ಶುಕ್ರವಾರ, ಅಕ್ಟೋಬರ್ 17, 2025

ದೀಪಾವಳಿ ಸಂಭ್ರಮಕ್ಕೆ ಅಂಟಿಗೆ ಪಂಟಿಗೆ ಮಹಿಳಾ ಜಾನಪದ ತಂಡಕ್ಕೆ ಆಹ್ವಾನ

ಅ.೨೦ರ ಸಂಜೆ ೬ ಗಂಟೆಗೆ ವಿಶೇಷ ಪೂಜೆಯೊಂದಿಗೆ ಪ್ರದರ್ಶನ ಉದ್ಘಾಟನೆ 

ಎಂ.ಆರ್ ರೇವಣಪ್ಪ 
    ಭದ್ರಾವತಿ: ಕರ್ನಾಟಕ ಜಾನಪದ ಪರಿಷತ್ತು ಹಾಗು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕದಿಂದ ಮಲೆನಾಡಿನ ವಿಶಿಷ್ಟ ಜಾನಪದ ಕಲೆಯಾದ ಅಂಟಿಗೆ ಪಂಟಿಗೆ ಕಲಾ ತಂಡಗಳನ್ನು ಆಹ್ವಾನಿಸಲಾಗಿದೆ. ದೀಪಾವಳಿ ಸಂಭ್ರಮಕ್ಕೆ ಸಡಗರ ತರುವ ಈ ವಿಶೇಷ ಜಾನಪದ ಕಲೆಯ ಕಲಾ ಪ್ರದರ್ಶನ ಇಡೀ ರಾತ್ರಿ ನಡೆಯಲಿದೆ. ಅ.೨೦ರ ಸೋಮವಾರ ಸಂಜೆ ೬ ರಿಂದ ಬೆಳಿಗ್ಗೆವರೆಗೆ ಅಪೇಕ್ಷಿತರ ಮನೆಗಳಿಗೆ ಜ್ಯೋತಿಯೊಂದಿಗೆ ಆಗಮಿಸಲಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ, ಜಾನಪದ ಕಲಾವಿದ ಎಂ.ಆರ್ ರೇವಣಪ್ಪ ತಿಳಿಸಿದ್ದಾರೆ. 
    ಅಂಟಿಗೆ ಪಂಟಿಗೆ ಈ ವಿಶಿಷ್ಟ ಜಾನಪದ ಕಲೆ ಪ್ರಸ್ತುತ ನಶಿಸಿ ಹೋಗುವ ಹಂತದಲ್ಲಿದ್ದು, ಇದನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಉದ್ದೇಶದೊಂದಿಗೆ ಈ ಕಲಾ ತಂಡಗಳನ್ನು ಆಹ್ವಾನಿಸಲಾಗುತ್ತಿದೆ. ಅಲ್ಲದೆ ಕರ್ನಾಟಕ ಜಾನಪದ ಪರಿಷತ್ತು ಅಂಟಿಗೆ ಪಂಟಿಗೆ ಕಲಾವಿದರಿಗೂ ರಾಜ್ಯಮಟ್ಟದ ಪುರಸ್ಕಾರ ಲಭಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಈಗಾಗಲೇ ರಾಮನಗರದ ಜಾನಪದ ಲೋಕದಲ್ಲಿ ಅಂಟಿಗೆ ಪಂಟಿಗೆ ತಂಡವನ್ನು ಕಳುಹಿಸಿ ಕಲಾ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಿಕೊಡುವ ಮೂಲಕ ಆಕಾಡೆಮಿ ಪ್ರಶಸ್ತಿ ಈ ಕಲಾವಿದರಿಗೆ ದೊರಕಿಸುವ ಪ್ರಯತ್ನ ಮಾಡಲಾಗಿದೆ ಎಂದರು. 
    ಈ ಬಾರಿ ಸಹ ಅಂಟಿಗೆ ಪಂಟಿಗೆ ಕಲಾ ತಂಡಗಳು ತಾಲೂಕಿನಾದ್ಯಂತ ಪ್ರದರ್ಶನ ನೀಡಲು ಎಲ್ಲಾ ರೀತಿಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಅ.೨೦ರ ಸೋಮವಾರ ಸಂಜೆ ೬ ಗಂಟೆಗೆ ನಗರದ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ (ಎಸ್‌ಎವಿ) ಕನ್ನಡ ಶಾಲೆ ಸಮೀಪದಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರದರ್ಶನ ಉದ್ಘಾಟನೆಗೊಳ್ಳಲಿದೆ ಎಂದರು. 
    ಈ ಬಾರಿ ವಿಶೇಷತೆ ಎಂದರೆ .ತೀರ್ಥಹಳ್ಳಿ ತಾಲೂಕಿನ ಶಕುಂತಲಮ್ಮ ಮತ್ತು ಸಂಗಡಿಗರ ಅಂಟಿಗೆ ಪಂಟಿಗೆ ಮಹಿಳಾ ತಂಡ ಆಹ್ವಾನಿಸಲಾಗಿದೆ. ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಶಾಖೆ ಉಪಾಧ್ಯಕ್ಷೆ ಹೇಮಾವತಿ ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಬಿ.ಎಲ್ ಮೋಹನ್ ಕುಮಾರ್, ಸಂಘಟನಾ ಕಾರ್ಯದರ್ಶಿ ದಿವಾಕರ್, ಅನ್ನಪೂರ್ಣ ಸತೀಶ್ ಸೇರಿದಂತೆ ಇನ್ನಿತರರು ಮಹಿಳಾ ತಂಡವನ್ನು ಸ್ವಾಗತಿಸಲಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಶಾಖೆ ಮಾಜಿ ಅಧ್ಯಕ್ಷ ಕೋಡ್ಲುಯಜ್ಞಯ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ತಮ್ಮ ಮನೆಗೆ ಅಂಟಿಗೆ ಪಂಟಿಗೆ ಮಹಿಳಾ ತಂಡ ಆಗಮಿಸಲಿ ಎಂದು ಅಪೇಕ್ಷೆ ಪಡುವವರು ಮೊ: ೯೪೪೮೯೪೩೭೮೩, ೯೦೩೬೬೮೧೦೯೨, ೯೯೪೫೯೧೮೦೧೪, ೯೪೪೯೭೭೮೧೬೬ ಮತ್ತು ೯೯೮೬೨೪೧೨೩೨ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಎಂ.ಆರ್ ರೇವಣಪ್ಪ ತಿಳಿಸಿದ್ದಾರೆ. 

