Thursday, July 23, 2020

ಉಕ್ಕಿನ ನಗರದಲ್ಲಿ ಪುನಃ ಸೋಂಕು ಹೆಚ್ಚಳ : ಒಂದೇ ದಿನ 19 ಪ್ರಕರಣ ಪತ್ತೆ

ಭದ್ರಾವತಿ, ಜು. ೨೩: ತಾಲೂಕಿನಲ್ಲಿ ಕೊರೋನಾ ಸೋಂಕು ಮತ್ತಷ್ಟು ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಗುರುವಾರ ಒಂದೇ ದಿನ 19 ಪ್ರಕರಣ ದಾಖಲಾಗಿವೆ. 
ನಗರಸಭೆ ವ್ಯಾಪ್ತಿಯ ನ್ಯೂಟೌನ್ ಭಾಗದಲ್ಲಿ 42 ವರ್ಷದ ಮಹಿಳೆ, ಹುಡ್ಕೋ ಕಾಲೋನಿಯಲ್ಲಿ 22 ವರ್ಷ ಯುವತಿ, 48 ವರ್ಷದ ಮಹಿಳೆ, ಬೋವಿ ಕಾಲೋನಿಯಲ್ಲಿ 65 ವರ್ಷದ ವ್ಯಕ್ತಿ, ಬಿ.ಎಚ್ ರಸ್ತೆ ವಿಜಯ ಬ್ಯಾಂಕ್  ಬಳಿ 29 ವರ್ಷದ ಯುವಕ, ಹೊಸಮನೆ ಎನ್‌ಎಂಸಿ ಬಡಾವಣೆಯಲ್ಲಿ 58 ವರ್ಷದ ವ್ಯಕ್ತಿ, ಹೊಸಮನೆ ಮುಖ್ಯರಸ್ತೆಯಲ್ಲಿ 75 ವರ್ಷ ವೃದ್ಧ, ಶಿವರಾಮ ನಗರದಲ್ಲಿ 17 ವರ್ಷದ ಯುವತಿ, 19 ವರ್ಷದ ಯುವಕ, ೫೮ ಮತ್ತು ೩೮ ವರ್ಷದ ಮಹಿಳೆ ಮತ್ತು ಖಲಂದರ್ ನಗರದಲ್ಲಿ 66 ವರ್ಷದ ಮಹಿಳೆ ಹಾಗೂ 74 ವರ್ಷದ ವೃದ್ಧ ಸೋಂಕಿಗೆ ಒಳಗಾಗಿದ್ದಾರೆ. 
ಉಳಿದಂತೆ ಗ್ರಾಮಾಂತರ ಭಾಗದಲ್ಲಿ ದೇವರನರಸೀಪುರ ಗ್ರಾಮದ 6 ವರ್ಷದ ಹೆಣ್ಣು ಮಗು, 32 ವರ್ಷದ ಮಹಿಳೆ ಹಾಗೂ ಬಾರಂದೂರು ಗ್ರಾಮದಲ್ಲಿ 44 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.  ಒಟ್ಟು  ತಾಲೂಕಿನಲ್ಲಿ 19  ಸೋಂಕು ಕಂಡುಬಂದಿದೆ.
   ಕಳೆದ 2 ದಿನಗಳ ಹಿಂದೆ ಒಂದೇ ದಿನ 10 ಪ್ರಕರಣ ಪತ್ತೆಯಾಗಿತ್ತು. ಇದೀಗ ಏಕಾಏಕಿ 19ಕ್ಕೆ ಏರಿಕೆಯಾಗಿದೆ. ಇದರಿಂದಾಗಿನಗರ ಹಾಗೂ ಗ್ರಾಮಾಂತರ ಭಾಗದ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.
ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ,  ಆರೋಗ್ಯ ನಿರೀಕ್ಷಕಿ ಲತಾಮಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ತಂಡ ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಸ್ಯಾನಿಟೈಜರ್ ಕೈಗೊಂಡು ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿಸಿದೆ.

