Tuesday, August 8, 2023

ಸಮಾಜದ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಿದಾಗ ಮಾತ್ರ ಪರಿಹಾರ ಸಾಧ್ಯ : ಪ್ರಕಾಶ್‌ ರಾಜ್‌

ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕಾರುಣ್ಯ ಚಾರಿಟಬಲ್‌ ಟ್ರಸ್ಟ್‌ ಸಹಯೋಗದೊಂದಿಗೆ  ಭದ್ರಾವತಿ ನ್ಯೂಟೌನ್‌ ಸರ್‌.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಂಗಭೂಮಿ, ಸಿನಿಮಾ ಮತ್ತು ಸಮಾಜ ವಿಷಯ ಕುರಿತು ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಬಹುಭಾಷಾ ಚಲನಚಿತ್ರ ನಟ ಪ್ರಕಾಶ್‌ ರಾಜ್‌ ವಿದ್ಯಾರ್ಥಿಗಳ  ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದರು.
    ಭದ್ರಾವತಿ, ಆ. ೮ :  ಸಮಾಜದ ಸಮಸ್ಯೆಗಳಿಗೆ ನಾವುಗಳು ಪೂರಕವಾಗಿ ಸ್ಪಂದಿಸಿದಾಗ ಮಾತ್ರ ಪರಿಹಾರ ಕಂಡು ಕೊಳ್ಳಲು ಸಾಧ್ಯ ಎಂದು ಬಹುಭಾಷಾ ಚಲನಚಿತ್ರ ನಟ ಪ್ರಕಾಶ್‌ ರಾಜ್‌ ಹೇಳಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕಾರುಣ್ಯ ಚಾರಿಟಬಲ್‌ ಟ್ರಸ್ಟ್‌ ಸಹಯೋಗದೊಂದಿಗೆ  ನ್ಯೂಟೌನ್‌ ಸರ್‌.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಂಗಭೂಮಿ, ಸಿನಿಮಾ ಮತ್ತು ಸಮಾಜ ವಿಷಯ ಕುರಿತು ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ  ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದರು.
    ನಗರ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್ಎಲ್) ಮತ್ತು ಮೈಸೂರು ಕಾಗದ ಕಾರ್ಖಾನೆ(ಎಂಪಿಎಂ)ಗಳ ಸಮಸ್ಯೆಗಳು ಕೇವಲ ಕಾರ್ಮಿಕರ ಸಮಸ್ಯೆಗಳಲ್ಲ. ಇಡೀ ಊರಿನ ಸಮಸ್ಯೆಯಾಗಿದೆ ಎಂದು ಜನರು ಭಾವಿಸಿ, ಪ್ರತಿಕ್ರಿಯಿಸಿದಾಗ ಮಾತ್ರ  ಸಮಸ್ಯೆ ನಿವಾರಣೆ ಸಾಧ್ಯ  ಎಂದರು.  
    ಕಲಾವಿದರು ಸಮಾಜದ ಪ್ರತಿನಿಧಿಗಳು:
    ಕಲಾವಿದರು ಹೇಡಿಗಳಾದರೆ, ಸಮಾಜ ಹೇಡಿಯಾದಂತೆ. ಏಕೆಂದರೆ ಕಲಾವಿದರು ಸಹ ಸಮಾಜದ ಪ್ರತಿನಿಧಿಗಳು. ಕಲಾವಿದ ಕೇವಲ ಪ್ರತಿಭೆಯಿಂದ ಮಾತ್ರ ಬೆಳೆಯಲು ಸಾಧ್ಯವಿಲ್ಲ. ಸಮಾಜದ ಜನ ಪ್ರೋತ್ಸಾಹಿಸಿದಾಗ, ಒಪ್ಪಿಕೊಂಡಾಗ ಮಾತ್ರ ಬೆಳೆಯಲು ಸಾಧ್ಯ ಎಂದರು.
    ಧರ್ಮದ ಹೆಸರಿನಲ್ಲಿ ವಿವಾದಗಳು ಬೇಡ :
    ಧರ್ಮದ ಹೆಸರಿನಲ್ಲಿ ವಿವಾದಗಳು ಸೃಷ್ಟಿಸಬಾರದು. ಏಕೆಂದರೆ ಧರ್ಮ ಕರುಣೆಯನ್ನು ಸಾರುತ್ತದೆ ಹೊರತು, ಹಿಂಸೆಯನ್ನಲ್ಲ. ಆದ್ದರಿಂದ ನಾವುಗಳು ವಿಶ್ವ ಮಾನವರಾಗೋಣ, ವಿಶ್ವ ಗುರುವಾಗುವುದು ಬೇಡ. ಸಮಾಜದಲ್ಲಿ ಭಿನ್ನಾಭಿಪ್ರಾಯಗಳಿರಬೇಕು. ಆದರೆ ಭಿನ್ನಾಭಿಪ್ರಾಯವನ್ನು ಅವಾಚ್ಯ ಶಬ್ದಗಳ ಮೂಲಕ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.