ಶತಮಾನ ಸಂಭ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ

ಉಕ್ಕಿನ ನಗರದಲ್ಲಿ ಅ.೧೮ರಂದು ವಿಜಯದಶಮಿ ಪಥ ಸಂಚಲನ 

ರಾಷ್ಟ್ರೀಯವಾದಿ ಚಿಂತನೆಗಳು, ವಿಚಾರಗಳ ಮೂಲಕ ದೇಶದ ಅತಿ ದೊಡ್ಡ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಇದೀಗ ಶತಮಾನ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದು,  ಈ ನಡುವೆ ಅ.೧೮ರ ಶನಿವಾರ ಭದ್ರಾವತಿ ನಗರದಲ್ಲಿ ವಿಜಯದಶಮಿ ಪಥ ಸಂಚಲನ ಆಯೋಜಿಸಲಾಗಿದೆ. ಇದಕ್ಕೆ ಪೂರಕವಾಗಿ ಭರದ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. 
    ಭದ್ರಾವತಿ : ರಾಷ್ಟ್ರೀಯವಾದಿ ಚಿಂತನೆಗಳು, ವಿಚಾರಗಳ ಮೂಲಕ ದೇಶದ ಅತಿ ದೊಡ್ಡ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಇದೀಗ ಶತಮಾನ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದು,  ಈ ನಡುವೆ ಅ.೧೮ರ ಶನಿವಾರ ನಗರದಲ್ಲಿ ವಿಜಯದಶಮಿ ಪಥ ಸಂಚಲನ ಆಯೋಜಿಸಲಾಗಿದೆ. ಇದಕ್ಕೆ ಪೂರಕವಾಗಿ ಭರದ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. 
    ಶತಮಾನ ಪೂರೈಸಿರುವ ಆರ್‌ಎಸ್‌ಎಸ್ ೧೦೦ನೇ ವರ್ಷದ ವಿಜಯದಶಮಿ ಪಥ ಸಂಚಲನಕ್ಕೆ ಭರದ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಶನಿವಾರ ಸಂಜೆ ೫.೩೦ಕ್ಕೆ ಹೊಸಮನೆ ಶಿವಾಜಿ ವೃತ್ತದಿಂದ ಆರಂಭಗೊಳ್ಳುವ ವಿಜಯದಶಮಿ ಪಥ ಸಂಚಲನ ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ ಮತ್ತು ಅಂಬೇಡ್ಕರ್ ವೃತ್ತದಿಂದ ಲೋಯರ್ ಹುತ್ತಾದವರೆಗೆ ಸಾಗಲಿದೆ. 
