Wednesday, May 5, 2021

ಲಿಕ್ವಿಡ್ ಆಕ್ಸಿಜನ್ : ದಿ ಸದರನ್ ಗ್ಯಾಸ್ ಲಿಮಿಟೆಡ್ ಜೊತೆಗೆ ಜಿಲ್ಲಾಡಳಿತ ಚರ್ಚಿಸಲಿ

ಭದ್ರಾವತಿ ಎಂಪಿಎಂ ಕಾರ್ಖಾನೆ ಸಮೀಪದಲ್ಲಿರುವ ದಿ ಸದರನ್ ಗ್ಯಾಸ್ ಲಿಮಿಟೆಡ್.
    ಭದ್ರಾವತಿ, ಮೇ. ೫: ಕೊರೋನಾ ೨ನೇ ಅಲೆ ಪರಿಣಾಮ ವೈದ್ಯಕೀಯ ಉದ್ದೇಶಗಳಿಗೆ ಬಳಸುವ ಲಿಕ್ವಿಡ್ ಆಕ್ಸಿಜನ್(ದ್ರವ ರೂಪದ ಆಮ್ಲಜನಕ)ಗೆ ಇದೀಗ ಹೆಚ್ಚಿನ ಬೇಡಿಕೆಗಳು ಬರುತ್ತಿದ್ದು, ಜಿಲ್ಲೆಯಲ್ಲಿ ಲಿಕ್ವಿಡ್ ಆಕ್ಸಿಜನ್ ಕೊರತೆ ಎದುರಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ನಗರದ ದಿ ಸದರನ್ ಗ್ಯಾಸ್ ಲಿಮಿಟೆಡ್‌ನಲ್ಲಿ ಪುನಃ ಲಿಕ್ವಿಡ್ ಆಕ್ಸಿಜನ್ ಉತ್ಪಾದಿಸುವ ಸಂಬಂಧ ಕಂಪನಿಯೊಂದಿಗೆ  ಚರ್ಚಿಸುವುದು ಸೂಕ್ತವಾಗಿದೆ.
     ಜಿಲ್ಲೆಯಲ್ಲಿ ಲಿಕ್ವಿಡ್ ಆಕ್ಸಿಜನ್ ಕೊರತೆ ಉಂಟಾಗದಂತೆ ಎಚ್ಚರ ವಹಿಸಿರುವ ಜಿಲ್ಲಾಡಳಿತ ಈಗಾಗಲೇ ನಗರದ ವಿಐಎಸ್‌ಎಲ್ ಕಾರ್ಖಾನೆಯಲ್ಲಿರುವ ಬಾಲ್ದೋಟ ಒಡೆತನದ ಎಂಎಸ್‌ಪಿಎಲ್ ಖಾಸಗಿ ಆಕ್ಸಿಜನ್ ಉತ್ಪಾದನಾ ಕಂಪನಿಯೊಂದಿಗೆ ಸದ್ಯಕ್ಕೆ ಮಾತುಕತೆ ನಡೆಸಿದೆ. ಆದರೆ ಉತ್ಪಾದನೆ ಇನ್ನೂ ಆರಂಭಗೊಂಡಿಲ್ಲ.  ಕಳೆದ ವರ್ಷ ಕೊರೋನಾ ಸೋಂಕು ಕಾಣಿಸಿಕೊಂಡ ಆರಂಭದಲ್ಲಿಯೇ ಈ ಕಾರ್ಖಾನೆಯನ್ನು ಪುನಃ ಆರಂಭಿಸುವ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪನವರ ನೇತೃತ್ವದಲ್ಲಿ ಮಾತುಕತೆಗಳು ನಡೆದಿದ್ದವು. ಆದರೆ ಹಲವು ಕಾರಣಗಳಿಂದ ಆರಂಭಗೊಂಡಿರಲಿಲ್ಲ. ಇದೀಗ ತುರ್ತಾಗಿ ಆರಂಭಿಸುವ ಲಕ್ಷಣಗಳು ಕಂಡು ಬರುತ್ತಿವೆ.  ಒಂದು ವೇಳೆ ಉತ್ಪಾದನೆ ಆರಂಭಗೊಂಡರೂ ಸಹ ಹಲವು ಸಮಸ್ಯೆಗಳು ಎದುರಾಗಲಿವೆ. ಮುಖ್ಯವಾಗಿ ಈ ಕಂಪನಿ ಉತ್ಪಾದಿಸುತ್ತಿರುವುದು ಕಾರ್ಖಾನೆಗಳಿಗೆ ಪೂರೈಸುವ ಆಕ್ಸಿಜನ್ ಆಗಿದ್ದು, ಇದನ್ನು ವೈದ್ಯಕೀಯ ಉದ್ದೇಶಗಳಿಗೆ ಬಳಸಲು ದ್ರವ ರೂಪಕ್ಕೆ ಪರಿವರ್ತಿಸಬೇಕಾಗಿದೆ. ಆದರೆ ಈ ವ್ಯವಸ್ಥೆ ಕಾರ್ಖಾನೆ ಹೊಂದಿಲ್ಲ. ಈ ಹಿನ್ನಲೆಯಲ್ಲಿ ಕಾರ್ಖಾನೆ ಆರಂಭಗೊಂಡರೂ ಸಹ ಆಧುನೀಕರಣಗೊಳಿಸಬೇಕಾಗಿದೆ. ಈ ಕುರಿತಂತೆ ಚರ್ಚಿಸಲು ಸಚಿವ ಜಗದೀಶ್ ಶೆಟ್ಟರು ಗುರುವಾರ ಕಾರ್ಖಾನೆಗೆ ಭೇಟಿ ನೀಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ. ಒಟ್ಟಾರೆ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡು ಉತ್ಪಾದನೆ ಆರಂಭಗೊಳ್ಳಲು ಕನಿಷ್ಠ ೫-೬ ದಿನಗಳಾದರೂ ಬೇಕಾಗುತ್ತದೆ.
    ಇದು ಒಂದೆಡೆ ಇರಲಿ, ಮತ್ತೊಂದೆಡೆ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಸಮೀಪದಲ್ಲಿರುವ ದಿ ಸದರನ್ ಗ್ಯಾಸ್ ಲಿಮಿಟೆಡ್‌ನಲ್ಲಿ ಪ್ರಸ್ತುತ ವೈದಕೀಯ ಉದ್ದೇಶಗಳಿಗೆ ಬಳಸುವ ಲಿಕ್ವಿಡ್ ಆಕ್ಸಿಜನ್ ಉತ್ಪಾದನೆ ಸ್ಥಗಿತಗೊಂಡಿದ್ದು, ಈ ಕಾರ್ಖಾನೆಯಲ್ಲಿ ಆರಂಭದಿಂದಲೂ ಒಡಂಬಡಿಕೆ ಮಾಡಿಕೊಂಡು ಲಿಕ್ವಿಡ್ ಆಕ್ಸಿಜನ್ ಖರೀದಿಸುತ್ತಿರುವ ಆಸ್ಪತ್ರೆಗಳಿಗೆ ಪ್ರಸ್ತುತ ಕಂಪನಿಯ ಇತರೆ ಘಟಕಗಳಿಂದ ಲಿಕ್ವಿಡ್ ಆಕ್ಸಿಜನ್ ಸರಬರಾಜು ಮಾಡಿಕೊಂಡು ಪೂರೈಸಲಾಗುತ್ತಿದೆ. ಇದೀಗ ಹೆಚ್ಚಿನ ಬೇಡಿಕೆಗಳು ಬರುತ್ತಿರುವ ಕಾರಣ ಕಾರ್ಖಾನೆಯಲ್ಲಿ ಪುನಃ ಲಿಕ್ವಿಡ್ ಆಕ್ಸಿಜನ್ ಉತ್ಪಾದಿಸುವ ಸಾಧ್ಯತೆ ಹೆಚ್ಚಾಗಿದೆ.
    ೧೯೭೭ರಲ್ಲಿ ಆರಂಭಗೊಂಡಿರುವ ದಿ ಸದರನ್ ಗ್ಯಾಸ್ ಲಿಮಿಟೆಡ್ ೪ ದಶಕಗಳಿಂದ ವೈದ್ಯಕೀಯ ಉದ್ದೇಶಗಳಿಗೆ ಹಾಗು ಕಾರ್ಖಾನೆಗಳಿಗೆ ಅಗತ್ಯವಿರುವ ಆಕ್ಸಿಜನ್ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಈ ಭಾಗದ ಮಧ್ಯಮ ಹಾಗು ಸಣ್ಣ ಪ್ರಮಾಣದ ಉದ್ಯಮಗಳು, ಆಸ್ಪತ್ರೆಗಳು ಆಕ್ಸಿಜನ್‌ಗಾಗಿ ಈ ಕಾರ್ಖಾನೆಯನ್ನು ಅವಲಂಬಿಸಿವೆ. ಜಿಲ್ಲಾಡಳಿತ ತಕ್ಷಣ ಈ ಕಾರ್ಖಾನೆ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ತುರ್ತಾಗಿ ಲಿಕ್ವಿಡ್ ಆಕ್ಸಿಜನ್ ಉತ್ಪಾದಿಸುವ ಸಂಬಂಧ ಚರ್ಚಿಸುವುದು ಸೂಕ್ತ ಎಂಬ ಸಲಹೆಗಳು ವ್ಯಕ್ತವಾಗುತ್ತಿವೆ.



ಗೆಲುವಿನ ಅಂತರದಲ್ಲೂ ಮಹಿಳೆ ಮೊದಲು : ವಾರ್ಡ್ ನಂ.೨೧ರ ವಿಜಯ ಸಾಧನೆ

ಭದ್ರಾವತಿ ವಾರ್ಡ್ ನಂ.೨೧ರ ಜೆಡಿಎಸ್ ಪಕ್ಷದ ಹಿರಿಯ ಮಹಿಳೆ ವಿಜಯ ೩೪ ವಾರ್ಡ್‌ಗಳ ಪೈಕಿ ಅತಿಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು,  ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗು ಬೆಂಬಲಿಗರು ವಿಜಯರನ್ನು ಅಭಿನಂದಿಸಿದರು.
   ಭದ್ರಾವತಿ: ಈ ಬಾರಿ ನಗರಸಭೆ ಚುನಾವಣೆಯಲ್ಲಿ ಹಲವು ದಾಖಲೆಗಳು ರೂಪುಗೊಂಡಿದ್ದು, ಗೆಲುವಿನ ಅಂತರದಲ್ಲೂ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ. ವಾರ್ಡ್ ನಂ.೨೧ರ ಜೆಡಿಎಸ್ ಪಕ್ಷದ ಹಿರಿಯ ಮಹಿಳೆ ವಿಜಯ ೩೪ ವಾರ್ಡ್‌ಗಳ ಪೈಕಿ ಅತಿಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿ ಗಮನ ಸೆಳೆದಿದ್ದಾರೆ.
    ಕಾಗದನಗರ ೬ ಮತ್ತು ೮ನೇ ವಾರ್ಡ್ ವ್ಯಾಪ್ತಿಯ ವಾರ್ಡ್ ನಂ.೨೧ರಲ್ಲಿ ವಿಜಯ ಅವರು ಪುತ್ರ, ಸಮಾಜ ಸೇವಕ ಅಶೋಕ್‌ಕುಮಾರ್ ಹಾಗು ಕುಟುಂಬ ಸದಸ್ಯರ ಸಹಕಾರದೊಂದಿಗೆ ಚುನಾವಣೆಗೆ ಸ್ಪರ್ಧಿಸಿದ್ದು, ಎಲ್ಲರ ನಿರೀಕ್ಷೆಗೂ ಮೀರಿ ಅತಿ ಹೆಚ್ಚು ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
     ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ  ಅಭ್ಯರ್ಥಿಗಳು ವಿಜಯ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು. ಅಲ್ಲದೆ ಬಿಜೆಪಿ ಅಭ್ಯರ್ಥಿ ಪರವಾಗಿ ಸ್ವತಃ  ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಪ್ರಮುಖರು ಪ್ರಚಾರ ನಡೆಸಿದ್ದರು. ಅಲ್ಲದೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಪ್ರಚಾರ ನಡೆಸಿದ್ದರು. ಈ ನಡೆವೆಯೂ ವಿಜಯರವರು ಒಟ್ಟು ೧೨೮೦ ಮತಗಳನ್ನು ಪಡೆಯುವ ಮೂಲಕ ದಾಖಲೆಯನ್ನು ನಿರ್ಮಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೇವಲ ೩೮೬ ಮತಗಳನ್ನು, ಬಿಜೆಪಿ ಅಭ್ಯರ್ಥಿ ೧೭೬ ಮತಗಳನ್ನು  ಪಡೆದುಕೊಂಡಿದ್ದಾರೆ. ವಿಜಯರವರು ಒಟ್ಟು ೮೯೪ ಅತಿ ಹೆಚ್ಚು ಮತಗಳ ಅಂತರದಿಂದ ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ.
    ಪತ್ರಿಕೆಯೊಂದಿಗೆ ಮಾತನಾಡಿದ ವಿಜಯರವರು, ವಾರ್ಡ್‌ನಲ್ಲಿರುವ ಸಮಸ್ಯೆಗಳನ್ನು ಚನ್ನಾಗಿ ಅರಿತುಕೊಂಡಿದ್ದೇನೆ. ಎಲ್ಲಾ ಜನರೊಂದಿಗೆ ಆತ್ಮೀಯತೆಯಿಂದ ಗುರುತಿಸಿಕೊಂಡಿದ್ದೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಹೆಚ್ಚಿನ ಮತಗಳನ್ನು ನೀಡುವ ಮೂಲಕ ಗೆಲುವಿಗೆ ಕಾರಣರಾಗಿರುವ ಮತದಾರರ ಆಶಯದಂತೆ ನಡೆದುಕೊಳ್ಳುತ್ತೇನೆ. ಲಭ್ಯವಾಗುವ ನಗರಸಭೆ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ವಾರ್ಡ್ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

Tuesday, May 4, 2021

ಗಾಳಿ ಮಳೆಗೆ ನೆಲಕ್ಕುರುಳಿದ ನೂರಾರು ಅಡಕೆ ಮರಗಳು : ಪರಿಹಾರಕ್ಕೆ ಆಗ್ರಹ

ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿ ಅರಬಿಳಚಿ ಗ್ರಾಮದಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಪ್ರಮಾಣದ ಗಾಳಿ ಮಳೆಗೆ ನೂರಾರು ಅಡಕೆ ಮರಗಳು ನೆಲಕ್ಕುರುಳಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿ ಮಹೇಶ್, ಗ್ರಾಮ ಲೆಕ್ಕಾಧಿಕಾರಿ ಅಭಿಷೇಕ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಬಿ ಕಿರಣ್ ನೇತೃತ್ವದ ತಂಡ ಪರಿಶೀಲನೆ ನಡೆಸುತ್ತಿರುವುದು.
    ಭದ್ರಾವತಿ, ಮೇ. ೪: ತಾಲೂಕಿನ ಹೊಳೆಹೊನ್ನೂರು ಹೋಬಳಿ ಅರಬಿಳಚಿ ಗ್ರಾಮದಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಪ್ರಮಾಣದ ಗಾಳಿ ಮಳೆಗೆ ನೂರಾರು ಅಡಕೆ ಮರಗಳು ನೆಲಕ್ಕುರುಳಿವೆ.
     ಫಸಲು ಕೊಡುವ ಅಡಕೆ ಮರಗಳು ನೆಲಕ್ಕುರುಳಿರುವ ಕಾರಣ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗಿದೆ. ಗ್ರಾಮಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿ ಮಹೇಶ್, ಗ್ರಾಮ ಲೆಕ್ಕಾಧಿಕಾರಿ ಅಭಿಷೇಕ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಬಿ ಕಿರಣ್, ಸದಸ್ಯರಾದ ಎಚ್.ಎಂ ಸದಾಶಿವಪ್ಪ, ಎಚ್.ಎಸ್ ಮಂಜುನಾಥ್, ಶಬರೀಶ್, ಗುಣಶೇಖರ್ ಸೇರಿದಂತೆ ಇನ್ನಿತರರನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ನಡುವೆ ಗ್ರಾಮದ ಯುವ ರೈತ ಮುಖಂಡ ಎಚ್.ಎಸ್ ಮಂಜುನಾಥೇಶ್ವರ ನಷ್ಟಕ್ಕೊಳಗಾಗಿರುವ ರೈತರಿಗೆ ತಕ್ಷಣ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂಗೆ ಮಾತೃ ವಿಯೋಗ

   ಭದ್ರಾವತಿ, ಮೇ. ೪: ಮಾಜಿ ಕೇಂದ್ರ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಮಾತೃಶ್ರೀ ಸಾರಾ ಬೀಬೀ ಮಂಗಳವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ನಿಧನ ಹೊಂದಿದರು.
    ಸಿ.ಎಂ ಇಬ್ರಾಹಿಂ, ಸಿ.ಎಂ ಖಾದರ್, ಸಿ.ಎಂ ಸಾಧಿಕ್ ಸೇರಿದಂತೆ ೩ ಗಂಡು, ೩ ಹೆಣ್ಣು ಒಟ್ಟು ೬ ಮಕ್ಕಳನ್ನು ಹೊಂದಿದ್ದರು. ಸಾರಾ ಬೀಬೀ ರವರು ಸಿ.ಎಂ ಇಬ್ರಾಹಿಂ ಅವರ ಬೆಂಗಳೂರಿನ ನಿವಾಸದಲ್ಲಿ ವಾಸವಿದ್ದರು. ಮೃತರ ನಿಧನಕ್ಕೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.  

ಮಾರ್ಗಸೂಚಿ ಉಲ್ಲಂಘಿಸಿ ಬಟ್ಟೆ ಅಂಗಡಿಯಲ್ಲಿ ವ್ಯಾಪಾರ : ರು. ೫ ಸಾವಿರ ದಂಡ,

ನಗರಸಭೆ ಕಛೇರಿಯಲ್ಲಿ ಕುಂದು ಕೊರತೆಗಳ ನಿವಾರಣ ಘಟಕ

ಭದ್ರಾವತಿ, ಮೇ. ೪: ಒಂದೆಡೆ ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಮತ್ತೊಂದೆಡೆ ಅಲ್ಲಲ್ಲಿ ವ್ಯಾಪಾರಸ್ಥರು ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ.
ಸೋಮವಾರ ನಗರದ ಜಿ.ಕೆ ಸಿಲ್ಕ್ಸ್-ಟೆಕ್ಸ್‌ಟೈಲ್ಸ್ ಎಂಬ ಬಟ್ಟೆ ಅಂಗಡಿಯೊಂದರಲ್ಲಿ ಬಟ್ಟೆ ಖರೀದಿಗಾಗಿ ಸುಮಾರು ೫೦ಕ್ಕೂ ಹೆಚ್ಚು ಮಂದಿಗೆ ಅವಕಾಶ ಮಾಡಿಕೊಟ್ಟಿದ್ದು, ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ನಗರಸಭೆ ಪೌರಾಯುಕ್ತ ಮನೋಹರ್ ನೇತೃತ್ವದ ತಂಡ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಖರೀದಿಯಲ್ಲಿ ತೊಡಗಿರುವವರು ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಕಂಡು ಬಂದಿದೆ.
ಪೌರಾಯುಕ್ತರು ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡು ಒಟ್ಟಿಗೆ ೫೦ಕ್ಕೂ ಹೆಚ್ಚು ಮಂದಿಗೆ ಖರೀದಿಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ಸರಿಯಲ್ಲ. ಇದರಿಂದ ಸೋಂಕು ಮತ್ತಷ್ಟು ಹೆಚ್ಚುವ ಆತಂಕ ವ್ಯಕ್ತಪಡಿಸುವ ಜೊತೆಗೆ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿರುವ  ಹಿನ್ನಲೆಯಲ್ಲಿ ರು. ೫ ದಂಡ ವಿಧಿಸಿದರು.
         ಕುಂದು ಕೊರತೆಗಳ ನಿವಾರಣ ಘಟಕ :
     ಕೊರೋನಾ ಸೋಂಕು ೨ನೇ ಅಲೆ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಸೋಂಕಿಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರುಗಳು ಹಾಗು ಸಲಹೆ, ಸೂಚನೆಗಳನ್ನು ನೀಡಲು ಕುಂದು ಕೊರತೆಗಳ ನಿವಾರಣ ಘಟಕ ಸ್ಥಾಪಿಸಲಾಗಿದೆ.
    ಘಟಕ ನಗರಸಭೆ ಕಛೇರಿಯಲ್ಲಿ ಕಾರ್ಯ ನಿರ್ವಹಿಸಲಿದ್ದು, ನೇರವಾಗಿ ಸಂಪರ್ಕಿಸಬಹುದಾಗಿದೆ. ಅಥವಾ ದೂರವಾಣಿ ಸಂಖ್ಯೆ ೦೮೨೮೨-೨೬೬೩೫೬, ಎಸ್‌ಎಂಎಸ್/ವಾಟ್ಸಪ್: ೯೪೪೮೮೦೭೬೦೯ ಕರೆ ಮಾಡಬಹುದಾಗಿದೆ ಅಥವಾ ಈ-ಮೇಲ್: pgt.cmcbdvt@gmail.com  ಸಂಪರ್ಕಿಸುವಂತೆ ಪೌರಾಯುಕ್ತ ಮನೋಹರ್ ತಿಳಿಸಿದ್ದಾರೆ.

ನಗರಸಭೆ ಚುನಾವಣೆಯಲ್ಲಿ ಕಳಪೆ ಸಾಧನೆ : ಮಹಿಳಾ ಮೋರ್ಚಾ ಅಧ್ಯಕ್ಷೆ ಬದಲು

ನೂತನ ಅಧ್ಯಕ್ಷೆಯಾಗಿ ಶೋಭಾ ಪಾಟೀಲ್ ನೇಮಕ

ಶೋಭಾ ಪಾಟೀಲ್
       ಭದ್ರಾವತಿ, ಮೇ. ೪: ಈ ಬಾರಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸುವಲ್ಲಿ ವಿಫಲವಾಗಿದ್ದು, ಈ ನಡುವೆ ಪಕ್ಷದ ಸ್ಥಳೀಯ ಮುಖಂಡರು ಹಾಗು ಕಾರ್ಯಕರ್ತರ ನಡುವೆ ಅಸಮಾಧಾನ ವ್ಯಕ್ತವಾಗುತ್ತಿದೆ. ಪಕ್ಷದ ವಿವಿಧ ಮೋರ್ಚಾಗಳ ಚುಕ್ಕಾಣಿ ಹಿಡಿದಿರುವ ಅಧ್ಯಕ್ಷರನ್ನೂ ಸಹ ಚುನಾವಣಾ ಫಲಿತಾಂಶದ ನೇರ ಹೊಣೆಯನ್ನಾಗಿ ಮಾಡಲಾಗುತ್ತಿದೆ. ಇದೀಗ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದ ಕಲ್ಪನಾ ಸುದರ್ಶನ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಲಾಗಿದೆ.
      ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಇಲ್ಲದ ಮೊದಲ ನಗರಸಭೆ ಚುನಾವಣೆ ಇದಾಗಿದ್ದು,  ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದ್ದವು. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಕೆ.ಬಿ ಅಶೋಕ್‌ನಾಯ್ಕ್, ಆಯನೂರು ಮಂಜುನಾಥ್, ಎಸ್. ದತ್ತಾತ್ರಿ, ಗಿರೀಶ್ ಪಟೇಲ್ ಸೇರಿದಂತೆ ಇನ್ನಿತರ ಮುಖಂಡರು ಹೆಚ್ಚಿನ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಪಕ್ಷದ ಸ್ಥಳೀಯ ಮುಖಂಡರು ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ್ದು, ಕೆಲವು ಅಭ್ಯರ್ಥಿಗಳು ಪಕ್ಷದ ನೆರವನ್ನು ದುರ್ಬಳಕೆ ಮಾಡಿಕೊಂಡಿರುವ ಕಾರಣ ಚುನಾವಣೆಯಲ್ಲಿ ಕಳಪೆ ಸಾಧನೆ ಕಾಣಲು ಸಾಧ್ಯವಾಗಿದೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣ ವಾಟ್ಸಫ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿವೆ.  
     ಈ ಆರೋಪಗಳ ನಡುವೆ ಮಹಿಳಾ ಮೋರ್ಚಾ ಅಧ್ಯಕ್ಷೆ ಕಲ್ಪನಾ ಸುದರ್ಶನ್ ಬದಲಿಗೆ ಶೋಭಾ ಪಾಟೀಲ್‌ರವರನ್ನು ನೂತನ ಅಧ್ಯಕ್ಷೆಯನ್ನಾಗಿ ನೇಮಕಗೊಳಿಸಲಾಗಿದೆ. ಶೋಭಾ ಪಾಟೀಲ್ ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಪಕ್ಷದ ವಿವಿಧ ಹುದ್ದೆಗಳಲ್ಲಿ  ಸೇವೆ ಸಲ್ಲಿಸಿದ್ದಾರೆ.

Monday, May 3, 2021

ಬಿ.ಇ ಪದವಿಧರೆ ಈಗ ನಗರಸಭೆ ಸದಸ್ಯೆ

ಭದ್ರಾವತಿ ನಗರಸಭೆ ೩೧ನೇ ವಾರ್ಡ್‌ಗೆ ನೂತನವಾಗಿ ಆಯ್ಕೆಯಾಗಿರುವ ಬಿ.ಇ ಪದವಿಧರೆ ಪಲ್ಲವಿ ದಿಲೀಪ್ ಗೆಲುವಿನ ಸಂಭ್ರಮದಲ್ಲಿರುವುದು.
    ಭದ್ರಾವತಿ, ಮೇ. ೩: ಜಿಂಕ್‌ಲೈನ್ ಕೊಳಚೆ ಪ್ರದೇಶ ವ್ಯಾಪ್ತಿಯನ್ನು ಹೊಂದಿರುವ ನಗರಸಭೆ ವಾರ್ಡ್ ನಂ.೩೧ರ ಮತದಾರರು ಈ ಬಾರಿ ಬಿ.ಇ ಪದವಿಧರೆಯನ್ನು ನಗರಸಭೆ ಸದಸ್ಯೆಯನ್ನಾಗಿ ಆಯ್ಕೆ ಮಾಡಿದ್ದಾರೆ.
     ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕ ದಿಲೀಪ್ ಅವರ ಪತ್ನಿ ಪಲ್ಲವಿ ನೂತನ ಸದಸ್ಯೆಯಾಗಿದ್ದು, ವಾರ್ಡ್‌ನ ಹಲವು ಸಮಸ್ಯೆಗಳ ಬಗ್ಗೆ ಅರಿವು ಹೊಂದಿದ್ದಾರೆ. ಕುಟುಂಬ ಸದಸ್ಯರ ಸಹಕಾರದೊಂದಿಗೆ ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೀಣಾ ಲಕ್ಷಣ ವಿರುದ್ಧ ೩೧೮ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
    ತಮ್ಮ ಗೆಲುವಿನ ಸಂತಸವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡ ಪಲ್ಲವಿ, ಬಿ.ಇ ಪದವಿ ನಂತರ ಉದ್ಯೋಗಕ್ಕೆ ಸೇರಿಕೊಂಡಿದ್ದೆನು. ಮದುವೆ ನಂತರ ಉದ್ಯೋಗ ತೊರೆದು ಸದ್ಯ ಗೃಹಿಣಿಯಾಗಿ ಕುಟುಂಬ ಜವಾಬ್ದಾರಿಯನ್ನು ನಿಬಾಯಿಸುತ್ತಿದ್ದು, ಇದೀಗ ವಾರ್ಡ್ ನಿವಾಸಿಗಳು ನನ್ನನ್ನು ನಗರಸಭೆ ಸದಸ್ಯೆಯನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ನಾನು ಸಹ ವಾರ್ಡ್‌ನಲ್ಲಿಯೇ ಹುಟ್ಟಿ ಬೆಳೆದಿದ್ದು, ಈ ಹಿನ್ನಲೆಯಲ್ಲಿ ಇಲ್ಲಿನ ಜನರಿಗೆ ಚಿರಪರಿಚಿತಳಾಗಿದ್ದೇನೆ. ಅಲ್ಲದೆ ಇಲ್ಲಿನ ಎಲ್ಲಾ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದೇನೆ. ನಗರಸಭೆ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜೊತೆಗೆ ವಾರ್ಡ್ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
     ಪತಿ ದಿಲೀಪ್ ಮಾತನಾಡಿ, ಪ್ರಸ್ತುತ ನಗರಸಭೆ ಸದಸ್ಯರ ಪೈಕಿ ಪತ್ನಿ ಪಲ್ಲವಿ ಹೊರತುಪಡಿಸಿ ಬಿ.ಇ ಪದವಿ ಪಡೆದವರು ಯಾರು ಇಲ್ಲ. ಇವರ ವಿದ್ಯಾರ್ಹತೆಯನ್ನು ಗುರುತಿಸಿ ಮತದಾರರು ಬೆಂಬಲಿಸಿದ್ದಾರೆ. ಮತದಾರರು ಇವರ ಮೇಲೆ ಹೊಂದಿರುವ ವಿಶ್ವಾಸಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳಲಾಗುವುದು. ಅಲ್ಲದೆ ಪತ್ನಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದರು.