Thursday, January 14, 2021

ಎರಡು ದಿನ ಬ್ಯಾಂಕಿಂಗ್ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಾಗಾರ

ಭದ್ರಾವತಿ, ಜ. ೧೪: ಕಳೆದ ಸುಮಾರು ೧೨ ವರ್ಷಗಳಿಂದ ಸಿಎ ತರಬೇತಿಯಲ್ಲಿ ಗುರುತಿಸಿಕೊಂಡಿರುವ ಶಿವಮೊಗ್ಗ ಅಕಾಡೆಮಿ ಇದೀಗ ಬ್ಯಾಂಕಿಂಗ್, ರೈಲ್ವೆ, ಎಲ್‌ಐಸಿ ಮತ್ತು ಜಿಐಸಿ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿ ನೀಡಲು ಮುಂದಾಗಿದೆ. ಆಕಾಡೆಮಿ ವತಿಯಿಂದ ಜ.೧೭ ಮತ್ತು ೧೮ ಎರಡು ದಿನ ಬ್ಯಾಂಕಿಂಗ್ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
    ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨ ಗಂಟೆವರೆಗೆ ಮಥುರಾ ಪ್ಯಾರಡೈಸ್ ಸಮೀಪದ ವಾತ್ಸಲ್ಯ ಆಸ್ಪತ್ರೆ ಬಳಿ ಇರುವ ಆಕಾಡೆಮಿಯಲ್ಲಿ ಕಾರ್ಯಾಗಾರ ನಡೆಯಲಿದ್ದು, ಫೆ.೧ರಿಂದ ತರಬೇತಿಗಳು ಆರಂಭಗೊಳ್ಳಲಿವೆ. ಈಗಾಗಲೇ ನೊಂದಾಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ನಗರದ ನಿವಾಸಿ ಜೆಡಿಯು ಯುವ ಮುಖಂಡ ಶಶಿಕುಮಾರ್ ಎಸ್. ಗೌಡ ಹಾಗು ಸುಬ್ರಮಣ್ಯ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ: ೯೩೮೦೬೮೫೬೩೫ ಅಥವಾ ೯೩೪೨೪೪೨೩೦೨ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

