Sunday, August 7, 2022

‎ ರುದ್ರಭೂಮಿಯಲ್ಲಿ ಸಸಿ ನೆಟ್ಟು ವನಮಕೋತ್ಸವ

ಭದ್ರಾವತಿ:  ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ವತಿಯಿಂದ ನಗರಸಭೆ ವಾರ್ಡ್ ನಂ. 2ರ  ಕವಲಗುಂದಿ ಹಿಂದೂ ರುದ್ರಭೂಮಿಯಲ್ಲಿ  ಭಾನುವಾರ ವನಮಹೋತ್ಸವ ಆಚರಿಸಲಾಯಿತು.
    ಬಿಳಿಕಿ ಹಿರೇಮಠ  ಪೀಠಾಧ್ಯಕ್ಷರಾದ  ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ  ದಿವ್ಯ ಸಾನಿಧ್ಯ ವಹಿಸಿದ್ದರು.  ಯುವ ಘಟಕದ ಅಧ್ಯಕ್ಷ  ಕಾರ್ಯಕ್ರಮದ  ಎಚ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ  ತಾಲೂಕು  ಅಧ್ಯಕ್ಷ  ಜಿ. ಸುರೇಶಯ್ಯ, ಉಪಾಧ್ಯಕ್ಷೆ ನಂದಿನಿ ಮಲ್ಲಿಕಾರ್ಜುನ, ಖಜಾಂಚಿ ಜಿ.ಎಂ ಮುರ್ತಿ, ಯವ ಘಟಕದ ಉಪಾಧ್ಯಕ್ಷ ಮಹಾದೇವ, ಕಾರ್ಯದರ್ಶಿ ಬಿ.ಎಂ  ಚೇತನ್, ಖಜಾಂಚಿ ಬಿ.ಎಂ ರಮೇಶ್,  ನಿರ್ದೇಶಕರಾದ ಬಿ.ಓ ಬಸವರಾಜ,  ಎಂ. ಮಂಜುನಾಥ್, ವಿನಯ್ ಮಹಿಳಾ ಘಟಕದ ಅಧ್ಯಕ್ಷೆ  ರೂಪಾ ನಾಗರಾಜ್, ಕಾರ್ಯದರ್ಶಿ ಕವಿತಾ ಸುರೇಶ್,  ಸಹ ಕಾರ್ಯದರ್ಶಿ ಉಷಾ, ಮುಖಂಡರಾದ ಮಂಗೋಟೆ ರುದ್ರೇಶ್,  ಕೃಷ್ಣರಾಜ್, ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿ ಕುಮಾರ್ ಗೌಡ, ರಾಜಣ್ಣ, ಸುರೇಶ್ ಹಾಗೂ ನಗರಸಭೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಆಸ್ತಿ, ಹಣಕ್ಕಿಂತ ತಂದೆ-ತಾಯಿ ಪ್ರೀತಿ, ಮಮತೆ ದೊಡ್ಡದು : ಶ್ರೀ ಡಾ. ಗುರುಬಸವ ಸ್ವಾಮೀಜಿ