ನೂತನ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ. ಜಿ. ಮಂಜುನಾಥ್

ಡಾ. ಜಿ. ಮಂಜುನಾಥ್ 
ಭದ್ರಾವತಿ, ಜು. ೨೩: ತಾಲೂಕು ಪಂಚಾಯಿತಿ ನೂತನ ಕಾರ್ಯನಿರ್ವಹಣಾಧಿಕಾರಿಯಾಗಿ ಡಾ. ಜಿ. ಮಂಜುನಾಥ್ ಅಧಿಕಾರ ವಹಿಸಿಕೊಂಡಿದ್ದಾರೆ.
ಡಾ. ಜಿ. ಮಂಜುನಾಥ್ ಗ್ರೇಡ್-೧ ಅಧಿಕಾರಿಯಾಗಿದ್ದು, ಸಾಕಷ್ಟು ವೃತ್ತಿ ಸೇವಾನುಭವ ಹೊಂದಿದ್ದಾರೆ. ಸುಮಾರು 2 ತಿಂಗಳಿನಿಂದ ಖಾಲಿ ಇದ್ದ ಹುದ್ದೆಗೆ ಸರ್ಕಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ.  ಇದುವರೆಗೂ ಪ್ರಭಾರ ಅಧಿಕಾರಿಯಾಗಿದ್ದ   ಡಾ. ಕೊಟ್ರೇಶಪ್ಪ ಅವರಿಂದ  ಅಧಿಕಾರ ಸ್ವೀಕರಿಸಿದರು.  

‘ರಾಜ ಗೃಹ’ ಧ್ವಂಸ ಪ್ರಕರಣಕ್ಕೆ ಖಂಡನೆ, ಸ್ಪೃಶ್ಯ ಸಮುದಾಯಗಳನ್ನು ಎಸ್‌ಸಿ ಪಟ್ಟಿಯಿಂದ ಕೈ ಬಿಡಲು ಆಗ್ರಹ

 ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್‌ರವರ ‘ರಾಜ ಗೃಹ’ದ ಧ್ವಂಸ ಪ್ರಕರಣ ಖಂಡಿಸಿ ಹಾಗೂ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಪರಿಶಿಷ್ಟ ಜಾತಿ ಪಟ್ಟಿಯಿಂದ ಸ್ಪೃಶ್ಯ ಸಮುದಾಯಗಳನ್ನು ಕೈಬಿಡುವಂತೆ ಆಗ್ರಹಿಸಿ ಭದ್ರಾವತಿಯಲ್ಲಿ ಹೊಲೆಯ ಮತ್ತು ಮಾದಿಗ ಸಮನ್ವಯ ಸಮಿತಿ ವತಿಯಿಂದ ಗುರುವಾರ ತಹಸೀಲ್ದಾರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಜು. ೨೩: ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್‌ರವರ ‘ರಾಜ ಗೃಹ’ದ ಧ್ವಂಸ ಪ್ರಕರಣ ಖಂಡಿಸಿ ಹಾಗೂ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಪರಿಶಿಷ್ಟ ಜಾತಿ ಪಟ್ಟಿಯಿಂದ ಸ್ಪೃಶ್ಯ ಸಮುದಾಯಗಳನ್ನು ಕೈಬಿಡುವಂತೆ ಆಗ್ರಹಿಸಿ ಹೊಲೆಯ ಮತ್ತು ಮಾದಿಗ ಸಮನ್ವಯ ಸಮಿತಿ ವತಿಯಿಂದ ಗುರುವಾರ ತಹಸೀಲ್ದಾರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 
ಸಮಿತಿಯ ಪ್ರಮುಖರು ಮಾತನಾಡಿ, ‘ರಾಜ ಗೃಹ’ದ ಧ್ವಂಸ ಪ್ರಕರಣ ಅಂಬೇಡ್ಕರ್‌ರವರ ಆದರ್ಶ, ತತ್ವ, ಸಿದ್ದಾಂತ ಹಾಗೂ ಆಶಯಗಳಿಗೆ ವಿರುದ್ಧವಾಗಿದ್ದು, ಇದೊಂದು ದೇಶ ದ್ರೋಹ ಪ್ರಕರಣವಾಗಿದೆ. ಈ ಹಿನ್ನಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. 
ಸ್ಪೃಶ್ಯ ಸಮುದಾಯಗಳಾದ ಭೋವಿ, ಕೊರಮ, ಕೊರಚ, ಲಂಬಾಣಿ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವಂತೆ ಸರ್ವೋಚ್ಛ ನ್ಯಾಯಾಲಯ ಈಗಾಗಲೇ ಆದೇಶಿಸಿದೆ. ಆದರೂ ಸಹ ಈ ಜಾತಿಗಳನ್ನು ಕೈಬಿಡುವಲ್ಲಿ ಮೀನಾಮೇಷ ಮಾಡಲಾಗುತ್ತಿದೆ. ಇಂದಿನ ಸರ್ಕಾರಗಳು ಸ್ಪೃಶ್ಯ ಸಮುದಾಯಗಳನ್ನು ಓಲೈಕೆ ಮಾಡುವ ನಿಟ್ಟಿನಲ್ಲಿ ಮುಂದಾಗಿವೆ ಎಂದು ಆರೋಪಿಸಿದರು. 
ಪ್ರಮುಖರಾದ ಶಿವಮೊಗ್ಗ ಜಿಲ್ಲಾ ಪರಿಶಿಷ್ಟ ಜಾತಿ ಆದಿದ್ರಾವಿಡ ತಮಿಳು ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ. ಶ್ರೀನಿವಾಸನ್, ದಲಿತ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಬಸಪ್ಪ, ಛಲವಾದಿ ಮಹಾಸಭಾ ಅಧ್ಯಕ್ಷ ಸುರೇಶ್, ಬಾಪೂಜಿ ಹರಿಜನ ಸೇವಾ ಸಂಘದ ಅಧ್ಯಕ್ಷ ಚಂದ್ರಪ್ಪ, ಮುಖಂಡರಾದ ಎಚ್. ಜಯರಾಜ್,  ಶಿಕ್ಷಕರಾದ ಎ. ತಿಪ್ಪೇಸ್ವಾಮಿ, ಯು. ಮಹದೇವಪ್ಪ, ಆನಂದಮೂರ್ತಿ, ತಾಲೂಕು ಕಸಾಪ ಕಾರ್ಯದರ್ಶಿ ಸಿ. ಚನ್ನಪ್ಪ,  ಆದಿತ್ಯಶ್ಯಾಮ, ಜಗದೀಶ್, ಎಚ್.ಎಂ ಮಹಾದೇವಯ್ಯ, ರಾಜೇಂದ್ರ, ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