ಬಹುಭಾಷಾ ಚಲನಚಿತ್ರ ನಟ ಪ್ರಕಾಶ್‌ ರಾಜ್‌ ಸಂವಾದ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಂದ ವಿರೋಧ

ಪ್ರತಿಭಟನೆ ನಡೆಸಿ, ವೇದಿಕೆ ಸ್ಥಳವನ್ನು ನೀರಿನಿಂದ ಶುದ್ಧೀಕರಿಸಿದ ವಿದ್ಯಾರ್ಥಿಗಳು

ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕಾರುಣ್ಯ ಚಾರಿಟಬಲ್‌ ಟ್ರಸ್ಟ್‌ ಸಹಯೋಗದೊಂದಿಗೆ  ಭದ್ರಾವತಿ ನ್ಯೂಟೌನ್‌ ಸರ್‌.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಂಗಭೂಮಿ, ಸಿನಿಮಾ ಮತ್ತು ಸಮಾಜ ವಿಷಯ ಕುರಿತು ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮಕ್ಕೆ ಕಾಲೇಜಿನ ಕೆಲವು ವಿದ್ಯಾರ್ಥಿಗಳೇ ವಿರೋಧಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
    ಭದ್ರಾವತಿ, ಆ. ೮ : ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕಾರುಣ್ಯ ಚಾರಿಟಬಲ್‌ಟ್ರಸ್ಟ್‌ಸಹಯೋಗದೊಂದಿಗೆ  ನ್ಯೂಟೌನ್‌ ಸರ್‌.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಂಗಭೂಮಿ, ಸಿನಿಮಾ ಮತ್ತು ಸಮಾಜ ವಿಷಯ ಕುರಿತು ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮಕ್ಕೆ ಕಾಲೇಜಿನ ಕೆಲವು ವಿದ್ಯಾರ್ಥಿಗಳೇ ವಿರೋಧಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
    ಬಹುಭಾಷಾ ಚಲನಚಿತ್ರ ನಟ ಪ್ರಕಾಶ್‌ ರಾಜ್‌ರವರು ಸದಾ ದೇಶ ವಿರೋಧಿಗಳನ್ನು ಬೆಂಬಲಿಸುತ್ತಿದ್ದು, ಅವರಿಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಅರ್ಹತೆ ಇಲ್ಲ.  ವಿದ್ಯಾರ್ಥಿಗಳ ಅಭಿಪ್ರಾಯ ಪಡೆಯದೆ ಕೆಲವು ವಿದ್ಯಾರ್ಥಿಗಳನ್ನು ಹೊರಗಿಟ್ಟು ಸಂವಾದ ನಡೆಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ಎಸ್‌ ಹೊಸಳ್ಳೇರ ಮಾತನಾಡಿ, ಕಾರ್ಯಕ್ರಮ ಕುರಿತು ಮನವರಿಕೆ ಮಾಡಿಕೊಟ್ಟರು. ಆದರೂ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆ ಮುಂದುವರೆಸಿದರು. ಅಲ್ಲದೆ ಕೆಲವು ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮದ ಸ್ಥಳವನ್ನು ನೀರಿನಿಂದ ಶುದ್ಧೀಕರಿಸಿದರು.
    ವಿದ್ಯಾರ್ಥಿಗಳ ಪ್ರತಿಭಟನೆಗೆ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್‌ ಬೆಂಬಲ ಸೂಚಿಸಿ ಕಾಲೇಜು ಆಡಳಿತ ಮಂಡಳಿ ನಡೆಯನ್ನು ಪ್ರಶ್ನಿಸಿದರು.  

