Friday, March 19, 2021

ಕಾಟಿಕ್ ಸಮುದಾಯ ಪರಿಶಿಷ್ಟ ಜಾತಿಗೆ ಸೇರಿಸಿ : ಸರ್ಕಾರಕ್ಕೆ ಮನವಿ

ಕಾಟಿಕ್ (ಕಲಾಲ್) ಜಾತಿಯನ್ನು ಪರಿಶಿಷ್ಟಜಾತಿಗೆ ಸೇರಿಸುವಂತೆ ಒತ್ತಾಯಿಸಿ ತಾಲೂಕು ಕಾಟಿಕ್ ಸಮಾಜದವರು ತಾಲೂಕು ಕಚೇರಿ  ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿದರು.
   ಭದ್ರಾವತಿ, ಮಾ. ೧೯: ಕಾಟಿಕ್(ಕಲಾಲ್) ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿ ತಾಲೂಕು ಕಾಟಿಕ್ ಸಮಾಜದ ವತಿಯಿಂದ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
   ಕಾಟಿಕ್ ಸಮುದಾಯದವರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಾಗಿದ್ದು, ೨೦೧೧-೧೨ರಲ್ಲಿ ಸರ್ಕಾರದ ಆದೇಶದ ಮೇರೆಗೆ ಶಿವಮೊಗ್ಗ ಕುವೆಂಪು ವಿಶ್ವ ವಿದ್ಯಾನಿಲಯದ ಪ್ರೊ. ಎಂ.ಗುರುಲಿಂಗಯ್ಯ ಕಾಟಿಕ್ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ವರದಿ ಸಿದ್ದಪಡಿಸಿದ್ದರು. ಆದರೆ ಈ ಹಿಂದಿನ ಸರ್ಕಾರಗಳು ಈ ವರದಿಯನ್ನು ಪರಿಗಣಿಸದೆ ಇರುವುದು ಈ ಸಮುದಾಯಕ್ಕೆ ಸಂವಿಧಾನಬದ್ದವಾಗಿ ಸಾಮಾಜಿಕ ನ್ಯಾಯ ಸಿಗದಂತಾಗಿದೆ. ಇಂದಿನ ಸರ್ಕಾರ ಈ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಲಾಯಿತು.
   ಸಮಾಜದ ತಾಲೂಕು ಅಧ್ಯಕ್ಷ ಲಿಂಗರಾಜು, ಅಶೋಕ್, ವಸಂತಕುಮಾರ್, ಕುಮಾರ್, ಶ್ರೀನಿವಾಸ್, ಗಿರೀಶ್, ಪರಶುರಾಮ್ ಸೇರಿದಂತೆ ಇನ್ನಿತರರಿದ್ದರು.




