Sunday, November 8, 2020

ಪ್ರತಿಯೊಬ್ಬರು ಸೈನಿಕರಂತೆ ಶಿಸ್ತು, ಸಂಯಮ, ನಿಸ್ವಾರ್ಥ ಮನೋಭಾವ, ದೇಶ ಭಕ್ತಿ ಬೆಳೆಸಿಕೊಳ್ಳಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ, ನ. ೮: ದೇಶಕ್ಕೆ ಮಾಜಿ ಸೈನಿಕರ ಕೊಡುಗೆ ಅಪಾರವಾಗಿದ್ದು, ಸೈನಿಕರಲ್ಲಿನ ಶಿಸ್ತು, ಸಂಯಮ, ನಿಸ್ವಾರ್ಥ ಮನೋಭಾವ, ದೇಶ ಭಕ್ತಿ ಸಮಾಜದ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಕರೆ ನೀಡಿದರು.
      ಅವರು ಭಾನುವಾರ ನ್ಯೂಟೌನ್ ಬಂಟರ ಭವನದಲ್ಲಿ ತಾಲೂಕು ಮಾಜಿ ಸೈನಿಕರ ಸಂಘದ ಪ್ರಥಮ ವರ್ಷದ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ ಹಾಗು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮಾಜಿ ಸೈನಿಕರ ಪತ್ನಿಯರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಸ್ವಾರ್ಥವಿಲ್ಲದೆ ದೇಶ ರಕ್ಷಣೆ ಮನೋಭಾವದೊಂದಿಗೆ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಇಂದಿನ ಯುವ ಸಮೂಹ ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ನಿವೃತ್ತ ಸೈನಿಕರು ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಕಳೆದ ೧ ವರ್ಷಗಳಿಂದ ಹಲವು ಸಮಾಜ ಮುಖಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನರಲ್ಲಿ ಸೇವಾ ಮನೋಭಾವ ಬೆಳೆಸುವಲ್ಲಿ ಸಂಘಟನೆ ಪ್ರಮುಖ ಪಾತ್ರವಹಿಸಿರುವುದು ಶ್ಲಾಘನೀಯ ಎಂದರು.
      ಇದೀಗ ಮಹಿಳಾ ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಈ ಸಂಘಟನೆ ಸಹ ಹೆಚ್ಚು ಕ್ರಿಯಾಶೀಲವಾಗಿ ಮುನ್ನಡೆಯುವಂತಾಗಲಿ. ಮಾಜಿ ಸೈನಿಕರ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಈಡೇರಿಸಿಕೊಡುವುದಾಗಿ ಭರವಸೆ ನೀಡಿದರು.  
      ಪ್ರಾಸ್ತಾವಿಕವಾಗಿ ಮಾತನಾಡಿದ ಮೇಜರ್ ಡಾ. ವಿಕ್ರಮ್ ಕೆದಿಲಾಯ ಮಾತನಾಡಿ, ಎಲ್ಲರೂ ಎಲ್ಲಾ ವಿಚಾರಗಳಲ್ಲೂ ಸರಿ ಸಮಾನವಾಗಿ ಇರುವುದಿಲ್ಲ. ಆದರೆ ಸಂಘಟನೆ ವಿಚಾರದಲ್ಲಿ ಎಲ್ಲರೂ ಸಹ ಸರಿ ಸಮಾನವಾಗಿ ನಡೆದುಕೊಳ್ಳುವುದು ಅನಿವಾರ್ಯವಾಗುತ್ತಿದೆ. ಇದನ್ನು ಪ್ರತಿಯೊಬ್ಬ ಸದಸ್ಯರು ಅರಿತುಕೊಂಡಾಗ ಸಂಘಟನೆ ಮತ್ತಷ್ಟು ಬಲಗೊಳ್ಳಲು ಸಾಧ್ಯ. ಸಂಘಟನೆ ಕಳೆದ ೧ ವರ್ಷದಿಂದ ವಿಭಿನ್ನ ಚಟುವಟಿಕೆಗಳೊಂದಿಗೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದೆ. ಸಂಘಟನೆ ಕಾರ್ಯ ತೃಪ್ತಿ ತಂದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರಿಯಾಶೀಲತೆ ಸಂಘಟನೆ ಹೊಂದಬೇಕಾಗಿದೆ ಎಂದರು.
     ನಗರಸಭೆ ಪೌರಾಯುಕ್ತ ಮನೋಹರ್, ಹಿರಿಯ ವ್ಯದ್ಯರಾದ ಡಾ. ರವೀಂದ್ರನಾಥ ಕೋಠಿ, ಡಾ. ನಂದ ಆರ್. ಕೋಠಿ, ಡಾ. ವೀಣಾಭಟ್, ಸಮಾಜ ಸೇವಕ ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಹಳೇನಗರದ ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್, ಸಹಾಯಕ ಉಪ ವಲಯ ಅರಣ್ಯಧಿಕಾರಿ ದಿನೇಶ್‌ಕುಮಾರ್, ಯುವ ಮುಖಂಡ ಬಿ.ಎಸ್ ಗಣೇಶ್, ನೂತನ ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಸುಪ್ರಿಯ, ಖಜಾಂಚಿ ಆಶಾ, ಕಾರ್ಯದರ್ಶಿ ಕಲಾವತಿ, ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ವಿನೋದ್ ಪೂಜಾರಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅಶೋಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭಕ್ಕೂ ಮೊದಲು ರಕ್ತದಾನ ಶಿಬಿರ ನಡೆಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Saturday, November 7, 2020