ಪ್ರತಿಯೊಬ್ಬರು ಒಗ್ಗಟ್ಟಿನಿಂದ ಬದುಕುವ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಕೈಜೋಡಿಸಿ

ಸಂವಾದ ಕಾರ್ಯಕ್ರಮದಲ್ಲಿ ಬಹುಭಾಷಾ ಚಲನಚಿತ್ರ ನಟ ಪ್ರಕಾಶ್‌ರಾಜ್‌

ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕಾರುಣ್ಯ ಚಾರಿಟಬಲ್‌ಟ್ರಸ್ಟ್‌ಸಹಯೋಗದೊಂದಿಗೆ ಭದ್ರಾವತಿ ನ್ಯೂಟೌನ್‌ ಸರ್‌.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಂಗಭೂಮಿ, ಸಿನಿಮಾ ಮತ್ತು ಸಮಾಜ ವಿಷಯ ಕುರಿತು ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಬಹುಭಾಷಾ ಚಲನಚಿತ್ರ ನಟ ಪ್ರಕಾಶ್‌ರಾಜ್‌ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಕಾಲೇಜಿನ ಆವರಣದಲ್ಲಿರುವ ಸರ್‌.ಎಂ.ವಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
    ಭದ್ರಾವತಿ, ಆ. ೮:  ಪ್ರತಿಯೊಬ್ಬರು ಒಗ್ಗಟ್ಟಿನಿಂದ ಬದುಕುವ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಕೈಜೋಡಿಸಬೇಕೆಂದು ಬಹುಭಾಷಾ ಚಲನಚಿತ್ರ ನಟ ಪ್ರಕಾಶ್‌ರಾಜ್‌ ಹೇಳಿದರು.
    ಅವರು ಮಂಗಳವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕಾರುಣ್ಯ ಚಾರಿಟಬಲ್‌ಟ್ರಸ್ಟ್‌ಸಹಯೋಗದೊಂದಿಗೆ  ನ್ಯೂಟೌನ್‌ಸರ್‌.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಂಗಭೂಮಿ, ಸಿನಿಮಾ ಮತ್ತು ಸಮಾಜ ವಿಷಯ ಕುರಿತು ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಪ್ರತಿಯೊಬ್ಬರಲ್ಲೂ ವಿಶ್ವ ಮಾನವ ಭಾವನೆಗಳು ಬೆಳೆಯಬೇಕು. ಧರ್ಮ, ಜಾತಿ ಎಲ್ಲವನ್ನು ಮೀರಿದ ಮಾನವೀಯ ಸಮಾಜ ನಿರ್ಮಾಣವಾಗಬೇಕು. ನಮ್ಮ ದೇಹಕ್ಕೆ ಗಾಯವಾದರೆ ಅದು ನಮಗೆ ಮಾತ್ರ ಸೀಮಿತವಾಗಿ ಬಿಡುತ್ತದೆ. ಆದರೆ ಸಮಾಜಕ್ಕೆ ಗಾಯವಾದರೆ ಅದು ಎಲ್ಲರಿಗೂ ವ್ಯಾಪಿಸುತ್ತದೆ. ಈ ಹಿನ್ನಲೆಯಲ್ಲಿ ಸಮಾಜಕ್ಕೆ ಗಾಯವಾದಾಗ ನಾವೆಲ್ಲರೂ ಎಚ್ಚೆತ್ತುಕೊಂಡು ಜಾಗೃತರಾಗಬೇಕೆಂದರು.
ಬಾಬಾ ಸಾಹೇಬ್‌ ಅಂಬೇಡ್ಕರ್‌ರವರ ಆಶಯಗಳನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಾಗಿ ಬದುಕುವ ಮನೋಭಾವ ಬೆಳೆಸಿಕೊಳ್ಳಬೇಕು. ಒಬ್ಬರಿಗಾಗಿ ಎಲ್ಲರೂ ಎಲ್ಲರಿಗೂ ಒಬ್ಬರು ಎಂಬ ಭಾವನೆ ಬೆಳೆದಾಗ ಮಾತ್ರ ಎಲ್ಲವೂ ಸಾಧ್ಯ ಎಂದರು.


    ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ. ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಕೆ.ಎಲ್‌ಅಶೋಕ್‌, ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಚಿನ್ನಯ್ಯ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್‌,  ಮಾಜಿ ಸದಸ್ಯ ಬಾಲಕೃಷ್ಣ, ಕಾರುಣ್ಯ ಚಾರಿಟಬಲ್‌ಟ್ರಸ್ಟ್‌ಅಧ್ಯಕ್ಷ ಜಿ. ರಾಜು ಸೇರಿದಂತೆ  ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ಹೊಸಳ್ಳೇರ ಹಾಗು ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿಗಳು, ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗು ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.
 ಪ್ರಗತಿಪರ ಸಂಘಟನೆಗಳ ಮುಖಂಡ ಸುರೇಶ್‌ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಚ್.ಎಂ ಖಾದ್ರಿ ಸ್ವಾಗತಿಸಿದರು.
    ಪೊಲೀಸ್‌ ಬಂದೋಬಸ್ತ್‌ :
    ಪ್ರಕಾಶ್‌ರಾಜ್‌ ಆಗಮನಕ್ಕೆ ನಗರದಲ್ಲಿ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಇಲಾಖೆ ವತಿಯಿಂದ ಹೆಚ್ಚಿನ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.
    ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಾಸ್‌ ಹೊಂದಿರುವವರಿಗೆ ಮಾತ್ರ ಕಾಲೇಜು ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಅಲ್ಲದೆ ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.

Monday, August 7, 2023

ಬಿಜೆಪಿ, ಸಂಘ ಪರಿವಾರದಿಂದ ಕೋಮು ದ್ವೇಷ : ಆರೋಪ

ಕಠಿಣ ಕ್ರಮಕ್ಕೆ ಎಸ್‌ಡಿಪಿಐ ಆಗ್ರಹ

ಭದ್ರಾವತಿಯಲ್ಲಿ ಸೋಷಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ(ಎಸ್‌ಡಿಪಿಐ)  ವತಿಯಿಂದ ಸೋಮವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಆ. 7 : ಸಂಘ ಪರಿವಾರ ಹರಡಿದ ದ್ವೇಷದ ನಂಜು ದೇಶಕ್ಕೆ ಹಬ್ಬಿದೆ. ಮತೀಯ ಹಿಂಸಾಚಾರ, ಜನಾಂಗೀಯ ಕಲಹ, ಕೋಮು ದ್ವೇಷ ದೇಶವನ್ನು ಹೊತ್ತಿ ಉರಿಸುತ್ತಿದೆ ಎಂದು ಸೋಷಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ(ಎಸ್‌ಡಿಪಿಐ) ಮುಖಂಡರು ಆರೋಪಿಸಿದರು.
    ಸೋಮವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡಿದ ಮುಖಂಡರು, ದಕ್ಷಿಣ ಕನ್ನಡದಲ್ಲಿ ಆ.5ರಂದು ಸಂಘ ಪರಿವಾರ ಹರಡಿದ ದ್ವೇಷದ ನಂಜಿನ ಪರಿಣಾಮ ಇಡೀ ದೇಶವೇ ಹೊತ್ತಿ ಉರಿಯುತ್ತಿದೆ. ಮಣಿಪುರದಲ್ಲಿ ಜನಾಂಗೀಯ ಕಲಹ, ಹರಿಯಾಣದಲ್ಲಿ ಕೋಮು ಗಲಭೆ, ಮಹಾರಾಷ್ಟ್ರದಲ್ಲಿ ಕೋಮು ದ್ವೇಷಕ್ಕೆ ರೈಲಿನಲ್ಲಿ ಅಮಾಯಕರ ಬಲಿ ಸೇರಿದಂತೆ ದೇಶದ ನಾನಾ ಭಾಗಗಲ್ಲಿ ಹಿಂಸಾಚಾರ ಹಬ್ಬಿಕೊಂಡಿದೆ. ಇಂತಹ ಸನ್ನಿವೇಶಕ್ಕೆ ಕಾರಣವಾದ ಬಿಜೆಪಿ ಮತ್ತು ಸಂಘ ಪರಿವಾರದ ದ್ವೇಷದ ರಾಜಕಾರಣವನ್ನು ಖಂಡಿಸುತ್ತೇವೆ ಎಂದರು.
    ಸರ್ಕಾರ ತಕ್ಷಣ ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳುಹಿಸದಂತೆ ಎಚ್ಚರ ವಹಿಸುವಂತೆ ಆಗ್ರಹಿಸಿದರು.
    ತಾಲೂಕು ಅಧ್ಯಕ್ಷ ಎಂ.ಡಿ ಗೌಸ್‌, ಜಿಲ್ಲಾ ಕಾರ್ಯದರ್ಶಿ ಎಂ.ಡಿ ಕಲೀಂಮುಲ್ಲಾ, ಜಿಲ್ಲಾ ಉಪಾಧ್ಯಕ್ಷ ದೇವೇಂದ್ರ ಪಾಟೀಲ್‌, ತಾಲೂಕು ಉಪಾಧ್ಯಕ್ಷ ಎಂ.ಡಿ ತಾಹೀರ್‌  ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಅಮಲೋದ್ಭವಿ ಮಾತೆ ದೇವಾಲಯದ ಆವರಣದಲ್ಲಿ ಕೊಳವೆ ಬಾವಿ ಕಾಮಗಾರಿಗೆ ಚಾಲನೆ

ಭದ್ರಾವತಿ ನ್ಯೂಟೌನ್‌ ಅಮಲೋದ್ಭವಿ ಮಾತೆ ದೇವಾಲಯದ ಆವರಣದಲ್ಲಿ ಕೊಳವೆ ಬಾವಿ ಕಾಮಗಾರಿಗೆ ಸೋಮವಾರ ಮೇರಿ ಇಮ್ಯಾಕ್ಯುಲೇಟ್‌ ಚರ್ಚ್‌ ಧರ್ಮಗುರು ಫಾದರ್‌ ಲ್ಯಾನ್ಸಿ ಡಿಸೋಜಾ ದಿವ್ಯ ಸಾನಿಧ್ಯದಲ್ಲಿ ಚಾಲನೆ ನೀಡಲಾಯಿತು.
    ಭದ್ರಾವತಿ, ಆ. 7 : ನ್ಯೂಟೌನ್‌ ಅಮಲೋದ್ಭವಿ ಮಾತೆ ದೇವಾಲಯದ ಆವರಣದಲ್ಲಿ ಕೊಳವೆ ಬಾವಿ ಕಾಮಗಾರಿಗೆ ಸೋಮವಾರ ಮೇರಿ ಇಮ್ಯಾಕ್ಯುಲೇಟ್‌ ಚರ್ಚ್‌ ಧರ್ಮಗುರು ಫಾದರ್‌ ಲ್ಯಾನ್ಸಿ ಡಿಸೋಜಾ ದಿವ್ಯ ಸಾನಿಧ್ಯದಲ್ಲಿ ಚಾಲನೆ ನೀಡಲಾಯಿತು.
    ದೇವಾಲಯದಲ್ಲಿ ಕೊಳವೆ ಬಾವಿ ಅಗತ್ಯವಿದ್ದು,  ಮಂಜೂರಾತಿ ಮಾಡಿಸಿಕೊಡುವಂತೆ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಗಿತ್ತು.  ಮನವಿಗೆ ಪೂರಕವಾಗಿ ಸ್ಪಂದಿಸಿದ ಶಾಸಕರು ನಗರಸಭೆ ವತಿಯಿಂದ ಕೊಳವೆ ಬಾವಿ ಮಂಜೂರಾತಿ ಮಾಡಿಸಿ ಕೊಟ್ಟಿದ್ದು,  ಕಾಮಗಾರಿಗೆ ಚಾಲನೆ ನೀಡಲಾಯಿತು.
    ದೇವಾಲಯದ ಪಾಲನಾ ಪರಿಷತ್ ಕಾರ್ಯದರ್ಶಿ ಅಂತೋನಿ ವಿಲ್ಸನ್ ಕೊಳವೆ ಬಾವಿ ಮಂಜೂರಾತಿಗೆ ಕಾರಣಕರ್ತರಾದ ಶಾಸಕ  ಬಿ. ಕೆ. ಸಂಗಮೇಶ್ವರ, ನಗರಸಭಾ ಸದಸ್ಯರಾದ  ಬಿ. ಕೆ. ಮೋಹನ್  ಹಾಗೂ  ಜಾರ್ಜ್ ರವರಿಗೆ ಧರ್ಮಕೇಂದ್ರದ ಗುರುಗಳ  ಹಾಗೂ ಸಮಸ್ತ ಭಕ್ತಾದಿಗಳ ಪರವಾಗಿ ಕೃತಜ್ಞತೆ ಸಲ್ಲಿಸಿದರು.
    ನಗರಸಭೆ ಅಧ್ಯಕ್ಷೆ ಶೃತಿ ವಸಂತ್ ಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ,  ಸದಸ್ಯರಾದ ಲತಾ ಚಂದ್ರಶೇಖರ್, ಆರ್. ಮೋಹನ್ ಕುಮಾರ್, ಸೇಂಟ್ ಚಾರ್ಲ್ಸ್ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಜೆಸಿಂತಾ, ಸಿಸ್ಟರ್ ಆಡ್ಲಿನ್, ಆರ್ಥಿಕ ಸಮಿತಿ ಕಾರ್ಯದರ್ಶಿ ಪಾಟ್ರಿಕ್, ವೀನ್ಸoಟ್ ದೆ ಪಾಲ್ ಅಧ್ಯಕ್ಷ  ಅಲ್ವಿನ್, ಪೀಟರ್, ಡೇವಿಡ್,  ಸೆಲಿನ್ ಮತ್ತು  ಮೇರಿ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೃಷಿಕ ನಂಜೇಗೌಡ ನಿಧನ