ಕುಡಿಯುವ ನೀರಿನ ಸಂಪರ್ಕಕ್ಕೆ ಠೇವಣಿ, ಮೀಟರ್ ಲೆಕ್ಕದಲ್ಲಿ ಬಿಲ್ ಪಾವತಿ ಆದೇಶಕ್ಕೆ ಆಕ್ರೋಶ

ಕರ್ನಾಟಕ ಜನಸೈನ್ಯ ವತಿಯಿಂದ ನಗರಸಭೆ ಮುಂಭಾಗ ಅಸಹಕಾರ ಚಳುವಳಿ

ಭದ್ರಾವತಿ ನಗರಸಭೆ ವ್ಯಾಪ್ತಿಯ ಕೊಳಚೆ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಂಪರ್ಕಕ್ಕೆ ಹೆಚ್ಚಿನ ಠೇವಣಿ ವಿಧಿಸಿರುವುದನ್ನು ಹಾಗು ನೀರಿನ ಬಿಲ್ ಮೀಟರ್ ಲೆಕ್ಕದಲ್ಲಿ ಪಾವತಿಸಲು ಆದೇಶಿಸಿರುವುದನ್ನು ವಿರೋಧಿಸಿ ಕರ್ನಾಟಕ ಜನಸೈನ್ಯ ವತಿಯಿಂದ ಶುಕ್ರವಾರ ನಗರಸಭೆ ಮುಂಭಾಗ ಅಸಹಕಾರ ಚಳುವಳಿ ನಡೆಸಲಾಯಿತು.
    ಭದ್ರಾವತಿ, ಮಾ. ೧೯: ನಗರಸಭೆ ವ್ಯಾಪ್ತಿಯ ಕೊಳಚೆ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಂಪರ್ಕಕ್ಕೆ ಹೆಚ್ಚಿನ ಠೇವಣಿ ವಿಧಿಸಿರುವುದನ್ನು ಹಾಗು ನೀರಿನ ಬಿಲ್ ಮೀಟರ್ ಲೆಕ್ಕದಲ್ಲಿ ಪಾವತಿಸಲು ಆದೇಶಿಸಿರುವುದನ್ನು ವಿರೋಧಿಸಿ ಕರ್ನಾಟಕ ಜನಸೈನ್ಯ ವತಿಯಿಂದ ಶುಕ್ರವಾರ ನಗರಸಭೆ ಮುಂಭಾಗ ಅಸಹಕಾರ ಚಳುವಳಿ ನಡೆಸಲಾಯಿತು.
   ಚಳುವಳಿಯಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಮಾತನಾಡಿ, ನಗರಸಭೆ ವತಿಯಿಂದ ಪ್ರತಿ ಮನೆಗೆ ಕುಡಿಯುವ ನೀರಿಗಾಗಿ ೨೦೦೦ ರು. ಠೇವಣಿ ಪಡೆಯಲಾಗಿದ್ದು, ಇದೀಗ ಪುನಃ ನಲ್ಲಿ ಸಂಪರ್ಕ ಕಲ್ಪಿಸಲು ೨೮೮೦ ರು. ಹಾಗು ನೀರಿನ ಬಿಲ್ ಮೀಟರ್ ಲೆಕ್ಕದಲ್ಲಿ ಪಾವತಿಸಲು ಆದೇಶಿಸಲಾಗಿದೆ. ಪ್ರಸ್ತುತ ನಗರದಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಕಾರ್ಮಿಕರು ಉದ್ಯೋಗವಿಲ್ಲದೆ ಬೀದಿ ಪಾಲಾಗಿದ್ದು, ಅಲ್ಲದೆ ಕೋವಿಡ್-೧೯ರ ಪರಿಣಾಮ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕುಡಿಯುವ ನೀರಿಗೆ ಹಣ ಕೇಳುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 ಉಚಿತವಾಗಿ ಕುಡಿಯುವ ನೀರು ಒದಗಿಸಬೇಕು. ಈಗಾಗಲೇ ಹಣ ಪಾವತಿಸಿರುವವರಿಗೆ ಹಣ ಹಿಂದಿರುಗಿಸಬೇಕು. ನೀರಿನ ಬಿಲ್ ಮೀಟರ್ ಲೆಕ್ಕದಲ್ಲಿ ಪಾವತಿಸುವ ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿದರು.
    ಕರ್ನಾಟಕ ಜನಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್ ನೇತೃತ್ವವಹಿಸಿದ್ದರು. ಗೌರವಾಧ್ಯಕ್ಷ ಅನಿಲ್ ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಅನಂತರಾಮು, ತಾಲೂಕು ಅಧ್ಯಕ್ಷ ರಾಜು, ಜಿಲ್ಲಾ ಉಸ್ತುವಾರಿ ಸಮಿತಿ ಅಧ್ಯಕ್ಷ ಐ.ವಿ ಸಂತೋಷ್‌ಕುಮಾರ್, ಕರ್ನಾಟಕ ರಾಜ್ಯ ಮಾದಿಗ ಸಮಾಜ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್, ಕಾರ್ಯದರ್ಶಿ ಶ್ರೀನಿವಾಸ್, ಗ್ರಾಮಾಂತರ ಅಧ್ಯಕ್ಷ ಪ್ರದೀಪ್, ಕನ್ನಡ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ಹಾಗು ಪದಾಧಿಕಾರಿಗಳು, ಡಿಎಸ್‌ಎಸ್ ಮುಖಂಡ ಕುಬೇಂದ್ರಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಮೊದಲ ಬಾರಿಗೆ ೯೨.೬೫ ಲಕ್ಷ ರು. ಉಳಿತಾಯದ ಕಾಗದ ರಹಿತ ಬಜೆಟ್ ಮಂಡನೆ

