ಸೋಮವಾರ, ಆಗಸ್ಟ್ 4, 2025

ಕಾರ್ಮಿಕ ಸಮುದಾಯ ಭವನ ಲೋಕಾರ್ಪಣೆ : ೯.೫ ಕೋ. ರು. ವೆಚ್ಚದ ಸುಸ್ಸಜಿತ ಕಟ್ಟಡ


ಕಾರ್ಮಿಕ ಇಲಾಖೆ ವತಿಯಿಂದ ಭದ್ರಾವತಿ ನಗರದ ಉಜ್ಜನಿಪುರ, ಬೈಪಾಸ್ ರಸ್ತೆ, ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಕಾರ್ಮಿಕ ಸಮುದಾಯ ಭವನ ಸೋಮವಾರ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಲೋಕಾರ್ಪಣೆಗೊಳಿಸಿದರು.
    ಭದ್ರಾವತಿ : ಕಾರ್ಮಿಕ ಇಲಾಖೆ ವತಿಯಿಂದ ನಗರದ ಉಜ್ಜನಿಪುರ, ಬೈಪಾಸ್ ರಸ್ತೆ, ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಕಾರ್ಮಿಕ ಸಮುದಾಯ ಭವನ ಸೋಮವಾರ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಲೋಕಾರ್ಪಣೆಗೊಳಿಸಿದರು.
    ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. 
    ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್, ಕಾರ್ಮಿಕ ಇಲಾಖೆ ಆಯುಕ್ತ ಡಾ. ಎಚ್.ಎನ್ ಗೋಪಾಲಕೃಷ್ಣ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ. ಭಾರತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಹೇಮಂತ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಕಾರ್ಮಿಕ ನಿರೀಕ್ಷಕರಾದ ಬಿ.ಎಂ ರಕ್ಷಿತ್ ಮತ್ತು ಜೆ.ವಿ ಸುಪ್ರಿತ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು,  ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ವಿವಿಧ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು. 


    ೯.೫ ಕೋ.ರು ವೆಚ್ಚದ ಸುಸ್ಸಜಿತ ಕಾರ್ಮಿಕ ಸಮುದಾಯ ಭವನ : 
  ಕಸಬಾ ಹೋಬಳಿ, ಉಜ್ಜಯಿನಿಪುರ ಗ್ರಾಮದ ಸರ್ವೇ ನಂ. ೨೦ರಲ್ಲಿ ಸುಸ್ಸಜಿತ ಕಾರ್ಮಿಕ ಸಮುದಾಯ ಭವನ ನಿರ್ಮಿಸಲಾಗಿದೆ. ಮುಖ್ಯ ಆಡಳಿತಾಧಿಕಾರಿಗಳು, ದಿ ಮೈಸೂರ್ ಪೇಪರ್ ಮಿಲ್ಸ್ ಲಿಮಿಟೆಡ್ ರವರು ತಾಲೂಕಿನಲ್ಲಿರುವ ಕಾರ್ಮಿಕರು ಮತ್ತು ಅವರ ಅವಲಂಬಿತರ ಉಪಯೋಗಕ್ಕೆ ಸರ್ವೇ ನಂ. ೨೦. ಕಸಬಾ ಹೋಬಳಿ, ಉಜ್ಜಯಿನಿಪುರ ಗ್ರಾಮ, ಭದ್ರಾವತಿ ತಾಲ್ಲೂಕಿನಲ್ಲಿ ಕಾರ್ಖಾನೆಗೆ ಸೇರಿದ ೬೭ ಎಕರೆ ೧೨ ಗುಂಟೆ ಭೂ ಭಾಗದಲ್ಲಿ ೨ ಎಕರೆ ಜಮೀನನ್ನು ಸಮುದಾಯ ಭವನ ನಿರ್ಮಿಸಲು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ನೀಡಿರುತ್ತಾರೆ. 
    ಜಿಲ್ಲೆಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ೧೮೭ ಸಂಸ್ಥೆಗಳಿಂದ ೩೯೯೬೯ ಕಾರ್ಮಿಕರು ಮಂಡಳಿಗೆ ರು..೨೪,೧೬,೩೪೯ ವಂತಿಕೆ ಪಾವತಿಸಿರುತ್ತಾರೆ.  ತಾಲೂಕಿನಲ್ಲಿ ೩೬ ಸಂಸ್ಥೆಗಳ ೩೫೨೧ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಮಂಡಳಿಗೆ ರೂ. ೨,೧೨,೦೮೧ ಗಳನ್ನು ವಂತಿಕೆಯನ್ನು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ಪಾವತಿಸಿರುತ್ತಾರೆ. ತಾಲೂಕಿನಲ್ಲಿ ಮಂಡಳಿಗೆ ವಂತಿಕೆ ಪಾವತಿಸುವ ಹಾಗು ಸುತ್ತಮುತ್ತಲಿನ ಸಂಘಟಿತ ಕಾರ್ಮಿಕರು ಹಾಗೂ ಅವರ ಅವಲಂಬಿತರ ಉಪಯೋಗಕ್ಕೆ ಮತ್ತು ಸಾರ್ವಜನಿಕರ ಉಪಯೋಗಕ್ಕಾಗಿ ಸಮುದಾಯ ಭವನದ ಅವಶ್ಯಕತೆ ಇರುವುದನ್ನು ಮನಗಂಡು ೯.೫ ಕೋ. ರು. ಮೊತ್ತದಲ್ಲಿ ಸಮುದಾಯ ಭವನ ನಿರ್ಮಿಸಲು ದಿನಾಂಕ: ೦೪-೧೧-೨೦೨೨ ರಂದು ನಡೆದ ೯೪ನೇ ಮಂಡಳಿ ಸಭೆಯಲ್ಲಿ ನಿರ್ಣಯಿಸಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಟೆಂಡರ್ ಕರೆದು ಸುಸಜ್ಜಿತವಾದ ಸಮುದಾಯ ಭವನವನ್ನು ನಿರ್ಮಿಸಲಾಗಿದೆ. ಸಮುದಾಯ ಭವನದಲ್ಲಿ ಪಾಕೋಪಕರಣ ಹಾಗೂ ಪೀಠೋಪಕರಣಗಳ ಸೌಲಭ್ಯವನ್ನು ಒದಗಿಸಲು ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕೋರಲಾಗಿರುತ್ತದೆ, ಅದರಂತೆ ರು. ೯೪ ಲಕ್ಷ ಮೊತ್ತದಲ್ಲಿ ಖರೀದಿಸಿ ಪೂರೈಕೆ ಮಾಡಿರುತ್ತಾರೆ.