       ಪಥ ಸಂಚಲನ ಸಾಗುವ ಪ್ರಮುಖ ರಸ್ತೆಗಳು ಕೇಸರಿಮಯವಾಗಿವೆ. ಎಲ್ಲೆಡೆ ಫ್ಲೆಕ್ಸ್, ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಜಗಜ್ಯೋತಿ ಬಸವೇಶ್ವರರು, ಶ್ರೀ ಮಹರ್ಷಿ ವಾಲ್ಮೀಕಿ, ಶ್ರೀ ಭಗೀರಥ ಮಹಿರ್ಷಿ, ದಾಸಶ್ರೇಷ್ಠ ಕನಕದಾಸರು, ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಮ್, ಚಂದ್ರಶೇಖರ್ ಅಜಾದ್, ಭಗತ್‌ಸಿಂಗ್, ರಾಣಾ ಪ್ರತಾಪ್, ಶಿವಾಜಿ ಮಹಾರಾಜ್, ಆರ್‌ಎಸ್‌ಎಸ್ ಸಂಸ್ಥಾಪಕರು ಸೇರಿದಂತೆ ಇನ್ನಿತರ ಮಹಾನ್ ವ್ಯಕ್ತಿಗಳ ರಸ್ತೆಯುದ್ದಕ್ಕೂ ಅಳವಡಿಸಲಾಗಿರುವ ಫ್ಲೆಕ್ಸ್‌ಗಳು ಗಮನ ಸೆಳೆಯುತ್ತಿವ


    ಪ್ರಮುಖ ರಸ್ತೆಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು, ರಾತ್ರಿ ವೇಳೆ ಕಂಗೊಳಿಸಲಿವೆ. ಗಣವೇಷಧಾರಿಯಾಗಿ ಸಾವಿರಾರು ಮಂದಿ ಸ್ವಯಂ ಸೇವಕರು ಪಥಸಂಚಲನದಲ್ಲಿ ಪಾಲ್ಗೊಳ್ಳುತ್ತಿದ್ದು, ಗಣವೇಷಧಾರಿಗಳಿಗೆ ರಸ್ತೆಯುದ್ದಕ್ಕೂ ಪುಷ್ಪಾರ್ಚನೆ ನಡೆಯಲಿದ್ದು, ಅಲ್ಲದೆ ಪಥ ಸಂಚಲನದಲ್ಲಿ ಪಾಲ್ಗೊಳ್ಳುವ ಎಲ್ಲಾ ವಾಹನಗಳಿಗೆ ಪುಷ್ಪಾಲಂಕಾರ ಸಹ ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ೨ ಕ್ವಿಂಟಾಲ್ ಹೂ ಖರೀದಿಸಲಾಗಿದೆ. ಈ ನಡುವೆ ಪಥ ಸಂಚಲನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವ ಹಿರಿಯ ಸ್ವಯಂ ಸೇವಕರು ಕಿರಿಯ ಸ್ವಯಂ ಸೇವಕರು ಹಾಗು ಬಂಧು-ಬಳಗ, ಆಸಕ್ತಿಗೆ ಮನವಿ ಮಾಡುತ್ತಿದ್ದಾರೆ. 
    ಉಕ್ಕಿನ ನಗರದಲ್ಲಿ ವಿಜಯದಶಮಿ ಪಥ ಸಂಚಲನ ಕೈಗೊಳ್ಳುವ ಮೂಲಕ ಆರ್‌ಎಸ್‌ಎಸ್ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಭಾರತೀಯ ಜನತಾ ಪಕ್ಷ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ವಿಶ್ವ ಹಿಂದೂ ಪರಿಷದ್, ಸಹಕಾರಿ ಭಾರತಿ ಸೇರಿದಂತೆ ಸುಮಾರು ೩೩ಕ್ಕೂ ಹೆಚ್ಚು ಶಾಖೆಗಳಿಗೆ ಮಾತೃ ಸಂಸ್ಥೆಯಾಗಿರುವ ಆರ್‌ಎಸ್‌ಎಸ್ ಇದೀಗ ಶತಮಾನ ಸಂಭ್ರಮಾಚರಣೆಯಲ್ಲಿ ತನ್ನ ಭವ್ಯಪರಂಪರೆಯನ್ನು ಅನಾವರಣಗೊಳಿಸಲು ಮುಂದಾಗಿದೆ. 
 