ನಂಜೇಗೌಡ
    ಭದ್ರಾವತಿ, ಆ. 7: ಕಾಗದನಗರ 6ನೇ ವಾರ್ಡ್‌ ನಿವಾಸಿ, ಕೃಷಿಕ ನಂಜೇಗೌಡ(90) ಸೋಮವಾರ ನಿಧನ ಹೊಂದಿದರು.
    ಪತ್ನಿ, ಪುತ್ರ ಎಂಪಿಎಂ ಪಿ.ಯು ಕಾಲೇಜಿನ ಕ್ಲರ್ಕ್‌ ಶಂಕರಲಿಂಗ ಹಾಗು ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ಬುಳ್ಳಾಪುರ ಬಾಳೆಮಾರನಹಳ್ಳಿ ರಸ್ತೆಯಲ್ಲಿರುವ ಶ್ರೀ ಸತ್ಯಹರಿಶ್ಚಂದ್ರ ಹಿಂದೂ ಭೂಮಿಯಲ್ಲಿ ಮಂಗಳವಾರ ನಡೆಯಲಿದೆ.

ವಸಂತ ರಾಜ್ ನಿಧನ

ವಸಂತರಾಜ್‌ ನಿಧನ
    ಭದ್ರಾವತಿ, ಆ. 7 : ವಿಐಎಸ್‌ಎಲ್ ಕಾರ್ಖಾನೆಯ ನಿವೃತ್ತ ಉದ್ಯೋಗಿ ವಸಂತ ರಾಜ್(೮೩) ನಿಧನ ಹೊಂದಿದರು.
    ಪತ್ನಿ ಸಂಗೀತ ಶಿಕ್ಷಕಿ ವಿಶಾಲಾಕ್ಷಿ, ಪುತ್ರ ಹಾಗು ಪುತ್ರಿ ಇದ್ದಾರೆ. ಇತ್ತೀಚೆಗೆ ಬೆಂಗಳೂರಿನ ಅವರ ಮಗಳ ಮನೆಯಲ್ಲಿ ವಾಸವಾಗಿದ್ದರು. ಇವರ ನಿಧನಕ್ಕೆ  ಮಹಿಳಾ ಸೇವಾ ಸಮಾಜ ಸಂತಾಪ ಸೂಚಿಸಿದೆ.