Wednesday, July 22, 2020

ಭದ್ರಾವತಿಯಲ್ಲಿ ೫ ಕೊರೋನಾ ಸೋಂಕು ಪತ್ತೆ

ಭದ್ರಾವತಿ, ಜು. ೨೨: ತಾಲೂಕಿನಲ್ಲಿ ಬುಧವಾರ ಪುನಃ ೫ ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಈ ಪೈಕಿ ಓರ್ವ ಪೊಲೀಸ್ ಸಿಬ್ಬಂದಿ ಮತ್ತು ಓರ್ವ ಕೆಎಸ್‌ಆರ್‌ಟಿಸಿ ನೌಕರ ಸೇರಿದ್ದಾರೆ. 
ಹಳೇನಗರದ ಕಂಚಿಬಾಗಿಲು ವೃತ್ತದ ಅಂಬೇಡ್ಕರ್ ನಗರದ ೨೮ ವರ್ಷದ ಪೊಲೀಸ್ ಸಿಬ್ಬಂದಿ ಮತ್ತು ೪೮ ವರ್ಷದ ವ್ಯಕ್ತಿಗೆ, ನ್ಯೂಟೌನ್ ಬೆಣ್ಣೆಕೃಷ್ಣ ಸರ್ಕಲ್ ಬಳಿ ೩೯ ವರ್ಷದ ವ್ಯಕ್ತಿಗೆ, ೫೫ ವರ್ಷದ ಕೆಎಸ್‌ಆರ್‌ಟಿಸಿ ನೌಕರನಿಗೆ ಮತ್ತು ಸಿರಿಯೂರು ತಾಂಡದ ೧೫ ವರ್ಷದ ಹುಡುಗನಿಗೆ ಸೋಂಕು ತಗುಲಿದೆ. 
ಮಂಗಳವಾರ ೧೦ ಪ್ರಕರಣ ದಾಖಲಾಗಿತ್ತು. ಬುಧವಾರ ೫ಕ್ಕೆ ಇಳಿದಿದ್ದು, ಇತ್ತೀಚೆಗೆ ಗ್ರಾಮೀಣ ಭಾಗದಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಇದರಿಂದಾಗಿ ಗ್ರಾಮೀಣ ಭಾಗದ ಜನರು ಸಹ ಆತಂಕಕ್ಕೆ ಒಳಗಾಗುವಂತಾಗಿದೆ. 

ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕು

ಭದ್ರಾವತಿ, ಜು. ೨೨: ನಗರದ ಹೊಸಮನೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್  ಸಿಬ್ಬಂದಿ ಒಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ಬುಧವಾರ ಪತ್ತೆಯಾಗಿದ್ದು, ಇದರಿಂದಾಗಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಲ್ಲಿ ಆತಂಕ ಹೆಚ್ಚಾಗಿದೆ. 
ಸುಮಾರು ೨೭ ವರ್ಷದ ಪೊಲೀಸ್ ಸಿಬ್ಬಂದಿಗೆ ಕಳೆದ ೪ ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಕೊರೋನಾ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಗಂಟಲು ಮಾದರಿಯನ್ನು ಪ್ರಯೋಗಾಯಲಕ್ಕೆ ಕಳುಹಿಸಿ ಕೊಡಲಾಗಿತ್ತು. ಇದೀಗ ಸೋಂಕು ತಗುಲಿರುವುದು ಖಚಿತವಾಗಿದ್ದು, ಈ ಹಿನ್ನಲೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಕಳೆದ ಕೆಲವು ದಿನಗಳ ಹಿಂದೆ ಹೊಸಮನೆ ಎನ್‌ಎಂಸಿ ಬಡಾವಣೆ ಶಾಸಕ ಬಿ.ಕೆ ಸಂಗಮೇಶ್ವರ್ ನಿವಾಸದ ಸಮೀಪದ ರಸ್ತೆಯೊಂದರಲ್ಲಿ ಇಬ್ಬರು ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಆ ವ್ಯಾಪ್ತಿಯನ್ನು ಕಂಟೈನ್ಮೆಂಟ್  ವಲಯವನ್ನಾಗಿಸಲಾಗಿತ್ತು. ಈ ಪ್ರದೇಶದಲ್ಲಿ ಇದೀಗ ಸೋಂಕಿಗೆ ಒಳಗಾಗಿರುವ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದರು ಎನ್ನಲಾಗಿದೆ. 


ಕಸಾಪ ವತಿಯಿಂದ ಆನ್‌ಲೈನ್ ಮುಖಾಂತರ ಗಾಯನ ಸ್ಪರ್ಧೆ

ಭದ್ರಾವತಿ, ಜು. ೨೨: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮೊದಲ ಬಾರಿಗೆ ಆನ್‌ಲೈನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ೭೪ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೇಶ ಭಕ್ತಿಗೀತೆಗಳ(ತಾಳ, ಪರಿಕರಗಳು, ಕೊರೋಕಿ) ಇಲ್ಲದೆ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ. 
೧೪ ವರ್ಷದೊಳಗಿನ ಕಿರಿಯರ ಮತ್ತು ೧೫ ವರ್ಷ ಮೇಲ್ಪಟ್ಟ ಹಿರಿಯರ ಎರಡು ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ೩ ರಿಂದ ೪ ನಿಮಿಷದ ಗಾಯನದ ವಿಡಿಯೋ ಮಾಡಿ ಕಳಿಸಿಕೊಡಬೇಕು. ವಿಡಿಯೋ ಮಾಡುವಾಗ ಮೊದಲು ಸ್ಪರ್ಧಿಯ ಹೆಸರು, ವಿಳಾಸ ತಿಳಿಸಬೇಕು. ಗಾಯನದ ವಿಡಿಯೋ ಕ್ಲಿಪ್ ಮೊ: ೯೭೩೧೧೫೭೭೯೩ ಅಥವಾ ೯೪೪೯೯೫೧೩೦೦ ವಾಟ್ಸ್‌ಆಪ್ ನಂಬರ್‌ಗೆ ಜು.೩೦, ಸಂಜೆ ೫ ಗಂಟೆಯೊಳಗೆ ಕಳಿಸಿ ಕೊಡಬೇಕು. 
ವಿಜೇತರಾದ ಮೊದಲ ಮಂದಿಗೆ ಆ.೧೫ರ ಸ್ವಾತಂತ್ರ್ಯ ದಿನಾಚರಣೆಯಂದು ಬಹುಮಾನಗಳನ್ನು ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗೆ ಕಸಾಪ ಅಧ್ಯಕ್ಷ ಅಪೇಕ್ಷ ಮಂಜುನಾಥ್, ಮೊ: ೯೭೩೧೧೫೭೭೯೩, ಕಾರ್ಯದರ್ಶಿ ಚನ್ನಪ್ಪ, ಮೊ: ೯೪೪೯೯೫೧೩೦೦ ಸಂಖ್ಯೆಗೆ ಕರೆ ಮಾಡಬಹುದಾಗಿದೆ. 

