Friday, July 17, 2020

ಭದ್ರಾವತಿಯಲ್ಲಿ ಪುನಃ ೫ ಸೋಂಕು ಪತ್ತೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಸೀಗೆಬಾಗಿ, ಅಣ್ಣಾನಗರ ಮತ್ತು ಕೆಎಸ್‌ಆರ್‌ಟಿಸಿ ಘಟಕ ಹಿಂಭಾಗ ಶುಕ್ರವಾರ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಈ ಸ್ಥಳಗಳಿಗೆ ಪೌರಾಯುಕ್ತ ಮನೋಹರ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ನಗರಸಭೆ ಪರಿಸರ ಅಭಿಯಂತರ ರುದ್ರೇಗೌಡ, ಹಿರಿಯ ಆರೋಗ್ಯ ನಿರೀಕ್ಷಕ ನೀಲೇಶ್‌ರಾಜ್ ಮತ್ತು ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. 
ಭದ್ರಾವತಿ, ಜು. ೧೭:  ತಾಲೂಕಿನಲ್ಲಿ ಗುರುವಾರ ೩ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿತ್ತು. ಇದೀಗ ಪುನಃ ಏರಿಕೆಯಾಗಿದ್ದು, ಶುಕ್ರವಾರ ಒಂದೇ ದಿನ ೫ ಪ್ರಕರಣಗಳು ಪತ್ತೆಯಾಗಿವೆ. 
ದೇವರನರಸೀಪುರದಲ್ಲಿ ೩೮ ವರ್ಷದ ಪುರುಷ, ಸೀಗೆಬಾಗಿಯಲ್ಲಿ ೨೭ ವರ್ಷದ ಪುರುಷ, ಅಣ್ಣಾನಗರದಲ್ಲಿ ೬೫ ವರ್ಷದ ವೃದ್ಧ ಹಾಗೂ ಕೆಎಸ್‌ಆರ್‌ಟಿಸಿ ಘಟಕ ಹಿಂಭಾಗ ೪೯ ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಅಲ್ಲದೆ ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ನಿರ್ಮಲ ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆಯೊಬ್ಬರಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ತಾಲೂಕು ಆರೋಗ್ಯ ಇಲಾಖೆಗೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. 
ನಗರಸಭೆ ವ್ಯಾಪ್ತಿಯಲ್ಲಿ ಸೋಂಕು ಪತ್ತೆಯಾದ ಎಲ್ಲಾ ಸ್ಥಳಗಳಿಗೂ ಖುದ್ದಾಗಿ ತಹಸೀಲ್ದಾರ್ ಶಿವಕುಮಾರ್, ಪೌರಾಯುಕ್ತ ಮನೋಹರ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ನಗರಸಭೆ ಪರಿಸರ ಅಭಿಯಂತರ ರುದ್ರೇಗೌಡ, ಹಿರಿಯ ಆರೋಗ್ಯ ನಿರೀಕ್ಷಕ ನೀಲೇಶ್‌ರಾಜ್ ಮತ್ತು ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಅಲ್ಲದೆ ಕಂಟೈನ್ಮೆಂಟ್ ವಲಯವನ್ನಾಗಿಸಿ ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಮಲ್ನಾಡ್ ಅಲಾಯ್ ಕ್ಯಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್ ಕಾರ್ಮಿಕ ಸಾವು

