Wednesday, October 7, 2020

ಡೇ ನಲ್ಮ್ ಯೋಜನೆ ಸದುಪಯೋಗ ಪಡೆದುಕೊಳ್ಳಲು ಕರೆ

2019-2020ನೇ ಸಾಲಿನ ತರಬೇತಿ ಉದ್ಘಾಟನೆ

ಭದ್ರಾವತಿ ನ್ಯೂಟೌನ್ ಜೆಟಿಎಸ್ ಶಾಲೆ ಸಮೀಪದಲ್ಲಿರುವ ಶುಗರ್‌ಟೌನ್ ಲಯನ್ಸ್ ಕ್ಲಬ್ ಕಣ್ಣಿನ ಆಸ್ಪತ್ರೆ ಸಭಾಂಗಣದಲ್ಲಿ ನಗರಸಭೆ ಡೇ ನಲ್ಮ್ ವಿಭಾಗದ ವತಿಯಿಂದ ಫೇಸ್ ಕಂಪ್ಯೂಟರ್ ತರಬೇತಿ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ 2019-2020ನೇ ಸಾಲಿನ ಡೇ ನಲ್ಮ್ ಯೋಜನೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು.
ಭದ್ರಾವತಿ, ಅ. ೭: ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಧ್ಯಮ ಹಾಗು ಕಡು ಬಡ ಕುಟುಂಬದ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ನೆರವಾಗುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಡೇ ನಲ್ಮ್ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಮೂಲಕ ಕೌಶಲ್ಯ ತರಬೇತಿ, ಸಮುದಾಯ ಸಂಘಟನೆಗಳ ಬಲವರ್ಧನೆಗೆ ಅಗತ್ಯವಿರುವ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಈಶ್ವರಪ್ಪ ತಿಳಿಸಿದರು.
     ಅವರು ನ್ಯೂಟೌನ್ ಜೆಟಿಎಸ್ ಶಾಲೆ ಸಮೀಪದಲ್ಲಿರುವ ಶುಗರ್‌ಟೌನ್ ಲಯನ್ಸ್ ಕ್ಲಬ್ ಕಣ್ಣಿನ ಆಸ್ಪತ್ರೆ ಸಭಾಂಗಣದಲ್ಲಿ ನಗರಸಭೆ ಡೇ ನಲ್ಮ್ ವಿಭಾಗದ ವತಿಯಿಂದ ಫೇಸ್ ಕಂಪ್ಯೂಟರ್ ತರಬೇತಿ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ 2019-2020ನೇ ಸಾಲಿನ ಡೇ ನಲ್ಮ್ ಯೋಜನೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
       ಈ ಹಿಂದೆ ಗ್ರಾಮೀಣ ಭಾಗದಲ್ಲಿ ಹಲವು ಸಮಸ್ಯೆಗಳ ಪರಿಣಾಮ ನಿರುದ್ಯೋಗ ಹೆಚ್ಚಾಗಿ ಕಂಡು ಬರುತ್ತಿತ್ತು. ಈ ಹಿನ್ನಲೆಯಲ್ಲಿ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಿ ಹಲವು ಯೋಜನೆಗಳನ್ನು ಜಾರಿಗೆತರಲಾಗಿತ್ತು. ನಂತರದ ದಿನಗಳಲ್ಲಿ ನಗರ ವ್ಯಾಪ್ತಿಯಲ್ಲೂ ಉದ್ಯೋಗ ಸಮಸ್ಯೆಗಳು ಹೆಚ್ಚಾದ ಹಿನ್ನಲೆಯಲ್ಲಿ ನಲ್ಮ್ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲ ಉದ್ದೇಶವನ್ನು ಅರಿತುಕೊಂಡು ಇದರ ಸದುಪಯೋಗಪಡೆದುಕೊಂಡವರು ಇತರರಿಗೂ ತಿಳಿಸಬೇಕೆಂದು ಮನವಿ ಮಾಡಿದರು.
