Thursday, April 29, 2021

ನಗರಸಭೆವತಿಯಿಂದ ವಿವಿಧೆಡೆ ಕೊರೋನಾ ಜಾಗೃತಿ ಕಾರ್ಯಕ್ರಮ

ಭದ್ರಾವತಿ, ಏ. ೨೯: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ನಗರಸಭೆ ಜಾಗೃತಿ ಕಾರ್ಯಪಡೆ ವತಿಯಿಂದ ನಗರದ ಪ್ರಮುಖ ಸ್ಥಳಗಳಲ್ಲಿ ಗುರುವಾರ ಜಾಗೃತಿ ಮೂಡಿಸಲಾಯಿತು.
ಸಾಮಾಜಿಕ ಅಂತರ ಪಾಲಿಸಿ, ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಜರ್ ಬಳಸಿ, ಮನೆಯಲ್ಲೇ ಇರೋಣ ಕೊರೋನಾ ತೊಲಗಿಸೋಣ, ಎಲ್ಲರೂ ಕೊರೋನಾ ವಿರುದ್ಧ ಹೋರಾಟ ನಡೆಸೋಣ ಇತ್ಯಾದಿ ಫಲಕಗಳೊಂದಿಗೆ ಸಿದ್ಧರೂಢನಗರದ ಮುಖ್ಯದ್ವಾರದ ಬಳಿ, ಗ್ರಾಮ ದೇವತೆ ಶ್ರೀ ಹಳದಮ್ಮ ದೇವಸ್ಥಾನದ ಮುಂಭಾಗ ಇತ್ಯಾದಿ ಸ್ಥಳಗಳಲ್ಲಿ  ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ನಗರಸಭೆ ವ್ಯವಸ್ಥಾಪಕಿ ಎಂ. ಸುನಿತಾಕುಮಾರಿ, ಲೇಖಾಧಿಕಾರಿ ಸಯ್ಯದ್ ಮೆಹಬೂಬ್ ಆಲಿ,  ಕಂದಾಯಾಧಿಕಾರಿ ರಾಜ್‌ಕುಮಾರ್ ಸೇರಿದಂತೆ ಅಧಿಕಾರಿ ಹಾಗು ಸಿಬ್ಬಂದಿಗಳು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  

ಚಿತ್ರ: ಡಿ೨೯-ಬಿಡಿವಿಟಿ೨
ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ನಗರಸಭೆ ಜಾಗೃತಿ ಕಾರ್ಯಪಡೆ ವತಿಯಿಂದ ನಗರದ ಪ್ರಮುಖ ಸ್ಥಳಗಳಲ್ಲಿ ಗುರುವಾರ ಜಾಗೃತಿ ಮೂಡಿಸಲಾಯಿತು.


ನಗರಸಭೆ ೩೪ ವಾರ್ಡ್ ಚುನಾವಣೆ ಮತ ಎಣಿಕೆಗೆ ಸಕಲ ಸಿದ್ದತೆ : ಕೋವಿಡ್ ಹಿನ್ನಲೆಯಲ್ಲಿ ಬಿಗಿ ಭದ್ರತೆ