ಸಮರ್ಪಕವಾಗಿ ಮೂಲ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಪೌರಾಯುಕ್ತರಿಗೆ ಮನವಿ

ಭದ್ರಾವತಿ ನಗರಸಭೆ ೩೨ನೇ ವಾರ್ಡ್ ವ್ಯಾಪ್ತಿಯ ವೇಲೂರ್ ಶೆಡ್, ಫಿಲ್ಟರ್ ಶೆಡ್ ಮತ್ತು ಕುರುಬರ ಬೀದಿಯಲ್ಲಿ  ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವಂತೆ ಒತ್ತಾಯಿಸಿ ಶನಿವಾರ ನಗರಸಭೆ  ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ನ. ೭:  ನಗರಸಭೆ ೩೨ನೇ ವಾರ್ಡ್ ವ್ಯಾಪ್ತಿಯ ವೇಲೂರ್ ಶೆಡ್, ಫಿಲ್ಟರ್ ಶೆಡ್ ಮತ್ತು ಕುರುಬರ ಬೀದಿಯಲ್ಲಿ  ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವಂತೆ ಒತ್ತಾಯಿಸಿ ಶನಿವಾರ ನಗರಸಭೆ  ಪೌರಾಯುಕ್ತರಿ ಮನೋಹರ್‌ಗೆ ಮನವಿ ಸಲ್ಲಿಸಲಾಯಿತು.
   ಈ ಭಾಗದಲ್ಲಿ ಮೂಲ ಸೌಲಭ್ಯಗಳು ಸಮರ್ಪಕವಾಗಿ ಇಲ್ಲದ ಕಾರಣ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಈ ಹಿನ್ನಲೆಯಲ್ಲಿ ತಕ್ಷಣ ಖುದ್ದಾಗಿ ಪರಿಶೀಲನೆ ನಡೆಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಕರ್ನಾಟಕ ಜನ್ಯ ಸೈನ್ಯ ಜಿಲ್ಲಾ ಗೌರವಾಧ್ಯಕ್ಷ ಅನಿಲ್, ಅಧ್ಯಕ್ಷ ಕೆ. ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.  
    ಮನವಿ ಸ್ವೀಕರಿಸಿದ ಪೌರಾಯುಕ್ತರು ನ.೯ರ  ಸೋಮವಾರ ಖುದ್ದಾಗಿ ಭೇಟಿ ನೀಡಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕ ವರದಿ : ಸೈಲ್ ಶೇ.೨೦ರಷ್ಟು ಪ್ರಗತಿ

