Sunday, April 4, 2021

ಭದ್ರಾವತಿ ನಗರಸಭೆ : ಒಟ್ಟು ೧,೨೫,೫೭೯ ಮತದಾರರು

ವಾರ್ಡ್ ನಂ. ೧೯ ಅತಿ ಕಡಿಮೆ, ವಾರ್ಡ್ ನಂ. ೮ ಅತಿ ಹೆಚ್ಚು ಮತದಾರರು

    ಭದ್ರಾವತಿ, ಏ. ೩: ನಗರಸಭೆ ವ್ಯಾಪ್ತಿಯಲ್ಲಿ ಈ ಬಾರಿ ಒಟ್ಟು ೧,೨೫,೫೭೯ ಮತದಾರರಿದ್ದು, ಈ ಪೈಕಿ ೬೦,೮೭೪ ಪುರುಷ ಹಾಗು ೬೪,೭೦೫ ಮಹಿಳಾ ಮತದಾರರಿದ್ದಾರೆ.
ವಿಧಾನಸಭಾ ಚುನಾವಣೆ ಮತದಾರರಪಟ್ಟಿ ಆನ್ವಯ ಪ್ರಸ್ತುತ ನಗರಸಭೆ ಮತದಾರರ ಪಟ್ಟಿ ಸಿದ್ದಪಡಿಸಲಾಗಿದ್ದು, ಒಟ್ಟು ೩೫ ವಾರ್ಡ್‌ಗಳನ್ನು ಒಳಗೊಂಡಿರುವ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ೧,೨೫,೫೭೯ ಮತದಾರರಿದ್ದಾರೆ.
    ಹೆಬ್ಬಂಡಿ, ಜೇಡಿಕಟ್ಟೆ ಒಳಗೊಂಡಿರುವ ವಾರ್ಡ್ ನಂ.೧ರ ವ್ಯಾಪ್ತಿಯಲ್ಲಿ ಒಟ್ಟು ೩,೯೨೧, ಲೋಯರ್ ಹುತ್ತಾ ಒಳಗೊಂಡಿರುವ ವಾರ್ಡ್ ನಂ.೨ರ ವ್ಯಾಪ್ತಿಯಲ್ಲಿ ಒಟ್ಟು ೩,೩೧೮, ಬಿ.ಎಚ್ ರಸ್ತೆ ಎಡ ಮತ್ತು ಬಲಭಾಗ, ಚಾಮೇಗೌಡ ಏರಿಯಾ ಒಳಗೊಂಡಿರುವ ವಾರ್ಡ್ ನಂ.೩ರ ವ್ಯಾಪ್ತಿಯಲ್ಲಿ ಒಟ್ಟು ೪,೩೬೭, ಕನಕಮಂಟಪ ಪ್ರದೇಶ ಒಳಗೊಂಡಿರುವ ವಾರ್ಡ್ ನಂ.೪ರ ವ್ಯಾಪ್ತಿಯಲ್ಲಿ ಒಟ್ಟು ೪,೪೦೯, ಕೋಟೆ ಏರಿಯಾ ಒಳಗೊಂಡಿರುವ ವಾರ್ಡ್ ನಂ.೫ರ ವ್ಯಾಪ್ತಿಯಲ್ಲಿ ಒಟ್ಟು ೩,೪೦೫, ಸಿದ್ದಾರೂಢನಗರ ಒಳಗೊಂಡಿರುವ ವಾರ್ಡ್ ನಂ.೬ರ ವ್ಯಾಪ್ತಿಯಲ್ಲಿ ಒಟ್ಟು ೩,೮೭೫, ದುರ್ಗಿಗುಡಿ ಹಾಗು ಖಲಂದರ್ ನಗರ ಒಳಗೊಂಡಿರುವ ವಾರ್ಡ್ ನಂ.೭ರ ವ್ಯಾಪ್ತಿಯಲ್ಲಿ ಒಟ್ಟು ೩೭೦೩, ಅನ್ವರ್ ಕಾಲೋನಿ, ಸೀಗೆಬಾಗಿ ಒಳಗೊಂಡಿರುವ ವಾರ್ಡ್ ನಂ.೮ರ ವ್ಯಾಪ್ತಿಯಲ್ಲಿ ಒಟ್ಟು ೬,೦೩೪, ಭದ್ರಾಕಾಲೋನಿ ಒಳಗೊಂಡಿರುವ ವಾರ್ಡ್ ನಂ. ೯ರ ವ್ಯಾಪ್ತಿಯಲ್ಲಿ ಒಟ್ಟು ೩,೨೧೭, ಹನುಮಂತನಗರ ಮತ್ತು ಅಶ್ವತ್‌ನಗರ ಒಳಗೊಂಡಿರುವ ವಾರ್ಡ್ ನಂ.