ಭದ್ರಾವತಿ ನಗರಸಭೆ ಆಡಳಿತಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಶುಕ್ರವಾರ ಟ್ಯಾಬ್ ಮೂಲಕ ಕಾಗದ ರಹಿತ ಬಜೆಟ್ ಮಂಡಿಸಿದರು.
    ಭದ್ರಾವತಿ : ಈ ಬಾರಿ ನಗರಸಭೆ ವತಿಯಿಂದ ವಿಶಿಷ್ಟವಾಗಿ ೯೨.೬೫ ಲಕ್ಷ ರು. ಉಳಿತಾಯದ  ಕಾಗದ ರಹಿತ ಬಜೆಟ್ ಶುಕ್ರವಾರ ನಗರಸಭೆ ಆಡಳಿತಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಟಿ ವಿ ಪ್ರಕಾಶ್ ಮಂಡಿಸಿದರು.
    ಇದೇ ಮೊದಲ ಬಾರಿಗೆ ಟ್ಯಾಬ್ ಬಳಸಿ  ಬಜೆಟ್ ಮಂಡಿಸುವಲ್ಲಿ ನಗರಸಭೆ ಆಡಳಿತ ಯಶಸ್ವಿಯಿತು. ಪ್ರಾರಂಭಿಕ ಶಿಲ್ಕು ೩,೧೦೩.೪೦ ಲಕ್ಷ ರು.,  ನಿರೀಕ್ಷಿತ ಆದಾಯ ೬,೫೩೩.೨೫ ಲಕ್ಷ  ರು , ಒಟ್ಟು ಆದಾಯ ೯,೬೩೬.೬೫ ಲಕ್ಷ ರು. ಗಳಾಗಿವೆ. ಉಳಿದಂತೆ ೯,೫೪೪ ಲಕ್ಷ ರು. ವೆಚ್ಚ ನಿರೀಕ್ಷಿಸಲಾಗಿದೆ.
    ಆಸ್ತಿ ತೆರಿಗೆ ೫೪೫ ಲಕ್ಷ ರು., ಅಭಿವೃದ್ಧಿ ಶುಲ್ಕ ಮತ್ತು ಸೆಕ್ಷನ್ ೧೦೮ರ ಪುರಸಭೆ ಕಾಯ್ದೆ ೧೯೬೪ರಂತೆ(ಬಿ ಖಾತೆ) ೧೭೦ ಲಕ್ಷ ರು., ವಾಣಿಜ್ಯ ಮಳಿಗೆ ಬಾಡಿಗೆ ೨೦ ಲಕ್ಷ ರು., ಇತರೇ ಕಟ್ಟಡಗಳಿಂದ ಬಾಡಿಗೆ ೪ ಲಕ್ಷ ರು., ಉದ್ದಿಮೆ ಪರವಾನಿಗೆ ೨೦ ಲಕ್ಷ ರು., ಜಾಹೀರಾತು ಶುಲ್ಕ ೫ ಲಕ್ಷ ರು, ಇತರೆ ೨೩೪.೭೫ ಲಕ್ಷ ರು. ಹಾಗು ನೀರು ಬಳಕೆದಾರರ ಶುಲ್ಕ ೬೦೫ ಲಕ್ಷ ರು. ಸೇರಿದಂತೆ ೧೬೦೩.೭೫ ಲಕ್ಷ ರು. ಹಾಗು ಸರ್ಕಾರದ ವಿವಿಧ ಅನುದಾನಗಳಿಂದ ಎಸ್‌ಎಫ್‌ಸಿ ವೇತನ ೭೬೩ ಲಕ್ಷ ರು., ಎಸ್‌ಎಫ್‌ಸಿ ವಿದ್ಯುತ್ ಶುಲ್ಕ ೮೫೨ ಲಕ್ಷ ರು., ಎಸ್‌ಎಫ್‌ಸಿ ಮುಕ್ತಿ ನಿಧಿ/ವಿಶೇಷ ೫೪೧ ಲಕ್ಷ ರು., ಡೇ ನಲ್ಮ್ ೮೦ ಲಕ್ಷ ರು., ೧೫ನೇ ಹಣಕಾಸು ೭೫೧ ಲಕ್ಷ ರು., ಅಮೃತ್ ಯೋಜನೆ ೮೦೦ ಲಕ್ಷ ರು., ಸ್ವಚ್ಛ್ ಭಾರತ್/ಡಿಪಿಎಆರ್/ಇತ್ಯಾದಿ ೩೪೯.೭೫ ಲಕ್ಷ ರು., ಇತರೆ ಇಲಾಖೆಗಳಿಗೆ ಪಾವತಿಸಬೇಕಾದ ವಸೂಲಾತಿಗಳು ೬೪೨.೭೫ ಲಕ್ಷ ರು. ಹಾಗು ಗೃಹಭಾಗ್ಯ ಯೋಜನೆ ೧೫೦ ಲಕ್ಷ ರು. ಸೇರಿದಂತೆ ಒಟ್ಟು ೬೫೩೩.೫೦ ಲಕ್ಷ ರು. ಆದಾಯ ನಿರೀಕ್ಷಿಸಲಾಗಿದೆ.