ಬೆಳಿಗ್ಗೆ ೧೦ ಗಂಟೆಯೊಳಗೆ ಫಲಿತಾಂಶ ಪ್ರಕಟ, ಗುಂಪು ಸೇರುವುದು, ಮೆರವಣಿಗೆ ನಡೆಸುವುದು ನಿಷೇಧ


ಭದ್ರಾವತಿ ನಗರಸಭೆ ೩೪ ವಾರ್ಡ್‌ಗಳ ಚುನಾವಣೆ ಮತ ಎಣಿಕೆ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಚುನಾವಣಾ ನೋಡಲ್ ಅಧಿಕಾರಿಯಾಗಿರುವ ಉಪವಿಭಾಗಾದಿಕಾರಿ ಟಿ.ವಿ ಪ್ರಕಾಶ್ ಮಾತನಾಡಿದರು. 
   ಭದ್ರಾವತಿ, ಏ. ೨೯:  ನಗರಸಭೆ ೩೪ ವಾರ್ಡ್‌ಗಳ ಚುನಾವಣೆ ಮತ ಎಣಿಕೆ ಕಾರ್ಯ ಶುಕ್ರವಾರ ಹಳೇನಗರದ ಸಂಚಿಯಹೊನ್ನಮ್ಮ ಸರ್ಕಾರಿ ಬಾಲಿಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಸಾಧ್ಯವಾದಷ್ಟು ಬೆಳಿಗ್ಗೆ ೧೦ ಗಂಟೆಯೊಳಗೆ ಮತ ಎಣಿಕೆ ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಳಿಸಲು ಪ್ರಯತ್ನಿಸಲಾಗುವುದು ಎಂದು ಚುನಾವಣಾ ನೋಡಲ್ ಅಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ತಿಳಿಸಿದರು.
    ಅವರು ಗುರುವಾರ ಪೂರ್ವ ಸಿದ್ದತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕೋವಿಡ್-೧೯ರ ಹಿನ್ನಲೆಯಲ್ಲಿ ಮತ ಎಣಿಕೆ ತ್ವರಿತಗೊಳಿಸಲು ಅನುಕೂಲವಾಗುವಂತೆ ೨ ಹಂತದ ವ್ಯವಸ್ಥೆ ರೂಪಿಸಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಕೊಠಡಿ-೧ರಲ್ಲಿ ಒಟ್ಟು ೭ ಟೇಬಲ್‌ಗಳಿದ್ದು, ವಾರ್ಡ್ ನಂ.೧, ೨, ೩, ೪, ೩೩, ೩೪ ಮತ್ತು ೩೫ರ ಭಾಗ ಸಂಖ್ಯೆ ೧ ರಿಂದ ೧೭ ಮತ್ತು ೧೨೭ ರಿಂದ ೧೩೯ರವರೆಗಿನ ಮತಗಟ್ಟೆಗಳ ಎಣಿಕೆ ಹಾಗು ಕೊಠಡಿ-೨ರಲ್ಲಿ ಒಟ್ಟು ೪ ಟೇಬಲ್‌ಗಳಿದ್ದು, ವಾರ್ಡ್ ನಂ. ೫, ೬, ೭ ಮತ್ತು ೮ರ ಭಾಗ ಸಂಖ್ಯೆ ೧೮ ರಿಂದ ೩೫ರವರೆಗಿನ ಮತಗಟ್ಟೆಗಳ ಎಣಿಕೆ ನಡೆಯಲಿದೆ.
    ಕೊಠಡಿ-೩ರಲ್ಲಿ ಒಟ್ಟು ೩ ಟೇಬಲ್‌ಗಳಿದ್ದು, ವಾರ್ಡ್ ನಂ.೯, ೧೦ ಮತ್ತು ೧೧ರ ಭಾಗ ಸಂಖ್ಯೆ ೩೬ ರಿಂದ ೪೫ರವರೆಗಿನ ಮತಗಟ್ಟೆಗಳ ಎಣಿಕೆ ಮತ್ತು ಕೊಠಡಿ-೪ರಲ್ಲಿ ಒಟ್ಟು ೪ ಟೇಬಲ್‌ಗಳಿದ್ದು, ವಾರ್ಡ್ ನಂ. ೧೨, ೧೩, ೧೪ ಮತ್ತು ೧೫ರ ಭಾಗ ಸಂಖ್ಯೆ ೪೬ ರಿಂದ ೬೧ರವರೆಗಿನ ಮತಗಟ್ಟೆಗಳ ಎಣಿಕೆ ಹಾಗು ಕೊಠಡಿ-೫ರಲ್ಲಿ ಒಟ್ಟು ೩ ಟೇಬ್‌ಲ್‌ಗಳಿದ್ದು, ವಾರ್ಡ್ ನಂ. ೧೬, ೧೭ ಮತ್ತು ೧೮ರ ಭಾಗ ಸಂಖ್ಯೆ ೬೨ ರಿಂದ ೭೩ರ ವರೆಗಿನ ಮತಗಟ್ಟೆಗಳ ಎಣಿಕೆ ನಡಯಲಿದೆ.