ಭಾನುವಾರ, ಆಗಸ್ಟ್ 3, 2025

ಆ.೪ರಂದು ಕಾರ್ಮಿಕರ ಭವನ ಲೋಕಾರ್ಪಣೆ


ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್
    ಭದ್ರಾವತಿ : ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನಗರದ ಉಜ್ಜನಿಪುರ, ಬೈಪಾಸ್ ರಸ್ತೆ, ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಕಾರ್ಮಿಕರ ಭವನ ಆ.೪ರ ಸೋಮವಾರ ಮಧ್ಯಾಹ್ನ ೩ ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. 
    ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಉಪಸ್ಥಿತಿಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಉದ್ಘಾಟಿಸುವರು. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ. 
    ಕರ್ನಾಟಕ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷರಾದ ಶಾಸಕ ಗೋಪಾಲಕೃಷ ಬೇಳೂರು, ಸಂಸದ ಬಿ.ವೈ ರಾಘವೇಂದ್ರ, ವಿಧಾನಸಭಾ ಸದಸ್ಯರಾದ ಅರಗ ಜ್ಞಾನೇಂದ್ರ, ಶಾರದಾ ಪೂರ್‍ಯಾನಾಯ್ಕ, ಎಸ್.ಎನ್ ಚನ್ನಬಸಪ್ಪ ಮತ್ತು ಬಿ.ವೈ ವಿಜಯೇಂದ್ರ, ವಿಧಾನಪರಿಷತ್ ಸದಸ್ಯರಾದ ಎಸ್.ಎಲ್ ಭೋಜೇಗೌಡ, ಭಾರತಿ ಶೆಟ್ಟಿ, ಡಿ.ಎಸ್ ಅರುಣ್, ಡಾ. ಧನಂಜಯ ಸರ್ಜಿ, ಬಲ್ಕೀಶ್ ಬಾನು ಸೇರಿದಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಕಾರ್ಮಿಕ ಮತ್ತು ಸಾರಿಗೆ ಇಲಾಖೆ ಸರ್ಕಾರದ ಕಾರ್ಯದರ್ಶಿ ಮತ್ತು ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ ಸಿಇಓ, ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಭಾಗವಹಿಸಲಿದ್ದಾರೆ. 
    ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಮತ್ತು ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಸದಸ್ಯರು, ಕಾರ್ಮಿಕ ಇಲಾಖೆ ಸಿಬ್ಬಂದಿಗಳು, ಜಿಲ್ಲೆಯ ಎಲ್ಲಾ ಕಾರ್ಮಿಕ ವರ್ಗದವರು ಹಾಗೂ ಆಡಳಿತ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ. 
    ಜೂ.೨೮, ೨೦೨೨ರಂದು ಸುಮಾರು ೫ ಕೋ.ರು. ವೆಚ್ಚದಲ್ಲಿ ಕಾರ್ಮಿಕರ ಭವನ ನಿರ್ಮಾಣಕ್ಕೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ. ಕೆ.ಸಿ ನಾರಾಯಣ ಗೌಡ ಉಪಸ್ಥಿತಿಯಲ್ಲಿ ಅಂದಿನ ಕಾರ್ಮಿಕ ಸಚಿವರಾಗಿದ್ದ ಶಿವರಾಮ್ ಹೆಬ್ಬಾರ್‌ರವರು ಶಂಕುಸ್ಥಾಪನೆ ನೆರವೇರಿಸಿದ್ದರು. ಸುಮಾರು ಒಂದು ವರ್ಷದ ಹಿಂದೆಯೇ ಭವನ ನಿರ್ಮಾಣಗೊಂಡಿದ್ದರೂ ಸಹ ಲೋಕಾರ್ಪಣೆಗೊಳ್ಳದೆ ನೆನೆಗುದಿಗೆ ಬಿದ್ದಿತ್ತು. ಇದೀಗ ಲೋಕಾರ್ಪಣೆಗೊಳ್ಳುತ್ತಿದೆ. 
    ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕಾರ್ಮಿಕರ ಭವನ ನಿರ್ಮಾಣಗೊಂಡಿರುವುದು ಹೆಚ್ಚಿನ ಸಹಕಾರಿಯಾಗಿದೆ. ಸಭೆ, ಸಮಾರಂಭಗಳನ್ನು ನಡೆಸಲು, ಅದರಲ್ಲೂ ವಲಸೆ ಕಾರ್ಮಿಕರು ತಾತ್ಕಾಲಿಕವಾಗಿ ಉಳಿದುಕೊಳ್ಳಲು ಹೆಚ್ಚಿನ ಅನುಕೂಲವಾಗಿದೆ.  