     ಅಮೃತ್ ನಗರ ಯೋಜನೆ ೮೦೦ ಲಕ್ಷ ರು., ಮುಂದುವರೆದ ಕಾಮಗಾರಿಗಳು ೧,೨೫೭.೫೦ ಲಕ್ಷ ರು., ಸಿಬ್ಬಂದಿ ವೇತನ/ಭತ್ಯೆಗಳು/ಬಾಕಿ ಪಾವತಿಗಳು ೭೬೩ ಲಕ್ಷ ರು., ಬೀದಿ ದೀಪ ಹಗು ನೀರು ಸರಬರಾಜು ವಿದ್ಯುತ್(ಬಾಕಿ ಸೇರಿಕೊಂಡು) ೮೫೨ ಲಕ್ಷ ರು., ಹೊರ ಗುತ್ತಿಗೆ ಕಾರ್ಮಿಕರ ವಿಶೇಷ ವೇತನ ೧೯ ಲಕ್ಷ ರು., ಪೌರಕಾರ್ಮಿಕರ ದಿನಾಚರಣೆ/ಉಪಹಾರ/ಸುರಕ್ಷ ಸಲಕರಣೆಗಳು, ದಸರಾ ಹಬ್ಬ ೩೦ ಲಕ್ಷ ರು., ಇತರೆ ವಂತಿಕೆಗಳು ೪೦೫ ಲಕ್ಷ ರು., ಬಡತನ ನಿರ್ಮೂಲನಾ ಕಾರ್ಯಕ್ರಮ ೨೫೩.೭೫ ಲಕ್ಷ ರು., ಕ್ರೀಡೆ, ಸಾಂಸ್ಕೃತಿಕ ಕಾರ್ಯಕಮಗಳಿಗೆ ಪ್ರೋತ್ಸಾಹ ಧನ ೫ ಲಕ್ಷ ರು., ಕಛೇರಿ ವೆಚ್ಚ ೧೮೬.೧೫ ಲಕ್ಷ ರು., ದಾಸ್ತಾನು ಖರೀದಿ/ಎಸ್‌ಡಬ್ಲ್ಯೂಎಂ ಸಲಕರಣೆ ೧೧೦ ಲಕ್ಷ ರು., ಕಾನೂನು ಶುಲ್ಕ ೨೫ ಲಕ್ಷ ರು., ವಾಹನ ಬಾಡಿಗೆ ೧೦ ಲಕ್ಷ ರು., ಗೌರವಧನ/ಸಭಾ ವೆಚ್ಚಗಳು ೩೫ ಲಕ್ಷ ರು., ಕಟ್ಟಡಗಳ ದುರಸ್ತಿ/ನವೀಕರಣ ೫೬೨ ಲಕ್ಷ ರು., ಡೇ ನಲ್ಮ್ ಕಾರ್ಯಕ್ರಮ ೮೦ ಲಕ್ಷ ರು., ರಸ್ತೆ ಮತ್ತು ಚರಂಡಿಗಳು ೧೨೨೫ ಲಕ್ಷ ರು, ಬಸ್ ಶೆಲ್ಟರ್ ೨೧೭ ಲಕ್ಷ ರು, ಬೀದಿ ನಾಯಿಗಳ ಎಬಿಸಿ ಕಾರ್ಯಕ್ರಮಕ್ಕೆ ೧೫ ಲಕ್ಷ ರು., ಪ್ರಮುಖ ವೃತ್ತಗಳ ಅಭಿವೃದ್ಧಿ/ನಾಮಫಲಕಗಳು ೫೦ ಲಕ್ಷ ರು., ವಾಹನ ಯಂತ್ರೋಪಕರಣ ಮತ್ತು ಇತರೇ ೧೫೦.೨೦ ಲಕ್ಷ ರು., ಬೀದಿ ದೀಪ ನಿರ್ವಹಣೆ ೩೨೫ ಲಕ್ಷ ರು., ಸರ್ಕಾರಕ್ಕೆ ಪಾವತಿಸಬೇಕಾದ ಸೆಸ್, ಶಾಸನಬದ್ಧ ಪಾವತಿಗಳು ಹಾಗು ಗುತ್ತಿಗೆದಾರರ ಮರು ಪಾವತಿ ೮೬೭.೯೦ ಲಕ್ಷ ರು., ನೀರು ಸರಬರಾಜು ವಿಭಾಗ ೧೩೯ ಲಕ್ಷ ರು., ಮನೆ ಮನೆ ಕಸ ಸಂಗ್ರಹಣೆ ೧೦೦ ಲಕ್ಷ ರು, ಉದ್ಯಾನವನ ಅಭಿವೃದ್ಧಿ ೨೫೦ ಲಕ್ಷ ರು ಹಾಗು ಅಂಗನವಾಡಿ ಕಟ್ಟಡಗಳ ದುರಸ್ತಿ ೨೦ ಲಕ್ಷ ರು. ಸೇರಿದಂತೆ ಒಟ್ಟು ೯,೫೪೪ ಲಕ್ಷ ರು. ವೆಚ್ಚ ನಿರೀಕ್ಷಿಸಲಾಗಿದೆ.