ಭದ್ರಾವತಿ, ನ. ೭: ಭಾರತೀಯ ಉಕ್ಕು ಪ್ರಾಧಿಕಾರ(ಸೈಲ್)ದ ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕ ವರದಿಯಂತೆ ಒಟ್ಟಾರೆ ವ್ಯವಹಾರದ ಶೇ.೨೦ರಷ್ಟು ಪ್ರಗತಿ ಸಾಧಿಸಿದೆ ಎಂದು ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್‌ಕುಮಾರ್ ತಿಳಿಸಿದ್ದಾರೆ.
      ಪ್ರಾಧಿಕಾರದ ಅಧೀನಕ್ಕೆ ಒಳಪಟ್ಟ ಕಂಪನಿಗಳ ಒಟ್ಟಾರೆ ವ್ಯವಹಾರದಲ್ಲಿ ಪಿಬಿಟಿ ಲಾಭ ರು. ೬೧೦.೩೨ ಕೋ. ಮತ್ತು ಪಿಎಟಿ ಲಾಭ ರು. ೩೯೩.೩೨ ಕೋ. ಗಳಾಗಿದ್ದು, ಇದೆ ರೀತಿ ಪಿಬಿಟಿ ನಷ್ಟ ರು.೫೨೩.೦೩ ಕೋ. ಮತ್ತು ಪಿಎಟಿ ನಷ್ಟ ರು. ೩೪೨.೮೪ ಕೋ. ಗಳಾಗಿದೆ. ಕಳೆದ ಹಣಕಾಸಿನ ವರ್ಷಕ್ಕೆ ಹೋಲಿಕೆ ಮಾಡಿದ್ದಲ್ಲಿ ಈ ಬಾರಿ ಗಣನೀಯ ಸುಧಾರಣೆ ಕಂಡು ಬಂದಿದ್ದು, ಉಕ್ಕು ಪ್ರಾಧಿಕಾರ ಲಾಭದ ಕಡೆಗೆ ಮುಖಮಾಡಿದೆ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.
   ಪ್ರಾಧಿಕಾರದ ಅಧ್ಯಕ್ಷ ಅನಿಲ್‌ಕುಮಾರ್ ಚೌಧರಿ ವರದಿಗೆ ಪ್ರತಿಕ್ರಿಯಿಸಿ, 'ಕೋವಿಡ್-೧೯ರ ಸಂದಭದಲ್ಲಿ ಶೇ.೨೦ರಷ್ಟು ಪ್ರಗತಿ ಸಾಧಿಸಿರುವುದು ಹೆಮ್ಮೆಯ ವಿಚಾರವಾಗಿದ್ದು, ಉತ್ಪಾದನೆ ಮತ್ತು ಮಾರಾಟದಲ್ಲಿ ಹೆಚ್ಚಳವಾಗಿರುವುದು ಉತ್ತಮ ಅರ್ಥ ವ್ಯವಸ್ಥೆಗೆ ತಮ್ಮ ಕೊಡುಗೆ ತೋರಿಸುತ್ತದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ಪ್ರವೀಣ್‌ಕುಮಾರ್ ತಿಳಿಸಿದ್ದಾರೆ.

ರು.೨೦ ಲಕ್ಷ ವೆಚ್ಚದಲ್ಲಿ ಶ್ರೀರಾಮ ಭಜನಾ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರದಲ್ಲಿ ಹಲವಾರು ವರ್ಷಗಳಿಂದ ಪಾಳುಬಿದ್ದಿದ್ದ ಶ್ರೀರಾಮ ಭಜನಾ ಮಂದಿರ ಕಟ್ಟಡ ನೆಲಸಮಗೊಳಿಸಿ ಇದೀಗ ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರರವರ ಸಂಸದರ ನಿಧಿಯಿಂದ ಬಿಡುಗಡೆಯಾದ ಸುಮಾರು ರು. ೨೦ ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶನಿವಾರ ಭೂಮಿ ಪೂಜೆ ನೆರವೇರಿಸಲಾಯಿತು.
ಭದ್ರಾವತಿ, ನ. ೭: ನಗರಸಭೆ ವ್ಯಾಪ್ತಿಯ ಜನ್ನಾಪುರದಲ್ಲಿ ಹಲವಾರು ವರ್ಷಗಳಿಂದ ಪಾಳುಬಿದ್ದಿದ್ದ ಶ್ರೀರಾಮ ಭಜನಾ ಮಂದಿರ ಕಟ್ಟಡ ನೆಲಸಮಗೊಳಿಸಿ ಇದೀಗ ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರರವರ ಸಂಸದರ ನಿಧಿಯಿಂದ ಬಿಡುಗಡೆಯಾದ ಸುಮಾರು ರು. ೨೦ ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶನಿವಾರ ಭೂಮಿ ಪೂಜೆ ನೆರವೇರಿಸಲಾಯಿತು.
      ಬಿಜೆಪಿ ಪಕ್ಷದ ಮುಖಂಡರಾದ ಮಂಗೋಟೆ ರುದ್ರೇಶ್, ಚಂದ್ರಪ್ಪ, ಪರಮೇಶ್ವರಪ್ಪ, ರವಿಕುಮಾರ್, ಬಬ್ಬೂರು ಕಮ್ಮೆ ಸೇವಾ ಸಂಘದ ಅಧ್ಯಕ್ಷ ನಂಜುಂಡಯ್ಯ, ಶ್ರೀ ಕರುಮಾರಿಯಮ್ಮ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಕುಪ್ಪಸ್ವಾಮಿ, ಛಲವಾದಿ ಸಮಾಜದ ಲೋಕೇಶ್ ಸೇರಿದಂತೆ ಭಜನಾ ಮಂದಿರದ ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.