ಭದ್ರಾವತಿ ಹಳೇನಗರದ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಅಖಿಲ ಭಾರತ ಶರಣ ಪರಿಷತ್ ತಾಲೂಕು ಅಧ್ಯಕ್ಷ ಎಂ. ವಿರುಪಾಕ್ಷಪ್ಪ ಅವರ ತಂದೆ-ತಾಯಿ ಮಂಜಪ್ಪ-ಲಕ್ಕಮ್ಮ ಅವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ದತ್ತಿ ಸ್ವೀಕಾರ ಕಾರ್ಯಕ್ರಮವನ್ನು ಕಮ್ಮತ್ತಹಳ್ಳಿ ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಡಾ. ಗುರುಬಸವ ಸ್ವಾಮೀಜಿ ಉದ್ಘಾಟಿಸಿದರು. 
    ಭದ್ರಾವತಿ, ಆ. ೭: ಶರಣರ ಬದುಕು, ಚಿಂತನೆ, ಆದರ್ಶಗಳು ನಮ್ಮ ಮಕ್ಕಳ ಭವಿಷ್ಯದ ದಾರಿ ದೀಪಗಳಾಗಿವೆ. ಪ್ರಸ್ತುತ ಮಕ್ಕಳಿಗೆ ಆಸ್ತಿ, ಹಣಕ್ಕಿಂತ ಮುಖ್ಯವಾಗಿ ಉತ್ತಮ ಸಂಸ್ಕಾರ ಅಗತ್ಯವಿದೆ ಎಂದು ಕಮ್ಮತ್ತಹಳ್ಳಿ ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಡಾ. ಗುರುಬಸವ ಸ್ವಾಮೀಜಿ ಹೇಳಿದರು.
    ಅವರು ಭಾನುವಾರ ಹಳೇನಗರದ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಅಖಿಲ ಭಾರತ ಶರಣ ಪರಿಷತ್ ತಾಲೂಕು ಅಧ್ಯಕ್ಷ ಎಂ. ವಿರುಪಾಕ್ಷಪ್ಪ ಅವರ ತಂದೆ-ತಾಯಿ ಮಂಜಪ್ಪ-ಲಕ್ಕಮ್ಮ ಅವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ದತ್ತಿ ಸ್ವೀಕಾರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
    ತಾಯಿ ಮಮತೆಗೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಪ್ರತಿಯೊಬ್ಬರ ಬದುಕಿನಲ್ಲಿ ಮೊದಲ ಸ್ಥಾನ ತಾಯಿ, ನಂತರ ಸ್ಥಾನ ಅಪ್ಪ ಎಂಬುದನ್ನು ಮರೆಯಬಾರದು. ಇಂದು ನಾವೆಲ್ಲರೂ ಹಣದ ವ್ಯಾಮೋಹದ ಹಿಂದೆ ಬಿದ್ದಿದ್ದೇವೆ. ಹಣ, ಆಸ್ತಿ ಎಷ್ಟು ಸಂಪಾದಿಸಿರೂ ಸಹ ತೃಪ್ತಿ ಎಂಬುದು ಇಲ್ಲವಾಗಿದೆ. ಇದರಿಂದಾಗಿ ಬಹಳಷ್ಟು ಮಕ್ಕಳು ತಮ್ಮ ವಯಸ್ಸಾದ ತಂದೆ-ತಾಯಿಯನ್ನು  ದೂರ ಮಾಡಿಕೊಳ್ಳುತ್ತಿದ್ದಾರೆ.  ತಮ್ಮ ಕೊನೆಯ ಅವಧಿಯಲ್ಲಿ ಏನನ್ನು ಸಹ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ತಂದೆ-ತಾಯಿ ಪ್ರೀತಿ, ಮಮತೆ ಮುಂದೆ ಯಾವುದೇ ಸಹ ದೊಡ್ಡದಲ್ಲ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಇಂತಹ ಬದುಕಿನ ಸಂಸ್ಕಾರಗಳಿಗೆ ಶರಣರ ಬದುಕು, ಚಿಂತನೆ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.
    ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಮಾತನಾಡಿ, ಶರಣ ಸಾಹಿತ್ಯ ಮತ್ತು ವಚನ ಸಾಹಿತ್ಯಗಳು ಜನರಲ್ಲಿ ಬಲವಂತವಾಗಿ ಹೇರಿದ ಸಾಹಿತ್ಯಗಳಲ್ಲ ಬದಲಾಗಿ ಜನರು ಒಪ್ಪಿಕೊಂಡ ಸಾಹಿತ್ಯಗಳಾಗಿವೆ. ಶರಣರ ವಾಸ್ತವ ಬದುಕಿನ ಅನುಭವಗಳು ಈ ಸಾಹಿತ್ಯಗಳಾಗಿವೆ. ಶರಣರು ತಮ್ಮ ಕಾಲಾವಧಿಯಲ್ಲಿಯೇ ಕಾಯಕ, ದಾಸೋಹದ ಮಹತ್ವ ಸಾರಿದರು. ಸಮಾಜದಲ್ಲಿ ಸಮಾನತೆ ಪರಿಕಲ್ಪನೆ ಮೂಡಿಸಿದರು. ಇಂತಹ ಶರಣ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಮುನ್ನಡೆಯಬೇಕಾಗಿದೆ ಎಂದರು.
    ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಬಾರಂದೂರು ಪ್ರಕಾಶ್ ಆಶಯ ನುಡಿಗಳನ್ನಾಡಿದರು.
    ಬಸವಕೇಂದ್ರದ ಅಧ್ಯಕ್ಷ ಜಗದೀಶ್ ಕವಿ, ಸುವರ್ಣಮ್ಮ ಹಿರೇಮಠ್ ಉಪಸ್ಥಿತರಿದ್ದರು. ಕತ್ತಲಗೆರೆ ತಿಮ್ಮಪ್ಪ, ಮಲ್ಲಿಕಾರ್ಜುನ್ ನಿರೂಪಿಸಿದರು. ಎಂ. ವಿರುಪಾಕ್ಷಪ್ಪ ತಂದೆ-ತಾಯಿ ಸ್ಮರಣಾರ್ಥ ಶರಣ ಸಾಹಿತ್ಯ ಪರಿಷತ್‌ಗೆ ೫೦ ಸಾವಿರ ರು. ದೇಣಿಗೆ ನೀಡಿದರು.

ಕೇಂದ್ರ, ರಾಜ್ಯ ಸರ್ಕಾರಗಳಿಗೆ ಬಡವರ ಬಗ್ಗೆ ಕಾಳಜಿ ಇಲ್ಲ : ಬಿ.ವಿ ಶ್ರೀನಿವಾಸ್

ಭದ್ರಾವತಿ ತಾಲೂಕಿನ ಬಿಆರ್‌ಪಿ ಭದ್ರಾ ಜಲಾಶಯದಲ್ಲಿ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ವರ್ಗದವರು ವಿವಿಧ ಧರ್ಮಗಳ ಗುರುಗಳ ಸಮ್ಮುಖದಲ್ಲಿ ಗಂಗಾಪೂಜೆಯೊಂದಿಗೆ ಭದ್ರೆಗೆ ಬಾಗಿನ ಸಮರ್ಪಿಸಿದರು.
    ಭದ್ರಾವತಿ, ಆ. ೭:  ರಾಜ್ಯ ಹಾಗು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರಗಳಿಗೆ ಬಡ ಜನರ ಬಗ್ಗೆ ಕಾಳಜಿ ಇಲ್ಲ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಆರೋಪಿಸಿದರು.
    ಅವರು ಭಾನುವಾರ ತಾಲೂಕಿನ ಬಿಆರ್‌ಪಿ ಭದ್ರಾ ಜಲಾಶಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಂಗಾ ಪೂಜೆ ಮತ್ತು ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಬಡ ಜನರು ಬದುಕುವುದು ಅಸಾಧ್ಯವಾಗಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಶ್ರೀಮಂತರ ಪರವಾಗಿವೆ. ಪ್ರಸ್ತುತ ಬಡ ಜನರು ತಮ್ಮ ಬದುಕಿಗಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
    ಇದಕ್ಕೂ ಮೊದಲು ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಕುಟುಂಬ ವರ್ಗದವರು ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೌದ್ಧ ಬಿಕ್ಕು ನ್ಯಾನಲೋಕ ಬಂತೇಜಿ, ಕ್ರೈಸ್ತ ಧರ್ಮ ಗುರು ಫಾಸ್ಟರ್ ದೇವನೇಸನ್ ಸಾಮ್ಯೂಯಲ್ ಸೇರಿದಂತೆ ವಿವಿಧ ಧರ್ಮಗಳ ಗುರುಗಳ ಸಮ್ಮುಖದಲ್ಲಿ ಬಾಗಿನ ಸಮರ್ಪಿಸಿದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಉದ್ಯಮಿಗಳಾದ ಬಿ.ಕೆ ಜಗನ್ನಾಥ್, ಬಿ.ಕೆ ಶಿವಕುಮಾರ್, ನಗರಸಭಾ ಸದಸ್ಯರು, ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು,  ರೈತರು, ಕಾರ್ಮಿಕರು, ಮಹಿಳೆಯರು, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.

Saturday, August 6, 2022

ಪುನಃ ಹೊಸ ಸೇತುವೆ ಮುಳುಗಡೆ : ಪ್ರವಾಹ ಭೀತಿ

ಭದ್ರಾವತಿ ನಗರದ ಹೃದಯ ಭಾಗದಲ್ಲಿ ಭದ್ರಾ ನದಿ ನೀರಿನ ಏಕಾಏಕಿ ಹೆಚ್ಚಾಗಿದ್ದು, ಹೊಸ ಸೇತುವೆ ಶನಿವಾರ ಸಂಜೆ ಮುಳುಗಡೆಗೊಂಡಿದೆ.
    ಭದ್ರಾವತಿ, ಆ. ೬: ನಗರದ ಹೃದಯ ಭಾಗದಲ್ಲಿ ಭದ್ರಾ ನದಿ ನೀರಿನ ಏಕಾಏಕಿ ಹೆಚ್ಚಾಗಿದ್ದು, ಹೊಸ ಸೇತುವೆ ಶನಿವಾರ ಸಂಜೆ ಮುಳುಗಡೆಗೊಂಡಿದೆ.
    ಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ನದಿಗೆ ಬಿಟ್ಟಿರುವ ಹಿನ್ನಲೆಯಲ್ಲಿ ಸೇತುವೆ ಮುಳುಗಡೆಯಾಗಿದ್ದು, ಸೇತುವೆ ಮೇಲಿನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಸೇತುವೆ ಎರಡು ಬದಿಯಲ್ಲೂ ಸಂಚಾರಿ ಪೊಲೀಸರು ಬ್ಯಾರಿಗೇಡ್‌ಗಳನ್ನು ಅಳವಡಿಸಿದ್ದು, ಸೇತುವೆ ಸಮೀಪ ಯಾರು ಸುಳಿಯದಂತೆ ಎಚ್ಚರ ವಹಿಸಿದ್ದಾರೆ.
    ಈ ನಡುವೆ ಪುನಃ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ತಗ್ಗು ಪ್ರದೇಶದ ನಿವಾಸಿಗಳನ್ನು ಸುರಕ್ಷಿತ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಳಿಸುವುದು ಅನಿವಾರ್ಯವಾಗಿದೆ. ರಾತ್ರಿ ವೇಳೆ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಕಂಡು ಬರುತ್ತಿದೆ.

ಶಾಲೆ ಬಳಿ ಇಸ್ಪೀಟ್ ಜೂಜಾಟ : ಪ್ರಕರರಣ ದಾಖಲು


    ಭದ್ರಾವತಿ, ಆ. ೬: ಹಳೇನಗರದ ಜಟ್‌ಪಟ್ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಅಡ್ಡೆಯೊಂದರ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ.
    ಹಳೇನಗರ ಠಾಣೆ ಪೊಲೀಸರು ಶುಕ್ರವಾರ ಸಂಜೆ ಈ ಭಾಗದ ಬೀಟ್ ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸುಮಾರು ೮ ರಿಂದ ೧೦ ಜನರ ಗುಂಪೊಂದು ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವುದು ಕಂಡು ಬಂದಿದ್ದು, ತಕ್ಷಣ ದಾಳಿ ನಡೆಸಿ ಇವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪರಿಷತ್ ಸದಸ್ಯರ ಅನುದಾನದಲ್ಲಿ ವಿಕಲಚೇತನ ವೆಂಕಟೇಶ್‌ಗೆ ದ್ವಿಚಕ್ರ ವಾಹನ ವಿತರಣೆ

ಭದ್ರಾವತಿ ಹಳೇನಗರದ ರಥಬೀದಿ ನಿವಾಸಿ, ವಿಕಲಚೇತನ ಟಿ.ವಿ ವೆಂಕಟೇಶ್ ಅವರಿಗೆ ವಿಧಾನಪರಿಷತ್ ಸದಸ್ಯರ ಅನುದಾನದಲ್ಲಿ ದ್ವಿಚಕ್ರ ವಾಹನ ವಿತರಿಸಲಾಯಿತು.
    ಭದ್ರಾವತಿ, ಆ. ೬: ಹಳೇನಗರದ ರಥಬೀದಿ ನಿವಾಸಿ, ವಿಕಲಚೇತನ ಟಿ.ವಿ ವೆಂಕಟೇಶ್ ಅವರಿಗೆ ವಿಧಾನಪರಿಷತ್ ಸದಸ್ಯರ ಅನುದಾನದಲ್ಲಿ ದ್ವಿಚಕ್ರ ವಾಹನ ವಿತರಿಸಲಾಯಿತು.
    ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ತಮ್ಮ ಅನುದಾನದಲ್ಲಿ ಮಂಜೂರಾದ ದ್ವಿಚಕ್ರ ವಾಹನವನ್ನು ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸುವ ಮೂಲಕ ಟಿ.ವಿ ವೆಂಕಟೇಶ್ ಅವರ ಸಂಕಷ್ಟಕ್ಕೆ ಸ್ಪಂದಿಸಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
    ವಿಕಲಚೇತನ ವೆಂಕಟೇಶ್ ಮಾತನಾಡಿ, ಸಂಕಷ್ಟಕ್ಕೆ ಸ್ಪಂದಿಸಿರುವುದು ತುಂಬಾ ಸಂತಸವನ್ನುಂಟು ಮಾಡಿದೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಪಕ್ಷದ ಮುಖಂಡರಾದ ನಗರಸಭಾ ಸದಸ್ಯರಾದ ಅನುಪಮಾ, ಕರೀಗೌಡ, ಚನ್ನೇಶ್, ಮಂಗೋಟೆ ರುದ್ರೇಶ್. ಜಿ. ಆನಂದ್‌ಕುಮಾರ್, ವಿಶ್ವನಾಥ ಕೋಠಿ, ಚಂದ್ರು, ರವಿಕುಮಾರ್, ಸುಬ್ರಮಣಿ, ಮಂಜುನಾಥ್, ಪ್ರಭುರಾವ್, ಬಿ.ಆರ್ ಸಚ್ಚಿದಾನಂದ, ವಿಜಯ್, ಮಂಜುಳ,  ಶಕುಂತಲ, ಹೇಮಾ ನಿತ್ಯಾನಂದ, ಸಿಂಧೂ ಸುರೇಶ್, ಕವಿತಾ ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಆ.೭ರಂದು ಭದ್ರೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಬಾಗಿನ ಸಮರ್ಪಣೆ

    ಭದ್ರಾವತಿ, ಆ. ೬: ಮಲೆನಾಡು, ಅರೆ ಮಲೆನಾಡು ಹಾಗು ಬಯಲು ಸೀಮೆಯ ಭಾಗದ ಜೀವನದಿ ತಾಲೂಕಿನ ಭದ್ರಾ ನದಿ ಈ ಬಾರಿ ಸಹ ತುಂಬಿ ಹರಿಯುತ್ತಿದ್ದು, ಅದರಲ್ಲೂ ಎರಡು ಬಾರಿ ಜಲಾಶಯಪೂರ್ಣಗೊಂಡಿರುವುದು ಸಂತಸದ ಸಂಗತಿಯಾಗಿದೆ. ಈ ನಡುವೆ ಶಾಸಕ ಬಿ.ಕೆ ಸಂಗಮೇಶ್ವರ್ ಆ.೭ರಂದು ಸರ್ವಧರ್ಮಗಳ ಗುರುಗಳ ಸಮ್ಮುಖದಲ್ಲಿ ಬಾಗಿನ ಸಮರ್ಪಿಸಲಿದ್ದಾರೆ.
    ಬಿಆರ್‌ಪಿ ಭದ್ರಾ ಜಲಾಶಯದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಗಂಗಾ ಪೂಜೆಯೊಂದಿಗೆ ಸರ್ವಧರ್ಮಗಳ ಗುರುಗಳ ಸಮ್ಮುಖದಲ್ಲಿ ಬಾಗಿನ ಸಮರ್ಪಿಸಲಿದ್ದಾರೆ.
    ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಗಣ್ಯರು, ಅಭಿಮಾನಿಗಳು ಸೇರಿದಂತೆ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಕೋರಿದ್ದಾರೆ.