Sunday, January 2, 2022

ನಿಂಗಮ್ಮ ನಿಧನ

ನಿಂಗಮ್ಮ
ಭದ್ರಾವತಿ, ಜ. ೨: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್ ಅವರ ತಾಯಿ, ಹುಡ್ಕೋ ಕಾಲೋನಿ ನಿವಾಸಿ ನಿಂಗಮ್ಮ(೭೫) ಭಾನುವಾರ ರಾತ್ರಿ ನಿಧನ ಹೊಂದಿದರು.
    ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಹೊಂದಿದ್ದರು. ಮೃತರ ಅಂತ್ಯಕ್ರಿಯೆ ಸೋಮವಾರ ಮಿಲ್ಟ್ರಿಕ್ಯಾಂಪ್ ಬೈಪಾಸ್ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ.  ನಿಂಗಮ್ಮ ನಿಧನಕ್ಕೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ಸೂಚಿಸಿದೆ.

ಸರ್ಕಾರ ಬೇಡಿಕೆಗಳನ್ನು ಈಡೇರಿಸಿ ಉದ್ಯೋಗದ ಭದ್ರತೆ ನೀಡಲಿ

ಅತಿಥಿ ಉಪನ್ಯಾಸಕರಿಂದ ವಿಧಾನಸೌಧದವರೆಗೆ ಪಾದಯಾತ್ರೆಗೆ ಕಾಂಗ್ರೆಸ್ ಬೆಂಬಲ


ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದ ವತಿಯಿಂದ ಸೇವೆಯನ್ನು ಕಾಯಂ ಮಾಡಲು ಹಾಗು ಹರ್ಷ ಶಾನುಬೋಗ್ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ವಿಧಾನಸೌಧದವರೆಗೆ ಹಮ್ಮಿಕೊಳ್ಳಲಾಗಿರುವ ಪಾದಯಾತ್ರೆಗೆ ಭಾನುವಾರ ಭದ್ರಾವತಿ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ಬೆಂಬಲ ಸೂಚಿಸಿ ಮಾತನಾಡಿದರು.
    ಭದ್ರಾವತಿ, ಜ. ೨:  ಸರ್ಕಾರ ಯಾವುದೇ ಕಾರಣಕ್ಕೂ ಹೋರಾಟ ನಡೆಸುವವರನ್ನು ದಬ್ಬಾಳಿಕೆ ಮೂಲಕ ಹತ್ತಿಕ್ಕುವ ಕೆಲಸ ಮಾಡಬಾರದು. ತಕ್ಷಣ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಬೇಕೆಂದು   ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ಆಗ್ರಹಿಸಿದರು.
    ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದ ವತಿಯಿಂದ ಸೇವೆಯನ್ನು ಕಾಯಂ ಮಾಡಲು ಹಾಗು ಹರ್ಷ ಶಾನುಬೋಗ್ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ವಿಧಾನಸೌಧದವರೆಗೆ ಹಮ್ಮಿಕೊಳ್ಳಲಾಗಿರುವ ಪಾದಯಾತ್ರೆಗೆ ಭಾನುವಾರ ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಲ್ಲಿ ಬೆಂಬಲ ಸೂಚಿಸಿ ಅವರು ಮಾತನಾಡಿದರು.
    ಸ್ನಾತಕೋತ್ತರ ಪದವಿ ಪೂರೈಸಿಕೊಂಡು ಉಪನ್ಯಾಸಕ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ನಿರ್ಲಕ್ಷ್ಯತನ ವಹಿಸುತ್ತಿರುವುದು ಸರಿಯಲ್ಲ. ವೇತನವನ್ನು ಸಹ ಸರಿಯಾಗಿ ನೀಡದೆ, ಇನ್ನಿತರ ಬೇಡಿಕೆಗಳನ್ನು ಈಡೇರಿಸದೆ, ಉದ್ಯೋಗದ ಭದ್ರತೆ ನೀಡದೆ ಇರುವುದು ಪ್ರಸ್ತುತ ಅತಿಥಿ ಉಪನ್ಯಾಸಕರನ್ನು ಬೀದಿಗೆ ಬರುವಂತೆ ಮಾಡಿದೆ. ಕಳೆದ ಸುಮಾರು ೨ ವರ್ಷಗಳಿಂದ ಕೋವಿಡ್-೧೯ ಮಹಾಮಾರಿಯಿಂದಾಗಿ ಬದುಕು ಅತಂತ್ರವಾಗಿದೆ. ಶಾಲಾ-ಕಾಲೇಜುಗಳಲ್ಲಿ ಪಾಠ ಪ್ರವಚನಗಳು ನಡೆಯುತ್ತಿರುವುದೇ ಹೆಚ್ಚು. ಇಂತಹ ಸಂದರ್ಭದಲ್ಲಿ ಬೇಡಿಕೆಗಳನ್ನು ಈಡೇರಿಸದೆ ಹಠಮಾರಿತನ ಧೋರಣೆ ಅನುಸರಿಸುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ ಎಂದರು.
    ಕಾಂಗ್ರೆಸ್ ಪಕ್ಷ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಸದಾ ಬೆಂಬಲವಾಗಿದ್ದು, ಈಗಾಗಲೇ ವಿರೋಧ ಸಿದ್ದರಾಮಯ್ಯನವರು ಅತಿಥಿ ಉಪನ್ಯಾಸಕರ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇದೀಗ ನಡೆಯುತ್ತಿರುವ ಪಾದಯಾತ್ರೆಗೂ ನಮ್ಮ ಬೆಂಬಲವಿದೆ ಎಂದರು.  
    ರಾಘವೇಂದ್ರ ಸರಾಟೆ, ಸಂಪತ್‌ಕುಮಾರ್, ರಮೇಶ್ ಬರ್ಗೆ, ವಿಶ್ವ ಕುಮಾರ, ನೂರುಲ್ಲಾ ಷರೀಫ್, ನಿತಿನ್, ಹರ್ಷ, ಜ್ಯೋತಿ, ರುದ್ರೇಶ್ ಛಲವಾದಿ, ಲೋಕೇಶ್ ಗುಬ್ಬಿ, ಅರವಿಂದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜ.೩ರಂದು ಶ್ರೀಮಾತೆ ಸಾವಿತ್ರಿ ಬಾಯಿಪುಲೆ ೧೯೧ನೇ ಜಯಂತಿ