ಜನರ ಬದುಕಿಗೆ ಆಧಾರವಾಗಿರುವ ಗ್ರಾಮೋದ್ಯೋಗ ಉಳಿಯಬೇಕು : ಪ್ರಸನ್ನ

ಭದ್ರಾವತಿಗೆ ಶನಿವಾರ ಆಗಮಿಸಿದ ಸಮುದಾಯ ಬೆಂಗಳೂರು ವತಿಯಿಂದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗ್ರಾಮ ಸೇವಾ ಸಂಘ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿರುವ ಕಾಯಕ ಜೀವಿಗಳಿಗೆ ಶರಣು, ಬೀದಿರಂಗ ನಮನ, ಒಳಿತು ಮಾಡು ಮನುಸಾ.. ಕೊರೋನಾ ಕುರಿತು ಬೀದಿ ನಾಟಕ, ಸಮುದಾಯ ಗ್ರಾಮೋದಯ ಜಾಗೃತಿ ಜಾಥಾದಲ್ಲಿ ಸಾಗರ  ಚರಕ ಸಂಸ್ಥೆಯ ಪ್ರಸನ್ನಪಾಲ್ಗೊಂಡು ಮಾತನಾಡಿದರು.
ಭದ್ರಾವತಿ, ನ. ೭: ಗ್ರಾಮೀಣ ಉತ್ಪನ್ನಗಳನ್ನು ಹೆಚ್ಚಾಗಿ ಖರೀದಿಸುವ ಮೂಲಕ ಗ್ರಾಮೋದ್ಯೋಗ ಬೆಳವಣಿಗೆ ಹೊಂದಲು ಎಲ್ಲರೂ ಕೈಜೋಡಿಸಿದಾಗ ಮಾತ್ರ ಭವಿಷ್ಯದಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಸಾಗರ ಚರಕ ಸಂಸ್ಥೆಯ ಪ್ರಸನ್ನ ತಿಳಿಸಿದರು.
       ಅವರು ಶನಿವಾರ ನಗರಕ್ಕೆ ಆಗಮಿಸಿದ ಸಮುದಾಯ ಬೆಂಗಳೂರು ವತಿಯಿಂದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗ್ರಾಮ ಸೇವಾ ಸಂಘ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿರುವ ಕಾಯಕ ಜೀವಿಗಳಿಗೆ ಶರಣು, ಬೀದಿರಂಗ ನಮನ, ಒಳಿತು ಮಾಡು ಮನುಸಾ.. ಕೊರೋನಾ ಕುರಿತು ಬೀದಿ ನಾಟಕ, ಸಮುದಾಯ ಗ್ರಾಮೋದಯ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದರು. ಜನರ ಬದುಕಿಗೆ ಆಧಾರವಾಗಿರುವ ಗ್ರಾಮೋದ್ಯೋಗ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಉಳಿಯಬೇಕು. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ದೊಡ್ಡ ಸಂಕಷ್ಟ ಎದುರಾಗಲಿದೆ. ಗ್ರಾಮೀಣ ಜನರು ತಯಾರಿಸುವ ಕೈಮಗ್ಗ, ಖಾದಿ, ಗುಡಿ ಕೈಗಾರಿಕೆ ಹಾಗು ಹೈನುಗಾರಿಕೆ ಉತ್ಪನ್ನಗಳನ್ನು ಹೆಚ್ಚಾಗಿ ಖರೀದಿಸಬೇಕು. ಈ ಹಿನ್ನಲೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ ಎಂದರು.
     ನಗರಸಭೆ ಪೌರಾಯುಕ್ತ ಮನೋಹರ್ ಮಾತನಾಡಿ, ರಾಷ್ಟ್ರಪಿತ ಮಹಾತ್ಮಗಾಂಧಿಯವರ ಕನಸು ನನಸಾಗಬೇಕು. ಸ್ವಯಂ ಉದ್ಯೋಗಗಳು ಹೆಚ್ಚಾಗಬೇಕು. ಜನರು ತಮಗೆ ಅಗತ್ಯವಿರುವ ವಸ್ತುಗಳನ್ನು ತಾವೇ ತಯಾರಿಸಿಕೊಳ್ಳಬೇಕು. ಆಗ ಮಾತ್ರ ಪ್ರಸ್ತುತ ಎದುರಾಗಿರುವ ಜಾಗತೀಕರಣದ ದುಷ್ಪರಿಣಾಮಗಳಿಂದ ಪಾರಾಗಲು ಸಾಧ್ಯ. ಜಾಥಾ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಂಚರಿಸಿ ಮಹಾತ್ಮಗಾಂಧಿಯವರ ಆಶಯಗಳನ್ನು ಜನರಿಗೆ ತಲುಪಿಸುವಂತಾಗಲಿ ಎಂದರು.
.     ಶರಣು ಹಲ್ಲೂರು ಸಾಹಿತ್ಯ, ಶಶಿಧರ ಭಾರಿಘಾಟ್ ರಂಗಪಠ್ಯದ, ಮಾಲತೇಶ್ ನಿರ್ದೇಶನದ ಬೀದಿ ನಾಟಕದ ಮೂಲಕ ಕೊರೋನಾ ಕುರಿತು ಜಾಗೃತಿ ಮೂಡಿಸಲಾಯಿತು. ಕಲಾವಿದರ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
   ಜಾಥಾ ನಿರ್ವಾಹಕ  ಗಣೇಶ್ ಶೆಟ್ಟಿ,  ಸಮುದಾಯ ಬೆಂಗಳೂರು ಕಾರ್ಯದರ್ಶಿ ಜೆ.ಸಿ ಶಶಿಧರ, ಮಾರುತಿ ಮೆಡಿಕಲ್ ಆನಂದ್, ಅಪರಂಜಿ ಶಿವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

