Monday, June 23, 2025

ಭದ್ರಾ ನಾಲೆ ಸೀಳಿ ನೀರು ಪೂರೈಸುವ ಕಾಮಗಾರಿ ವಿರೋಧಿಸಿ ಪ್ರತಿಭಟನಾ ಮೆರವಣಿಗೆ

ತಕ್ಷಣ ಕಾಮಗಾರಿ ಸ್ಥಗಿತಗೊಳಿಸದಿದ್ದಲ್ಲಿ ಉಗ್ರ ಹೋರಾಟ : ಎಚ್ಚರಿಗೆ 

ಭದ್ರಾ ಅಚ್ಚುಕಟ್ಟು ರೈತರ ಬದುಕಿಗೆ ಮಾರಕವಾಗುವಂತೆ ಭದ್ರಾ ಜಲಾಶಯದ ಬಲದಂಡೆ ನಾಲೆ ಸೀಳಿ ನೀರು ಪೂರೈಸುವ ಕಾಮಗಾರಿ ತಕ್ಷಣ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ದಾವಣಗೆರೆ ಜಿಲ್ಲಾ ರೈತ ಒಕ್ಕೂಟ ಹಾಗೂ ಬಿಜೆಪಿ ಜಿಲ್ಲಾ ರೈತ ಮೋರ್ಚಾ ವತಿಯಿಂದ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. 
    ಭದ್ರಾವತಿ :  ಭದ್ರಾ ಅಚ್ಚುಕಟ್ಟು ರೈತರ ಬದುಕಿಗೆ ಮಾರಕವಾಗುವಂತೆ ಭದ್ರಾ ಜಲಾಶಯದ ಬಲದಂಡೆ ನಾಲೆ ಸೀಳಿ ನೀರು ಪೂರೈಸುವ ಕಾಮಗಾರಿ ತಕ್ಷಣ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ದಾವಣಗೆರೆ ಜಿಲ್ಲಾ ರೈತ ಒಕ್ಕೂಟ ಹಾಗೂ ಬಿಜೆಪಿ ಜಿಲ್ಲಾ ರೈತ ಮೋರ್ಚಾ ವತಿಯಿಂದ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. 
    ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ, ಯುವ ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ್, ಮಂಗೋಟೆ ರುದ್ರೇಶ್ ಸೇರಿದಂತೆ ಪ್ರಮುಖರು ಮಾತನಾಡಿ, ಜಲಾಶಯದ ನಿರ್ಬಂಧಿತ ಪ್ರದೇಶದಲ್ಲಿ ಯಾವುದೇ ಕಾಮಗಾರಿಗಳನ್ನು  ಕೈಗೊಳ್ಳಬಾರದು ಎಂಬ ನಿಯಮವಿದ್ದರೂ ಸಹ ಬಲದಂಡೆ ನಾಲೆ ಸೀಳಿ ನೆರೆ ಜಿಲ್ಲೆಗಳಾದ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿನ ೩೪೬ ಗ್ರಾಮಗಳು, ಚಿಕ್ಕಮಗಳೂರು ಜಿಲ್ಲೆ ತರೀಕೆರೆ, ಕಡೂರು ತಾಲೂಕುಗಳ ೧೭೨ ಗ್ರಾಮಗಳಿಗೆ ನೀರು ಪೂರೈಸುವ ಕಾಮಗಾರಿ ನಡೆಸುತ್ತಿರುವುದು ಸರಿಯಲ್ಲ.  ಮಧ್ಯ ಕರ್ನಾಟಕದ ಜೀವನದಿ ಭದ್ರಾ ಬೃಹತ್ ಜಲಾಶಯದ ಸುರಕ್ಷತೆ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು. 
    ರಾಜ್ಯ ಸರ್ಕಾರ ೧೬೬೦ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿರುವ ಬೃಹತ್ ಕಾಮಗಾರಿ ಭದ್ರಾ ಜಲಾಶಯದ ನಿರ್ಬಂಧಿತ ಪ್ರದೇಶದಲ್ಲಿ(ಬಫರ್‌ಜೋನ್) ಕೈಗೊಂಡಿದೆ. ಸರ್ಕಾರ ಸೌಜನ್ಯಕ್ಕಾದರೂ ಭದ್ರಾ ಅಚ್ಚುಕಟ್ಟಿನ ಪ್ರದೇಶದ ಜನಪ್ರತಿನಿಧಿಗಳು, ರೈತರ ಸಭೆಯನ್ನು ನಡೆಸದೆ ಕಾಮಗಾರಿ ಕೈಗೊಂಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದು ಅಚ್ಚುಕಟ್ಟು ರೈತರ ಕತ್ತು ಹಿಸುಕುವ ಅಮಾನವೀಯ ಕೃತ್ಯವಾಗಿದೆ ಎಂದು ದೂರಿದರು. 
    ಕುಡಿಯುವ ನೀರಿನ ಪೂರೈಕೆಗೆ ಯಾವುದೇ ವಿರೋಧ ಇಲ್ಲ. ಸರ್ಕಾರ ಪರ್ಯಾಯ ವ್ಯವಸ್ಥೆ ಕೈಗೊಂಡು ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. 
    ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್‌, ಮಾಯಕೊಂಡ ಮಾಜಿ ಶಾಸಕ ಬಸವರಾಜನಾಯ್ಕ, ಮಾಜಿ ಮೇಯರ್ ಅಜಯ್‌ಕುಮಾರ್, ಹರಿಹರ ಕ್ಷೇತ್ರದ ಪೂಜಾರ್, ಬಿ.ಎಂ.ಸತೀಶ ಕೊಳೇನಹಳ್ಳಿ, ಲೋಕಿಕೆರೆ ನಾಗರಾಜ, ಸ್ಥಳೀಯ ರೈತ ಮುಖಂಡ ಆನಂದಕುಮಾರ್, ಮಾಳೇನಹಳ್ಳಿ ವಿಶ್ವನಾಥ್ ಸೇರಿದಂತೆ ದಾವಣಗೆರೆ ಜಿಲ್ಲಾ ರೈತ ಒಕ್ಕೂಟ ಹಾಗೂ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರಮುಖರು, ರೈತರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. 

