Tuesday, January 21, 2025

ತಹಸೀಲ್ದಾರ್‌ಗೆ ಕಾಂಗ್ರೆಸ್ ಹಿಂದುಳಿದ ಘಟಕದಿಂದ ಸನ್ಮಾನ, ಅಭಿನಂದನೆ


ಭದ್ರಾವತಿ ತಾಲೂಕು ದಂಡಾಧಿಕಾರಿಯಾಗಿ ಇತ್ತೀಚೆಗೆ ಅಧಿಕಾರವಹಿಸಿಕೊಂಡಿರುವ ತಹಸೀಲ್ದಾರ್ ಕೆ. ಪರುಸಪ್ಪ ಅವರನ್ನು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ನಗರ ಘಟಕದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. 
    ಭದ್ರಾವತಿ : ತಾಲೂಕು ದಂಡಾಧಿಕಾರಿಯಾಗಿ ಇತ್ತೀಚೆಗೆ ಅಧಿಕಾರವಹಿಸಿಕೊಂಡಿರುವ ತಹಸೀಲ್ದಾರ್ ಕೆ. ಪರುಸಪ್ಪ ಅವರನ್ನು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ನಗರ ಘಟಕದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. 
    ಕ್ಷೇತ್ರದ ನಾಗರೀಕರು ಉತ್ತಮ ಆಡಳಿತ ನಿರೀಕ್ಷೆ ಎದುರು ನೋಡುತ್ತಿದ್ದು, ತಕ್ಷಣ ನಾಗರೀಕರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ಮೂಲಕ ಪರಿಹರಿಸುವಂತೆ ಮನವಿ ಮಾಡಲಾಯಿತು. 
    ಘಟಕದ ಅಧ್ಯಕ್ಷ ಬಿ. ಗಂಗಾಧರ ನೇತೃತ್ವವಹಿಸಿದ್ದರು. ಉಪಾಧ್ಯಕ್ಷ ಜಯಕಾಂತ್,  ಪ್ರಧಾನ ಕಾರ್ಯದರ್ಶಿ ಜಗದೀಶ್ ಬೋಸ್ಲೆ, ಕುವೆಂಪು ವಿ.ವಿ ಸಿಂಡಿಕೇಟ್ ಸದಸ್ಯ ಎಂ. ಶಿವಕುಮಾರ್, ಮಹಮದ್ ರಫಿ, ಹರೀಶ್ ಕರಟೆ ಮತ್ತು ನಗರಸಭೆ ಮಾಜಿ ಸದಸ್ಯ ಗಂಗಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Monday, January 20, 2025