ಸಹೋದರನಿಂದಲೇ ಅನ್ಯಾಯ : ಬೀದಿಗೆಬಿದ್ದ ಕುಟುಂಬ

ಇಬ್ಬರು ಅಂಧ ವಿಕಲಚೇತನ ಮಕ್ಕಳನ್ನು ಹೊಂದಿರುವ ಭದ್ರಾವತಿ ತಾಲೂಕಿನ ಅಗರದಹಳ್ಳಿ ಗ್ರಾಮದ ನಿವಾಸಿ ಖಾಜಾವಲಿ ಕುಟುಂಬ. 
ಭದ್ರಾವತಿ, ಜು. ೨೨: ಇಬ್ಬರು ಅಂಧ ವಿಕಲಚೇತನ ಮಕ್ಕಳನ್ನು ಹೊಂದಿರುವ ತಾಲೂಕಿನ ಅಗರದಹಳ್ಳಿ ಗ್ರಾಮದ ಕುಟುಂಬವೊಂದರ ಬದುಕು ಇದೀಗ ಬೀದಿಗೆ ಬೀಳುವ ಹಂತಕ್ಕೆ ತಲುಪಿದ್ದು, ೧ ಎಕರೆ ಬಗರ್‌ಹುಕುಂ ಸಾಗುವಳಿ ಜಮೀನಿಗಾಗಿ ತಾಲೂಕು ದಂಡಾಧಿಕಾರಿಗಳ ಮೊರೆ ಹೋಗಿದೆ. 
ಅಗರದಹಳ್ಳಿ ಗ್ರಾಮದ ನಿವಾಸಿ ಖಾಜಾವಲಿ ಕುಟುಂಬ ಸಂಕಷ್ಟಕ್ಕೆ ಒಳಗಾಗಿದೆ. ಬಹಳ ವರ್ಷಗಳಿಂದ ಖಾಜಾವಲಿ ತನ್ನ ಅಣ್ಣ ಸಹೋದರ ಅಬ್ದುಲ್ ಜೊತೆ ವಾಸಿಸುತ್ತಿದ್ದು, ರಜೀಯಾ ಬೇಗಂ ಎಂಬ  ಮಹಿಳೆಯನ್ನು ವಿವಾಹವಾಗಿ ಇಬ್ಬರು ಅಂಧ ವಿಕಲಚೇತನ ಮಕ್ಕಳನ್ನು ಹೊಂದಿದ್ದಾರೆ. ಈ ಕುಟುಂಬಕ್ಕೆ ಕಾನೂನು ಪ್ರಕಾರ ಬರಬೇಕಾದ ೧ ಎಕರೆ ಜಮೀನು ಲಭಿಸಿಲ್ಲ. ಅಣ್ಣನಿಂದಲೇ ಅನ್ಯಾಯಕ್ಕೆ ಒಳಗಾಗಿದೆ. 
ಘಟನೆ ವಿವರ: 
ಖಾಜಾವಲಿ ಮತ್ತು ಅಬ್ದುಲ್ ಇಬ್ಬರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾಗ ತಾಲೂಕಿನ ಹಂಚಿನ ಸಿದ್ದಾಪುರ ಗ್ರಾಮದ ಸರ್ವೆ ನಂ.೩೨ರಲ್ಲಿ  ೨ ಎಕರೆ ಬಕರ್‌ಹುಕುಂ ಸಾಗುವಳಿ ಜಮೀನು ಹೊಂದಿದ್ದು, ಸರ್ಕಾರ ಕಾನೂನು ಪ್ರಕಾರ ಒಂದು ಕುಟುಂಬಕ್ಕೆ ೧ ಎಕರೆ ಬಗರ್‌ಹುಕುಂ ಜಮೀನು ಮಂಜೂರಾತಿ ಮಾಡಿದ್ದು, ಆದರೆ ಈ ೨ ಎಕರೆ ಜಮೀನು ಮಾತ್ರ ಸಹೋದರ ಅಬ್ದುಲ್ ಕುಟುಂಬಕ್ಕೆ ನೀಡಲಾಗಿದೆ. ಅಲ್ಲದೆ ಜಮೀನು ದಾಖಲೆ ಪತ್ರಗಳನ್ನು ಸಹ ಮಾಡಿಕೊಡಲಾಗಿದೆ. ೨ ಎಕರೆ ಜಮೀನಿನಲ್ಲಿ ೧ ಎಕರೆ ಖಾಜಾವಲಿ ಕುಟುಂಬಕ್ಕೆ ನೀಡದೆ ಅನ್ಯಾಯ ವೆಸಗಲಾಗಿದೆ. 