ಮಹಿಳೆ ಆರೋಗ್ಯವಾಗಿದ್ದರೆ ಕುಟುಂಬದಲ್ಲಿ ನೆಮ್ಮದಿ : ಡಾ. ಶಾಂತಲಾ

ಭಾವಸಾರ ಕ್ಷತ್ರಿಯ ಸಮಾಜ, ಭಾವಸಾರ ಮಹಿಳಾ ಮಂಡಳಿ, ಭಾವಸಾರ ಯುವಕ ಸಂಘ ಮತ್ತು ಭಾವಸಾರ ವಿಷನ್ ಇವುಗಳ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ನಂಜಪ್ಪ ಲೈಫ್ ಕೇರ್ ಸಹಯೋಗದೊಂದಿಗೆ ಭದ್ರಾವತಿ ತರೀಕೆರೆ ರಸ್ತೆಯ ಶ್ರೀ ಪಾಂಡುರಂಗ ಮಂದಿರಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಶಿವಮೊಗ್ಗ ನಂಜಪ್ಪ ಆಸ್ಪತ್ರೆ ವೈದ್ಯೆ ಡಾ. ಶಾಂತಲ, ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರ ರಾವ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ : ಕುಟುಂಬದಲ್ಲಿ ಮಹಿಳೆ ಆರೋಗ್ಯವಾಗಿದ್ದರೆ ಆ ಕುಟುಂಬ ನೆಮ್ಮದಿ, ಶಾಂತಿಯಿಂದ ಇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಂದು ವೇಳೆ ಕುಟುಂಬದ ಮಹಿಳೆ ಆನಾರೋಗ್ಯಕ್ಕೆ ಒಳಗಾದಲ್ಲಿ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಕುಟುಂಬದಲ್ಲಿ ಮಹಿಳೆಯರ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕೆಂದು ಶಿವಮೊಗ್ಗ ನಂಜಪ್ಪ ಆಸ್ಪತ್ರೆ ವೈದ್ಯೆ ಡಾ. ಶಾಂತಲ ಹೇಳಿದರು. 
    ಅವರು ನಗರದ ಭಾವಸಾರ ಕ್ಷತ್ರಿಯ ಸಮಾಜ, ಭಾವಸಾರ ಮಹಿಳಾ ಮಂಡಳಿ, ಭಾವಸಾರ ಯುವಕ ಸಂಘ ಮತ್ತು ಭಾವಸಾರ ವಿಷನ್ ಇವುಗಳ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ನಂಜಪ್ಪ ಲೈಫ್ ಕೇರ್ ಸಹಯೋಗದೊಂದಿಗೆ ತರೀಕೆರೆ ರಸ್ತೆಯ ಶ್ರೀ ಪಾಂಡುರಂಗ ಮಂದಿರಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
    ಸಮಾಜದಲ್ಲಿ ಇಂದು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಆರೋಗ್ಯದ ಸಮಸ್ಯೆಗಳು ಕಾಣಿಸುತ್ತಿವೆ. ಅವರ ತಮ್ಮ ಮಾಸಿಕ ಋತು ಚಕ್ರ, ಶುಚಿತ್ವ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆರೋಗ್ಯದಲ್ಲಿ ಏನಾದರೂ ಸಮಸ್ಯೆಗಳು ಕಾಣಿಕೊಂಡಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಕಾಯಿಲೆ ಉಲ್ಬಣವಾಗಿ ಹೆಚ್ಚಿನ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. 
    ಪ್ರಸ್ತುತ ಜೀವನ ಕ್ರಮ ಸರಿಯಾದ ನಿಟ್ಟಿನಲ್ಲಿ ಸಾಗಬೇಕು. ಅದರಲ್ಲೂ ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮಗಳನ್ನುಂಟು ಮಾಡುತ್ತವೆ. ಪ್ರಸ್ತುತ ಜಂಕ್ ಫುಡ್‌ಗಳ ಬಳಕೆ ಹೆಚ್ಚುತ್ತಿದೆ. ಶ್ರಮದಾಯಕ ಕೆಲಸಗಳನ್ನು ಮಾಡದೆ ಕುಳಿತಲ್ಲೆ ಗಂಟೆಗಟ್ಟಲೆ ಕೆಲಸಗಳನ್ನು ಮಾಡುತ್ತಿರುವ ಕಾರಣ ಹಲವಾರು ರೀತಿಯ ಕಾಯಿಲೆಗಳು ಕಂಡು ಬರುತ್ತಿವೆ. ಅದರಲ್ಲೂ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಗರ್ಭಕೊರಳ ಹಾಗು ಗರ್ಭಕಂಠ ಕ್ಯಾನ್ಸರ್ ಸರ್ವೆ ಸಾಮಾನ್ಯವಾಗಿ ಕಂಡು ಬರುತ್ತಿವೆ. ಈ ಕಾಯಿಲೆಗಳ ಗುಣ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಂಡು ಆರಂಭದ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಸಲಹೆ ವ್ಯಕ್ತಪಡಿಸಿದರು.  
       ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ಗೆ ಆಧುನಿಕ ಚಿಕಿತ್ಸೆಗಳು ಕಂಡು ಹಿಡಿಯಲಾಗಿದೆ. ಅದರಲ್ಲೂ ೯-೧೩ ವರ್ಷ ಹಾಗು ೨೫ನೇ ವರ್ಷದವರಿಗೆ ಕ್ಯಾನ್ಸರ್ ನಿರೋಧಕ ಚುಚ್ಚುಮದ್ದು ನೀಡುವ ಮೂಲಕ ಭವಿಷ್ಯದಲ್ಲಿ ಕ್ಯಾನ್ಸರ್ ಬರುವ ಅಪಾಯ ಕಡಿಮೆಗೊಳಿಸಲಾಗುತ್ತಿದೆ ಎಂದರು.
    ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ಭಾವಸಾರ ಸಹಕಾರ ಸಂಘದ ಅಧ್ಯಕ್ಷ ಟಿ.ಎಸ್ ದುಗ್ಗೇಶ್ ಶಿಬಿರ ಉದ್ಘಾಟಿಸಿದರು. ಡಾ.ಕಾವ್ಯ, ಶಿಲ್ಪಾ, ಕಲ್ಪನಾ, ರಘುಪತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಭಾವಸಾರ ಯುವಕ ಮಂಡಳಿಯವರು ಶಿಬಿರದ ಔಷಧ ವಿತರಣೆ ಪ್ರಾಯೋಜಕತ್ವ ವಹಿಸಿಕೊಂಡಿದ್ದರು. ಶಿಬಿರದಲ್ಲಿ ಸುಮಾರು ೧೨೦ಕ್ಕೂ ಹೆಚ್ಚು ಜನರು ಭಾಗವಹಿಸಿ ಸದುಪಯೋಗ ಪಡೆದುಕೊಂಡರು. 
       ಸ್ವಪ್ನಕುಮಾರ್ ತೇಲ್ಕರ್ ಪ್ರಾರ್ಥಿಸಿ, ವಿಶ್ವನಾಥ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಲ್ಪನಾ ವಂದಿಸಿದರು. 

