Thursday, March 18, 2021

ಗೂಂಡಾಗಿರಿ ಮೂಲಕ ದೌರ್ಜನ್ಯ ವೆಸಗುತ್ತಿರುವ, ತೆಂಗಿನ ಮರಗಳನ್ನು ಕಡಿದು ಹಾಕಿರುವವರ ವಿರುದ್ಧ ಕ್ರಮಕ್ಕೆ ಆಗ್ರಹ

ತಾಲೂಕು ಕಛೇರಿ ಮುಂಭಾಗ ಹಳೇಜೇಡಿಕಟ್ಟೆ ನಿವಾಸಿ ಪೂರ್ಣಿಮಾ ಸತ್ಯಾಗ್ರಹ

ಜಮೀನಿನಲ್ಲಿ ಬೆಳೆಯಲಾಗಿದ್ದ ಸುಮಾರು ೪೦ ವರ್ಷದ ತೆಂಗಿನ ಮರಗಳನ್ನು ಕಡಿದುಹಾಕಿ ದೌರ್ಜನ್ಯ ವೆಸಗುವ ಮೂಲಕ ಕೊಲೆ ಬೆದರಿಕೆ ಹಾಕುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗು ಕುಟುಂಬಕ್ಕೆ ರಕ್ಷಣೆ ನೀಡುವಂತೆ ಆಗ್ರಹಿಸಿ ಕಳೆದ ೨ ದಿನಗಳಿಂದ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಹಳೇಜೇಡಿಕಟ್ಟೆ ನಿವಾಸಿ ಪೂರ್ಣಿಮಾ ಎಂಬುವರು ಕುಟುಂಬ ಸಮೇತ ಸತ್ಯಾಗ್ರಹ ನಡೆಸುತ್ತಿದ್ದಾರೆ.
   ಭದ್ರಾವತಿ, ಮಾ. ೧೮: ಜಮೀನಿನಲ್ಲಿ ಬೆಳೆಯಲಾಗಿದ್ದ ಸುಮಾರು ೪೦ ವರ್ಷದ ತೆಂಗಿನ ಮರಗಳನ್ನು ಕಡಿದುಹಾಕಿ ದೌರ್ಜನ್ಯ ವೆಸಗುವ ಮೂಲಕ ಕೊಲೆ ಬೆದರಿಕೆ ಹಾಕುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗು ಕುಟುಂಬಕ್ಕೆ ರಕ್ಷಣೆ ನೀಡುವಂತೆ ಆಗ್ರಹಿಸಿ ಕಳೆದ ೨ ದಿನಗಳಿಂದ ತಾಲೂಕು ಕಛೇರಿ ಮುಂಭಾಗ ಹಳೇಜೇಡಿಕಟ್ಟೆ ನಿವಾಸಿ ಪೂರ್ಣಿಮಾ ಎಂಬುವರು ಕುಟುಂಬ ಸಮೇತ ಸತ್ಯಾಗ್ರಹ ನಡೆಸುತ್ತಿದ್ದಾರೆ.
   ಹಳೇಜೇಡಿಕಟ್ಟೆ ಸರ್ವೆ ನಂ.೭೮ರಲ್ಲಿ ಸುಮಾರು ೪೦ ವರ್ಷದ ೪-೫ ತೆಂಗಿನ ಮರಗಳನ್ನು ಮಾ.೧೬ರಂದು ಜಮೀನಿನ ಪಕ್ಕದ ನಿವೇಶನದ ಮಾಲೀಕ, ಅಂತರಗಂಗೆ ಗ್ರಾಮದ ನಿವಾಸಿ ನಾಗರಾಜ್ ಎಂಬುವರು ಕಡಿದು ಹಾಕಿದ್ದು, ಅಲ್ಲದೆ ಕೆಲವು ರೌಡಿಗಳೊಂದಿಗೆ ನಮ್ಮ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ವೆಸಗಿಸಿ ಜಾತಿನಿಂದನೆ ಮೂಲಕ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಅದೇ ದಿನ ದೂರು ನೀಡಲಾಗಿದೆ. ಆದರೆ ಪೊಲೀಸ್ ಠಾಣೆಯಲ್ಲಿ ರಾಜಕೀಯ ಪ್ರಭಾವ ಬೀರುವ ಮೂಲಕ ದೂರು ದಾಖಲಾಗದಂತೆ ಪೊಲೀಸ್ ಠಾಣಾಧಿಕಾರಿಗಳಿಗೇ ಬೆದರಿಕೆ ಹಾಕಲಾಗುತ್ತಿದೆ ಎಂದು ಪೂರ್ಣಿಮಾ ಆರೋಪಿಸಿದರು.