     ಇದೆ ರೀತಿ ಎರಡನೇ ಹಂತದಲ್ಲಿ ಕೊಠಡಿ-೧ರಲ್ಲಿ ಒಟ್ಟು ೭ ಟೇಬಲ್‌ಗಳಿದ್ದು, ವಾರ್ಡ್ ನಂ. ೧೯, ೨೦, ೨೧, ೨೨, ೨೩, ೨೪ ಮತ್ತು ೨೫ರ ಭಾಗ ಸಂಖ್ಯೆ ೭೪ ರಿಂದ ೯೮ರ ವರೆಗಿನ ಮತಗಟ್ಟೆಗಳ ಎಣಿಕೆ ಮತ್ತು ಕೊಠಡಿ-೨ರಲ್ಲಿ ಒಟ್ಟು ೪ ಟೇಬಲ್‌ಗಳಿದ್ದು, ವಾರ್ಡ್ ನಂ.೨೬, ೨೭, ೨೮ ಮತ್ತು ೩೦ರ ಭಾಗ ಸಂಖ್ಯೆ ೯೯ ರಿಂದ ೧೧೮ರವರೆಗಿನ ಮತಗಟ್ಟೆಗಳ ಎಣಿಕೆ ಹಾಗು ಕೊಠಡಿ-೩ರಲ್ಲಿ ಒಟ್ಟು ೩ ಟೇಬಲ್‌ಗಳಿದ್ದು, ವಾರ್ಡ್ ನಂ.೩೧ ಮತ್ತು ೩೨ರ ಭಾಗ ಸಂಖೆಯ ೧೧೯ ರಿಂದ ೧೨೬ರ ವರೆಗಿನ ಮತಗಟ್ಟೆಗಳ ಎಣಿಕೆ ನಡೆಯಲಿದೆ ಎಂದರು.
     ಬಹುತೇಕ ವಾರ್ಡ್‌ಗಳ ಮತ ಎಣಿಕೆ ೪ ಸುತ್ತುಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಕೇವಲ ೨ ರಿಂದ ೩ ವಾರ್ಡ್‌ಗಳ ಮತ ಎಣಿಕೆ ಮಾತ್ರ ೫ನೇ ಸುತ್ತು ತಲುಪಲಿದೆ. ಬೆಳಿಗ್ಗೆ ೮ ಗಂಟೆ ನಿಗದಿತ ಸಮಯದಲ್ಲಿ ಎಣಿಕೆ ಆರಂಭಗೊಳ್ಳಲಿದೆ. ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಹೆಚ್ಚಿನ ಜನರು ಸೇರದಂತೆ ಎಚ್ಚರವಹಿಸಲಾಗುತ್ತಿದೆ ಎಂದರು.
      ಎಚ್ಚರ ವಹಿಸಲು ಆರೋಗ್ಯಾಧಿಕಾರಿ ಸೂಚನೆ:
    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಮಾತನಾಡಿ, ಕೊರೋನಾ ಸೋಂಕು ೨ನೇ ಅಲೆ ತೀವ್ರವಾಗಿ ಹರಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಈ ಹಿನ್ನಲೆಯಲ್ಲಿ ಚುನಾವಣೆ ಮತ ಎಣಿಕೆ ಕಾರ್ಯದಲ್ಲಿ ಪಾಲ್ಗೊಳ್ಳುವವರು ಎಚ್ಚರವಹಿಸುವುದು ಅಗತ್ಯವಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿದರು.
         ಪೊಲೀಸ್ ಭದ್ರತೆ :
      ಪೊಲೀಸ್ ಇಲಾಖೆ ವತಿಯಿಂದ ಮತ ಎಣಿಕೆ ಕಾರ್ಯಕ್ಕೆ ಸಂಬಂಧಿಸಿದಂತೆ ೧-ಡಿವೈಎಸ್ಪಿ, ೩-ಸಿಪಿಐ, ೧೪-ಪಿಎಸ್‌ಐ, ೩೦-ಎಪಿಎಸ್‌ಐ, ೧೫೦-ಎಚ್‌ಪಿಸಿ, ೧-ಕೆಎಸ್‌ಆರ್‌ಪಿ ತುಕಡಿ, ೨-ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
     ಮತ ಎಣಿಕೆ ಕೇಂದ್ರಕ್ಕೆ ಅಭ್ಯರ್ಥಿ ಅಥವಾ ಅವರ ಪರವಾಗಿ ಓರ್ವ ಏಜೆಂಟರ್‌ಗೆ ಮಾತ್ರ ಅವಕಾಶ ನೀಡಲಾಗಿದ್ದು, ಉಳಿದಂತೆ ಯಾರಿಗೂ ಅವಕಾಶವಿಲ್ಲ. ಕನಕಮಂಟಪ ಮೈದಾನದಲ್ಲಿ ಸಾರ್ವಜನಿಕರು ಸೇರುವಂತಿಲ್ಲ. ಎಲ್ಲೂ ಸಹ ಗುಂಪು ಸೇರುವಂತಿಲ್ಲ. ಮೆರವಣಿಗೆ ನಡೆಸುವಂತಿಲ್ಲ.
     ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ಪೊಲೀಸ್  ಉಪಾಧೀಕ್ಷಕ ಕೃಷ್ಣಮೂರ್ತಿ, ನಗರಸಭೆ ಪೌರಾಯುಕ್ತ ಮನೋಹರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ನಗರವೃತ್ತ ನಿರೀಕ್ಷಕ ರಾಘವೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಭದ್ರಾವತಿ ನಗರಸಭೆ ೩೪ ವಾರ್ಡ್‌ಗಳ ಚುನಾವಣೆ ಮತ ಯಂತ್ರಗಳನ್ನು ಸ್ಟ್ರಾಂಗ್ ರೂಂನಲ್ಲಿ ಬಿಗಿ ಭದ್ರತೆಯಲ್ಲಿಟ್ಟಿರುವುದು.

Wednesday, April 28, 2021

ಕಲ್ಯಾಣ ಮಂಟಪಗಳಿಗೆ ಭೇಟಿ : ಮದುವೆ ಕಾರ್ಯ ಪರಿಶೀಲನೆ

ಕೋವಿಡ್-೧೯ ಮಾರ್ಗಸೂಚಿ ಪಾಲನೆ ಕಡ್ಡಾಯ


     ಭದ್ರಾವತಿ, ಏ. ೨೮: ನಗರದ ವಿವಿಧೆಡೆ ಕಲ್ಯಾಣಮಂಟಪಗಳಲ್ಲಿ ಈಗಾಗಲೇ ನಿಗದಿಯಾಗಿರುವ ಮದುವೆ ಕಾರ್ಯಕ್ರಮಗಳಲ್ಲಿ ಕೋವಿಡ್-೧೯ ಮಾರ್ಗಸೂಚಿಗಳನ್ನು ಸರಿಯಾಗಿ ಕಟ್ಟುನಿಟ್ಟಿನಿಂದ ಪಾಲಿಸುವಂತೆ ಪೌರಾಯುಕ್ತ ಮನೋಹರ್ ನೇತೃತ್ವದ ತಂಡ ಮದುವೆ ಆಯೋಜಕರು ಹಾಗು ಕಲ್ಯಾಣ ಮಂಟಪಗಳ ಮಾಲೀಕರಿಗೆ ಸೂಚಿಸಿತು.



     ನಗರದ ತರೀಕೆರೆ ರಸ್ತೆಯಲ್ಲಿರುವ ವಳ್ಳುವರ್ ಕಲ್ಯಾಣ ಮಂಟಪ, ಮಾಧವನಗರದಲ್ಲಿರುವ ದೈವಜ್ಞ ಕಲ್ಯಾಣ ಮಂಟಪ, ಸಿದ್ದಾರೂಢನಗರದ ಶ್ರೀ ಶಂಕರ ಮಠ ಸಮುದಾಯ ಭವನ ಸೇರಿದಂತೆ ವಿವಿಧ ಕಲ್ಯಾಣ ಮಂಟಪಗಳಿಗೆ ಭೇಟಿ ನೀಡಿದ ತಂಡ, ಊಟದ ಕೊಠಡಿ, ಮದುವೆ ಸ್ಥಳ, ಆಸನಗಳ ಪರಿಶೀಲನೆ, ಸಾಮಾಜಿಕ ಅಂತರ ಹಾಗು ಮದುವೆಯಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಸ್ಯಾನಿಟೈಜರ್, ಮಾಸ್ಕ್ ಬಳಕೆ ಮಾಡುವುದು ಸೇರಿದಂತೆ ಇನ್ನಿತರೆ ಪರಿಶೀಲನೆಗಳನ್ನು ನಡೆಸಲಾಯಿತು.
ಸರ್ಕಾರ ಈಗಾಗಲೇ ನಿಗದಿಪಡಿಸಿರುವ ಮದುವೆ ಕಾರ್ಯಗಳಲ್ಲಿ ಸುಮಾರು ೫೦ ಜನರು ಮಾತ್ರ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದೆ. ಅಲ್ಲದೆ ಮದುವೆ ಕಾರ್ಯಗಳಿಗೂ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಪೌರಾಯುಕ್ತರು ಮದುವೆ ಕಾರ್ಯಗಳಿಗೆ ಅನುಮತಿ ನೀಡುವ ಅಧಿಕಾರ ಹೊಂದಿದ್ದಾರೆ.



ಭದ್ರಾವತಿ ನಗರದ ವಿವಿಧೆಡೆ ಕಲ್ಯಾಣಮಂಟಪಗಳಲ್ಲಿ ಈಗಾಗಲೇ ನಿಗದಿಯಾಗಿರುವ ಮದುವೆ ಕಾರ್ಯಕ್ರಮಗಳಲ್ಲಿ ಕೋವಿಡ್-೧೯ ಮಾರ್ಗಸೂಚಿಗಳನ್ನು ಸರಿಯಾಗಿ ಕಟ್ಟುನಿಟ್ಟಿನಿಂದ ಪಾಲಿಸುವಂತೆ ಪೌರಾಯುಕ್ತ ಮನೋಹರ್ ನೇತೃತ್ವದ ತಂಡ ಮದುವೆ ಆಯೋಜಕರು ಹಾಗು ಕಲ್ಯಾಣ ಮಂಟಪಗಳ ಮಾಲೀಕರಿಗೆ ಸೂಚಿಸಿತು.

