Tuesday, December 24, 2024

ಸಮಯ ವ್ಯರ್ಥಮಾಡದೆ ದೇಶದ ಬೆಳವಣಿಗೆಗೆ ಪೂರಕವಾದ ಚರ್ಚೆ ನಡೆಸಿ ಗೌರವಯುತವಾಗಿ ನಡೆದುಕೊಳ್ಳಲಿ

ಅಧಿವೇಶನದಲ್ಲಿ ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಿ ಸದಸ್ಯರಿಗೆ ಎಚ್ಚರಿಕೆ ನೀಡಲಿ : ಮನವಿ 

ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಿ ದೇಶದ ಲೋಕಸಭೆ, ರಾಜ್ಯಸಭೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆ, ವಿಧಾನ ಪರಿಷತ್ ಅಧಿವೇಶಗಳ ಸಂದರ್ಭದಲ್ಲಿ ಸಂಸದರು, ಶಾಸಕರು ಗೌರವಯುತವಾಗಿ ನಡೆದುಕೊಳ್ಳುವಂತೆ ಸೂಚಿಸುವಂತೆ ಭದ್ರಾವತಿ ಜನ್ನಾಪುರ ಫಿಲ್ಟರ್‌ಶೆಡ್ ನಿವಾಸಿ, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ತಹಸೀಲ್ದಾರ್ ಮೂಲಕ ಮನವಿ ಮಾಡಿದ್ದಾರೆ. 
    ಭದ್ರಾವತಿ: ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಿ ದೇಶದ ಲೋಕಸಭೆ, ರಾಜ್ಯಸಭೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆ, ವಿಧಾನ ಪರಿಷತ್ ಅಧಿವೇಶಗಳ ಸಂದರ್ಭದಲ್ಲಿ ಸಂಸದರು, ಶಾಸಕರು ಗೌರವಯುತವಾಗಿ ನಡೆದುಕೊಳ್ಳುವಂತೆ ಸೂಚಿಸುವಂತೆ ಜನ್ನಾಪುರ ಫಿಲ್ಟರ್‌ಶೆಡ್ ನಿವಾಸಿ, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಮನವಿ ಮಾಡಿದ್ದಾರೆ. 
    ಈ ಸಂಬಂಧ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಇತ್ತೀಚಿನ ದಿನಮಾನಗಳಲ್ಲಿ ಲೋಕಸಭೆ, ರಾಜ್ಯಸಭೆ ಎಲ್ಲಾ ರಾಜ್ಯಗಳ ವಿಧಾನಸಭೆ ಮತ್ತು ವಿಧಾನ ಪರಿಷತ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ದೇಶದ ರೈತರ, ಎಲ್ಲಾ ವರ್ಗದ ನಾಗರಿಕರ ಹಾಗೂ ಉತ್ತಮ ರೀತಿಯ ಚರ್ಚೆಗಳು ಆಗದೆ ಕೇವಲ ವೈಯಕ್ತಿಕ ಹಿತಾಸಕ್ತಿಗಳಿಂದ ರಾಜಕಾರಣಿಗಳು ಅಧಿವೇಶನ ನಡೆಯುವ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಜಗಳ ಮಾಡಿಕೊಳ್ಳುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಹಲ್ಲೆ ಮಾಡುವ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಶಾಸಕರ, ಸಂಸದರ ಇಂತಹ ನಡವಳಿಕೆಯಿಂದ ದೇಶದ ನಾಗರಿಕರು ತಲೆತಗ್ಗಿಸುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಲಾಗಿದೆ. 
    ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತ ದೇಶದಲ್ಲಿ ಸಂವಿಧಾನದ ಉದ್ದೇಶಗಳನ್ನು ಇಂದಿನ ರಾಜಕಾರಣಿಗಳು ಅನುಸರಿಸದೇ ಇರುವುದು ವಿಪರ್ಯಾಸದ ಸಂಗತಿ. ಬುದ್ಧ, ಬಸವ, ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿಯವರು ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳು ಜನ್ಮ ಪಡೆದ ದೇಶ ನಮ್ಮ ಭವ್ಯ ಭಾರತ. ಆದರೆ ಇಂದಿನ ರಾಜಕಾರಣಿಗಳಿಂದ ದೇಶ ಮುಂದುವರೆಯುವುದು ಕಷ್ಟ ಸಾಧ್ಯ. ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುವ ಅಧಿವೇಶನಗಳು ಸಾರ್ವಜನಿಕರ, ರೈತರ, ದೀನದಲಿತರ, ಎಲ್ಲ ಧರ್ಮದವರ ಬದುಕಿಗೆ ಪೂರಕವಾಗಿರುವಂತಹ ಚರ್ಚೆ ಆಗಬೇಕೆ ಹೊರತು ಭ್ರಷ್ಟ ರಾಜಕಾರಣಿಗಳ ಕಚ್ಚಾಟದಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಧಿವೇಶನ ನಡೆಯುವ ಸಂದರ್ಭಗಳಲ್ಲಿ ರಾಜಕಾರಣಿಗಳು ಕ್ಷುಲ್ಲಕ ಕಾರಣಕ್ಕೆ ಅಧಿವೇಶನದ ಸಮಯ ವ್ಯರ್ಥ ಮಾಡಿ ಸದನಗಳು ಸರಿಯಾಗಿ ನಡೆಯದಂತೆ ಮಾಡಿದರೆ ಅಂತಹ ರಾಜಕಾರಣಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಅಧಿವೇಶನ ನಡೆಯಲು ತಗಲುವ ಖರ್ಚು ವೆಚ್ಚಗಳನ್ನು ಅವರೇ ಭರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. 
    ಅಲ್ಲದೆ ಅಧಿವೇಶನದ ಸಮಯ ವ್ಯರ್ಥವಾಗಲು ಕಾರಣರಾಗುವ ಸದಸ್ಯರ ಸದಸ್ಯತ್ವ ರದ್ದುಗೊಳಿಸುವ ಕಾನೂನು ಜಾರಿತರುವ ಮೂಲಕ ಸಂವಿಧಾನದ ಆಶಯ ಕಾಪಾಡಬೇಕೆಂದು ಆಗ್ರಹಿಸಿ ಆಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮನವಿಯಲ್ಲಿ ತಿಳಿಸಲಾಗಿದೆ. 

Monday, December 23, 2024

ಮಾರಾಕಾಸ್ತ್ರ ಹಿಡಿದು ಎರಡು ಗ್ಯಾಂಗ್‌ಗಳಿಂದ ಕೊಲೆಗೆ ಯತ್ನ

ಎರಡು ಗ್ಯಾಂಗ್‌ಗಳ ವಿರುದ್ಧ ಪ್ರಕರಣ ದಾಖಲು 

    ಭದ್ರಾವತಿ: ಹಳೇನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪುನಃ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ಸೋಮವಾರ ಎರಡು ಗ್ಯಾಂಗ್‌ಗಳ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ. 
    ನಗರದ ಬಿ.ಎಚ್ ರಸ್ತೆಯಲ್ಲಿರುವ ಸ್ಮಾರ್ಟ್ ಫಿಟ್ನೆಸ್ ವ್ಯಾಯಾಮ ಶಾಲೆಯಲ್ಲಿ ಬೆಳಗಿನ ಜಾವ ವ್ಯಾಯಾಮ ಮುಗಿಸಿ ಹೊರ ಬರುತ್ತಿದ್ದ ಜೋಯೆಲ್ ಥಾಮ್ಸನ್ ಎಂಬ ಯುವಕನ ಮೇಲೆ ಸುಮಾರು ೬ ಜನರ ಗ್ಯಾಂಗ್ ಮಚ್ಚು, ಲಾಂಗ್ ಸೇರಿದಂತೆ ಇನ್ನಿತರ ಮಾರಾಕಾಸ್ತ್ರಗಳನ್ನು ಹಿಡಿದು ಕೊಲೆ ಮಾಡಲು ಯತ್ನಿಸಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಥಾಮ್ಸನ್ ತಪ್ಪಿಸಿಕೊಂಡು ವ್ಯಾಯಾಮ ಶಾಲೆ ಒಳಗೆ ಓಡಿ ಹೋಗಿದ್ದಾನೆ. ಪೊಲೀಸರಿಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 
    ವಿಶ್ವ ಅಲಿಯಾಸ್ ಮುದ್ದೆ, ಕೋಟೇಶ ಅಲಿಯಾಸ್ ಕೋಟಿ, ನವೀನ ಅಲಿಯಾಸ್ ಡಿಂಗ ಸೇರಿದಂತೆ ೬ ಜನರ ಗ್ಯಾಂಗ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಜೋಯೆಲ್ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. 
    ಇದಕ್ಕೂ ಮೊದಲು ಈ ಗ್ಯಾಂಗ್ ವಿರುದ್ಧ ಜಟ್‌ಪಟ್ ನಗರದಲ್ಲಿ ೭ ಜನರ ಗ್ಯಾಂಗ್ ಓರ್ವನ ಕೊಲೆಗೆ ಯತ್ನಿಸಿದ್ದು, ಇಲ್ಲೂ ಸಹ ಆತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ಸಹ ಹಳೇನಗರ ಪೊಲೀಸ್ ಠಾಣೆಯಲ್ಲಿ ಮಧುಕುಮಾರ್ ಎಂಬಾತ ದೂರು ನೀಡಿದ್ದಾನೆ. 
    ಎರಡು ಗ್ಯಾಂಗ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ನಡುವೆ ನಗರದಲ್ಲಿ ಪುನಃ ಪುಡಿ ರೌಡಿಗಳ ಹಾವಳಿ ಹೆಚ್ಚಾಗುತ್ತಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. 

ಎಚ್.ಎಸ್ ಶ್ರೀನಾಗ್-ಸುಜಾತ ವಿವಾಹ ಮಹೋತ್ಸವ

ಭದ್ರಾವತಿ ನಗರದ ನ್ಯೂಟೌನ್ ಮೆಸ್ ಸರ್ಕಲ್, ದತ್ತಮಂದಿರದಲ್ಲಿ ಎಚ್.ಎಸ್ ಶ್ರೀನಾಗ್-ಸುಜಾತ ವಿವಾಹ ಮಹೋತ್ಸವದ ಆರತಕ್ಷತೆ ಕಾರ್ಯಕ್ರಮ ಸೋಮವಾರ ಜರುಗಿತು
    ಭದ್ರಾವತಿ : ನಗರದ ಹಿರಿಯ ಪತ್ರಕರ್ತ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ ಶಿವಶಂಕರ್-ಎಂ. ಚಂದ್ರಕಲಾ ದಂಪತಿ ಪುತ್ರ ಎಚ್.ಎಸ್ ಶ್ರೀನಾಗ್ ರವರ ವಿವಾಹ ಮಹೋತ್ಸವ ಡಿ.೨೨ರ ಭಾನುವಾರ ವಿಜಯನಗರ ಜಿಲ್ಲೆ, ಹೂವಿನಹಡಗಲಿ ತಾಲೂಕಿನ ನಡುವಿನಹಳ್ಳಿ ಗ್ರಾಮದ ನಾಗರಾಜ ಮಡಿವಾಳರ-ರೇಣುಕಾ ದಂಪತಿ ಪುತ್ರಿ  ಸುಜಾತ ಅವರೊಂದಿಗೆ ಹೊಳಲು ಗ್ರಾಮದಲ್ಲಿ ನೆರವೇರಿತು. 


    ಸೋಮವಾರ ನಗರದ ನ್ಯೂಟೌನ್ ಮೆಸ್ ಸರ್ಕಲ್, ದತ್ತಮಂದಿರದಲ್ಲಿ ಆರತಕ್ಷತೆ ಕಾರ್ಯಕ್ರಮ ಜರುಗಿತು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಮಾಚಿದೇವ ಮಡಿವಾಳರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು, ಕುಟುಂಬ ವರ್ಗದವರು, ಬಂಧ-ಮಿತ್ರರು, ಜನಪ್ರತಿನಿಧಿಗಳು ಪಾಲ್ಗೊಂಡು ನೂತನ ದಂಪತಿಗೆ ಶುಭ ಕೋರಿದರು. 

ರೈತರು ಬೆಳೆಗಳನ್ನು ಬೆಳೆಯುವುದರಿಂದಲೇ ಮನುಜ ಕುಲ ಶಾಂತಿಯುತವಾಗಿ ಜೀವನ ನಡೆಸಲು ಸಾಧ್ಯ : ಬಿ. ಸಿದ್ದಬಸಪ್ಪ

ಭದ್ರಾವತಿ ನಗರದ ಹೊಸ ಸೇತುವೆ ರಸ್ತೆ, ಸಿದ್ದಾರೂಢ ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಎ. ಪ್ರಕಾಶ್, ಅರಳಿಹಳ್ಳಿ ಹಾಗೂ ಜಿ. ಗೋಪಾಲ್ ತಳ್ಳಿಕಟ್ಟೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ನಮ್ಮ ದೇಶ ಕೃಷಿ ಪ್ರಧಾನ ದೇಶವಾಗಿದ್ದು, ಬಹಳಷ್ಟು ಜನ ಕೃಷಿಯನ್ನು ಅವಲಂಬಿಸಿದ್ದಾರೆ. ರೈತರು ಬೆಳೆಗಳನ್ನು ಬೆಳೆಯುವುದರಿಂದಲೇ ಮನುಜ ಕುಲ ಶಾಂತಿಯುತವಾಗಿ ಜೀವನ ನಡೆಸಲು ಸಾಧ್ಯವಾಗಿದೆ ಎಂದು ನಗರದ ಹೊಸ ಸೇತುವೆ ರಸ್ತೆ, ಸಿದ್ದಾರೂಢ ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಅಧ್ಯಕ್ಷ ಬಿ. ಸಿದ್ದಬಸಪ್ಪ ಹೇಳಿದರು. 
    ಅವರು ಸೋಮವಾರ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅನ್ನ ನೀಡುವ ರೈತರನ್ನು ಪ್ರತಿಯೊಬ್ಬರು ಗೌರವಿಸುವುದು ಕರ್ತವ್ಯವಾಗಿದೆ ಎಂದರು. 
    ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಎ. ಪ್ರಕಾಶ್, ಅರಳಿಹಳ್ಳಿ ಹಾಗೂ ಜಿ. ಗೋಪಾಲ್ ತಳ್ಳಿಕಟ್ಟೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಗತಿಪರ ರೈತ ಪ್ರಕಾಶ್‌ರವರು, ಕೃಷಿಯ ಐತಿಹಾಸಿಕ ಹಿನ್ನೆಲೆ ಕೃಷಿ ಚಟುವಟಿಕೆಯ ಅದ್ಭುತಾವಕಾಶಗಳನ್ನು ಹೊಂದಿದೆ. ಕೃಷಿ ಕೇವಲ ಮನುಜ ಕುಲಕ್ಕೆ ಮಾತ್ರವಲ್ಲ ಸಕಲ ಜೀವರಾಶಿಗೆ ಅಗತ್ಯವಿದೆ ಎಂದರು. 
    ಗೋಪಾಲ್‌ರವರು ಕೃಷಿ ಚಟುವಟಿಕೆಯ ನೈಜ ಚಿತ್ರಣ ತೆರೆದಿಡುವ ಮೂಲಕ ರೈತರು ಎದುರಿಸುವ ಸಂಕಷ್ಟಗಳು, ಸವಾಲುಗಳನ್ನು ವಿವರಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆ ಬಿ. ಎಲ್.ರಂಗಸ್ವಾಮಿ ವಹಿಸಿದ್ದರು. 
    ವಿದ್ಯಾಸಂಸ್ಥೆ ಕಾರ್ಯದರ್ಶಿ ಎಸ್.ಕೆ ಮೋಹನ್, ನಿರ್ದೇಶಕರುಗಳಾದ ಚೆನ್ನಯ್ಯ ಮತ್ತು ಪುಟ್ಟಲಿಂಗ ಮೂರ್ತಿ, ರಮೇಶ್, ಜನಾರ್ಧನ್, ಶ್ರೀನಿವಾಸ ಬಾಗೋಡಿ, ರಮೇಶ್, ಆಡಳಿತ ಅಧಿಕಾರಿ ಡಾ.ಎಸ್.ಪಿ ರಾಕೇಶ್.ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ ಹಾಗೂ ಮುಖ್ಯೋಪಾಧ್ಯಾಯರುಗಳಾದ  ಹೇಮಾವತಿ, ರೇಣುಕಪ್ಪ, ಚೈತ್ರ, ಕಿರಣ್ ಕುಮಾರ್ ಹಾಗೂ ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 
    ನೇತ್ರಾವತಿ ಸ್ವಾಗತಿಸಿ, ರೇವತಿ ಅತಿಥಿಗಳನ್ನು ಪರಿಚಯಿಸಿದರು. ರೇಣುಕಪ್ಪ ನಿರೂಪಿಸಿದರು, ಅಲಿಮಿಯ ವಂದಿಸಿದರು. 

ತೋಟಗಾರಿಕೆ ಬೆಳೆಯಲ್ಲಿ ಪ್ರಗತಿ : ಜಿಲ್ಲಾ ಅತ್ಯುತ್ತಮ ತೋಟಗಾರಿಕೆ ಪ್ರಶಸ್ತಿ

ಪತ್ರಕರ್ತ ಸುರೇಶ್ ಸಾಧನೆ

ಭದ್ರಾವತಿ: ಮೂಲತಃ ಪತ್ರಕರ್ತರಾಗಿರುವ ಸುರೇಶ್‌ರವರು ಕಳೆದ ೧೫ ವರ್ಷಗಳಿಂದ ತೋಟಗಾರಿಕೆ ಬೆಳೆಗಳನ್ನು ಬೆಳೆದು ಪ್ರಗತಿ ಸಾಧಿಸಿದ್ದು, ರೂರಲ್ ಎಜ್ಯುಕೇಷನ್ ಅಂಡ್ ಡೆವಲಪ್‌ಮೆಂಟ್ ಟ್ರಸ್ಟ್ ಜಿಲ್ಲಾ ಅತ್ಯುತ್ತಮ ತೋಟಗಾರಿಕೆ ಪ್ರಶಸ್ತಿ ನೀಡಿ ಅಭಿನಂದಿಸಿದೆ. 
    ಭದ್ರಾವತಿ: ಮೂಲತಃ ಪತ್ರಕರ್ತರಾಗಿರುವ ಸುರೇಶ್‌ರವರು ಕಳೆದ ೧೫ ವರ್ಷಗಳಿಂದ ತೋಟಗಾರಿಕೆ ಬೆಳೆಗಳನ್ನು ಬೆಳೆದು ಪ್ರಗತಿ ಸಾಧಿಸಿದ್ದು, ರೂರಲ್ ಎಜ್ಯುಕೇಷನ್ ಅಂಡ್ ಡೆವಲಪ್‌ಮೆಂಟ್ ಟ್ರಸ್ಟ್ ಜಿಲ್ಲಾ ಅತ್ಯುತ್ತಮ ತೋಟಗಾರಿಕೆ ಪ್ರಶಸ್ತಿ ನೀಡಿ ಅಭಿನಂದಿಸಿದೆ. 
      ತಾಲೂಕಿನ ಹಿರಿಯೂರು ಗ್ರಾಮದಲ್ಲಿ ಸುಮಾರು ೨ ಎಕರೆ ಜಮೀನು ಹೊಂದಿರುವ ಸುರೇಶ್‌ರವರು ತೋಟಗಾರಿಕೆ ಬೆಳೆಗಳಾದ ತರಕಾರಿ, ಹಣ್ಣು, ಸೊಪ್ಪು ಮತ್ತು ಅಣಬೆ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದು, ಉತ್ತಮ ಇಳಿವರಿ ಪಡೆಯುವ ಮೂಲಕ ಪ್ರಗತಿ ಸಾಧಿಸಿದ್ದಾರೆ. 
    ಅಲ್ಲದೆ ಹಸು, ಕುರಿ ಮತ್ತು ಕೋಳಿ ಸಾಕಾಣಿಕೆ ಮೂಲಕ ಹೈನುಗಾರಿಕೆಯಲ್ಲೂ ಪ್ರಗತಿ ಸಾಧಿಸಿದ್ದು, ತೋಟಗಾರಿಕೆ ಬೆಳೆ ಹಾಗು ಹೈನುಗಾರಿಕೆ ಇವರ ಬದುಕಿಗೆ ಆಧಾರ ಸ್ತಂಭಗಳಾಗಿವೆ. 
    ಸುರೇಶ್‌ರವರ ಸಾಧನೆಯನ್ನು ಗುರುತಿಸಿ ರೂರಲ್ ಎಜ್ಯುಕೇಷನ್ ಅಂಡ್ ಡೆವಲಪ್‌ಮೆಂಟ್ ಟ್ರಸ್ಟ್ ಜಿಲ್ಲಾ ಅತ್ಯುತ್ತಮ ತೋಟಗಾರಿಕೆ ಪ್ರಶಸ್ತಿಯನ್ನು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಮಾರಂಭದಲ್ಲಿ ನೀಡಿ ಅಭಿನಂದಿಸಿದೆ.  

