Friday, May 1, 2020

ಕಟ್ಟಡ ಕಾರ್ಮಿಕರಿಂದ ಕಾರ್ಮಿಕರ ದಿನಾಚರಣೆ

ಸರ್ಕಾರದ ಸೌಲಭ್ಯ ಪಡೆದುಕೊಳ್ಳಿ   ಆತಂಕಕ್ಕೆ ಒಳಗಾಗದೆ ಕೊರೋನಾ ವೈರಸ್ ವಿರುದ್ಧ ಹೋರಾಡಿ 



ಭದ್ರಾವತಿಯಲ್ಲಿ ಕಟ್ಟಡ ಕಾರ್ಮಿಕರು ಕೂಲಿಬ್ಲಾಕ್ ಶೆಡ್ ಶ್ರೀ ಆಂಜನೇಯ ಅಗ್ರಹಾರದಲ್ಲಿರುವ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಕಛೇರಿಯಲ್ಲಿ ಶುಕ್ರವಾರ ಕಾರ್ಮಿಕರ ದಿನಾಚರಣೆ ಆಚರಿಸಿದರು. 
ಭದ್ರಾವತಿ, ಮೇ. ೧: ಕಟ್ಟಡ ಕಾರ್ಮಿಕರು ನಗರದ ಕೂಲಿಬ್ಲಾಕ್ ಶೆಡ್ ಶ್ರೀ ಆಂಜನೇಯ ಅಗ್ರಹಾರದಲ್ಲಿರುವ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಕಛೇರಿಯಲ್ಲಿ ಶುಕ್ರವಾರ ಕಾರ್ಮಿಕರ ದಿನಾಚರಣೆ ಆಚರಿಸಿದರು.
ಕೊರೋನಾ ವೈರಸ್ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕಟ್ಟಡ ಕಾರ್ಮಿಕರು ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಹಾಗೂ ಕೆಲಸದ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಲಾಯಿತು.
ಪ್ರಸ್ತುತ ಉಂಟಾಗಿರುವ ಸಂದಿಗ್ದ ಪರಿಸ್ಥಿತಿಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಕಾರ್ಮಿಕರಿಗೆ ಸಂಘದ ವತಿಯಿಂದ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗಿದೆ. ಅಲ್ಲದೆ ಸರ್ಕಾರದಿಂದ ೨ ಸಾವಿರ ರು. ಆರ್ಥಿಕ ನೆರವು ಬಂದಿದ್ದು, ಇದನ್ನು ಪಡೆದುಕೊಳ್ಳಲು ಮುಂದಾಗಬೇಕು. ಕಾರ್ಮಿಕ ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ನೋಂದಾಣಿ ಮಾಡಿಸಿಕೊಂಡು ಗುರುತಿನ ಚೀಟಿ ಪಡೆದು ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ದಿನಸಿ ಸಾಮಗ್ರಿ ಬರಲಿದ್ದು, ಕಾರ್ಮಿಕರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ಆರ್ಥಿಕ ನೆರವಿನ ಅಗತ್ಯವಿದ್ದಲ್ಲಿ ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸಿ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕೆಂದು ಕಾರ್ಮಿಕ ಮುಖಂಡರು ತಿಳಿಸಿದರು.
ಇದಕ್ಕೂ ಮೊದಲು ಕಾರ್ಮಿಕರ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಕಾರ್ಮಿಕರಿಗೆ ಸಿಹಿ ಹಂಚಲಾಯಿತು.
ಸಂಘದ ಅಧ್ಯಕ್ಷ ನಾಗರಾಜ್, ಕಾರ್ಯಾಧ್ಯಕ್ಷ ಸುಂದರ್ ಬಾಬು, ಉಪಾಧ್ಯಕ್ಷ ಚಂದ್ರಶೇಖರ್, ತಾಂತ್ರಿಕ ಸಲಹೆಗಾರ ಮನೋಹರ್, ಕಾರ್ಯದರ್ಶಿ ನಾರಾಯಣ ಸ್ವಾಮಿ, ಶಿವು, ಸುಬ್ರಮಣಿ, ನಿಸಾರ್, ಅಂತೋಣಿ ಕ್ರೂಸ್, ಹರೀಶ್ ಶಿಲ್ಪಿ, ರೆಡ್ಡಿ, ಕೃಷ್ಣ, ಕುಮಾರ್, ಅಂತೋಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Thursday, April 30, 2020