ಯೋಗ ಕ್ಷೇತ್ರದಲ್ಲಿ ಸಾಧನೆ : ಡಿ. ನಾಗರಾಜ್‌ಗೆ ಕುವೆಂಪು ವಿ.ವಿ ಗೌರವ ಡಾಕ್ಟರೇಟ್ ಪದವಿ

ಭದ್ರಾವತಿ ನಗರದ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್‌ನ ಅಂತರಾಷ್ಟ್ರೀಯ ಯೋಗ ಗುರು ಡಿ. ನಾಗರಾಜ್‌ರವರು ಯೋಗ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಕುವೆಂಪು ವಿಶ್ವ ವಿದ್ಯಾನಿಲಯ ಜ.೨೨ರಂದು ಆಯೋಜಿಸಿರುವ ೩೪ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಲಿದೆ. ಕುಲಸಚಿವ ಎಸ್.ಎಂ ಗೋಪಿನಾಥ್‌ರವರು ನಾಗರಾಜ್‌ರವರ ನಿವಾಸಕ್ಕೆ ತೆರಳಿ ಪದವಿ ಸ್ವೀಕಾರಕ್ಕೆ ಆಹ್ವಾನಿಸಿದ್ದಾರೆ. 
    ಭದ್ರಾವತಿ : ನಗರದ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್‌ನ ಅಂತರಾಷ್ಟ್ರೀಯ ಯೋಗ ಗುರು ಡಿ. ನಾಗರಾಜ್‌ರವರು ಯೋಗ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಕುವೆಂಪು ವಿಶ್ವ ವಿದ್ಯಾನಿಲಯ ಜ.೨೨ರಂದು ಆಯೋಜಿಸಿರುವ ೩೪ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಲಿದೆ. 
    ನಾಗರಾಜ್‌ರವರು ಯೋಗ ಕಲಿಕೆಯೊಂದಿಗೆ ಉತ್ತಮ ಸಾಧನೆ ಮಾಡುವ ಜೊತೆಗೆ ನಗರದಲ್ಲಿ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಆರಂಭಿಸುವ ಮೂಲಕ ಯೋಗಪಟುಗಳನ್ನು ಪೋತ್ಸಾಹಿಸುವ ಜೊತೆಗೆ ಅವರು ಸಮಾಜದಲ್ಲಿ ಗುರುತಿಸಿಕೊಳ್ಳಲು ಕಾರಣಕರ್ತರಾಗಿದ್ದಾರೆ. ಅಲ್ಲದೆ ಉಚಿತ ಯೋಗ ತರಬೇತಿಗಳನ್ನು ಆಯೋಜಿಸಿ ಯೋಗದ ಮಹತ್ವ ತಿಳಿಸಿಕೊಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 
    ನಾಗರಾಜ್‌ರವರು ರಾಜ್ಯಮಟ್ಟ, ರಾಷ್ಟ್ರಮಟ್ಟ ಹಾಗು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ, ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗು ವಿವಿಧ ಸಂಘ-ಸಂಸ್ಥೆಗಳು ಪ್ರಶಸ್ತಿ, ಬಿರುದುಗಳನ್ನು ನೀಡಿ ಗೌರವಿಸಿವೆ. 
    ಇದೀಗ ಕುವೆಂಪು ವಿಶ್ವ ವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ನೀಡಲಿದ್ದು, ಕುಲಸಚಿವ ಎಸ್.ಎಂ ಗೋಪಿನಾಥ್‌ರವರು ನಾಗರಾಜ್‌ರವರ ನಿವಾಸಕ್ಕೆ ತೆರಳಿ ಪದವಿ ಸ್ವೀಕಾರಕ್ಕೆ ಆಹ್ವಾನಿಸಿದ್ದಾರೆ. ಘಟಿಕೋತ್ಸವದಲ್ಲಿ ವಿಶ್ವ ವಿದ್ಯಾನಿಲಯದ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ರವರು ಪದವಿ ಪ್ರಧಾನ ಮಾಡಲಿದ್ದಾರೆ. 

ಎಸ್‌ಡಬ್ಲ್ಯೂಐಎಎ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ರಂಗ ಕಲಾವಿದೆ, ಶಿಕ್ಷಕಿ ಲಕ್ಷ್ಮಿ