೨೪ ವರ್ಷ ಕರ್ತವ್ಯ ನಿರ್ವಹಿಸಿ ಮನೆಗೆ ಮರಳಿದ ಸೈನಿಕನಿಗೆ ಕುಟುಂಬಸ್ಥರು, ಸ್ನೇಹಿತರಿಂದ ಅದ್ದೂರಿ ಸ್ವಾಗತ

ಭದ್ರಾವತಿ ತಾಲೂಕಿನ ಶ್ರೀ ರಾಮನಗರದ ನಿವಾಸಿ, ಭಾರತೀಯ ಸೈನ್ಯದಲ್ಲಿ ೨೪ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಶನಿವಾರ ರಾತ್ರಿ ಮರಳಿದ ಕೆ. ಆನಂದ್ ಅವರಿಗೆ ಕುಟುಂಬಸ್ಥರು ಹಾಗು ಸ್ನೇಹಿತರು ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಸನ್ಮಾನಿಸಿ ಗೌರವಿಸಿದರು. 
    ಭದ್ರಾವತಿ : ತಾಲೂಕಿನ ಶ್ರೀ ರಾಮನಗರದ ನಿವಾಸಿ, ಭಾರತೀಯ ಸೈನ್ಯದಲ್ಲಿ ೨೪ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಶನಿವಾರ ರಾತ್ರಿ ಮರಳಿದ ಕೆ. ಆನಂದ್ ಅವರಿಗೆ ಕುಟುಂಬಸ್ಥರು ಹಾಗು ಸ್ನೇಹಿತರು ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಸನ್ಮಾನಿಸಿ ಗೌರವಿಸಿದರು. 
    ತಮ್ಮ ೨೪ ವರ್ಷಗಳ ವೃತ್ತಿ ಅವಧಿಯಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದಾರೆ. ಪತ್ರಿಕೆ ಜೊತೆ ಮಾತನಾಡಿದ ಆನಂದ್‌ರವರು, ಶ್ರೀನಗರ, ಜಮ್ಮುಕಾಶ್ಮೀರ, ಪಂಜಾಬ್ ಸೇರಿದಂತೆ ದೇಶದ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದೇನೆ. ಐಟಿಐ ವೃತ್ತಿಪರ ಶಿಕ್ಷಣಪಡೆದು ಸೈನ್ಯಕ್ಕೆ ಸೇರ್ಪಡೆಗೊಂಡು ಹವಲ್ದಾರ್‌ವರೆಗೂ ಮುಂಬಡ್ತಿ ಪಡೆದು ನಿವೃತ್ತಿ ಹೊಂದಿದ್ದೇನೆ. ಇತ್ತೀಚಿನ ಸಿಂಧೂರ ಯುದ್ಧದಲ್ಲಿ ಪಾಲ್ಗೊಂಡ ಹೆಮ್ಮೆ ನನಗಿದೆ. ಸುಮಾರು ೧೫ ವರ್ಷಗಳ ಹಿಂದೆ ವಿವಾಹವಾಗಿದ್ದು, ನನಗೆ ಇಬ್ಬರು ಮಕ್ಕಳಿದ್ದಾರೆ. ಮೂಲತಃ ಕೃಷಿ ಕುಟುಂಬ ನಮ್ಮದಾಗಿದ್ದು, ಸದ್ಯಕ್ಕೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು. 
ಆನಂದ್‌ರವರ ಸಹೋದರ ಅಣ್ಣ ಕೆ. ನಿರಂಜನ್‌ರವರು ಮಾತನಾಡಿ, ನನ್ನ ತಮ್ಮ ಸೈನಿಕನಾಗಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಅದರಲ್ಲೂ ೨೪ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಮರಳಿರುವುದು ಸಂಭ್ರಮದ ಸಂಗತಿಯಾಗಿದೆ ಎಂದರು. 
    ಆನಂದ್‌ರವರು ಜು.೩೧ರಂದು ನಿವೃತ್ತಿ ಹೊಂದಿದ್ದು, ರೈಲಿನಲ್ಲಿ ೩ ದಿನಗಳ ಕಾಲ ಪ್ರಯಾಣ ಬೆಳೆಸಿ ಮನೆಗೆ ಮರಳಿದ್ದಾರೆ. ಕುಟುಂಬಸ್ಥರು, ಸ್ನೇಹಿತರು ಆನಂದ್‌ರವರನ್ನು ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಿ ಗೌರವಿಸುವ ಜೊತೆಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಆನಂದ್ ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ಕಾರ್ಮಿಕ ಎ. ಕೆಂಪೇಗೌಡ-ಶಾಂತಮ್ಮ ದಂಪತಿ ದ್ವಿತೀಯ ಪುತ್ರರಾಗಿದ್ದಾರೆ.  ಸ್ನೇಹಿತರಾದ  ರಮೇಶ್, ವಸಂತ, ಸೋಮಶೇಖರ್, ನಿಂಗೇಗೌಡ ಮತ್ತು ಎಸ್ ಎನ್ ರವಿ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಶನಿವಾರ, ಆಗಸ್ಟ್ 2, 2025

ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ವರ್ಗಾವಣೆ

ಪ್ರಕಾಶ್ ಎಂ. ಚನ್ನಪ್ಪನವರ್ 
    ಭದ್ರಾವತಿ: ಬಹಳ ದಿನಗಳಿಂದ ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಬೇರೆಡೆಗೆ ವರ್ಗಾವಣೆಗೊಳ್ಳುವ ವದಂತಿ ಕೇಳಿ ಬರುತ್ತಿತ್ತು. ಇದೀಗ ಸರ್ಕಾರ ಇವರನ್ನು ಶಿರಸಿ ನಗರಸಭೆಗೆ ವರ್ಗಾವಣೆಗೊಳಿಸಿ ಆದೇಶಿಸಿದೆ.  
    ಕೆಲವು ದಿನಗಳ ಹಿಂದೆಯೇ ಸರ್ಕಾರ ಇವರ ವರ್ಗಾವಣೆ ಆದೇಶ ಹೊರಡಿಸಿದ್ದು, ಶನಿವಾರ ನಗರಸಭೆ ನೂತನ ಪೌರಾಯುಕ್ತರಾಗಿ ಕೆ.ಎನ್ ಹೇಮಂತ್‌ರವರು ಅಧಿಕಾರ ಸ್ವೀಕರಿಸಿದ ಹಿನ್ನಲೆಯಲ್ಲಿ ಪ್ರಕಾಶ್ ಎಂ. ಚನ್ನಪ್ಪನವರ್ ಸೋಮವಾರ ಶಿರಸಿ ನಗರಸಭೆಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಹಿಂದೆ ಪಿ.ಎಂ ಚನ್ನಪ್ಪನವರ್  ಸವದತ್ತಿ ಪುರಸಭೆ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಪೌರಾಯುಕ್ತರ ಹುದ್ದೆಗೆ ಮುಂಬಡ್ತಿಪಡೆದು ಇಲ್ಲಿಗೆ ವರ್ಗಾವಣೆಗೊಂಡಿದ್ದರು. ಸುಮಾರು ೧೯ ತಿಂಗಳು ಕರ್ತವ್ಯ ನಿರ್ವಹಿಸಿದ್ದು, ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದರು.

ನಗರಸಭೆ ನೂತನ ಪೌರಾಯುಕ್ತರಾಗಿ ಕೆ.ಎನ್ ಹೇಮಂತ್ ಅಧಿಕಾರ ಸ್ವೀಕಾರ

ಭದ್ರಾವತಿ ನಗರಸಭೆ ನೂತನ ಪೌರಾಯುಕ್ತ ಕೆ.ಎನ್ ಹೇಮಂತ್ 
    ಭದ್ರಾವತಿ : ನಗರಸಭೆ ನೂತನ ಪೌರಾಯುಕ್ತರಾಗಿ ಕೆಎಂಎಸ್ ಗ್ರೇಡ್-೨ ಅಧಿಕಾರಿ, ಶಿರಾಳಕೊಪ್ಪ ಪುರಸಭೆ ಮುಖ್ಯಾಧಿಕಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಎನ್ ಹೇಮಂತ್ ಶನಿವಾರ ಅಧಿಕಾರ ಸ್ವೀಕರಿಸಿದರು. 
    ಹೇಮಂತ್‌ರವರನ್ನು ಸರ್ಕಾರ ಪೌರಾಯುಕ್ತರ ಹುದ್ದೆಗೆ ಮುಂಬಡ್ತಿ ನೀಡಿ ವರ್ಗಾವಣೆಗೊಳಿಸಿದೆ. ಈ ಮೊದಲು ಇವರನ್ನು ಬಳ್ಳಾರಿ ಮಹಾನಗರಪಾಲಿಕೆ ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಗೆ ನಿಯೋಜನೆಗೊಳಿಸುವ ಉದ್ದೇಶ ಸರ್ಕಾರ ಕೈಗೊಂಡಿತ್ತು. ಪುನಃ ಅದನ್ನು ಮಾರ್ಪಡಿಸಿ ಇಲ್ಲಿನ ನಗರಸಭೆಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ. 
    ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ನೂತನ ಪೌರಾಯುಕ್ತ ಹೇಮಂತ್‌ರವರಿಗೆ ಅಧಿಕಾರ ಹಸ್ತಾಂತರಿಸಿದರು. ನಗರಸಭೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

ಹಸು ಕಳ್ಳತನ : ಪೊಲೀಸರಿಗೆ ದೂರು



    ಭದ್ರಾವತಿ : ತಪ್ಪಿಸಿಕೊಂಡಿದ್ದ ಹಸು ಕಳ್ಳತನ ಮಾಡಲಾಗಿದ್ದು, ಕಳುವು ಮಾಡಿರುವವರನ್ನು ತಕ್ಷಣ ಪತ್ತೆಮಾಡಿ ಹಸು ಮರಳಿಸುವಂತೆ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
    ನಗರದ ಬಿ.ಎಚ್ ರಸ್ತೆ ನಿವಾಸಿ, ಸುಮಾರು ೬೨ ವರ್ಷ ವಯಸ್ಸಿನ ಸುಬ್ರಮಣಿ ಎಂಬುವರು ಜು. ೨೯ರಂದು ತಮ್ಮ ೩ ಹಸುಗಳನ್ನು ಮೇಯಿಸಿಕೊಂಡು ವಾಪಸ್ ಮನೆಗೆ ಹೋಗುವಾಗ ಒಂದು ಹಸು ತಪ್ಪಿಸಿಕೊಂಡಿದೆ. ಎಲ್ಲಾ ಕಡೆ ಹುಡುಕಿದರೂ ಹಸು ಸಿಕ್ಕಿರುವುದಿಲ್ಲ. ಜು.೩೦ರಂದು ಚಾಮೇಗೌಡ ಏರಿಯಾದಲ್ಲಿ  ಯಾರೋ ಕಳ್ಳರು ಹಸು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಸುಬ್ರಮಣಿಯವರಿಗೆ ಮಾಹಿತಿ ಬಂದಿದೆ. ಈ ಹಿನ್ನಲೆಯಲ್ಲಿ ಆ.೧ರಂದು ಪೊಲೀಸರಿಗೆ ದೂರು ನೀಡಿದ್ದು,  ಕಳ್ಳತನ ಮಾಡಲಾಗಿರುವ ಸುಮಾರು ೪೦ ಸಾವಿರ ರು. ಮೌಲ್ಯದ ಹಸು ಪತ್ತೆ ಮಾಡಿಕೊಡುವಂತೆ ಕೋರಲಾಗಿದೆ. 

sಅಂತರಗಂಗೆ ಭದ್ರಾ ಕಾಲುವೆಯಲ್ಲಿ ೩ ದಿನಗಳ ಹಿಂದೆ ಮುಳುಗಿದ್ದ ಕಾರು ಮೇಲೆತ್ತುವಲ್ಲಿ ಯಶಸ್ವಿ

ಅಪಘಾತ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಕಳೆದ ೩ ದಿನಗಳ ಹಿಂದೆ ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದ ಭದ್ರಾ ಕಾಲುವೆಗೆ ಬಿದ್ದಿದ್ದ ಕಾರನ್ನು ಈಜು ಮುಳುಗು ತಜ್ಞರು ಹಾಗು ಗ್ರಾಮಸ್ಥರು  ಕ್ರೇನ್ ನೆರವಿನೊಂದಿಗೆ ಮೇಲೆತ್ತಿರುವ ಘಟನೆ ಶನಿವಾರ ನಡೆದಿದೆ. 
    ಭದ್ರಾವತಿ : ಅಪಘಾತ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಕಳೆದ ೩ ದಿನಗಳ ಹಿಂದೆ ಭದ್ರಾ ಕಾಲುವೆಗೆ ಬಿದ್ದಿದ್ದ ಕಾರನ್ನು ಈಜು ಮುಳುಗು ತಜ್ಞರು ಹಾಗು ಗ್ರಾಮಸ್ಥರು  ಕ್ರೇನ್ ನೆರವಿನೊಂದಿಗೆ ಮೇಲೆತ್ತಿರುವ ಘಟನೆ ಶನಿವಾರ ನಡೆದಿದೆ. 
  ಕಳೆದ ಮೂರು ದಿನಗಳ ಹಿಂದೆ ಸಿದ್ದಾರೂಢನಗರದ ನಿವಾಸಿ ಶಶಾಂಕ್ ಜಾಧವ್ ಎಂಬುವರು ಅಂತರಗಂಗೆ ಗ್ರಾಮದ ಸಂಬಂಧಿಕರ ಮನೆಗೆ ಹೊಗಿ ರಾತ್ರಿ ವೇಳೆಯಲ್ಲಿ ಬರುವಾಗ ರಸ್ತೆಗೆ ಅಡ್ಡಲಾಗಿ ನಾಯಿಯೊಂದು ಬಂದ ಪರಿಣಾಮ ಕಾರು ನಿಯಂತ್ರಣ ಕಳೆದುಕೊಂಡು ಭದ್ರಾ ನದಿಯ ಗ್ರಾಮದ ದೊಡ್ಡ ಕಾಲುವೆಯಲ್ಲಿ ಬಿದ್ದಿದೆ. ಶಶಾಂಕ್ ಪಡಾಡಸದೃಶವಾಗಿ ಬದುಕಿ ಮೇಲೆ ಬಂದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ.  


    ನೀರಿನಲ್ಲಿ ಮುಳುಗಿದ ಕಾರು ಮೇಲೆತ್ತಲು ಮಲ್ಪೆಯಿಂದ ಮುಳುಗು ತಜ್ಞ ಮಲ್ಪೆ ಈಶ್ವರ್ ಮತ್ತು ತಂಡದವರು ಆಗಮಿಸಿ ಗ್ರಾಮಸ್ಥರು, ಪೊಲೀಸರು ಹಾಗು ಕ್ರೇನ್ ನೆರವಿನೊಂದಿಗೆ ಕಾರು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.  
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಬಗರ್ ಹುಕುಂ ಸಮಿತಿ ತಾಲೂಕು ಅಧ್ಯಕ್ಷ ಎಸ್. ಮಣಿಶೇಖರ್, ಗ್ರಾಮಾಂತರ ವೃತ್ತ ನಿರೀಕ್ಷಕ  ಜಗದೀಶ್ ಹಂಚಿನಾಳ ಮತ್ತು ಉಕ್ಕುಂದ ರತ್ನಾಪುರ ಗ್ರಾಮದ ಈಜು ತಜ್ಞ ವರದೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.