ಎರಡೂವರೆ ವರ್ಷಗಳ ನಂತರ ಜನಪ್ರತಿನಿಧಿಗಳ ಆಡಳಿತ
ಭದ್ರಾವತಿ ನಗರಸಭೆ ಅಧ್ಯಕ್ಷರಾಗಿ ಗೀತಾ ಕೆ.ಜಿ ರಾಜ್ಕುಮಾರ್ ಮತ್ತು ಉಪಾಧ್ಯಕ್ಷರಾಗಿ ಚನ್ನಪ್ಪ ಶನಿವಾರ ನಡೆದ ಚುನಾವಣೆ ಆಯ್ಕೆಯಾದರು. ಚುನಾವಣಾಧಿಕಾರಿ ಟಿ.ವಿ ಪ್ರಕಾಶ್, ಶಾಸಕ ಬಿ.ಕೆ ಸಂಗಮೇಶ್ವರ್, ಪೌರಾಯುಕ್ತ ಕೆ. ಪರಮೇಶ್ ಅಭಿನಂದಿಸಿದರು.
ಭದ್ರಾವತಿ, ಅ. ೧೬: ನಗರಸಭೆ ನೂತನ ಅಧ್ಯಕ್ಷರಾಗಿ ವಾರ್ಡ್ ನಂ.೨ರ ಸದಸ್ಯೆ ಗೀತಾ ಕೆ.ಜಿ ರಾಜ್ಕುಮಾರ್ ಹಾಗು ಉಪಾಧ್ಯಕ್ಷರಾಗಿ ಚನ್ನಪ್ಪ ಆಯ್ಕೆಯಾಗಿದ್ದಾರೆ.
ಶನಿವಾರ ನಡೆದ ಚುನಾವಣೆಯಲ್ಲಿ ಗೀತಾ ಕೆ.ಜಿ ರಾಜ್ಕುಮಾರ್ ಮತ್ತು ಚನ್ನಪ್ಪ ತಲಾ ೮ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಗೀತಾ ಕೆ.ಜಿ ರಾಜ್ಕುಮಾರ್, ಜೆಡಿಎಸ್ ಪಕ್ಷದಿಂದ ವಾರ್ಡ್ ನಂ.೧೫ರ ಮಂಜುಳ ಬಿ.ಎಸ್ ಸುಬ್ಬಣ್ಣ ಹಾಗು ಬಿಜೆಪಿ ಪಕ್ಷದಿಂದ ವಾರ್ಡ್ ನಂ.೫ರ ಶಶಿಕಲಾ ಬಿ.ಎಸ್ ನಾರಾಯಣಪ್ಪ ಸ್ಪರ್ಧಿಸಿದ್ದು, ಈ ಪೈಕಿ ಗೀತಾ ೨೦, ಮಂಜುಳ ೧೨ ಮತ್ತು ಶಶಿಕಲಾ ೪ ಮತಗಳನ್ನು ಪಡೆದುಕೊಂಡರು.
ಪರಿಶಿಷ್ಟ ಜಾತಿಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ವಾರ್ಡ್ ನಂ.೯ರ ಚನ್ನಪ್ಪ ಮತ್ತು ಜೆಡಿಎಸ್ ಪಕ್ಷದಿಂದ ವಾರ್ಡ್ ನಂ. ೨೫ರ ಕೆ. ಉದಯ ಕುಮಾರ್ ಸ್ಪರ್ಧಿಸಿದ್ದು, ಈ ಪೈಕಿ ಚನ್ನಪ್ಪ ೨೦ ಮತಗಳನ್ನು ಹಾಗು ಕೆ. ಉದಯ ಕುಮಾರ್ ೧೨ ಮತಗಳನ್ನು ಪಡೆದುಕೊಂಡರು. ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ೪ ಸದಸ್ಯರು ತಟಸ್ಥವಾಗಿ ಉಳಿದುಕೊಂಡರು.
ಒಟ್ಟು ೩೪ ಸದಸ್ಯರಿದ್ದು, ಈ ಪೈಕಿ ಶಾಸಕ ಬಿ.ಕೆ ಸಂಗಮೇಶ್ವರ್ ೧ ಮತ ಹೊಂದಿದ್ದಾರೆ. ಒಟ್ಟು ೩೬ ಮತಗಳು ಚಲಾವಣೆಗೊಂಡಿವೆ. ನಗರಸಭೆಯಲ್ಲಿ ಕಾಂಗ್ರೆಸ್ ೧೮, ಜೆಡಿಎಸ್ ೧೨, ಬಿಜೆಪಿ ೪ ಮತ್ತು ೧ ಪಕ್ಷೇತರ ಸದಸ್ಯರಿದ್ದಾರೆ.
ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಕರ್ತವ್ಯ ನಿರ್ವಹಿಸಿದರು. ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಶಾಸಕ ಬಿ.ಕೆ ಸಂಗಮೇಶ್ವರ್ ಉಪಸ್ಥಿತರಿದ್ದರು.
No comments:
Post a Comment