುದು. ಸಾರ್ವಜನಿಕರು ಕಡ್ಡಾಯವಾಗಿ ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸತಕ್ಕದ್ದು. ಹೆಚ್ಚಿನ ಮಾಹಿತಿಗೆ ಸ್ಥಳೀಯ ಸಂಚಾರಿ ಠಾಣೆ ಸಂಪರ್ಕಿಸುವಂತೆ ಕೋರಿದ್ದಾರೆ. 

ಬಿಪಿಎಲ್ ಸಂಘದಿಂದ ಅಂಬೇಡ್ಕರ್‌ರವರ ೧೩೪ನೇ ಜನ್ಮ ದಿನ

ಪ್ರತಿವರ್ಷದಂತೆ ಈ ಬಾರಿ ಭದ್ರಾವತಿ ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಪ್ರಜಾ ವಿಮೋಚನೆ ಸಂಘ (ಬಿಪಿಎಲ್)ದ ವತಿಯಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೪ನೇ ಜನ್ಮ ದಿನ ಆಚರಿಸಲಾಯಿತು. 
    ಭದ್ರಾವತಿ: ಪ್ರತಿವರ್ಷದಂತೆ ಈ ಬಾರಿ ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಪ್ರಜಾ ವಿಮೋಚನೆ ಸಂಘ (ಬಿಪಿಎಲ್)ದ ವತಿಯಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೪ನೇ ಜನ್ಮ ದಿನ ಆಚರಿಸಲಾಯಿತು. 
    ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಿಹಿ ಹಂಚಲಾಯಿತು. ಸಂಘದ ಪ್ರಮುಖರಾದ ಶ್ಯಾಮ್, ಜಗದೀಶ್, ಡಿಎಸ್‌ಎಸ್ ಮುಖಂಡ ದಾಸ್, ಸ್ಟೀಫನ್ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು. 
    ಬಿಪಿಎಲ್ ಸಂಘ ಕಳೆದ ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯಗಳೊಂದಿಗೆ ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಮಹಾಪುರುಷರ, ದಾರ್ಶನಿಕರ ಹಾಗು ಆದರ್ಶ ವ್ಯಕ್ತಿಗಳ ಜನ್ಮದಿನಾಚರಣೆ ಸಹ ಆಚರಿಸಿಕೊಂಡು ಬರಲಾಗುತ್ತಿದೆ. ಈ ಮೂಲಕ ಸಂಘ ಈ ಭಾಗದಲ್ಲಿ ಗಮನ ಸೆಳೆಯುತ್ತಿದೆ.