Tuesday, May 19, 2020

ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಹೊಂಡ, ಕಂದಕ ಬದು ನಿರ್ಮಾಣ

ಯೋಜನೆ ಸದ್ಬಳಕೆ ಮಾಡಿಕೊಳ್ಳಲು ರೈತರಿಗೆ ಮನವಿ 

ಭದ್ರಾವತಿ, ಮೇ. ೧೯: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಇಲಾಖೆ ವತಿಯಿಂದ ಕೃಷಿ ಹೊಂಡ ಹಾಗೂ ಕಂದಕ ಬದು ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದ್ದು, ಹೆಚ್ಚಿನ ಮಾಹಿತಿಗೆ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಸಂಪರ್ಕಿಸಬಹುದಾಗಿದೆ.
ಬಿಪಿಎಲ್ ಪಡಿತರ ಚೀಟಿ ಹೊಂದಿದ ರೈತರಿಗೆ ಹಾಗೂ ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ ೧೦*೧೦*೩ ಮೀಟರ್ ಮತ್ತು ೧೫*೧೫*೩ ಮೀಟರ್ ಅಳತೆಯ ಕೃಷಿ ಹೊಂಡ ಹಾಗೂ ಜಮೀನಿನಲ್ಲಿ ಕಂದಕ ಬದು ನಿರ್ಮಾಣ ಮಾಡಿಕೊಳ್ಳಬಹುದಾಗಿದೆ. ತಾಲೂಕಿನ ರೈತರು ಇದರ ಸದುಪಯೋಗಪಡೆದುಕೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕ ಬಿ.ಸಿ ಶಶಿಧರ್ ಮನವಿ ಮಾಡಿದ್ದಾರೆ.

ಮಾ.ಸ ನಂಜುಂಡಸ್ವಾಮಿ ವಿರುದ್ಧ ಸುಳ್ಳು ಸಂದೇಶ :

 ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮನವಿ 

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ಮ.ಸ ನಂಜುಂಡಸ್ವಾಮಿಯವರ ವಿರುದ್ಧ ಸಾಮಾಜಿಕ ಜಾಲತಾಣ(ವಾಟ್ಸಪ್ ಗ್ರೂಪ್)ದಲ್ಲಿ ಹರಿದಾಡುತ್ತಿರುವ ಅವಹೇಳನಕಾರಿ ಸಂದೇಶ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ಸಂಘದ ಭದ್ರಾವತಿ ತಾಲೂಕು ಶಾಖೆವತಿಯಿಂದ ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರ್ ಶಿವಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು. 

ಭದ್ರಾವತಿ, ಮೇ. ೧೯: ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ಮ.ಸ ನಂಜುಂಡಸ್ವಾಮಿಯವರ ವಿರುದ್ಧ ಸಾಮಾಜಿಕ ಜಾಲತಾಣ(ವಾಟ್ಸಪ್ ಗ್ರೂಪ್)ದಲ್ಲಿ ಹರಿದಾಡುತ್ತಿರುವ ಅವಹೇಳನಕಾರಿ ಸಂದೇಶ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ಸಂಘದ ತಾಲೂಕು ಶಾಖೆವತಿಯಿಂದ ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರ್ ಶಿವಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷರಾದ ಮ.ಸ ನಂಜುಂಡಸ್ವಾಮಿಯವರು ನಿವೃತ್ತಿ ಹಂಚಿನಲ್ಲಿದ್ದರೂ ಸಹ ನೌಕರರ ಸಮಸ್ಯೆಗಳಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ನೌಕರರ ಸಮಸ್ಯೆಗಳಿಗೆ ಸ್ಪಂದಿಸುವುದು ಅವರ ಕರ್ತವ್ಯವಾಗಿದ್ದು, ಇದನ್ನು ಅರಿಯದ ಹಾಗೂ ಮಾ.ಸ ನಂಜುಂಡಸ್ವಾಮಿಯವರ ಹೋರಾಟದ ಪೂರ್ವಪರ ತಿಳಿಯದ ಸ್ವಾರ್ಥ ಮನೋಭಾವ ಹೊಂದಿರುವವರು ಅವರ ವಿರುದ್ಧ ಸತ್ಯಕ್ಕೆ ದೂರವಾದ ಸುಳ್ಳು ಸುದ್ದಿಗಳನ್ನು ವಾಯ್ಸ್ ಆಫ್ ಸಾಗರ ಎಂಬ ವಾಟ್ಸಪ್ ಗ್ರೂಪ್‌ನಲ್ಲಿ ಹರಡುವ ಮೂಲಕ ತೇಜೋವಧೆ ಮಾಡಿದ್ದು, ಇವರ ವಿರುದ್ಧ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.
ಸಂಘದ ತಾಲೂಕು ಶಾಖೆ ಅಧ್ಯಕ್ಷ ನೀಲೇಶ್‌ರಾಜ್, ಪ್ರಮುಖರಾದ ಮೋಹನ್, ಆರ್.ಎಸ್ ರವೀಂದ್ರಕುಮಾರ್, ಶ್ರೀಕಾಂತ್, ಹರೀಶ್, ಆಕಾಶ್, ನಾಗರಾಜ್, ರಾಧಮ್ಮ, ಇಸ್ತಿಯಾಕ್ ಆಲಿ ಅಹಮ್ಮದ್ ಖಾನ್, ರಮೇಶ್, ಶ್ರೀಕಾಂತ್ ಬೊಡ್ಕೆ, ಪ್ರಭಾಕರ್, ಪ್ರಕಾಶ್ ಮತ್ತು ಆಶಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ೪೨೦೦ ವಿದ್ಯಾರ್ಥಿಗಳ ಸರಿದ ಅನಿಶ್ಚಿತತೆ

