Friday, April 4, 2025

ಅನ್ನಮೇರಿ ನಿಧನ

    ಅನ್ನಮೇರಿ
    ಭದ್ರಾವತಿ : ಹಳೇನಗರ ವ್ಯಾಪ್ತಿಯ ಗಾಂಧಿನಗರದ ನಿವಾಸಿ ಅನ್ನಮೇರಿ(೫೮) ಶುಕ್ರವಾರ ನಿಧನ ಹೊಂದಿದ್ದಾರೆ. 
    ಇವರಿಗೆ ಮಗಳು ಮೊಮ್ಮಕ್ಕಳು ಇದ್ದಾರೆ. ಇವರ ಅಂತ್ಯಕ್ರಿಯೆ ನ್ಯೂಟೌನ್ ಬೈಪಾಸ್ ರಸ್ತೆಯಲ್ಲಿರುವ ಕ್ರೈಸ್ತ ಸಮಾಧಿಯಲ್ಲಿ ಶನಿವಾರ ನೆರವೇರಲಿದೆ. ತಾಲೂಕು ಕ್ರೈಸ್ತ ಸಮುದಾಯದ ಸ್ಥಳೀಯ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ವಿಜೃಂಭಣೆಯಿಂದ ಜರುಗಿದ ಭೂತನಗುಡಿ ಜಾತ್ರಾ ಮಹೋತ್ಸವ : ಜನರ ಮೆಚ್ಚುಗೆ ಪಡೆದ ಪೌರಾಣಿಕ ನಾಟಕ ಪ್ರದರ್ಶನ