   ಹೊಸ ಯೋಜನೆಗಳು :
*  ೨೬ ಕೋ. ರು. ವೆಚ್ಚದಲ್ಲಿ ಹಳೇನಗರ ಬಸವೇಶ್ವರ ವೃತ್ತದಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ.
* ೯೨ ಲಕ್ಷ ರು. ವೆಚ್ಚದಲ್ಲಿ ಪ್ರಮುಖ ವೃತ್ತಗಳ ಅಭಿವೃದ್ಧಿ.
* ಕೆ ಪಿ ಟಿ ಸಿ ಎಲ್  ಮಾದರಿಯಲ್ಲಿ ನೀರಿನ ಶುಲ್ಕ ವಸೂಲಾತಿ.
* ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿಕೆ, ೮ ಈ ಘಟಕಗಳ ನಿರ್ಮಾಣ.
* ಬಯಲು ಮುಕ್ತ  ಶೌಚ ನಗರ ಘೋಷಣೆ .
* ಅಂಗವಿಕಲರಿಗಾಗಿ ಪ್ರತ್ಯೇಕ ಸಮುದಾಯ ಭವನ .
    ಹಳೇ ಯೋಜನೆಗಳು:
* ಮನೆ ಮನೆ ಕಸ ಸಂಗ್ರಹಣೆಗೆ ೧೦೦ ಲಕ್ಷ ರು. ಮೀಸಲು.
* ತಲಾ ೭.೫೦ ಲಕ್ಷ ರು. ಅನುದಾನದಲ್ಲಿ ೭೪ ಜನ ಪೌರಕಾರ್ಮಿಕರಿಗೆ ಗೃಹ ಭಾಗ್ಯ.
* ೪೦೦೦ ಜಿ+೩ ಗುಂಪು ಮನೆ ಯೋಜನೆ.
* ೧೮೦.೨೩ ಲಕ್ಷ ರು. ವೆಚ್ಚದಲ್ಲಿ ನಗರಸಭೆ ಬಿ ಮತ್ತು ಸಿ ಗ್ರೂಪ್ ಅಧಿಕಾರಿಗಳು, 
   ನೌಕರರಿಗೆ   ವಸತಿ ಗೃಹ.
* ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಲು ೨೧.೦೬ ಕೋ.ರು. ಹೆಚ್ಚುವರಿ ಅನುದಾನ.
ಕೊರೋನಾ ಸಂಕಷ್ಟದ ನಡುವೆಯೂ ಈ ಬಾರಿ ಸಹ ಉಳಿತಾಯ ಬಜೆಟ್ ಮಂಡಿಸುವಲ್ಲಿ ನಗರಸಭೆ ಆಡಳಿತ ಯಶಸ್ವಿಯಾಗಿದ್ದು, ಅಲ್ಲದೆ ಹೊಸ ಯೋಜನೆಗಳು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳ ವರ್ಗ ಯಶಸ್ವಿಯಾಗಿದೆ.
ಪೌರಾಯುಕ್ತ ಮನೋಹರ್, ಲೆಕ್ಕಾಧಿಕಾರಿ ಸೈಯದ್ ಮೆಹಬೂಬ್ ಆಲಿ, ಪರಿಸರ ಅಭಿಯಂತರ ಪ್ರಭಾಕರ್, ಇಂಜಿನಿಯರ್ ರಂಗರಾಜಪುರೆ, ಕಂದಾಯಾಧಿಕಾರಿ ರಾಜ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