      ಹಿರಿಯ ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ ಮಾತನಾಡಿ, ಪ್ರಸ್ತುತ ಪ್ರತಿಯೊಬ್ಬರಿಗೂ ಉದ್ಯೋಗದ ಅವಶ್ಯಕತೆ ಇದೆ. ಇದಕ್ಕೆ ಪೂರಕವಾಗಿ ನಮ್ಮಲ್ಲಿನ ಕೌಶಲ್ಯಗಳನ್ನು ಅರಿತುಕೊಂಡು ಮುನ್ನಡೆಯಬೇಕು. ಈ ನಿಟ್ಟಿನಲ್ಲಿ ನೆರವಾಗಲು ಈ ರೀತಿಯ ಯೋಜನೆಗಳು ಸಹಕಾರಿಯಾಗಿವೆ. ಮಧ್ಯಮ ಹಾಗು ಬಡ ವರ್ಗದ ಕುಟುಂಬದ ನಿರುದ್ಯೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
     ಫೇಸ್ ಕಂಪ್ಯೂಟರ್ ಮುಖ್ಯಸ್ಥ ಅಬಿದಾಲಿ ಮಾತನಾಡಿ, ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಕಂಪ್ಯೂಟರ್ ಜ್ಞಾನ ಅಗತ್ಯವಾಗಿದೆ. ಕಂಪ್ಯೂಟರ್ ತರಬೇತಿ ಪಡೆದವರು ಯಾವುದೇ ಕೆಲಸವನ್ನು ಸಮರ್ಥವಾಗಿ ನಿಭಾಯಿಸಬಹುದಾಗಿದೆ. ಈ ಹಿನ್ನಲೆಯಲ್ಲಿ ಕಂಪ್ಯೂಟರ್ ತರಬೇತಿಯನ್ನು ಪ್ರತಿಯೊಬ್ಬರು ಪಡೆಯಬೇಕೆಂದರು.
     ವೇದಿಕೆಯಲ್ಲಿ ಸಮುದಾಯ ಸಂಘಟನಾ ಅಧಿಕಾರಿ ಸುಮಿತ್ರ ಎಚ್. ಹರಪನಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹೃದಯ ಶ್ರೀಮಂತಿಕೆ ವ್ಯಕ್ತಿಗಳಿಂದ ಯಾವುದೇ ಕಾರ್ಯ ಯಶಸ್ವಿ : ಅಪೇಕ್ಷ ಮಂಜುನಾಥ್

ಭದ್ರಾವತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಎಸ್. ಶ್ರೀನಿವಾಸ್ ದತ್ತಿ ದಾನಿಗಳ ಸಹಕಾರದೊಂದಿಗೆ ಮನೋಜ್ ದತ್ತಿ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅಂಧ ಮಕ್ಕಳಿಂದ ಸುಗಮ ಸಂಗೀತ ಹಾಗು ಗಾನಗಾರುಡಿಗ ಡಾ. ಎಸ್.ಪಿ ಬಾಲಸುಬ್ರಮಣ್ಯಂರವರಿಗೆ ನುಡಿ ನಮನವನ್ನು ಉದ್ಯಮಿ ಎನ್. ಪ್ರಕಾಶ್‌ಕುಮಾರ್ ಉದ್ಘಾಟಿಸಿದರು.
ಭದ್ರಾವತಿ, ಅ. ೭: ಹೃದಯ ಶ್ರೀಮಂತಿಕೆ ವ್ಯಕ್ತಿಗಳಿಂದ ಮಾತ್ರ ಯಾವುದೇ ಕಾರ್ಯ ಯಶಸ್ವಿಯಾಗಿ ನಡೆಯುತ್ತದೆ. ಈ ಹಿನ್ನಲೆಯಲ್ಲಿ ಅಂತಹ ವ್ಯಕ್ತಿಗಳನ್ನು ಸಮಾಜ ಗುರುತಿಸಬೇಕೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಹೇಳಿದರು.
       ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಎಸ್. ಶ್ರೀನಿವಾಸ್ ದತ್ತಿ ದಾನಿಗಳ ಸಹಕಾರದೊಂದಿಗೆ ಮನೋಜ್ ದತ್ತಿ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅಂಧ ಮಕ್ಕಳಿಂದ ಸುಗಮ ಸಂಗೀತ ಹಾಗು ಗಾನಗಾರುಡಿಗ ಡಾ. ಎಸ್.ಪಿ ಬಾಲಸುಬ್ರಮಣ್ಯಂರವರಿಗೆ ನುಡಿ ನಮನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
      ಪರಿಷತ್ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಪ್ರತಿಯೊಂದು ಕಾರ್ಯಕ್ರಮ ಸಹ ಒಂದೊಂದು ವಿಶೇಷತೆಯಿಂದ ಕೂಡಿವೆ. ಅಂಧ ವಿಕಲಚೇತನರೊಂದಿಗೆ ಕಾರ್ಯಕ್ರಮ ಆಯೋಜಿಸಿರುವುದು ತುಂಬ ಸಂತೋಷವನ್ನುಂಟು ಮಾಡಿದೆ.  ಕಾರ್ಯಕ್ರಮ ಆಯೋಜನೆ ಮಾಡುವಲ್ಲಿ ಉದ್ಯಮಿ ಎನ್, ಪ್ರಕಾಶ್‌ಕುಮಾರ್‌ರವರ ಸಹಕಾರ ಹೆಚ್ಚಿನದ್ದಾಗಿದೆ.  ಹೃದಯ ಶ್ರೀಮಂತಿಕೆಗೆ ಹೆಚ್ಚಿನ ಮಹತ್ವ ನೀಡುವ ಅವರ ಗುಣ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಈ ರೀತಿಯ ಕಾರ್ಯಕ್ರಮಗಳಿಂದ ವಿಕಲಚೇತನರು ಸಹ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
      ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಮಾತನಾಡಿ, ಪರಿಷತ್ ವತಿಯಿಂದ ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತಷ್ಟು ಪ್ರಜ್ವಲಗೊಳಿಸುವ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಅಂಧರ ಕೇಂದ್ರದಲ್ಲೂ ಹಲವಾರು ಕಾರ್ಯಕ್ರಮಗಳನ್ನು ಪರಿಷತ್ ಆಯೋಜಿಸಿಕೊಂಡು ಬರುತ್ತಿದೆ. ಇಂದಿನ ಕಾರ್ಯಕ್ರಮ ಅಂಧರ ಕೇಂದ್ರಕ್ಕೆ ಮತ್ತಷ್ಟು ಸ್ಪೂರ್ತಿಯನ್ನುಂಟು ಮಾಡಿದೆ ಎಂದರು.
      ಆಡಳಿತಾಧಿಕಾರಿ ಶಾರದ ಶಿವಬಸಪ್ಪ, ಕಸಾಪ ಕೋಶಾಧ್ಯಕ್ಷ ಜಿ.ಎನ್ ಸತ್ಯಮೂರ್ತಿ, ಕಾರ್ಯದರ್ಶಿಗಳಾದ ಚನ್ನಪ್ಪ, ವೈ.ಕೆ ಹನುಮಂತಯ್ಯ ಹಾಗು ಸಂಚಾಲಕ ಚಂದ್ರಶೇಖರಪ್ಪ ಚಕ್ರಸಾಲಿ, ಗೌರಿ ಗ್ಯಾಸ್‌ನ ಸೆಲ್ವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಪಘಾತ : ಇಬ್ಬರು ಸವಾರರು ಮೃತ

ಭದ್ರಾವತಿ, ಅ. ೭: ನಗರದ ರಾಷ್ಟ್ರೀಯ ಹೆದ್ದಾರಿ ೨೦೬ ಗೌರಪುರ ಗ್ರಾಮದ ಬಳಿ ಎರಡು ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಇಬ್ಬರು ಸವಾರರು ಮೃತಪಟ್ಟಿರುವ ಘಟನೆ ನಡೆದಿದೆ.
ಶಿವಮೊಗ್ಗ ಹೊಳೆಬೆನವಳ್ಳಿ ನಿವಾಸಿ ಶಿವನಾಯ್ಕ(೫೦) ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮತ್ತೊಬ್ಬ ಸವಾರ ಬಳ್ಳಾರಿ ಜಿಲ್ಲೆಯ ದುರ್ಗಪ್ಪ(೩೫) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜಯಬಾಯಿ ಎಂಬುವರು ಗಾಯಗೊಂಡಿದ್ದು, ಈ ಸಂಬಂಧ ಕಾಗದನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಮರ್ಪಕವಾಗಿ ಕುಡಿಯುವ ನೀರು, ವಿದ್ಯುತ್ ಬೀದಿ ದೀಪ ವ್ಯವಸ್ಥೆಗೆ ಆಗ್ರಹಿಸಿ ಮನವಿ

ಭದ್ರಾವತಿ ಹುತ್ತಾ ಕಾಲೋನಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಅಲ್ಲದೆ ವಿದ್ಯುತ್ ಬೀದಿ ದೀಪಗಳ ವ್ಯವಸ್ಥೆ ಸಮರ್ಪಕವಾಗಿ ಕೈಗೊಳ್ಳದ ಕಾರಣ ಇಲ್ಲಿನ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಐಎಸ್‌ಎಲ್ ನಗರಾಡಳಿತಾಧಿಕಾರಿ ವಿಶ್ವನಾಥ್‌ರವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಅ. ೭: ನಗರದ ಹುತ್ತಾ ಕಾಲೋನಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಅಲ್ಲದೆ ವಿದ್ಯುತ್ ಬೀದಿ ದೀಪಗಳ ವ್ಯವಸ್ಥೆ ಸಮರ್ಪಕವಾಗಿ ಕೈಗೊಳ್ಳದ ಕಾರಣ ಇಲ್ಲಿನ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಐಎಸ್‌ಎಲ್ ನಗರಾಡಳಿತಾಧಿಕಾರಿ ವಿಶ್ವನಾಥ್‌ರವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
     ವಿಐಎಸ್‌ಎಲ್ ನಗರಾಡಳಿತಕ್ಕೆ ಸೇರಿದ ವಸತಿಗೃಹಗಳಲ್ಲಿ ಕುಡಿಯುವ ನೀರು ಬೆಳಿಗ್ಗೆ ಸುಮಾರು ೬.೩೦ ರಿಂದ ೭.೪೫ರವರೆಗೆ ಮಾತ್ರ ಬರುತ್ತಿದ್ದು, ಕೊಳವೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ಬರುತ್ತಿದೆ. ಇದರಿಂದಾಗಿ ಅಗತ್ಯವಿರುವಷ್ಟು ನೀರು ಲಭ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಸುಮಾರು ೨ ಗಂಟೆ ಸಮಯ ಕೊಳವೆಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಸಬೇಕು.
       ಈ ಭಾಗದ ರಸ್ತೆಗಳಲ್ಲಿ ವಿದ್ಯುತ್ ಬೀದಿ ದೀಪಗಳ ವ್ಯವಸ್ಥೆ ಸಮರ್ಪಕವಾಗಿ ಕೈಗೊಳ್ಳದ ಕಾರಣ ರಾತ್ರಿ ವೇಳೆ ನಿವಾಸಿಗಳಿಗೆ ಹಾಗು ರಸ್ತೆಗಳಲ್ಲಿ ಸಂಚರಿಸುವವರಿಗೆ ತೊಂದರೆ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಿವಾಸಿಗಳು ನಗರಸಭೆ ಮಾಜಿ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ನೇತೃತ್ವದಲ್ಲಿ ಮನವಿ ಸಲ್ಲಿಸಿ ಆಗ್ರಹಿಸಿದರು.
      ಮನವಿ ಸ್ವೀಕರಿಸಿದ ವಿಶ್ವನಾಥ್‌ರವರು ಕುಡಿಯುವ ನೀರಿನ ಪೂರೈಕೆ ಮಾಡುವಲ್ಲಿ ಕೆಲವು ಸಮಸ್ಯೆಗಳು ಎದುರಾಗಿದ್ದು, ಆದರೂ ಸಹ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು.  ವಿದ್ಯುತ್ ಬೀದಿ ದೀಪಗಳ ವ್ಯವಸ್ಥೆ ಸಹ ಸರಿಪಡಿಸುವುದಾಗಿ ಭರವಸೆ ನೀಡಿದರು.