ಒಟ್ಟು ೮೭ ಶಾಲೆಗಳು, ೧೫ ಪರೀಕ್ಷಾ ಕೇಂದ್ರಗಳು

ಭದ್ರಾವತಿ, ಮೇ. ೧೯: ಕೊರೋನಾ ವೈರಸ್ ಹಿನ್ನಲೆಯಲ್ಲಿ ಕಳೆದ ೨ ತಿಂಗಳುಗಳಿಂದ ಅನಿಶ್ಚಿತತೆಯಿಂದ ಕೂಡಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿನಾಂಕ ಕೊನೆಗೂ ನಿಗದಿಗೊಂಡಿದ್ದು, ತಾಲೂಕಿನ ಸುಮಾರು ೪೨೦೦ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಎದುರಿಸಲಿದ್ದಾರೆ.
ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ನಿಧಾರದ ಪ್ರಮುಖ ಘಟ್ಟವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಹೇಗಾದರೂ ಮಾಡಿನಡೆಸಲೇಬೇಕೆಂಬ ಅಂತಿಮ ನಿರ್ಧಾರದೊಂದಿಗೆ ರಾಜ್ಯ ಸರ್ಕಾರ ಹಲವು ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಂಡು ಪರೀಕ್ಷೆ ದಿನಾಂಕವನ್ನು ಪ್ರಕಟಿಸಿದೆ. ಜೂ.೨೮ ರಿಂದ ಜು.೪ರ ವರೆಗೆ ಪರೀಕ್ಷೆಗಳು ನಡೆಯಲಿವೆ.
ಈಗಾಗಲೇ ೧ ರಿಂದ ೯ನೇ ತರಗತಿ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆ ಸಾಮೂಹಿಕವಾಗಿ ಉತ್ತೀರ್ಣಗೊಳಿಸಿ ಮುಂದಿನ ಶಿಕ್ಷಣಕ್ಕೆ ಅನುವು ಮಾಡಿಕೊಡಲಾಗಿದೆ. ಇದೀಗ ನೂತನ ವರ್ಷದ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಳ್ಳಬೇಕಾಗಿತ್ತು. ಆದರೆ ಈ ಹಂತದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿರುವುದು ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಚಟುವಟಿಕೆಗಳಿಗೆ ವಿಳಂಬವಾಗಲಿದೆ ಎನ್ನಲಾಗಿದೆ. ಪ್ರಸ್ತುತ ಎದುರಾಗಿರುವ ಶೈಕ್ಷಣಿಕ ಬಿಗ್ಗಟ್ಟನ್ನು ಸರ್ಕಾರ ಯಾವ ರೀತಿ ಸರಿಪಡಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ತಾಲೂಕಿನಲ್ಲಿ ಒಟ್ಟು ೮೭ ಶಾಲೆಗಳ ಸುಮಾರು ೪೨೦೦ ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸುತ್ತಿದ್ದು, ತಾಲೂಕಿನ ೧೫ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್‌ಡೌನ್ ಜಾರಿಗೆ ಬಂದ ಪರಿಣಾಮ ಶ್ರೀಸಾಮಾನ್ಯರ ಬದುಕು ಅತಂತ್ರವಾಗಿದೆ. ಕೆಲವು ಕುಟುಂಬಗಳು ರಾಜ್ಯದ ವಿವಿಧೆಡೆ ಹಾಗೂ ಹೊರ ರಾಜ್ಯಗಳಲ್ಲಿ ಸಿಲುಕಿಕೊಂಡಿವೆ. ಅಲ್ಲದೆ ಕೊರೋನಾ ವೈರಸ್‌ಗೆ ತುತ್ತಾದವರ ಚಿಕಿತ್ಸೆಗಾಗಿ ತಾಲೂಕಿನ ಸರ್ಕಾರಿ ಶಾಲೆ ಹಾಗೂ ವಸತಿ ಶಾಲೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ವಸತಿ ಶಾಲೆಗಳಲ್ಲಿ ವ್ಯಾಸಂಗ ನಡೆಸುತ್ತಿರುವ ಸುಮಾರು ೨೨೬ ವಿದ್ಯಾರ್ಥಿಗಳು ಮತ್ತು ರಾಜ್ಯದ ವಿವಿಧೆಡೆ ಹಾಗೂ ಹೊರ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳ ಸ್ಥಿತಿ ಅತಂತ್ರವಾಗಿದೆ. ಸರ್ಕಾರ ಇಂತಹ ವಿದ್ಯಾರ್ಥಿಗಳ ನೆರವಿಗೂ ಮುಂದಾಗುವುದಾಗಿ ಭರವಸೆ ನೀಡಿದೆ. ವಿದ್ಯಾರ್ಥಿಗಳು ಎಲ್ಲಿದ್ದಾರೋ ಅಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಆದೇಶ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ತಲುಪಿಲ್ಲ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವ ಹಿನ್ನಲೆಯಲ್ಲಿ ಈ ಬಾರಿ ೨-೩ ಬಾರಿ ಶಿಕ್ಷಣ ತಜ್ಞರು ಹಾಗೂ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ  ಕಾರ್ಯಾಗಾರಗಳನ್ನು ನಡೆಸಲಾಗಿದೆ. ಅಲ್ಲದೆ ಪರೀಕ್ಷೆಗಳು ವಿಳಂಬವಾದ ಹಿನ್ನಲೆಯಲ್ಲಿ ನೇರ ಪೋನ್ ಇನ್ ಕಾರ್ಯಕ್ರಮಗಳನ್ನು ಸಹ ನಡೆಸಲಾಗಿದೆ. ಬಹುತೇಕ ವಿದ್ಯಾರ್ಥಿಗಳ ಪರೀಕ್ಷೆಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿದಿವೆ. ಈ ನಡುವೆ ಪರೀಕ್ಷೆಗೆ ಇನ್ನೂ ಸುಮಾರು ಒಂದು ತಿಂಗಳು ಕಾಲವಕಾಶವಿದ್ದು, ಉತ್ತಮ ಫಲಿತಾಂಶ ನಿರೀಕ್ಷಿಸಲಾಗುತ್ತಿದೆ. 

Sunday, May 17, 2020

೪೩ ಪಂಚಾಬ್ ನಿವಾಸಿಗಳ ಗಂಟಲು ದ್ರವ ಪರೀಕ್ಷೆ


ಭದ್ರಾವತಿ ತಾಲೂಕಿನ ದೇವರನರಸೀಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆಯಲಾಗಿರುವ ಕ್ವಾರಂಟೈನ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಭಾನುವಾರ ಪಂಜಾಬ್ ನಿವಾಸಿಗಳ ಗಂಟಲು ದ್ರವ ಪರೀಕ್ಷೆ ನಡೆಸಲಾಯಿತು. 
ಭದ್ರಾವತಿ, ಮೇ. ೧೭: ತಾಲೂಕಿನ ದೇವರನರಸೀಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆಯಲಾಗಿರುವ ಕ್ವಾರಂಟೈನ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಭಾನುವಾರ ಪಂಜಾಬ್ ನಿವಾಸಿಗಳ ಗಂಟಲು ದ್ರವ ಪರೀಕ್ಷೆ ನಡೆಸಲಾಯಿತು.
ಮೂಲತಃ ಪಂಜಾಬ್‌ನ ೪೩ ಮಂದಿ ದೆಹಲಿಯಿಂದ ರೈಲಿನ ಮೂಲಕ ಹೊರಟು ಹುಬ್ಬಳ್ಳಿಯಲ್ಲಿ ಇಳಿದು ಅಲ್ಲಿಂದ ಬಸ್ ಮೂಲಕ ಶಿವಮೊಗ್ಗ ನಗರಕ್ಕೆ ಮೇ.೧೬ರ ಶನಿವಾರ ರಾತ್ರಿ ಆಗಮಿಸಿದ್ದು, ಅವರನ್ನು ದೇವರನರಸೀಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್‌ಗೆ ಕರೆತರಲಾಗಿತ್ತು.
ಭಾನುವಾರ ಆರ್‌ಸಿಎಚ್‌ಓ ಡಾ. ನಾಗರಾಜ್ ನಾಯ್ಕ ನೇತೃತ್ವದ ತಂಡ ಗಂಟಲು ದ್ರವ ಪರೀಕ್ಷೆ ನಡೆಸಿ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕೊಟ್ಟಿದೆ.
ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ,  ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ,  ಅಂತರಗಂಗೆ ವೈದ್ಯಾಧಿಕಾರಿ ಡಾ. ಗಿರೀಶ್, ವಸತಿ ಶಾಲೆ ಪ್ರಾಂಶುಪಾಲ ಬಸವರಾಜ್, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ಸಹಾಯಕ ನಿಲೇಶ್‌ರಾಜ್, ಕವಿತಾರಾಣಿ, ನೆಲ್ಸನ್ ಕುಮಾರ್, ಸೋಮಶೇಖರ್  ಪ್ರದೀಪ್, ಚಾಲಕ ಅಮೀರ್ ಇನ್ನಿತರರು ತಂಡದಲ್ಲಿದ್ದರು. 

ಕೊರೋನಾ ಸೋಂಕಿತ ಪ್ರಕರಣ ಗಾಳಿ ಸುದ್ದಿ : ಭಯಭೀತಗೊಂಡ ನಾಗರಿಕರು

ಭದ್ರಾವತಿ : ನಗರದಲ್ಲಿ ಕೊರೋನಾ ಸೋಂಕಿತ ಪ್ರಕರಣ ಪತ್ತೆ ಎಂಬ ಸುದ್ದಿ ಭಾನುವಾರ ವ್ಯಾಪಕವಾಗಿ ಹಬ್ಬಿದ್ದು ಇದರಿಂದಾಗಿ ನಾಗರಿಕರು ಭಯ ಭೀತಿಗೊಂಡಿದ್ದಾರೆ.
      ಜಿಲ್ಲೆಯಲ್ಲಿ ಒಟ್ಟು ಎರಡು ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಒಂದು ಭದ್ರಾವತಿ ನಗರದಲ್ಲಿ ಕಂಡುಬಂದಿದೆ ಎಂಬ ಸುದ್ದಿ ಟಿವಿ ಮಾದ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
           ಆದರೆ  ಈ ಬಗ್ಗೆ  ಅಧಿಕೃತ ಮಾಹಿತಿ ಜಿಲ್ಲಾಡಾಳಿತ ಅಥವಾ ತಾಲೂಕು ಆಡಳಿತ ನೀಡಿಲ್ಲ .  ಮುಂಬೈ ನಗರದಿಂದ ಇತ್ತೀಚೆಗೆ  ಖಾಸಗಿ ವಾಹನದಲ್ಲಿ  ಬಂದ ಕ್ವಾರಂಟೈನಲ್ಲಿಡಲಾದ ಕುಟುಂಬವೊಂದರ ಸದಸ್ಯರಿಬ್ಬರಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ . ಆದರೆ ಎಲ್ಲೂ ಸಹ ಭದ್ರಾವತಿ ಹೆಸರು ಪ್ರಸ್ತಾಪವಾಗಿಲ್ಲ.

ಲಕ್ಷ್ಮಮ್ಮ ನಿಧನ

ಭದ್ರಾವತಿ : ಪತ್ರಕರ್ತ ಅನಂತಕುಮಾರ್ ರವರ ತಾಯಿ, ನ್ಯೂಟೌನ್ ನಿವಾಸಿ ಲಕ್ಮಮ್ಮ(೬೨) ಶನಿವಾರ ನಿಧನರಾದರು.
   ಪತಿ ಎಂಪಿಎಂ ನಿವೃತ್ತ ಉದ್ಯೋಗಿ ಮರಿಯಪ್ಪ,  ೪ ಜನ ಪುತ್ರರು, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಬಿಟ್ಟಗಲಿದ್ದಾರೆ.  ಮೃತರ ಅಂತ್ಯಕ್ರಿಯೆ  ಬುಳ್ಳಾಪುರ ಹಿಂದೂ ರುದ್ರ ಭೂಮಿಯಲ್ಲಿ  ನಡೆಯಿತು.
   ಸಂತಾಪ : ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಬಿ.ಕೆ ಸಂಗಮೇಶ್ವರ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್,   ಪೌರಾಯುಕ್ತ ಮನೋಹರ್, ಮುಖಂಡರಾದ ಜಿ. ಆನಂದಕುಮಾರ್, ಮಂಗೋಟೆ ರುದ್ರೇಶ್,  ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಛಲವಾದಿ ಸಮಾಜ, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಪತ್ರಿಕಾ ಭವನ ಟ್ರಸ್ಟ್  ಸೇರಿದಂತೆ ಇನ್ನಿತರೆ ಸಂಘ-ಸಂಸ್ಥೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಲಕ್ಷ್ಮಮ್ಮ ನಿಧನ 16-05-2020