  ಗೂಂಡಾಗಿರಿ ಮೂಲಕ ದೌರ್ಜನ್ಯ ವೆಸಗುತ್ತಿರುವವರ ಹಾಗು ಅಕ್ರಮವಾಗಿ ತೆಂಗಿನ ಮರಗಳನ್ನು ಕಡಿದು ಹಾಕಿರುವವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು. ಕುಟುಂಬದವರಿಗೆ ಜೀವ ಬೆದರಿಕೆ ಇದ್ದು, ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.

ಭದ್ರಾವತಿ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ : ರಾಬರ್ಟ್ ನಾಯಕಿ ಆಶಾಭಟ್

ಭದ್ರಾವತಿ ಸತ್ಯ ಚಿತ್ರಮಂದಿರಕ್ಕೆ ಗುರುವಾರ ಸಂಜೆ ರಾಬರ್ಟ್ ಚಿತ್ರದ ನಾಯಕಿ ಆಶಾಭಟ್ ಕುಟುಂಬ ಸದಸ್ಯರೊಂದಿಗೆ ಆಗಮಿಸಿದರು.
   ಭದ್ರಾವತಿ, ಮಾ. ೧೮: ಕಲಾವಿದೆಗೆ ಭಾಷೆಯ ಪರಿವಿಲ್ಲ, ಭದ್ರಾವತಿ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ರಾಬರ್ಟ್ ಚಿತ್ರದ ನಾಯಕಿ ಆಶಾಭಟ್ ಹೇಳಿದರು.
ಅವರು ಗುರುವಾರ ಸಂಜೆ ನಗರದ ಸಿ.ಎನ್ ರಸ್ತೆಯಲ್ಲಿರುವ ಸತ್ಯ ಚಿತ್ರಮಂದಿರಕ್ಕೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ರಾಬರ್ಟ್ ಚಿತ್ರ ವೀಕ್ಷಿಸುವ ಮೂಲಕ ಪತ್ರಕರ್ತರೊಂದಿಗೆ ತಮ್ಮ ಅನುಭವ ಹಂಚಿಕೊಂಡರು.
   ನಾನು ಹುಟ್ಟಿಬೆಳೆದ ಊರು ಭದ್ರಾವತಿ. ನಾನು ವಿಶ್ವ ಸುಂದರಿ ಸ್ಪರ್ಧೆಯಲ್ಲೂ ಸಹ ಭದ್ರಾವತಿ ಹೆಸರನ್ನು ಹೇಳಿಕೊಂಡಿದ್ದೇನೆ. ಭದ್ರಾವತಿ ಎಂದರೆ ಹೆಮ್ಮೆ ಈಗಲೂ ಸಹ ಎಲ್ಲೆಡೆ ನನ್ನೂರು ಭದ್ರಾವತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ ಎಂದರು.
    ಕಲಾವಿದೆಗೆ ಭಾಷೆಯ ಪರಿವಿಲ್ಲ. ನನಗೆ ಕನ್ನಡ ಹಾಗು ಕನ್ನಡಿಗರ ಬಗ್ಗೆ ಅಭಿಮಾನವಿದೆ. ರಾಬರ್ಟ್ ಚಿತ್ರ ತುಂಬಾ ಚನ್ನಾಗಿ ಮೂಡಿ ಬಂದಿದೆ. ಈ ಚಿತ್ರ ವೀಕ್ಷಿಸಿದವರಿಗೆ ಇದರ ಅರಿವಾಗುತ್ತದೆ. ಒಂದು ಚಿತ್ರ ನಿರ್ಮಾಣದ ಹಿಂದೆ ನೂರಾರು ಜನರ ಪರಿಶ್ರಮವಿದೆ. ಎಲ್ಲರೂ ಒಗ್ಗಟ್ಟಾಗಿ, ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ. ನನಗೆ ಈ ಚಿತ್ರದ ಮೂಲಕ ಉತ್ತಮ ಭವಿಷ್ಯವಿದೆ ಎಂದರು.
    ತಂದೆ-ತಾಯಿ ಕುಟುಂಬ ಸದಸ್ಯರೊಂದಿಗೆ ಚಿತ್ರ ವೀಕ್ಷಣೆ:
ಸತ್ಯ ಚಿತ್ರಮಂದಿರದಲ್ಲಿ ೬ ಗಂಟೆಗೆ ಆರಂಭಗೊಂಡ ರಾಬರ್ಟ್ ಚಿತ್ರ ಪ್ರದರ್ಶನವನ್ನು ತಂದೆ ಸುಬ್ರಮಣ್ಯ ಭಟ್, ತಾಯಿ ಶ್ಯಾಮಲ ಭಟ್ ಹಾಗು ಕುಟುಂಬ ಸದಸ್ಯರ ಜೊತೆ ವೀಕ್ಷಿಸಿ ಸಂಭ್ರಮಿಸಿದರು.