     ನಗರಸಭಾ ಸದಸ್ಯರಾದ ಎಂ.ಎ ಅಜಿತ್, ಗುಣಶೇಖರ್, ಸ್ಥಳೀಯ ನಿವಾಸಿಗಳಾದ ಎ.ಟಿ ರಾಜಪ್ಪ, ಹರೀಶ್, ರಾಜಣ್ಣ, ತಿಮ್ಮೇಗೌಡ, ಎಂ. ನಂಜುಂಡಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tuesday, October 6, 2020

ವಿಐಎಸ್‌ಎಲ್ ನಿವೃತ್ತ ನೌಕರ ಎಚ್.ಜಿ ಉಮಾಪತಿ ನಿಧನ

ಎಚ್.ಜಿ ಉಮಾಪತಿ
ಭದ್ರಾವತಿ, ಅ. ೬: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರ ಎಚ್.ಜಿ ಉಮಾಪತಿ(೭೨) ಬೆಂಗಳೂರಿನಲ್ಲಿ ನಿಧನ ಹೊಂದಿದರು.
      ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ, ಅಳಿಯಂದಿರು, ಸೊಸೆ ಹಾಗು ಮೊಕ್ಕಳನ್ನು ಹೊಂದಿದ್ದರು. ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಸಾಮಾನ್ಯ ಕಾರ್ಮಿಕನಾಗಿ ವೃತ್ತಿ ಆರಂಭಿಸಿದ ಉಮಾಪತಿಯವರು ಪೋರ್ಮನ್ ಆಗಿ ನಿವೃತ್ತಿ ಹೊಂದಿದ್ದರು. ಕಾರ್ಮಿಕ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ವಿಐಎಸ್‌ಎಲ್ ಕಾರ್ಖಾನೆಯನ್ನು ಉಕ್ಕು ಪ್ರಾಧಿಕಾರದ ಅಂಗ ಸಂಸ್ಥೆಯ ಅಧೀನಕ್ಕೆ ಸೇರ್ಪಡೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
    ಮೂಲತಃ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿದ್ದ ಉಮಾಪತಿಯವರು ಹಲವು ಹುದ್ದೆಗಳನ್ನು ಸಹ ಅಲಂಕರಿಸಿದ್ದರು. ಅಲ್ಲದೆ ಸೇವಾದಳದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ೨೦೦೯ರಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ನಂತರ ಪುನಃ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದರು. ಕನ್ನಡ ಸಾಹಿತ್ಯ ಪರಿಷತ್ ಹಿರಿಯ ಸದಸ್ಯರಾಗಿದ್ದರು. ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು.
      ಉಮಾಪತಿಯವರ ನಿಧನಕ್ಕೆ ಸೂಡಾ ಸದಸ್ಯ ರಾಮಲಿಂಗಯ್ಯ, ನಿವೃತ್ತ ಕಾರ್ಮಿಕರ ಸಂಘದ ನರಸಿಂಹಚಾರ್, ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಸಿ ದಾಸೇಗೌಡ, ಮಾಜಿ ಉಪಮೇಯರ್ ಮಹಮ್ಮದ್ ಸನಾವುಲ್ಲಾ, ಕಸಾಪ ತಾಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್ ಸೇರಿದಂತೆ ಇನ್ನಿತರ ಗಣ್ಯರು, ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.


ಕೊಲೆ ಪ್ರಕರಣ : ೬ ಜನರ ಸೆರೆ

ಭದ್ರಾವತಿ ಹೊಸಮನೆ ಹನುಮಂತ ನಗರದಲ್ಲಿ ಇತ್ತೀಚಿಗೆ ನಡೆದಿದ್ದ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಹೊಸಮನೆ ಠಾಣೆ ಪೊಲೀಸರು ಯಶಸ್ವಿಯಾಗಿರುವುದು.