Friday, November 6, 2020

ನ.೭ರಂದು ನಗರಕ್ಕೆ ಸಮುದಾಯ ಗ್ರಾಮೋದಯ ಜಾಗೃತಿ ಜಾಥಾ

ಸಮುದಾಯ ಬೆಂಗಳೂರು ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾಯಕ ಜೀವಿಗಳಿಗೆ ಶರಣು, ಬೀದಿರಂಗ ನಮನ, ಒಳಿತು ಮಾಡು ಮನುಸಾ.. ಕೊರೋನಾ ಕುರಿತು ಬೀದಿ ನಾಟಕ ಕಲಾವಿದರು.
ಭದ್ರಾವತಿ, ನ. ೬: ಸಮುದಾಯ ಬೆಂಗಳೂರು ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾಯಕ ಜೀವಿಗಳಿಗೆ ಶರಣು, ಬೀದಿರಂಗ ನಮನ, ಒಳಿತು ಮಾಡು ಮನುಸಾ.. ಕೊರೋನಾ ಕುರಿತು ಬೀದಿ ನಾಟಕ ಸಮುದಾಯ ಗ್ರಾಮೋದಯ ಜಾಗೃತಿ ಜಾಥಾ ಶನಿವಾರ ನಗರಕ್ಕೆ ಆಗಮಿಸಲಿದೆ.
    ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಜಾಲಹಳ್ಳಿ ಕ್ರಾಸ್‌ನಿಂದ ಆರಂಭಗೊಂಡಿರುವ ಜಾಥಾ ನೆಲಮಂಗಲ, ದಾಬಸ್ ಪೇಟೆ, ಸಂಜೆ ತುಮಕೂರು ತಲುಪಿತು. ನ.೭ರಂದು ಬೆಳಿಗ್ಗೆ ಕಸ್ತೂರಬಾ ಆಶ್ರಮ, ಅರಸೀಕೆರೆ, ಕಡೂರು ಕಾಲೇಜು ಮತ್ತು ತರೀಕೆರೆ ಮೂಲಕ ನಗರದ ಜಯಶ್ರೀ ವೃತ್ತಕ್ಕೆ ಸಂಜೆ ೪.೩೦ಕ್ಕೆ ತಲುಪಲಿದ್ದು, ನಂತರ ಶರಣು ಹಲ್ಲೂರು ಸಾಹಿತ್ಯ, ಶಶಿಧರ ಭಾರಿಘಾಟ್ ರಂಗಪಠ್ಯದ, ಮಾಲತೇಶ್ ನಿರ್ದೇಶನದ ಬೀದಿ ನಾಟಕ ಆರಂಭಗೊಳ್ಳಲಿದೆ. ಗಣೇಶ್ ಶೆಟ್ಟಿ ಜಾಥಾ ನಿರ್ವಾಹಕರಾಗಿದ್ದು, ಸಮುದಾಯ ಬೆಂಗಳೂರು ಕಾರ್ಯದರ್ಶಿ ಜೆ.ಸಿ ಶಶಿಧರ ಉಪಸ್ಥಿತರಿರುವರು.
  ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಚಲನಚಿತ್ರ ನಟ, ರಂಗಕಲಾವಿದ ಅಪರಂಜಿ ಶಿವರಾಜ್ ಕೋರಿದ್ದಾರೆ.

ಕೇರಳ ಸಮಾಜಂ ವತಿಯಿಂದ ೬೫ನೇ ಕನ್ನಡ ರಾಜ್ಯೋತ್ಸವ

ಭದ್ರಾವತಿಯಲ್ಲಿ ಕೇರಳ ಸಮಾಜಂ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ೬೫ನೇ ಕನ್ನಡ ರಾಜ್ಯೋತ್ಸವ ಜನ್ನಾಪುರದಲ್ಲಿರುವ ಕಛೇರಿ ಆವರಣದಲ್ಲಿ ಅಚರಿಸಲಾಯಿತು.
ಭದ್ರಾವತಿ, ನ. ೬: ಕೇರಳ ಸಮಾಜಂ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ೬೫ನೇ ಕನ್ನಡ ರಾಜ್ಯೋತ್ಸವ ಜನ್ನಾಪುರದಲ್ಲಿರುವ ಕಛೇರಿ ಆವರಣದಲ್ಲಿ ಅಚರಿಸಲಾಯಿತು.
    ಕೇರಳ ಸಮಾಜಂ ಅಧ್ಯಕ್ಷ ಗಂಗಾಧರ್ ಧ್ವಜಾರೋಹಣ ನೆರವೇರಿಸಿದರು. ಮಹಿಳಾ ವಿಭಾಗಂ ಸದಸ್ಯರ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಕಾರ್ಯದರ್ಶಿ ಕಲ್ಯಾಣಿ ಶಶಿಧರನ್ ಕರ್ನಾಟಕ ಉದಯ ಹಾಗು ವೈಭವದ ರಾಜ್ಯೋತ್ಸವ ಕುರಿತು ಮಾತನಾಡಿದರು.
    ಕಾರ್ಯದರ್ಶಿ ಪಿ.ಆರ್ ಪ್ರಭಾಕರನ್, ಖಜಾಂಚಿ ಎ. ಚಂದ್ರಶೇಖರ್ ಸೇರಿದಂತೆ ಪದಾಧಿಕಾರಿಗಳು, ಮುಖಂಡರು, ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.