ಜನತಾ ಕರ್ಪ್ಯೂ ಮೊದಲ ದಿನ ಬಹುತೇಕ ಯಶಸ್ವಿ

ಭದ್ರಾವತಿಯಲ್ಲಿ ಬುಧವಾರ ಜನತಾ ಕರ್ಪ್ಯೂ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ಬಂದ್ ಮಾಡಿರುವುದು.
     ಭದ್ರಾವತಿ, ಏ. ೨೮: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಜಾರಿಗೊಳಿಸಿರುವ ಜನತಾ ಕರ್ಪ್ಯೂ ಬುಧವಾರ ಮೊದಲ ದಿನ ಬಹುತೇಕ ಯಶಸ್ವಿಯಾಗಿದ್ದು, ಸಾರ್ವಜನಿಕರು, ವ್ಯಾಪಸ್ಥರು ಪೂರಕವಾಗಿ ಸ್ಪಂದನೆ ವ್ಯಕ್ತಪಡಿಸಿದರು
    ಮಂಗಳವಾರ ನಗರಸಭೆ ಚುನಾವಣೆ ಮುಗಿದ ತಕ್ಷಣ ಪೊಲೀಸರು ನಗರದೆಲ್ಲೆಡೆ ಕರ್ಪ್ಯೂ ಯಶಸ್ವಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪೂರ್ವ ಸಿದ್ದತೆಗಳನ್ನು ಕೈಗೊಂಡಿದ್ದರು. ಪ್ರಮುಖ ರಸ್ತೆಗಳ ವೃತ್ತಗಳಲ್ಲಿ ಬ್ಯಾರಿಗೇಡ್‌ಗಳನ್ನು ಅಳವಡಿಸುವ ಜೊತೆಗೆ ಆಯಾಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಕೆಲವೆಡೆ ಪೊಲೀಸರು ವಾಹನ ಸವಾರರನ್ನು ತಡೆದು ವಿಚಾರಣೆ ನಡೆಸುವ ಜೊತೆಗೆ ಅನ್ಯವಶ್ಯಕವಾಗಿ ತಿರುಗಾಡುವವರಿಗೆ ಎಚ್ಚರಿಕೆ ನೀಡಿದರು.
     ಬೆಳಿಗ್ಗೆ ೬ ರಿಂದ ೧೦ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿರುವ ಹಿನ್ನಲೆಯಲ್ಲಿ ಜನರು ಸ್ವಲ್ಪಮಟ್ಟಿಗೆ ನಿರಾಳವಾಗಿದ್ದು, ಸರ್ಕಾರಿ ಹಾಗು ಖಾಸಗಿ ಬಸ್‌ಗಳು ಮತ್ತು ಶಿವಮೊಗ್ಗ-ಭದ್ರಾವತಿ ನಡುವೆ ಸಂಚರಿಸುವ ಮ್ಯಾಕ್ಸಿಕ್ಯಾಬ್‌ಗಳ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಇದರಿಂದಾಗಿ ತುರ್ತು ಅಗತ್ಯವಿರುವ ಕೆಲವರು ತಮ್ಮ ಸ್ವಂತ ವಾಹನಗಳಲ್ಲಿ ಶಿವಮೊಗ್ಗ, ತರೀಕೆರೆ, ಚನ್ನಗಿರಿ ಸೇರಿದಂತೆ ಇನ್ನಿತರ ಭಾಗಗಳಿಗೆ ಸಂಚರಿಸುವಂತಾಯಿತು. ಉಳಿದಂತೆ ಕೆಲವೆಡೆ ಆಟೋಗಳ ಸೇವೆ ಲಭ್ಯವಿರುವುದು ಕಂಡು ಬಂದಿತು. ಸರ್ಕಾರಿ ಕಛೇರಿಗಳು, ಬ್ಯಾಂಕ್‌ಗಳು, ಎಂದಿನಂತೆ ತೆರೆದಿದ್ದವು. ಆದರೆ ಬಹುತೇಕ ಕಛೇರಿಗಳಲ್ಲಿ ಸಿಬ್ಬಂದಿಗಳ ಕೊರತೆ ಕಂಡು ಬಂದಿತು. ಬ್ಯಾಂಕ್‌ಗಳಲ್ಲಿ ತುರ್ತು ಅಗತ್ಯವಿರುವವರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿತ್ತು.
     ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಯಾವುದೇ ವಾಹನಗಳು ಬರದಂತೆ ಎರಡು ಕಡೆ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಈ ನಡುವೆ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಬೆಳಿಗ್ಗೆ ನಗರಕ್ಕೆ ಅಗಮಿಸಿ ಪರಿಶೀಲನೆ ನಡೆಸಿದರು.  ಸ್ಥಳೀಯ ಪೊಲೀಸರಿಗೆ ಅನಾವಶ್ಯಕವಾಗಿ ತಿರುಗಾಡುವವರ ಹಾಗು ಸರ್ಕಾರದ ಕೋವಿಡ್-೧೯ ಮಾರ್ಗಸೂಚಿಗಳನ್ನು ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.  