ಭದ್ರಾವತಿ ನಗರದಲ್ಲಿ ಶನಿವಾರ ವಿಜಯದಶಮಿ ಪಥ ಸಂಚಲನ ಆಯೋಜಿಸಲಾಗಿದೆ. ಗಣವೇಷಧಾರಿಯಾಗಿ ಸಾವಿರಾರು ಮಂದಿ ಸ್ವಯಂ ಸೇವಕರು ಪಥಸಂಚಲನದಲ್ಲಿ ಪಾಲ್ಗೊಳ್ಳುತ್ತಿದ್ದು, ಗಣವೇಷಧಾರಿಗಳಿಗೆ ರಸ್ತೆಯುದ್ದಕ್ಕೂ ಪುಷ್ಪಾರ್ಚನೆ ನಡೆಯಲಿದ್ದು, ಅಲ್ಲದೆ ಪಥ ಸಂಚಲನದಲ್ಲಿ ಪಾಲ್ಗೊಳ್ಳುವ ಎಲ್ಲಾ ವಾಹನಗಳಿಗೆ ಪುಷ್ಪಾಲಂಕಾರ ಸಹ ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸುಮಾರು ೨ ಕ್ವಿಂಟಾಲ್ ಹೂ ಖರೀದಿಸಿರುವುದು. 

ಸೈಲ್-ವಿಐಎಸ್‌ಎಲ್‌ನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ, ಮತ್ತು ವಿಐಎಸ್‌ಎಲ್ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ, ಮತ್ತು ವಿಐಎಸ್‌ಎಲ್ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. 
    ಕಾರ್ಖಾನೆಯ ಸುಮಾರು ೧೪೩ಕ್ಕೂ ಹೆಚ್ಚು  ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಶಿಬಿರದ ಸದುಪಯೋಗ ಪಡೆದುಕೊಂಡರು. ಶಿಬಿರದಲ್ಲಿ ರಕ್ತದೊತ್ತಡ(ಬಿಪಿ), ಜಿಆರ್‌ಬಿಎಸ್(ಮಧುಮೇಹ), ಸಮೀಪ ದೃಷ್ಠಿ ದೋಷ, ದೂರ ದೃಷ್ಠಿ ದೋಷ, ಬಣ್ಣ ದೃಷ್ಠಿ, ಬೈನಾಕುಲರ್ ಮೌಲ್ಯಮಾಪನ ಮತ್ತು ಟ್ರಯಲ್ ಸೆಟ್/ ವಕ್ರೀಭವನ ತಪಾಸಣೆ ಸೇರಿದಂತೆ ಇನ್ನಿತರ ತಪಾಸಣೆಗಳನ್ನು ನಡೆಸಲಾಯಿತು. ಶಂಕರ ಕಣ್ಣಿನ ಆಸ್ಪತ್ರೆ ತಜ್ಞ ವೈದ್ಯೆ ಡಾ. ಮೇಘನ ಶಿಬಿರದಲ್ಲಿ ಸಲಹೆ ನೀಡಿದರು.
    ಶಂಕರ ಕಣ್ಣಿನ ಆಸ್ಪತ್ರೆ ನೇತ್ರ ತಜ್ಞ ಸಹಾಯಕರಾದ ಹರ್ಷ, ಸೋಮೇಶ್ ಮತ್ತು ಚೇತನ, ವಿಐಎಸ್‌ಎಲ್ ಆಸ್ಪತ್ರೆಯ ಅಲೆನ್ ಪಿಂಟೋ, ಪುಷ್ಪಲತಾ, ಮೋಹನ್, ನವೀನ್, ಉಮೇಶ್, ರಮೇಶ್ ಮತ್ತು ಕಿರಿಯ ಅಧಿಕಾರಿ (ಮಾನವ ಸಂಪನ್ಮೂಲ) ಎಂ.ಎಲ್ ಯೋಗೀಶ್ ಶಿಬಿರದ ಯಶಸ್ವಿಗೆ ಸಹಕರಿಸಿದರು. 
    ವಿಐಎಸ್‌ಎಲ್ ಆಸ್ಪತ್ರೆ ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ ಡಾ. ಸುಜೀತ್ ಕುಮಾರ್ ಮತ್ತು  ಮಹಾಪ್ರಬಂಧಕ(ಎಚ್.ಆರ್ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್ ಶಿಬಿರದ ಮೇಲುಸ್ತುವಾರಿ ವಹಿಸಿದ್ದರು.

ಗುರುವಾರ, ಅಕ್ಟೋಬರ್ 16, 2025

ಅ.೧೯ರಂದು ಮಾಜಿ ಮುಖ್ಯಮಂತ್ರಿ ಜೆ.ಎಚ್ ಪಟೇಲರ ೯೬ನೇ ದಿನಾಚರಣೆ

ವ್ಯವಸ್ಥೆಯ ಸುಧಾರಣೆಯಲ್ಲಿ ನಮ್ಮ ಪಾತ್ರ' ವಿಚಾರ ಸಂಕೀರ್ಣ

ಭದ್ರಾವತಿಯಲ್ಲಿ ಅ.೧೯ರಂದು ಮಾಜಿ ಮುಖ್ಯಮಂತ್ರಿ ಜೆ.ಎಚ್ ಪಟೇಲರ ೯೬ನೇ ದಿನಾಚರಣೆ ಆಯೋಜಿಸಿರುವ ಕುರಿತು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್. ಗೌಡ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 
    ಭದ್ರಾವತಿ:  ಧೀಮಂತ ನಾಯಕ, ಸಮಾಜವಾದಿ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲರ ೯೬ನೇ ಜನ್ಮದಿನಾಚರಣೆ ಅ.೧೯ರ ಭಾನುವಾರ ಬೆಳಗ್ಗೆ ೧೧ ಗಂಟೆಗೆ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭನವದಲ್ಲಿ ಜೆ.ಎಚ್ ಪಟೇಲ್ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲಾಗಿದೆ ಎಂದು ಎಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್.ಗೌಡ ತಿಳಿಸಿದರು. 
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೆ.ಎಚ್ ಪಟೇಲರು ಕನ್ನಡ ನಾಡಿನ ಜನರು ಎಂದಿಗೂ ಮರೆಯಲಾಗದ ಜನಪರ ನಾಯಕ, ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯನ್ನು ಎತ್ತಿಹಿಡಿದು ಉತ್ತಮ ಆಡಳಿತ ನೀಡಿದ ರಾಜಕೀಯ ಮುತ್ಸದ್ದಿ. ಎಲ್ಲಾ ಧರ್ಮದ, ಜಾತಿ ಜನಾಂಗದ, ಬಡವರ, ದೀನದಲಿತರ ಆಶಾ ಕಿರಣವಾಗಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದು ಕೊಂಡಿದ್ದಾರೆ. ಇವರ ಆದರ್ಶತನಗಳು, ಚಿಂತನೆಗಳು, ಆಡಳಿತ ವ್ಯವಸ್ಥೆ, ಜನಪರ ಕಾಳಜಿ ಇಂದಿನ ರಾಜಕೀಯ ವ್ಯಕ್ತಿಗಳಿಗೆ ಮಾರ್ಗದರ್ಶಕವಾಗಿವೆ ಎಂದರು. 
    ಜೆ.ಎಚ್ ಪಟೇಲರ ಜನ್ಮದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಉದ್ದೇಶದೊಂದಿಗೆ ಅಂದು `ವ್ಯವಸ್ಥೆಯ ಸುಧಾರಣೆಯಲ್ಲಿ ನಮ್ಮ ಪಾತ್ರ' ಮತ್ತು ಮೈಕ್ರೋ ಫೈನಾನ್ಸ್‌ಗಳಿಂದ ಎದುರಾಗುತ್ತಿರುವ ಸಮಸ್ಯೆಗಳನ್ನು ನಿಯಂತ್ರಿಸುವ ಕುರಿತ ವಿಚಾರ ಸಂಕೀರ್ಣ ಏರ್ಪಡಿಸಲಾಗಿದೆ ಎಂದರು.
    ಜ.ಎಚ್ ಪಟೇಲರ ಪುತ್ರ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಡೂರಿನ ಮಾಜಿ ಶಾಸಕ ವೈ.ಎಸ್.ವಿ ದತ್ತ ಪಟೇಲರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗೂ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್‌ಬಾನು  ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
    ಪತ್ರಿಕಾ ಗೋಷ್ಠಿಯಲ್ಲಿ ಕರುನಾಡ ಹಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವೈ. ಶಶಿಕುಮಾರ್, ಮುಖಂಡರುಗಳಾದ ಯೋಗೇಶ್‌ನಾಯ್ಕ್, ಸೈಯ್ಯದ್ ಜಾಫರ್, ವಿಜಯಕುಮಾರ್, ಶಿವಕುಮಾರ್, ಟಿ.ಜಿ ಬಸವರಾಜಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾಗಿ ಬಿ.ಎ ಮಂಜುನಾಥ್ ನೇಮಕ

ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ, ನಿವೃತ್ತ ಸರ್ಕಾರಿ ನೌಕರ ಬಿ.ಎ ಮಂಜುನಾಥ್‌ರವರನ್ನು ಭದ್ರಾವತಿ ನಗರ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ. 
    ಭದ್ರಾವತಿ : ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ, ನಿವೃತ್ತ ಸರ್ಕಾರಿ ನೌಕರ ಬಿ.ಎ ಮಂಜುನಾಥ್‌ರವರನ್ನು ನಗರ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ. 
    ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಆರ್. ಧರ್ಮಸೇನರವರ ಆದೇಶ ಹಾಗು ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸೂಚನೆ ಮೇರೆಗೆ ಮತ್ತು ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್‌ರವರ ಶಿಫಾರಸ್ಸಿನ ಮೇರೆಗೆ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಆರ್. ಶಿವಣ್ಣ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. 
    ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ಧರಾಗಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರನ್ನು ಸಂಘಟಿಸುವ ಮೂಲಕ ಪಕ್ಷವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಬಲಪಡಿಸಬೇಕೆಂದು ಸೂಚಿಸಲಾಗಿದೆ. 
    ನೂತನ ನಗರ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ಎ ಮಂಜುನಾಥ್‌ರವರನ್ನು ಶಾಸಕ ಬಿ.ಕೆ ಸಂಗಮೇಶ್ವರ್, ಪ್ರಮುಖರಾದ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಪ್ರಮುಖರು ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ. 

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ವ್ಯವಸ್ಥಾಪನ ಸಮಿತಿ ರಚನೆ

ಅಧ್ಯಕ್ಷರಾಗಿ ಜಿಲ್ಲಾ ಧಾರ್ಮಿಕ ಪರಿಷತ್ ನಿರ್ದೇಶಕ ಜಿ. ರಮಾಕಾಂತ್ ಆಯ್ಕೆ 

ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ, ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ರಚನೆಯಾಗಿದ್ದು, ನೂತನ ಅಧ್ಯಕ್ಷರಾಗಿ ಜಿ. ರಮಾಕಾಂತ್ ಅಧಿಕಾರ ಸ್ವೀಕರಿಸಿದರು. 
    ಭದ್ರಾವತಿ : ಹಳೇನಗರದ ಪುರಾಣ ಪ್ರಸಿದ್ದ, ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ರಚನೆಯಾಗಿದ್ದು, ನೂತನ ಅಧ್ಯಕ್ಷರಾಗಿ ಜಿ. ರಮಾಕಾಂತ್ ಅಧಿಕಾರ ಸ್ವೀಕರಿಸಿದರು. 
    ಜಿಲ್ಲಾ ಧಾರ್ಮಿಕ ಪರಿಷತ್ ನಿರ್ದೇಶಕರಾಗಿರುವ ಜಿ. ರಮಾಕಾಂತ್‌ರವರು ಧಾರ್ಮಿಕ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸುತ್ತಿದ್ದಾರೆ. ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಉಪಾಧ್ಯಕ್ಷರಾಗಿದ್ದಾರೆ. ಹಳೇನಗರ ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಶ್ರೀ ಗುರುರಾಜ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 
    ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದ್ದು, ದೇವಸ್ಥಾನದ ಭವ್ಯ ಪರಂಪರೆ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದಂತೆ ಉಳಿದು ಕೊಂಡಿದೆ. ಪ್ರಸ್ತುತ ಈ ದೇವಸ್ಥಾನ ಸಾಕಷ್ಟು ಅಭಿವೃದ್ಧಿ ಹೊಂದಬೇಕಾಗಿದ್ದು, ಕೆಲವು ವರ್ಷಗಳಿಂದ ವ್ಯವಸ್ಥಾಪನಾ ಸಮಿತಿ ರಚನೆಯಾಗದೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದವು. ಪ್ರಸ್ತುತ ನೂತನವಾಗಿ ರಚನೆಯಾಗಿರುವ ಸಮಿತಿ ದೇವಸ್ಥಾನ ಅಭಿವೃಧ್ಧಿಗೆ ಗಮನ ಹರಿಸಬೇಕಾಗಿದೆ. 
    ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ನೂತನ ಪದಾಧಿಕಾರಿಗಳು : 
    ಅಧ್ಯಕ್ಷರು : ಜಿ. ರಮಾಕಾಂತ್, ನಿರ್ದೇಶಕರು : ಕೆ.ಎನ್ ಮಂಜುನಾಥ್, ಬಿ.ಆರ್ ಮಹೇಶ್, ಎಂ.ಎಸ್ ಸತೀಶ್, ಕೆ.ಎನ್ ನಾಗೇಶ್, ಎಂ.ಬಿ ರಂಗನಾಥ್, ಆರ್. ಹಾಲಮ್ಮ ಮತ್ತು ಜಿ. ಆಶಾ, ಪ್ರಧಾನ ಅರ್ಚಕರು :ಎಸ್. ರಂಗನಾಥ ಶರ್ಮ, ಸಹಾಯಕ ಅರ್ಚಕರು ಎಸ್. ಶ್ರೀನಿವಾಸ್ 
    ಇದುವರೆಗೂ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಂದಾಯ ನಿರೀಕ್ಷಕ ಪ್ರಶಾಂತ್‌ರವರು ನೂತನ ವ್ಯವಸ್ಥಾಪನ ಸಮಿತಿಗೆ ಅಧಿಕಾರ ಹಸ್ತಾಂತರಿಸಿದರು.

ಬುಧವಾರ, ಅಕ್ಟೋಬರ್ 15, 2025

ಅ.೨೬ರಂದು ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್ ಚುನಾವಣೆ


    ಭದ್ರಾವತಿ : ಎಐಟಿಯುಸಿ ಕಾರ್ಮಿಕ ಸಂಘಟನೆಯ ನಗರದ ನ್ಯೂಟೌನ್ ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್ ಚುನಾವಣೆ ಅ.೨೬ರಂದು ನಡೆಯಲಿದ್ದು, ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಕಂಡು ಬರುತ್ತಿದೆ. 
    ಅ.೧೭ ನಾಮಪತ್ರ ಹಿಂಪಡೆಯುವ ದಿನವಾಗಿದ್ದು, ನಂತರ ೧೯ರಂದು ಅಂತಿಮ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳಲಿದೆ. ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್ ಕಛೇರಿಯಲ್ಲಿ ೨೬ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಚುನಾವಣೆ ನಡೆಯಲಿದೆ. ಇದೆ ದಿನ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಚುನಾವಣಾಧಿಕಾರಿ, ನ್ಯಾಯವಾದಿ ಎಸ್. ರವಿಕುಮಾರ್ ತಿಳಿಸಿದ್ದಾರೆ.