ಮೇದಾರ ಸಮಾಜದಿಂದ ದಿನಸಿ ಸಾಮಗ್ರಿ ವಿತರಣೆ

ಭದ್ರಾವತಿ ತಾಲೂಕಿನ ಮೇದಾರ ಸಮಾಜದ ವತಿಯಿಂದ ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನದಲ್ಲಿ ಮಂಗಳವಾರ ಸಂಕಷ್ಟಕ್ಕೆ ಒಳಗಾಗಿರುವವರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಭದ್ರಾವತಿ: ತಾಲೂಕಿನ ಮೇದಾರ ಸಮಾಜದ ವತಿಯಿಂದ ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನದಲ್ಲಿ ಸಂಕಷ್ಟಕ್ಕೆ ಒಳಗಾಗಿರುವವರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ತಹಸೀಲ್ದಾರ್ ಸೋಮಶೇಖರ್, ನಗರಸಭೆ ಪೌರಾಯುಕ್ತ ಮನೋಹರ್ ಚಾಲನೆ ನೀಡಿದರು. ಸಮಾಜದ ಪ್ರಮುಖರಾದ ಚಂದ್ರಶೇಖರ್, ಕೂಡ್ಲಿಗೆರೆ ಎಸ್ ಮಹದೇವ, ಕೃಷ್ಣಪ್ಪ, ನರಸಿಂಹಯ್ಯ, ಎಚ್. ವಿಶ್ವನಾಥ್, ಭಾಗ್ಯಮ್ಮ(ಶಿಕ್ಷಕರು), ಬಿ.ಎಸ್ ಮಂಜುನಾಥ್ ಮತ್ತು ಸಿ. ಮಂಜುನಾಥ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ದೇವಸ್ಥಾನದಲ್ಲಿ ಅಮ್ಮನವರಿಗೆ ಈ ಸಂಬಂಧ ವಿಶೇಷ ಪೂಜೆ ಸಲ್ಲಿಸಲಾಯಿತು.



ಮೇ.೨ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ: ನಗರದ ಮೆಸ್ಕಾಂ ೧೧೦/೧೧ ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಮೇ.೨ರಂದು ಮೊದಲನೇ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಾಗೂ ಭದ್ರಾವತಿ ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಉಂಟಾಗುತ್ತಿರುವ ವಿದ್ಯುತ್ ಅಡಚಣೆಗಳನ್ನು ಸರಿಪಡಿಸಲು ಎಂಆರ್‌ಎಸ್ ಉಪಕೇಂದ್ರದಿಂದ ವಿದ್ಯುತ್ ಸರಬರಾಜನ್ನು ಬದಲಿಸಿ ಕಡೂರು-ಶಿವಮೊಗ್ಗ ೧೧೦ ಕೆವಿ ಮಾರ್ಗದಿಂದ ನೀಡಲು ಮುಂದಾಗಿರುವ ಕಾರಣ ಅಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಭದ್ರಾವತಿ ನಗರ, ಅಂತರಗಂಗೆ, ಉಬ್ರಾಣಿ, ಹಿರಿಯೂರು, ಕಾರೇಹಳ್ಳಿ, ದೊಣಮಘಟ್ಟ, ಬಾರಂದೂರು, ತಡಸ, ಬಿಳಿಕಿ, ಬೊಮ್ಮೆನಹಳ್ಳಿ, ದೊಡ್ಡೇರಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