Wednesday, January 13, 2021

ಕ್ಷಿಪ್ರ ಕಾರ್ಯ ಪಡೆ ಘಟಕ ಆರಂಭಕ್ಕೆ ನಾನೇ ಕಾರಣಕರ್ತ

ಸುದ್ದಿಗೋಷ್ಠಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್

ಶಾಸಕ ಬಿ.ಕೆ ಸಂಗಮೇಶ್ವರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
     ಭದ್ರಾವತಿ, ಜ. ೧೩:  ನಗರದ ಬುಳ್ಳಾಪುರ ಮಿಲ್ಟ್ರಿಕ್ಯಾಂಪ್ ಬಳಿ ಜ.೧೬ರಿಂದ ಆರಂಭಗೊಳ್ಳುತ್ತಿರುವ ಕೇಂದ್ರ ಮೀಸಲು ಪೊಲೀಸ್ ಪಡೆಯ ವಿಶೇಷ ವಿಭಾಗವಾಗಿರುವ ಕ್ಷಿಪ್ರ ಕಾರ್ಯ ಪಡೆ (ರ‍್ಯಾಪಿಡ್ ಆಕ್ಷನ್ ಪೋರ್ಸ್-ಆರ್‌ಎಎಫ್) ಘಟಕ ಕಾಂಗ್ರೆಸ್ ಸರ್ಕಾರದ ಕೊಡುಗೆಯಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದರು.
    ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ೨೦೧೪ರಲ್ಲಿಯೇ ಆರ್‌ಎಎಫ್ ಘಟಕ ಸ್ಥಾಪಿಸುವ ಸಂಬಂಧ ಕರ್ನಾಟಕ, ಗೋವಾ, ಕೇರಳ ಸೇರಿದಂತೆ ಇನ್ನಿತರ ರಾಜ್ಯಗಳಿಗೆ ಪ್ರಸ್ತಾವನೆ ಹೊರಡಿಸಿತ್ತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಾಗು ಗೃಹ ಸಚಿವರಾಗಿದ್ದ ಡಾ. ಜಿ. ಪರಮೇಶ್ವರ್‌ರವರು ರಾಜ್ಯದಲ್ಲಿ ಮಂಗಳೂರು ಪ್ರದೇಶವನ್ನು ಗುರುತಿಸಿ ಶಿಫಾರಸ್ಸು ಮಾಡಿದ್ದರು. ಆದರೆ ಶಿಫಾರಸ್ಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿ ಮಂಗಳೂರು ಸೂಕ್ತ ಸ್ಥಳವಲ್ಲ ಎಂದು ತಿಳಿಸಿತ್ತು. ಈ ಹಿನ್ನಲೆಯಲ್ಲಿ ಅಂದಿನ ಲೋಕಸಭಾ ಸದಸ್ಯ ಕೆ.ಎಚ್ ಮುನಿಯಪ್ಪನವರ ಮೂಲಕ ನನ್ನ ಕ್ಷೇತ್ರದಲ್ಲಿ ಆರ್‌ಎಎಫ್ ಘಟಕ ಸ್ಥಾಪಿಸುವಂತೆ ಸಿದ್ದರಾಮಯ್ಯ ಹಾಗು ಪರಮೇಶ್ವರ್‌ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು. ಕೇಂದ್ರ ಸರ್ಕಾರ ಈ ಸ್ಥಳ ಸೂಕ್ತವೆಂದು ಪರಿಗಣಿಸಿದ ಹಿನ್ನಲೆಯಲ್ಲಿ ಅಗತ್ಯವಿರುವ ೫೦ ಎಕರೆ ಜಾಗವನ್ನು ಗುರುತಿಸಿ ರಾಜ್ಯ ಸರ್ಕಾರ ಫೆಬ್ರವರಿ ೨೭, ೨೦೧೯ರಂದು ಆಡಳಿತಾತ್ಮಕ ಅನುಮೋದನೆ ಸಹ ನೀಡಿತು. ಈ ಹಿನ್ನಲೆಯಲ್ಲಿ ಘಟಕ ಆರಂಭಕ್ಕೆ ನಾನೇ ಕಾರಣಕರ್ತನಾಗಿದ್ದೇನೆ. ಬಿಜೆಪಿಯವರು ಘಟಕ ಆರಂಭಕ್ಕೆ ನಾವೇ ಕಾರಣಕರ್ತರು ಎಂದು ಎಲ್ಲೆಡೆ ಹೇಳಿಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
    ಆಡಳಿತಾತ್ಮಕ ಅನುಮೋದನೆ ನಂತರ ಮುಂದಿನ ಪ್ರಕ್ರಿಯೆಯನ್ನು ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೈಗೊಂಡಿದ್ದು, ಇದೀಗ ಅಂತಿಮ ಹಂತಕ್ಕೆ ಬಂದು ಜ.೧೬ರಂದು ಕಾರ್ಯಾರಂಭಗೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ. ಕ್ಷೇತ್ರದ ಸುತ್ತಮುತ್ತ ಸೂಕ್ಷ್ಮ ಪ್ರದೇಶವಾಗಿರುವ ಹಿನ್ನಲೆಯಲ್ಲಿ ಘಟಕ ಆರಂಭವಾಗುತ್ತಿರುವುದರಿಂದ ಗಲಭೆಗಳು ನಿಯಂತ್ರಣಕ್ಕೆ ಬರಲಿವೆ. ಅಲ್ಲದೆ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗಿದ್ದು, ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಅವನತಿಯಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಜನರು ನೆಮ್ಮದಿ ಕಾಣುವಂತಾಗಿದೆ ಎಂದರು.
    ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ರಾಮಚಂದ್ರ, ಮುಖಂಡರಾದ ಲೋಕೇಶ್, ಎಸ್.ಎನ್ ಶಿವಪ್ಪ, ಎಂ. ಮುಸ್ವೀರ್ ಬಾಷ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  