ಭದ್ರಾವತಿ, ಅ. ೧೦: ನಗರದ ಹೊಸಮನೆ ಹನುಮಂತ ನಗರದಲ್ಲಿ ಇತ್ತೀಚಿಗೆ ನಡೆದಿದ್ದ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಹೊಸಮನೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
        ಹೊಸಮನೆ ಹನುಮಂತನಗರದ ನಿವಾಸಿಗಳಾದ ರಮೇಶ್ ಅಲಿಯಾಸ್ ಹಂದಿ ರಮೇಶ(೪೪), ವೆಂಕಟರಾಮ(೩೫), ಚಂದ್ರ ಅಲಿಯಾಸ್ ಚಾಣ(೩೭), ಹೊಸಮನೆ ಸತ್ಯಸಾಯಿ ನಗರದ ನಿವಾಸಿಗಳಾದ ಕಾರ್ತಿಕ್(೨೪), ಮಧುಸೂಧನ್ ಅಲಿಯಾಸ್ ಗುಂಡ ಮಂಜುನಾಥ(೨೮) ಮತ್ತು ರಮೇಶ್ ಅಲಿಯಾಸ್ ಕೆಳವಿ ರಮೇಶ(೩೭) ಎಂಬುವರನ್ನು ಬಂಧಿಸಲಾಗಿದೆ.
ಘಟನೆ ವಿವರ:
       ಹೊಸಮನೆ ಹನುಮಂತ ನಗರದ ನಿವಾಸಿ ಮಹಮದ್ ಅಕ್ತರ್ ಎಂಬುವರ ಪುತ್ರ ಶಾರೂಖ್ ಖಾನ್‌ನನ್ನು ಸೆ.೩೦ರ ರಾತ್ರಿ ಕೊಲೆ ಮಾಡಲಾಗಿತ್ತು. ಈತನ ಮೃತದೇಹ ಹೊಸಮನೆ ನೂರಾನಿ ಮಸೀದಿ ಹಿಂಭಾಗದ ಖಾಲಿ ಜಾಗದಲ್ಲಿ ಅ.೧ರಂದು ಬೆಳಿಗ್ಗೆ ಪತ್ತೆಯಾಗಿತ್ತು.
     ಈ ಸಂಬಂಧ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಕೊಲೆ ಪ್ರಕರಣ ಬೇಧಿಸಲು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ ಶಾಂತರಾಜು, ಹೆಚ್ಚುವರಿ ರಕ್ಷಣಾಧಿಕಾರಿ ಡಾ. ಎಚ್.ಟಿ ಶೇಖರ್ ಹಾಗು ಪೊಲೀಸ್ ಉಪಾಧೀಕ್ಷಕ ಸುಧಾಕರ ಎಸ್. ನಾಯಕ್ ಮಾರ್ಗದರ್ಶನದಲ್ಲಿ ನಗರದ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
       ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣಾಧಿಕಾರಿ ಜಯಪ್ಪ, ಸಿಬ್ಬಂದಿಗಳಾದ ವೆಂಕಟೇಶ್, ಕುಮಾರ್, ಮಂಜುನಾಥ್, ಮಖ್ಸೂದ್‌ಖಾನ್, ಸಂತೋಷ್‌ಕುಮಾರ್, ಅಂಬರೀಷ್, ವಿಶಾಲಾಕ್ಷಿ, ವಿಜಯಕಲಾ, ನವೀನ್ ಪವಾರ್, ಪ್ರಸನ್ನಸ್ವಾಮಿ, ಸುನಿಲ್‌ಕುಮಾರ್ ಹಾಗು ಚಾಲಕರಾದ ಮಧುಸೂಧನ್ ಮತ್ತು ರವಿಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಯಶಸ್ವಿ ಕಾರ್ಯಾಚರಣೆ ನಡೆಸಿರುವ ತಂಡವನ್ನು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ ಶಾಂತಕುಮಾರ್ ಅಭಿನಂದಿಸಿದ್ದಾರೆ.