ಕಸಾಪ ರಾಜ್ಯಾಧ್ಯಕ್ಷರಿಂದ ಸರ್ವಾಧಿಕಾರಿ ಧೋರಣೆ : ಟಿ. ತಿಮ್ಮಪ್ಪ ಆರೋಪ

ಭದ್ರಾವತಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಟಿ. ತಿಮ್ಮಪ್ಪ ಮಾತನಾಡಿದರು.
    ಭದ್ರಾವತಿ: ಶತಮಾನದ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಪ್ರಸ್ತುತ ರಾಜ್ಯಾಧ್ಯಕ್ಷರಾಗಿರುವ ಡಾ. ಮಹೇಶ್‌ಜೋಶಿಯವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ಇದನ್ನು ತಾಲೂಕು ಘಟಕ ಸಹ ಖಂಡಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಟಿ. ತಿಮ್ಮಪ್ಪ ತಿಳಿಸಿದರು. 
    ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಷತ್ ತನ್ನದೇ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಶತಮಾನದ ಇತಿಹಾಸ ಹೊಂದಿರುವ ಪರಿಷತ್‌ನಲ್ಲಿ ಹಲವಾರು ಮಂದಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿನ ಬೆಳವಣಿಗೆಯಲ್ಲಿ ರಾಜ್ಯಾಧ್ಯಕ್ಷರು ಎಲ್ಲಾ ವಿಚಾರಗಳಲ್ಲೂ ಸ್ವತಂತ್ರ ನಿಲುವುಗಳನ್ನು ಕೈಗೊಳ್ಳುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. 
    ಶಿವಮೊಗ್ಗ ಜಿಲ್ಲೆಯಲ್ಲಿ ಪರಿಷತ್ ಕಾರ್ಯ ಚಟುವಟಿಕೆಗಳು ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಮಂಜುನಾಥ್‌ರವರ ನೇತೃತ್ವದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಗಳು, ಮಕ್ಕಳ ಸಾಹಿತ್ಯ ಸಮ್ಮೇಳನಗಳು ಹಾಗು ಇನ್ನಿತರ ಸಾಹಿತ್ಯ ಚಟುವಟಿಕೆಗಳು ಯಶಸ್ವಿಯಾಗಿ ನಡೆದಿವೆ. ಇವರು ಸಹ ಸಾಂವಿಧಾನಿಕವಾಗಿ ಚುನಾಯಿತರಾಗಿ ಅಧ್ಯಕ್ಷರಾದವರು ಇವರ ವಿರುದ್ಧ ಸಹ ರಾಜ್ಯಾಧ್ಯಕ್ಷರು ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಂಡಿರುವುದು ಸರಿಯಲ್ಲ. ಇದನ್ನು ತಾಲೂಕು ಪರಿಷತ್ ಖಂಡಿಸುತ್ತವೆ. ಮುಂದಿನ ಸರ್ವಸದಸ್ಯರ ಸಭೆಯಲ್ಲಿ ಈ ಎಲ್ಲಾ ವಿಚಾರಗಳ ಕುರಿತು ಪ್ರಶ್ನಿಸಲಾವುದು ಎಂದರು. 
     ಆರಂಭದ ಹಂತದಲ್ಲಿ ಭವನ ಕಾಮಗಾರಿ: 
     ತಾಲೂಕು ಸಾಹಿತ್ಯ ಪರಿಷತ್ ವತಿಯಿಂದ ಸುಮಾರು 3.8 ಕೋ. ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕನ್ನಡ ಸಾಹಿತ್ಯ ಭವನ ಕಾಮಗಾರಿ ಆರಂಭಗೊಂಡಿದ್ದು, ನೆಲಹಂತದ ಕಾಮಗಾರಿಗೆ ಇದೀಗ ಚಾಲನೆ ನೀಡಲಾಗಿದೆ. ನಗರಸಭೆ ವತಿಯಿಂದ 25 ಲಕ್ಷ ರು. ಮತ್ತು ಪರಿಷತ್‌ನಲ್ಲಿ ಪ್ರಸ್ತುತ ಸಂಗ್ರಹವಾಗಿರುವ ಹಣ ಒಟ್ಟು 32 ಲಕ್ಷ ರು. ಬಳಸಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ಸರ್ಕಾರಿ ನೌಕರರ ಒಂದು ದಿನದ ವೇತನ ನೀಡುವಂತೆ ಮನವಿ ಸಲ್ಲಿಸಲಾಗಿದ್ದು, ಸರ್ಕಾರದ ಅನುದಾನ ಸಹ ನಿರೀಕ್ಷಿಸಲಾಗುತ್ತಿದೆ ಎಂದರು. 
     ಸಾಹಿತ್ಯ ಚಟುವಟಿಕೆಗಳಿಗೆ ವೇಗ : 
    ತಾಲೂಕು ಪರಿಷತ್‌ಗೆ ನೂತನವಾಗಿ ನೇಮಕಗೊಂಡಿರುವ ಪದಾಧಿಕಾರಿಗಳು ಸಾಹಿತ್ಯ ಚಟುವಟಿಕೆಗಳನ್ನು ಮತ್ತಷ್ಟು ಕ್ರಿಯಾಶೀಲಗೊಳಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ರೂಪುರೇಷೆಗಳನ್ನು ಸಿದ್ದಪಡಿಸಿಕೊಳ್ಳಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾವುದು. ಸಾಹಿತ್ಯಾಸಕ್ತರು ಹಾಗು ಸಾಹಿತ್ಯ ಚಟುವಟಿಕೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುವುದು ಎಂದರು. 
    ಪತ್ರಿಕಾಗೋಷ್ಠಿಯಲ್ಲಿ ಪರಿಷತ್ ಪ್ರಮುಖರಾದ ಎಂ.ಈ ಜಗದೀಶ್, ನಾಗೋಜಿರಾವ್, ಕಮಲಕರ, ಶೈಲೇಶ್‌ಕೋಠಿ, ಪ್ರಕಾಶ್, ನಾಗೇಶ್, ನಾಗರತ್ನ ವಾಗೀಶ್ ಕೋಠಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Sunday, June 22, 2025

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ ಕೀರ್ತನಾಗೆ ಶ್ರೀಗಳಿಂದ ಸನ್ಮಾನ, ಅಭಿನಂದನೆ

ಭದ್ರಾವತಿ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವಿಶ್ವಕರ್ಮ ಸಮಾಜ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ಅತಿಹೆಚ್ಚು ಅಂಕಪಡೆದ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಕೀರ್ತನಾ ಅವರನ್ನು ಶ್ರೀ ಸತಶ್ರೀ ಶಂಕರಾತ್ಮನಂದ ಸರಸ್ವತಿ ಸ್ವಾಮೀಜಿಯವರು ಸನ್ಮಾನಿಸಿ ಅಭಿನಂದಿಸಿದರು. 
    ಭದ್ರಾವತಿ: ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವಿಶ್ವಕರ್ಮ ಸಮಾಜ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ಅತಿಹೆಚ್ಚು ಅಂಕಪಡೆದ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಕೀರ್ತನಾ ಅವರನ್ನು ಶ್ರೀ ಸತಶ್ರೀ ಶಂಕರಾತ್ಮನಂದ ಸರಸ್ವತಿ ಸ್ವಾಮೀಜಿಯವರು ಸನ್ಮಾನಿಸಿ ಅಭಿನಂದಿಸಿದರು. 
    ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೧೧ ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಈಕೆ ಕನ್ನಡಪ್ರಭ ಪತ್ರಿಕಾವಿತರಕ ಕೃಷ್ಣಮೂರ್ತಿ ಮತ್ತು ಸ್ವಣಾಂಬ ದಂಪತಿ ಪುತ್ರಿಯಾಗಿದ್ದಾರೆ. 
    ವೇದಿಕೆಯಲ್ಲಿ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ವಿಶ್ವಕರ್ಮ ಸಮಾಜ ತಾಲೂಕು ಅಧ್ಯಕ್ಷ ಬಿ.ಕೆ ಶ್ರೀನಾಥ್ ಹಾಗು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ನಿರ್ದೇಶಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಸಮಾಜದ ಏಳಿಗೆ ಜೊತೆಗೆ ಪ್ರಾಮಾಣಿಕತೆ ಸಹ ಬಹಳ ಮುಖ್ಯ : ಶ್ರೀ ಸತಶ್ರೀ ಶಂಕರಾತ್ಮನಂದ ಸರಸ್ವತಿ ಸ್ವಾಮೀಜಿ

ಭದ್ರಾವತಿ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವಿಶ್ವಕರ್ಮ ಸಮಾಜ ಉದ್ಘಾಟನೆ ಸಮಾರಂಭದ ದಿವ್ಯ ಸಾನಿಧ್ಯವಹಿಸಿದ್ದ ಶ್ರೀ ಸತಶ್ರೀ ಶಂಕರಾತ್ಮನಂದ ಸರಸ್ವತಿ ಸ್ವಾಮೀಜಿಗಳು ನೂತನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ನಿರ್ದೇಶಕರಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಸನ್ಮಾನಿಸಿ ಅಭಿನಂದಿಸಿದರು. 
    ಭದ್ರಾವತಿ: ಸಮಾಜದ ಏಳಿಗೆ ಜೊತೆಗೆ ಪ್ರಾಮಾಣಿಕತೆ ಸಹ ಬಹಳ ಮುಖ್ಯವಾಗಿದೆ. ಸಮಾಜವನ್ನು ಉತ್ತಮವಾಗಿ ಸಂಘಟಿಸುವ ಜೊತೆಗೆ ಮತ್ತಷ್ಟು ಬಲಿಷ್ಠಗೊಳ್ಳಬೇಕು. ಆಗ ಮಾತ್ರ ಸಮಾಜಕ್ಕೆ ಬಲ ಬರುತ್ತದೆ ಎಂದು ಶ್ರೀ ಸತಶ್ರೀ ಶಂಕರಾತ್ಮನಂದ ಸರಸ್ವತಿ ಸ್ವಾಮೀಜಿ ಹೇಳಿದರು. 
ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವಿಶ್ವಕರ್ಮ ಸಮಾಜ ಉದ್ಘಾಟನೆ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಶ್ರೀಗಳು ಮಾತನಾಡಿದರು. 
ಯಾವ ಸಮಾಜ ದುರ್ಬಲವಾಗಿರುತ್ತದೆಯೋ ಆ ಸಮಾಜದ ಏಳಿಗೆ ಕಷ್ಟಸಾಧ್ಯ ಎಂಬುದನ್ನು ಸಮಾಜದ ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಂಡವರು ಸ್ವಾರ್ಥ ಮನೋಭಾವದಿಂದ ಹೊರಬಂದು ಯಾವುದೇ ಅಪಸ್ವರಗಳಿಗೆ ಎಡೆಮಾಡಿಕೊಡದೆ ಪ್ರಾಮಾಣಿಕವಾಗಿ ಶ್ರಮಿಸಬೇಕು. ಈ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕೆಂದು ಆಶಿಸಿದರು. 
ಎಲ್ಲಾ ಯುಗದಲ್ಲೂ ಸಮಾಜಕ್ಕೆ ಋಣಿಯಾದ ಸಮಾಜ ಎಂದರೆ ಅದು ವಿಶ್ವಕರ್ಮ. ಇಂತಹ ಸಮಾಜದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. ಶಾಸಕರು ಇಲ್ಲಿನ ಸಮಾಜಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವ ಜೊತೆಗೆ ನಿವೇಶನ ಮಂಜೂರಾತಿ ಮಾಡಿಸಬೇಕು ಎಂದರು. 
ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜೊತೆಗೆ ಶಿಕ್ಷಣವಂತರನ್ನಾಗಿಸಬೇಕು. ಆ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಬೇಕೆಂದರು. 
ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ವಿಶ್ವಕರ್ಮ ಸಮಾಜಕ್ಕೆ ತನ್ನದೇ ಆದ ಪರಂಪರೆ ಇದೆ. ಈ ಸಮಾಜದ ಕೊಡುಗೆ ಅನನ್ಯವಾಗಿದೆ. ಇಂತಹ ಸಮಾಜ ಇನ್ನೂ ಸಂಘಟಿತಗೊಂಡು ಬಲಗೊಳ್ಳಬೇಕು. ಶಾಸಕರು ಹಾಗು ಕುಟುಂಬ ವರ್ಗದವರು ಈ ಸಮಾಜದ ಅಭಿವೃದ್ಧಿಗೆ ಬದ್ಧರಾಗಿದ್ದಾರೆ ಎಂದರು. 
ಸಮಾಜದ ಅಧ್ಯಕ್ಷ ಬಿ.ಕೆ ಶ್ರೀನಾಥ್ ಅಧ್ಯಕ್ಷತೆವಹಿಸಿ ಮಾತನಾಡಿ, ಸಮಾಜದಲ್ಲಿ ನಾವು ಗುರುತಿಸಿಕೊಳ್ಳಬೇಕಾದರೆ ಹೆಚ್ಚು ಸಂಘಟಿತಗೊಳ್ಳಬೇಕು. ಸಮಾಜದ ಪ್ರತಿಯೊಬ್ಬರಿಗೂ ಜವಾಬ್ದಾರಿ ಇದೆ. ಇದನ್ನು ಅರ್ಥಮಾಡಿಕೊಂಡು ಸಮಾಜದ ಏಳಿಗೆಗೆ ಕೈಜೋಡಿಬೇಕೆಂದರು. 
ಸಮಾಜದ ಗೌರವಾಧ್ಯಕ್ಷ ಬಿ.ಎಲ್ ನಾಗರಾಜ್, ಕಾರ್ಯಾಧ್ಯಕ್ಷ ಸಿ. ರಾಮಚಾರಿ, ಉಪಾಧ್ಯಕ್ಷರಾದ ರವಿಶಂಕರಚಾರಿ, ಆರ್. ದೊಡ್ಡವೀರಚಾರ್, ಪ್ರಧಾನ ಕಾರ್ಯದರ್ಶಿ ಬಿ. ಮಂಜುನಾಥ್, ಸಹ ಕಾರ್ಯದರ್ಶಿ ಪಿ. ಮಂಜುನಾಥ್, ಖಜಾಂಚಿ ಎ. ಬಸವರಾಜಚಾರಿ, ಸಂಘಟನಾ ಕಾರ್ಯದರ್ಶಿ ಕುಮಾರಚಾರಿ, ಸಹ ಸಂಘಟನಾಕಾರ್ಯದರ್ಶಿಗಳಾದ ಎಸ್. ಸುಭಾಷ್, ಮಂಜೇಶ್ ವಸಿಷ್ಠ, ಎಸ್. ಭಾನುಪ್ರಕಾಶ್, ಎನ್. ರಘು ಮತ್ತು ಕಾರ್ಯಕಾರಿ ಸಮಿತಿ ನಿರ್ದೇಶಕರು ಶ್ರೀಗಳಿಂದ ಪ್ರಮಾಣ ಪತ್ರ ಸ್ವೀಕರಿಸಿದರು. 
ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿನಿ ಕೀರ್ತನಾ ಅವರನ್ನು ಶ್ರೀಗಳು ಸನ್ಮಾನಿಸಿ ಅಭಿನಂದಿಸಿದರು. ಈಕೆ ಪತ್ರಿಕಾವಿತರಕ ಕೃಷ್ಣಮೂರ್ತಿ ಮತ್ತು ಸ್ವಣಾಂಬ ದಂಪತಿ ಪುತ್ರಿಯಾಗಿದ್ದಾರೆ. 
ಇದಕ್ಕೂ ಮೊದಲು ಹಳೇನಗರದ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಎನ್‌ಎಸ್‌ಟಿ ರಸ್ತೆಯಲ್ಲಿ ನೂತನ ಕಛೇರಿ ಉದ್ಘಾಟಿಸಲಾಯಿತು. 