ತಹಸೀಲ್ದಾರ್ ಸೋಮಶೇಖರ್‌ಗೆ ಬೀಳ್ಕೊಡುಗೆ

ಸುಮಾರು ೧ ವರ್ಷದಿಂದ ತಾಲೂಕು ದಂಡಾಧಿಕಾರಿ ಕರ್ತವ್ಯ ನಿರ್ವಹಿಸಿ ಗುರುವಾರ ಸೇವೆಯಿಂದ ನಿವೃತ್ತಿ ಹೊಂದಿದ ತಹಸೀಲ್ದಾರ್ ಸೋಮಶೇಖರ್‌ಗೆ ಭದ್ರಾವತಿ ತಾಲೂಕು ಆಡಳಿತದಿಂದ ಬೀಳ್ಕೊಡುಗೆ ನೀಡಲಾಯಿತು.
ಭದ್ರಾವತಿ: ಸುಮಾರು ೧ ವರ್ಷದಿಂದ ತಾಲೂಕು ದಂಡಾಧಿಕಾರಿ ಕರ್ತವ್ಯ ನಿರ್ವಹಿಸಿ ಗುರುವಾರ ಸೇವೆಯಿಂದ ನಿವೃತ್ತಿ ಹೊಂದಿದ ತಹಸೀಲ್ದಾರ್ ಸೋಮಶೇಖರ್‌ಗೆ ತಾಲೂಕು ಆಡಳಿತದಿಂದ ಬೀಳ್ಕೊಡುಗೆ ನೀಡಲಾಯಿತು.
ನಗರಸಭೆ ಸಭಾಂಗಣದಲ್ಲಿ ಸಂಜೆ ನಡೆದ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ತಹಸೀಲ್ದಾರ್ ಸೇವೆಯನ್ನು ಪ್ರಶಂಸಿದರು. ತಾಲೂಕು ಕಛೇರಿ ಸಿಬ್ಬಂದಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ನಗರಸಭೆ ಪೌರಾಯುಕ್ತ ಮನೋಹರ್, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




ತಹಸೀಲ್ದಾರ್ ಸೋಮಶೇಖರ್ ನಿವೃತ್ತಿ

                                                         ತಹಸೀಲ್ದಾರ್ ಸೋಮಶೇಖರ್ 
ಭದ್ರಾವತಿ: ಸುಮಾರು ೧ ವರ್ಷದಿಂದ ತಾಲೂಕಿನ ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ತಹಸೀಲ್ದಾರ್ ಸೋಮಶೇಖರ್ ಗುರುವಾರ ನಿವೃತ್ತಿ ಹೊಂದಲಿದ್ದಾರೆ.
ಈ ಹಿಂದೆ ದಂಡಾಧಿಕಾರಿಯಾಗಿ ಸುಮಾರು ಎರಡೂವರೆ ವರ್ಷಗಳವರೆಗೆ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿದ್ದ ಅಂದಿನ ತಹಸೀಲ್ದಾರ್ ಎಂ.ಆರ್ ನಾಗರಾಜ್‌ರವರ ಸ್ಥಾನಕ್ಕೆ ಸೋಮಶೇಖರ್‌ರವರನ್ನು ಸರ್ಕಾರ ವರ್ಗಾವಣೆಗೊಳಿಸಿ ಆದೇಶಿಸಿತ್ತು. ಫೆ.೧೮, ೨೦೧೯ರಂದು ತಾಲೂಕು ದಂಡಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದಕ್ಕೂ ಮೊದಲು ಚನ್ನರಾಯಪಟ್ಟಣದಲ್ಲಿ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ವೃತ್ತಿ ಸೇವಾವಧಿಯ ಕೊನೆ ಅವಧಿಯನ್ನು ಇಲ್ಲಿ ಕಳೆದಿದ್ದು, ಯಾವುದೇ ಆರೋಪಗಳಿಗೆ ಗುರಿಯಾಗದೆ ಕರ್ತವ್ಯ ನಿರ್ವಹಿಸುವ ಮೂಲಕ ಗಮನ ಸೆಳೆದಿದ್ದರು.