೧೦ರ ವ್ಯಾಪ್ತಿಯಲ್ಲಿ ಒಟ್ಟು ೩,೧೬೮, ಸುಭಾಷ್‌ನಗರ ಒಳಗೊಂಡಿರುವ ವಾರ್ಡ್ ನಂ.೧೧ರ ವ್ಯಾಪ್ತಿಯಲ್ಲಿ ಒಟ್ಟು ೨,೯೬೪, ಅಣ್ಣಾನಗರ ಒಳಗೊಂಡಿರುವ ವಾರ್ಡ್ ನಂ.೧೨ರ ವ್ಯಾಪ್ತಿಯಲ್ಲಿ ಒಟ್ಟು ೩,೭೪೦ ಮತದಾರರಿದ್ದಾರೆ.
    ಭೂತನಗುಡಿ ಒಳಗೊಂಡಿರುವ ವಾರ್ಡ್ ನಂ.೧೩ರ ವ್ಯಾಪ್ತಿಯಲ್ಲಿ ಒಟ್ಟು ೩,೮೬೮, ಹೊಸಭೋವಿ ಕಾಲೋನಿ ಒಳಗೊಂಡಿರುವ ವಾರ್ಡ್ ನಂ.೧೪ರ ವ್ಯಾಪ್ತಿಯಲ್ಲಿ ಒಟ್ಟು ೩,೦೪೫, ಹೊಸಮನೆ ಹಾಗು ಅಶ್ವತ್‌ನಗರ ಬಲಭಾಗ ಒಳಗೊಂಡಿರುವ ವಾರ್ಡ್ ನಂ.೧೫ರ ವ್ಯಾಪ್ತಿಯಲ್ಲಿ ಒಟ್ಟು ೪,೫೩೪, ಗಾಂಧಿನಗರ ಒಳಗೊಂಡಿರುವ ವಾರ್ಡ್ ನಂ.೧೬ರ ವ್ಯಾಪ್ತಿಯಲ್ಲಿ ಒಟ್ಟು ೪,೦೪೯, ನೆಹರು ನಗರ ಒಳಗೊಂಡಿರುವ ವಾರ್ಡ್ ನಂ.೧೭ರ ವ್ಯಾಪ್ತಿಯಲ್ಲಿಇ ೩,೩೪೦, ಎಂ.ಎಂ ಕಾಂಪೌಂಡ್ ಒಳಗೊಂಡಿರುವ ವಾರ್ಡ್ ನಂ.೧೮ರ ವ್ಯಾಪ್ತಿಯಲ್ಲಿ ೨,೮೬೯, ಎಂಪಿಎಂ ಆಸ್ಪತ್ರೆ ಒಳಗೊಂಡಿರುವ ವಾರ್ಡ್ ನಂ. ೧೯ರ ವ್ಯಾಪ್ತಿಯಲ್ಲಿ ಒಟ್ಟು ೨,೨೭೧, ಸುರಗಿತೋಪು ಒಳಗೊಂಡಿರುವ ವಾರ್ಡ್ ನಂ.೨೦ರ ವ್ಯಾಪ್ತಿಯಲ್ಲಿ ಒಟ್ಟು ೪,೭೭೩, ಎಂಪಿಎಂ ೬ ಮತ್ತು ೮ನೇ ವಾರ್ಡ್ ಒಳಗೊಂಡಿರುವ ವಾರ್ಡ್ ನಂ. ೨೧ರ ವ್ಯಾಪ್ತಿಯಲ್ಲಿ ಒಟ್ಟು ೨,೫೯೦, ಉಜ್ಜನೀಪುರ ಒಳಗೊಂಡಿರುವ ವಾರ್ಡ್ ನಂ.೨೨ರ ವ್ಯಾಪ್ತಿಯಲ್ಲಿ ಒಟ್ಟು ೨,೮೭೭ ಮತದಾರರಿದ್ದಾರೆ.
    ತಿಮ್ಲಾಪುರ ಮತ್ತು ಡಿ.ಜಿ ಹಳ್ಳಿ ಒಳಗೊಂಡಿರುವ ವಾರ್ಡ್ ನಂ.೨೩ರ ವ್ಯಾಪ್ತಿಯಲ್ಲಿ ಒಟ್ಟು ೩,೬೮೭, ಬೊಮ್ಮನಕಟ್ಟೆ ಒಳಗೊಂಡಿರುವ ವಾರ್ಡ್ ನಂ.೨೪ರ ವ್ಯಾಪ್ತಿಯಲ್ಲಿ ಒಟ್ಟು ೩,೦೬೯, ಹುಡ್ಕೋ, ಹೊಸಬುಳ್ಳಾಪುರ ಒಳಗೊಂಡಿರುವ ವಾರ್ಡ್ ನಂ.೨೫ರ ವ್ಯಾಪ್ತಿಯಲ್ಲಿ ಒಟ್ಟು ೩,೭೭೬, ಬಾಲಭಾರತಿ-ಬೆಣ್ಣೆಕೃಷ್ಣ ಸರ್ಕಲ್ ಒಳಗೊಂಡಿರುವ ವಾರ್ಡ್ ನಂ.೨೬ರ ವ್ಯಾಪ್ತಿಯಲ್ಲಿ ಒಟ್ಟು ೨೯೯೫ ಮತದಾರರಿದ್ದಾರೆ.