ಭದ್ರಾವತಿಯಲ್ಲಿ ಬುಧವಾರ ಜನತಾ ಕರ್ಪ್ಯೂ ಹಿನ್ನಲೆಯಲ್ಲಿ ಪೊಲೀಸರು ವಾಹನಗಳನ್ನು ತಡೆದು ವಿಚಾರಣೆ ನಡೆಸಿ ಸಂಚರಿಸಲು ಅವಕಾಶ ನೀಡುತ್ತಿರುವುದು.

ಕೋವಿಡ್-೧೯ ಸೋಂಕಿತರಿಗೆ ಇಲ್ಲಿಯೇ ಸೂಕ್ತ ಚಿಕಿತ್ಸೆ ನೀಡಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-೧೯ರ ಹಿನ್ನಲೆಯಲ್ಲಿ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು.
   ಭದ್ರಾವತಿ, ಏ. ೨೮: ಕೋವಿಡ್-೧೯ ಸೋಂಕಿತರಿಗೆ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿಯೇ ಸೂಕ್ತ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಅಧಿಕಾರಿಗಳಿಗೆ ಸೂಚಿಸಿದರು.
   ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್-೧೯ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಅವರು ಬುಧವಾರ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ತುರ್ತು ಸಭೆಯ ನೇತೃತ್ವ ವಹಿಸಿ ಮಾತನಾಡಿದರು.  
    ಕೋವಿಡ್-೧೯ ಪುನಃ ಕಾಣಿಸಿಕೊಳ್ಳುವುದಿಲ್ಲ ಎಂಬ ಜನರಲ್ಲಿನ ಮನೋಭಾವನೆ ಹಾಗು ಸರ್ಕಾರದ ನಿರ್ಲಕ್ಷ್ಯತನದಿಂದಾಗಿ ಸೋಂಕಿನ ಪ್ರಮಾಣ ಹೆಚ್ಚಳವಾಗಿದೆ. ಪ್ರಸ್ತುತ ಇನ್ನಾದರೂ ಎಚ್ಚೆತ್ತುಕೊಂಡು ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಸರ್ಕಾರ ಕೇವಲ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್-೧೯ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವುದಾಗಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಸೌಲರ್ಭ್ಯಗಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಸೋಂಕಿತರನ್ನು ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದೆ. ಆದರೆ ಅಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆಗೆ ಅವಕಾಶ ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಪ್ರಸ್ತುತ ಆಸ್ಪತ್ರೆಯಲ್ಲಿ ಲಭ್ಯವಿರುವ ಹಾಸಿಗೆ ಸಂಖ್ಯೆಯನ್ನು ಹೆಚ್ಚಿಸಿಕೊಂಡು ವೆಂಟಿಲೇಟರ್ ಹಾಗು ಆಕ್ಸಿಜನ್ ಕೊರತೆ ಎದುರಾಗದಂತೆ ನೋಡಿಕೊಳ್ಳಬೇಕೆಂದರು.
    ಕೋವಿಡ್-೧೯ ನಿಯಂತ್ರಣಕ್ಕೆ ತಾಲೂಕು ಆಡಳಿತ, ನಗರಸಭೆ ಹಾಗು ಆರೋಗ್ಯ ಇಲಾಖೆ ತಮ್ಮ ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಸಾರ್ವಜನಿಕರಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದರು.
    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಮಾತನಾಡಿ, ಕೋವಿಡ್-೧೯ ಸೋಂಕಿತರ ತಪಾಸಣೆ ನಡೆಸಿ ಸೋಂಕು ಕಂಡು ಬಂದಲ್ಲಿ ತಕ್ಷಣ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ೧೧ ಕೋವಿಡ್-೧೯ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು ೧೬ ವೆಂಟಿಲೇಟರ್ ಮತ್ತು ಆಕ್ಸಿಜನ್ ಇದ್ದು, ಪ್ರಸ್ತುತ ಯಾವುದೇ ಕೊರತೆ ಕಂಡು ಬಂದಿಲ್ಲ  ಎಂದು ಮಾಹಿತಿ ನೀಡಿದರು.
    ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ನಗರಸಭೆ ಪೌರಾಯುಕ್ತ ಮನೋಹರ್ ಹಾಗು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕೊವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ ಉಪಸ್ಥಿತರಿದ್ದರು. ನಗರ ಆರೋಗ್ಯ ವೈದ್ಯಾಧಿಕಾರಿಗಳು, ಆರೋಗ್ಯ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Tuesday, April 27, 2021