     ಜನ್ಮದಿನ ಆಚರಣೆ:
    ಚಿತ್ರ ಮಂದಿರ ಮಾಲೀಕ ದುಷ್ಯಂತ್‌ರಾಜ್ ಪುತ್ರನ ಜನ್ಮದಿನದ ಅಂಗವಾಗಿ ಚಿತ್ರಮಂದಿರದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ನಟಿ ಆಶಾಭಟ್ ಹಾಗು ಕುಟುಂಬ ವರ್ಗದವರು ಭಾಗಿಯಾಗಿ ಶುಭಕೋರಿದರು.



ಚಿತ್ರ ಮಂದಿರ ಮಾಲೀಕ ದುಷ್ಯಂತ್‌ರಾಜ್ ಪುತ್ರನ ಜನ್ಮದಿನದ ಅಂಗವಾಗಿ ಚಿತ್ರಮಂದಿರದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ನಟಿ ಆಶಾಭಟ್ ಹಾಗು ಕುಟುಂಬ ವರ್ಗದವರು ಭಾಗಿಯಾಗಿ ಶುಭಕೋರಿದರು.

ಸೇವಾ ಕಾರ್ಯಗಳಲ್ಲಿ ಭದ್ರಾವತಿ ಲಯನ್ಸ್ ಕ್ಲಬ್ ಮೊದಲ ಸ್ಥಾನ : ನೀಲಕಂಠ ಎಂ. ಹೆಗ್ಡೆ

ಭದ್ರಾವತಿ ನ್ಯೂಟೌನ್ ದಯಾಸಾಗರ್ ಟ್ರಸ್ಟ್‌ನಲ್ಲಿ ನಿರ್ಗತಿಕರಿಗೆ ಲಯನ್ಸ್ ಜಿಲ್ಲಾ ಗವರ್ನರ್ ನೀಲಕಂಠ ಎಂ ಹೆಗ್ಡೆ ಊಟ ಬಡಿಸುವ ಮೂಲಕ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು.
   ಭದ್ರಾವತಿ, ಮಾ. ೧೮: ನಗರದ ಲಯನ್ಸ್ ಕ್ಲಬ್ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದು, ಕೋವಿಡ್-೧೯ ಸಂಕಷ್ಟದ ಪರಿಸ್ಥಿತಿಯಲ್ಲೂ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಒಗ್ಗಟ್ಟಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಲಯನ್ಸ್ ಜಿಲ್ಲಾ ಗವರ್ನರ್ ನೀಲಕಂಠ ಎಂ ಹೆಗ್ಡೆ ಪ್ರಶಂಸೆ ವ್ಯಕ್ತಪಡಿಸಿದರು.
   ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲಯನ್ಸ್ ಜಿಲ್ಲೆ ೩೧೭ಸಿ ಪ್ರದೇಶ ೯ರ ವಲಯ ೨ರ ವ್ಯಾಪ್ತಿಯಲ್ಲಿ ೫ ಸ್ಥಾನಗಳ ಪೈಕಿ ಮೊದಲ ಸ್ಥಾನ ಕಾಯ್ದುಕೊಂಡಿದೆ.  
  ದೇಶದಲ್ಲಿ ಒಟ್ಟು ೭೫ ಲಯನ್ಸ್ ಜಿಲ್ಲೆಗಳಿದ್ದು ೨.೮೯ ಲಕ್ಷ ಲಯನ್ಸ್ ಸದಸ್ಯರನ್ನು ಹೊಂದಿದೆ. ವಿಶ್ವದಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ದೇಶ ಭಾರತ ಎಂಬುದು ವಿಶೇಷವಾಗಿದೆ. ಕೋವಿಡ್-೧೯ರ ಹಿನ್ನಲೆಯಲ್ಲಿ ೪೭ ಲಕ್ಷ ರೂ ಮೌಲ್ಯದ ಪಿಪಿ ಕಿಟ್, ೩ ಲಕ್ಷಕ್ಕೂ ಹೆಚ್ಚು ಮಾಸ್ಕ್ ವಿತರಣೆ ಮಾಡಲಾಗಿದ್ದು, ೮೦೦ ಯೂನಿಟ್ ರಕ್ತ ಸಂಗ್ರಹಣೆ ಮಾಡಲಾಗಿದೆ ಎಂದರು. ಕುಡಿಯುವ ನೀರಿನ ಸೌಲಭ್ಯ, ವಸತಿ ಸೌಕರ್ಯ, ಸ್ವಚ್ಚತಾ ಆಂದೋಲನಾ, ವೈದ್ಯಕೀಯ ಶಿಬಿರ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಪ್ರಸ್ತುತ ೧೪೮ ಲಕ್ಷ ರು. ಮೊತ್ತದ ಜಾಗತೀಕ ಯೋಜನೆಗಳು ಜಾರಿಯಲ್ಲಿವೆ. ನಗರದ ಲಯನ್ಸ್ ಕ್ಲಬ್ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಇದೀಗ ಎರಡು ನಾಮಫಲಕಗಳ ಅನಾವರಣ, ಪ್ರಥಮ ದರ್ಜೆ ಕಾಲೇಜಿನಲ್ಲಿ ಜೆರಾಕ್ಸ್ ಮತ್ತು ಪ್ರಿಂಟಿಂಗ್ ಮೆಷಿನ್ ವಿತರಣೆ, ಬಸ್ ತಂಗುದಾಣ, ನಿರ್ಗತಿಕರಿಗೆ ಊಟದ ವ್ಯವಸ್ಥೆ ಹಾಗೂ ಬಟ್ಟೆ ಹೊಲಿಯುವ ಯಂತ್ರಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದರು.  
   ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ವಿ ಚಂದ್ರಶೇಖರ್, ಕಾರ್ಯದರ್ಶಿ ಆರ್. ರಾಮಮೂರ್ತಿ, ಪಿಡಿಜಿ ಬಿ. ದಿವಾಕರ ಶೆಟ್ಟಿ, ವಿಡಿಜಿ ಕೆ.ಸಿ ವೀರಭದ್ರಪ್ಪ, ಸಂಧ್ಯಾಹೆಗ್ಡೆ, ಜನಾರ್ಧನ ಅಯ್ಯಂಗಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪೌರಾಯುಕ್ತ ಮನೋಹರ್ ನೇತೃತ್ವದಲ್ಲಿ ಚಿಕ್ಕಯ್ಯನ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಸರ್ವೆ ನಂ.೭೨ರ ಬುಳ್ಳಾಪುರ ಸರ್ಕಾರಿ ಚಿಕ್ಕಯ್ಯನ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಪೌರಾಯುಕ್ತ ಮನೋಹರ್ ನೇತೃತ್ವದಲ್ಲಿ ನಡೆಯಿತು.
    ಭದ್ರಾವತಿ, ಮಾ. ೧೮: ನಗರಸಭೆ ವ್ಯಾಪ್ತಿಯ ಸರ್ವೆ ನಂ.೭೨ರ ಬುಳ್ಳಾಪುರ ಸರ್ಕಾರಿ ಚಿಕ್ಕಯ್ಯನ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಪೌರಾಯುಕ್ತ ಮನೋಹರ್ ನೇತೃತ್ವದಲ್ಲಿ ನಡೆಯಿತು.
     ೫ ಎಕರೆ ೨೭ ಗುಂಟೆ ವಿಸ್ತೀರ್ಣವುಳ್ಳ ಚಿಕ್ಕಯ್ಯನ ಕೆರೆ ಒತ್ತುವರಿ ತೆರವು ಕಾರ್ಯಾಚರಣೆಗೆ ಈ ಹಿಂದೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಪೌರಾಯುಕ್ತ ಮನೋಹರ್ ಸ್ಥಳೀಯರು ಹಾಗು ರೈತರೊಂದಿಗೆ ಮಾತುಕತೆ ನಡೆಸಿ ಯಶಸ್ವಿಯಾಗಿದ್ದು, ಈ ಹಿನ್ನಲೆಯಲ್ಲಿ ಇದೀಗ ಪುನಃ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.