ದಕ್ಷಿಣ ಭಾರತೀಯ ಮಹಿಳಾ ಸಾಧನೆಯ ರಾಷ್ಟ್ರ ಪ್ರಶಸ್ತಿ ಎಸ್‌ಡಬ್ಲ್ಯೂಐಎಎ-೨೦೨೪ ಮುಡಿಗೇರಿಸಿಕೊಳ್ಳುವ ಮೂಲಕ ಭದ್ರಾವತಿ ನಗರದ ಲಕ್ಷ್ಮಿ ಭದ್ರಾವತಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
    ಭದ್ರಾವತಿ : ದಕ್ಷಿಣ ಭಾರತೀಯ ಮಹಿಳಾ ಸಾಧನೆಯ ರಾಷ್ಟ್ರ ಪ್ರಶಸ್ತಿ ಎಸ್‌ಡಬ್ಲ್ಯೂಐಎಎ-೨೦೨೪ ಮುಡಿಗೇರಿಸಿಕೊಳ್ಳುವ ಮೂಲಕ ನಗರದ ಲಕ್ಷ್ಮಿ ಭದ್ರಾವತಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
    ದಕ್ಷಿಣ ಭಾರತದಲ್ಲೇ ರಂಗಭೂಮಿ ಕಲಾವಿದೆಯ ಸಾಧನೆಯ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಕಲಾವಿದೆ ಎಂಬ ಕೀರ್ತಿಗೆ ಲಕ್ಷ್ಮಿ ಪಾತ್ರರಾಗಿದ್ದಾರೆ. ಸೌಂದರ್ಯ ಮತ್ತು ಪ್ರತಿಭೆ ಇವರ ಸಾಧನೆಗೆ ಪೂರಕವಾಗಿವೆ. ತಂದೆಯ ಪ್ರೇರಣೆಯಿಂದ ವಿದ್ಯಾಭ್ಯಾಸದ ಜೊತೆ ಜೊತೆಗೆ ೯ನೇ ತರಗತಿಯಿಂದಲೇ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದು, ಹಲವು ಸಾಧನೆಗಳನ್ನು ಮಾಡಿದ್ದಾರೆ.  
    ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಇವರು ಅನೇಕ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಶಾಲೆ ಮುಗಿದ ಬಳಿಕ ರಂಗ ಶಿಬಿರಗಳಲ್ಲಿ ಭಾಗವಹಿಸುವ ಜೊತೆಗೆ ಅದೆಷ್ಟೋ ಶಾಲಾ ಕಾಲೇಜುಗಳಿಗೆ ಉಚಿತವಾಗಿ ನಾಟಕ ಹಾಗೂ ನೃತ್ಯಗಳನ್ನು ಕಲಿಸಿ ಕೊಡುತ್ತಿದ್ದಾರೆ. ಯಾವುದೇ ವಿಷಯ ನೀಡಿದರೂ ಅದ್ಬುತವಾಗಿ ಉಪನ್ಯಾಸ ಮಂಡಿಸುವ ವಾಕ್ಚಾತುರ್ಯ ಹೊಂದಿರುವುದು ಇವರ ಮತ್ತೊಂದು ವಿಶೇಷತೆಯಾಗಿದೆ.  
    ಇವರು ತಮ್ಮ ಸಾಧನೆಯ ದಾರಿಯಲ್ಲಿ ಸಾಕಷ್ಟು ವೈಫಲ್ಯಗಳನ್ನು ಅನುಭವಿಸಿದ್ದು,  ಪ್ರತಿ ವಿಫಲ ಪ್ರಯತ್ನದಿಂದ ಯಶಸ್ಸು ಕಂಡುಕೊಂಡಿದ್ದಾರೆ. ಕುಟುಂಬದ ಬೆಂಬಲ, ಅಭಿಮಾನಿಗಳ ಪ್ರೀತಿಯಿಂದ ಪ್ರಸ್ತುತ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ನಗರದ ಗಣ್ಯರು, ಅಭಿಮಾನಿಗಳು ಅಭಿನಂದಿಸಿದ್ದಾರೆ. 

ವಿಐಎಸ್‌ಎಲ್ ಸಂಸ್ಥಾಪಕರ ದಿನ ಆಚರಣೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ಸರ್.ಎಂ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಸಂಸ್ಥಾಪಕರ ದಿನ ಆಚರಣೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಚಾಲನೆ ನೀಡಿದರು.
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ಸರ್.ಎಂ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಸಂಸ್ಥಾಪಕರ ದಿನ ಆಚರಣೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಚಾಲನೆ ನೀಡಿದರು.
    ಶ್ರೇಷ್ಠ ತಂತ್ರಜ್ಞ (ಇಂಜಿನಿಯರ್), ರಾಜನೀತಿಜ್ಞ, ನಗರದ ಅನ್ನದಾತ, ಭಾರತರತ್ನ ಸರ್.ಎಂ ವಿಶ್ವೇಶ್ವರಾಯರವರ ಮಾರ್ಗದರ್ಶನದಲ್ಲಿ ಅಂದಿನ ಮೈಸೂರು ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ನೇತೃತ್ವದಲ್ಲಿ ಜ.೧೮, ೧೯೧೮ ರಲ್ಲಿ ಮೈಸೂರು ವುಡ್ ಡಿಸ್ಟಿಲೇಷನ್ ಮತ್ತು ಐರನ್ ವರ್ಕ್ಸ್ ಹೆಸರಿನಲ್ಲಿ ಶಂಕುಸ್ಥಾಪನೆಗೊಂಡಿದ್ದು, ಕಾರ್ಖಾನೆ ವತಿಯಿಂದ ಈ ದಿನವನ್ನು ಪ್ರತಿವರ್ಷ ಸಂಸ್ಥಾಪಕರ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. 
    ಬೆಳಿಗ್ಗೆ ಕಾರ್ಖಾನೆ ಆಡಳಿತ ಕಛೇರಿ ಆವರಣದಲ್ಲಿರುವ ಸರ್.ವಿ ವಿಶ್ವೇಶ್ವರಾಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸೂಚಿಸಲಾಯಿತು.  ನಂತರ ನುಗ್ಗೆ, ಅಡಕೆ, ಪಪ್ಪಾಯಿ, ಹೊಂಗೆ, ಹಲಸು ಮತ್ತು ಮಾವು ಸೇರಿದಂತೆ ಸುಮಾರು ೨೫೦ ಸಸಿಗಳನ್ನು ಕಾರ್ಖಾನೆಯ ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು.
    ಸಂಜೆ ನ್ಯೂಟೌನ್ ವಿಐಎಸ್‌ಎಲ್ ರಜತ ಮಹೋತ್ಸವ ಕ್ರೀಡಾಂಗಣದ ಅಮೃತ ಮಹೋತ್ಸವ ವೇದಿಕೆಯಲ್ಲಿ ಸಂಸ್ಥಾಪಕ ದಿನಾಚರಣೆ ಅಂಗವಾಗಿ ಸುಮಾರು ೪೦ ದಿನಗಳ ಕಾಲ ಆಯೋಜಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. 
    ಕಾರ್ಖಾನೆಯ ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಕೆ.ಎಸ್ ಸುರೇಶ್, ಮಹಾಪ್ರಬಂಧಕರು (ಹೆಚ್.ಆರ್ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್, ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ,  ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರ, ಮಹಾಪ್ರಬಂಧಕರು (ನಗರಾಡಳಿತ) ಮೋಹನ್ ರಾಜ್ ಶೆಟ್ಟಿ, ಮಹಾಪ್ರಬಂಧಕರು (ಹಣಕಾಸು ಮತ್ತು ಲೆಕ್ಕ) ಶೋಭ ಶಿವಶಂಕರನ್, ಉಪ ಮಹಾಪ್ಬಂಧಕರು (ಗಣಿಗಳು) ಅನಿಲ್ ಕುಮಾರ್ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೋಲಾಟ ಮತ್ತು ಸಮೂಹ ಗಾಯನ ಕಾರ್ಖಾನೆಯ ಮಹಿಳಾ ಮತ್ತು ಪುರುಷ ಕಾರ್ಮಿಕರು ನಡೆಸಿಕೊಟ್ಟರು,  ಕಾರ್ಖಾನೆಯ ಇಳಯರಾಜ ಮತ್ತು ಕೃಷ್ಣರವರ ಪುತ್ರಿಯರಾದ ಮೋನಿಕಾ ಮತ್ತು ಲೇಖನ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.
 

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ಸರ್.ಎಂ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಸಂಸ್ಥಾಪಕರ ದಿನ ಆಚರಣೆ ಹಿನ್ನಲೆಯಲ್ಲಿ ನುಗ್ಗೆ, ಅಡಕೆ, ಪಪ್ಪಾಯಿ, ಹೊಂಗೆ, ಹಲಸು ಮತ್ತು ಮಾವು ಸೇರಿದಂತೆ ಸುಮಾರು ೨೫೦ ಸಸಿಗಳನ್ನು ಕಾರ್ಖಾನೆಯ ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು.

Sunday, January 19, 2025

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟ ೩ನೇ ವರ್ಷಕ್ಕೆ

ದ್ವೇಷಪೂರಿತ ಸುದ್ದಿಗಳಿಂದ ಆತಂಕ, ಅಂತರ 

ಕಾರ್ಖಾನೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿಯವರ ಹೇಳಿಕೆಯನ್ನು ಬಳಸಿಕೊಂಡು ದ್ವೇಷಪೂರಿತ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವುದು. 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಹಿಂಪಡೆಯಬೇಕು, ಅಗತ್ಯ ಬಂಡವಾಳ ತೊಡಗಿಸಿ ಪುನಶ್ಚೇತನಗೊಳಿಸಬೇಕು ಹಾಗು ಗುತ್ತಿಗೆ ಕಾರ್ಮಿಕರಿಗೆ ತಿಂಗಳ ಪೂರ್ತಿ ಕೆಲಸ ಕಲ್ಪಿಸಿಕೊಡಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟ ಭಾನುವಾರ ೨ ವರ್ಷ ಪೂರೈಸಿದೆ. ಈ ನಡುವೆ ಕಾರ್ಖಾನೆ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜಕೀಯ ದ್ವೇಷಪೂರಿತ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 
    ಕಳೆದ ೨ ವರ್ಷಗಳಿಂದ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟ ಕ್ಷೇತ್ರದ ಇತಿಹಾಸದಲ್ಲಿ ಅತಿ ದೊಡ್ಡ ಹೋರಾಟ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಮತ್ತೊಂದೆಡೆ ಹೋರಾಟ ೩ನೇ ವರ್ಷಕ್ಕೆ ಕಾಲಿಡುತ್ತಿದ್ದು, ಗುತ್ತಿಗೆ ಕಾರ್ಮಿಕರ ಸಂಕಷ್ಟ ಕೇಳುವವರು ಯಾರು ಇಲ್ಲವಾಗಿದೆ. ಯಾವುದೇ ಒಂದು ಹೋರಾಟ ಸುಧೀರ್ಘವಾಗಿ ನಡೆಸಿಕೊಂಡು ಬರುವುದು ಎಂದರೆ ಸುಲಭದ ಕೆಲಸವಲ್ಲ. ಕಾರ್ಮಿಕ ಮುಖಂಡರು ಹಾಗು ಗುತ್ತಿಗೆ ಕಾರ್ಮಿಕರು ಹೋರಾಟದಲ್ಲಿ ಹೊಂದಿರುವ ನಂಬಿಕೆ, ಭರವಸೆ, ವಿಶ್ವಾಸ ಹಾಗು ಎಲ್ಲವನ್ನು ಸಹಿಸಿಕೊಂಡು ಹೋಗುವ ಮನೋಭಾವ ಎಲ್ಲವೂ ಇದರಲ್ಲಿ ಅಡಗಿವೆ. 
    ಕಾರ್ಮಿಕರ ಹೋರಾಟ ಒಂದೆಡೆ ಇರಲಿ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮನಾಳುವ ಸರ್ಕಾರಗಳ ಇಚ್ಛಾಶಕ್ತಿ ಬಹಳ ಮುಖ್ಯವಾಗಿದೆ. ಜನಪ್ರತಿನಿಧಿಗಳ ಬದ್ಧತೆ ಬಹಳ ಮುಖ್ಯವಾಗಿದೆ. ಕಳೆದ ಸುಮಾರು ೩ ದಶಕಗಳಿಂದ ಎಲ್ಲಾ ರಾಜಕೀಯ ಪಕ್ಷಗಳು ಸಹ ಕಾರ್ಖಾನೆ ವಿಚಾರವನ್ನು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಬಂದಿದ್ದಾರೆ ಎಂಬುದು ಯಾರಿಗೂ ತಿಳಿಯದ ವಿಚಾರವಲ್ಲ. ಆದರೂ ಸಹ ನಮ್ಮನಾಳುವ ಸರ್ಕಾರ ಹಾಗು ರಾಜಕೀಯ ಪಕ್ಷಗಳ ಮೇಲೆ ಕಾರ್ಮಿಕರು ನಂಬಿಕೆ, ಭರವಸೆ, ವಿಶ್ವಾಸ ಇಂದಿಗೂ ಹೊಂದಿದ್ದಾರೆ. 

    ಸಾಮಾಜಿಕ ಜಾಲ ತಾಣಗಳಲ್ಲಿ ದ್ವೇಷಪೂರಿತ ಸುದ್ದಿಗಳು: 


ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಪುತ್ರ ಬಿ.ಎಸ್ ಬಸವೇಶ್‌ರವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಎಚ್.ಡಿ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಯಾಗಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದಾರೆ. 
    ಕೆಲವು ದಿನಗಳಿಂದ ವಾಟ್ಸಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಖಾನೆ ಅಭಿವೃದ್ಧಿಗೆ ಸಂಬಂಧಿಸಿದಂತೆ ದ್ವೇಷಪೂರಿತ ಸುದ್ದಿಗಳು ಹರಿದಾಡುತ್ತಿವೆ. ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿಯವರು ಕಾರ್ಖಾನೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕ ಬಿ.ಕೆ ಸಂಗಮೇಶ್ವರ್ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ ಎನ್ನುವ ವಿಡಿಯೋ ಹಾಗು ಪೋಸ್ಟ್‌ಗಳು ಹರಿದಾಡುತ್ತಿದ್ದು, ಈ ನಡುವೆ ಇದಕ್ಕೆ ಪ್ರತಿಯಾಗಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಪುತ್ರ ಬಿ.ಎಸ್ ಬಸವೇಶ್‌ರವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಎಚ್.ಡಿ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಯಾಗಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದಾರೆ. ಎರಡು ಸಹ ದ್ವೇಷಪೂರಿತವಾಗಿ ಕಂಡು ಬರುತ್ತಿವೆ. ಇದರಿಂದಾಗಿ ಗುತ್ತಿಗೆ ಕಾರ್ಮಿಕರಲ್ಲಿ ಆತಂಕ ಆವರಿಸಿಕೊಂಡಿದ್ದು, ಈ ನಡುವೆ ಇಂತಹ ದ್ವೇಷಪೂರಿತ ಸುದ್ದಿಗಳಿಂದ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. 

ಭದ್ರಾ ನದಿ ತೀರದಲ್ಲಿ ಪುನಃ ಸಾವಿರಾರು ಗೋವುಗಳ ಮೂಳೆ ತ್ಯಾಜ್ಯ ಪತ್ತೆ

ಹಳೇನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು 

ಭದ್ರಾವತಿ ನಗರದಲ್ಲಿ ಪುನಃ ಸಾವಿರಾರು ಗೋವುಗಳ ಮೂಳೆ ತ್ಯಾಜ್ಯ ಭದ್ರಾ ನದಿ ದಡದಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. 
     ಭದ್ರಾವತಿ: ನಗರದಲ್ಲಿ ಪುನಃ ಸಾವಿರಾರು ಗೋವುಗಳ ಮೂಳೆ ತ್ಯಾಜ್ಯ ಭದ್ರಾ ನದಿ ದಡದಲ್ಲಿ ಪತ್ತೆಯಾಗಿರುವ ಘಟನೆ ನಡೆದಿದ್ದು, ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. 
    ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಸಹ ಇಲ್ಲಿ ಮಾತ್ರ ಗೋ ಹತ್ಯೆ ನಿರಂತರವಾಗಿ ನಡೆಯುತ್ತಿದ್ದು, ಗೋ ಹತ್ಯೆ ಮಾಡುವವರನ್ನು ತಡೆಯಲು ಯಾರಿಗೂ ಸಾಧ್ಯವಾಗಿಲ್ಲ ಎಂಬ ಆರೋಪ ಇಲ್ಲಿನ ಹಿಂದೂಪರ ಸಂಘಟನೆಗಳಿಂದ ಕೇಳಿ ಬರುತ್ತಿದೆ. ಇದಕ್ಕೆ ಎಂಬಂತೆ ಹಲವಾರು ಘಟನೆಗಳು ನಡೆದಿದ್ದು, ಅಲ್ಲದೆ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಪೊಲೀಸ್ ವ್ಯವಸ್ಥೆ ವೈಫಲ್ಯವೋ ಅಥವಾ ಆಡಳಿತ ವ್ಯವಸ್ಥೆಯಲ್ಲಿನ ವೈಫಲ್ಯವೋ ಎಂದು ಹಿಂದೂಪರ ಸಂಘಟನೆಗಳ ಮುಖಂಡರು ಪ್ರಶ್ನಿಸಿದ್ದಾರೆ. 
    ಪ್ರಸ್ತುತ ಒಂದೆಡೆ ರಾಜ್ಯದಲ್ಲಿ ಗೋವುಗಳ ಕೆಚ್ಚಲು ಕೊಯ್ದ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇಂತಹ ಸಂದರ್ಭದಲ್ಲಿ ಇದೀಗ ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹಳೇ ಸೀಗೇಬಾಗಿ ಭದ್ರಾ ನದಿ ದಡದಲ್ಲಿ ಸಾವಿರಾರು ಗೋವುಗಳ ತಲೆ ಬುರುಡೆಗಳು, ಕೊಂಬುಗಳು ಹಾಗು ಗೋವುಗಳ ದೇಹದ ಇನ್ನಿತರ ಭಾಗದ ಮೂಳೆಗಳು ಪತ್ತೆಯಾಗಿವೆ. 
    ಗೋವುಗಳ ಮೂಳೆಗಳು ಎಲ್ಲಿ, ಯಾವಾಗ ಪತ್ತೆ?
    ಹಿಂದೂಪರ ಸಂಘಟನೆಯ ಮುಖಂಡ ದೇವರಾಜರವರು ಜ.೧೮ರಂದು ಸಂಜೆ ೪ ಗಂಟೆ ಸಮಯದಲ್ಲಿ ಸ್ನೇಹಿತರಾದ ಯೇಸುಕುಮಾರ್ ಮತ್ತು ತೀರ್ಥೇಶ್ ಅವರೊಂದಿಗೆ ಹೊಳೆಹೊನ್ನೂರು ರಸ್ತೆ, ಹಳೇ ಸೀಗೆಬಾಗಿ ಕಡೆಗೆ ಹೋಗುವ ಕ್ರಾಸ್ ಹತ್ತಿರದ ಬಸ್ ನಿಲ್ದಾಣ ಎದುರುಗಡೆ ಅಡಕೆ ತೋಟದ ಹಿಂಭಾಗಕ್ಕೆ ಹೋದಾಗ ಭದ್ರಾ ನದಿ ದಡದಲ್ಲಿ ಸಾವಿರಾರು ಗೋವುಗಳ ಮೂಳೆಗಳು ಪತ್ತೆಯಾಗಿವೆ. ಮೂಳೆಗಳ ರಾಶಿ ಸುತ್ತ ಟಾರ್ಪಲ್‌ನಿಂದ ಮರೆ ಮಾಡಿರುವುದು ಕಂಡು ಬಂದಿದೆ. 
    ಈ ಸಂಬಂಧ ದೇವರಾಜರವರು ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮೂಳೆಗಳ ರಾಶಿಯಿಂದ ದುರ್ವಾಸನೆ ಬರುತ್ತಿದ್ದು, ಅಲ್ಲದೆ ಅಪಾಯಕಾರಿಯಾದ ರೋಗದ ಸೋಂಕುಗಳು ಹರಡುವ ಭೀತಿ ಉಂಟಾಗಿದೆ. ಅಲ್ಲದೆ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಆದರೂ ಸಹ ಗೋವುಗಳನ್ನು ಹತ್ಯೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಮೂಳೆಗಳನ್ನು ಸಂಗ್ರಹಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 
    ಕೆಲವು ತಿಂಗಳುಗಳ ಹಿಂದೆ ನಗರದಲ್ಲಿ ಗೋವಿನ ರಾಶಿ ರಾಶಿ ಮೂಳೆಗಳನ್ನು ಶೆಡ್‌ನಲ್ಲಿ ಸಂಗ್ರಹಿಸಿಡಲಾಗಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಮತ್ತೊಂದು ಪ್ರಕರಣದಲ್ಲಿ ಗೋವಿನ ತ್ಯಾಜ್ಯ ಚೀಲಗಳಲ್ಲಿ ತುಂಬಿ ಭದ್ರಾ ನದಿ ದಡದಲ್ಲಿ ಎಸೆದಿರುವುದು ಪತ್ತೆಯಾಗಿತ್ತು.  ಈ ನಡುವೆ ಗೋವುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿ ಸಿಕ್ಕಿ ಬಿದ್ದಿರುವ ಘಟನೆಗಳು ಸಹ ನಡೆದಿವೆ. 

ಕುವೆಂಪು ವಿ.ವಿ ವಿದ್ಯಾ ವಿಷಯಕ ಪರಿಷತ್‌ಗೆ ಡಾ. ಎಸ್.ಪಿ ರಾಕೇಶ್ ನಾಮನಿರ್ದೇಶನ

ಡಾ.ಎಸ್.ಪಿ ರಾಕೇಶ್ 
    ಭದ್ರಾವತಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ ನಗರದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಆಡಳಿತ ಅಧಿಕಾರಿ, ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಪಿ ರಾಕೇಶ್‌ರವರನ್ನು ಎರಡು ವರ್ಷಗಳ ಅವಧಿಗೆ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯರಾಗಿ ನಾಮನಿರ್ದೇಶನಗೊಳಿಸಲಾಗಿದೆ. 
    ರಾಕೇಶ್‌ರವರು ಹಲವಾರು ವರ್ಷಗಳಿಂದ ವಿದ್ಯಾಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕುವೆಂಪು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿಗೆ ವಿವಿಧ ಕಾಲೇಜುಗಳ ಒಟ್ಟು ೧೦ ಮಂದಿ ಪ್ರಾಂಶುಪಾಲರನ್ನು ೨ ವರ್ಷಗಳ ಅವಧಿಗೆ ಕುಲಪತಿಗಳು ನಾಮನಿರ್ದೇಶನಗೊಳಿಸಿ ಅಧಿಸೂಚನೆ ಹೊರಡಿಸಿದ್ದಾರೆ. 
    ಈ ಪೈಕಿ ಡಾ. ಎಸ್.ಪಿ ರಾಕೇಶ್ ಸಹ ಒಬ್ಬರಾಗಿದ್ದು, ಇವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ, ವಿದ್ಯಾ ಸಂಸ್ಥೆಯ ಪ್ರಧಾನ ಪೋಷಕ ಸಿ.ಎಸ್ ಷಡಕ್ಷರಿ, ಅಧ್ಯಕ್ಷ ಬಿ. ಸಿದ್ದಬಸಪ್ಪ ಹಾಗೂ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರು,  ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ಬೋಧಕ ಮತ್ತು  ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.