    ಆಂಜನೇಯ ಅಗ್ರಹಾರ-ಕೂಲಿಬ್ಲಾಕ್ ಒಳಗೊಂಡಿರುವ ವಾರ್ಡ್ ನಂ.೨೭ರ ವ್ಯಾಪ್ತಿಯಲ್ಲಿ ೩,೭೭೯, ಗಣೇಶ್ ಕಾಲೋನಿ-ವಿದ್ಯಾಮಂದಿರ ಒಳಗೊಂಡಿರುವ ವಾರ್ಡ್ ನಂ.೨೮ರ ವ್ಯಾಪ್ತಿಯಲ್ಲಿ ಒಟ್ಟು ೨,೭೩೪, ಕಿತ್ತೂರು ರಾಣಿ ಚನ್ನಮ್ಮ ಲೇಔಟ್-ಎನ್‌ಟಿಬಿ ಲೇಔಟ್ ಒಳಗೊಂಡಿರುವ ವಾರ್ಡ್ ನಂ.೨೯ರ ವ್ಯಾಪ್ತಿಯಲ್ಲಿ ಒಟ್ಟು ೩,೭೩೫, ಹೊಸಸಿದ್ದಾಪುರ ಒಳಗೊಂಡಿರುವ ವಾರ್ಡ್ ನಂ.೩೦ರ ವ್ಯಾಪ್ತಿಯಲ್ಲಿ ೨,೯೬೧, ಜಿಂಕ್‌ಲೈನ್ ಒಳಗೊಂಡಿರುವ ವಾರ್ಡ್ ನಂ.೩೧ರ ವ್ಯಾಪ್ತಿಯಲ್ಲಿ ಒಟ್ಟು ೩,೭೦೪, ಜನ್ನಾಪುರ ಒಳಗೊಂಡಿರುವ ವಾರ್ಡ್ ನಂ.೩೨ರ ವ್ಯಾಪ್ತಿಯಲ್ಲಿ ಒಟ್ಟು ೪,೨೫೨, ಹುತ್ತಾ ಕಾಲೋನಿ ಒಳಗೊಂಡಿರುವ ವಾರ್ಡ್ ನಂ.೩೩ರ ವ್ಯಾಪ್ತಿಯಲ್ಲಿ ೩,೧೯೮, ಅಪ್ಪರ್‌ಹುತ್ತಾ ಒಳಗೊಂಡಿರುವ ವಾರ್ಡ್ ನಂ.೩೪ರ ವ್ಯಾಪ್ತಿಯಲ್ಲಿ ಒಟ್ಟು ೪,೩೨೦ ಹಾಗು ಭಂಡಾರಹಳ್ಳಿ ಒಳಗೊಂಡಿರುವ ವಾರ್ಡ್ ನಂ.೩೫ರ ವ್ಯಾಪ್ತಿಯಲ್ಲಿ ಒಟ್ಟು ೩,೦೩೨ ಮತದಾರರಿದ್ದಾರೆ.
    ೩೫ ವಾರ್ಡ್‌ಗಳ ಪೈಕಿ ವಾರ್ಡ್ ನಂ.೮ರ ವ್ಯಾಪ್ತಿಯಲ್ಲಿ ಒಟ್ಟು ೬,೦೩೪ ಅತಿ ಹೆಚ್ಚು ಹಾಗು ವಾರ್ಡ್ ನಂ. ೧೯ರ ವ್ಯಾಪ್ತಿಯಲ್ಲಿ ಒಟ್ಟು ೨,೨೭೧ ಅತಿ ಕಡಿಮೆ ಮತದಾರರಿದ್ದಾರೆ. ಮತದಾರರ ಪ್ರಮಾಣದಲ್ಲೂ ಮಹಿಳೆಯರು ಮೇಲೂಗೈ ಸಾಧಿಸಿದ್ದು, ಪುರುಷ ಮತದಾರರಿಗಿಂತ ೩,೮೩೧ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದು ವಾರ್ಡ್‌ನಷ್ಟು ಮಹಿಳಾ ಮತದಾರರಿರುವುದು ವಿಶೇಷವಾಗಿದೆ.

Saturday, April 3, 2021

ಯಶಸ್ವಿಯಾಗಿ ಜರುಗಿದ ಸಂದಲ್, ಉರುಸ್ ಕಾರ್ಯಕ್ರಮ

ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ಹಜ್ರತ್ ಸೈಯದ್ ಸಾದತ್ ಷಾ ಖಾದ್ರಿ ದರ್ಗಾ ಕಮಿಟಿ ವತಿಯಿಂದ ಶನಿವಾರದ ವರೆಗೆ ಸಂದಲ್ ಮತ್ತು ಉರುಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರ ಅಂಗವಾಗಿ ಮುಸ್ಲಿಂ ಸಮುದಾಯದ ಪ್ರಮುಖರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
  ಭದ್ರಾವತಿ, ಏ. ೩: ನಗರದ ತರೀಕೆರೆ ರಸ್ತೆಯಲ್ಲಿರುವ ಹಜ್ರತ್ ಸೈಯದ್ ಸಾದತ್ ಷಾ ಖಾದ್ರಿ ದರ್ಗಾ ಕಮಿಟಿ ವತಿಯಿಂದ ಶನಿವಾರದ ವರೆಗೆ ಸಂದಲ್ ಮತ್ತು ಉರುಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
   ಸಂದಲ್ ಅಂಗವಾಗಿ ತರೀಕೆರೆ ರಸ್ತೆ ಯಾಕಿನ್ ಷಾ ವಲೀ ದರ್ಗಾಕ್ಕೆ ಹೂವಿನ ಹೊದಿಕೆ ಹೊದಿಸಿ, ನಂತರ ಗಂದಕ ಕುಡಿಕೆಯೊಂದಿಗೆ ಮೆರವಣಿಗೆ ನಡೆಸಲಾಯಿತು. ಮಾಧವಚಾರ್ ವೃತ್ತದ ಮೂಲಕ ಎನ್‌ಎಸ್‌ಟಿ ರಸ್ತೆಯಲ್ಲಿ ಸಾಗಿ ಮೊಹಲ್ಲಾ ಚಮನ್ ಷಾ ವಲೀ ದರ್ಗಾ, ಉರ್ದು ಶಾಲೆಯ ಹಿಂಭಾಗದಲ್ಲಿರುವ ಹೈದರ್ ಮಸ್ತಾನ್ ದರ್ಗಾ, ಜಂಡೇಕಟ್ಟೆ ಮೂಲಕ ಜಾಮಿಯಾ ಮಸೀದಿ, ಕಂಚಿನಬಾಗಿಲು ವೃತ್ತದ ಬಳಿ ಶಕ್ಕರ್ ಗಂಜ್ ದರ್ಗಾ, ಕೋಟೆ ರಸ್ತೆ ಮುಖಾಂತರ ರಂಗಪ್ಪ ವೃತ್ತ ತಲುಪಿ ನಂತರ ಪುನಃ ತರೀಕೆರೆ ರಸ್ತೆಯ ಸಾದತ್ ದರ್ಗಾ ತಲುಪಿತು.
  ಮಕ್ಕಳ ನಾತ್ ಮತ್ತು ಬುರ್ದಾ ಷರೀಫ್ ಹಾಗೂ ಧರ್ಮಗುರುಗಳಿಂದ ಹಿತವಚನ ನಡೆಯಿತು. ಮುಸ್ಲಿಂ ಸಮುದಾಯದ ಮುಖಂಡರು, ಗಣ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಶನಿವಾರ ಸುಮಾರು ೪೦ಕ್ಕೂ ಹೆಚ್ಚು ಮಕ್ಕಳ ಮುಂಜಿ ಹಾಗು ೫ ಜೊತೆಗೆ ಸಮೂಹಿಕ ವಿವಾಹ ಹಾಗು ಕವಾಲಿ ಕಾರ್ಯಕ್ರಮಗಳು ಜರುಗಿದವು.
  ಕಮಿಟಿ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗು ಮುಸ್ಲಿಂ ಸಮುದಾಯದ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಜೆಡಿಯು ಅಭ್ಯರ್ಥಿಗಳು ಸ್ಪರ್ಧೆ

ಪ್ರಧಾನ ಕಾರ್ಯದರ್ಶಿ(ಸಂಘಟನೆ) ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಬೇಹಳ್ಳಿ ಡಿ. ನಾಗರಾಜು

ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಬೇಹಳ್ಳಿ ಡಿ. ನಾಗರಾಜು ಮಾತನಾಡಿದರು.

  ಭದ್ರಾವತಿ, ಏ. ೩: ಮುಂಬರುವ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಜನತಾದಳ(ಸಂಯುಕ್ತ) ಕರ್ನಾಟಕ ಪಕ್ಷದ ವತಿಯಿಂದ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಸಲಾಗಿದ್ದು, ಈ ಹಿನ್ನಲೆಯಲ್ಲಿ ಇಲ್ಲಿನ ನಗರಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆಂದು ರಾಜ್ಯ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಬೇಹಳ್ಳಿ ಡಿ. ನಾಗರಾಜು ತಿಳಿಸಿದರು.
    ಅವರು ಹಳೇನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಳಮಟ್ಟದಿಂದ ಪಕ್ಷವನ್ನು ಪುನರ್ ಸಂಘಟಿಸುವ ಜೊತೆಗೆ ಮುಂಬರುವ ಎಲ್ಲಾ ಸಾರ್ವತ್ರಿಕ ಚುನಾವಣೆಗಳಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಸ್ವತಂತ್ರವಾಗಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಆರ್‌ಪಿಸಿ ಸಿಂಗ್, ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್ ಹಾಗು ರಾಜ್ಯದ ವರಿಷ್ಠರು ತೀರ್ಮಾನ ಕೈಗೊಂಡಿರುತ್ತಾರೆ. ಈ ಹಿನ್ನಲೆಯಲ್ಲಿ ನಗರಸಭೆ ಎಲ್ಲಾ ೩೫ ವಾರ್ಡ್‌ಗಳಿಗೂ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆಂದರು.
   ಸಮಾಜ ಸೇವೆಯಲ್ಲಿ ಆಸಕ್ತಿ, ಬಡವರ ಬಗ್ಗೆ ಕಾಳಜಿ, ಪ್ರಾಮಾಣಿಕತನ ಮೈಗೂಡಿಸಿಕೊಂಡಿರುವ ಹಾಗು ಪಕ್ಷದ ಸಿದ್ದಾಂತಗಳಿಗೆ ಬದ್ಧರಾಗುವವರಿಗೆ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡಲಾಗುವುದು. ಅದರಲ್ಲೂ ಶೇ.೬೫ರಷ್ಟು ಮಹಿಳೆಯರಿಗೆ ಹಾಗು ಯುವ ಸಮುದಾಯಕ್ಕೆ ಆದ್ಯತೆ ನೀಡಲಾಗಿದೆ ಎಂದರು.
    ಕ್ಷೇತ್ರದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧಹೊಂದಿದ ನಂತರ ನಡೆಯುತ್ತಿರುವ ಮೊದಲ ನಗರಸಭೆ ಚುನಾವಣೆ ಇದಾಗಿದೆ. ಮತದಾರರು ಹಲವಾರು ನಿರೀಕ್ಷೆಗಳನ್ನು ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಈ ಬಾರಿ ಚುನಾವಣೆಗೆ ಹೆಚ್ಚಿನ ಗಮನ ಹರಿಸುತ್ತಿವೆ ಎಂದರು.
   ಸರ್ಕಾರಿ ಕಛೇರಿಗಳಲ್ಲಿ ಲಂಚ ಸ್ವೀಕಾರಕ್ಕೆ ಕಡಿವಾಣ, ಭ್ರಷ್ಟಾಚಾರ ನಿರ್ಮೂಲನೆ, ನಗರದ ಸ್ವಚ್ಛತೆಗೆ ಮೊದಲ ಆದ್ಯತೆ, ಬಡ ಕಾರ್ಮಿಕರು, ಮಹಿಳೆಯರಿಗೆ ರಕ್ಷಣೆ, ರಸ್ತೆ, ಚರಂಡಿ, ಕುಡಿಯುವ ನೀರು, ವಸತಿ ಸೇರಿದಂತೆ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡುವುದು, ಮಟ್ಕಾ, ಇಸ್ಪೀಟ್, ಮೀಟರ್ ಬಡ್ಡಿ ದಂಧೆ ಸೇರಿದಂತೆ ಕಾನೂನು ಬಾಹಿರ ಕೃತ್ಯಗಳನ್ನು ನಿರ್ಮೂಲನೆ ಮಾಡುವುದು, ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿಗಾಗಿ ನಿರಂತರವಾಗಿ ಹೋರಾಟ ನೆಸುವುದು ಸೇರಿದಂತೆ ಹಲವು ಆಶಯಗಳನ್ನೊಳಗೊಂಡಂತೆ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಲಾಗುವುದು ಎಂದರು.
  ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಲ್ಲೂರು ಉಸ್ಮಾನ್ ಷರೀಫ್, ರಾಜ್ಯ ಕಾರ್ಯದರ್ಶಿ ಸಂಘಟನೆ ಎನ್.ಕೆ ಕಾರ್ತಿಕ್, ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ,  ಜಿಲ್ಲಾ ಸಂಚಾಲಕ ದೇವರಾಜ್ ಶಿಂಧೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Friday, April 2, 2021

೪ನೇ ಪೋಸ್ಟಲ್ ಕ್ರಿಕೆಟ್ ಲೀಗ್ ಪಂದ್ಯಾವಳಿ : ಭದ್ರಾವತಿ ಬ್ಲಾಸ್ಟರ್‍ಸ್ ತಂಡ ಪ್ರಥಮ ಬಹುಮಾನ

ಪ್ರಧಾನ ಅಂಚೆ ಕಛೇರಿ ಮನೋರಂಜನಾ ಕೂಟ ವತಿಯಿಂದ ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ೪ನೇ ಪೋಸ್ಟಲ್ ಕ್ರಿಕೆಟ್ ಲೀಗ್ ೨೦೨೧ ಪಂದ್ಯಾವಳಿಯಲ್ಲಿ ಭದ್ರಾವತಿ ಬ್ಲಾಸ್ಟರ್‍ಸ್ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು.
   ಭದ್ರಾವತಿ, ಏ. ೨: ಪ್ರಧಾನ ಅಂಚೆ ಕಛೇರಿ ಮನೋರಂಜನಾ ಕೂಟ ವತಿಯಿಂದ ನಗರದ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ೪ನೇ ಪೋಸ್ಟಲ್ ಕ್ರಿಕೆಟ್ ಲೀಗ್ ೨೦೨೧ ಪಂದ್ಯಾವಳಿಯಲ್ಲಿ ಭದ್ರಾವತಿ ಬ್ಲಾಸ್ಟರ್‍ಸ್ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು.
    ಅಂತಿಮ ಘಟ್ಟದ ರೋಚಕ ಪಂದ್ಯದಲ್ಲಿ ಭದ್ರಾವತಿ ಬ್ಲಾಸ್ಟರ್‍ಸ್ ಮತ್ತು ಸಾಗರ್ ಸೀ ಬರ್ಡ್ಸ್ ತಂಡ ಪ್ರಶಸ್ತಿಗಾಗಿ ಸೆಣಸಾಟ ನಡೆಸಿದವು. ಕೊನೆಯ ಹಂತದಲ್ಲಿ ಭದ್ರಾವತಿ ಬ್ಲಾಸ್ಟರ್‍ಸ್ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
    ಬೆಳಿಗ್ಗೆ ೭.೩೦ ರಿಂದ ಸಂಜೆ ೬ ಗಂಟೆವರೆಗೂ ನಡೆದ ಪಂದ್ಯಾವಳಿಯಲ್ಲಿ ಭದ್ರಾವತಿ ಬುಲ್ಸ್, ಯೂನಿಟೆಡ್ ಕ್ರಿಕೆಟರ್‍ಸ್ ಗೋಪಾಲ, ಚನ್ನಗಿರಿ ರೆಬೆಲ್ಸ್, ಕೊಡಚಾದ್ರಿ ಬ್ರದರ್‍ಸ್, ಡಪ್ ಕಬ್ಸ್ ಹೊನ್ನಾಳಿ, ವಿನೋಬನಗರ್, ಮಾಸ್ಟರ್ ಬ್ಲಾಸ್ಟರ್ ಕ್ರಿಕೆಟರ್‍ಸ್, ಶಿಕಾರಿಪೂರ್ ಶೂಟರ್‍ಸ್, ಇಲೆವೆನ್ ಮೇಲ್ಸ್ ಕ್ರಿಕೆಟರ್‍ಸ್, ಭದ್ರಾವತಿ ಬ್ಲಾಸ್ಟರ್‍ಸ್, ಸಾಗರ್ ಸೀ ಬರ್ಡ್ಸ್, ಸಾಗರ್ ಸ್ಟ್ರಿಕರ್‍ಸ್, ಆರ್ ಭಟ್  ಟೀಮ್, ಲೋಸರ್ ಮತ್ತು ಸ್ಟಾರ್ ಇಲೆವೆನ್ ತೀರ್ಥಹಳ್ಳಿ ಸೇರಿದಂತೆ ಒಟ್ಟು ೧೫ ತಂಡಗಳು ಪಾಲ್ಗೊಂಡಿದ್ದವು. ಒಟ್ಟು ೨೧ ಪಂದ್ಯಗಳು ಜರುಗಿದವು. ೪ ಜನ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
     ವಿಜೇತ ತಂಡಗಳಿಗೆ ಪ್ರಶಸ್ತಿಯನ್ನು ಶಿವಮೊಗ್ಗ ಅಂಚೆ ಅಧೀಕ್ಷಕ ಜಿ. ಹರೀಶ್ ಪ್ರಧಾನ ಮಾಡಿದರು. ಅಂಚೆ ಪಾಲಕ ವಿ. ಶಶಿಧರ ಅಧ್ಯಕ್ಷತೆ ವಹಿಸಿದ್ದರು. ವಿಐಎಸ್‌ಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರವೀಣ್‌ಕುಮಾರ್, ಪ್ರಮುಖರಾದ ಶ್ರೀನಿವಾಸ್, ಎಸ್.ಎಸ್ ಮಂಜುನಾಥ್, ಪ್ರಕಾಶ್‌ರಾವ್, ಕೆ.ಆರ್ ಉಷಾ, ಪ್ರಹ್ಲಾದ ನಾಯಕ, ಉದಯ ಆಚಾರ್, ನಾಗರಾಜ ಪೂಜಾರ, ಎಚ್.ವಿ ರಾಜ್‌ಕುಮಾರ್, ಟಿ.ಕೆ ಗೋಪಾಲ್, ಜಿ. ರಾಘವೇಂದ್ರ, ಜೆ. ಮಂಜುನಾಥ್, ಎಚ್.ಆರ್ ಈಶ್ವರಪ್ಪ, ಆರ್. ವೆಂಕಟೇಶ್, ಕೆ. ಪ್ರಹ್ಲಾದ್ ರಾವ್, ಸಿ.ಆಋ ಪಾಟೀಲ್, ಕೆ. ಲಿಂಗರಾಜು  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಮಂಜೂರಾತಿ ಪ್ರಕ್ರಿಯೆಯಲ್ಲಿರುವಾಗಲೇ ಶಾಸಕರಿಂದ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಸುದ್ದಿಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಆರೋಪ

ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಮಾತನಾಡಿದರು.
    ಭದ್ರಾವತಿ, ಏ. ೨: ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ತರಾತುರಿಯಲ್ಲಿ ಕಾಮಗಾರಿಗಳ ಗುದ್ದಲಿಪೂಜೆ ನೆರವೇರಿಸಲು ಮುಂದಾಗಿರುವುದು ಖಂಡನೀಯ ಎಂದು ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಹೇಳಿದರು.
     ಅವರು ಶುಕ್ರವಾರ ಹಳೇನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಡಳಿತಾತ್ಮಕವಾಗಿ ಇನ್ನೂ ಸರಿಯಾಗಿ ಮಂಜೂರಾತಿಯಾಗದೆ ಪ್ರಕ್ರಿಯೆಯಲ್ಲಿರುವ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಲಾಗುತ್ತಿದೆ. ಇದು ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ನಡೆಸುತ್ತಿರುವ ರಾಜಕೀಯ ಕುತಂತ್ರ ಎಂದು ಆರೋಪಿಸಿದರು.
     ಸಂಸದ ಬಿ.ವೈ ರಾಘವೇಂದ್ರ ಹಾಗು ಜಿಲ್ಲಾ ಉಸ್ತುವಾರಿ ಸಚಿವರ ಪರಿಶ್ರಮದಿಂದಾಗಿ ರಾಜ್ಯ ಸರ್ಕಾರ ಹಾಗು ನಗರಸಭೆ ಅನುದಾನ ಬಳಸಿಕೊಂಡು ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪ ನೂತನ ಖಾಸಗಿ ಬಸ್ ನಿಲ್ದಾಣ ಹಾಗು ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಮೃತದೇಹಗಳ ಅಂತ್ಯಕ್ರಿಯೆಗೆ ಅತ್ಯಾಧುನಿಕ ತಂತ್ರಜ್ಞಾನದ ವಿದ್ಯುತ್ ಯಂತ್ರ ಅಳವಡಿಕೆ ಕಾಮಗಾರಿಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಆದರೆ ಕಾಮಗಾರಿಗಳು ಇನ್ನೂ ಮಂಜೂರಾತಿ ಪ್ರಕ್ರಿಯೆಯಲ್ಲಿದ್ದು, ಈ ಹಂತದಲ್ಲಿ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಬಾರದಂತೆ ಶಾಸಕರು ಗುದ್ದಲಿ ಪೂಜೆಗೆ ಮುಂದಾಗಿದ್ದಾರೆ. ಅಲ್ಲದೆ ಕಾಮಗಾರಿಗಳಿಗೆ ನಿಗದಿಪಡಿಸಲಾಗಿರುವ ಅನುದಾನಗಳ ಕುರಿತು ಸಹ ತಪ್ಪು ಅಂಕಿ ಅಂಶಗಳನ್ನು ನೀಡುವ ಮೂಲಕ ಕ್ಷೇತ್ರದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಇದನ್ನು ಪಕ್ಷ ಖಂಡಿಸುವ ಜೊತೆಗೆ ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ, ತಹಸೀಲ್ದಾರ್‌ಗೆ ಹಾಗು ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ ಎಂದರು.
   ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್ ಮಾತನಾಡಿ, ಕೆಲವೇ ದಿನಗಳಲ್ಲಿ ನಗರಸಭೆ ಚುನಾವಣೆ ನೀತಿ ಸಂಹಿತೆ ಬರಲಿದೆ. ಈ ಹಂತದಲ್ಲಿ ಈ ರೀತಿ ನಡೆಯುತ್ತಿರುವುದು ಸರಿಯಲ್ಲ. ಈ ವಿಚಾರ ಅಧಿಕಾರಿಗಳಿಗೆ ತಿಳಿದಿದ್ದರೂ ಸಹ ಶಾಸಕರ ಅಣತಿಯಂತೆ ವರ್ತಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
    ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ಕರ್ನಾಟಕ ರಾಜ್ಯ ನೀರು ಸರಬರಾಜು, ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಸೂಡಾ ಸದಸ್ಯ ವಿ. ಕದಿರೇಶ್, ಜಿ. ಆನಂದಕುಮಾರ್, ರಾಮಚಂದ್ರ, ತಾಲೂಕು ಪ್ರಧಾನ ಕಾರ್ಯದರ್ಶಿ ಚನ್ನೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕುರುಬರ ಸಂಘದ ಮಾಜಿ ಅಧ್ಯಕ್ಷ ಹೊನ್ನೂರಪ್ಪ ನಿಧನ

ಭದ್ರಾವತಿ, ಏ. ೨: ನಿವೃತ್ತ ಸಹಾಯಕ ತಹಸೀಲ್ದಾರ್, ತಾಲೂಕು ಕುರುಬರ ಸಂಘದ ಮಾಜಿ ಅಧ್ಯಕ್ಷ ಹೊನ್ನೂರಪ್ಪ(೭೫) ಶುಕ್ರವಾರ ನಿಧನ ಹೊಂದಿದರು.
ಓರ್ವ ಪುತ್ರಿ, ಇಬ್ಬರು ಪುತ್ರರನ್ನು ಹೊಂದಿದ್ದರು. ನಗರದ ಕನಕನಗರದ ನಿವಾಸಿಯಾಗಿರುವ ಹೊನ್ನೂರಪ್ಪ ಕುರುಬ ಸಮಾಜದ ಹಿರಿಯ ಮುಖಂಡರಾಗಿ ಗುರುತಿಸಿಕೊಳ್ಳುವ ಜೊತೆಗೆ ಸಂಘದ ಅಧ್ಯಕ್ಷರಾಗಿ ಹಾಗೂ ಚನ್ನಗಿರಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಮತ್ತು ಇನ್ನಿತರರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದರು.
ಇವರ ನಿಧನಕ್ಕೆ ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಎಂ ಸಂತೋಷ್ ಹಾಗು ಪದಾಧಿಕಾರಿಗಳು ಮತ್ತು ನಗರದ ವಿವಿಧ ಸಂಘಟನೆಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ. ಇವರ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ.  

ಚಿತ್ರ: ಡಿ೨-ಬಿಡಿವಿಟಿ೧
ಹೊನ್ನೂರಪ್ಪ

ಕೊರೋನಾ ಪರಿಣಾಮದಿಂದ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ : ಮನೋಹರ್

ಭದ್ರಾವತಿ ಜನ್ನಾಪುರ ಬಬ್ಬೂರುಕಮ್ಮೆ ಸಮುದಾಯ ಭವನದಲ್ಲಿ ಶುಕ್ರವಾರ ಹ್ಯಾಪಿ ಲೀವಿಂಗ್ ಲೈಫ್ ಯೋಗ ಕೇಂದ್ರದ ವತಿಯಿಂದ ಯೋಗಪಟುಗಳಿಗೆ ಪ್ರಶಸ್ತಿ ವಿತರಣೆ ಸಮಾರಂಭ ಆಯೋಜಿಸಲಾಗಿತ್ತು.
ಭದ್ರಾವತಿ, ಏ. ೨: ಕಳೆದ ಸುಮಾರು ೧ ವರ್ಷದಿಂದ ಕೊರೋನಾ ಸೋಂಕು ಮನುಷ್ಯನ ಆರೋಗ್ಯದ ಜೊತೆ ಆಟವಾಡುತ್ತಿದ್ದು, ಕೊರೋನಾ ಪರಿಣಾಮದಿಂದಾಗಿ ಮನುಷ್ಯ ತನ್ನ ಆರೋಗ್ಯದ ಕಡೆ ಹೆಚ್ಚು ಗಮನಹರಿಸುವಂತಾಗಿದೆ ಎಂದು ಪೌರಾಯುಕ್ತ ಮನೋಹರ್ ತಿಳಿಸಿದರು.
    ಅವರು ಶುಕ್ರವಾರ ಜನ್ನಾಪರು ಬಬ್ಬೂರುಕಮ್ಮೆ ಸಮುದಾಯ ಭವನದಲ್ಲಿ ಹ್ಯಾಪಿ ಲೀವಿಂಗ್ ಲೈಫ್ ಯೋಗ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯೋಗಪಟುಗಳಿಗೆ ಪ್ರಶಸ್ತಿ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಜಂಜಾಟದ ಬದುಕಿನ ನಡುವೆ ಪ್ರಸ್ತುತ ಕೊರೋನಾ ಮನುಷ್ಯನ ಆರೋಗ್ಯಕ್ಕೆ ಸವಾಲಾಗಿ ಪರಿಣಮಿಸಿದೆ. ನಮ್ಮ ಆರೋಗ್ಯದ ರಕ್ಷಣೆಗಾಗಿ ಎಲ್ಲಾ ರೀತಿಯ ಪ್ರಯತ್ಸಗಳಿಗೆ ನಾವುಗಳು ಮುಂದಾಗಿದ್ದೇವೆ. ಇಂತಹ ಸಂದರ್ಭದಲ್ಲಿ ಯೋಗ ಸಹ ನಮ್ಮ ಆರೋಗ್ಯ ರಕ್ಷಣೆಗೆ ಪೂರಕವಾಗಿದೆ. ಈ ಹಿನ್ನಲೆಯಲ್ಲಿ ಯೋಗ ಕಲಿಕೆ ಮೂಲಕ ಆರೋಗ್ಯವಂತರಾಗಲು ಕರೆ ನೀಡಿದರು.
   ಯೋಗ ಗುರು ಮಹೇಶ್ ಮಾತನಾಡಿ, ಪ್ರಶಸ್ತಿಗಾಗಿ ಯೋಗ ಸೀಮಿತವಾಗಿಲ್ಲ. ಯೋಗ ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿದ್ದು, ಎಲ್ಲಾ ರೀತಿಯ ಕಾಯಿಲೆಗಳಿಗೂ ಯೋಗ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯ. ಬಹುಮುಖ್ಯವಾಗಿ ಮಾನಸಿಕ, ದೈಹಿಕ ಒತ್ತಡಗಳಿಂದ ಹೊರಬರಲು ಯೋಗ ಹೆಚ್ಚಿನ ಸಹಕಾರಿಯಾಗಿದೆ. ಉತ್ತಮ ಮನಸ್ಸು, ದೇಹದಿಂದ ಉತ್ತಮ ಆರೋಗ್ಯ ಸಹ ಸಾಧ್ಯ. ಈ ಹಿನ್ನಲೆಯಲ್ಲಿ ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಸಹ ಯೋಗದಲ್ಲಿ ತೊಡಗಿಸಿಕೊಳ್ಳಬಹುದು ಎಂದರು.
  ಬೆಂಗಳೂರಿನ ಶಿವಜ್ಯೋತಿ ಯೋಗ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಯೋಗೋತ್ಸವ-೨೦೨೧ ಸ್ಪರ್ಧೆಯಲ್ಲಿ ಯೋಗ ಕೇಂದ್ರದ ೧೨ ಮಂದಿ  ಭಾಗವಹಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಪ್ರಶಸ್ತಿಗಳನ್ನು ಸ್ವೀಕರಿಸಿದ ಯೋಗಪಟುಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
   ಸ್ಥಳೀಯ ಮುಖಂಡ ಕೆ. ಮಂಜುನಾಥ್, ಶೃತಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.