ಭದ್ರಾವತಿ ನಗರಸಭೆ ಚುನಾವಣೆ : ಶೇ.೬೨.೫ರಷ್ಟು ಮತದಾನ

ಭದ್ರಾವತಿ, ಏ. ೨೭: ಈ ಬಾರಿ ನಗರಸಭೆ ಚುನಾವಣೆಯಲ್ಲಿ ೧,೨೨,೯೭೪ ಮಂದಿ ಮತದಾನದ ಹಕ್ಕು ಹೊಂದಿದ್ದು, ಪೈಕಿ ೭೬,೮೬೪ ಮತದಾರರು ಹಕ್ಕು ಚಲಾಯಿಸಿದ್ದಾರೆ.
   ೩೮,೧೨೮ ಪುರುಷ, ೩೮,೭೩೬ ಮಹಿಳಾ ಮತದಾರರು ಹಕ್ಕು ಚಲಾಯಿಸಿದ್ದು, ಶೇ.೬೨.೫ರಷ್ಟು ಮತದಾನ ನಡೆದಿದೆ. ಮತದಾನದಲ್ಲೂ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ಹೊಸ ಸಿದ್ದಾಪುರ ವಾರ್ಡ್ ನಂ.೩೦ರ ಮತಗಟ್ಟೆ ೧೧೭ರಲ್ಲಿ  ಒಟ್ಟು ೧೨೪೧ ಮತದಾರರಿದ್ದು, ಈ ಪೈಕಿ ೧೦೯೫ ಮಂದಿ ಹಕ್ಕು ಚಲಾಯಿಸುವ ಮೂಲಕ ಅತಿ ಹೆಚ್ಚು ಮತದಾನವಾದ ಮತಗಟ್ಟೆಯಾಗಿದೆ. ಎಂಪಿಎಂ ಆಸ್ಪತ್ರೆ ವ್ಯಾಪ್ತಿಯ ವಾರ್ಡ್ ನಂ.೧೯ರ ಮತಗಟ್ಟೆ ೭೪ರಲ್ಲಿ ಒಟ್ಟು ೬೮೮ ಮತದಾರರಿದ್ದು, ಈ ಪೈಕಿ ೧೬೭ ಮಂದಿ ಹಕ್ಕು ಚಲಾಯಿಸುವ ಮೂಲಕ ಅತಿ ಕಡಿಮೆ ಮತದಾನವಾದ ಮತಗಟ್ಟೆಯಾಗಿದೆ.