Saturday, June 21, 2025

ಅಡ್ವೋಕೆಸಿ ಕಾರ್ಯಾಗಾರ : ಕೀಟಜನ್ಯ ರೋಗಳ ಬಗ್ಗೆ ಮಾಹಿತಿ

ವಿಶ್ವ ಮಲೇರಿಯಾ ವಿರೋಧಿ ಮಾಸಾಚಾರಣೆ ಅಂಗವಾಗಿ ಶನಿವಾರ ಭದ್ರಾವತಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ತಾಲೂಕಿನ ಎಲ್ಲಾ ಖಾಸಗಿ ಆಸ್ಪತ್ರೆ/ಕ್ಲಿನಿಕ್/ಪ್ರಯೋಗಶಾಲೆ/ಆಯುಷ್/ಹೊಮಿಯೊಪತಿ/ಸಿದ್ದ/ನ್ಯಾಚುರೋಪತಿ ಸೇರಿದಂತೆ ಇತರೆ ಭಾರತೀಯ ವೈದ್ಯಕೀಯ ಪದ್ಧತಿ ಪಾಲಿಸುವವರಿಗೆ, ಅಡ್ವೋಕೆಸಿ  ಕಾರ್ಯಾಗಾರ ಆಯೋಜಿಸಲಾಗಿತ್ತು.
    ಭದ್ರಾವತಿ: ವಿಶ್ವ ಮಲೇರಿಯಾ ವಿರೋಧಿ ಮಾಸಾಚಾರಣೆ ಅಂಗವಾಗಿ ಶನಿವಾರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ತಾಲೂಕಿನ ಎಲ್ಲಾ ಖಾಸಗಿ ಆಸ್ಪತ್ರೆ/ಕ್ಲಿನಿಕ್/ಪ್ರಯೋಗಶಾಲೆ/ಆಯುಷ್/ಹೊಮಿಯೊಪತಿ/ಸಿದ್ದ/ನ್ಯಾಚುರೋಪತಿ ಸೇರಿದಂತೆ ಇತರೆ ಭಾರತೀಯ ವೈದ್ಯಕೀಯ ಪದ್ಧತಿ ಪಾಲಿಸುವವರಿಗೆ, ಅಡ್ವೋಕೆಸಿ  ಕಾರ್ಯಾಗಾರ ಆಯೋಜಿಸಲಾಗಿತ್ತು.
    ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಗುಡದಪ್ಪ ಕಸಬಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ, ಆನೆಕಾಲು ರೋಗ, ಮೆದುಳು ಜ್ವರ ಸೇರಿದಂತೆ ಕೀಟಜನ್ಯ ರೋಗಗಳ ಬಗ್ಗೆ ಮಾಹಿತಿ ನೀಡಿದರು. 
     ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಮಾತನಾಡಿ, ಮಲೇರಿಯಾ ಹಾಗು ಡೆಂಗ್ಯೂ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಶಿಕ್ಷಣ ಆರೋಗ್ಯಾಧಿಕಾರಿ ಸುಶೀಲ ಬಾಯಿ, ಹಿರಿಯ ಆರೋಗ್ಯ ನಿರೀಕ್ಷಕ ಆನಂದಮೂರ್ತಿ, ಜಿಲ್ಲಾ ಆರೋಗ್ಯ ಮೇಲ್ವಿಚಾರಕರು, ತಾಲೂಕು ಆರೋಗ್ಯ ಮೇಲ್ವಿಚಾರಕರು ಹಾಗೂ ಖಾಸಗಿ ಕ್ಲಿನಿಕ್ ವೈದ್ಯರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಉಕ್ಕಿನ ನಗರದ ವಿವಿಧೆಡೆ ೧೧ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಭದ್ರಾವತಿಯಲ್ಲಿ ಬಿಜೆಪಿ ಪಕ್ಷದ ನಗರ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ  "ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ' ಶೀರ್ಷಿಕೆಯಡಿ  ೧೧ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷ  ಕೆ.ಎಚ್ ತೀರ್ಥಯ್ಯರವರ ಉಪಸ್ಥಿತಿಯಲ್ಲಿ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ, ಅಂತರರಾಷ್ಟ್ರೀಯ ಯೋಗಗುರು ಡಾ.ಡಿ ನಾಗರಾಜ್‌ರವರ ನೇತೃತ್ವದಲ್ಲಿ ನಡೆಯಿತು. 
    ಭದ್ರಾವತಿ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಬಿಜೆಪಿ ಮಂಡಲ, ಜನ್ನಾಪುರ ಹ್ಯಾಪಿ ಲಿವಿಂಗ್ ಲೈಫ್ ಯೋಗ ಕೇಂದ್ರ ಸೇರಿದಂತೆ ವಿವಿಧೆಡೆ ೧೧ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಶನಿವಾರ ನಡೆಯಿತು. 
    ಬಿಜೆಪಿ ಮಂಡಲ :  `ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ'  
    ಬಿಜೆಪಿ ಪಕ್ಷದ ನಗರ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ  "ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ' ಶೀರ್ಷಿಕೆಯಡಿ  ೧೧ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷ  ಕೆ.ಎಚ್ ತೀರ್ಥಯ್ಯರವರ ಉಪಸ್ಥಿತಿಯಲ್ಲಿ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ, ಅಂತರರಾಷ್ಟ್ರೀಯ ಯೋಗಗುರು ಡಾ.ಡಿ ನಾಗರಾಜ್‌ರವರ ನೇತೃತ್ವದಲ್ಲಿ ನಡೆಯಿತು. ಅವರು  ಯೋಗದ ಮಹತ್ವ ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನವನ್ನು ತಿಳಿಸಿದರು. 


ಭದ್ರಾವತಿಯಲ್ಲಿ ಬಿಜೆಪಿ ಪಕ್ಷದ ನಗರ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ  "ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ' ಶೀರ್ಷಿಕೆಯಡಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷ  ಕೆ.ಎಚ್ ತೀರ್ಥಯ್ಯರವರ ಉಪಸ್ಥಿತಿಯಲ್ಲಿ ನಡೆದ ೧೧ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ, ಅಂತರರಾಷ್ಟ್ರೀಯ ಯೋಗಗುರು ಡಾ.ಡಿ ನಾಗರಾಜ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಮಂಡಲ ಅಧ್ಯಕ್ಷರಾದ ಜಿ. ಧರ್ಮಪ್ರಸಾದ್ ಹಾಗು ಕೆ.ಎಚ್ ತೀರ್ಥಯ್ಯರವರು  ಮಾತನಾಡಿ, ವಿಶ್ವಕ್ಕೆ ಭಾರತ ಕೊಟ್ಟ ಮಹಾನ್ ಕೊಡುಗೆ ಯೋಗ. ಪ್ರಧಾನಿ ನರೇಂದ್ರ ಮೋದಿರವರು ಯೋಗಕ್ಕೆ ವಿಶ್ವವ್ಯಾಪಿ ಮಾನ್ಯತೆ ಲಭಿಸುವಂತೆ ಮಾಡಿದ್ದಾರೆ. 
    ಮೋದಿಯವರ ಜೀವನದಲ್ಲಿ ಯೋಗ ಕೇವಲ ಅಭ್ಯಾಸವಲ್ಲ. ಆದರ್ಶವನ್ನಾಗಿಸಿಕೊಂಡು ಪ್ರತಿದಿನ ಯೋಗಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ದೇಶ ವಿದೇಶಗಳಲ್ಲಿ ಜನರು ಯೋಗ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ದೇಹ ಹಾಗೂ ಮನಸ್ಸಿನ ಆರೋಗ್ಯಕ್ಕೆ ಪ್ರಯೋಜನಕಾರಿ. ಪ್ರತಿಯೊಬ್ಬರು ಇದನ್ನು ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. 
    ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್ ಹಾಗೂ ಮೊಸರಳ್ಳಿ ಅಣ್ಣಪ್ಪ, ಯೋಗ ಕಾರ್ಯಕ್ರಮದ ವಿಶೇಷ ತಂಡದ ಸದಸ್ಯರಾದ ರಘುರಾವ್, ರಾಜಶೇಖರ್ ಉಪ್ಪಾರ್, ತೀರ್ಥಪ್ಪ, ಸರಸ್ವತಿ, ಜಯಲಕ್ಷ್ಮಿ, ಶಕುಂತಲಾ ಪ್ರದೀಪ್, ಕಾರಾನಾಗರಾಜ್, ಎಂ.ಎಸ್ ಸುರೇಶಪ್ಪ, ನಂಜಪ್ಪ, ಹುತ್ತ ಸತೀಶ್, ಸುಲೋಚನ ಪ್ರಕಾಶ್, ರಾಘವೇಂದ್ರ, ಆಟೋಮೂರ್ತಿ, ರವಿಚಂದ್ರನ್ ಸೇರಿದಂತೆ ಯೋಗಾಸಕ್ತರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
    ಸೈಲ್-ವಿಐಎಸ್‌ಎಲ್ : 'ಯೋಗದ ಮಹತ್ವ ಮತ್ತು ಆರೋಗ್ಯದ ಮೇಲೆ ಅದರ ಪರಿಣಾಮ' 
    ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ೧೧ನೇ ಅಂತರರಾಷ್ಟ್ರೀಯ ಯೋಗ ದಿನ ಸೈಲ್-ವಿಐಎಸ್‌ಎಲ್ ಭದ್ರಾ ಅತಿಥಿ ಗೃಹದಲ್ಲಿ ಆಚರಿಸಲಾಯಿತು.


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ೧೧ನೇ ಅಂತರರಾಷ್ಟ್ರೀಯ ಯೋಗ ದಿನ ಸೈಲ್-ವಿಐಎಸ್‌ಎಲ್ ಭದ್ರಾ ಅತಿಥಿ ಗೃಹದಲ್ಲಿ ಆಚರಿಸಲಾಯಿತು.
    ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಕಾರ್ಯಕ್ರಮ ಉದ್ಘಾಟಿಸಿದರು. ನಗರದ ಪ್ರಸೂತಿ ಹಾಗು ಸ್ತ್ರೀ ರೋಗ ತಜ್ಞೆ, ಯೋಗ ಶಿಕ್ಷಕಿ ಡಾ. ವೀಣಾ ಭಟ್ ರವರು `ಯೋಗದ ಮಹತ್ವ ಮತ್ತು ಆರೋಗ್ಯದ ಮೇಲೆ ಅದರ ಪರಿಣಾಮ' ವಿಷಯ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ವಿಐಎಸ್‌ಎಲ್ ಜಾಲತಾಣದಲ್ಲಿ ಡಾ. ವೀಣಾ ಭಟ್‌ರವರ `ಯೋಗದ ಮಹತ್ವ' ಲೇಖನವನ್ನು ಪ್ರಸರಿಸಲಾಯಿತು.
    ಡಾ. ವೀಣಾ ಭಟ್ ಮತ್ತು ತಂಡದವರಾದ ವಿ.ಜಿ ವಿಂಧ್ಯ, ಡಾ. ಆಶಾ, ಶಾಲಿನಿ ಕಿರಣ್ ಮತ್ತು ಸತ್ಯಮೂರ್ತಿರವರು ವಿವಿಧ ಯೋಗಾಸನ ಭಂಗಿಗಳ ಮೂಲಕ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದವರಿಗೆ ಸಾಮೂಹಿಕವಾಗಿ ಯೋಗಾಸನ ಮಾಡಲು ಮಾರ್ಗದರ್ಶನ ನೀಡಿದರು.


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಆಯೋಜಿಸಲಾಗಿದ್ದ ೧೧ನೇ ಅಂತರರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ, ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಸೇರಿದಂತೆ ಇನ್ನಿತರರು ಯೋಗಾಸನದ ವಿವಿಧ ಭಂಗಿಗಳ ಮೂಲಕ ಗಮನ ಸೆಳೆದರು. 
    ಮುಖ್ಯ ಮಹಾಪ್ರಬಂಧಕರು(ಸ್ಥಾವರ) ಕೆ.ಎಸ್ ಸುರೇಶ್,  ಮಹಾಪ್ರಬಂಧಕರು (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್ ಮತ್ತು ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
    ಉಪ ಪ್ರಬಂಧಕರು (ಮಾನವ ಸಂಪನ್ಮೂಲ) ಕೆ.ಎಸ್. ಶೋಭಾ ಕಾರ್ಯಕ್ರಮ ನಿರೂಪಿಸಿದರು. ಈ ನಡುವೆ ಕಾರ್ಖಾನೆಯ ಕಾರ್ಮಿಕರು ಮತ್ತು ಕುಟುಂಬದವರು ತಮ್ಮ ತಮ್ಮ ಮನೆಗಳಲ್ಲಿ ಯೋಗಾಸನದ ವಿವಿಧ ಭಂಗಿಗಳನ್ನು ಮಾಡುವ ಜೊತೆಗೆ ಅವುಗಳ ಪೋಟೋ ಹಂಚಿಕೊಳ್ಳುವ ಮೂಲಕ ವಿಶ್ವಯೋಗ ದಿನಾಚರಣೆ ಆಚರಿಸಿದರು.  
    ಹ್ಯಾಪಿ ಲಿವಿಂಗ್ ಲೈಫ್ ಯೋಗ ಕೇಂದ್ರ : ಯೋಗ ನಡಿಗೆ 
    ನಗರಸಭೆ ವ್ಯಾಪ್ತಿಯ ಜನ್ನಾಪುರ ಹ್ಯಾಪಿ ಲಿವಿಂಗ್ ಲೈಫ್ ಯೋಗ ಕೇಂದ್ರದಿಂದ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಸಾರ್ವಜನಿಕರಿಗೆ ಯೋಗದ ಅರಿವು ಮೂಡಿಸಲು ಯೋಗ ನಡಿಗೆಯನ್ನು ಆಯೋಜಿಸಲಾಗಿತ್ತು. 
    ಕೇಂದ್ರದ ಯೋಗ ಗುರು ಮಹೇಶ್ ಮಾತನಾಡಿ, ಯೋಗ ಎಂದರೆ ತಿರುಚುವುದು, ಬಗ್ಗಿಸುವುದಲ್ಲ. ಅದು ಅಷ್ಟಾಂಗದ ಒಂದು ಭಾಗ, ಒಂದು ಸಾಧನ, ಒಂದು ಬುದ್ಧಿ ಶಕ್ತಿ. ಆಂತರ್ಯದ ಶಕ್ತಿಗಾಗಿ ಯೋಗ, ಯೋಗದಿಂದ ಐಕ್ಯತೆ, ಇದರಿಂದ ನಮ್ಮಲ್ಲಿ ಸಾಮರಸ್ಯ ಉಂಟಾಗಿ ಉತ್ತಮ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು. 

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಹ್ಯಾಪಿ ಲಿವಿಂಗ್ ಲೈಫ್ ಯೋಗ ಕೇಂದ್ರದಿಂದ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಸಾರ್ವಜನಿಕರಿಗೆ ಯೋಗದ ಅರಿವು ಮೂಡಿಸಲು ಯೋಗ ನಡಿಗೆಯನ್ನು ಆಯೋಜಿಸಲಾಗಿತ್ತು. 
    ಪ್ರಸ್ತುತ ದೇಶದಲ್ಲಿ ಒಂದು ದೊಡ್ಡ ಸಮಸ್ಯೆಯನ್ನು ನಾವುಗಳು ಎದುರಿಸುತ್ತಿದ್ದೇವೆ. ಪ್ರತಿಯೊಂದು ಕುಟುಂಬದಲ್ಲಿ ಮಾನಸಿಕ ಅಸಮತೋಲನದಿಂದ ನರಳುತ್ತಿದ್ದಾರೆ. ಪ್ರತಿ ೪೫ ನಿಮಿಷಕ್ಕೆ ೧೫ ವರ್ಷದೊಳಗಿನ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಮೂಲಭೂತವಾಗಿ ನಾವು ಹಲವಾರು ತಪ್ಪುಗಳನ್ನು ಮಾಡುತ್ತಿದ್ದೇವೆ. ಆತ್ಮಹತ್ಯೆಗೆ ಸಾಮಾಜಿಕ ಸನ್ನಿವೇಶ ಇರಬಹುದು, ಕುಟುಂಬದ ಒತ್ತಡದ ವಾತಾವರಣ ಮತ್ತು ಆಹಾರ ಕ್ರಮ ಸೇರಿದಂತೆ ಇನ್ನಿತರ ಕಾರಣಗಳು ಇರಬಹುದು ಎಂದರು. 
    ಪ್ರಸ್ತುತ ಯೋಗ ಪ್ರತಿಯೊಬ್ಬರಿಗೂ ಅಗತ್ಯವಾಗಿದ್ದು, ಪ್ರತಿದಿನ ಯೋಗಾಭ್ಯಾಸಕ್ಕೆ ಕನಿಷ್ಠ ೩೦ ನಿಮಿಷ ಸಮಯ ಮೀಸಲಿಡಬೇಕು. ಆರೋಗ್ಯಕ್ಕಾಗಿ, ಶಾಂತಿ-ನೆಮ್ಮದಿಗಾಗಿ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು. 
    ನಗರಸಭೆ ಸದಸ್ಯೆ ಅನುಪಮ ಚನ್ನೇಶ್, ದಾಕ್ಷಾಯಿಣಿ ಮಹೇಶ್ ನಾಗಮಣಿ, ಲಕ್ಷ್ಮಿ, ಪುಷ್ಪ, ಲಕ್ಷ್ಮಿದೇವಿ, ಮಂಜುಳ, ಶೈಲ, ಆರತಿ, ಅಶ್ವಿನಿ, ವಾಣಿ, ಡಾ. ಶಿಲ್ಪ, ಮಾಲಾ, ರಶ್ಮಿ, ವಿದ್ಯಾ ಮತ್ತು ಸ್ಪೂರ್ತಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
    ಚುಂಚಾದ್ರಿ ಮಹಿಳಾ ವೇದಿಕೆ : ಮಕ್ಕಳಲ್ಲಿ ಜ್ಞಾನ, ಓದುವ ಆಸಕ್ತಿ 
    ನಗರದ ಚುಂಚಾದ್ರಿ  ಮಹಿಳಾ ವೇದಿಕೆಯಿಂದ ವಿಶ್ವ ಯೋಗ ದಿನ ಹುತ್ತಾ ಕಾಲೋನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು. ಯೋಗ ಶಿಕ್ಷಕ ಮಂಜುನಾಥ್‌ರಾವ್ ಮಕ್ಕಳಿಗೆ ಯೋಗಭ್ಯಾಸ ನಡೆಸಿಕೊಟ್ಟರು.  ಶಾಲೆಯ ಮುಖ್ಯೋಪಾಧ್ಯಾಯ ಪರಶುರಾಮರಾವ್ ಅಧ್ಯಕ್ಷತೆ ವಹಿಸಿದ್ದರು. 
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ವಿಶ್ವಸಂಸ್ಥೆಯಿಂದ ಯೋಗ ದಿನಾಚರಣೆ ಆಚರಿಸಲು ಎಲ್ಲಾ ರಾಷ್ಟ್ರಗಳು ಅಂಗೀಕರಿಸಿವೆ. ಯೋಗ ಮಕ್ಕಳಿಗೆ ಅತ್ಯುತ್ತಮವಾದದ್ದು, ಯೋಗದಿಂದ ಜ್ಞಾನ ಮತ್ತು ಓದುವ ಆಸಕ್ತಿ ಮೂಡುತ್ತದೆ ಎಂದರು. 
    ಚುಂಚಾದ್ರಿ ಮಹಿಳಾ ವೇದಿಕೆ ಸಾಹಿತ್ಯ, ಆರೋಗ್ಯ, ಯೋಗ ಸೇರಿದಂತೆ ಹಲವಾರು ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. 


ಭದ್ರಾವತಿ ನಗರದ ಚುಂಚಾದ್ರಿ  ಮಹಿಳಾ ವೇದಿಕೆಯಿಂದ ವಿಶ್ವ ಯೋಗ ದಿನ ಹುತ್ತಾ ಕಾಲೋನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. 
    ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಗ ಋಷಿಮುನಿಗಳ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಆಧ್ಯಾತ್ಮಿಕ, ಭೌತಿಕ ಹಾಗು ಮಾನಸಿಕ ಚಿಂತನೆಗೆ ಯೋಗ ಮುಖ್ಯವಾದದ್ದಾಗಿದೆ. ಯೋಗ ದೇಹದ ಮಾನಸಿಕ ಒತ್ತಡ ಕಡಿಮೆ ಮಾಡುವ ಜೊತೆಗೆ ದೇಹದ ಸೌಂದರ್ಯಕ್ಕೂ ಸಹಕಾರಿಯಾಗಿದೆ.  ಸರ್ಕಾರಿ ಶಾಲೆ ಮಕ್ಕಳಲ್ಲಿ ಯೋಗದ ಅರಿವು ಮೂಡಿಸುವ ಕಾರ್ಯಕ್ರಮ ವೇದಿಕೆ  ಆಯೋಜಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. 
    ಶಾಲೆಯ ಮುಖ್ಯೋಪಾಧ್ಯಾಯ ಪರಶುರಾಮರಾವ್ ಮಾತನಾಡಿ, ಯೋಗದಲ್ಲಿ ಎಂಟು ಆಯಾಮಗಳಿವೆ.  ಧ್ಯಾನ, ಆಸನ ಪ್ರಮುಖವಾಗಿದ್ದು, ಯೋಗಾಭ್ಯಾಸದಲ್ಲಿ ತೊಡಗುವುದರಿಂದ ಮಕ್ಕಳಲ್ಲಿ ಶಿಸ್ತು, ಸಂಯಮ ಮೂಡುತ್ತದೆ. ಶಾಲೆಯಲ್ಲಿ ಮಕ್ಕಳಿಗೆ ಪ್ರತಿದಿನ ಯೋಗ ಅಭ್ಯಾಸ ಆಯೋಜಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು. 
    ವೇದಿಕೆ ಪದಾಧಿಕಾರಿಗಳಾದ ಉಪಾಧ್ಯಕ್ಷೆ ಪುಷ್ಪ ಕೇಶವ, ಕಾರ್ಯದರ್ಶಿ ಪ್ರತಿಭಾ, ಸಹಕಾಯದರ್ಶಿ ಶೀಲಾರವಿ, ಖಜಾಂಚಿ ಭಾರತಿ ಕುಮಾರ್, ಸಂಘಟನಾ ಕಾರ್ಯದರ್ಶಿ ಪ್ರೇಮ, ಮಂಜು, ಕುಸುಮ ಹಾಗು ವೇದಿಕೆ ಸದಸ್ಯರು ಭಾಗವಹಿಸಿದ್ದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದೇವರಾಜ್ ಸ್ವಾಗತಿಸಿ, ಶಿಕ್ಷಕಿ ವೀಣಾ ನಿರೂಪಿಸಿ, ಸುಮ ವಂದಿಸಿದರು.