     ಬೇಸಿಗೆಯಲ್ಲಿ ರೈತರಿಗೆ, ಜಾನುವಾರುಗಳಿಗೆ ಅನುಕೂಲ ಕಲ್ಪಿಸಿಕೊಡುವ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿಸಲು ನಗರಸಭೆ ವ್ಯಾಪ್ತಿಯಲ್ಲಿನ ಕೆರೆಗಳನ್ನು ಅಭಿವೃದ್ಧಿಗೊಳಿಸುವಂತೆ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಹಲವಾರು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಈ ಸಂಬಂಧ ನಗರಸಭೆಗೆ ಹಲವಾರು ಬಾರಿ ಮನವಿ ಪತ್ರ ಸಹ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಕಳೆದ ಸುಮಾರು ೨ ವರ್ಷಗಳಿಂದ ನಿರಂತರವಾಗಿ ಪೌರಾಯುಕ್ತ ಮನೋಹರ್ ನಗರಸಭೆ ವ್ಯಾಪ್ತಿಯಲ್ಲಿ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ವಹಿಸಿ ತಾಲೂಕು ಆಡಳಿತದ ನೆರವಿನೊಂದಿಗೆ ಬೌಂಡರಿ ನಿಗದಿಪಡಿಸುವ ಮೂಲಕ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ.
   ತೆರವು ಕಾರ್ಯಾಚರಣೆ ವೇಳೆ ಸ್ಥಳೀಯರಾದ ಮುರುಗನ್, ಪ್ರಸನ್ನ, ಯೋಗೇಶ್, ಜಾನಿ, ಸಿಂಗ್, ನಾರಾಯಣಪ್ಪ, ಉಮೇಶ್, ದಶರಥ, ಸುಬ್ಬು ಹಾಗು ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಮತ್ತು ಕಾಗದನಗರ ಪೊಲೀಸ್ ಠಾಣೆ ಸಿಬ್ಬಂದಿಗಳಾದ ರಾಜೇಶ್, ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, March 17, 2021

ಎನ್. ಅಶೋಕ್‌ಕುಮಾರ್‌ಗೆ ಬೆಳ್ಳಿ ಪದಕ

ಬೆಂಗಳೂರಿನಲ್ಲಿ ೨ ದಿನಗಳ ಕಾಲ ಆಯೋಜಿಸಲಾಗಿದ್ದ ೨ನೇ ಕರ್ನಾಟಕ ಸ್ಟೇಟ್ ಮಾಸ್ಟರ್‍ಸ್ ಗೇಮ್ಸ್ ಪಂದ್ಯಾವಳಿಯಲ್ಲಿ ಭದ್ರಾವತಿ ಸಿದ್ದರೂಢನಗರದ ನಿವಾಸಿ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ತರೀಕೆರೆ ಶಾಖೆ ವ್ಯವಸ್ಥಾಪಕ ಎನ್. ಅಶೋಕ್‌ಕುಮಾರ್ ದ್ವಿತೀಯ ಬಹುಮಾನದೊಂದಿಗೆ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
   ಭದ್ರಾವತಿ, ಮಾ. ೧೭: ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ಬೆಂಗಳೂರಿನಲ್ಲಿ ೨ ದಿನಗಳ ಕಾಲ ಆಯೋಜಿಸಲಾಗಿದ್ದ ೨ನೇ ಕರ್ನಾಟಕ ಸ್ಟೇಟ್ ಮಾಸ್ಟರ್‍ಸ್ ಗೇಮ್ಸ್ ಪಂದ್ಯಾವಳಿಯಲ್ಲಿ ಸಿದ್ದರೂಢನಗರದ ನಿವಾಸಿ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ತರೀಕೆರೆ ಶಾಖೆ ವ್ಯವಸ್ಥಾಪಕ ಎನ್. ಅಶೋಕ್‌ಕುಮಾರ್ ದ್ವಿತೀಯ ಬಹುಮಾನದೊಂದಿಗೆ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ೫೫ ವರ್ಷ ಮೇಲ್ಪಟ್ಟ ಪುರುಷರ ವಿಭಾಗದ ೫ ಸಾವಿರ ಮೀಟರ್ ನಡಿಗೆಯಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದು, ಅಶೋಕ್‌ಕುಮಾರ್ ಮೊದಲ ಬಾರಿಗೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಮೊದಲ ಸ್ಪರ್ಧೆಯಲ್ಲಿಯೇ ಬಹುಮಾನ ಪಡೆದುಕೊಂಡಿರುವುದು ವಿಶೇಷವಾಗಿದೆ.
ಕ್ರೀಡೆಯಲ್ಲಿ ಆಸಕ್ತಿ ಹೊಂದಿ ಸುಮಾರು ೧ ವರ್ಷದಿಂದ ನಿರಂತರವಾಗಿ ಅಭ್ಯಾಸ ನಡೆಸಿ ಇದೀಗ ಯಶಸ್ವಿಯಾಗಿದ್ದಾರೆ. ಇವರ ಸಾಧನೆಗೆ ನಗರದ ಗಣ್ಯರು ಅಭಿನಂದಿಸಿದ್ದಾರೆ.  