ಆರ್‌ಎಫ್‌ಓ ಅಮಾನತ್ತುಗೊಳಿಸಲು ಆಗ್ರಹಿಸಿ ಧರಣಿ ಸತ್ಯಾಗ್ರಹ

ಕರ್ತವ್ಯ ಲೋಪ ವೆಸಗಿರುವ ಅರಣ್ಯ ಇಲಾಖೆ ಮಾವಿನಕಟ್ಟೆ ವಲಯ(ಶಾಂತಿ ಸಾಗರ)ದ ವಲಯ ಅರಣ್ಯಾಧಿಕಾರಿ ಮಾವಿನ ಹೊಳೆಯಪ್ಪರವರನ್ನು ತಕ್ಷಣ ಸೇವೆಯಿಂದ ಅಮಾನತ್ತುಗೊಳಿಸ ಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಕುಮಾರ್ ಶೆಟ್ಟಿ ಬಣ) ತಾಲೂಕು ಘಟಕದ ವತಿಯಿಂದ ಬುಧವಾರ ಭದ್ರಾವತಿ ಬಿ.ಎಚ್ ರಸ್ತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಯಿತು.
        ಭದ್ರಾವತಿ, ಜ. ೧೩: ಕರ್ತವ್ಯ ಲೋಪ ವೆಸಗಿರುವ ಅರಣ್ಯ ಇಲಾಖೆ ಮಾವಿನಕಟ್ಟೆ ವಲಯ(ಶಾಂತಿ ಸಾಗರ)ದ ವಲಯ ಅರಣ್ಯಾಧಿಕಾರಿ ಮಾವಿನ ಹೊಳೆಯಪ್ಪರವರನ್ನು ತಕ್ಷಣ ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಕುಮಾರ್ ಶೆಟ್ಟಿ ಬಣ) ತಾಲೂಕು ಘಟಕದ ವತಿಯಿಂದ ಬುಧವಾರ ಬಿ.ಎಚ್ ರಸ್ತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ಆರ್‌ಎಫ್‌ಓ ಮಾವಿನ ಹೊಳೆಯಪ್ಪರವರು ಸುಮಾರು ೨ ತಿಂಗಳ ಹಿಂದೆ ಅರಣ್ಯ ಇಲಾಖೆಯ ದಿನಗೂಲಿ/ಪಿ.ಸಿ.ಪಿ ನೌಕರರನ್ನು ವಲಯದ ವ್ಯಾಪ್ತಿ ಮೀರಿ ತಮ್ಮ ಸ್ವಂತ ಜಮೀನಿನಲ್ಲಿ ಜೋಳ ಮುರಿದು ತುಂಬಿಸುವ ಕೆಲಸದಲ್ಲಿ ತೊಡಗಿಸಿಕೊಂಡು ಕರ್ತವ್ಯ ಲೋಪವೆಸಗಿದ್ದಾರೆ. ಈ ಕುರಿತು ವಿಡಿಯೋ ಚಿತ್ರೀಕರಣ ಹಾಗು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಸ್ಥಳ ಮಹಜರು ನಡೆಸಿ ದೂರು ಸಲ್ಲಿಸಲಾಗಿದೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಮಾವಿನ ಹೊಳೆಯಪ್ಪನವರು ಈ ಹಿಂದೆ ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸಿ ಅಮಾನತ್ತುಗೊಂಡು ಪುನಃ ಮಾವಿನಕಟ್ಟೆ ವಲಯಕ್ಕೆ ಬಂದಿದ್ದು, ಇವರ ವಿರುದ್ಧ ಅರಣ್ಯ ಭೂಮಿ ಒತ್ತುವರಿ ಮಾಡಿ ಹಣ ಸುಲಿಗೆ ಮಾಡುತ್ತಿರುವುದು, ಅರಣ್ಯದಲ್ಲಿರುವ ಕೆಮ್ಮಣ್ಣು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದು ಸೇರಿದಂತೆ ಹಲವು ದೂರುಗಳಿವೆ. ಈ ಹಿನ್ನಲೆಯಲ್ಲಿ ತಕ್ಷಣ ಮಾವಿನ ಹೊಳೆಯಪ್ಪರವರ ವಿರುದ್ಧ ಸಲ್ಲಿಸಿರುವ ದೂರು, ತನಿಖಾಧಿಕಾರಿಗಳು ಕೈಗೊಂಡಿರುವ ತನಿಖೆ ಹಾಗು ಸ್ಥಳ ಮಹಜರು ಮೇಲಾಧಿಕಾರಿಗಳಿಂದ ಪರಿಶೀಲಿಸಿ ಸೇವೆಯಿಂದ ಅಮಾನುಗೊಳಿಸುವಂತೆ ಸೂಚಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಒತ್ತಾಯಿಸಲಾಯಿತು.
      ಕರಾವೇ ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್, ಪ್ರಧಾನ ಕಾರ್ಯದರ್ಶಿ ಸಂದೇಶ್‌ಗೌಡ, ಕಾರ್ಯದರ್ಶಿ ಪಿ. ನಾಗರಾಜ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ, ಗೋಪನಾಳ್  ಘಟಕದ ಅಧ್ಯಕ್ಷ ಎಸ್. ಪ್ರಭು, ತರೀಕೆರೆ ತಾಲೂಕು ಅಧ್ಯಕ್ಷ ವಿ. ಹರೀಶ್‌ಗೌಡ, ಸಂಯುಕ್ತ ಜನತಾದಳ ರಾಜ್ಯ ಯುವ ಘಟಕ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ, ಸಾಮಾಜಿಕ ಹೋರಾಟಗಾರ ಶಿವಕುಮಾರ್, ಎಸ್. ಮನೋಜ್, ಹೀರಾಲಾಲ್, ಉಮೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಸುನಂದ ಬೀರಯ್ಯ ನಿಧನ