ಸಹೋದರ ಅಬ್ದುಲ್ ತನ್ನ ಬಳಿ ದಾಖಲೆ ಪತ್ರಗಳು ಇರುವ ಕಾರಣ ಖಾಜಾವಲಿ ಕುಟುಂಬ ಜಮೀನು ಸಾಗುವಳಿ ಮಾಡದಂತೆ ತಡೆಯೊಡ್ಡುತ್ತಿದೆ. ಇದರಿಂದಾಗಿ ಆತಂಕಕ್ಕೆ ಒಳಗಾಗಿರುವ ಕುಟುಂಬ ರೈತ ಸಂಘದ ಬಳಿ ತನ್ನ ಸಂಕಷ್ಟ ಹೇಳಿಕೊಂಡಿದೆ. 
ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬದ ನೆರವಿಗೆ ರೈತ ಸಂಘದ ಹಿರಿಯ ಮುಖಂಡ ಯಶವಂತರಾವ್ ಘೋರ್ಪಡೆ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಮುಂದಾಗಿದ್ದು, ಬುಧವಾರ ಈ ಸಂಬಂಧ ಅನ್ಯಾಯಕ್ಕೆ ಒಳಗಾಗಿರುವ ಕುಟುಂಬದೊಂದಿಗೆ ತಾಲೂಕು ಕಛೇರಿಗೆ ಆಗಮಿಸಿ ತಹಸೀಲ್ದಾರ್ ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಡುವಂತೆ ಮನವಿ ಮಾಡಿದ್ದಾರೆ. 
ಅಧಿಕಾರಿಗಳಿಂದ ಕಾನೂನು ಉಲ್ಲಂಘನೆ: 
ರೈತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್ ಪತ್ರಿಕೆಯೊಂದಿಗೆ ಮಾತನಾಡಿ, ಅಧಿಕಾರಿಗಳು ಕಾನೂನು ಉಲ್ಲಂಘಿಸಿ ಜಮೀನು ಮಂಜೂರಾತಿ ಮಾಡಿದ್ದಾರೆ. ನಡೆದಿರುವ ತಪ್ಪನ್ನು ಅವರೇ ಸರಿಪಡಿಸಿ ಕೊಡಬೇಕು. ಇಬ್ಬರು ಅಂಧ ಮಕ್ಕಳೊಂದಿಗೆ ಜೀವನ ನಡೆಸುವುದೇ ಕಷ್ಟಕರವಾಗಿ ಈ ನಡುವೆ ಈ ಕುಟುಂಬಕ್ಕೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ. ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಬೆದರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ಕುಟುಂಬದ ನೆರವಿಗೆ ತಾಲೂಕು ಆಡಳಿತ ಮುಂದಾಗಬೇಕು. ತಹಸೀಲ್ದಾರ್‌ರವರು ಸಮಸ್ಯೆ ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದರು.