Wednesday, September 15, 2021

ಶಿಕ್ಷಕಿ ಎನ್. ತ್ರಿವೇಣಿ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿಗೆ ಆಯ್ಕೆ

ಶಿಕ್ಷಕಿ ಎನ್. ತ್ರಿವೇಣಿ
    ಭದ್ರಾವತಿ, ಸೆ. ೧೫: ಬೆಂಗಳೂರಿನ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಹಿಂದಿ ಶಿಕ್ಷಕರ ಸಂಘದ ವತಿಯಿಂದ ನೀಡಲಾಗುವ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿಗೆ ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಹಿಂದಿ ಶಿಕ್ಷಕಿ ಎನ್. ತ್ರಿವೇಣಿ ಆಯ್ಕೆಯಾಗಿದ್ದಾರೆ.
    ಸೆ.೧೪ರಂದು ಆಯೋಜಿಸಲಾಗಿದ್ದ ರಾಜ್ಯಮಟ್ಟದ ಹಿಂದಿ ದಿವಸ್ ಆನ್‌ಲೈನ್ ಕಾರ್ಯಕ್ರಮದಲ್ಲಿ ಶಿಕ್ಷಕಿ ಎನ್. ತ್ರಿವೇಣಿ ಆಯ್ಕೆಯಾಗಿದ್ದು, ಈ ಕುರಿತು ಪತ್ರಿಕೆಯೊಂದಿಗೆ ಸಂತಸ ಹಂಚಿಕೊಂಡಿರುವ ಶಿಕ್ಷಕಿ ಎನ್. ತ್ರಿವೇಣಿ, ಪ್ರಶಸ್ತಿಗೆ ಆಯ್ಕೆಯಾಗಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ. ಈ ಬಾರಿ ಒಟ್ಟು ೪ ಶಿಕ್ಷಕರು ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಪೈಕಿ ತಾವು ಸಹ ಒಬ್ಬರಾಗಿವುದು ಹೆಮ್ಮೆಯ ವಿಚಾರವಾಗಿದೆ ಎಂದರು.
    ಎನ್. ತ್ರಿವೇಣಿ ಅವರು ಕಳೆದ ಹಲವಾರು ವರ್ಷಗಳಿಂದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅಲ್ಲದೆ ವೃತ್ತಿ ಜೊತೆಗೆ ವಿವಿಧ ಸಂಘ-ಸಂಸ್ಥೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಗುರುತಿಸಿಕೊಂಡಿದ್ದಾರೆ.
    ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕಿ ಎನ್. ತ್ರಿವೇಣಿ ಅವರನ್ನು ಅಂತರಾಷ್ಟ್ರೀಯ ಕಬ್ಬಡಿ ಕ್ರೀಡಾಪಟು ಎಚ್.ಆರ್ ರಂಗನಾಥ್ ಹಾಗು ನಗರದ ಶಿಕ್ಷಕ ವೃಂದದವರು ಮತ್ತು ವಿವಿಧ ಸಂಘ-ಸಂಸ್ಥೆಗಳು ಅಭಿನಂದಿಸಿವೆ.

ಶ್ರೀ ಕೋಟೆ ಬಸವಣ್ಣ ಸ್ವಾಮಿ ದೇವಸ್ಥಾನದಲ್ಲಿ ಅಪರೂಪದ ಹಬ್ಬ ಎಳೆ ಅಷ್ಟಮಿ ಆಚರಣೆ


ಹತ್ತಿಯಿಂದ ನೂಲು(ಎಳೆ) ತೆಗೆಯುವ ವಿಶಿಷ್ಟವಾದ, ಅಪರೂಪದ ಹಬ್ಬ ಎಳೆ ಅಷ್ಟಮಿ ಭದ್ರಾವತಿ ಹಳೇನಗರದ ಶ್ರೀ ಕೋಟೆ ಬಸವಣ್ಣ ಸ್ವಾಮಿ ದೇವಾಲಯದಲ್ಲಿ ಅದ್ದೂರಿಯಾಗಿ ಜರುಗಿತು.
    ಭದ್ರಾವತಿ, ಸೆ. ೧೫: ಹತ್ತಿಯಿಂದ ನೂಲು(ಎಳೆ) ತೆಗೆಯುವ ವಿಶಿಷ್ಟವಾದ, ಅಪರೂಪದ ಹಬ್ಬ ಎಳೆ ಅಷ್ಟಮಿ ಹಳೇನಗರದ ಶ್ರೀ ಕೋಟೆ ಬಸವಣ್ಣ ಸ್ವಾಮಿ ದೇವಾಲಯದಲ್ಲಿ ಅದ್ದೂರಿಯಾಗಿ ಜರುಗಿತು.
    ನಮ್ಮ ಪೂರ್ವಿಜರು ತಲೆ ತಲಾಂತರದಿಂದ ಆಚರಿಸಿಕೊಂಡು ಬರುತ್ತಿರುವ ಐತಿಹಾಸಿಕ ಹಬ್ಬಗಳಲ್ಲಿ ಎಳೆ ಅಷ್ಟಮಿ ಸಹ ಒಂದಾಗಿದ್ದು, ಈ ಹಬ್ಬವನ್ನು ಕೆಲವೆ ಕೆಲವು ಮನೆತನದವರು ಇಂದಿಗೂ ಆಚರಿಸಿಕೊಂಡು ಬರುತ್ತಿದ್ದಾರೆ. ಗೌರಿ ದೇವಿಯನ್ನು ಪ್ರತಿಷ್ಠಾಪಿಸಿ ಚರಕದಿಂದ ನೂಲು ತೆಗೆದು ದೇವಿ ಮುಂಭಾಗದಲ್ಲಿಟ್ಟು ಪೂಜೆ ಸಲ್ಲಿಸುವುದು ಈ ಹಬ್ಬದ ವಿಶೇಷವಾಗಿದೆ.  
    ಎಳೆ ಅಷ್ಟಮಿ, ಎಳೆ ಗೌರಿ, ಸಣ್ಣಗೌರಿ, ನೊಂಪಿ ಗೌರಿ ಸೇರಿದಂತೆ ಹಲವು ರೀತಿಯಲ್ಲಿ ಕರೆಯುವ ಈ ಹಬ್ಬವನ್ನು ವಿಶೇಷವಾಗಿ ಕಟ್ಟುನಿಟ್ಟಿನಿಂದ ಆಚರಣೆ ಮಾಡಲಾಗುತ್ತದೆ. ಗಣಪತಿ ಹಬ್ಬ ಮುಗಿದು ೫ನೇ ದಿನಕ್ಕೆ ಬರುವ ಅಷ್ಟಮಿ ತಿಥಿ ಮೂಲ ನಕ್ಷತ್ರದಂದು ಈ ಹಬ್ಬ ಆಚರಿಸುವುದು ವಾಡಿಕೆಯಾಗಿದೆ. ದೇವಿ ಮುಂಭಾಗ ಪೂಜಿಸಲ್ಪಟ್ಟ ಎಳೆಗಳನ್ನು ಭಕ್ತರು ಬೆಸ ಸಂಖ್ಯೆಯಲ್ಲಿ ಮನೆಗಳಿಗೆ ಕೊಂಡೊಯ್ಯುದು ದೀಪಾವಳಿ ಹಬ್ಬದ ವರೆಗೂ ಪೂಜಿಸಿ ಈ ಹಬ್ಬಕ್ಕೆ ತೆರೆ ಎಳೆಯುತ್ತಾರೆ.
    ದೇವಸ್ಥಾನದಲ್ಲಿ ಜರುಗಿದ ಹಬ್ಬದಲ್ಲಿ ಎಂ.ಹರನಾಥ ಕೋಠಿ, ಡಿ.ಕೆ ಶಿವಲಿಂಗಪ್ಪ, ಡಿ.ಕೆ ಪಂಚಣ್ಣ, ಹಾಲೇಶ್, ನಾಗರಾಜ್ ಮತ್ತು ನಾಗೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ವಿವಿಧೆಡೆ ಅನ್ನದಾತ, ಭಾರತರತ್ನ ಸರ್.ಎಂ.ವಿ ಜನ್ಮದಿನ ಆಚರಣೆ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಬುಧವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನ ಆಚರಿಸಲಾಯಿತು.