ಭದ್ರಾವತಿ ನಗರದ ಭೂತನಗುಡಿಯಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದ ೪೦ನೇ ವರ್ಷದ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷ ಸಹ ವಿಜೃಂಭಣೆಯಿಂದ ಜರುಗಿತು. ಈ ಸಂಬಂಧ ಹಮ್ಮಿಕೊಳ್ಳಲಾಗಿದ್ದ ಶ್ರೀ ಶನೇಶ್ವರ ಮಹಾತ್ಮೆ ರಾಜ ವಿಕ್ರಮ ಪೌರಾಣಿಕ ನಾಟಕ ಪ್ರೇಕ್ಷಕರ ಮನಸೆಳೆಯಿತು.
    ಭದ್ರಾವತಿ : ನಗರದ ಭೂತನಗುಡಿಯಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದ ೪೦ನೇ ವರ್ಷದ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷ ಸಹ ವಿಜೃಂಭಣೆಯಿಂದ ಜರುಗಿತು. ಈ ಸಂಬಂಧ ಹಮ್ಮಿಕೊಳ್ಳಲಾಗಿದ್ದ ಶ್ರೀ ಶನೇಶ್ವರ ಮಹಾತ್ಮೆ ರಾಜ ವಿಕ್ರಮ ಪೌರಾಣಿಕ ನಾಟಕ ಪ್ರೇಕ್ಷಕರ ಮನಸೆಳೆಯಿತು.
    ಚನ್ನರಾಯಪಟ್ಟಣದ ಮಂಜುನಾಥ ಡ್ರಾಮಾ ಸೀನ್ ಸಪ್ಲೈಯರ್ ಇವರ ಭವ್ಯ ರಂಗ ವೇದಿಕೆಯಲ್ಲಿ ಬುಧವಾರ ರಾತ್ರಿ  ಶನೇಶ್ವರ ನಾಟಕ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಶನೇಶ್ವರ ಮಹಾತ್ಮೆ ರಾಜ ವಿಕ್ರಮ ಪೌರಾಣಿಕ ನಾಟಕದಲ್ಲಿ ಸ್ಥಳೀಯ ಕಲಾವಿದರು ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾದರು.  
    ಕಲಾವಿದರಾದ ಮಂಜುನಾಥ-ಶನಿದೇವರು, ಯ.ಎ ಕೃಷ್ಣಕುಮಾರ್-ವಿಕ್ರಮರಾಜ, ಮುಕೇಶ್-ಕಾರನಾಸ ಮುಲ್ಡ್ ಗುಣವಂತಿ ಗಂಡ ಸಿದ್ದಲಿಂಗು, ಶರತ್ ಕುಮಾರ್-ಸೇನಾಧಿಪತಿ ಸೂರ್ಯಗ್ರಹ ಡಂಗೂರ, ತಮ್ಮಣ್ಣ-ಬಡ ಬ್ರಾಹ್ಮಣ, ಗುಣವಂತಿ ಮುಲ್ಡಿ, ಲಕ್ಷ್ಮೀದೇವಿ, ಅರ್ಜುನ್-ಗುರುಗ್ರಹ, ಯಜಮಾನ ಬಸಪ್ಪ ತೇಲಿ ಶೆಟ್ಟಿ ಕಟಕ, ಸಂಜು ಎಂ.ಆರ್-ನಟಿ, ಕಾಳಿಕಾಂಬೆ ಕಟುಕ ಸಿಪಾಯಿ, ನತೀನ್ ಕುಮಾರ-ಶನಿಗ್ರಹ, ಕಳ್ಳ, ಕು. ವ್ಯಾಪಾರಿ, ಎಸ್. ಕಿರಣ್ ಅಂಬೇಕರ್-ಚಂದ್ರಸೇನ, ರಾಹು-ಕೇತು ಗ್ರಹ, ಆನಂದ-ಆದಿಮೂರ್ತಿ, ಕು.ವ್ಯಾಪಾರಿ, ಸುನೀಲ್ ಕುಮಾರ್-ಚಂದ್ರಗ್ರಹ ಚ. ಸೇನಾಧಿಪತಿ, ಪ್ರದೀಪ್ ಕುಮಾರ್-ನಂದಯ್ಯ ಶೆಟ್ಟಿ, ಅರುಣ್ ಕುಮಾರ್-ಬುಧಗ್ರಹ ಸಿಪಾಯಿ, ಅಭಿಲಾಷ್ ಜಿ.ಆರ್-ವಿಕ್ರಮ ಮಂತ್ರಿ, ಅಮೃತ್ ಜಿ.ಆರ್-ಶುಕ್ರಗ್ರಹ, ಎ. ದಯಾನಂದ-ಪದ್ಯಾವತಿ, ಸಚಿತ್ .ಎ-ಚ. ಮಂತ್ರಿ, ನಂಜುಂಡ-ಸುಮತಿ, ಅಲೋಲಿಕೆ, ಗೋಪಿ-ಕಟುಕ ಬೇಟೆಗಾರ, ಚಂದು-ಅ.ಪ ಸಖಿ, ಭುವನ್. ಆರ್-ಬಡ ಬ್ರಾಹ್ಮಣ ಮಗ ಮತ್ತು ನಿಖಿಲ್-ಬಡ ಬ್ರಾಹ್ಮಣ ಮಗಳು ಅ.ಪ ಸಖಿ ಪಾತ್ರಗಳಲ್ಲಿ ಅಭಿನಯಿಸಿದರು. 
    ಶ್ರೀ ಮಹಾಗಣಪತಿ, ಶ್ರೀ ಶನೈಶ್ವರ ಸ್ವಾಮಿ, ಶ್ರೀ ಕೆಂಚಮ್ಮ ದೇವಿ ಮತ್ತು ಭೂತಪ್ಪ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಕಳೆದ ೪೦ ವರ್ಷಗಳಿಂದಲೂ ಸ್ಥಳೀಯ ಭೂತನಗುಡಿ ಕಲಾವಿದರಿಂದ ನಾಟಕ ಪ್ರದರ್ಶನಗೊಳ್ಳುತ್ತಿದ್ದು, ಎಲ್ಲಾ ವಯಸ್ಸಿನವರು ನಾಟಕದಲ್ಲಿ ಅಭಿನಯಿಸುತ್ತಿದ್ದಾರೆ.  ಆಧುನಿಕ ಯುಗದ ಟಿ.ವಿ ಮಾಧ್ಯಮಗಳ  ಭರಾಟೆಯಲ್ಲಿ ರಂಗ ಪ್ರದರ್ಶನ ನಶಿಸುತ್ತಿದ್ದು, ಈ ರೀತಿಯ ನಾಟಕ ಪ್ರದರ್ಶನಗಳು ರಂಗಕರ್ಮಿಗಳನ್ನು ಉತ್ತೇಜಿಸುತ್ತಿದೆ ಎಂದು ಸಮಿತಿ ಅಧ್ಯಕ್ಷ ರಾಜೇಶ್ ನಾಟಕ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.  
    ಸಮಿತಿ ಪದಾಧಿಕಾರಿಗಳು, ಸೇವಾಕರ್ತರು, ಸ್ಥಳೀಯ ನಿವಾಸಿಗಳು ನಾಟಕ ಪ್ರದರ್ಶನ ವೀಕ್ಷಿಸುವ ಮೂಲಕ ಪ್ರೋತ್ಸಾಯಿಸಿದರು. 

ಪ್ರಸ್ತುತ ರಂಗಭೂಮಿ ಸಂಕುಚಿತಗೊಂಡಿರುವುದು ವಿಪರ್ಯಾಸದ ಸಂಗತಿ : ಹಿರಯ ರಂಗಕಲಾವಿದ ಕೆ.ಬಿ ಕಪನಿಗೌಡ

ಭದ್ರಾವತಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ವತಿಯಿಂದ ಜನ್ನಾಪುರ, ರಾಜಪ್ಪ ಲೇಔಟ್, ಅಂಗಾಳ ಪರಮೇಶ್ವರಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ಪ್ರಸ್ತುತ ದೊಡ್ಡ ಪ್ರಮಾಣದಲ್ಲಿ ಬೆಳೆಯಬೇಕಿದ್ದ ರಂಗಭೂಮಿ ಇಂದು ಸಂಕುಚಿತಗೊಂಡಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ವಿಕಸಂ ಹಿರಿಯ ರಂಗಕಲಾವಿದ ಕೆ.ಬಿ ಕಪನಿಗೌಡ ವಿಷಾದ ವ್ಯಕ್ತಪಡಿಸಿದರು. 
    ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ವತಿಯಿಂದ ಜನ್ನಾಪುರ, ರಾಜಪ್ಪ ಲೇಔಟ್, ಅಂಗಾಳ ಪರಮೇಶ್ವರಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 


ಭದ್ರಾವತಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ವತಿಯಿಂದ ಜನ್ನಾಪುರ, ರಾಜಪ್ಪ ಲೇಔಟ್, ಅಂಗಾಳ ಪರಮೇಶ್ವರಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ನೀನಾಸಂ ಕಲಾವಿದರಾದ ಕನ್ನಡ ಉಪನ್ಯಾಸಕ ಬಿ.ಎಚ್ ಗಿರಿಧರಮೂರ್ತಿ ಅವರ ರಾವಣನ ಪ್ರಾತ್ರಾಭಿನಯ ಪ್ರೇಕ್ಷಕರ ಮನಸೂರೆಗೊಂಡಿತು. 
    ರಂಗಭೂಮಿ ಕಲೆಗೆ ಪ್ರಸಿದ್ದವಾಗಿದ್ದ ನಗರದಲ್ಲಿ ಇಂದು ರಂಗಭೂಮಿ ಅವನತಿ ದಾರಿ ಹಿಡಿಯುತ್ತಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ಒಂದು ಕಾಲದಲ್ಲಿ ಬಯಲು ರಂಗಮಂದಿರ ಸೇರಿದಂತೆ ದೊಡ್ಡ ದೊಡ್ಡ ವೇದಿಕೆಗಳಲ್ಲಿ ರಂಗಭೂಮಿ ಕಲಾವಿದರು ತಮ್ಮ ಅಭಿನಯದ ಮೂಲಕ ಸಾವಿರಾರು ಪ್ರೇಕ್ಷಕರ ಮನಗೆಲ್ಲುತ್ತಿದ್ದ ಕಾಲ ಇಂದು ಕಣ್ಮರೆಯಾಗಿದೆ. ಈ ಹಿಂದೆ ಬಹಳಷ್ಟು ರಂಗ ತಂಡಗಳಿದ್ದವು. ರಂಗ ಕಲಾವಿದರು ಸಹ ಬಹಳಷ್ಟು ಮಂದಿ ಇದ್ದರು. ಆದರೆ ಇಂದು ರಂಗ ತಂಡಗಳು ಕಣ್ಮರೆಯಾಗಿವೆ. ಈ ನಡುವೆ ಬೆರಳೆಣಿಕೆಯಷ್ಟು ಕಲಾವಿದರು ಕಂಡು ಬರುತ್ತಿರುವುದು ನೋವಿನ ಸಂಗತಿಯಾಗಿದೆ. ರಂಗ ಕಲೆ ಉಳಿಸಿಕೊಳ್ಳುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಜಾನಪದ ಕಲಾವಿದ ತಮಟೆ ಜಗದೀಶ್‌ರವರು ಕೈಗೊಂಡಿರುವ ಪ್ರಯತ್ನ ಶ್ಲಾಘನೀಯ ಎಂದರು. 
    ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.  ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಬಿ. ಜಗದೀಶ್, ಜೀ ಕನ್ನಡ ಟಿವಿ ಚಾನಲ್‌ನಲ್ಲಿ ಪ್ರಸಾರವಾಗುವ `ಲಕ್ಷ್ಮೀ ನಿವಾಸ' ಧಾರವಾಹಿ ಮೂಗ ವೆಂಕಿ ಪಾತ್ರಧಾರಿ ಹವ್ಯಾಸಿ ರಂಗಭೂಮಿ ಕಲಾವಿದ ಚಂದ್ರಶೇಖರ ಶಾಸ್ತ್ರಿ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. 
ಸಂಘದ ಉಪಾಧ್ಯಕ್ಷೆ ರತ್ನಾ ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ವಿಕಸಂ ಹಿರಿಯ ರಂಗಕಲಾವಿದ ಕೆ.ಎಸ್ ರವಿಕುಮಾರ್‌ರವರಿಗೆ ಗೌರವ ಸಮರ್ಪಣೆ ನಡೆಯಿತು. 