ಮತದಾನ ಮುಗಿದ ತಕ್ಷಣ ಸೋಲು-ಗೆಲುವಿನ ಲೆಕ್ಕಾಚಾರ

ಭದ್ರಾವತಿ ಹಳೇನಗರ ಭೂತನಗುಡಿ ವ್ಯಾಪ್ತಿಯ ನಗರಸಭೆ ವಾರ್ಡ್ ನಂ.೧೩ರ ಮತಗಟ್ಟೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮತದಾನ ಮಾಡಿದರು.
     ಭದ್ರಾವತಿ, ಏ. ೨೭: ಮತದಾನ ಮುಗಿದ ತಕ್ಷಣ ರಾಜಕೀಯ ಪಕ್ಷಗಳಲ್ಲಿ ಗೆಲುವಿನ ಲೆಕ್ಕಚಾರ, ಕೆಲವು ಅಭ್ಯರ್ಥಿಗಳಿಗೆ ಸೋಲಿನ ಭೀತಿ, ಮತ್ತೆ ಕೆಲವರಿಗೆ ಗೆಲುವಿನ ಉತ್ಸಾಹ ಕಂಡು ಬರುತ್ತಿದೆ.
   ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನ ಹೊಂದಿದ ನಂತರ ನಡೆದ ಮೊದಲ ನಗರಸಭೆ ಚುನಾವಣೆ ಇದಾಗಿದ್ದು, ಅಪ್ಪಾಜಿಯವರ ವರ್ಚಸ್ಸು, ಅಭಿವೃದ್ಧಿ ಕಾರ್ಯಗಳು ಹಾಗು ಅನುಕಂಪದ ಅಲೆಯಿಂದ ಈ ಬಾರಿ ಸಹ ಮತದಾರರು ಪಕ್ಷವನ್ನು ಬೆಂಬಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸ ಜೆಡಿಎಸ್ ಹೊಂದಿದೆ.  ಮತ್ತೊಂದೆಡೆ ಶಾಸಕ ಬಿ.ಕೆ ಸಂಗಮೇಶ್ವರ್ ಅಭಿವೃದ್ಧಿ ಕಾರ್ಯಗಳು ಮತ್ತು ವರ್ಚಸ್ಸು ಮತಗಳಾಗಿ ಪರಿವರ್ತನೆಗೊಂಡಿವೆ. ಈ ಹಿನ್ನಲೆಯಲ್ಲಿ ಈ ಬಾರಿ ನಗರಸಭೆ ಅಧಿಕಾರ ಹಿಡಿಯುವ ತವಕ ಕಾಂಗ್ರೆಸ್ ಹೊಂದಿದೆ.
    ಇವೆಲ್ಲದರ ನಡುವೆ ಬಿಜೆಪಿ ಸುಮಾರು ೨ ತಿಂಗಳ ಹಿಂದೆ ಕನಕಮಂಟಪ ಮೈದಾನದಲ್ಲಿ ತಾಲೂಕು ಮಟ್ಟದ ಹೊನಲು ಬೆಳಗಿನ ಕಬಡ್ಡಿ ಪಂದ್ಯಾವಳಿ ವೇಳೆ ನಡೆದಿರುವ ಘಟನೆಯನ್ನು ಸವಾಲಾಗಿ ತೆಗೆದುಕೊಂಡು ಸಂಘಟನಾತ್ಮಕವಾಗಿ ಈ ಬಾರಿ ಚುನಾವಣೆಯನ್ನು ಎದುರಿಸಿದ್ದು, ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಇನ್ನಿತರರು ಚುನಾವಣೆ ನೇತೃತ್ವ ವಹಿಸಿರುವ ಹಿನ್ನಲೆಯಲ್ಲಿ ಈ ಬಾರಿ ಹೆಚ್ಚಿನ ಸ್ಥಾನಗಳೊಂದಿಗೆ ಅಧಿಕಾರ ಹೊಂದುವ ವಿಶ್ವಾಸ ಬಿಜೆಪಿ ಹೊಂದಿದೆ.
    ಪ್ರಮುಖ ರಾಜಕೀಯ ಪಕ್ಷಗಳಲ್ಲಿ ತೀವ್ರ ಪೈಪೋಟಿಯೊಂದಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಗಿಟ್ಟಿಸಿಕೊಂಡಿದ್ದ ಕೆಲವು ಅಭ್ಯರ್ಥಿಗಳಲ್ಲಿ ಸೋಲಿನ ಭೀತಿ ಎದ್ದು ಕಾಣುತ್ತಿದ್ದು, ಬಂಡಾಯ ಅಭ್ಯರ್ಥಿಗಳು ಮತಗಳನ್ನು ಕಸಿದಿರುವ ಭೀತಿ ಕಾಡುತ್ತಿದೆ. ಮಾತೃಪಕ್ಷದಲ್ಲಿ ಸ್ಪರ್ಧಿಸಲು ಅವಕಾಶ ಸಿಗದೆ ಬೇರೆ ಪಕ್ಷಗಳಿಂದ ಕಣಕ್ಕಿಳಿದಿರುವ ಕೆಲವು ಅಭ್ಯರ್ಥಿಗಳಲ್ಲಿ ಗೆಲುವಿನ ವಿಶ್ವಾಸ ಕಂಡು ಬರುತ್ತಿದೆ.



ಭದ್ರಾವತಿ ನಗರಸಭೆ ವಾರ್ಡ್ ನಂ.೩೨ರ ಜೆಡಿಯು ಬೆಂಬಲಿತ ಪಕ್ಷೇತರ ಅಭ್ಯರ್ಥಿ ದಿವ್ಯಶ್ರೀ ಶಶಿಕುಮಾರ್ ಗೌಡ ಜಯಶ್ರೀ ವೃತ್ತದಲ್ಲಿರುವ ಮತಗಟ್ಟೆಯೊಂದರಲ್ಲಿ ಮತದಾನ ಮಾಡಿದರು.