    ಭದ್ರಾವತಿ, ಸೆ. ೧೫: ಎರಡು ಬೃಹತ್ ಕಾರ್ಖಾನೆಗಳ ಸ್ಥಾಪನೆಯೊಂದಿಗೆ ಲಕ್ಷಾಂತರ ಜನರಿಗೆ ಅನ್ನದಾತರಾಗಿರುವ ಮೂಲಕ ನಗರದ ಬೆಳವಣಿಗೆಗೆ ಕಾರಣಕರ್ತರಾಗಿರುವ, ಜಗತ್ತಿನ ಶ್ರೇಷ್ಠ ತಂತ್ರಜ್ಞಾನಿಗಳಲ್ಲಿ ಒಬ್ಬರಾಗಿರುವ, ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನ ಬುಧವಾರ ವಿವಿಧೆಡೆ ಅದ್ದೂರಿಯಾಗಿ ಆಚರಿಸಲಾಯಿತು.
       ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಜನ್ಮದಿನ ಆಚರಣೆ :
   ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಆಡಳಿತ ಕಛೇರಿ ಮುಂಭಾಗದಲ್ಲಿರುವ ಸರ್.ಎಂ ವಿಶ್ವೇಶ್ವರಾಯ ಅವರ ಪ್ರತಿಮೆ ಮಾಲಾರ್ಪಣೆ ಮಾಡುವ ಮೂಲಕ ಜನ್ಮದಿನ ಆಚರಿಸಲಾಯಿತು.
ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರ ಅವರು ಕಾರ್ಖಾನೆಗೆ ಸರ್.ಎಂ.ವಿ ಅವರ ಕೊಡುಗೆಯನ್ನು ಸ್ಮರಿಸುವ ಮೂಲಕ ಗೌರವ ವಂದನೆ ಸಲ್ಲಿಸಿದರು.  
    ಮುಖ್ಯ ಮಹಾಪ್ರಬಂಧಕ(ಆಪರೇಷನ್ಸ್) ಕೆ.ಎಸ್ ಸುರೇಶ್, ಮಹಾಪ್ರಬಂಧಕ ಪ್ರಭಾರಿ (ಸಿಬ್ಬಂದಿ ಮತ್ತು ಆಡಳಿತ) ಪಿ.ಪಿ. ಚಕ್ರವರ್ತಿ, ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್, ಅಧಿಕಾರಿಗಳ ಸಂಘದ ಉಪಾಧ್ಯಕ್ಷ ನವೀನ್ ರಾಹುಲ್ ಹಾಗು ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಪಾಲ್ಗೊಂಡಿದ್ದರು. ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬುಧವಾರ ಭಾರತರತ್ನಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನ ಆಚರಿಸಲಾಯಿತು.
    ಸರ್.ಎಂ.ವಿ ಕಾಲೇಜಿನಲ್ಲಿ ಜನ್ಮದಿನ ಆಚರಣೆ :
    ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನ ಆಚರಿಸಲಾಯಿತು.
    ಕಾಲೇಜಿನ ಆವರಣದಲ್ಲಿರುವ ಸರ್.ಎಂ ವಿಶ್ವೇಶ್ವರಾಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎಂ.ಜಿ ಉಮಾಶಂಕರ್ ಮಾತನಾಡಿ, ಸರ್.ಎಂ.ವಿ ಅವರ ಸಾಧನೆಗಳು, ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳು ಹಾಗು ಅವರ ಆದರ್ಶತನಗಳ ಕುರಿತು ಮಾಹಿತಿ ನೀಡಿದರು.  ಕಾಲೇಜಿನ ಬೋಧಕ ಹಾಗು ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


ಭದ್ರಾವತಿ ವಿಐಎಸ್‌ಎಲ್ ಅತಿಥಿಗೃಹದಲ್ಲಿ ಬುಧವಾರ ಭಾರತರತ್ನಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನ ಆಚರಿಸಲಾಯಿತು.
      ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ಜನ್ಮದಿನ ಆಚರಣೆ:
  ಪ್ರತಿವರ್ಷದಂತೆ ಈ ಬಾರಿ ಸಹ ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನ ಆಚರಿಸಲಾಯಿತು. ಸರ್.ಎಂ.ವಿ ಭಾವಚಿತ್ರಕ್ಕೆ ಕಾರ್ಖಾನೆಯ ಮಹಾಪ್ರಬಂಧಕ ಪ್ರಭಾರಿ(ಸಿಬ್ಬಂದಿ ಮತ್ತು ಆಡಳಿತ) ಪಿ.ಪಿ ಚಕ್ರವರ್ತಿ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
    ಅಥಿತಿ ಗೃಹದ ಅಧಿಕಾರಿಗಳು, ಸಿಬ್ಬಂದಿಗಳು ಸಿಹಿ ಹಂಚಿ ಸಂಭ್ರಮಿಸಿದರು. ಅಧಿಕಾರಿ ಚಂದ್ರಕಾಂತ್, ಸಿಬ್ಬಂದಿ ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ರಾಮ್ ಸೇನಾ ಕರ್ನಾಟಕ ಸಂಘಟನೆ ಭದ್ರಾವತಿ ತಾಲೂಕು ಘಟಕ ಹಾಗು ಶ್ರೀ ಲಕ್ಷ್ಮೀನರಸಿಂಹ ಘಟಕದ ವತಿಯಿಂದ ಈ ಬಾರಿ ವಿಶೇಷ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನ ಆಚರಿಸಲಾಯಿತು.
     ರಾಮ್ ಸೇನಾ ಕರ್ನಾಟಕ ಸಂಘಟನೆ ವತಿಯಿಂದ ಜನ್ಮದಿನ ಆಚರಣೆ :
    ನಗರದ ರಾಮ್ ಸೇನಾ ಕರ್ನಾಟಕ ಸಂಘಟನೆ ತಾಲೂಕು ಘಟಕ ಹಾಗು ಶ್ರೀ ಲಕ್ಷ್ಮೀನರಸಿಂಹ ಘಟಕದ ವತಿಯಿಂದ ಈ ಬಾರಿ ವಿಶೇಷ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನ ಆಚರಿಸಲಾಯಿತು.
    ವಿಐಎಸ್‌ಎಲ್ ಕಾರ್ಖಾನೆ ಒಳಭಾಗದಲ್ಲಿರುವ ಸರ್.ಎಂ.ವಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸಿಕೊಂಡು ಅಗತ್ಯವಿರುವ ಬಂಡವಾಳ ಹೂಡುವ ಮೂಲಕ ಅಭಿವೃದ್ಧಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಯಿತು.
    ಸಂಘಟನೆಯ ತಾಲೂಕು ಅಧ್ಯಕ್ಷ ಸಚಿನ್ ವರ್ಣೇಕರ್, ಪ್ರಮುಖರಾದ ಅವಿನಾಶ್, ರಮೇಶ್, ಪ್ರವೀಣ್, ಕೃಷ್ಣ ಜೋಗಿ, ಪವನ್‌ಕುಮಾರ್, ಬಿಳಕ್ಕಿ ಪ್ರಕಾಶ್, ಪ್ರಭು, ಯೋಗೇಶ್, ಸುನಿಲ್‌ಕುಮಾರ್, ಕಾರ್ತಿಕ್ ಮತ್ತು ಸುದರ್ಶನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಲ್ಲಿ ಬುಧವಾರ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನ ಆಚರಿಸಲಾಯಿತು.
         ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಲ್ಲಿ ಜನ್ಮದಿನ ಆಚರಣೆ :
    ನಗರದ ನ್ಯೂಟೌನ್‌ನಲ್ಲಿರುವ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಲ್ಲಿ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಜನ್ಮದಿನ ಸರಳವಾಗಿ ಆಚರಿಸಲಾಯಿತು.
ಪ್ರತಿವರ್ಷ ನಿವೃತ್ತ ಕಾರ್ಮಿಕರು ಸರ್.ಎಂ.ವಿ ಜನ್ಮದಿನ ವಿಶೇಷವಾಗಿ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಸರ್.ಎಂ.ವಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಲಾಯಿತು. ಸಂಘದ ಅಧ್ಯಕ್ಷ, ಸೂಡಾ ಸದಸ್ಯ ರಾಮಲಿಂಗಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳು, ನಿವೃತ್ತ ಕಾರ್ಮಿಕರು ಪಾಲ್ಗೊಂಡಿದ್ದರು.

Tuesday, September 14, 2021

ಲಯನ್ಸ್ ಕ್ಲಬ್ ವತಿಯಿಂದ ಸೆ.೧೫ರಂದು ಶಿಕ್ಷಕರ, ತಂತ್ರಜ್ಞರ ದಿನಾಚರಣೆ

ಭದ್ರಾವತಿ, ಸೆ. ೧೪: ಲಯನ್ಸ್ ಕ್ಲಬ್ ವತಿಯಿಂದ ಸೆ.೧೫ರಂದು ಸಂಜೆ ೬.೩೦ಕ್ಕೆ ನ್ಯೂಟೌನ್ ಉಂಬ್ಳೆಬೈಲು ರಸ್ತೆಯಲ್ಲಿರುವ ಕ್ಲಬ್ ಸಭಾಂಗಣದಲ್ಲಿ ಶಿಕ್ಷಕರ ಹಾಗು ತಂತ್ರಜ್ಞರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
    ಕ್ಲಬ್ ಜಿಲ್ಲಾ ವಲಯಾಧಿಕಾರಿಗಳಾದ ಎ.ಎಸ್ ಕುಮಾರಸ್ವಾಮಿ, ಹೆಬ್ಬಂಡಿ ನಾಗರಾಜ್, ಮಾಜಿ ಗೌರ್‍ನರ್‌ಗಳಾದ ಬಿ. ದಿವಾಕರ ಶೆಟ್ಟಿ, ಕೆ.ಸಿ ವೀರಭದ್ರಪ್ಪ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕ್ಲಬ್ ಅಧ್ಯಕ್ಷ ಬಿ.ಎಸ್ ಮಹೇಶ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
    ಜಿಲ್ಲಾಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಅನಿತಾ ಮೇರಿ ಮತ್ತು ವಿರೂಪಾಕ್ಷಪ್ಪ ಹಿರೇಮಠ, ನಿವೃತ್ತ ತಂತ್ರಜ್ಞರಾದ ಆಲ್ವಿನ್ ಡಿಸೋಜಾ ಮತ್ತು ಮೂಡಲಗಿರಿಯಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಅಲ್ಲದೆ ಕ್ಲಬ್ ವಲಯ ಸಲಹಾ ಸಮಿತಿ ಸಭೆ ಸಹ ನಡೆಯಲಿದ್ದು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಜಯಂತಿ ಆಚರಣೆಗಳು ಎಲ್ಲರನ್ನು ಒಗ್ಗೂಡಿಸುವಂತಿರಲಿ : ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ

ಭದ್ರಾವತಿ ಬಿಳಿಕಿ ಹಿರೇಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ, ಮಹಿಳಾ ಘಟಕ ಹಾಗು ಯುವ ಘಟಕ ಮತ್ತು ಬಿಳಿಕಿ ಗ್ರಾಮಸ್ಥರು ಹಾಗು ಶ್ರೀ ಮಠದ ಭಕ್ತರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಶ್ರೀ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ, ಸೆ. ೧೪: ಜಯಂತಿ ಆಚರಣೆಗಳು ಕೇವಲ ಸೀಮಿತ ವ್ಯಾಪ್ತಿಯಲ್ಲಿ ನಡೆಯದೆ ಸಮಾಜದಲ್ಲಿ ಎಲ್ಲರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಮಾದರಿಯಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ನಡೆಯುವಂತಾಗಬೇಕೆಂದು ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
    ಶ್ರೀಗಳು ಮಂಗಳವಾರ ಶ್ರೀ ಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ, ಮಹಿಳಾ ಘಟಕ ಹಾಗು ಯುವ ಘಟಕ ಮತ್ತು ಬಿಳಿಕಿ ಗ್ರಾಮಸ್ಥರು ಹಾಗು ಶ್ರೀ ಮಠದ ಭಕ್ತರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
    ಎಲ್ಲರೂ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ಮುಂದಿನ ದಿನಗಳಲ್ಲಿ ಇನ್ನೂ ವಿಜೃಂಭಣೆಯಿಂದ ನಡೆಯುವ ಮೂಲಕ ಸಮಾಜಕ್ಕೆ ಒಳಿತಾಗಬೇಕೆಂದರು.
    ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರೂಪಾ ನಾಗರಾಜ್ ಮಾತನಾಡಿ, ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ಶ್ರೀ ಮಠದಲ್ಲಿ ಮುಂದಿನ ದಿನಗಳಲ್ಲಿ ಮಹಿಳಾ ಘಟಕದ ವತಿಯಿಂದ ಇನ್ನೂ ವಿಜೃಂಭಣೆ ಆಚರಿಸುವುದಾಗಿ ಭರವಸೆ ನೀಡುವ ಜೊತೆಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
    ಶ್ರೀ ಮರುಳಸಿದ್ದೇಶ್ವರ ಜನ ಕಲ್ಯಾಣ ಧಾರ್ಮಿಕ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ಅಖಿಲ ಭಾರತ ವೀರಶೈವ ಮಹಾಸಭೆ ತಾಲೂಕು ಉಪಾಧ್ಯಕ್ಷ ಎಸ್. ವಾಗೀಶ್, ಸಂಘಟನಾ ಕಾರ್ಯದರ್ಶಿ ಬಾರಂದೂರು ಮಂಜುನಾಥ್, ಜಿ.ಎಂ ಮೂರ್ತಿ, ಯುವ ಘಟಕದ ಅಧ್ಯಕ್ಷ ಮಂಜುನಾಥ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಕವಿತಾ ಸುರೇಶ್,  ಬಿಳಿಕಿ ಗ್ರಾಮದ ಹಿರಿಯರಾದ ಲೋಕೇಶ್ ರಾವ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗಂಗಾಧರ್, ಗ್ರಾಮಸ್ಥರಾದ ಪರ್ವತಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ಇದಕ್ಕೂ ಮೊದಲು ಜಯಂತ್ಯೋತ್ಸವದ ಅಂಗವಾಗಿ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಶ್ರೀ ಮಠದ ಶ್ರೀ ಆನಂದ ಸ್ವಾಮಿ ಮತ್ತು ಶ್ರೀ ತಿಪ್ಪೇಸ್ವಾಮಿ ಶಾಸ್ತ್ರಿಗಳಿಂದ ರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ನೆರವೇರಿಸಲಾಯಿತು.  

ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ : ಪ್ರತಿ ವರ್ಷ ವೀರಗಾಸೆ ಸ್ಪರ್ಧೆ ಆಯೋಜನೆ

ಅದ್ದೂರಿ ಆಚರಣೆ : ವೀರಶ್ಯೆವ ಸೇವಾ ಸಮಿತಿ ಅಧ್ಯಕ್ಷ ಆರ್. ಮಹೇಶ್‌ಕುಮಾರ್

ಭದ್ರಾವತಿ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿ ಮಂಗಳವಾರ ವೀರಶ್ಯೆವ ಸೇವಾ ಸಮಿತಿ ವತಿಯಿಂದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ಜರುಗಿತು.
    ಭದ್ರಾವತಿ, ಸೆ. ೧೪: ಪ್ರತಿ ವರ್ಷ ತಾಲೂಕು ಮಟ್ಟದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ಅದ್ದೂರಿಯಾಗಿ ಆಚರಿಸುವ ಮೂಲಕ
    ವೀರಗಾಸೆ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಹಳೇನಗರ ವೀರಶ್ಯೆವ ಸೇವಾ ಸಮಿತಿ ಅಧ್ಯಕ್ಷ ಆರ್. ಮಹೇಶ್‌ಕುಮಾರ್ ತಿಳಿಸಿದರು.
    ಅವರು ಮಂಗಳವಾರ ಸಮಿತಿ ವತಿಯಿಂದ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಅನೇಕ ಮಠಾಧೀಶರು ಹಾಗೂ ವೀರಶ್ಯೆವ ಸಂಘಟನೆಗಳು ಕೈಗೊಂಡಿರುವ ತಿರ್ಮಾನದಂತೆ ಸಮಿತಿ ವತಿಯಿಂದ ಪ್ರತಿ ವರ್ಷ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಅಲ್ಲದೆ ತಾಲೂಕು ಮಟ್ಟದಲ್ಲಿ ವೀರಗಾಸೆ ಸ್ಪರ್ಧೆಯನ್ನು ಏರ್ಪಡಿಸಿ ಕಲಾವಿದರನ್ನು  ಪ್ರೋತ್ಸಾಹಿಸಲಾಗುವುದು ಎಂದರು.
    ಶ್ರೀ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ, ರುದ್ರಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
     ಚಿನ್ನಯ್ಯ ಹಿರೇಮಠ, ಶಂಕರಯ್ಯ ಶಾಸ್ತ್ರಿ ಮತ್ತು ಸಿ.ಎಂ ಮಹೇಶ್ವರ ಮೂರ್ತಿ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿಕೊಟ್ಟರು.  ಜಂಗಮ ಸಮಾಜದ ಅಧ್ಯಕ್ಷ ಅಡವೀಶಯ್ಯ, ಜೆ. ಶಿವಕುಮಾರ, ಎಂ. ವಾಗೀಶ್ ಕೋಠಿ, ಚಂದ್ರಶೇಖರ್, ಪಿ.ಹೆಚ್ ಜಗದೀಶ, ಜಿ.ಆರ್ ಸತೀಶ್,  ಅನುಪಮ ಚನ್ನೇಶ್, ವಿ.ಟಿ ನಾಗರತ್ನ, ಆರ್.ಎಸ್ ಶೋಭಾ, ಆರ್.ಎಂ.ಸಿ ಪ್ರಕಾಶ್ ಮತ್ತು ರೂಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹಿಂದಿ ದಿವಸ್ ವಿರೋಧಿಸಿ ಕರಾವೇ ಪ್ರತಿಭಟನೆ : ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ

ಕರ್ನಾಟಕ ರಕ್ಷಣಾ ವೇದಿಕೆ ಭದ್ರಾವತಿ ತಾಲೂಕು ಘಟಕದ ವತಿಯಿಂದ ಹಿಂದಿ ದಿವಸ್ ವಿರೋಧಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಸೆ. ೧೪:  ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ವತಿಯಿಂದ ಹಿಂದಿ ದಿವಸ್ ವಿರೋಧಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಹೆಚ್ಚಿನ ಮಾನ್ಯತೆ ಸಿಗಬೇಕು. ಯಾವುದೇ ಕಾರಣಕ್ಕೂ ಹಿಂದಿ ಭಾಷೆಯನ್ನು ಕನ್ನಡಿಗರ ಮೇಲೆ ಬಲವಂತವಾಗಿ ಹೇರಿಕೆ ಮಾಡಬಾರದು. ಎಲ್ಲಾ ಬ್ಯಾಂಕ್‌ಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿಯೇ ವ್ಯವಹರಿಸಬೇಕು. ಈ ಸಂಬಂಧ ಹಲವಾರು ಬಾರಿ ಬ್ಯಾಂಕ್‌ಗಳ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೂ ಸಹ ಗ್ರಾಹಕರ ಮೇಲೆ ಬಲವಂತಾಗಿ ಹಿಂದಿ ಭಾಷೆಯನ್ನು ಏರಿಕೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
    ಪ್ರಮುಖವಾಗಿ ಕೆನರಾ ಬ್ಯಾಂಕಿನ ಶಾಖೆಗಳಲ್ಲಿ ವ್ಯವಹಾರ ನಡೆಸಲು ಕನ್ನಡಿಗರನ್ನು ಉದ್ಯೋಗಿಗಳಾಗಿ ನೇಮಿಸಿಕೊಳ್ಳಬೇಕು. ಕನ್ನಡ ಬಾರದ ಇತರೆ ರಾಜ್ಯಗಳ ಉದ್ಯೋಗಿಗಳನ್ನು ವಾಪಾಸು ಕಳುಹಿಸಬೇಕು. ಬ್ಯಾಂಕಿನ ಎಲ್ಲಾ ವ್ಯವಹಾರಗಳು ಕನ್ನಡದಲ್ಲಿಯೇ ನಡೆಯುವಂತೆ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಹಾಗು ಬ್ಯಾಂಕಿನ ನಾಮಫಲಕ, ಸೂಚನಾ ಫಲಕಗಳಲ್ಲಿ ಶೇ.೬೦ರಷ್ಟು ಭಾಗ ಕನ್ನಡ ಭಾಷೆಗೆ ಮೀಸಲಿಡಬೇಕೆಂದು ಹಕ್ಕೊತ್ತಾಯಿಸಿ ತಹಸೀಲ್ದಾರ್ ಆರ್. ಪ್ರದೀಪ್  ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ವೇದಿಕೆ ಜಿಲ್ಲಾಧ್ಯಕ್ಷ ಪಿ. ಪ್ರಶಾಂತ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ತಾಲೂಕು ಅಧ್ಯಕ್ಷ ಎಂ. ಪರಮೇಶ್, ಪ್ರಮುಖರಾದ ವಿಶ್ವನಾಥ್, ರೆಡ್‌ಸನ್ ರಾಜು, ಆರ್. ಪ್ರಾಣೇಶ್, ದಿಲೀಪ್, ರಾಮಕೃಷ್ಣ, ಎಚ್.ಎಂ ಉಮೇಶ್, ಚಂದ್ರಪ್ಪ, ಮುನ್ನ, ಬಾಲು, ಆರ್. ರಂಗನಾಥ್ ಮತ್ತು ಅನಿಲ್ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.