೩ ದಿನ ಕಾರ್ಯ ಚಟುವಟಿಕೆ ಸ್ಥಗಿತ 

 ಭದ್ರಾವತಿ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಮಲ್ನಾಡ್ ಅಲಾಯ್ ಕ್ಯಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್ ಕಾರ್ಮಿಕನೋರ್ವ ಅನುಮಾನಸ್ಪದವಾಗಿ ಮೃತಪಟ್ಟಿರುವ ಹಿನ್ನಲೆಯಲ್ಲಿ ಕಾರ್ಖಾನೆ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ಜನ ಸೈನ್ಯ ಸಂಘಟನೆ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಸಲಾಯಿತು. 
ಭದ್ರಾವತಿ, ಜು. ೧೭: ೩ ದಿನಗಳ ಕಾಲ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಮಲ್ನಾಡ್ ಅಲಾಯ್  ಕ್ಯಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸುವಲ್ಲಿ ಕರ್ನಾಟಕ ಜನ ಸೈನ್ಯ ಸಂಘಟನೆ ಯಶಸ್ವಿಯಾಗಿದೆ. 
ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರು ಗುರುವಾರ ರಾತ್ರಿ ಅನುಮಾನಸ್ಪದವಾಗಿ ಮೃತಪಟ್ಟಿದ್ದು, ಕೊರೋನಾ ಸೋಂಕು ತಗುಲಿರುವ ಸಾಧ್ಯತೆ ಕಂಡು ಬರುತ್ತಿದೆ. ಈ ಹಿನ್ನಲೆ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸುವ ಮೂಲಕ ಉಳಿದ ಕಾರ್ಮಿಕರ ಹಿತ ರಕ್ಷಣೆ ಕಾಪಾಡಬೇಕೆಂದು  ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ಒತ್ತಾಯಿಸಲಾಯಿತು. 
ಈ ನಡುವೆ ಪೌರಾಯುಕ್ತರು ತಕ್ಷಣ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿ ಕಾರ್ಮಿಕರನ್ನು ಮನೆಗೆ ಕಳುಹಿಸುವಂತೆ ಸೂಚಿಸಿದ್ದು, ಈ ಹಿನ್ನಲೆಯಲ್ಲಿ  ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಮಧುಕರ್ ಜೋಯಿಸ್ ಕಾರ್ಮಿಕರಿಗೆ ೩ ದಿನ ರಜೆ ಘೋಷಿಸುವ ಮೂಲಕ ಜು.೨೦ರಂದು ಕೆಲಸಕ್ಕೆ ಹಾಜರಾಗುವಂತೆ ಆದೇಶಿಸಿದ್ದಾರೆ. 
ಸಂಘಟನೆ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಹನುಮಮ್ಮ, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜಿ+3 ಗುಂಪು ಮನೆ ಹಂಚಿಕೆ ಪ್ರಕ್ರಿಯೆ ಸ್ಥಗಿತಗೊಳಿಸಲು ಆಗ್ರಹಿಸಿ ಮನವಿ

ಕೋವಿಡ್-19 ನಿಯಂತ್ರಣದ ನಂತರ ಪುನಃ ಅರ್ಜಿ ಸಲ್ಲಿಸಲು ಅವಕಾಶ ನೀಡಿ 

ಭದ್ರಾವತಿ, ಜು. 17: ನಗರಸಭೆ ವತಿಯಿಂದ  ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಧಾನ ಮಂತ್ರಿ ಆವಾಜ್ ಯೋಜನೆ ಎ.ಎಚ್.ಪಿ ಘಟಕದಡಿ ಸುಮಾರು ೪೦೦೦ ಜಿ+3 ಗುಂಪು ಮನೆ ಹಂಚಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಪ್ರಸ್ತುತ ಕೋವಿಡ್-೧೯  ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ತಕ್ಷಣ ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ನಗರದ ಮಾನವ ಹಕ್ಕುಗಳ ಹೋರಾಟ ವೇದಿಕೆ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ. 
ನಗರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತ ಬಡವರಿಗೆ ಸುಮಾರು 20 ವರ್ಷಗಳ ನಂತರ ಮನೆಗಳನ್ನು ವಿತರಣೆ ಮಾಡಲು ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈಗಾಗಲೇ ಆನ್‌ಲೈನ್ ಮುಖಾಂತರ ಒಟ್ಟು 5,372 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಅರ್ಹ ಮತ್ತು ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗಿದ್ದು,  4996 ಫಲಾನುಭವಿಗಳಿಗೆ ಮನೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ 15 ದಿನಗಳೊಳಗಾಗಿ ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು ಪತ್ರಿಕಾ ಪ್ರಕಟಣೆ ಸಹ ಹೊರಡಿಸಲಾಗಿದೆ. 
ನಗರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಗರಸಭೆ ಅರ್ಜಿ ಆಹ್ವಾನಿಸಿದ ಸಂದರ್ಭದಲ್ಲಿ ಸಕಾಲದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ಅಗತ್ಯ ದಾಖಲೆ ಪತ್ರಗಳನ್ನು ಕ್ರೋಢೀಕರಿಸಿಕೊಳ್ಳಲು ಸಾಧ್ಯವಾಗದ ಹಿನ್ನಲೆಯಲ್ಲಿ ಹಾಗು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಸಂಬಂಧ ಸರಿಯಾದ ಮಾಹಿತಿ ಇಲ್ಲದ ಕಾರಣ ನಿಜವಾದ ಬಡವರು ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಈ ನಡುವೆ ಕೋವಿಡ್-19 ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಪ್ರಸ್ತುತ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು. ಕೋವಿಡ್-೧೯ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದ ನಂತರ ಪುನಃ ಅರ್ಜಿ ಸಲ್ಲಿಸಲು 2 ತಿಂಗಳು ಕಾಲಾವಕಾಶ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. 
ಒಂದು ವೇಳೆ ಪ್ರಕ್ರಿಯೆ ಸ್ಥಗಿತಗೊಳಿಸದೆ ಏಕಾಏಕಿ ಮನೆಗಳ ಹಂಚಿಕೆಗೆ ಮುಂದಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. 
ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಕಾರ್ಯಾಧ್ಯಕ್ಷ ಐ.ಎಲ್ ಅರುಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಉಪಾಧ್ಯಕ್ಷ ಬ್ರಹ್ಮಲಿಂಗಯ್ಯ, ಕಾರ್ಯದರ್ಶಿ ಆರ್. ಬಸವರಾಜ್, ಸಂಚಾಲಕರಾದ ಗಾಯಕ್‌ವಾಡ್, ರೈತ ಮುಖಂಡ ಸುಬ್ಬೇಗೌಡ, ಆನಂದಮೂರ್ತಿ, ಮೇಘರಾಜ್, ಗವಿಸಿದ್ದಯ್ಯ, ರವಿನಾಯ್ಕ್, ವರಲಕ್ಷ್ಮಿ, ರಂಗನಾಥ್, ರಾಮಲಿಂಗಯ್ಯ, ಶ್ರೀದೇವಿ, ಶಿವನಾಯ್ಕ, ಬಾಷ, ಮಂಜುಳ, ದೊಡ್ಡಯ್ಯ, ರೂಪಾ, ಲತಾ, ಗೋವಿಂದಪ್ಪ, ನಾಗರಾಜ, ಮಹಾಲಿಂಗಯ್ಯ, ವಸಂತ, ಶಾರದಮ್ಮ  ಮತ್ತು ಸತೀಶ್ ಸೇರಿದಂತೆ ಇನ್ನಿತರರು ಸಹಿಯೊಂದಿಗೆ ಮನವಿ ಮಾಡಿದ್ದಾರೆ.

ಜು.18 ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಭದ್ರಾವತಿ, ಜು. 17: ನಗರದ ಲಯನ್ಸ್ ಮತ್ತು ಲಿಯೋ ಕ್ಲಬ್‌ಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು. 18ರಂದು ಬೆಳಿಗ್ಗೆ 10.30ಕ್ಕೆ ನ್ಯೂಟೌನ್ ಲಯನ್ಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 
ಮಾಜಿ ಜಿಲ್ಲಾ ಗವರ್ನರ್ ಬಿ.ಎಸ್ ನಾಗಪ್ರಕಾಶ್ ಪದಗ್ರಹಣ ನೆರವೇರಿಸಿ ಕೊಡಲಿದ್ದು, ಮಾಜಿ ಜಿಲ್ಲಾ ಗವರ್ನರ್ ಬಿ. ದಿವಾಕರ ಶೆಟ್ಟಿ, ಉಪ ಜಿಲ್ಲಾ ಗವರ್ನರ್ ಕೆ.ಸಿ ವೀರಭದ್ರಪ್ಪ ಉಪಸ್ಥಿತರಿರುವರು. ಕ್ಲಬ್ ಅಧ್ಯಕ್ಷ ಎಚ್.ಆರ್ ಕುಮಾರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. 
ಕೆ.ವಿ ಚಂದ್ರಶೇಖರ್ ನೇತೃತ್ವದ ಕಾರ್ಯದರ್ಶಿ ಆರ್. ರಾಮಮೂರ್ತಿ ಮತ್ತು ಖಜಾಂಚಿ ಎನ್ ಶಿವಕುಮಾರ್ ಅವರನ್ನೊಳಗೊಂಡ ನೂತನ ಲಯನ್ಸ್ ತಂಡ ಹಾಗೂ ಸಿ. ಸಿಂಚನ ನೇತೃತ್ವದ ಕಾರ್ಯದರ್ಶಿ ಆರ್. ನವೀನ್ ಮತ್ತು ಖಜಾಂಚಿ ಲಕ್ಷ್ಮೀ ಎಸ್ ಕುಮಾರ್ ಅವರನ್ನೊಳಗೊಂಡ ನೂತನ ಲಿಯೋ ತಂಡ ಪದಗ್ರಹಣ ಸ್ವೀಕರಿಸಲಿವೆ. 

Thursday, July 16, 2020

ಕೆಪಿಟಿಸಿಎಲ್ ನೌಕರರ ಸಹಕಾರ ಸಂಘದಿಂದ ಕೊರೋನಾ ವಾರಿಯರ್ಸ್‌ಗೆ ಅಭಿನಂದನೆ

ಭದ್ರಾವತಿಯಲ್ಲಿ ಕೆಪಿಟಿಸಿಎಲ್ ನೌಕರರ ಸಹಕಾರ ಸಂಘದ ವತಿಯಿಂದ ಕೊರೋನಾ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆರಿಗೆ ಆರ್ಥಿಕ ನೆರವು ನೀಡಿ ಅಭಿನಂದಿಸಲಾಯಿತು. 
ಭದ್ರಾವತಿ, ಜು. ೧೬: ನಗರದ ಕೆಪಿಟಿಸಿಎಲ್ ನೌಕರರ ಸಹಕಾರ ಸಂಘದ ವತಿಯಿಂದ ಗುರುವಾರ ಕೊರೋನಾ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆರಿಗೆ ಆರ್ಥಿಕ ನೆರವು ನೀಡಿ ಅಭಿನಂದಿಸಲಾಯಿತು. 
ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದರೂ ಸಹ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸಮಾಜದ ಎಲ್ಲರೂ ಮತ್ತಷ್ಟು ಚೈತನ್ಯ ತುಂಬುವ ನಿಟ್ಟಿನಲ್ಲಿ ಮುಂದಾಗಬೇಕೆಂಬ ಉದ್ದೇಶದೊಂದಿಗೆ ಆರ್ಥಿಕ ನೆರವು ನೀಡಿ ಅಭಿನಂದಿಸಲಾಯಿತು. 
ಆಶಾ ಕಾರ್ಯಕರ್ತೆಯರಾದ ಶೃತಿ, ನಾಗರತ್ನ ಭಾಯಿ ಮತ್ತು ಯಶಸ್ವಿನಿ ಸೇರಿ ೩ ಮಂದಿಗೆ ತಲಾ ೩ ಸಾವಿರ ರು. ಆರ್ಥಿಕ ನೆರವು ಅಭಿನಂದಿಸಲಾಯಿತು.
ಕಾರ್ಯದರ್ಶಿ ಲೋಕೇಶ್, ಸಿಬ್ಬಂದಿಗಳಾದ ಶಂಕರನಾರಾಯಣ, ಹನುಮಂತಪ್ಪ, ದೇವರಾಜ್ ಮತ್ತು ರಮೇಶ್ ಸೇರಿ ಇನ್ನಿತರರು ಉಪಸ್ಥಿತರಿದ್ದರು. 

ಭದ್ರಾವತಿಯಲ್ಲಿ ೩ ಕೊರೋನಾ ಸೋಂಕು ಪತ್ತೆ

ಲಾಕ್‌ಡೌನ್ ಉಲ್ಲಂಘಿಸಿದವರಿಗೆ ೧,೫೦೦ ರು. ದಂಡ 

ಭದ್ರಾವತಿ, ಜು. ೧೬: ತಾಲೂಕಿನಲ್ಲಿ ಬುಧವಾರ ಒಂದೇ ದಿನ ೫ ಪ್ರಕರಣಗಳು ಪತ್ತೆಯಾಗಿದ್ದವು. ಗುರುವಾರ ಪುನಃ ೩ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೂ ಒಟ್ಟು ೫೧ ಕೊರೋನಾ ಸೋಂಕು ಪ್ರಕರಣಗಳು ತಾಲೂಕಿನಲ್ಲಿ ಪತ್ತೆಯಾಗಿದ್ದು, ಇದರಿಂದಾಗಿ ನಿವಾಸಿಗಳಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಿದೆ. 
ನಗರಸಭೆ ವ್ಯಾಪ್ತಿಯ ಸುಭಾಷ್‌ನಗರದಲ್ಲಿ ೨೧ ವರ್ಷದ ಯುವಕನಿಗೆ, ಅರಳಿಕೊಪ್ಪ ಗ್ರಾಮದಲ್ಲಿ ೩೨ ವರ್ಷದ ವ್ಯಕ್ತಿಗೆ ಹಾಗೂ ದೇವರನರಸೀಪುರ ಗ್ರಾಮದಲ್ಲಿ ಬೆಂಗಳೂರಿನಿಂದ ಬಂದಿರುವ ೨೦ ವರ್ಷದ ಯುವತಿಗೆ ಸೋಂಕು ತಗುಲಿದ್ದು, ಈ ೩ ಜನರನ್ನು ಶಿವಮೊಗ್ಗ ಮೆಗ್ಗಾನ್ ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ. 
ನಗರಸಭೆ ವ್ಯಾಪ್ತಿಯಲ್ಲಿ ಸೋಂಕು ಪತ್ತೆಯಾದ ಎಲ್ಲಾ ಸ್ಥಳಗಳಿಗೂ ಖುದ್ದಾಗಿ ತಹಸೀಲ್ದಾರ್ ಶಿವಕುಮಾರ್, ಪೌರಾಯುಕ್ತ ಮನೋಹರ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ನಗರಸಭೆ ಪರಿಸರ ಅಭಿಯಂತರ ರುದ್ರೇಗೌಡ, ಹಿರಿಯ ಆರೋಗ್ಯ ನಿರೀಕ್ಷಕ ನೀಲೇಶ್‌ರಾಜ್ ಮತ್ತು ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಅಲ್ಲದೆ ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. 
ನಗರಸಭೆ ಪ್ರಸ್ತುತ ೧೨ ಕಂಟೈನ್ಮೆಂಟ್ ವಲಯಗಳಿದ್ದು, ಈಗಾಗಲೇ ಸುಮಾರು ೫ಕ್ಕೂ ಹೆಚ್ಚು ವಲಯಗಳನ್ನು ತೆರವುಗೊಳಿಸಲಾಗಿದೆ. ಗುರುವಾರ ಮಧ್ಯಾಹ್ನದಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ನಗರಸಭೆ ವ್ಯಾಪ್ತಿಯಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಈ ನಡುವೆ ಸುಮಾರು ೫-೬ ಮಂದಿ ಲಾಕ್‌ಡೌನ್ ಉಲ್ಲಂಘಿಸಿದ್ದು ತಲಾ ೧,೫೦೦ ರು. ದಂಡ ವಿಧಿಸಲಾಗಿದೆ ಎಂದು ಪೌರಾಯುಕ್ತ ಮನೋಹರ್ ತಿಳಿಸಿದ್ದಾರೆ. 

ಡಾ. ಸುಭದ್ರಮ್ಮ ಮನ್ಸೂರ್ ನಿಧನಕ್ಕೆ ಸಂತಾಪ

ಡಾ. ಸುಭದ್ರಮ್ಮ ಮನ್ಸೂರ್
ಭದ್ರಾವತಿ, ಜು. ೧೬: ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಡಾ. ಸುಭದ್ರಮ್ಮ ಮನ್ಸೂರ್‌ರವರ ನಿಧನಕ್ಕೆ ನಗರದ ಹಲವು ಕಲಾವಿದರು ಸಂತಾಪ ಸೂಚಿಸಿದ್ದಾರೆ. 
ಡಾ. ಸುಭದ್ರಮ್ಮ ಮನ್ಸೂರ್‌ರವರು ಪೌರಾಣಿಕ ಪಾತ್ರಗಳಲ್ಲಿ ಅದ್ಭುತವಾಗಿ ಅಭಿನಯಿಸಿದ್ದು, ಪ್ರಮುಖವಾಗಿ ಹೇಮರೆಡ್ಡಿ ಮಲ್ಲಮ್ಮ, ಅಕ್ಕಮಹಾದೇವಿ ಪಾತ್ರಗಳು ಹೆಚ್ಚು ಗಮನ ಸೆಳೆಯುತ್ತವೆ. ಇವರ ಅಮೋಘ ಗಾಯನ ಇದೀಗ ನೆನಪಾಗಿ ಉಳಿದುಕೊಂಡಿದೆ. ರಂಗಜ್ಯೋತಿಯನ್ನು ಕಳೆದುಕೊಂಡು ನಾಡು ಬಡವಾಗಿದೆ ಇವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲೆಂದು ಶಾಂತಲಾ ಕಲಾ ವೇದಿಕೆಯ ಹಿರಿಯ ರಂಗದಾಸೋಹಿ ಎಸ್.ಜಿ ಶಂಕರಮೂರ್ತಿ ಪ್ರಾರ್ಥಿಸಿದ್ದಾರೆ.  
ಅದ್ಭುತ ಪ್ರತಿಭಾವಂತ ಕಲಾವಿದೆಯನ್ನು ಕಳೆದುಕೊಂಡು ರಂಗಭೂಮಿಗೆ ತುಂಬಲಾರದ ನಷ್ಟ ಉಂಟಾಗಿದೆ. ಇವರ ಅಭಿಮಾನಿಗಳಿಗೆ, ಕುಟುಂಬ ವರ್ಗದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ, ಕಲಾವಿದ, ಜ್ಯೂನಿಯರ್ ವಿಷ್ಣುವರ್ಧನ್ ಅಪೇಕ್ಷ ಮಂಜುನಾಥ್ ಪ್ರಾರ್ಥಿಸಿದ್ದಾರೆ. 
ನಗರದ ಹಲವು ರಂಗ ಸಂಸ್ಥೆಗಳು, ಕಲಾವಿದರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.