ಸಾಗುವಳಿ ಚೀಟಿ, ಖಾತೆ ಪಹಣಿ ನೀಡಲು ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ

ಆರ್‌ಟಿಸಿಯಲ್ಲಿ ಅರಣ್ಯ ಭೂಮಿ ನಮೂದು, ಗ್ರಾಮಸ್ಥರಲ್ಲಿ ಆತಂಕ

ಸಾಗುವಳಿ ಚೀಟಿ ಹಾಗು ಖಾತೆ ಪಹಣಿ ನೀಡಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅನುಕೂಲ ಕಲ್ಪಿಸಿಕೊಡಬೇಕೆಂದು ಭದ್ರಾವತಿ ತಾಲೂಕಿನ ದಾನವಾಡಿ ಮತ್ತು ಕೋಡಿ ಹೊಸೂರು ಗ್ರಾಮಸ್ಥರು ಮಂಗಳವಾರ ತಹಸೀಲ್ದಾರ್‌ಗೆ ಮನವಿ ಮಾಡಿದರು.
ಭದ್ರಾವತಿ, ಅ. ೬: ಸಾಗುವಳಿ ಚೀಟಿ ಹಾಗು ಖಾತೆ ಪಹಣಿ ನೀಡಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅನುಕೂಲ ಕಲ್ಪಿಸಿಕೊಡಬೇಕೆಂದು ತಾಲೂಕಿನ ದಾನವಾಡಿ ಗ್ರಾಮಸ್ಥರು ಮಂಗಳವಾರ ತಹಸೀಲ್ದಾರ್‌ಗೆ ಮನವಿ ಮಾಡಿದ್ದಾರೆ.
        ಹೊಳೆಹೊನ್ನೂರು ಹೋಬಳಿ, ಅರಕೆರೆ ಅಂಚೆ, ದಾನವಾಡಿ ಗ್ರಾಮದ ಸರ್ವೆ ನಂ. ೩೩ರಲ್ಲಿ ಒಟ್ಟು ೪೬೯ ಎಕರೆ ಗೋಮಾಳ ಜಮೀನು ಇದ್ದು, ೨೦೧೨-೧೩ನೇ ಸಾಲಿನಲ್ಲಿ ಅರಣ್ಯ ಎಂದು ಗಣಕೀಕೃತ ಆರ್‌ಟಿಸಿ ದಾಖಲೆಯಲ್ಲಿ ತಪ್ಪಾಗಿ ನಮೂದಾಗಿದೆ.
        ಈ ಜಮೀನಿನಲ್ಲಿ ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಕುಟುಂಬದ ರೈತರು ಸುಮಾರು ೬೦-೭೦ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಜೀವನ ಸಾಗುತ್ತಿದ್ದಾರೆ. ಒಟ್ಟು ೯೦ ರಿಂದ ೯೫ ಕುಟುಂಬಗಳು ವಾಸಿಸುತ್ತಿದ್ದು, ಇದುವರೆಗೂ ಯಾವುದೇ ದಾಖಲೆಗಳನ್ನು ನೀಡಿರುವುದಿಲ್ಲ. ರೈತರು ಹಲವಾರು ಬಾರಿ ತಾಲೂಕು ಕಛೇರಿಗೆ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ೨೦೧೨-೧೩ರವರೆಗೆ ಜಮೀನಿನ ಆರ್‌ಟಿಸಿ ದಾಖಲೆಯಲ್ಲಿ ಗೋಮಾಳ ಜಮೀನು ಎಂದು ನಮೂದಾಗಿರುತ್ತದೆ. ನಂತರ ಯಾವುದೇ ದಾಖಲಾತಿ ಇಲ್ಲದೆ ಅರಣ್ಯ ಇಲಾಖೆ ಜಮೀನು ಎಂದು ತಪ್ಪಾಗಿ ನಮೂದಿಸಲಾಗಿರುತ್ತದೆ.
       ತಕ್ಷಣ ಆರ್‌ಟಿಸಿ ದಾಖಲೆಯಲ್ಲಿ ನಮೂದಾಗಿರುವ ತಪ್ಪನ್ನು ಸರಿಪಡಿಸಿಕೊಂಡು ರೈತರಿಗೆ ೫೦, ೫೩ ಮತ್ತು ೫೭ ಅಡಿಯಲ್ಲಿ ಸಲ್ಲಿಸಲಾಗಿರುವ ಅರ್ಜಿಗಳನ್ನು  ಪರಿಗಣಿಸಿ ಸಾಗುವಳಿ ಚೀಟಿ ಹಾಗು ಖಾತೆ ಪಹಣಿಯನ್ನು ನೀಡುವ ಮೂಲಕ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲ ಕಲ್ಪಿಸಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
     ಇದೆ ರೀತಿ ಹೊಳೆಹೊನ್ನೂರು ಹೋಬಳಿ, ಅರಕೆರೆ ಅಂಚೆ, ಕೋಡಿ ಹೊಸೂರು ಗ್ರಾಮದ ಗ್ರಾಮಸ್ಥರು ಸಹ ಮನವಿ ಸಲ್ಲಿಸಿದ್ದು, ಸರ್ವೆ ನಂ. ೧೨ ಮತ್ತು ೨೨ರಲ್ಲಿ ಒಟ್ಟು ೨೩ ಎಕರೆ ೨೬ ಗುಂಟೆ ಹಾಗು ಸರ್ವೆ ನಂ. ೨೨ರಲ್ಲಿ ೧೪೫ ಎಕರೆ ೨೮ ಗುಂಟೆ ಗೋಮಾಳ ಮತ್ತು ದನಗಳ ಮುಫತ್ತು ಜಮೀನು ಇದ್ದು, ೧೯೮೪-೮೫ರ ನಂತರ ಈ ಎರಡು ಜಮೀನು ಸಹ ದಾನವಾಡಿ ಮೈನರ್ ಫಾರೆಸ್ಟ್ ಎಂದು ಆರ್‌ಟಿಸಿ ದಾಖಲೆಯಲ್ಲಿ ತಪ್ಪಾಗಿ ನಮೂದಾಗಿರುತ್ತದೆ. ಈ ಹಿನ್ನಲೆಯಲ್ಲಿ ಎರಡು ಜಮೀನುಗಳಲ್ಲಿ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿರುವವರಿಗೆ ತಕ್ಷಣ ಸಾಗುವಳಿ ಚೀಟಿ ಹಾಗು ಖಾತೆ ಪಹಣಿ ನೀಡಿ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಅನುಕೂಲ ಕಲ್ಪಿಸಿಕೊಡುವಂತೆ ಮನವಿ ಮಾಡಲಾಗಿದೆ.
       ಮನವಿಯನ್ನು ಶಿರಸ್ತೇದಾರ್ ಮಲ್ಲಿಕಾರ್ಜುನಯ್ಯ ಸ್ವೀಕರಿಸಿದರು. ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಕರ್ನಾಟಕ ಜನ ಸೈನ್ಯ ಅಧ್ಯಕ್ಷ ಕೆ. ಮಂಜುನಾಥ್, ಗ್ರಾಮಸ್ಥರಾದ ನಾಗಪ್ಪ, ಕೃಷ್ಣಪ್ಪ, ಬಸಪ್ಪ, ಎಂ. ಚಂದ್ರಪ್ಪ, ಎಚ್. ಬಸ ವರಾಜ, ಚಂದ್ರಮ್ಮ, ಶೋಭ, ಜಯಮ್ಮ, ರವಿ, ರತ್ನಮ್ಮ, ನಂಜಮ್ಮ, ನರಸಿಂಹಪ್ಪ, ಕಮಲಮ್ಮ, ಜಯಮ್ಮ, ಬಿ.ಆರ್ ಬಸವರಾಜಪ್ಪ, ಟಿ.ಎಲ್ ಶೇಖರಪ್ಪ, ದೇವಮ್ಮ, ಶಾಂತಮ್ಮ, ಎಸ್.ಎಂ ನಾಗರಾಜಪ್ಪ, ಕರಿಯಮ್ಮ, ರತ್ನಾಬಾಯಿ, ಆರ್. ರವಿಚಂದ್ರ, ಶರಣಪ್ಪ, ಎಂ. ಚಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.