Friday, December 20, 2024

ಬಾಯ್ಲರ್ ಸ್ಪೋಟ : ಕೋಟ್ಯಾಂತರ ರು. ಆಸ್ತಿಪಾಸ್ತಿ ನಷ್ಟ

ಭದ್ರಾವತಿ ನಗರಸಭೆ ವಾರ್ಡ್ ನಂ.೧೨ರ ಎನ್.ಎಂ.ಸಿ ಎಡಭಾಗ ೭ನೇ ಕ್ರಾಸ್ ಮುತ್ತು ಮಾರಿಯಮ್ಮ ದೇವಸ್ಥಾನ ರಸ್ತೆಯಲ್ಲಿರುವ ಗಣೇಶ್ ರೈಸ್ ಮಿಲ್‌ನಲ್ಲಿ ಗುರುವಾರ ಸಂಜೆ ನಡೆದ ಬಾಯ್ಲರ್ ಸ್ಪೋಟದಿಂದ ರೈಸ್ ಮಿಲ್ ಕಾಂಪೌಂಡ್ ಛಿದ್ರಗೊಂಡಿರುವುದು. 
    ಭದ್ರಾವತಿ: ನಗರಸಭೆ ವಾರ್ಡ್ ನಂ.೧೨ರ ಎನ್.ಎಂ.ಸಿ ಎಡಭಾಗ ೭ನೇ ಕ್ರಾಸ್ ಮುತ್ತು ಮಾರಿಯಮ್ಮ ದೇವಸ್ಥಾನ ರಸ್ತೆಯಲ್ಲಿರುವ ಗಣೇಶ್ ರೈಸ್ ಮಿಲ್‌ನಲ್ಲಿ ಗುರುವಾರ ಸಂಜೆ ನಡೆದ ಬಾಯ್ಲರ್ ಸ್ಪೋಟದಿಂದ ಹೆಚ್ಚಿನ ಪ್ರಾಣ ಹಾನಿ ಸಂಭವಿಸದಿದ್ದರೂ ಸಹ ಹೆಚ್ಚಿನ ಕೋಟ್ಯಾಂತರ ರು. ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. 
    ಸ್ಪೋಟದ ತೀವ್ರತೆಯಿಂದ ಕೋಟ್ಯಾಂತರ ರು. ನಷ್ಟ ಉಂಟಾಗಿದ್ದು, ಬಾಯ್ಲರ್ ಕಬ್ಬಿಣದ ತುಂಡುಗಳು ಸುಮಾರು ಅರ್ಧ ಕಿ.ಮೀ ವ್ಯಾಪ್ತಿವರೆಗೂ ಬಿದ್ದಿವೆ. ಅಲ್ಲದೆ ಸುಮಾರು ೨ ಕಿ.ಮೀ ವರೆಗೂ ಸ್ಟೋಟದ ಕಂಪನ ವ್ಯಾಪಿಸಿದೆ. ಸ್ಪೋಟದಿಂದ ಸಮೀಪದ ಮನೆಗಳಿಗೆ, ಅಂಗಡಿಮುಂಗಟ್ಟುಗಳಿಗೆ ಹಾನಿ ಉಂಟಾಗಿದೆ. ರೈಲ್ ಮಿಲ್ ಆವರಣದಲ್ಲಿದ್ದ ಒಂದು ಲಾರಿ ಸಂಪೂರ್ಣವಾಗಿ ಜಖಂಗೊಂಡಿದ್ದು, ಉಳಿದ ಕೆಲವು ಲಾರಿಗಳಿಗೂ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ. ಅಲ್ಲದೆ ರೈಸ್‌ಮಿಲ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರ ಸುಮಾರು ೭-೮ ದ್ವಿಚಕ್ರ ವಾಹನಗಳು ಸಹ ಸಂಪೂರ್ಣವಾಗಿ ಜಖಂಗೊಂಡಿವೆ. ರೈಸ್ ಮಿಲ್ ಮೇಲ್ಛಾವಣಿ, ಯಂತ್ರೋಪಕರಣಗಳು, ವಿದ್ಯುತ್ ಪರಿವರ್ತಕ ಹಾಗು ಕಟ್ಟಡ ಬಹುತೇಕ ಹಾನಿಯಾಗಿದ್ದು, ಕೋಟ್ಯಾಂತರ ರು. ನಷ್ಟ ಸಂಭವಿಸಿದೆ. 