   ಭದ್ರಾವತಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ವತಿಯಿಂದ ಜನ್ನಾಪುರ, ರಾಜಪ್ಪ ಲೇಔಟ್, ಅಂಗಾಳ ಪರಮೇಶ್ವರಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ನೀನಾಸಂ ಕಲಾವಿದರಾದ ಡಿ. ಇಂದುರವರ ವೀರರಾಣಿ ಕಿತ್ತೂರು ರಾಣಿ ಕಿತ್ತೂರು ಚೆನ್ನಮ್ಮನ ಪ್ರಾತ್ರಾಭಿನಯ ಪ್ರೇಕ್ಷಕರ ಮನ ಸೆಳೆಯಿತು. 
    ನಿವೃತ್ತ ಉಪನ್ಯಾಸಕ ಪ್ರೊ. ಎಂ. ಚಂದ್ರಶೇಖರಯ್ಯ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲುಯಜ್ಞಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಯು. ಮಹಾದೇವಪ್ಪ ಸೇರಿದಂತೆ ಸ್ಥಳೀಯ ಕಲಾವಿದರು.
    ಪ್ರಧಾನ ಕಾರ್ಯದರ್ಶಿ ತಮಟೆ ಜಗದೀಶ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಅಂಬೇಡ್ಕರ್ ಎಜ್ಯುಕೇಷನ್ ಟ್ರಸ್ಟ್ ಬಿ.ಇಡಿ ಕಾಲೇಜಿನ ಉಪನ್ಯಾಸಕ ಹನುಮಂತಪ್ಪ  ಕಾರ್ಯಕ್ರಮ ನಿರೂಪಿಸಿದರು. 

Thursday, April 3, 2025

ಸರೋಜಮ್ಮ ನಿಧನ

ಸರೋಜಮ್ಮ
ಭದ್ರಾವತಿ: ಜನ್ನಾಪುರ ನಿವಾಸಿ ದಿವಂಗತ ಮಲ್ಲೇಶಪ್ಪನವರ ಧರ್ಮಪತ್ನಿ, ೧೯೮೩ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸರೋಜಮ್ಮ(೮೦) ಗುರುವಾರ ಮಧ್ಯಾಹ್ನ ನಿಧನ ಹೊಂದಿದರು. 
    ಪುತ್ರ ಆಟೋ ಚಾಲಕ ಶಂಕರ ಮೂರ್ತಿ ಹಾಗು ಪುತ್ರಿ ಮತ್ತು ಮೊಮ್ಮಕ್ಕಳು ಇದ್ದಾರೆ. ಸರೋಜಮ್ಮ ವಯೋ ಸಹಜವಾಗಿ ನಿಧನರಾಗಿದ್ದು, ಆಟೋ ಚಾಲಕರು, ಸ್ಥಳೀಯ ಮುಖಂಡರು ಹಾಗು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇವರ ಅಂತ್ಯಕ್ರಿಯೆ ಶುಕ್ರವಾರ ಬಿ.ಎಚ್ ರಸ್ತೆ, ಅಪ್ಪರ್‌ಹುತ್ತಾ (ಕವಲಗುಂದಿ) ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. 

ಲಂಚ ಸ್ವೀಕರಿಸುತ್ತಿದ್ದಾಗ ಗ್ರಾಮಪಂಚಾಯಿತಿ ಪಿಡಿಓ, ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ


ಭದ್ರಾವತಿ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಪಿಡಿಓ ಮಹಮದ್ ಆಲಿ 
    ಭದ್ರಾವತಿ ತಾಲೂಕಿನ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಪ್ರಭಾರ ಅಭಿವೃದ್ಧಿ ಅಧಿಕಾರಿ(ಪಿಡಿಓ) ಮತ್ತು ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲಂಚದ ಆರೋಪದ ಅಡಿ ಇಬ್ಬರನ್ನೂ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಗುರುವಾರ ನಡೆದಿದೆ. 
    ತಾಲೂಕಿನ ಕಾಳನಕಟ್ಟೆ ಗ್ರಾಮದಲ್ಲಿನ ಸರ್ವೆ ನಂಬರ್ ೧೪೪ರ ೩೦*೪೦ ಖಾಲಿ ಜಾಗದ ಚಕ್ಕು ಬಂದಿ ನಿಗದಿಪಡಿಸುವಂತೆ ಕೋರಿ ಶಾಲಾವಾಹನ ಕೆಲಸ ಮಾಡಿಕೊಂಡಿದ್ದ ದಿನೇಶ್ ಎಂಬುವರು ಅರ್ಜಿ ಸಲ್ಲಿಸಿ ಇದನ್ನ ಇ-ಸ್ವತ್ತು ಮಾಡಿಕೊಡಲು ಕೋರಿದ್ದರು. 
    ಈ ಕೆಲಸಕ್ಕೆ ಪ್ರಭಾರ ಪಿಡಿಓ ಮಹಮದ್ ಆಲಿ ಮತ್ತು  ಕಾರ್ಯದರ್ಶಿ ಪಿ.ಎಚ್ ಸುರೇಶ್ ೩೦ ಸಾವಿರ ರು. ಬೇಡಿಕೆ ಇಟ್ಟಿದ್ದರು. ದಿನೇಶ್ ಸಂಜೆ ೪.೧೫ರ ಸಮಯದಲ್ಲಿ ೧೫ ಸಾವಿರ ರು. ಹಣ ಗ್ರಾಮ ಪಂಚಾಯಿತಿ ಎದುರು ಲಂಚವಾಗಿ ನೀಡುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಇಬ್ವರನ್ನೂ ಲೋಕಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. 
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಬಿ.ಪಿ. ಚಂದ್ರಶೇಖರ್ ತನಿಖೆ ಕೈಗೊಂಡಿರುತ್ತಾರೆ.


ಭದ್ರಾವತಿ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಪಿ.ಎಚ್ ಸುರೇಶ್. 
    ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಚ್ .ಮಂಜುನಾಥ ಚೌದರಿ  ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಪೊಲೀಸ್ ಉಪಾಧೀಕ್ಷಕ ಬಿ.ಪಿ ಚಂದ್ರಶೇಖರ್, ಪೊಲೀಸ್ ಠಾಣೆ ನಿರೀಕ್ಷಕ ವೀರಬಸಪ್ಪ ಎಲ್ ಕುಸಲಾಪುರ, ಪೊಲೀಸ್ ಸಿಬ್ಬಂದಿಗಳಾದ ಯೋಗೇಶ್,  ಟೀಕಪ್ಪ, ಸುರೇಂದ್ರ, ಬಿ.ಟಿ ಚೆನ್ನೇಶ್, ದೇವರಾಜ್, ಪ್ರಕಾಶ್ ಬಾರಿಮರದ, ಅಂಜಲಿ, ಚಂದ್ರಿಬಾಯಿ, ಗೋಪಿ ಮತ್ತು ಪ್ರದೀಪ್ ಪಾಲ್ಗೊಂಡಿದ್ದರು. 

ಸಂಗೀತ ತರಬೇತಿ ಶಿಬಿರ ಉದ್ಘಾಟನೆ

ಭದ್ರಾವತಿ ಹಳೇ ನಗರದ ಮಹಿಳಾ ಸೇವಾ ಸಮಾಜದಲ್ಲಿ ಏರ್ಪಡಿಸಿದ್ದ ಸಂಗೀತ ತರಬೇತಿ ಶಿಬಿರವನ್ನು ಆಕಾಶವಾಣಿಯ ನಿವೃತ್ತ ಸಂಗೀತ ನಿರ್ದೇಶಕ ಸಂಜೀವ ಆರ್. ನಾಮಣ್ಣನವರ್ ಉದ್ಘಾಟಿಸಿದರು.
    ಭದ್ರಾವತಿ: ನಗರದ ಭದ್ರಾ ಸುಗಮ ಸಂಗೀತ ವೇದಿಕೆಯವತಿಯಿಂದ ಹಳೇನಗರದ ಮಹಿಳಾ ಸೇವಾ ಸಮಾಜದಲ್ಲಿ ಆಯೋಜಿಸಲಾಗಿರುವ ಸಂಗೀತ ತರಬೇತಿ ಶಿಬಿರ ಆಕಾಶವಾಣಿ ನಿವೃತ್ತ ಸಂಗೀತ ನಿರ್ದೇಶಕ ಸಂಜೀವ ಆರ್. ನಾಮಣ್ಣನವರ್ ಉದ್ಘಾಟಿಸಿದರು.
    ತಾಲೂಕು ಜಂಗಮ ಸಂಘದ ಅಧ್ಯಕ್ಷ ಎಸ್. ಅಡವೀಶಯ್ಯ ಅಧ್ಯಕ್ಷತೆ ವಹಿಸಿದ್ದರು.  ಕಲಾವಿದ ಬಿ.ಕೆ ಮೋಹನ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜೀ ಟಿವಿ ಸರಿಗಮಪ ಸಂಗೀತ ಸ್ಪರ್ಧೆಯ ನರಹರಿ ದೀಕ್ಷಿತ್ ಮಂಚಾಲೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
    ವೇದಿಕೆಯಲ್ಲಿ ಸೀಮಾ ಮಂಗೋಟೆ ರುದ್ರೇಶ್, ಶೋಭಾ, ಸುನಂದ, ಜ್ಯೋತಿ, ಡಾ. ವೀಣಾಭಟ್, ಎಚ್.ಮಲ್ಲಿಕಾರ್ಜುನ್, ಜಿ.ವಿ ಸದಾಶಿವಪ್ಪ, ಲೋಲಾಕ್ಷಿ, ಶಾಮಾಚಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. 

೩.೮೦ ಕೋ. ವೆಚ್ಚದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣದ ಗುರಿ : ಡಾ. ವಿಜಯದೇವಿ

ಆರ್ಥಿಕ ನೆರವಿನೊಂದಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಪತ್ರಿಕಾಗೋಷ್ಠಿಯಲ್ಲಿ ಮನವಿ 

ಭದ್ರಾವತಿ ತಾಲೂಕು ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಮಿತಿ ವತಿಯಿಂದ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್ಥಿಕ ಸಹಾಯ ಹಸ್ತದ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. 
    ಭದ್ರಾವತಿ: ತಾಲೂಕಿನಲ್ಲಿ ಸಾಹಿತ್ಯ, ಕನ್ನಡಾಭಿಮಾನಿಗಳು ಹಾಗು ಸಮಸ್ತ ನಾಗರಿಕರ ಬಹುಬೇಡಿಕೆಯಾಗಿರುವ ಕನ್ನಡ ಸಾಹಿತ್ಯ ಭವನ ನಿರ್ಮಾಣ ಮಾಡುವ ಆಶಯ ಇದೀಗ ಈಡೇರುತ್ತಿದ್ದು, ಸುಮಾರು ೩.೮೦ ಕೋ. ರು. ವೆಚ್ಚದಲ್ಲಿ ಮಾದರಿ ಭವನ ನಿರ್ಮಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಆರ್ಥಿಕ ನೆರವಿನೊಂದಿಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಮಿತಿ ಅಧ್ಯಕ್ಷೆ ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ ಮನವಿ ಮಾಡಿದರು. 
    ಅವರು ಈ ಸಂಬಂಧ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ನಮ್ಮ ಮಾತೃಭಾಷೆ ಕನ್ನಡಕ್ಕೆ ಸುಮಾರು ೨೦೦೦ ವರ್ಷಗಳಿಗೂ ಮಿಗಿಲಾದ ಇತಿಹಾಸವಿದೆ. ಭಾರತದಲ್ಲಿ ಶಾಸ್ತ್ರೀಯ ಸ್ಥಾನಮಾನವನ್ನು ಪಡೆದ ಕೆಲವೇ ಭಾಷೆಗಳಲ್ಲಿ ಕನ್ನಡವು ಒಂದಾಗಿದ್ದು, ವಿಶ್ವಭಾಷಾ ಪರಂಪರೆಯಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಕನ್ನಡದ ಶ್ರೇಷ್ಠತೆಗೆ ಹಾಗೂ ಅದರ ಭವ್ಯ ಪರಂಪರೆಗೆ ಅನೇಕರ ಕೊಡುಗೆ ಅಪಾರವಾಗಿದೆ. ೮ ಜ್ಞಾನಪೀಠ ಪ್ರಶಸ್ತಿಗಳನ್ನು ಕನ್ನಡಕ್ಕೆ ತಂದುಕೊಟ್ಟವರಲ್ಲಿ ಮೊಟ್ಟ ಮೊದಲಿಗರು ನಮ್ಮ ಶಿವಮೊಗ್ಗ ಜಿಲ್ಲೆಯ ಡಾ. ಕುವೆಂಪು ಮತ್ತು ಡಾ. ಯು.ಆರ್. ಅನಂತಮೂರ್ತಿಯವರು. ರಾಷ್ಟ್ರಕವಿಗಳಾದ ಡಾ. ಕುವೆಂಪು ಮತ್ತು ಜಿ.ಎಸ್. ಶಿವರುದ್ರಪ್ಪನವರು ನಮ್ಮ ಜಿಲ್ಲೆಯವರು, ಖ್ಯಾತ ಕವಿಗಳಾದ ಲಕ್ಷ್ಮೀನಾರಾಯಣ ಭಟ್ ಮತ್ತು ಎಸ್.ವಿ ಪರಮೇಶ್ವರ ಭಟ್, ಶ್ರೇಷ್ಠ ನಾಟಕಕಾರರು ಹಾಗೂ ಪತ್ರಕರ್ತರಾದ ಪಿ. ಲಂಕೇಶ್, ಕಾದಂಬರಿಕಾರರಾದ ಪೂರ್ಣಚಂದ್ರ ತೇಜಸ್ವಿ, ನಾ. ಡಿಸೋಜಾ ಮತ್ತು ಎಂ.ಕೆ. ಇಂದಿರಾ, ಖ್ಯಾತ ಸಂಶೋಧಕರಾದ ಡಾ. ಎಂ. ಚಿದಾನಂದಮೂರ್ತಿ ಹಾಗೂ ರಂಗ ನಿರ್ದೇಶಕರಾದ ಕೆ.ವಿ. ಸುಬ್ಬಣ್ಣ ಇವರುಗಳೂ ಸಹ ನಮ್ಮ ಜಿಲ್ಲೆಯವರೆ. ಹೀಗೆ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗೆ ಅತ್ಯಮೂಲ್ಯವಾದ ಕೊಡುಗೆಗಳನ್ನು ಕೊಟ್ಟ ಮಹನೀಯರು ಜನ್ಮತಾಳಿದ ಹೆಗ್ಗಳಿಕೆ ನಮ್ಮ ಜಿಲ್ಲೆಗಿದೆ ಎಂದರು. 
  ಕನ್ನಡಿಗರ ನಾಡು-ನುಡಿ, ನೆಲ-ಜಲ, ಸಂಸ್ಕೃತಿ-ಸಾಹಿತ್ಯಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಗಾಗಿ ದುಡಿಯುವ ಸಂಸ್ಥೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು. ಇದು ಪ್ರತಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಶಾಖೆಗಳನ್ನು ಸ್ಥಾಪಿಸಿ ಕನ್ನಡ ಜನತೆಯ ಸಾಂಸ್ಕೃತಿಕ ಬದುಕನ್ನು ಸಂರಕ್ಷಿಸುತ್ತಾ ಬಂದಿದೆ. ಇದರಲ್ಲಿ ನಮ್ಮ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಸ್ಥೆ ಅಸ್ತಿತ್ವದಲ್ಲಿದ್ದು, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ. ಸಂಗೀತ ಮೊದಲಾದವುಗಳಿಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಕನ್ನಡ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ದತ್ತಿ ಕಾರ್ಯಕ್ರಮ, ವಿಶೇಷ ಉಪನ್ಯಾಸ, ಕಮ್ಮಟಗಳು, ಸಾಹಿತ್ಯ ಸಮ್ಮೇಳನಗಳನ್ನು ನಡೆಸುತ್ತಾ ಬಂದಿದ್ದು, ಜನರಲ್ಲಿ ಕನ್ನಡದ ಬಗ್ಗೆ ಅರಿವು ಮತ್ತು ಅಭಿಮಾನಗಳನ್ನು ಬೆಳೆಸುತ್ತಾ ಬಂದಿದೆ. ಕನ್ನಡದ ಸೇವೆಗಾಗಿ ಹಲವು ವರ್ಷಗಳಿಂದ ಸಕ್ರಿಯವಾಗಿ ದುಡಿಯುತ್ತಿರುವುದು ಶ್ಲಾಘನೀಯ ಎಂದರು. 
    ಇಂತಹ ತಾಲೂಕು ಪರಿಷತ್ ಯಾವುದೇ ಕಾರ್ಯಕ್ರಮ ಮಾಡಬೇಕಾದರೆ ಬಾಡಿಗೆಗೆ ಭವನವನ್ನು ತೆಗೆದುಕೊಂಡು ಆರ್ಥಿಕ ಹೊರೆಯನ್ನು ಅನುಭವಿಸುತ್ತಿದೆ. ಈ ಕೊರತೆಯನ್ನು ನಿವಾರಿಸಲು, ಕನ್ನಡಿಗರಿಗೆ ಉತ್ತಮ ಕಾರ್ಯಕ್ರಮಗಳನ್ನು ನೀಡಲು ಪರಿಷತ್ತಿಗೆ ಸ್ವತಂತ್ರ ಕಟ್ಟಡದ ಅನಿವಾರ್ಯತೆ ಇದೆ. ಪರಿಷತ್ ೧೦ ವರ್ಷಗಳ ಹಿಂದೆಯೇ ೧೦೦*೭೯ ಅಡಿಗಳ ನಿವೇಶನ ವಾರ್ಡ್ ನಂ.೨೮ ಹೊಸ ಸಿದ್ದಾಪುರದಲ್ಲಿ ಹೊಂದಿದೆ. ಈಗ ಇಲ್ಲಿ `ಕನ್ನಡ ಸಾಹಿತ್ಯ ಭವನ' ನಿರ್ಮಾಣ ಮಾಡಬೇಕೆಂದು ನಿರ್ಣಯ ಕೈಗೊಂಡು ಸಮಿತಿಯನ್ನು ರಚಿಸಲಾಗಿದೆ. ಸುಮಾರು ೩.೮೦ ಕೋಟಿಗಳ ವೆಚ್ಚದಲ್ಲಿ ಕನ್ನಡ ಸಾಹಿತ್ಯ ಭವನವನ್ನು ನಿರ್ಮಿಸಲು ಮುಂದಾಗಿದ್ದು, ಮೊದಲ ಹಂತದಲ್ಲಿ ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ನೆಲ ಕಟ್ಟಡವನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು. 
     ತಾಲೂಕಿನ ಸಮಸ್ತ ನಾಗರಿಕರು, ಕನ್ನಡ ಹಾಗು ಸಾಹಿತ್ಯಾಭಿಮಾನಿಗಳು ಕನ್ನಡ ನಾಡಿನ ಜಲ, ಭಾಷೆ ಮತ್ತು ಭೂಮಿಯ ಋಣ ತೀರಿಸಲು ಕನ್ನಡ ಸಾಹಿತ್ಯ ಭವನದ ನಿರ್ಮಾಣಕ್ಕೆ ಆರ್ಥಿಕ ಸಹಾಯದೊಂದಿಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ಕೋರಿದರು. 
    ಹೆಚ್ಚಿನ ಮಾಹಿತಿಗೆ  ೯೪೪೮೯೩೯೪೯೦/೯೯೦೨೨೧೦೧೫೦  ೯೧೧೩೨೧೪೩೪೬/೯೮೮೦೦೭೦೯೮೯ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದರು. 
    ಡಾ. ಡಿ. ಪ್ರಭಾಕರ್ ಬೀರಯ್ಯ ಮಾತನಾಡಿ, ಸಾಹಿತ್ಯ ಭವನ ನಿರ್ಮಾಣ ಸಮಿತಿಯ ಪ್ರತಿಯೊಬ್ಬರು ತಮಗೆ ವಹಿಸಿರುವ ಜವಾಬ್ದಾರಿಗಳನ್ನು ಹೆಚ್ಚಿನ ಪಾರದರ್ಶಕವಾಗಿ ನಿರ್ವಹಿಸಲು ಕಟ್ಟಿಬದ್ಧರಾಗಿದ್ದೇವೆ. ಇದಕ್ಕೆ ತಕ್ಕಂತೆ ರೂಪುರೇಷೆಗಳನ್ನು ಸಿದ್ದಪಡಿಸಿಕೊಳ್ಳಲಾಗಿದೆ. ಯಾವುದೇ ರೀತಿಯ ಗೊಂದಲಗಳಿಗೆ ಆಸ್ಪದವಿಲ್ಲದ ರೀತಿಯಲ್ಲಿ ಭವನ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಆರ್ಥಿಕ ವರ್ಷದ ಕೊನೆಯಲ್ಲಿ ಲೆಕ್ಕಪತ್ರ ಮಂಡಿಸಲಾಗುವುದು ಎಂದರು. 
    ಭವನ ಪರಿಷತ್ತಿನ ಕಾರ್ಯಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿದ್ದರೂ ಸಹ ಇದರ ನಿರ್ವಹಣೆ ವೆಚ್ಚ ಭರಿಸುವ ನಿಟ್ಟಿನಲ್ಲಿ ಶಾಲಾ-ಕಾಲೇಜು ಸೇರಿದಂತೆ ಸಂಘ-ಸಂಸ್ಥೆಗಳಿಗೆ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ಆಯೋಜಿಸಲು ಬಾಡಿಗೆಗೆ ನೀಡಲಾಗುವುದು. ಇದನ್ನು ಬಿಟ್ಟರೇ ಭವನವನ್ನು ಆರ್ಥಿಕ ಲಾಭ ಅಥವಾ ಬಾಡಿಗೆ ನೀಡುವ ಉದ್ದೇಶದಿಂದ ಬಳಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. 
    ಪತ್ರಿಕಾಗೋಷ್ಠಿಯಲ್ಲಿ ಎಂ.ಈ ಜಗದೀಶ್, ಎಂ.ಎಸ್. ಸುಧಾಮಣಿ ವೆಂಕಟೇಶ್, ಡಿ. ನಾಗೋಜಿರಾವ್, ಬಿ.ಎಲ್. ಮೋಹನಕುಮಾರ್, ಕೋಡ್ಲು ಯಜ್ಞಯ್ಯ, ಟಿ. ತಿಮ್ಮಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.