Thursday, March 18, 2021

ಗೂಂಡಾಗಿರಿ ಮೂಲಕ ದೌರ್ಜನ್ಯ ವೆಸಗುತ್ತಿರುವ, ತೆಂಗಿನ ಮರಗಳನ್ನು ಕಡಿದು ಹಾಕಿರುವವರ ವಿರುದ್ಧ ಕ್ರಮಕ್ಕೆ ಆಗ್ರಹ

ತಾಲೂಕು ಕಛೇರಿ ಮುಂಭಾಗ ಹಳೇಜೇಡಿಕಟ್ಟೆ ನಿವಾಸಿ ಪೂರ್ಣಿಮಾ ಸತ್ಯಾಗ್ರಹ

ಜಮೀನಿನಲ್ಲಿ ಬೆಳೆಯಲಾಗಿದ್ದ ಸುಮಾರು ೪೦ ವರ್ಷದ ತೆಂಗಿನ ಮರಗಳನ್ನು ಕಡಿದುಹಾಕಿ ದೌರ್ಜನ್ಯ ವೆಸಗುವ ಮೂಲಕ ಕೊಲೆ ಬೆದರಿಕೆ ಹಾಕುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗು ಕುಟುಂಬಕ್ಕೆ ರಕ್ಷಣೆ ನೀಡುವಂತೆ ಆಗ್ರಹಿಸಿ ಕಳೆದ ೨ ದಿನಗಳಿಂದ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಹಳೇಜೇಡಿಕಟ್ಟೆ ನಿವಾಸಿ ಪೂರ್ಣಿಮಾ ಎಂಬುವರು ಕುಟುಂಬ ಸಮೇತ ಸತ್ಯಾಗ್ರಹ ನಡೆಸುತ್ತಿದ್ದಾರೆ.
   ಭದ್ರಾವತಿ, ಮಾ. ೧೮: ಜಮೀನಿನಲ್ಲಿ ಬೆಳೆಯಲಾಗಿದ್ದ ಸುಮಾರು ೪೦ ವರ್ಷದ ತೆಂಗಿನ ಮರಗಳನ್ನು ಕಡಿದುಹಾಕಿ ದೌರ್ಜನ್ಯ ವೆಸಗುವ ಮೂಲಕ ಕೊಲೆ ಬೆದರಿಕೆ ಹಾಕುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗು ಕುಟುಂಬಕ್ಕೆ ರಕ್ಷಣೆ ನೀಡುವಂತೆ ಆಗ್ರಹಿಸಿ ಕಳೆದ ೨ ದಿನಗಳಿಂದ ತಾಲೂಕು ಕಛೇರಿ ಮುಂಭಾಗ ಹಳೇಜೇಡಿಕಟ್ಟೆ ನಿವಾಸಿ ಪೂರ್ಣಿಮಾ ಎಂಬುವರು ಕುಟುಂಬ ಸಮೇತ ಸತ್ಯಾಗ್ರಹ ನಡೆಸುತ್ತಿದ್ದಾರೆ.
   ಹಳೇಜೇಡಿಕಟ್ಟೆ ಸರ್ವೆ ನಂ.೭೮ರಲ್ಲಿ ಸುಮಾರು ೪೦ ವರ್ಷದ ೪-೫ ತೆಂಗಿನ ಮರಗಳನ್ನು ಮಾ.೧೬ರಂದು ಜಮೀನಿನ ಪಕ್ಕದ ನಿವೇಶನದ ಮಾಲೀಕ, ಅಂತರಗಂಗೆ ಗ್ರಾಮದ ನಿವಾಸಿ ನಾಗರಾಜ್ ಎಂಬುವರು ಕಡಿದು ಹಾಕಿದ್ದು, ಅಲ್ಲದೆ ಕೆಲವು ರೌಡಿಗಳೊಂದಿಗೆ ನಮ್ಮ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ವೆಸಗಿಸಿ ಜಾತಿನಿಂದನೆ ಮೂಲಕ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಅದೇ ದಿನ ದೂರು ನೀಡಲಾಗಿದೆ. ಆದರೆ ಪೊಲೀಸ್ ಠಾಣೆಯಲ್ಲಿ ರಾಜಕೀಯ ಪ್ರಭಾವ ಬೀರುವ ಮೂಲಕ ದೂರು ದಾಖಲಾಗದಂತೆ ಪೊಲೀಸ್ ಠಾಣಾಧಿಕಾರಿಗಳಿಗೇ ಬೆದರಿಕೆ ಹಾಕಲಾಗುತ್ತಿದೆ ಎಂದು ಪೂರ್ಣಿಮಾ ಆರೋಪಿಸಿದರು.
  ಗೂಂಡಾಗಿರಿ ಮೂಲಕ ದೌರ್ಜನ್ಯ ವೆಸಗುತ್ತಿರುವವರ ಹಾಗು ಅಕ್ರಮವಾಗಿ ತೆಂಗಿನ ಮರಗಳನ್ನು ಕಡಿದು ಹಾಕಿರುವವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು. ಕುಟುಂಬದವರಿಗೆ ಜೀವ ಬೆದರಿಕೆ ಇದ್ದು, ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.

ಭದ್ರಾವತಿ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ : ರಾಬರ್ಟ್ ನಾಯಕಿ ಆಶಾಭಟ್

ಭದ್ರಾವತಿ ಸತ್ಯ ಚಿತ್ರಮಂದಿರಕ್ಕೆ ಗುರುವಾರ ಸಂಜೆ ರಾಬರ್ಟ್ ಚಿತ್ರದ ನಾಯಕಿ ಆಶಾಭಟ್ ಕುಟುಂಬ ಸದಸ್ಯರೊಂದಿಗೆ ಆಗಮಿಸಿದರು.
   ಭದ್ರಾವತಿ, ಮಾ. ೧೮: ಕಲಾವಿದೆಗೆ ಭಾಷೆಯ ಪರಿವಿಲ್ಲ, ಭದ್ರಾವತಿ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ರಾಬರ್ಟ್ ಚಿತ್ರದ ನಾಯಕಿ ಆಶಾಭಟ್ ಹೇಳಿದರು.
ಅವರು ಗುರುವಾರ ಸಂಜೆ ನಗರದ ಸಿ.ಎನ್ ರಸ್ತೆಯಲ್ಲಿರುವ ಸತ್ಯ ಚಿತ್ರಮಂದಿರಕ್ಕೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ರಾಬರ್ಟ್ ಚಿತ್ರ ವೀಕ್ಷಿಸುವ ಮೂಲಕ ಪತ್ರಕರ್ತರೊಂದಿಗೆ ತಮ್ಮ ಅನುಭವ ಹಂಚಿಕೊಂಡರು.
   ನಾನು ಹುಟ್ಟಿಬೆಳೆದ ಊರು ಭದ್ರಾವತಿ. ನಾನು ವಿಶ್ವ ಸುಂದರಿ ಸ್ಪರ್ಧೆಯಲ್ಲೂ ಸಹ ಭದ್ರಾವತಿ ಹೆಸರನ್ನು ಹೇಳಿಕೊಂಡಿದ್ದೇನೆ. ಭದ್ರಾವತಿ ಎಂದರೆ ಹೆಮ್ಮೆ ಈಗಲೂ ಸಹ ಎಲ್ಲೆಡೆ ನನ್ನೂರು ಭದ್ರಾವತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ ಎಂದರು.
    ಕಲಾವಿದೆಗೆ ಭಾಷೆಯ ಪರಿವಿಲ್ಲ. ನನಗೆ ಕನ್ನಡ ಹಾಗು ಕನ್ನಡಿಗರ ಬಗ್ಗೆ ಅಭಿಮಾನವಿದೆ. ರಾಬರ್ಟ್ ಚಿತ್ರ ತುಂಬಾ ಚನ್ನಾಗಿ ಮೂಡಿ ಬಂದಿದೆ. ಈ ಚಿತ್ರ ವೀಕ್ಷಿಸಿದವರಿಗೆ ಇದರ ಅರಿವಾಗುತ್ತದೆ. ಒಂದು ಚಿತ್ರ ನಿರ್ಮಾಣದ ಹಿಂದೆ ನೂರಾರು ಜನರ ಪರಿಶ್ರಮವಿದೆ. ಎಲ್ಲರೂ ಒಗ್ಗಟ್ಟಾಗಿ, ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ. ನನಗೆ ಈ ಚಿತ್ರದ ಮೂಲಕ ಉತ್ತಮ ಭವಿಷ್ಯವಿದೆ ಎಂದರು.
    ತಂದೆ-ತಾಯಿ ಕುಟುಂಬ ಸದಸ್ಯರೊಂದಿಗೆ ಚಿತ್ರ ವೀಕ್ಷಣೆ:
ಸತ್ಯ ಚಿತ್ರಮಂದಿರದಲ್ಲಿ ೬ ಗಂಟೆಗೆ ಆರಂಭಗೊಂಡ ರಾಬರ್ಟ್ ಚಿತ್ರ ಪ್ರದರ್ಶನವನ್ನು ತಂದೆ ಸುಬ್ರಮಣ್ಯ ಭಟ್, ತಾಯಿ ಶ್ಯಾಮಲ ಭಟ್ ಹಾಗು ಕುಟುಂಬ ಸದಸ್ಯರ ಜೊತೆ ವೀಕ್ಷಿಸಿ ಸಂಭ್ರಮಿಸಿದರು.
     ಜನ್ಮದಿನ ಆಚರಣೆ:
    ಚಿತ್ರ ಮಂದಿರ ಮಾಲೀಕ ದುಷ್ಯಂತ್‌ರಾಜ್ ಪುತ್ರನ ಜನ್ಮದಿನದ ಅಂಗವಾಗಿ ಚಿತ್ರಮಂದಿರದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ನಟಿ ಆಶಾಭಟ್ ಹಾಗು ಕುಟುಂಬ ವರ್ಗದವರು ಭಾಗಿಯಾಗಿ ಶುಭಕೋರಿದರು.



ಚಿತ್ರ ಮಂದಿರ ಮಾಲೀಕ ದುಷ್ಯಂತ್‌ರಾಜ್ ಪುತ್ರನ ಜನ್ಮದಿನದ ಅಂಗವಾಗಿ ಚಿತ್ರಮಂದಿರದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ನಟಿ ಆಶಾಭಟ್ ಹಾಗು ಕುಟುಂಬ ವರ್ಗದವರು ಭಾಗಿಯಾಗಿ ಶುಭಕೋರಿದರು.