ಸುನಂದ ಬೀರಯ್ಯ
ಭದ್ರಾವತಿ, ಜ. ೧೩: ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ, ನಗರದ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಪ್ರಭಾಕರ ಬೀರಯ್ಯರವರ ತಾಯಿ ಸುನಂದ ಬೀರಯ್ಯ(೭೯) ಮಂಗಳವಾರ ನಿಧನ ಹೊಂದಿದರು.
    ಒಂದು ಗಂಡು, ಒಂದು ಹೆಣ್ಣು, ಸೊಸೆ, ಅಳಿಯ ಹಾಗು ೪ ಜನ ಮೊಮ್ಮಕ್ಕಳನ್ನು ಹೊಂದಿದ್ದರು. ಮೃತರ ಪತಿ ದಿವಂಗತ ಕೆಬಿಡಿ ಬೀರಯ್ಯನವರು ಸಾಮಾಜಿಕ, ಶೈಕ್ಷಣಿಕ ಹಾಗು ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ನಗರದಲ್ಲಿ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
    ಮೃತರ ಅಂತ್ಯಕ್ರಿಯೆ ನಗರದ ಬೈಪಾಸ್ ರಸ್ತೆ ಸಮೀಪದ ತಿಮ್ಲಾಪುರ ರಸ್ತೆಯಲ್ಲಿರುವ ಶ್ರೀ ಸತ್ಯಹರಿಶ್ಚಂದ್ರ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ನಗರದ ವಿವಿಧ ಸಂಘ-ಸಂಸ್ಥೆಗಳ ಗಣ್ಯರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

Tuesday, January 12, 2021

೧೫ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಎಸ್.ಎಸ್ ವಿಜಯದೇವಿ

ಜಿಲ್ಲಾಧ್ಯಕ್ಷ ಡಿ.ಬಿ ಶಂಕರಪ್ಪ ನೇತೃತ್ವದಲ್ಲಿ ಸಮ್ಮೇಳನಕ್ಕೆ ಅಧಿಕೃತ ಆಹ್ವಾನ

     ಭದ್ರಾವತಿ, ಜ. ೧೨: ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಗರದ ನಿವೃತ್ತ ಪ್ರಾಧ್ಯಾಪಕಿ, ಸಾಹಿತಿ ಡಾ. ಎಸ್.ಎಸ್ ವಿಜಯದೇವಿ ಆಯ್ಕೆಯಾಗಿದ್ದು, ಮಂಗಳವಾರ ಅವರನ್ನು ಪರಿಷತ್ ಜಿಲ್ಲಾಧ್ಯಕ್ಷ ಡಿ.ಬಿ ಶಂಕರಪ್ಪ ನೇತೃತ್ವದಲ್ಲಿ ಆಹ್ವಾನಿಸಲಾಯಿತು.
     ಈ ಸಂದರ್ಭದಲ್ಲಿ ಮಾತನಾಡಿದ ಡಿ.ಬಿ ಶಂಕರಪ್ಪ, ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಸಮ್ಮೇಳನದ ಆಹ್ವಾನ ಪತ್ರಿಕೆಗಳಿಂದಲೇ ಅದರ ವಿಶೇಷತೆಗಳನ್ನು ಕಂಡುಕೊಳ್ಳಬಹುದಾಗಿದೆ. ಎಲ್ಲವನ್ನು ಕ್ರಮಬದ್ಧವಾಗಿ, ವ್ಯವಸ್ಥಿತವಾಗಿ ರೂಪಿಸುವ, ಯೋಚಿಸುವ ಪರಿ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಡಾ.ಎಸ್.ಎಸ್ ವಿಜಯದೇವಿಯವರು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವುದು ಅವರಲ್ಲಿನ ವೈಶಿಷ್ಟತೆಯಾಗಿದೆ ಎಂದರೆ ತಪ್ಪಾಗಲಾರದು ಎಂದರು.
   ಪರಿಷತ್ ಜಿಲ್ಲಾ ಉಪಾಧ್ಯಕ್ಷ ಎಚ್.ಎನ್ ಮಹಾರುದ್ರ ಮಾತನಾಡಿ, ಡಾ. ಎಸ್.ಎಸ್ ವಿಜಯದೇವಿಯವರು ಉಪನ್ಯಾಸಕರಾಗಿ, ಅಧ್ಯಾಪಕರಾಗಿ ಸೇವೆ ಸಲ್ಲಿಸುವ ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವರಲ್ಲಿನ ಪ್ರತಿಭೆ ಬಹಳಷ್ಟು ಎತ್ತರಕ್ಕೆ ಅವರನ್ನು ಕೊಂಡ್ಯೊಯ್ದಿದೆ. ಅವರನ್ನು ಈ ಬಾರಿಯ ೧೫ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ನಗರದ ಜನರಲ್ಲಿ ಸಂಭ್ರಮವನ್ನುಂಟು ಮಾಡಿದೆ ಎಂದರೆ ತಪ್ಪಾಗಲಾರದು ಎಂದರು.
     ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ಎಂ.ಎನ್ ಸುಂದರ್‌ರಾಜ್, ಎಸ್. ರುದ್ರಮುನಿ ಸಜ್ಜನ್, ಎಸ್.ವಿ ಚಂದ್ರಕಲಾ ಅರಸ್, ರಂಜನಿ ದತ್ತಾತ್ರಿ, ಮಮತಾ ಹೆಗಡೆ, ತಾಲೂಕು ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್, ಕಾರ್ಯದರ್ಶಿ ಸಿ. ಚನ್ನಪ್ಪ, ಸಿದ್ದಲಿಂಗಯ್ಯ, ಅರಳೇಹಳ್ಳಿ ಅಣ್ಣಪ್ಪ, ನಾಗರತ್ನ ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಆರ್‌ಎಫ್‌ಓ ಅಮಾನತ್ತುಗೊಳಿಸಲು ಆಗ್ರಹಿಸಿ ಜ.೧೩ರಂದು ಧರಣಿ ಸತ್ಯಾಗ್ರಹ

ಭದ್ರಾವತಿ, ಜ. ೧೨: ಕರ್ತವ್ಯ ಲೋಪ ವೆಸಗಿರುವ ಅರಣ್ಯ ಇಲಾಖೆ ಮಾವಿನಕಟ್ಟೆ ವಲಯ(ಶಾಂತಿ ಸಾಗರ)ದ ವಲಯ ಅರಣ್ಯಾಧಿಕಾರಿ ಮಾವಿನ ಹೊಳೆಯಪ್ಪರವರನ್ನು ತಕ್ಷಣ ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಕುಮಾರ್ ಶೆಟ್ಟಿ ಬಣ) ತಾಲೂಕು ಘಟಕದ ವತಿಯಿಂದ ಜ.೧೩ರಂದು ಬೆಳಿಗ್ಗೆ ೧೦.೩೦ಕ್ಕೆ ಬಿ.ಎಚ್ ರಸ್ತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
     ಆರ್‌ಎಫ್‌ಓ ಮಾವಿನ ಹೊಳೆಯಪ್ಪರವರು ಸುಮಾರು ೨ ತಿಂಗಳ ಹಿಂದೆ ಅರಣ್ಯ ಇಲಾಖೆಯ ದಿನಗೂಲಿ/ಪಿ.ಸಿ.ಪಿ ನೌಕರರನ್ನು ವಲಯದ ವ್ಯಾಪ್ತಿ ಮೀರಿ ತಮ್ಮ ಸ್ವಂತ ಜಮೀನಿನಲ್ಲಿ ಜೋಳ ಮುರಿದು ತುಂಬಿಸುವ ಕೆಲಸದಲ್ಲಿ ತೊಡಗಿಸಿಕೊಂಡು ಕರ್ತವ್ಯ ಲೋಪವೆಸಗಿದ್ದಾರೆ. ಈ ಕುರಿತು ವಿಡಿಯೋ ಚಿತ್ರೀಕರಣ ಹಾಗು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಸ್ಥಳ ಮಹಜರು ನಡೆಸಿ ದೂರು ಸಲ್ಲಿಸಲಾಗಿದೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಮಾವಿನ ಹೊಳೆಯಪ್ಪನವರು ಈ ಹಿಂದೆ ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸಿ ಅಮಾನತ್ತುಗೊಂಡು ಪುನಃ ಮಾವಿನಕಟ್ಟೆ ವಲಯಕ್ಕೆ ಬಂದಿದ್ದು, ಇವರ ವಿರುದ್ಧ ಅರಣ್ಯ ಭೂಮಿ ಒತ್ತುವರಿ ಮಾಡಿ ಹಣ ಸುಲಿಗೆ ಮಾಡುತ್ತಿರುವುದು, ಅರಣ್ಯದಲ್ಲಿರುವ ಕೆಮ್ಮಣ್ಣು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದು ಸೇರಿದಂತೆ ಹಲವು ದೂರುಗಳಿವೆ. ಈ ಹಿನ್ನಲೆಯಲ್ಲಿ ಇವರನ್ನು ತಕ್ಷಣ ಸೇವೆಯಿಂದ ಅಮಾನತ್ತುಗೊಳಿಸುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಜ.೧೬ಕ್ಕೆ ನಗರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ : ಆರ್‌ಎಎಫ್ ಘಟಕ ಶಿಲಾನ್ಯಾಸ

ಒಂದು ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ, ಮಹಿಳೆಯರು ಸೇರಿದಂತೆ ಒಟ್ಟು ೪೪೫ ಸಿಬ್ಬಂದಿಗಳು ಕರ್ತವ್ಯ