ನಗರಸಭೆ ವ್ಯಾಪ್ತಿ ಕೆರೆಗಳ ಬೌಂಡರಿ ನಿಗದಿಪಡಿಸಲು ಒತ್ತಾಯಿಸಿ ತಾಲೂಕು ಆಡಳಿತಕ್ಕೆ ಮನವಿ

ಭದ್ರಾವತಿ ತಾಲೂಕು ಆಡಳಿತ ತಕ್ಷಣ ಕೆರೆಗಳ ಬೌಂಡರಿ ನಿಗದಿಪಡಿಸಬೇಕೆಂದು ಒತ್ತಾಯಿಸಿ ಜನ್ನಾಪುರ ಭಾರತರತ್ನ ಸರ್. ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್, ಶ್ರೀ ಡಿ ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗೂ ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗುರುವಾರ ತಹಸೀಲ್ದಾರ್ ಸೋಮಶೇಖರ್‌ಗೆ ಮನವಿ ಸಲ್ಲಿಸಲಾಯಿತು. 

ಭದ್ರಾವತಿ, ಏ. ೩೦: ನಗರಸಭೆ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಹಾಗೂ ಜಾನುವಾರುಗಳಿಗೆ ಮತ್ತು ರೈತರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡಿಸಲು ತಾಲೂಕು ಆಡಳಿತ ತಕ್ಷಣ ಕೆರೆಗಳ ಬೌಂಡರಿ ನಿಗದಿಪಡಿಸಬೇಕೆಂದು ಒತ್ತಾಯಿಸಿ ಜನ್ನಾಪುರ ಭಾರತರತ್ನ ಸರ್. ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್, ಶ್ರೀ ಡಿ ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗೂ ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗುರುವಾರ ತಹಸೀಲ್ದಾರ್ ಸೋಮಶೇಖರ್‌ಗೆ ಮನವಿ ಸಲ್ಲಿಸಲಾಯಿತು.
ನಗರಸಭೆ ವ್ಯಾಪ್ತಿಯಲ್ಲಿ ಕೆರೆಗಳ ಅಭಿವೃದ್ಧಿಗೆ ನಗರಸಭೆ ಪೌರಾಯುಕ್ತ ಮನೋಹರ್ ಹೆಚ್ಚಿನ ಆಸಕ್ತಿ ವಹಿಸಿದ್ದು, ಈ ಹಿನ್ನಲೆಯಲ್ಲಿ ತಕ್ಷಣ ನಗರಸಭೆ ವ್ಯಾಪ್ತಿಯಲ್ಲಿನ ಸರ್ವೆ ನಂ. ೩೨ರ ಕಡದಕಟ್ಟೆಯ ಸುಮಾರು ೧ ಎಕರೆ ೩೫ ಗುಂಟೆ ವಿಸ್ತೀರ್ಣವುಳ್ಳ ಕೆರೆ, ಸರ್ವೆ ನಂ. ೧೬ ಹೆಬ್ಬಂಡಿ ಗ್ರಾಮದ ಸುಮಾರು ೮ ಎಕೆರೆ ೬ ಗುಂಟೆ ವಿಸ್ತೀರ್ಣವುಳ್ಳ ಕೆರೆ, ಸರ್ವೆ ನಂ.೧೭ ಹೆಬ್ಬಂಡಿ ಗ್ರಾಮದ ಸುಮಾರು ೨೮ ಗುಂಟೆ ವಿಸ್ತೀಣವುಳ್ಳ ಕೆರೆ, ಸರ್ವೆ ನಂ. ೨೬ ಕವಲಗುಂದಿ ಗ್ರಾಮದ ಸುಮಾರು ೮ ಎಕರೆ ೩೮ ಗುಂಟೆ ವಿಸ್ತೀರ್ಣವುಳ್ಳ ಕೆರೆ, ಸರ್ವೆ ನಂ.೯೦ ಜನ್ನಾಪುರ ೬ ಎಕರೆ ೧೬ ಗುಂಟೆ ವಿಸ್ತೀರ್ಣವುಳ್ಳ ಕೆರೆ, ಸರ್ವೆ ನಂ.೪೮ ಹುತ್ತಾದಲ್ಲಿರುವ ಸುಮಾರು ೮ ಎಕರೆ ೩೬ ಗುಂಟೆ ವಿಸ್ತೀರ್ಣವುಳ್ಳ ಕೆರೆ, ಸರ್ವೆ ನಂ.೨೮ ಹುತ್ತಾದಲ್ಲಿರುವ ಸುಮಾರು ೨ ಎಕರೆ ೨೯ ಗುಂಟೆ ವಿಸ್ತೀರ್ಣವುಳ್ಳ ಕೆರೆ, ಸರ್ವೆ ನಂ.೧ ಬೊಮ್ಮನಕಟ್ಟೆಯಲ್ಲಿರುವ ಸುಮಾರು ೧ ಎಕರೆ ೧೮ ಗುಂಟೆ ವಿಸ್ತೀರ್ಣವುಳ್ಳ ಕೆರೆ, ಸರ್ವೆ ನಂ.೩೬ರ ೧ ಎಕರೆ ೧೨ ಗುಂಟೆ ವಿಸ್ತೀರ್ಣವುಳ್ಳ ಕೆರೆ, ಸರ್ವೆ ನಂ.೫೭ರ ಸೀಗೆಬಾಗಿ ಗ್ರಾಮದ ಸುಮಾರು ೫ ಎಕರೆ ೧ ಗುಂಟೆ ವಿಸ್ತೀರ್ಣವುಳ್ಳ ಕೆರೆ, ಸರ್ವೆ ನಂ.೮ರ ಸುಮಾರು ೨ ಎಕರೆ ೨ ಗುಂಟೆ ವಿಸ್ತೀರ್ಣವುಳ್ಳ ಕೆರೆ, ಸರ್ವೆ ನಂ.೩೭ರ ಕಣಕಟ್ಟೆ ಸುಮಾರು ೫ ಎಕರೆ ೨೫ ಗುಂಟೆ ವಿಸ್ತೀರ್ಣವುಳ್ಳ ಕೆರೆ, ಸರ್ವೆ ನಂ.೩೩ರ ಕಣಕಟ್ಟೆ ಗ್ರಾಮದ ಸುಮಾರು ೨ ಎಕರೆ ೨೯ ಗುಂಟೆ ಹಾಗೂ ಸರ್ವೆ ನಂ.೩ರ ಕಬಳಿಕಟ್ಟೆ ಗ್ರಾಮದ ಸುಮಾರು ೩ ಎಕರೆ ೨೫ ಗುಂಟೆ ವಿಸ್ತೀರ್ಣವುಳ್ಳ ಕೆರೆಗಳ ಬೌಂಡರಿ ನಿಗದಿಪಡಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಂತಿಮ ಕೊಳಚೆ ಪ್ರದೇಶ ಘೋಷಣೆ : ಕೃತಜ್ಞತೆ
ನಗರಸಭೆ ವಾರ್ಡ್ ನಂ. ೨೮ರ ಹಾಲಪ್ಪ ಕಾಲೋನಿ ಪ್ರದೇಶವನ್ನು ಅಂತಿಮ ಕೊಳಚೆ ಪ್ರದೇಶವನ್ನಾಗಿ ಘೋಷಿಸುವಂತೆ ಒತ್ತಾಯಿಸಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದ ಪರಿಣಾಮವಾಗಿ ಜಿಲ್ಲಾಧಿಕಾರಿಗಳು ಈ ಹಿಂದೆ ಹೊರಡಿಸಿದ್ದ ಪ್ರಿಲಿಮಿನರಿ ನೋಟಿಫಿಕೇಷನ್ ರದ್ದುಗೊಳಿಸಿ ಅಂತಿಮ ಕೊಳಚೆ ಪ್ರದೇಶವೆಂದು ಘೋಷಿಸಿದ್ದು, ಈ ಸಂಬಂಧ ಹೊರಡಿಸಲಾಗಿರುವ ನೋಟಿಫಿಕೇಷನ್ ರಾಜ್ಯಪತ್ರದಲ್ಲಿ ಪ್ರಕಟಿಸಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಾರ್ಯಪಾಲಕ ಅಭಿಯಂತರರಿಗೆ ಆದೇಶಿಸಿದ್ದಾರೆ.
ಅಂತಿಮ ಕೊಳಚೆ ಪ್ರದೇಶ ಘೋಷಣೆಗೆ ಕಾರಣಕರ್ತರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್, ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಅವರಿಗೆ ವೇದಿಕೆ ವತಿಯಿಂದ ಕೃತಜ್ಞತೆ ಸಲ್ಲಿಸಲಾಗಿದೆ.
ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಛೇರ್ಮನ್ ಆರ್. ವೇಣುಗೋಪಾಲ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್, ಮುಖಂಡರಾದ ವಿಶ್ವನಾಥರಾವ್ ಗಾಯಕ್ವಾಡ್, ಆರ್. ಮುಕುಂದಯ್ಯ, ರಮಾ ವೆಂಕಟೇಶ್, ಅಂತೋಣಿ ಗ್ಸೇವಿಯರ್, ವಿ ಪ್ರತಾಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




Wednesday, April 29, 2020

ಎಂಪಿಎಂ ಕಾರ್ಖಾನೆಗೆ ೧೪.೨೯ ಕೋ. ರು. ಸಾಲ


ಆಡಳಿತ ಮಂಡಳಿ ಮನವಿಗೆ ಸ್ಪಂದಿಸಿದ ಸರ್ಕಾರ
ಭದ್ರಾವತಿ: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಗೆ ಮೇ.೧೫ರೊಳಗೆ ೧೪.೨೯ ಕೋ.ರು ಸಾಲ ಮಂಜೂರಾತಿ ಮಾಡುವಂತೆ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ವಿಶೇಷ ಕಾರ್ಯದರ್ಶಿ  ಸಂಬಂಧಪಟ್ಟ ಇಲಾಖೆಯ ಉಪ ನಿರ್ದೇಶಕರಿಗೆ ಬುಧವಾರ ಪತ್ರ ಬರೆದಿದ್ದಾರೆ.
ಕಾರ್ಖಾನೆ ಆಡಳಿತ ಮಂಡಳಿ ಏ.೧೩ರಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಮೇ.೧೫ ರಿಂದ ಜೂ.೨೦ರ ವರೆಗಿನ ಲೆಕ್ಕಚಾರದಂತೆ ವೇತನ ಬಾಕಿ, ನಿರ್ವಹಣಾ ವೆಚ್ಚ ೨೬೦೮ ಲಕ್ಷ ರು. ಅಂದಾಜಿಸಲಾಗಿದೆ. ಪ್ರಸ್ತುತ ಕಾರ್ಖಾನೆ ಆರ್ಥಿಕ ಪರಿಸ್ಥಿತಿ ತೀರ ಸಂಕಷ್ಟಕ್ಕೆ ಒಳಗಾಗಿದ್ದು, ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿತ್ತು.
ಮನವಿಗೆ ಸ್ಪಂದಿಸಿರುವ ಸರ್ಕಾರ ೧೪೨೯ ಲಕ್ಷ ರು. ಸಾಲ ಮಂಜೂರಾತಿ ಮಾಡುವಂತೆ ಸಂಬಂಧ ಇಲಾಖೆಗೆ ಆದೇಶಿಸಿದೆ. ಈ ಹಿನ್ನಲೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ  ವಿಶೇಷ ಕಾರ್ಯದರ್ಶಿ ಎನ್.ಆರ್ ಜಗನ್‌ಮಾತರವರು ಖನಿಜ ಭವನದ ಉಪ ನಿರ್ದೇಶಕರಿಗೆ ಸಾಲ ಮಂಜೂರಾತಿಗೆ ಸೂಚಿಸಿದ್ದಾರೆ.