    ಭದ್ರಾವತಿ, ಜ. ೨: ಕರ್ನಾಟಕ ದಲಿತ ನೌಕರರ ಒಕ್ಕೂಟದ ವತಿಯಿಂದ ಜ.೩ರಂದು ಸಂಜೆ ೫.೩೦ಕ್ಕೆ ಬಿ.ಎಚ್ ರಸ್ತೆ, ದುರ್ಗಾ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಅಕ್ಷರದವ್ವ ಶ್ರೀಮಾತೆ ಸಾವಿತ್ರಿ ಬಾಯಿಪುಲೆಯವರ ೧೯೧ನೇ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕು.ವಿ.ವಿ ಪ್ರಾಧ್ಯಾಪಕ ಜಗನ್ನಾಥ ಕೆ.ಡಾಂಗೆ ಉಪನ್ಯಾಸ ನೀಡಲಿದ್ದಾರೆ.
    ತಹಸೀಲ್ದಾರ್ ಆರ್. ಪ್ರದೀಪ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ, ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ. ಜಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಡಿಎಸ್‌ಎಸ್ ತಾಲೂಕು ಸಂಚಾಲಕ ಕೆ. ರಂಗನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ. ತಿಪ್ಪೇಸ್ವಾಮಿ ಕೋರಿದ್ದಾರೆ.

ವಿದ್ಯುತ್ ತಗುಲಿ ಗಾಯಗೊಂಡ ಪ್ರಕರಣ : ೫ ಜನರ ವಿರುದ್ಧ ಪ್ರಕರಣ ದಾಖಲು

    ಭದ್ರಾವತಿ, ಜ. ೨: ಕೆಲವು ದಿನಗಳ ಹಿಂದೆ ಆನೇಕೊಪ್ಪ ನಗರಸಭೆ ಪಂಪ್ ಹೌಸ್ ಬಳಿ ನಿರಂತರ ಜ್ಯೋತಿ ವಿದ್ಯುತ್ ಕಾಮಗಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಖಾಸಗಿ ಕಂಪನಿಯೊಂದರ ಇಬ್ಬರು ಕಾರ್ಮಿಕರಿಗೆ ವಿದ್ಯುತ್ ತಗುಲಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ೫ ಜನರ ವಿರುದ್ಧ ಪ್ರಕರಣ ಕಾಗದನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಬಜಾಜ್ ಎಲೆಕ್ಟ್ರಿಕಲ್ ಲಿಮಿಟೆಡ್ ಕಾರ್ಮಿಕರಾದ ಸಂತೋಷ್ ಮತ್ತು ಪರಮೇಶ್ ಇಬ್ಬರು ೧೧ ಕೆ.ವಿ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ಜಂಪ್ ಜೋಡಿಸುವಾಗಿ ವಿದ್ಯುತ್ ಪ್ರವಹಿಸಿದ್ದು, ಇದರಿಂದಾಗಿ ಇಬ್ಬರು ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದರು. ಇಬ್ಬರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.
    ಯಾವುದೇ ಸುರಕ್ಷತೆ ಇಲ್ಲದೆ ಕಾಮಗಾರಿ ನಿರ್ವಹಿಸಿದ ಹಾಗು ಸುರಕ್ಷತಾ ಸಲಕರಣೆಗಳನ್ನು ನೀಡದೆ ಇರುವ ಆರೋಪದಡಿ   ವ್ಯಾಪ್ತಿಯ ಬಜಾಜ್ ಎಲೆಕ್ಟ್ರಿಕಲ್ ಲಿಮಿಟೆಡ್ ವ್ಯವಸ್ಥಾಪಕರಾದ ವೇದ ಪ್ರಕಾಶ್, ಸೈಟ್ ಸೂಪರ್ ವೈಸರ್ ಮದನ್‌ಕುಮಾರ್ ಹಾಗು ಈ ಭಾಗದ ಮೆಸ್ಕಾಂ ಲೈನ್‌ಮ್ಯಾನ್‌ಗಳಾದ ಭರ್ಮೇಗೌಡ ಮತ್ತು ಚನ್ನಯ್ಯ ಹಾಗು ಕಿರಿಯ ಇಂಜಿನಿಯರ್ ಲೋಕೇಶ್ ಸೇರಿದಂತೆ ಒಟ್ಟು ೫ ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬಡವ ರಾಸ್ಕಲ್ ಚಿತ್ರದ ನಟ ಡಾಲಿ ಧನಂಜಯ ನಗರಕ್ಕೆ ಆಗಮನ : ಅಭಿಮಾನಿಗಳಿಂದ ಜೆಸಿಬಿ ಮೂಲಕ ಪುಷ್ಪ ಮಾಲೆ

ಭದ್ರಾವತಿಗೆ ಭಾನುವಾರ ಆಗಮಿಸಿದ ಬಡವ ರಾಸ್ಕಲ್ ಚಿತ್ರದ ನಟ ಡಾಲಿ ಧನಂಜಯ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ನಿವಾಸಕ್ಕೆ ಭೇಟಿ ನೀಡಿದರು.
 
    ಭದ್ರಾವತಿ, ಜ. ೨: ಕಳೆದ ವಾರ ಬಿಡುಗಡೆಯಾದ ಬಡವ ರಾಸ್ಕರ್ ಚಿತ್ರದ ನಟ ಡಾಲಿ ಧನಂಜಯ ಭಾನುವಾರ ಚಿತ್ರದ ಪ್ರಚಾರಕ್ಕೆ ಸಿ.ಎನ್ ರಸ್ತೆಯಲ್ಲಿರುವ ನೇತ್ರಾವತಿ ಚಿತ್ರಮಂದಿರಕ್ಕೆ ಆಗಮಿಸಿದರು.
    ಧನಂಜಯ ಅವರಿಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ಕಂಡು ಬಂದಿತು. ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಬಡವ ರಾಸ್ಕರ್ ಚಿತ್ರ ಇನ್ನೂ ಹೆಚ್ಚಿನ ಪ್ರದರ್ಶನಗೊಳ್ಳಲು ನೆರವಾಗುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಅಭಿಮಾನಿಗಳು ಹಾಗು ಸಾರ್ವಜನಿಕರಿಗೆ ನಟ ಧನಂಜಯ ಮನವಿ ಮಾಡಿದರು.
    ಇದಕ್ಕೂ ಮೊದಲು ಚಿತ್ರಮಂದಿರದ ಮಾಲೀಕ ದುಷ್ಯಂತ್ ರಾಜ್ ಮತ್ತು ಸಿಬ್ಬಂದಿಗಳು ಧನಂಜಯ ಅವರನ್ನು ಪುಷ್ಪ ಮಾಲಿಕೆ ಮೂಲಕ ಸ್ವಾಗತಿಸಿದರು.
    ಅಪ್ಪಾಜಿ ನಿವಾಸಕ್ಕೆ ಭೇಟಿ:
    ನಟ ಧನಂಜಯ ನ್ಯೂಟೌನ್ ಉಂಬ್ಳೆಬೈಲು ರಸ್ತೆಯಲ್ಲಿರುವ ಮಾಜಿ ಶಾಸಕ ದಿವಂಗತ ಶಾಸಕ ಎಂ.ಜೆ ಅಪ್ಪಾಜಿ ನಿವಾಸಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರಿಗೆ ಅಭಿಮಾನಿಗಳು ಜೆಸಿಬಿ ಮೂಲಕ ಪುಷ್ಪ ಮಾಲೆ ಸಮರ್ಪಿಸಿದರು.
    ಜೆಡಿಎಸ್ ಮುಖಂಡರಾ ಶಾರದ ಅಪ್ಪಾಜಿ, ಪುತ್ರ ಎಂ.ಎ ಅಜಿತ್ ಸೇರಿದಂತೆ ಕುಟುಂಬ ವರ್ಗದವರು ಧನಂಜಯ ಅವರಿಗೆ ಅದ್ದೂರಿ ಸ್ವಾಗತ ಕೋರಿದರು.



ಭದ್ರಾವತಿಗೆ ಭಾನುವಾರ ಆಗಮಿಸಿದ ಬಡವ ರಾಸ್ಕಲ್ ಚಿತ್ರದ ನಟ ಡಾಲಿ ಧನಂಜಯ ಅವರಿಗೆ ಅಭಿಮಾನಿಗಳು ಜೆಸಿಬಿ ಮೂಲಕ ಪುಷ್ಪ ಮಾಲೆ ಸಮರ್ಪಿಸಿದರು.

ಪೊಲೀಸರು ಕುಟುಂಬದಲ್ಲೂ ನೆಮ್ಮದಿ ವಾತಾವಣ ರೂಪಿಸಿಕೊಳ್ಳಲು ಪ್ರಯತ್ನಿಸಿ : ಆರ್. ಪ್ರದೀಪ್

ಭದ್ರಾವತಿ  ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಕುಟುಂಬದ ವಾರ್ಷಿಕ ಕ್ರೀಡಾಕೂಟದ ಕಾರ್ಯಕ್ರಮವನ್ನು ತಹಸೀಲ್ದಾರ್ ಆರ್. ಪ್ರದೀಪ್, ಪೊಲೀಸ್ ಉಪ ಅಧೀಕ್ಷಕರಾದ ಜಿತೇಂದ್ರಕುಮಾರ್ ದಯಾಮ, ಗಜಾನನ ಸುತಾರಾ ಸೇರಿದಂತೆ ಇನ್ನಿತರರು ಪಾರಿವಾಳ ಹಾರಿ ಬಿಡುವ ಮೂಲಕ ಉದ್ಘಾಟಿಸಿದರು.
    ಭದ್ರಾವತಿ, ಜ. ೨: ಅತಿಸೂಕ್ಷ್ಮ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ದಿನದ ೨೪ ಗಂಟೆ ಸಹ ಎಚ್ಚರಿಕೆ ವಹಿಸಬೇಕಾಗಿದೆ. ಇದರಿಂದಾಗಿ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಅದರೂ ಸಹ ಅಲ್ಪಸ್ವಲ್ಪ ಬಿಡುವಿನಲ್ಲಿ ಕುಟುಂಬದ ಸದಸ್ಯರ ಬಗ್ಗೆ ಕಾಳಜಿವಹಿಸುವ ಮೂಲಕ ಕುಟುಂಬದಲ್ಲೂ ನೆಮ್ಮದಿ ವಾತಾವರಣ ರೂಪಿಸಿಕೊಳ್ಳಬೇಕಾಗಿದೆ ಎಂದು ತಹಸೀಲ್ದಾರ್ ಆರ್. ಪ್ರದೀಪ್ ಹೇಳಿದರು.
    ಅವರು ಭಾನುವಾರ ನಗರದ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಕುಟುಂಬದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
    ಸರ್ಕಾರದ ಇತರೆ ಇಲಾಖೆಗಳಿಗೆ ಹೋಲಿಸಿದ್ದಲ್ಲಿ ಪೊಲೀಸ್ ಇಲಾಖೆಯವರು ಹೆಚ್ಚಿನ ಸಮಯ ಕರ್ತವ್ಯಕ್ಕೆ ಮೀಸಲಿಡಬೇಕಾಗಿದೆ. ಅದರಲ್ಲೂ ಭದ್ರಾವತಿ ಕ್ಷೇತ್ರದಂತಹ ಸೂಕ್ಷ್ಮ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ಹೆಚ್ಚಿನ ಒತ್ತಡಕ್ಕೆ ಒಳಗಾಗುವಂತಾಗಿದೆ. ಇಲ್ಲಿನ ರಾಜಕೀಯ ಹಾಗು ಸಾಮಾಜಿಕ ವ್ಯವಸ್ಥೆಗಳಿಗೆ ಹೊಂದಿಕೊಂಡು ಹೋಗಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕುಟುಂಬ ಸದಸ್ಯರೊಂದಿಗೆ ನೆಮ್ಮದಿಯಿಂದ ಕಾಲ ಕಳೆಯಲು ಸಾಧ್ಯವಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಅದರಲ್ಲೂ ಕಳೆದ ೨ ವರ್ಷಗಳಿಂದ ಕೋವಿಡ್-೧೯ ಮಹಾಮಾರಿ ಪರಿಣಾಮ ಕುಟುಂಬ ಸದಸ್ಯರ ಜೊತೆ ಮತ್ತಷ್ಟು ದೂರ ಉಳಿಯುವಂತಾಗಿದೆ. ಇದೀಗ ಕ್ರೀಡಾಕೂಟ ಆಯೋಜನೆ ಮೂಲಕ ಎಲ್ಲರೂ ಒಂದೆಡೆ ಸೇರಿ ಸಂಭ್ರಮಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಕುಟುಂಬ ಸದಸ್ಯರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದರು.
    ಐಪಿಎಸ್ ಅಧಿಕಾರಿ ಉಪವಿಭಾಗದ  ಪೊಲೀಸ್ ಉಪ ಅಧೀಕ್ಷಕ ಜಿತೇಂದ್ರಕುಮಾರ್ ದಯಾಮಾ ಅಧ್ಯಕ್ಷತೆ ವಹಿಸಿದ್ದರು. ಪ್ರೊಫೆಷನರಿ ಐಪಿಎಸ್ ಅಧಿಕಾರಿ ಗಜಾನನ ಸುತಾರಾ, ಹೊಳೆಹೊನ್ನೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಲಕ್ಷ್ಮೀಪತಿ, ಗ್ರಾಮಾಂತರ ವೃತ್ತ ನಿರೀಕ್ಷಕ ಚೈತನ್ಯ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಕಾಗದ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಇ.ಓ ಮಂಜುನಾಥ್ ಸ್ವಾಗತಿಸಿದರು. ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ವಂದಿಸಿದರು. ದೈಹಿಕ ಶಿಕ್ಷಕ ಶಿವಲಿಂಗೇಗೌಡ ಕಾರ್ಯಕ್ರಮ ನಿರೂಪಿಸಿದರು.
    ದೈಹಿಕ ಶಿಕ್ಷಕರಾದ ಕರಣ್‌ಸಿಂಗ್, ರೇವತಿ ಮತ್ತು ಅಂತೋಣಿ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ಕ್ರೀಡಾ ಪ್ರತಿಜ್ಞೆ ಬೋಧಿಸಲಾಯಿತು.



ಭದ್ರಾವತಿ  ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಕುಟುಂಬದ ವಾರ್ಷಿಕ ಕ್ರೀಡಾಕೂಟಕ್ಕೆ ತಹಸೀಲ್ದಾರ್ ಆರ್. ಪ್ರದೀಪ್ ಗುಂಡು ಎಸೆಯುವ ಮೂಲಕ ಚಾಲನೆ ನೀಡಿದರು.

Saturday, January 1, 2022

ಫಲಾಪೇಕ್ಷೆ ರಹಿತವಾದ ಸೇವೆಗೆ ಭಗವಂತ ಪ್ರಸನ್ನ : ಶ್ರಿ ಸತ್ಯಾತ್ಮ ತೀರ್ಥರು.

ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೯ರ ಜನ್ನಾಪುರದ ಶ್ರೀರಾಘವೇಂದ್ರಸ್ವಾಮಿಗಳ ಮಠಕ್ಕೆ ಉತ್ತರಾಧಿಮಠದ ಶ್ರೀಸತ್ಯಾತ್ಮತೀರ್ಥ ಶ್ರೀಗಳು ಭೇಟಿ ನೀಡಿ ಭಕ್ತರಿಗೆ ಆಶೀರ್ವಚನ ನೀಡಿದರು.  
    ಭದ್ರಾವತಿ, ಜ. ೧: ಯಾವುದೇ ಫಲಾಪೇಕ್ಷೆಯಿಲ್ಲದೆ ಭಗವಂತನಲ್ಲಿ ಅಚಲವಾದ ನಂಬಿಕೆ ಹೊಂದಿ ಮಾಡುವ ಕಾರ್ಯಗಳಿಂದ ಭಗವಂತ ಪ್ರಸನ್ನನಾಗಿ ಸದಾ ಸಂರಕ್ಷಿಸುತ್ತಾನೆ ಎಂದು ಉತ್ತರಾಧಿಮಠದ ಶ್ರೀಸತ್ಯಾತ್ಮತೀರ್ಥ ಶ್ರೀಗಳು ಹೇಳಿದರು.
    ಅವರು ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೯ರ ಜನ್ನಾಪುರದ ಶ್ರೀರಾಘವೇಂದ್ರಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ಭಕ್ತರಿಗೆ ಆಶೀರ್ವಚನ ನೀಡಿದರು.  ಹರಿಸರ್ವೋತ್ತಮ  ತತ್ವದಲ್ಲಿ ನಂಬಿಕೆ ಹೊಂದಿ ಕಾಯಾ, ವಾಚ, ಮನಸ ಮಾಡುವ ತ್ರಿವಿಧ ಸೇವಾಕಾರ್ಯಗಳನ್ನು ಭಗವಂತನಿಗೆ ಅರ್ಪಿಸುವುದೇ ನಿಜವಾದ ಶರಣಾಗತಿ. ಭಗವಂತ ಸರ್ವತಂತ್ರ ಸ್ವತಂತ್ರ, ನಾನು ಪರಾಧಿನ ಎಂಬುದನ್ನು ಸದಾಕಾಲ ನೆನಪಿನಲ್ಲಿಟ್ಟುಕೊಂಡು ಭಗವಂತನ ಸೇವೆ ಎಂದು ಮಾಡುವ ಕಾರ್ಯಗಳಿಂದ ಆ ಭಗವಂತ ಸದಾ ಸಂತುಷ್ಟನಾಗಿ ನಮ್ಮನ್ನು ಕಾಯುತ್ತಾನೆ. ಭಗವಂತನಲ್ಲಿ ಸಂಪೂರ್ಣವಾಗಿ ನಂಬಿಕೆ ಹೊಂದಿ ಯಾವುದೇ ಫಲಪೇಕ್ಷೆರಹಿತವಾಗಿ ಮಾಡುವ ಕಾರ್ಯಗಳಿಗೆ ಅವರವರ ಯೋಗ್ಯತಾನುಸಾರವಾದ ಸ್ಥಾನಮಾನಗಳನ್ನು ಖಂಡಿತ  ನೀಡಿ ರಕ್ಷಿಸುತ್ತಾನೆ. ಶ್ರೀಮಧ್ವಾಚಾರ್ಯಾರ ತತ್ವಸಿದ್ಧಾಂತಗಳಲ್ಲಿನ ಈ ಅಂಶವನ್ನು ಪ್ರತಿಯೊಬ್ಬರೂ ಅರಿತುಕೊಂಡು ಬದುಕುಬೇಕೆಂದರು.
    ಶ್ರೀ ಗುರು ರಾಘವೇಂದ್ರಸ್ವಾಮಿಗಳು ಸೇರಿದಂತೆ ಪಂಚಯತಿಗಳ ಬೃಂದಾವನಕ್ಕೆ ಶ್ರಿಗಳು ಆರತಿಬೆಳಗಿ, ಭಕ್ತಾದಿಗಳಿಗೆ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
    ಮಠದ ಅರ್ಚಕ ಮುರಳೀಧರ್, ಪಂಡಿತರಾದ ಘಂಟಿನಾರಾಯಣಾಚಾರ್. ಗೋಪಾಲಾಚಾರ್, ರಾಮಚಂದ್ರಕಲ್ಲಾಪುರ ಸೇರಿದಂತೆ ಭಕ್ತಾಧಿಗಳು ಉಪಸ್ಥಿತರಿದ್ದರು.