ರಕ್ತದಾನ ಮಹಾ ಕಾರ್ಯ, ಯಾವುದೇ ದುಷ್ಪರಿಣಾಮವಿಲ್ಲ : ಬಿ.ಕೆ ಮೋಹನ್

ಭದ್ರಾವತಿ ಜನ್ನಾಪುರ ಎನ್‌ಟಿಬಿ ಕಛೇರಿ ಆವರಣದಲ್ಲಿರುವ ನಗರ ಆರೋಗ್ಯ ಕೇಂದ್ರದ ವತಿಯಿಂದ ಬುಧವಾರ ರಕ್ತದಾನ ಶಿಬಿರ ಹಾಗು ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
   ಭದ್ರಾವತಿ, ಮಾ. ೧೭: ರಕ್ತದಾನ ಮಹಾ ಕಾರ್ಯವಾಗಿದ್ದು, ರಕ್ತದಾನ ಮಾಡುವುದರಿಂದ ಯಾರಿಗೂ ಯಾವುದೇ ರೀತಿ ತೊಂದರೆಯಾಗುವುದಿಲ್ಲ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹೇಳಿದರು.
  ಅವರು ಬುಧವಾರ ಜನ್ನಾಪುರ ಎನ್‌ಟಿಬಿ ಕಛೇರಿ ಆವರಣದಲ್ಲಿರುವ ನಗರ ಆರೋಗ್ಯ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಹಾಗು ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
   ತಾವು ಸಹ ಯಾವುದೇ ಪ್ರಚಾರವಿಲ್ಲದೆ ರಕ್ತದಾನದಲ್ಲಿ ತೊಡಗಿಸಿಕೊಂಡಿದ್ದು, ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಆರೋಗ್ಯ ಸುಧಾರಣೆ ಜೊತೆಗೆ ಮತ್ತೊಬ್ಬರ ಜೀವ ಉಳಿಸಬಹುದಾಗಿದೆ. ಇಂತಹ ಕಾರ್ಯದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವುದು ಬಹಳ ಮುಖ್ಯವಾಗಿದೆ ಎಂದರು.
ಆರೋಗ್ಯ ಕೇಂದ್ರದ ವೈದ್ಯೆ ಡಾ. ಕವಿತಾ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯ ಅನಿಲ್‌ಕುಮಾರ್, ಮೂಳೆರೋಗ ತಜ್ಞ  ಡಾ. ಸುರೇಶ್, ಸರ್ಜನ್ ಡಾ. ರಾಜು, ದಂತ ತಜ್ಞ ಡಾ. ಸುರೇಶ್, ಚರ್ಮರೋಗ ತಜ್ಞ ಡಾ. ಭರತ್‌ಕುಮಾರ್, ಸ್ತ್ರೀರೋಗ ತಜ್ಞೆ ಡಾ. ಸ್ಮೃತಿ, ಮಕ್ಕಳ ತಜ್ಞ ಡಾ. ಅಜಯ್, ರಕ್ತನಿಧಿ ಕೇಂದ್ರದ ಡಾ. ಅಶೋಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
   ಆರೋಗ್ಯ ಕೇಂದ್ರದ ದೇವರಾಜ್, ಕಿರಣ್, ಸಚಿನ್, ಕೋಮಲಕುಮಾರಿ, ಸೆಲ್ವಿ, ಮಂಗಳ, ಶಿಲ್ಪ, ಉಷಾ ಮತ್ತು ಚೇತನ್ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ನಗರಸಭೆಗೆ ಪುನಃ ವಾರ್ಡ್‌ಗಳ ಮೀಸಲಾತಿ ನಿಗದಿ : ಶೀಘ್ರದಲ್ಲಿಯೇ ಚುನಾವಣೆ ಸಾಧ್ಯತೆ?

    ಭದ್ರಾವತಿ, ಮಾ. ೧೭: ಮೀಸಲಾತಿ ನಿಗದಿ ಸಂಬಂಧ ಸಲ್ಲಿಸಲಾಗಿದ್ದ ಆಕ್ಷೇಪಣೆಗಳ ಹಿನ್ನಲೆಯಲ್ಲಿ ಕಳೆದ ಸುಮಾರು ೩ ವರ್ಷಗಳಿಂದ ಚುನಾವಣೆ ನಡೆಯದ ನಗರಸಭೆಗೆ ಇದೀಗ ಚುನಾವಣೆ ನಡೆಯುವ ಲಕ್ಷಣಗಳು ಎದ್ದು ಕಾಣುತ್ತಿವೆ. ಸರ್ಕಾರ ಮಂಗಳವಾರ ಹೊಸದಾಗಿ ವಾರ್ಡ್‌ಗಳ ಮೀಸಲಾತಿ ಪ್ರಕಟಿಸಿದೆ.
   ಮೀಸಲಾತಿ ನಿಗದಿ ಸಂಬಂಧ ಹಲವು ಬಾರಿ ಆಕ್ಷೇಪಣೆಗಳು ಸಲ್ಲಿಕೆಯಾಗಿ ನ್ಯಾಯಾಲಯದಲ್ಲಿ ವಿಚಾರಣೆಗಳು ಬಾಕಿ ಉಳಿದಿದ್ದವು. ಈ ನಡುವೆ ಪ್ರಕರಣಗಳನ್ನು ನ್ಯಾಯಾಲಯ ಇತ್ಯರ್ಥಗೊಳಿಸಿದ ನಂತರ ಸರ್ಕಾರ ಪುನಃ ಜ.೨೧ರಂದು ಮೀಸಲಾತಿ ನಿಗದಿಪಡಿಸಿ ಪ್ರಕಟಿಸಿದ್ದು, ಈ ಸಂಬಂಧ ಸಹ ಹಲವು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ನಗರಸಭೆಗೆ ಚುನಾವಣೆ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಂದ ಸಾಕಷ್ಟು ದೂರು ಬಂದಿದ್ದವು. ಈ ಹಿನ್ನಲೆಯಲ್ಲಿ ಆಕ್ಷೇಪಣೆಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿ ಇದೀಗ ಹೊಸದಾಗಿ ಮೀಸಲಾತಿ ಹೊರಡಿಸಲಾಗಿದೆ.
ಒಟ್ಟು ೩೫ ವಾರ್ಡ್‌ಗಳ ಮೀಸಲಾತಿ ವಿವರ:
   ವಾರ್ಡ್ ನಂ.೧(ಹೆಬ್ಬಂಡಿ, ಜೇಡಿಕಟ್ಟೆ)-ಹಿಂದುಳಿದ ವರ್ಗ ಮಹಿಳೆ, ವಾರ್ಡ್ ನಂ.೨(ಲೋಯರ್ ಹುತ್ತಾ)-ಸಾಮಾನ್ಯ ಮಹಿಳೆ, ವಾರ್ಡ್ ನಂ.೩(ಬಿ.ಎಚ್ ರಸ್ತೆ, ಎಡ ಮತ್ತು ಬಲಭಾಗ ಚಾಮೇಗೌಡ ಏರಿಯಾ)-ಸಾಮಾನ್ಯ, ವಾರ್ಡ್ ನಂ.೪(ಕನಕಮಂಟಪ ಪ್ರದೇಶ)-ಹಿಂದುಳಿದ ವರ್ಗ(ಬಿ) ಮಹಿಳೆ, ವಾರ್ಡ್ ನಂ.೫(ಕೋಟೆ ಏರಿಯಾ)-ಸಾಮಾನ್ಯ(ಮಹಿಳೆ), ವಾರ್ಡ್ ನಂ.೬(ಸಿದ್ದರೂಢನಗರ)-ಹಿಂದುಳಿದ ವರ್ಗ-ಎ, ವಾರ್ಡ್ ನಂ.೭(ದುರ್ಗಿಗುಡಿ ಹಾಗು ಖಲಂದರ್ ನಗರ)-ಹಿಂದುಳಿದ ವರ್ಗ ಬಿ, ವಾರ್ಡ್ ನಂ.೮(ಅನ್ವರ್ ಕಾಲೋನಿ ಮತ್ತು ಸೀಗೆಬಾಗಿ)-ಸಾಮಾನ್ಯ, ವಾರ್ಡ್ ನಂ.೯(ಭದ್ರಾಕಾಲೋನಿ)-ಪರಿಶಿಷ್ಟ ಜಾತಿ, ವಾರ್ಡ್ ನಂ.೧೦(ಹನುಮಂತನಗರ ಮತ್ತು ಅಶ್ವತ್‌ನಗರ)-ಹಿಂದುಳಿದ ವರ್ಗ-ಎ (ಮಹಿಳೆ).
   ವಾರ್ಡ್ ನಂ.೧೧(ಸುಭಾಷ್ ನಗರ)-ಸಾಮಾನ್ಯ, ವಾರ್ಡ್ ನಂ.೧೨(ಅಣ್ಣಾ ನಗರ)-ಹಿಂದುಳಿದ ವರ್ಗ(ಎ), ವಾರ್ಡ್ ನಂ.೧೩(ಭೂತನಗುಡಿ)-ಸಾಮಾನ್ಯ ಮಹಿಳೆ), ವಾರ್ಡ್ ನಂ.೧೪(ಹೊಸಬೋವಿಕಾಲೋನಿ)-ಪರಿಶಿಷ್ಟ ಜಾತಿ, ವಾರ್ಡ್ ನಂ.೧೫(ಹೊಸಮನೆ ಹಾಗು ಅಶ್ವಥ್ ನಗರ ಬಲಭಾಗ)-ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ ನಂ.೧೬(ಗಾಂಧಿನಗರ)-ಸಾಮಾನ್ಯ, ವಾರ್ಡ್ ನಂ.೧೭(ನೆಹರು ನಗರ)-ಸಾಮಾನ್ಯ, ವಾರ್ಡ್ ನಂ.೧೮(ಎಂ.ಎಂ ಕಾಂಪೌಂಡ್)-ಹಿಂದುಳಿದ ವರ್ಗ(ಎ), ವಾರ್ಡ್-೧೯(ಎಂಪಿಎಂ ಆಸ್ಪತ್ರೆ)-ಪರಿಶಿಷ್ಟ ಪಂಗಡ, ವಾರ್ಡ್ ನಂ.೨೦(ಸುರಗಿತೋಪು)-ಸಾಮಾನ್ಯ ಮಹಿಳೆ.
   ವಾರ್ಡ್ ನಂ.೨೧(ಎಂಪಿಎಂ ೬ ಮತ್ತು ೮ನೇ ವಾರ್ಡ್)-ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ ನಂ.೨೨(ಉಜ್ಜನಿಪುರ)-ಸಾಮಾನ್ಯ, ವಾರ್ಡ್ ನಂ.೨೩(ತಿಮ್ಲಾಪುರ ಮತ್ತು ಡಿ.ಜಿ ಹಳ್ಳಿ)-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ನಂ.೨೪(ಬೊಮ್ಮನಕಟ್ಟೆ)-ಸಾಮಾನ್ಯ, ವಾರ್ಡ್ ನಂ.೨೫(ಹುಡ್ಕೋ-ಹೊಸಬುಳ್ಳಾಪುರ)-ಪರಿಶಿಷ್ಟ ಜಾತಿ, ವಾರ್ಡ್ ನಂ.೨೬(ಬಾಲಭಾರತಿ-ಬೆಣ್ಣೆ ಕೃಷ್ಣ ಸರ್ಕಲ್)-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ನಂ.೨೭(ಆಂಜನೇಯ ಅಗ್ರಹಾರ-ಕೂಲಿಬ್ಲಾಕ್)-ಪರಿಶಿಷ್ಟ ಜಾತಿ(ಮಹಿಳೆ), ವಾರ್ಡ್ ನಂ.೨೮(ಗಣೇಶ್‌ಕಾಲೋನಿ)-ಹಿಂದುಳಿದ ವರ್ಗ(ಎ), ವಾರ್ಡ್ ನಂ.೨೯(ಕಿತ್ತೂರು ರಾಣಿ ಚೆನ್ನಮ್ಮ ಲೇಔಟ್-ಎನ್‌ಟಿಬಿ ಲೇಔಟ್)-ಸಾಮಾನ್ಯ(ಮಹಿಳೆ), ವಾರ್ಡ್ ನಂ.೩೦(ಹೊಸಸಿದ್ದಾಪುರ)-ಸಾಮಾನ್ಯ.
  ವಾರ್ಡ್ ನಂ.೩೧(ಜಿಂಕ್‌ಲೈನ್)-ಸಾಮಾನ್ಯ(ಮಹಿಳೆ), ವಾರ್ಡ್ ನಂ.೩೨(ಜನ್ನಾಪುರ)-ಸಾಮಾನ್ಯ(ಮಹಿಳೆ), ವಾರ್ಡ್ ನಂ.೩೩(ಹುತ್ತಾ ಕಾಲೋನಿ)-ಸಾಮಾನ್ಯ, ವಾರ್ಡ್ ನಂ.೩೪(ಅಪ್ಪರ್ ಹುತ್ತಾ)-ಸಾಮಾನ್ಯ(ಮಹಿಳೆ) ಮತ್ತು ವಾರ್ಡ್ ನಂ.೩೫(ಭಂಡಾರಹಳ್ಳಿ)-ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಪಡಿಸಲಾಗಿದೆ.