Sunday, December 22, 2024

ಕಸಾಪ ಮನವಿಗೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಪೂರಕ ಸ್ಪಂದನೆ

ವಿಐಎಸ್‌ಎಲ್ ಕಾರ್ಖಾನೆ ೧೫ ಸಾವಿರ ಕೋ. ರು. ಬಂಡವಾಳ ಹೂಡುವ ಭರವಸೆ 

ಮಂಡದಲ್ಲಿ ಆಯೋಜಿಸಲಾಗಿದ್ದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಪಾಲ್ಗೊಂಡಿದ್ದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಯವರು ಮಾತನಾಡಿ, ಭದ್ರಾವತಿ ಸರ್ ಎಂ. ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಸುಮಾರು ರು.೧೫,೦೦೦ ಕೋಟಿ ವೆಚ್ಚದಲ್ಲಿ ಪುನಚ್ಚೇತನಗೊಳಿಸಲು ನಿರ್ಧರಿಸಲಾಗಿದೆ ಎಂದರು.
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಅಭಿವೃದ್ಧಿ ಪಡಿಸುವ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್‌ರವರು ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿಯವರಿಗೆ ಸಲ್ಲಿಸಿದ್ದ ಮನವಿಗೆ ಕೇಂದ್ರ ಉಕ್ಕು ಹಾಗು ಬೃಹತ್ ಕೈಗಾರಿಕೆ ಖಾತೆ ಸಚಿವ ಎಚ್.ಡಿ ಕುಮಾರಸ್ವಾಮಿ ಪೂರಕವಾಗಿ ಸ್ಪಂದಿಸಿದ್ದು, ಕಾರ್ಖಾನೆಗೆ ಅಗತ್ಯವಿರುವ ಸುಮಾರು ೧೫,೦೦೦ ಕೋಟಿ ರು. ಬಂಡವಾಳ ತೊಡಗಿಸುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ. 
    ಮಂಡದಲ್ಲಿ ಆಯೋಜಿಸಲಾಗಿದ್ದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಪಾಲ್ಗೊಂಡಿದ್ದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಯವರು ಮಾತನಾಡಿ, ಸರ್ ಎಂ. ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಸುಮಾರು ರು.೧೫,೦೦೦ ಕೋಟಿ ವೆಚ್ಚದಲ್ಲಿ ಪುನಚ್ಚೇತನಗೊಳಿಸಲು ನಿರ್ಧರಿಸಲಾಗಿದೆ ಎಂದರು.
    ರಾಜ್ಯದಲ್ಲಿ ನಿರುದ್ಯೋಗ ನಿವಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನೇಕ ಉಪಕ್ರಮಗಳನ್ನು ಕೈಗೊಂಡಿದೆ. ಕೈಗಾರಿಕಾಭಿವೃದ್ಧಿಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಆ ನಿಟ್ಟಿನಲ್ಲಿಯೇ ವಿಐಎಸ್‌ಎಲ್ ಕಾರ್ಖಾನೆಗೆ ಮರುಜೀವ ಕೊಡಲು ತೀರ್ಮಾನ ಮಾಡಲಾಗಿದೆ ಎಂದರು.
    ಮೈಸೂರು ಮಹಾ ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಭಾರತ ರತ್ನ ಸರ್ ಎಂ ವಿಶ್ವೇಶ್ವರಾಯ ಅವರ ದೂರದೃಷ್ಟಿಯ ಫಲವಾಗಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಸ್ಥಾಪನೆ ಮಾಡಲಾಗಿತ್ತು. ಇದರಿಂದ ಸಾವಿರಾರು ಜನರಿಗೆ ಉದ್ಯೋಗ ಲಭಿಸಿತ್ತು. ಲಕ್ಷಾಂತರ ಜನರು ಪರೋಕ್ಷವಾಗಿ ಬದುಕು ಕಟ್ಟಿಕೊಂಡಿದ್ದರು. ಇಂತಹ ವೈಭವದ ದಿನಗಳು ಮರುಕಳಿಸುವ ದಿನಗಳು ದೂರವಿಲ್ಲ ಎಂದರು. 
    ಕಾರ್ಮಿಕರಿಂದ ಕೃತಜ್ಞತೆ : 
    ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಯವರಿಗೆ ಕಾರ್ಖಾನೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿ ಅವರ ಗಮನ ಸೆಳೆದ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ, ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ತಾಲೂಕು ಅಧ್ಯಕ್ಷ ಕೋಡ್ಲುಯಜ್ಞಯ್ಯ ಸೇರಿದಂತೆ ಪರಿಷತ್ ಪ್ರಮುಖರಿಗೆ ವಿಐಎಸ್‌ಎಲ್ ಗುತ್ತಿಗೆ ಹಾಗು ನಿವೃತ್ತ ಕಾರ್ಮಿಕರು ಕೃತಜ್ಞತೆ ಸಲ್ಲಿಸಿದ್ದಾರೆ. 
    ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ರಾಕೇಶ್, ನಿವೃತ್ತ ನಿವೃತ್ತ ನೌಕರರ ನರಸಿಂಹಚಾರ್ ಸೇರಿದಂತೆ ಗುತ್ತಿಗೆ ಹಾಗು ನಿವೃತ್ತ ಕಾರ್ಮಿಕರು ಕಾರ್ಖಾನೆ ಅಭಿವೃದ್ಧಿಪಡಿಸುವ ಸಂಬಂಧ ನಡೆಸುತ್ತಿರುವ ಹೋರಾಟಕ್ಕೆ ಕೈಜೋಡಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಪೂರಕವಾಗಿ ಸ್ಪಂದಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

ಅಪಘಾತ ಪ್ರಕರಣ : ದೂರುದಾರರ ವಿರುದ್ಧವೇ ಪ್ರಕರಣ ದಾಖಲು

ಅಪಘಾತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಿ : ಮತ್ತೊಂದು ದೂರು 

ಅಪಘಾತ ಪ್ರಕರಣವನ್ನು ಸರಿಯಾಗಿ ದಾಖಲಿಸಿಕೊಳ್ಳದೆ ದೂರು ನೀಡಿರುವವರ ವಿರುದ್ಧವೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಭದ್ರಾವತಿ ತಾಲೂಕಿನ ಗೌಡರಹಳ್ಳಿ ನಿವಾಸಿಗಳು ಭಾನುವಾರ ಸಂಜೆ ಏಕಾಏಕಿ ಸಂಚಾರಿ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. 
    ಭದ್ರಾವತಿ: ಅಪಘಾತ ಪ್ರಕರಣವನ್ನು ಸರಿಯಾಗಿ ದಾಖಲಿಸಿಕೊಳ್ಳದೆ ದೂರು ನೀಡಿರುವವರ ವಿರುದ್ಧವೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ತಾಲೂಕಿನ ಗೌಡರಹಳ್ಳಿ ನಿವಾಸಿಗಳು ಭಾನುವಾರ ಸಂಜೆ ಏಕಾಏಕಿ ಸಂಚಾರಿ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. 
    ತಾಲೂಕಿನ ಗೌಡರಹಳ್ಳಿ ನಿವಾಸಿ, ತರಕಾರಿ ವ್ಯಾಪಾರಿ ಸೈಯದ್ ಫಸಲ್ ಇವರ ತಂದೆ ಸೈಯದ್ ಇಬ್ರಾಹಿಂ ಅವರೊಂದಿಗೆ ತಮ್ಮ ಹೋಂಡಾ ಆಕ್ಟೀವಾ ದ್ವಿಚಕ್ರವಾಹನದಲ್ಲಿ ನ.೨ರಂದು ತರಕಾರಿ ತರಲು ನಗರಕ್ಕೆ ತೆರಳಿದ್ದು, ಪುನಃ ಹಿಂದಿರುಗಿ ಗ್ರಾಮಕ್ಕೆ ಬರುವಾಗ ಮಧ್ಯಾಹ್ನ ಸುಮಾರು ೧.೨೦ರ ಸಮಯದಲ್ಲಿ ಅಪಘಾತವಾಗಿದೆ. ಇಬ್ರಾಹಿಂ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು, ಇವರನ್ನು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 
    ಈ ಕುರಿತು ಇಬ್ರಾಹಿಂ ಅವರ ಪತ್ನಿ ಜರೀನಾ ಬಿರವರು ನ.೭ರಂದು ಘಟನೆ ಸಂದರ್ಭದಲ್ಲಿ ಪೋನ್ ಮಾಡಿ ಅಪಘಾತ ಕುರಿತು ಮಾಹಿತಿ ನೀಡಿದ್ದಪರಿಚಯಸ್ಥರ ಮಾಹಿತಿಯನ್ನು ಆಧರಿಸಿ, ನನ್ನ ಮಗ ಫಸಲ್ ದ್ವಿಚಕ್ರವಾಹನ ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ನಾಯಿಯೊಂದು ಅಡ್ಡ ಬಂದಿದ್ದು, ಇದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದು ಅಪಘಾತ ಸಂಭವಿಸಿದೆ ಎಂದು ದೂರು ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 
    ಆದರೆ ಇದೀಗ ಠಾಣೆ ಮುಂದೆ ಜಮಾಯಿಸಿದ್ದ ನಿವಾಸಿಗಳು ದ್ವಿಚಕ್ರವಾಹನ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿಲ್ಲ. ಯಾವುದೋ ವಾಹನ ಡಿಕ್ಕಿ ಪರಿಣಾಮ ಅಪಘಾತ ಸಂಭವಿಸಿದೆ. ಈ ಹಿನ್ನಲೆಯಲ್ಲಿ ಅಪಘಾತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಪಘಾತ ಘಟನೆಗೆ ಸಂಬಂಧಿಸಿದ ದೃಶ್ಯ ಸಾಕ್ಷಿಯಾಗಿದ್ದು, ಇದನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳದೆ ವಿನಾಕಾರಣ ದೂರು ನೀಡಿದವರ ವಿರುದ್ಧವೇ ಪ್ರಕರಣ ದಾಖಲಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ತಕ್ಷಣ ದಾಖಲಾಗಿರುವ ದೂರು ರದ್ದುಪಡಿಸಬೇಕೆಂದು ಆಗ್ರಹಿಸಿದರು. 
    ಸಂಚಾರಿ ಠಾಣೆ ಉಪ ನಿರೀಕ್ಷಕಿ ಶಾಂತಲ ಅವರೊಂದಿಗೆ ಸುಮಾರು ೨ ಗಂಟೆಗೂ ಹೆಚ್ಚು ಸಮಯ ಮಾತಿನ ಚಕಮಕಿ ನಡೆಸಿ ಅಂತಿಮವಾಗಿ ಹೊಸದಾಗಿ ದೂರು ದಾಖಲಿಸಿ ಅದರ ಅನ್ವಯದ ಮೇಲೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು. ಈ ಹಿನ್ನಲೆಯಲ್ಲಿ ಅಪಘಾತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೊಸದಾಗಿ ದೂರು ನೀಡಲಾಯಿತು.