ಸಂಸದ ಬಿ.ವೈ ರಾಘವೇಂದ್ರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಭದ್ರಾವತಿ, ಜ. ೧೨: ಕೇಂದ್ರ ಮೀಸಲು ಪೊಲೀಸ್ ಪಡೆಯ ವಿಶೇಷ ವಿಭಾಗವಾಗಿರುವ ಕ್ಷಿಪ್ರ ಕಾರ್ಯ ಪಡೆ (ರ‍್ಯಾಪಿಡ್ ಆಕ್ಷನ್ ಪೋರ್ಸ್-ಆರ್‌ಎಎಫ್) ಘಟಕ ನಗರದ ಮಿಲ್ಟ್ರಿಕ್ಯಾಂಪ್ ಹೊಸ ಬುಳ್ಳಾಪುರದಲ್ಲಿ  ಕಾರ್ಯಾರಂಭಗೊಳ್ಳುತ್ತಿದ್ದು, ಜ.೧೬ರಂದು ಘಟಕದ ಶಿಲಾನ್ಯಾಸ ನೆರವೇರಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ನಗರಕ್ಕೆ ಆಗಮಿಸುತ್ತಿದ್ದಾರೆಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.
     ಅವರು ಮಂಗಳವಾರ ಮಿಲ್ಟ್ರಿಕ್ಯಾಂಪ್ ಸಶಸ್ತ್ರ ಮೀಸಲುಪಡೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗೃಹ ಸಚಿವರು ಅಂದು ಮಧ್ಯಾಹ್ನ ೧೨.೪೫ಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದು, ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
      ಘಟಕ ಕುರಿತು ಮಾಹಿತಿ ನೀಡಿದ ಸಂಸದರು, ರಾಜ್ಯ ಗೃಹ ಇಲಾಖೆ ಅಕ್ಟೋಬರ್, ೨೦೧೯ರಲ್ಲಿ ಈ ಘಟಕ ಸ್ಥಾಪಿಸಲು ೫೦.೨೯ ಎಕರೆ ಪ್ರದೇಶವನ್ನು ಮಂಜೂರು ಮಾಡಿದೆ. ಜಿಲ್ಲಾ ರಕ್ಷಣಾಧಿಕಾರಿಗಳು ಸಿಆರ್‌ಪಿಎಫ್ ೯೭ ಕಮಾಂಡೆಂಟ್, ಆರ್‌ಎಎಫ್ ಬೆಟಾಲಿಯನ್, ಚೆನ್ನೈ ಇವರಿಗೆ ಹಸ್ತಾಂತರಿಸಿದ್ದಾರೆ. ಪ್ರಸ್ತುತ ಘಟಕ ಕರ್ನಾಟಕ ರಾಜ್ಯದ ೩೦ ಜಿಲ್ಲೆಗಳು, ಕೇರಳ ರಾಜ್ಯದ ೪ ಜಿಲ್ಲೆಗಳು, ಗೋವಾ ರಾಜ್ಯದ ೨ ಜಿಲ್ಲೆಗಳು ಮತ್ತು ಲಕ್ಷದ್ವೀಪ ಹಾಗು ಪುದುಚೇರಿ ತಲಾ ೧ ಜಿಲ್ಲೆಯನ್ನು ಒಳಗೊಂಡಿದೆ. ಶಿಲಾನ್ಯಾಸಗೊಂಡ ಮರುದಿನದಿಂದಲೇ ತಾತ್ಕಾಲಿಕವಾಗಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದು, ೨-ಡೆಪ್ಯೂಟಿ ಕಮಾಂಡೆಂಟ್, ೬-ಅಸಿಸ್ಟೆಂಟ್ ಕಮಾಂಡೆಂಟ್, ೧೬-ಇನ್ಸ್‌ಪೆಕ್ಟರ್, ೩೨-ಸಬ್‌ಇನ್ಸ್‌ಪೆಕ್ಟರ್, ೩೪-ಅಸಿಸ್ಟೆಂಟ್ ಸಬ್‌ಇನ್ಸ್‌ಪೆಕ್ಟರ್, ೫೬-ಹೆಡ್‌ಕಾನ್‌ಸ್ಟೇಬಲ್, ೨೬೪-ಕಾನ್‌ಸ್ಟೇಬಲ್, ೩೪-ಬೇಸ್‌ಮೆನ್ ಸೇರಿದಂತೆ ೩೯೯ ಮಂದಿ ಹಾಗು ಉಳಿದ ಮಹಿಳಾ ಸಿಬ್ಬಂದಿಗಳು ಸೇರಿದಂತೆ ಒಟ್ಟು  ೪೪೫ ಸಿಬ್ಬಂದಿಗಳು ಘಟಕದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಸುಮಾರು ೧ ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಚರಣೆಗೆ ಬರುವ ವಿಶ್ವಾಸವಿದೆ ಎಂದರು.    
    ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಪವಿತ್ರ ರಾಮಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್, ಮುಖಂಡರಾದ ಎಸ್. ದತ್ತಾತ್ರಿ, ಶಿವರಾಜ್, ಎಂ. ಪ್ರಭಾಕರ್, ಮಂಗೋಟೆ ರುದ್ರೇಶ್, ಆರ್.ಎಸ್ ಶೋಭಾ, ರಾಮಲಿಂಗಯ್ಯ, ಕದಿರೇಶ್, ಕೂಡ್ಲಿಗೆರೆ ಹಾಲೇಶ್, ಜಿ. ಆನಂದಕುಮಾರ್, ಸಂತೋಷ್ ಬಳ್ಳಿಗೆರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.