Sunday, May 11, 2025

ಭಾರತ ದೇಶ ಯುದ್ಧ ಬಯಸಿಲ್ಲ, ಆರಂಭಿಸಿಲ್ಲ : ಕದನವಿರಾಮ ಪಾಕಿಸ್ತಾನದ ಆಯ್ಕೆ

ಅಮೇರಿಕಾ ದೇಶದ ಮಧ್ಯಸ್ಥಿಕೆ ಭಾರತ ದೇಶಕ್ಕೆ ಅಗತ್ಯವಿಲ್ಲ 

ಜಿ. ಧರ್ಮಪ್ರಸಾದ್, ಅಧ್ಯಕ್ಷರು, ತಾಲೂಕು ಬಿಜೆಪಿ ಮಂಡಲ, ಭದ್ರಾವತಿ 
    ಭದ್ರಾವತಿ : ಭಾರತ ದೇಶ ಪಾಕಿಸ್ತಾನದ ಮೇಲೆ ಯುದ್ಧ ನಡೆಸಿಲ್ಲ. ಈಗಲೂ ಸಹ ಯುದ್ಧ ನಡೆಸಲು ಬಯಸಲ್ಲ. ಭಯೋತ್ಪಾದಕನ್ನು ನಿರ್ಮೂಲನೆ ಮಾಡುವುದು ಭಾರತದ ಗುರಿಯಾಗಿದೆ. ಈ ನಿಟ್ಟಿನಲ್ಲಿ ನಡೆದ ಕಾರ್ಯಾಚರಣೆ ಯುದ್ಧದ ರೂಪಕ್ಕೆ ಬದಲಾಗಿದೆ. ಈ ವಿಚಾರದಲ್ಲಿ ಭಾರತ ಕೈಗೊಂಡಿರುವ ನಿಲುವುಗಳು ಈ ದೇಶದ ಜನರ ನಿಲುವುಗಳಾಗಿವೆ ಹೊರತು ಯಾವುದೇ ವ್ಯಕ್ತಿ, ಪಕ್ಷ, ಸಂಸ್ಥೆ ಕೈಗೊಂಡ ನಿಲುವುಗಳಲ್ಲ ಎಂದು ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ತಿಳಿಸಿದ್ದಾರೆ. 
    ಭಾರತ ಮತ್ತು ಪಾಕಿಸ್ತಾನದ ನಡುವೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಯುದ್ಧ ಕುರಿತು ಕೆಲವರಲ್ಲಿ ತಪ್ಪು ಕಲ್ಪನೆಗಳಿವೆ. ಯುದ್ಧದ ಸ್ಪಷ್ಟನೆ ಅರಿತುಕೊಳ್ಳಬೇಕಾಗಿದೆ. ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುವ ಮೂಲಕ ಪೋಷಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದು ಬಹಳಷ್ಟು ಸಂದರ್ಭಗಳಲ್ಲಿ ಸಾಬೀತಾಗಿದೆ. ಈ ಹಿನ್ನಲೆಯಲ್ಲಿ ಭಾರತ ದೇಶ ಭಯೋತ್ಪಾದಕರು ಹಾಗು ಅವರ ಉಗ್ರ ಚಟುವಟಿಕೆಗಳ ತಾಣಗಳ ಮೇಲೆ ನಡೆಸಿದ ದಾಳಿಯನ್ನು ಅದು ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ. ಅಲ್ಲದೆ ಈ ವಿಚಾರ ನೇರವಾಗಿ ಭಾರತ ದೇಶ ಪಾಕಿಸ್ತಾನ ತಿಳಿಸಿದೆ. ಆದರೂ ಸಹ ವಿನಾಃಕಾರಣ ಭಾರತ ದೇಶದ ಮೇಲೆ ಯುದ್ದ ನಡೆಸಿದೆ. ಮೇಲ್ನೋಟಕ್ಕೆ ಕದನ ವಿರಾಮ ಎಂದು ಘೋಷಿಸಲಾಗಿದೆಯಾದರೂ ಈ ಯುದ್ಧ ಈಗಲೂ ನಿಂತಿಲ್ಲ ಮುಂದುವರೆಯುತ್ತಿದೆ ಎಂದರು. 
    ಪಾಕಿಸ್ತಾನದ ಮೇಲೆ ಯುದ್ದ ನಿಲ್ಲಿಸಲು ಭಾರತ ಯುದ್ಧ ಆರಂಭಿಸಿಲ್ಲ. ಪಾಕಿಸ್ತಾನವೇ ಯುದ್ಧ ಆರಂಭಿಸಿ ಇದೀಗ ಕದನ ವಿರಾಮಕ್ಕೆ ಮನವಿ ಮಾಡಿದೆ. ಇದಕ್ಕೆ ಭಾರತ ದೇಶ ಸ್ಪಂದಿಸಿದೆ. ಪಾಕಿಸ್ತಾನ ಯುದ್ದ ನಿಲ್ಲಿಸಿದರೆ ಭಾರತವೂ ಯುದ್ಧ ನಿಲ್ಲಿಸುತ್ತದೆ. ಇದು ಸತ್ಯವಾದ ವಿಚಾರವಾಗಿದೆ. ಆದರೆ ಈ ವಿಚಾರದಲ್ಲಿ ಅಮೇರಿಕಾ ದೇಶದ ಮಧ್ಯಸ್ಥಿಗೆಯಿಂದ ಭಾರತ ದೇಶ ಯುದ್ಧ ನಿಲ್ಲಿಸಿದೆ ಎಂಬುದು ಸತ್ಯಕ್ಕೆ ದೂರವಾಗಿದೆ. ಕಾಶ್ಮೀರದ ವಿಚಾರವಾಗಲಿ ಅಥವಾ ಯುದ್ಧದ ವಿಚಾರವಾಗಲಿ ಸೂಕ್ತ ನಿರ್ಣಯ ಕೈಗೊಳ್ಳುವ ಶಕ್ತಿ ಭಾರತ ದೇಶ ಹೊಂದಿದೆ. ಪ್ರಸ್ತುತ ಭಾರತ ದೇಶ ಕೈಗೊಂಡಿರುವ ಎಲ್ಲಾ ನಿಲುವುಗಳು ಪರಿಪೂರ್ಣವಾಗಿವೆ, ಸ್ಪಷ್ಟತೆಯಿಂದ ಕೂಡಿವೆ ಎಂದರು. 
    ಯುದ್ಧದ ಸಂದರ್ಭದಲ್ಲಿ ದೇಶದ ಜನರು ಸಾರ್ವಭೌಮತೆಯನ್ನು ಬೆಂಬಲಿಸಬೇಕಾಗಿದೆ. ದೇಶದ ಆಡಳಿತ ನಡೆಸುವ ಸರ್ಕಾರ ಹಾಗು ಅದರ ನೇತೃತ್ವ ವಹಿಸಿರುವ ನಾಯಕನನ್ನು ನಾವೆಲ್ಲರೂ ಬೆಂಬಲಿಸಬೇಕಾಗಿದೆ. ಇಲ್ಲಿ ಪಕ್ಷ ಬೇಧ ಮರೆತು ಎಲ್ಲರೂ ನಾಯಕನ ಹಿಂಬಾಲಕರಾಗಬೇಕು ಅಷ್ಟೆ. ಇದರ ಯಶಸ್ಸು ಸರ್ಕಾರ ಮತ್ತು ನಾಯಕನಿಗೆ ಸಲ್ಲುತ್ತದೆ. ಅಂದರೆ ಇಡೀ ದೇಶದ ಜನರಿಗೆ ಸಲ್ಲುತ್ತದೆ ಹೊರತು. ಯಾವುದೋ ಪಕ್ಷಕ್ಕೆ ಅಥವಾ ಸಂಸ್ಥೆಗೆ ಸಲ್ಲುವುದಿಲ್ಲ. ಇದನ್ನು ಜನಸಾಮಾನ್ಯರು ಅರಿತುಕೊಳ್ಳಬೇಕೆಂದರು. 

Saturday, May 10, 2025

ಭದ್ರಾ ನದಿ ಕಾಲುವೆಯಲ್ಲಿ ಕಾಡುಕೋಣದ ಮೃತದೇಹ ತುಂಡು ಮಾಡಿ ಎಸೆದು ನಿರ್ಲಕ್ಷ್ಯತನ

ತಪ್ಪಿತಸ್ಥ ಅರಣ್ಯ ಇಲಾಖೆ ಸಿಬ್ಬಂದಿಗಳು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ : ಶಿವಕುಮಾರ್ ಆಗ್ರಹ 

 ಅರಣ್ಯ ಇಲಾಖೆ ಸಿಬ್ಬಂದಿಗಳು ಭದ್ರಾವತಿ ತಾಲೂಕಿನ ಶಿವಪುರ ಗ್ರಾಮದ ಭದ್ರಾ ನಾಲೆಯಲ್ಲಿ ಮೃತಪಟ್ಟ ಕಾಡುಕೋಣದ ದೇಹ ಜೆಸಿಬಿ ಯಂತ್ರ ಬಳಸಿ ತುಂಡು ಮಾಡಿ ಭದ್ರಾ ನದಿ ಕಾಲುವೆಗೆ ಎಸೆದಿರುವುದು. 
    ಭದ್ರಾವತಿ: ಮೃತಪಟ್ಟ ಕಾಡುಕೋಣದ ಮರಣೋತ್ತರ ಪರೀಕ್ಷೆ ನಡೆಸದೆ ಹಾಗು ಮೃತದೇಹ ತುಂಡು ಮಾಡಿ ಭದ್ರಾ ನದಿ ಕಾಲುವೆಗೆ ಎಸೆದು ಅರಣ್ಯ ಇಲಾಖೆ ಸಿಬ್ಬಂದಿಗಳು ನಿರ್ಲಕ್ಷ್ಯತನದಿಂದ ವರ್ತಿಸಿದ್ದಾರೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಾಮಾಜಿಕ ಕಾರ್ಯಕರ್ತ ಶಿವಕುಮಾರ್ ಆಗ್ರಹಿಸಿದ್ದಾರೆ. 
    ಅರಣ್ಯ ಇಲಾಖೆ ಸಿಬ್ಬಂದಿಗಳು ತಾಲೂಕಿನ ಶಿವಪುರ ಗ್ರಾಮದ ಭದ್ರಾ ನಾಲೆಯಲ್ಲಿ ಮೃತಪಟ್ಟ ಕಾಡುಕೋಣದ ದೇಹ ಜೆಸಿಬಿ ಯಂತ್ರ ಬಳಸಿ ತುಂಡು ಮಾಡಿ ಮೇ.೬ರಂದು ಬೆಳಗ್ಗೆ ೮ ಗಂಟೆ ಸಮಯದಲ್ಲಿ ಕಾಲುವೆಯಿಂದ ಎಸೆದಿದ್ದು, ಇದನ್ನು ಸ್ಥಳೀಯರು ಗಮನಿಸಿ ಚಿತ್ರೀಕರಿಸಿಕೊಂಡಿದ್ದಾರೆ.  ಮೇ.೭ರಂದು ಮಧ್ಯಾಹ್ನ೩ ಗಂಟೆ ಸಮಯದಲ್ಲಿ ಚಿತ್ರೀಕರಿಸಿಕೊಂಡಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದನ್ನು ಗಮನಿಸಿದ ಸಿಬ್ಬಂದಿಗಳು ತಕ್ಷಣ ಸಂಜೆ ೫ ಗಂಟೆ ಸಮಯದಲ್ಲಿ ನೀರಿನಲ್ಲಿ ಸುಮಾರು ೮ ಕಿ.ಮೀ ದೂರ ತೇಲಿಕೊಂಡು ಬಂದು ಕೆಂಚಮ್ಮನಹಳ್ಳಿ ನಾಲೆ ಸೇತುವೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ತುಂಡು ಮಾಡಿದ್ದ ದೇಹಗಳನ್ನು ಪುನಃ ಜೆಸಿಬಿ ಯಂತ್ರ ಬಳಸಿ ಹೊರ ತೆಗೆದಿದ್ದಾರೆಂದು ಶಿವಕುಮಾರ್ ಆರೋಪಿಸಿದ್ದಾರೆ. 
    ಅಲ್ಲದೆ ನಾಲೆ ಸೇತುವೆಯಿಂದ ಹೊರ ತೆಗೆದ ತುಂಡು ಮಾಡಿದ್ದ ದೇಹಗಳನ್ನು ಅಂತರಗಂಗೆ ಪಶು ವೈದ್ಯರನ್ನು ಕರೆಸಿ ಮರಣೋತ್ತರ ಪರೀಕ್ಷೆ ನಡೆಸಿ ತರಾತುರಿಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಅನುಪಸ್ಥಿತಿಯಲ್ಲಿ ಉಕ್ಕುಂದ ಗ್ರಾಮದ ಸ್ಮಶಾನದಲ್ಲಿ ಸುಟ್ಟು ಹಾಕಿದ್ದಾರೆ. ಇದು ವನ್ಯಜೀವಿ ಕಾಯ್ದೆ ಉಲ್ಲಂಘನೆಯಾಗಿದೆ. ಅಲ್ಲದೆ ಮೃತದೇಹ ತುಂಡು ಮಾಡಿ ಕಾಲುವೆಗೆ ಎಸೆದಿರುವುದರಿಂದ ಕಾಡುಕೋಣದ ಸಾವಿಗೆ ನಿಖರವಾದ ಕಾರಣ ಮರಣೋತ್ತರ ಪರೀಕ್ಷೆಯಿಂದ ತಿಳಿದು ಬರುವುದಿಲ್ಲ ಎಂದು ಶಿವಕುಮಾರ್ ದೂರಿದ್ದಾರೆ. 
    ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಆದೇಶಿಸುವ ಮೂಲಕ ತಪ್ಪಿತಸ್ಥ ಸಿಬ್ಬಂದಿಗಳು ಹಾಗು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 

ಮೇ.೧೫ರವರೆಗೆ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಅಹ್ವಾನ

    ಭದ್ರಾವತಿ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಗೆ ಅನುಗುಣವಾದ ೨೦೨೫-೨೬ನೇ ಸಾಲಿನ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಸದುಪಯೋಗಪಡೆದುಕೊಳ್ಳುವಂತೆ ಕೋರಲಾಗಿದೆ. 
    ಅಭ್ಯರ್ಥಿಗಳು ಮೆರಿಟ್ ಆಧಾರಿತ ಆನ್‌ಲೈನ್ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಲು ಏ.೧೧ ರಿಂದ ಆಹ್ವಾನಿಸಲಾಗಿದ್ದು, ಪ್ರವೇಶ ಬಯಸುವ ಅಭ್ಯರ್ಥಿಗಳು ತಮ್ಮ ಇಚ್ಚಾನುಸಾರ ಆದ್ಯತಾ ಪಟ್ಟಿಯಲ್ಲಿ ಕೋರ್ಸುಗಳ ಆಯ್ಕೆಗಳನ್ನು ನಮೂದಿಸಿ ಒಂದೇ ಅರ್ಜಿಯನ್ನು ಸಮೀಪದ ಯಾವುದಾದರೂ ಸಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲರಿಗೆ ಸಲ್ಲಿಸುವುದು.
    ಅಭ್ಯರ್ಥಿಗಳು ನೀಡುವ ಆದ್ಯತೆ ಅನುಸಾರ ಮೆರಿಟ್ ಹಾಗೂ ರೋಸ್ಟರ್ ಅನುಗುಣವಾಗಿ ಆನ್‌ಲೈನ್ ಮೂಲಕ ಸೀಟು ಹಂಚಿಕೆ ಮಾಡಲಾಗುವುದು. ಅರ್ಜಿ ಹಾಗು ಆಷ್ಷನ್ ಎಂಟ್ರಿಗಳನ್ನು ದಾಖಲಿಸಲು ಮೇ. ೧೫ ಸಂಜೆ ೫.೩೦ ರವರೆಗೆ ಅವಕಾಶ ಇರುತ್ತದೆ. ಹೆಚ್ಚಿನ ಮಾಹಿತಿ ಪಾಲಿಟೆಕ್ನಿಕ್ ಕಚೇರಿ ವೇಳೆಯಲ್ಲಿ ಪಡೆಯಬಹುದಾಗಿದ್ದು, ಅಲ್ಲದೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕೃತ dtek.karnataka.gov.in or dtetech.karnataka.gov.in/kartechnical  ವೆಬ್‌ಸೈಟ್‌ಗಳನ್ನು ಸಂಪರ್ಕಿಸಬಹುದಾಗಿದೆ.
    ನಗರದ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲರು: ೮೭೬೨೭೧೭೧೯೬/೮೮೬೧೯೩೧೫೩೯/೭೯೭೫೦೪೧೧೩೪ ಸಂಪರ್ಕಿಸಲು ಕೋರಲಾಗಿದೆ. 

ಜಾತಿ ಗಣತಿ : ಸೂಕ್ತ ಮಾಹಿತಿ ನೀಡಿ ಮೂಲ ಜಾತಿ ದಾಖಲಿಸಿ

ಭದ್ರಾವತಿ ನ್ಯೂಟೌನ್ ಜಯಶ್ರೀ ವೃತ್ತ ಸಮೀಪದ ತಾಲೂಕು ಛಲವಾದಿಗಳ(ಪ.ಜಾ) ಸಮಾಜದ ಸಂಘದ ಕಛೇರಿಯಲ್ಲಿ ಜಾತಿ ಗಣತಿ ಸಂಬಂಧ ಸಭೆ ನಡೆಸಲಾಯಿತು.
    ಭದ್ರಾವತಿ : ಜಾತಿ ಗಣತಿಗಾಗಿ ಮನೆಗೆ ಬರುವವರಿಗೆ ಸೂಕ್ತ ಮಾಹಿತಿ ನೀಡುವ ಮೂಲಕ ಮೂಲ ಜಾತಿ ಛಲವಾದಿ ಅಥವಾ ಬಲಗೈ ಅಥವಾ ಹೊಲೆಯ ಎಂದು ದಾಖಲಿಸುವಂತೆ ತಾಲೂಕು ಛಲವಾದಿಗಳ(ಪ.ಜಾ) ಸಮಾಜ ಮನವಿ ಮಾಡಿದೆ. 
    ನಗರದ ನ್ಯೂಟೌನ್ ಜಯಶ್ರೀ ವೃತ್ತ ಸಮೀಪದ ಸಂಘದ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಮಾಜದ ಪ್ರಮುಖರು, ಈ ಹಿಂದೆ ಗಣತಿ ಕಾರ್ಯದ ಸಂದರ್ಭದಲ್ಲಿ ಪರಿಶಿಷ್ಟ ಜಾತಿ(ಆದಿ ಕರ್ನಾಟಕ)ಗೆ ಸೇರಿರುವ ಛಲವಾದಿ ಸಮಾಜದವರು ಮೋಸ ಹೋಗಿದ್ದಾರೆ. ಆದರೆ ಈ ಬಾರಿ ಆ ರೀತಿಯಾಗದಂತೆ ಸಮಾಜದವರು ಎಚ್ಚರ ವಹಿಸಬೇಕಾಗಿದೆ. ಮೂಲ ಜಾತಿ ವಿಷಯದಲ್ಲಿ ಛಲವಾದಿ ಅಥವಾ ಬಲಗೈ ಅಥವಾ ಹೊಲೆಯ ಎಂಬುದನ್ನು ದಾಖಲಿಸಬಹುದಾಗಿದೆ. ರಾಜ್ಯದ ವಿವಿಧೆಡೆ ಸಮಾಜ ಬಂಧುಗಳು ಆಯಾ ಭಾಗಕ್ಕೆ ತಕ್ಕಂತೆ ಮೂಲ ಜಾತಿ ದಾಖಲಿಸಲು ನಿರ್ಧರಿಸಿದ್ದಾರೆ. ಈ ಹಿನ್ನಲೆಯಲ್ಲಿ ತಾಲೂಕಿನಲ್ಲಿರುವ ಸಮಾಜ ಬಂಧುಗಳು ಸಹ ತಮ್ಮ ಇಚ್ಛೆಯಂತೆ ಛಲವಾದಿ ಅಥವಾ ಬಲಗೈ ಅಥವಾ ಹೊಲೆಯ ಈ ಮೂರು ಹೆಸರಿನಲ್ಲಿ ಯಾವುದಾದರೂ ಒಂದು ದಾಖಲಿಸುವಂತೆ ಮನವಿ ಮಾಡಿದರು. 
    ಸಮಾಜದ ಜಿಲ್ಲಾಧ್ಯಕ್ಷ ಸಿದ್ದಪ್ಪ, ತಾಲೂಕು ಅಧ್ಯಕ್ಷ ಚನ್ನಪ್ಪ, ಪ್ರಮುಖರಾದ ಸಾವಕ್ಕನವರ್, ಎಸ್.ಎಸ್ ಭೈರಪ್ಪ, ಡಿ. ನರಸಿಂಹಮೂರ್ತಿ, ಶ್ರೀನಿವಾಸ್(ನಂಜಾಪುರ), ನಿತ್ಯಾನಂದ, ಎಚ್.ಎಂ ಮಹಾದೇವಯ್ಯ, ಹುಚ್ಚಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Friday, May 9, 2025

ರೈಲ್ವೆ ಕ್ಯಾಂಟೀನ್ ಮಾಲೀಕ ಗುರುಪ್ರಸಾದ್ ನಿಧನ

 ಕೆ.ಬಿ.ಗುರುಪ್ರಸಾದ್(ಉನ್ನಿ) 
    ಭದ್ರಾವತಿ : ಬಹಳ ವರ್ಷಗಳಿಂದ ನಗರದ ರೈಲ್ವೆ ಕ್ಯಾಂಟೀನ್ ಮಾಲೀಕರಾಗಿರುವ, ನಗರಸಭೆ ವಾರ್ಡ್ ೩ರ ವ್ಯಾಪ್ತಿಯ ಚಾಮೇಗೌಡ ಏರಿಯಾ ನಿವಾಸಿ ಕೆ.ಬಿ.ಗುರುಪ್ರಸಾದ್(೫೮) ಗುರುವಾರ ರಾತ್ರಿ ನಿಧನ ಹೊಂದಿದರು. 
    ಪತ್ನಿ, ಓರ್ವ ಪುತ್ರ ಹಾಗು ಓರ್ವ ಪುತ್ರಿ ಇದ್ದಾರೆ. ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಸಮೀಪದ ಭದ್ರಾ ನದಿ ತೀರದ ತೋಟದಲ್ಲಿ ನೆರವೇರಿತು.  ಸುಮಾರು ೫ ದಶಕಗಳಿಂದ ರೈಲ್ವೆ ಕ್ಯಾಂಟೀನ್ ಇವರ ಕುಟುಂಬಸ್ಥರು ನಡೆಸಿಕೊಂಡು ಬರುತ್ತಿದ್ದು, ಗುರುಪ್ರಸಾದ್‌ರವರು ಉನ್ನಿ ಎಂಬ ಹೆಸರಿನಲ್ಲಿ ಚಿರಪರಿಚಿತರಾಗಿದ್ದರು. 
    ಸಂತಾಪ:
    ಶಾಸಕ ಬಿ.ಕೆ.ಸಂಗಮೇಶ್ವರ್, ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಸದಸ್ಯ ಬಿ.ಕೆ ಮೋಹನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಎರೇಹಳ್ಳಿ ಗ್ರಾ.ಪಂ. ಸದಸ್ಯ ಸಿ.ಆರ್ ಶಿವರಾಂ, ಬಿಜೆಪಿ ಮುಖಂಡ ಕೂಡ್ಲಿಗೆರೆ ಹಾಲೇಶ್, ವೀರಶೈವ ಲಿಂಗಾಯಿತ ಮಹಾಸಭಾ ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯ, ಮುಖಂಡರಾದ ಕರುಣಾಕರ್, ಮುಕುಂದರಾವ್, ರೈಲ್ವೆ ಅಧಿಕಾರಿಗಳು ಸಿಬ್ಬಂದಿಗಳು, ಅನೇಕ ಸಂಘ ಸಂಸ್ಥೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ. 

ಮೇ.೧೦ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ: ಮೆಸ್ಕಾಂ ಗ್ರಾಮೀಣ ಉಪವಿಭಾಗ, ಘಟಕ-೧ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ.೧೦ರ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಹೊಸನಂಜಾಪುರ, ಹಳೇನಂಜಾಪುರ, ಹಿರಿಯೂರು, ಹಳೇಹಿರಿಯೂರು, ಅಮಲಮಾತಾ ಆಸ್ಪತ್ರೆ, ತಿಮ್ಲಾಪುರ, ಮೂಲೆಕಟ್ಟೆ, ಹೌಸಿಂಗ್ ಬೋರ್ಡ್ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಕಾರ್ಯನಿರ್ವಾಹಕ ಇಂಜಿನಿಯರ್‌ರವರು ಕೋರಿದ್ದಾರೆ. 

ಕಾರ್ಮಿಕರು ಸೌಲಭ್ಯಗಳನ್ನು ಪಡೆದುಕೊಳ್ಳಲು ಕಾನೂನುಗಳು ಸಹಕಾರಿ : ಎಂ. ಶಿವಕುಮಾರ್

ಭದ್ರಾವತಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ಹಾಗೂ ಮಾಚೇನಹಳ್ಳಿ, ಶಾಂತಲಾ ಸ್ಪೆರೋ ಕ್ಯಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕಾರ್ಮಿಕ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಮಾಹಿತಿ ಕಾರ್ಯಾಗಾರ ನ್ಯಾಯವಾದಿ ಎಂ. ಶಿವಕುಮಾರ್, ಕಾರ್ಮಿಕ ನಿರೀಕ್ಷಕ ರಕ್ಷಿತ್, ವ್ಯವಸ್ಥಾಪಕ ನಿರ್ದೇಶಕ ಡಿ.ಬಿ ಅಶೋಕ್, ನಂಜುಂಡೇಶ್ವರ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ : ಕಾರ್ಮಿಕರು ನ್ಯಾಯಯುತವಾದ ಸೌಲಭ್ಯಗಳು ಪಡೆದುಕೊಳ್ಳುವಲ್ಲಿ ಕಾನೂನುಗಳು ಹೆಚ್ಚಿನ ಸಹಕಾರಿಯಾಗಿವೆ. ಈ ಹಿನ್ನಲೆಯಲ್ಲಿ ಕಾನೂನಿನ ಬಗ್ಗೆ ಅರಿವು ಹೊಂದಬೇಕೆಂದು ನ್ಯಾಯವಾದಿ ಎಂ. ಶಿವಕುಮಾರ್ ಹೇಳಿದರು. 
    ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ಹಾಗೂ ಮಾಚೇನಹಳ್ಳಿ, ಶಾಂತಲಾ ಸ್ಪೆರೋ ಕ್ಯಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕಾರ್ಮಿಕ ದಿನಾಚರಣೆ ಪ್ರಯುಕ್ತ ಕಾರ್ಮಿಕ ಅಧಿನಿಯಮ ಹಾಗೂ ಕಾರ್ಮಿಕರ ಹಕ್ಕುಗಳ ಬಗ್ಗೆ  ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಉಪನ್ಯಾಸ ನೀಡಿದರು. 
    ಕಾರ್ಮಿಕರು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರ ಶ್ರಮ ಶ್ಲಾಘನೀಯವಾಗಿದ್ದು, ಕಾರ್ಮಿಕರಿಗೆ ನ್ಯಾಯಯುತವಾಗಿ ಲಭಿಸಬೇಕಾಗಿರುವ ವೈದ್ಯಕೀಯ ಹಾಗೂ ವಿಮಾ  ಸೌಕರ್ಯಗಳು ಸುಲಭವಾಗಿ ಸಿಗುತ್ತಿಲ್ಲ. ಕಾರ್ಮಿಕ ಸಂಘಗಳ ಮೂಲಕ ಸಂಘಟಿತ ಹೋರಾಟ ನಡೆಸಿ ಅಥವಾ ಕಾನೂನು ಹೋರಾಟದ ಮೂಲಕ ಪಡೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕರು ಕಾನೂನಿನ ಅರಿವನ್ನು ಪಡೆದು ಹೆಚ್ಚಿನ ಪರಿಹಾರ ಪಡೆದುಕೊಳ್ಳಬಹುದು ಎಂದರು. 
    ಕಾರ್ಮಿಕರ ಶ್ರಮ ಬಂಡವಾಳಕ್ಕಿಂತ ದೊಡ್ಡದು. ಅವರ ಶ್ರಮ ಮತ್ತು ಕೌಶಲ್ಯ ಬಂಡವಾಳ ಶಾಹಿಗಳು ಗುರುತಿಸಬೇಕು. ಅವರಿಗೆ ಮೂಲಭೂತ ಸೌಕರ್ಯಗಳು, ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದರು. 
    ಕಾರ್ಮಿಕ ನಿರೀಕ್ಷಕ  ರಕ್ಷಿತ್, ಶಾಂತಲಾ ಸ್ಪೆರೋ ಕ್ಯಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಡಿ.ಬಿ ಅಶೋಕ್ ಹಾಗೂ ನಂಜುಂಡೇಶ್ವರ, ಹಿರಿಯ ನ್ಯಾಯವಾದಿಗಳಾದ ರಮೇಶ್‌ಸಿಂಗ್ ಮತ್ತು ವಿಶ್ವನಾಥ್ ಹಾಗು ಕಾನೂನು ಸೇವಾ ಸಮಿತಿ ಸಂಯೋಜಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.