    ಅರ್ಧ ಕಿ.ಮೀ ದೂರದ ಆರ್‌ಸಿಸಿ ಮನೆಯ ಮೇಲೆ ಬಿದ್ದ ಕಬ್ಬಿಣ ಭಾರಿ ಗಾತ್ರದ ತುಂಡು: 
    ಬಾಯ್ಲರ್ ಸ್ಪೋಟದಿಂದ ಕಬ್ಬಿಣದ ಭಾರಿ ಗಾತ್ರದ ತುಂಡು ಸುಮಾರು ಅರ್ಧ ಕಿ.ಮೀ. ಅನ್ವರ್ ಕಾಲೋನಿ, ಇಂದಿರಾನಗರದಲ್ಲಿರುವ ಆರ್‌ಸಿಸಿ ಮನೆಯೊಂದರ ಮೇಲೆ ಬಿದ್ದಿದ್ದು, ಇದರಿಂದ ಆರ್‌ಸಿಸಿ ಮೇಲ್ಛಾವಣಿ ಕುಸಿದು ಬಿದ್ದಿದೆ. ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಘಟನೆಯಿಂದ ಸ್ಥಳೀಯರು ಹೆಚ್ಚಿನ ಭಯಭೀತರಾಗಿದ್ದಾರೆ. 
    ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಸುಮಾರು ೯ ಗಂಟೆ ಕಾರ್ಯಾಚರಣೆ: 
    ಸ್ಥಳೀಯ ಅಗ್ನಿಶಾಮಕ ದಳ ಸಿಬ್ಬಂದಿ ಮಾಹಿತಿ ತಿಳಿದ ತಕ್ಷಣ ಸುಮಾರು ೭ ಗಂಟೆ ಸಮಯಕ್ಕೆ ಘಟನಾ ಸ್ಥಳಕ್ಕೆ ತೆರಳಿದ್ದು, ಆರಂಭದಲ್ಲಿ ಬಾಯ್ಲರ್ ಸ್ಪೋಟದಿಂದ ಉಂಟಾದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಉಳಿದ ಕಾರ್ಯಾಚರಣೆ ಬೆಳಗಿನ ಜಾವ ಸುಮಾರು ೩.೩೦ರ ವರೆಗೂ ಕೈಗೊಂಡಿದ್ದು, ಈ ಘಟನೆಯಲ್ಲಿ ಸುಮಾರು ೮ ಜನ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಒಂದು ಅಗ್ನಿಶಾಮಕ ವಾಹನ ಕಾರ್ಯಾಚರಣೆಗೆ ಬಳಸಲಾಗಿದ್ದು, ಶಿವಮೊಗ್ಗ ಹಾಗು ಸ್ಥಳೀಯ ಅಗ್ನಿಶಾಮಕ ಠಾಣಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. 
    ಮಾಲೀಕರ ವಿರುದ್ಧ ಪ್ರಕರಣ ದಾಖಲು: 
    ಗಣೇಶ್ ರೈಸ್ ಮಿಲ್ ಮಾಲೀಕರಾದ ಗಿರಿರಾಜ್ ಶೆಟ್ಟಿ ಹಾಗು ದೀಪಕ್ ಶೆಟ್ಟಿ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ವಿವಿಧ ಇಲಾಖೆಗಳ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡಿದ್ದಾರೆ. 
 

ಬಾಯ್ಲರ್ ಸ್ಪೋಟದಿಂದ ಕಬ್ಬಿಣದ ಭಾರಿ ಗಾತ್ರದ ತುಂಡು ಸುಮಾರು ಅರ್ಧ ಕಿ.ಮೀ. ಅನ್ವರ್ ಕಾಲೋನಿ, ಇಂದಿರಾನಗರದಲ್ಲಿರುವ ಆರ್‌ಸಿಸಿ ಮನೆಯೊಂದರ ಮೇಲೆ ಬಿದ್ದಿದ್ದು, ಇದರಿಂದ ಆರ್‌ಸಿಸಿ ಮೇಲ್ಛಾವಣಿ ಕುಸಿದು ಬಿದ್ದಿದೆ.

ಅಂಬೇಡ್ಕರ್ ಕುರಿತು ಅವಹೇಳನ : ಕೇಂದ್ರ ಗೃಹ ಸಚಿವ ಸದಸ್ಯತ್ವ ವಜಾಗೊಳಿಸಿ

ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಮನವಿ 

ಪ್ರಜಾಪ್ರಭುತ್ವ ರಾಷ್ಟ್ರದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಕುರಿತು ಸಂಸತ್‌ನಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹಸಚಿವ ಅಮಿತ್ ಷಾರವರ ಸಂಸತ್ ಸದಸ್ಯತ್ವ ವಜಾಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಶುಕ್ರವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.  
    ಭದ್ರಾವತಿ: ಪ್ರಜಾಪ್ರಭುತ್ವ ರಾಷ್ಟ್ರದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಕುರಿತು ಸಂಸತ್‌ನಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹಸಚಿವ ಅಮಿತ್ ಷಾರವರ ಸಂಸತ್ ಸದಸ್ಯತ್ವ ವಜಾಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಶುಕ್ರವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.  
    ಸಮಿತಿ ಪ್ರಮುಖರು ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಗೃಹಮಂತ್ರಿಯಾಗಿರುವ ಅಮಿತ್ ಷಾರವರು ಸಂಸತ್‌ನಲ್ಲಿ ಭಾಷಣ ಮಾಡುವಾಗ ವಿರೋಧ ಪಕ್ಷದ ನಾಯಕರು, ಪದೇ ಪದೇ ಸಂವಿಧಾನ ಮತ್ತು ಅಂಬೇಡ್ಕರ್‌ರವರ ಭಾವಚಿತ್ರಗಳನ್ನು ಪ್ರದರ್ಶಿಸುವುದನ್ನು ಸಹಿಸಿಕೊಳ್ಳದೆ ತಮ್ಮ ಭಾಷಣದಲ್ಲಿ, ಈಗ ಒಂದು ಫ್ಯಾಷನ್ ಶುರುವಾಗಿದೆ ಅಂಬೇಡ್ಕರ್, ಅಂಬೇಡ್ಕರ್ ಎಂದು ಇಷ್ಟು ಸಲ ಹೇಳುವ ಬದಲು ಒಂದು ವೇಳೆ ಭಗವಂತನ ಹೆಸರು ಹೇಳಿದ್ದರೆ ಸ್ವರ್ಗವಾದರೂ ಸಿಗುತ್ತಿತ್ತು ಎಂದು ಹೇಳಿರುವುದು ಮನವಾದಿ ಬಿಜೆಪಿ ಸರ್ಕಾರಕ್ಕೆ ಅಂಬೇಡ್ಕರ್‌ರವರ ಬಗ್ಗೆ ಇರುವ ಸಂಕುಚಿತ ಮನೋಭಾವ ಏನೆಂಬುದು ಅರ್ಥವಾಗುತ್ತದೆ ಎಂದರು.
    ಸಂವಿಧಾನ ಶಿಲ್ಪಿಗೆ ಮನವಾದಿಗಳು ಮಾಡುವ ಅಪಮಾನಗಳು ತಮ್ಮ ಮಾತುಗಳಿಂದ ಬಹಿರಂಗಗೊಂಡಿದೆ. ಪ್ರಜಾಪ್ರಭುತ್ವ ಭಾರತದ ರಾಜ್ಯಾಂಗ, ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗಗಳು ಈ ದೇಶದ ಸಂವಿಧಾನದ ವ್ಯವಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅಂತಹದರಲ್ಲಿ ಸಂವಿಧಾನವನ್ನು ರಚಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಅಪಮಾನ ಮಾಡಿರುವುದು ಖಂಡನಿಯ ಎಂದು ಆಕ್ರೋಶ ವ್ಯಕ್ತಪಡಿಸಿದರು. 
    ಇಡೀ ವಿಶ್ವ ಮೆಚ್ಚುವಂತಹ ದೇಶದಲ್ಲಿನ ೧೩೬ ಕೋಟಿ ಜನರು ಸಾಮಾಜಿಕ ಸಮಾನತೆ ಹಾಗೂ ಬ್ರಾತೃತ್ವದಿಂದ ಜೀವಿಸಲು ಸಮಾನತೆಯ ಸಂದೇಶ ಸಾರಿದ ಸಂವಿಧಾನವನ್ನು ಪ್ರತಿಯೊಬ್ಬರು ಗೌರವಿಸುವಂತಹ ಸಂದರ್ಭದಲ್ಲಿ ಸಂವಿಧಾನ ನಿರ್ಮಾಣ ಕರ್ತನನ್ನು ಹೀಯಾಳಿಸುವುದು ಎಷ್ಟು ಸರಿ. ಈತನ ಹೇಳಿಕೆಯು ದೇಶದ್ರೋಹಿ ಕೃತ್ಯಕ್ಕೆ ಸಮ ಆದ್ದರಿಂದ ಈ ರೀತಿ ದೇಶ ದ್ರೋಹದ ಹೇಳಿಕೆ ನೀಡಿರುವ ಅಮಿತ್ ಷಾರವರು ಈ ದೇಶದಲ್ಲಿ ಇರಲು ಯೋಗ್ಯರಲ್ಲ. ಈ ಕೂಡಲೇ ಅಮಿತ್ ಷಾರವರು ದೇಶದ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.  
    ತಕ್ಷಣ ಪ್ರಧಾನಿ ನರೇಂದ್ರಮೋದಿಯವರು ಅಮೀತ್ ಷಾರವರನ್ನು ಸಂಪುಟದಿಂದ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ಪಡೆಯಬೇಕು ಹಾಗೂ ರಾಷ್ಟ್ರಪತಿಗಳು ಅಮಿತ್ ಷಾರವರ ಸಂಸತ್ ಸದಸ್ಯತ್ವ ಸ್ಥಾನ ವಜಾಗೊಳಿಸುವಂತೆ ಒತ್ತಾಯಿಸಿ ಉಪತಹಸೀಲ್ದಾರ್ ಅರಸುರವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. 
    ಸಮಿತಿ ಮುಖಂಡರಾದ ಚಿನ್ನಯ್ಯ, ಈಶ್ವರಪ್ಪ, ಪರಮೇಶ್, ಕುಬೇಂದ್ರಪ್ಪ, ಆರ್. ಸಂದೀಪ್, ಕೆ. ರಂಗನಾಥ, ಏಳುಮಲೈ, ಕಾಣಿಕ್‌ರಾಜ್, ಮಣಿ ಜಿಂಕ್‌ಲೈನ್, ಎನ್. ಗೋವಿಂದ, ಸುವರ್ಣಮ್ಮ, ರೇಖಾ, ದಾಸ್, ಧರ್ಮರಾಜ್, ನಗರಸಭೆ ಸದಸ್ಯ ಐ.ವಿ ಸಂತೋಷ್‌ಕುಮಾರ್, ಕಾಂಗ್ರೆಸ್ ಪಕ್ಷದ ಮುಖಂಡರಾದ  ಅಮೀರ್ ಜಾನ್, ದಿಲ್ದಾರ್, ಲಕ್ಷ್ಮೀದೇವಿ, ಜುಂಜಾನಾಯ್ಕ, ಸಿ.ಜಯಪ್ಪ, ಗೋಪಿ, ಬಿ.ಎಸ್ ಗಣೇಶ್ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಾಯ್ಲರ್ ಸ್ಪೋಟ ಪ್ರಕರಣ : ಅಪರೇಟರ್ ಸಾವು

ಭದ್ರಾವತಿ ನಗರಸಭೆ ವಾರ್ಡ್ ನಂ.೧೨ರ ಎನ್.ಎಂ.ಸಿ ಎಡಭಾಗ ೭ನೇ ಕ್ರಾಸ್ ಮುತ್ತು ಮಾರಿಯಮ್ಮ ದೇವಸ್ಥಾನ ರಸ್ತೆಯಲ್ಲಿರುವ ಗಣೇಶ್ ರೈಸ್ ಮಿಲ್‌ನಲ್ಲಿ ಗುರುವಾರ ಸಂಜೆ ನಡೆದ ಬಾಯ್ಲರ್ ಸ್ಪೋಟ ಪ್ರಕರಣದಲ್ಲಿ ರೈಸ್ ಮಿಲ್ ಬಾಯ್ಲರ್ ಆಪರೇಟರ್, ಹೊಸಮನೆ ನಿವಾಸಿ ರಘುನಾಥ್ ರಾವ್ ಸಾಳಂಕೆ(೪೮) ಮೃತಪಟ್ಟಿದ್ದಾರೆ. 
    ಭದ್ರಾವತಿ: ನಗರಸಭೆ ವಾರ್ಡ್ ನಂ.೧೨ರ ಎನ್.ಎಂ.ಸಿ ಎಡಭಾಗ ೭ನೇ ಕ್ರಾಸ್ ಮುತ್ತು ಮಾರಿಯಮ್ಮ ದೇವಸ್ಥಾನ ರಸ್ತೆಯಲ್ಲಿರುವ ಗಣೇಶ್ ರೈಸ್ ಮಿಲ್‌ನಲ್ಲಿ ಗುರುವಾರ ಸಂಜೆ ನಡೆದ ಬಾಯ್ಲರ್ ಸ್ಪೋಟ ಪ್ರಕರಣದಲ್ಲಿ ರೈಸ್ ಮಿಲ್ ಬಾಯ್ಲರ್ ಆಪರೇಟರ್, ಹೊಸಮನೆ ನಿವಾಸಿ ರಘುನಾಥ್ ರಾವ್ ಸಾಳಂಕೆ(೪೮) ಮೃತಪಟ್ಟಿದ್ದಾರೆ. 
    ಪತ್ನಿ, ಓರ್ವ ಪುತ್ರ ಹಾಗು ಓರ್ವ ಪುತ್ರಿ ಇದ್ದಾರೆ. ಬಾಯ್ಲರ್ ಸ್ಪೋಟಗೊಂಡ ಸಂದರ್ಭದಲ್ಲಿ ರಘುನಾಥ್ ರಾವ್ ಸಾಳಂಕೆ ಕಣ್ಮರೆಯಾಗಿದ್ದರು. ಇವರ ಪತ್ತೆಗಾಗಿ ತೀವ್ರ ಶೋಧ ಕಾರ್ಯ ಕೈಗೊಂಡಿದ್ದು, ಮಧ್ಯ ರಾತ್ರಿ ಸುಮಾರು ೧.೩೦ರ ಸಮಯದಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ದೇಹ ಗುರುತಿಸಲಾಗದಷ್ಟು ಸ್ಥಿತಿಯಲ್ಲಿ ಸಿಕ್ಕಿದ್ದು, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಶವಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. 
    ಕ್ಷತ್ರಿಯ ಮರಾಠ ಸೇವಾ ಸಂಘ ಸಂತಾಪ : 
    ರಘುನಾಥ್ ರಾವ್ ಸಾಳಂಕೆ ನಿಧನಕ್ಕೆ ಕ್ಷತ್ರಿಯ ಮರಾಠ ಸೇವಾ ಸಂಘ ಸಂತಾಪ ಸೂಚಿಸಿದ್ದು, ಸಿ.ಎನ್ ರಸ್ತೆಯಲ್ಲಿರುವ ಸಂಘದ ಕಛೇರಿಯಲ್ಲಿ ಬೆಳಿಗ್ಗೆ ಸಂಘದ ಅಧ್ಯಕ್ಷ ಎಚ್.ಆರ್ ಲೋಕೇಶ್ವರ್ ರಾವ್ ಅಧ್ಯಕ್ಷತೆಯಲ್ಲಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು ಹಾಗು ಮರಾಠ ಸಮಾಜದ ಮುಖಂಡರು, ಸಮಾಜ ಬಾಂಧವರು ಸೇರಿ ಸಂತಾಪ ಸೂಚಿಸಿದರು. 
    ೩೦ ಲಕ್ಷ ರು. ಪರಿಹಾರ : 
    ಕ್ಷತ್ರಿಯ ಮರಾಠ ಸೇವಾ ಸಂಘದ ಅಧ್ಯಕ್ಷ ಎಚ್.ಆರ್ ಲೋಕೇಶ್ವರ್ ರಾವ್ ಅಧ್ಯಕ್ಷತೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರರಾದ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ಉದ್ಯಮಿ ಬಿ.ಕೆ ಶಿವಕುಮಾರ್ ಹಾಗು ವರ್ತಕರ ಸಂಘದ ಪ್ರಮುಖರ ನೇತೃತ್ವದಲ್ಲಿ ಸಭೆ ನಡೆದು ಸಮಾಜ ಭಾಂಧವರ ಸಮ್ಮುಖದಲ್ಲಿ ಮೃತ ರಘುನಾಥ್ ರಾವ್ ಸಾಳಂಕೆಯವರ ಕುಟುಂಬಕ್ಕೆ ೩೦ ಲಕ್ಷ ರು. ಪರಿಹಾರ ಹಣ ವಿತರಿಸಲಾಯಿತು. 
    ರಘುನಾಥ್ ರಾವ್ ಸಾಳಂಕೆ : 
    ಹೊಸಮನೆ ವಾರ್ಡ್ ನಂ.೧೨ರ ಎನ್.ಎಂ.ಸಿ ೫ನೇ ಕ್ರಾಸ್ ನಿವಾಸಿ ರಘುನಾಥ್ ರಾವ್ ಸಾಳಂಕೆ ಹಲವಾರು ವರ್ಷಗಳಿಂದ ಗಣೇರ್ಶ ರೈಸ್ ಮಿಲ್‌ನಲ್ಲಿ ಬಾಯ್ಲರ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರಾಗಿದ್ದು, ಇದೀಗ ಇವರ ನಿಧನದಿಂದ ಪತ್ನಿ, ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.  
    ಗುರುವಾರ ರೈಸ್‌ಮಿಲ್‌ನಲ್ಲಿ ಇವರು ಸೇರಿದಂತೆ ಒಟ್ಟು ೬ ಜನ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಪೈಕಿ ೫ ಜನರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲದೆ ಘಟನೆಯಲ್ಲಿ ಪಾದಚಾರಿಯೊಬ್ಬರು ಗಾಯಗೊಂಡಿದ್ದು, ಅವರು ಸಹ ಚಿಕಿತ್ಸೆ ಪಡೆಯುತ್ತಿದ್ದಾರೆ. 

Thursday, December 19, 2024

ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿ

ತಾಲೂಕು ಕಚೇರಿ ಮುಂಭಾಗ ಬ್ಲಾಕ್ ಕಾಂಗ್ರಸ್ ಪ್ರತಿಭಟನೆ 


ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಲೋಕಸಭೆ ಅಧಿವೇಶನದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಬಗ್ಗೆ ಹಗುರವಾಗಿ ಹಾಗೂ ಬೇಜವಾಬ್ದಾರಿತನದಿಂದ ಮಾತನಾಡಿದ್ದಾರೆಂದು ಆರೋಪಿಸಿ ಗುರುವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭದ್ರಾವತಿ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ: ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಲೋಕಸಭೆ ಅಧಿವೇಶನದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಬಗ್ಗೆ ಹಗುರವಾಗಿ ಹಾಗೂ ಬೇಜವಾಬ್ದಾರಿತನದಿಂದ ಮಾತನಾಡಿದ್ದಾರೆಂದು ಆರೋಪಿಸಿ ಗುರುವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
    ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಬಗ್ಗೆ ಮಾಡಿರುವ ಅಪಮಾನದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ ಮುಖಂಡರು ಕೇಂದ್ರ ಗೃಹ ಸಚಿವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಬೇಕೆಂದು ಆಗ್ರಹಿಸಿದರು. 
    ತಕ್ಷಣ ಅಮಿತ್ ಶಾರವರು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ ಪ್ರತಿಭಟನಾಕಾರರು ತಹಶೀಲ್ದಾರ್ ಮೂಲಕ  ಮನವಿ ಸಲ್ಲಿಸಿದರು.
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಕುಮಾರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ನಗರಸಭೆ ಅಧ್ಯಕ್ಷ ಮಣೆ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಹಿರಿಯ ಸದಸ್ಯ ಬಿ.ಕೆ.ಮೋಹನ್ ಕುವೆಂಪು ವಿವಿ ಸಿಂಡಿಕೇಟ್ ಸದಸ್ಯರಾದ ಎಂ. ಶಿವಕುಮಾರ್, ಮುಸ್ವೀರ್ ಬಾಷಾ, ಮುಖಂಡರಾದ ಮಂಜುನಾಥ್, ಸಿ.ಜಯಪ್ಪ, ಈಶ್ವರಪ್ಪ, ಜುಂಜಾನಾಯ್ಕ, ಮಹಮ್ಮದ್ ರಫಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. 

ರೈಸ್‌ಮಿಲ್‌ನಲ್ಲಿ ಬಾಯ್ಲರ್ ಸ್ಪೋಟ : ೭ ಮಂದಿಗೆ ಗಾಯ

ಭದ್ರಾವತಿ ನಗರದ ಚನ್ನಗಿರಿ ರಸ್ತೆಯಲ್ಲಿರುವ ಗಣೇಶ್ ರೈಸ್ ಮಿಲ್‌ನಲ್ಲಿ ಗುರುವಾರ ಸಂಜೆ ಬಾಯ್ಲರ್ ಸ್ಪೋಟವಾಗಿರುವ ಘಟನೆ ನಡೆದಿದೆ. ಸ್ಪೋಟದಿಂದ ರೈಸ್ ಮಿಲ್ ಬಹುತೇಕ ಜಖಂಗೊಂಡಿದೆ. 
    ಭದ್ರಾವತಿ: ನಗರದ ಚನ್ನಗಿರಿ ರಸ್ತೆಯಲ್ಲಿರುವ ಗಣೇಶ್ ರೈಸ್ ಮಿಲ್‌ನಲ್ಲಿ ಗುರುವಾರ ಸಂಜೆ ಬಾಯ್ಲರ್ ಸ್ಪೋಟವಾಗಿದ್ದು, ಸುಮಾರು ೭ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. 
    ರೈಸ್ ಮಿಲ್‌ನಲ್ಲಿ ಸಂಜೆ ಏಕಾಏಕಿ ಬಾಯ್ಲರ್ ಸ್ಪೋಟಗೊಂಡಿದೆ. ಇದರಿಂದಾಗಿ ರೈಸ್‌ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ೭ ಮಂದಿ ತೀವ್ರ ಗಾಯಗೊಂಡಿದ್ದು, ಗಾಯಾಳುಗಳಿಗೆ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ರೈಸ್ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ರಘು ಎಂಬಾತ ನಾಪತ್ತೆಯಾಗಿದ್ದು, ತೀವ್ರ ಶೋಧ ಕಾರ್ಯ ಕೈಗೊಳ್ಳಲಾಗಿದೆ. 
    ಬಾಯ್ಲರ್ ಸ್ಪೋಟದಿಂದ ರೈಸ್ ಮಿಲ್ ಕಟ್ಟಡ ಹಾಗು ಮೇಲ್ಛಾವಣೆ ಬಹುತೇಕ ಜಖಂಗೊಂಡಿದ್ದು, ಅಲ್ಲದೆ ರೈಸ್ ಮಿಲ್ ಸಮೀಪದ ಅಣ್ಣಾನಗರ ಹಾಗು ಹೊಸಮನೆ ಭಾಗದ ಕೆಲವು ಮನೆಗಳಿಗೂ ಹಾನಿ ಉಂಟಾಗಿದೆ. ಸ್ಪೋಟದ ತೀವ್ರತೆ ಹೆಚ್ಚಾಗಿದ್ದು, ಹೆಚ್ಚಿನ ಹಾನಿ ಸಂಭವಿಸಿದೆ. 

ಘಟನೆಯಲ್ಲಿ ಒಟ್ಟು ೭ ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಘು ಎಂಬಾತ ಕಾಣೆಯಾಗಿದ್ದು, ಈತನಿಗಾಗಿ ಶೋಧ ಕಾರ್ಯ ನಡೆದಿದೆ. ಪೊಲೀಸ್, ಅಗ್ನಿಶಾಮಕ ದಳ, ಅಂಬ್ಯುಲೆನ್ಸ್, ಮೆಸ್ಕಾಂ, ನಗರಸಭೆ ಹಾಗು ಇನ್ನಿತರ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳದಲ್ಲಿದ್ದಾರೆ. ಆಸ್ತಿ ಹಾನಿ ಸಂಭವಿಸಿದೆ. ಆದರೆ ಯಾವುದೇ ಗಂಭೀರ ಪ್ರಾಣಹಾನಿ ಸಂಭವಿಸಿಲ್ಲ.  
                                                                    - ಜಿ.ಕೆ ಮಿಥುನ್ ಕುಮಾರ್, ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ, ಶಿವಮೊಗ್ಗ 
    


    ಸ್ಥಳಕ್ಕೆ ತಕ್ಷಣ ಅಗ್ನಿಶಾಮಕ, ಮೆಸ್ಕಾಂ ಮತ್ತು ನಗರಸಭೆ ಸಿಬ್ಬಂದಿಗಳು ಹಾಗು ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಆಗಮಿಸಿ ತುರ್ತು ಕಾರ್ಯಾಚರಣೆ ನಡೆಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದುವರೆಗೂ ಯಾವುದೇ ಪ್ರಾಣಹಾನಿಯಾಗಿರುವ ಕುರಿತು ಮಾಹಿತಿ ತಿಳಿದು ಬಂದಿಲ್ಲ.  
    ಈ ಭಾಗದ ವಿದ್ಯುತ್ ಕಡಿತಗೊಳಿಸಲಾಗಿದ್ದು, ಅಲ್ಲದೆ ಘಟನಾ ಸ್ಥಳಕ್ಕೆ ಸುತ್ತಮುತ್ತಲಿನಿಂದ ಜನರು ಜಮಾಯಿಸುತ್ತಿದ್ದು, ಕಾರ್ಯಾಚರಣೆ ತೊಂದರೆಯಾಗುವ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಯಾಗಿ ಈ ಭಾಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.    

Wednesday, December 18, 2024

ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಉಚಿತ ಕಾನೂನು ಅರಿವು ನೆರವು

ಭದ್ರಾವತಿ ತಾಲೂಕು ಕಾನೂನು ಸೇವಾ ಸಮಿತಿ ಹಾಗು ವಕೀಲರ ಸಂಘದ ವತಿಯಿಂದ ಬುಧವಾರ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಹಾಗು ಪ್ರಶಾಂತಿ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮ ಆಯೋಜಿಸಲಾಗಿತ್ತು. 
    ಭದ್ರಾವತಿ: ತಾಲೂಕು ಕಾನೂನು ಸೇವಾ ಸಮಿತಿ ಹಾಗು ವಕೀಲರ ಸಂಘದ ವತಿಯಿಂದ ಬುಧವಾರ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಹಾಗು ಪ್ರಶಾಂತಿ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮ ಆಯೋಜಿಸಲಾಗಿತ್ತು. 
    ನಾಲ್ಕನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎನ್. ಗಿರಿಜಾ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ಡಿ. ಪ್ರಭಾಕರ ಬೀರಯ್ಯ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ನ್ಯಾಯವಾದಿ ಎಂ. ಶಿವಕುಮಾರ್ ವಿಶ್ವ ಮಾನವ ಹಕ್ಕು ಮಹತ್ವ ಕುರಿತು ಉಪನ್ಯಾಸ ನೀಡಿದರು. 
  ಸರ್ಕಾರಿ ಅಭಿಯೋಜಕ ಪ್ರಸನ್ನ, ಟ್ರಸ್ಟ್ ಕಾರ್ಯದರ್ಶಿ ಸೌಮ್ಯ ರೂಪ ಕೆ., ಪಾಂಶುಪಾಲರಾದ ಶ್ಯಾಮರಾಯ ಆಚಾರ್, ಮೃತ್ಯುಂಜಯ ಕಾನಿಟ್ಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.   

ಡಿ.೨೧ರಂದು ಮೊದಲ ಬಾರಿಗೆ ವಿಶ್ವಧ್ಯಾನ ದಿನ

    ಭದ್ರಾವತಿ : ಆರ್ಟ್ ಆಫ್ ಲೀವಿಂಗ್ ಫೌಂಡೇಷನ್ ಶಿವಮೊಗ್ಗ ಶಾಖೆ ವತಿಯಿಂದ ಡಿ.೨೧ರಂದು ಮೊದಲ ಬಾರಿಗೆ ವಿಶ್ವಧ್ಯಾನ ದಿನ ಆಚರಣೆ ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಸಂಯೋಜನಾಧಿಕಾರಿ ಬಿ. ಮೂರ್ತಿ ಕೋರಿದ್ದಾರೆ. 
    ವಿಶ್ವಸಂಸ್ಥೆ ಇತ್ತೀಚೆಗೆ ಡಿ.೨೧ ವಿಶ್ವಧ್ಯಾನ ದಿನ ಎಂದು ಘೋಷಿಸಿದ್ದು, ಇದು ಭಾರತಕ್ಕೆ ಹೆಮ್ಮೆಯ ವಿಚಾರವಾಗಿದೆ. ಈ ಆಚರಣೆ ನಿರ್ಧಾರವು ಧ್ಯಾನದ ಶ್ರೀಮಂತ ಪರಂಪರೆಯನ್ನು ಆಚರಿಸುತ್ತದೆ ಮತ್ತು ಆಂತರಿಕ ಶಾಂತಿ ಮತ್ತು ಯೋಗಕ್ಷೇಮ ಉತ್ತೇಜಿಸುವ ಪ್ರಾಚೀನ ಅಭ್ಯಾಸಗಳ ಜಾಗತಿಕ ಮನ್ನಣೆಯೊಂದಿಗೆ ಹೊಂದಿಕೆಯಾಗುತ್ತದೆ. ವಿಶ್ವ ಸಂಸ್ಥೆಯು ಆರ್ಟ್ ಆಫ್ ಲಿವಿಂಗ್ ಫೌಂಡೇಷನ್ ಸಂಸ್ಥಾಪಕರಾದ ಆಧ್ಯಾತ್ಮಿಕ ನಾಯಕ ಮತ್ತು ಮಾನವತವಾದಿ ಶ್ರೀ ರವಿಶಂಕರ್ ಗುರೂಜಿಯವರ ನೇತೃತ್ವದಲ್ಲಿ ಪ್ರಪ್ರಥಮ ವಿಶ್ವಧ್ಯಾನ ದಿನ ಆಚರಿಸಲು ತಿರ್ಮಾನಿಸಿರುವುದು ಭಾರತೀಯರಾದ ನಾವುಗಳು ಹೆಮ್ಮೆಪಡುವ ವಿಚಾರವಾಗಿದೆ. 
    ಶ್ರೀ ರವಿಶಂಕರ್ ಗುರೂಜಿಯವರು ಡಿ.೨೧ರಂದು ಯೂಟ್ಯೂಬ್‌ನಲ್ಲಿ ರಾತ್ರಿ ೮ ಗಂಟೆಯಿಂದ ನೇರ ವಿಶ್ವಧ್ಯಾನದ ಅವಧಿಯನ್ನು ಮುನ್ನಡೆಸಲಿದ್ದಾರೆ. ಆಸಕ್ತರು ನೇರಪ್ರಸಾರದಲ್ಲಿ ಭಾಗವಹಿಸಿ ಧ್ಯಾನ್ಯದ ಪರಿವರ್ತಕ ಶಕ್ತಿಯನ್ನು ಅನುಭವಿಸಬಹುದಾಗಿದೆ. ಡಿ.೨೧ರಂದು ತಾಲೂಕಿನ ಬಿಆರ್‌ಪಿ, ಸುದರ್ಶನ ಕ್ರಿಯೆ ಉಗಮಸ್ಥನದಲ್ಲಿ ಬೆಳಿಗ್ಗೆ ೭ ಗಂಟೆಯಿಂದ ೮ ಗಂಟೆವರೆಗೆ ಹಾಗು ಶಿವಮೊಗ್ಗ ನವುಲೆ, ನವನಗರ, ಆರ್ಟ್ ಆಫ್ ಲಿವಿಂಗ್ ಜ್ಞಾನಕ್ಷೇತ್ರದಲ್ಲಿ ರಾತ್ರಿ ೮ಕ್ಕೆ ವಿಶ್ವಧ್ಯಾನ ದಿನ ಆಯೋಜಿಸಲಾಗಿದೆ. ಆಸಕ್ತರು ಇದರ ಸದುಪಯೋಗಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊ: ೮೪೩೧೩೪೩೭೬೦ ಅಥವಾ ೭೦೧೯೨೦೭೨೧೨ ಸಂಖ್ಯೆ ಸಂಪರ್ಕಿಸಬಹುದಾಗಿದೆ.