ಸೇವಾ ಕಾರ್ಯಗಳಲ್ಲಿ ಭದ್ರಾವತಿ ಲಯನ್ಸ್ ಕ್ಲಬ್ ಮೊದಲ ಸ್ಥಾನ : ನೀಲಕಂಠ ಎಂ. ಹೆಗ್ಡೆ

ಭದ್ರಾವತಿ ನ್ಯೂಟೌನ್ ದಯಾಸಾಗರ್ ಟ್ರಸ್ಟ್‌ನಲ್ಲಿ ನಿರ್ಗತಿಕರಿಗೆ ಲಯನ್ಸ್ ಜಿಲ್ಲಾ ಗವರ್ನರ್ ನೀಲಕಂಠ ಎಂ ಹೆಗ್ಡೆ ಊಟ ಬಡಿಸುವ ಮೂಲಕ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು.
   ಭದ್ರಾವತಿ, ಮಾ. ೧೮: ನಗರದ ಲಯನ್ಸ್ ಕ್ಲಬ್ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದು, ಕೋವಿಡ್-೧೯ ಸಂಕಷ್ಟದ ಪರಿಸ್ಥಿತಿಯಲ್ಲೂ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಒಗ್ಗಟ್ಟಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಲಯನ್ಸ್ ಜಿಲ್ಲಾ ಗವರ್ನರ್ ನೀಲಕಂಠ ಎಂ ಹೆಗ್ಡೆ ಪ್ರಶಂಸೆ ವ್ಯಕ್ತಪಡಿಸಿದರು.
   ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲಯನ್ಸ್ ಜಿಲ್ಲೆ ೩೧೭ಸಿ ಪ್ರದೇಶ ೯ರ ವಲಯ ೨ರ ವ್ಯಾಪ್ತಿಯಲ್ಲಿ ೫ ಸ್ಥಾನಗಳ ಪೈಕಿ ಮೊದಲ ಸ್ಥಾನ ಕಾಯ್ದುಕೊಂಡಿದೆ.  
  ದೇಶದಲ್ಲಿ ಒಟ್ಟು ೭೫ ಲಯನ್ಸ್ ಜಿಲ್ಲೆಗಳಿದ್ದು ೨.೮೯ ಲಕ್ಷ ಲಯನ್ಸ್ ಸದಸ್ಯರನ್ನು ಹೊಂದಿದೆ. ವಿಶ್ವದಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ದೇಶ ಭಾರತ ಎಂಬುದು ವಿಶೇಷವಾಗಿದೆ. ಕೋವಿಡ್-೧೯ರ ಹಿನ್ನಲೆಯಲ್ಲಿ ೪೭ ಲಕ್ಷ ರೂ ಮೌಲ್ಯದ ಪಿಪಿ ಕಿಟ್, ೩ ಲಕ್ಷಕ್ಕೂ ಹೆಚ್ಚು ಮಾಸ್ಕ್ ವಿತರಣೆ ಮಾಡಲಾಗಿದ್ದು, ೮೦೦ ಯೂನಿಟ್ ರಕ್ತ ಸಂಗ್ರಹಣೆ ಮಾಡಲಾಗಿದೆ ಎಂದರು. ಕುಡಿಯುವ ನೀರಿನ ಸೌಲಭ್ಯ, ವಸತಿ ಸೌಕರ್ಯ, ಸ್ವಚ್ಚತಾ ಆಂದೋಲನಾ, ವೈದ್ಯಕೀಯ ಶಿಬಿರ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಪ್ರಸ್ತುತ ೧೪೮ ಲಕ್ಷ ರು. ಮೊತ್ತದ ಜಾಗತೀಕ ಯೋಜನೆಗಳು ಜಾರಿಯಲ್ಲಿವೆ. ನಗರದ ಲಯನ್ಸ್ ಕ್ಲಬ್ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಇದೀಗ ಎರಡು ನಾಮಫಲಕಗಳ ಅನಾವರಣ, ಪ್ರಥಮ ದರ್ಜೆ ಕಾಲೇಜಿನಲ್ಲಿ ಜೆರಾಕ್ಸ್ ಮತ್ತು ಪ್ರಿಂಟಿಂಗ್ ಮೆಷಿನ್ ವಿತರಣೆ, ಬಸ್ ತಂಗುದಾಣ, ನಿರ್ಗತಿಕರಿಗೆ ಊಟದ ವ್ಯವಸ್ಥೆ ಹಾಗೂ ಬಟ್ಟೆ ಹೊಲಿಯುವ ಯಂತ್ರಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದರು.  
   ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ವಿ ಚಂದ್ರಶೇಖರ್, ಕಾರ್ಯದರ್ಶಿ ಆರ್. ರಾಮಮೂರ್ತಿ, ಪಿಡಿಜಿ ಬಿ. ದಿವಾಕರ ಶೆಟ್ಟಿ, ವಿಡಿಜಿ ಕೆ.ಸಿ ವೀರಭದ್ರಪ್ಪ, ಸಂಧ್ಯಾಹೆಗ್ಡೆ, ಜನಾರ್ಧನ ಅಯ್ಯಂಗಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪೌರಾಯುಕ್ತ ಮನೋಹರ್ ನೇತೃತ್ವದಲ್ಲಿ ಚಿಕ್ಕಯ್ಯನ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಸರ್ವೆ ನಂ.೭೨ರ ಬುಳ್ಳಾಪುರ ಸರ್ಕಾರಿ ಚಿಕ್ಕಯ್ಯನ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಪೌರಾಯುಕ್ತ ಮನೋಹರ್ ನೇತೃತ್ವದಲ್ಲಿ ನಡೆಯಿತು.
    ಭದ್ರಾವತಿ, ಮಾ. ೧೮: ನಗರಸಭೆ ವ್ಯಾಪ್ತಿಯ ಸರ್ವೆ ನಂ.೭೨ರ ಬುಳ್ಳಾಪುರ ಸರ್ಕಾರಿ ಚಿಕ್ಕಯ್ಯನ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಪೌರಾಯುಕ್ತ ಮನೋಹರ್ ನೇತೃತ್ವದಲ್ಲಿ ನಡೆಯಿತು.
     ೫ ಎಕರೆ ೨೭ ಗುಂಟೆ ವಿಸ್ತೀರ್ಣವುಳ್ಳ ಚಿಕ್ಕಯ್ಯನ ಕೆರೆ ಒತ್ತುವರಿ ತೆರವು ಕಾರ್ಯಾಚರಣೆಗೆ ಈ ಹಿಂದೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಪೌರಾಯುಕ್ತ ಮನೋಹರ್ ಸ್ಥಳೀಯರು ಹಾಗು ರೈತರೊಂದಿಗೆ ಮಾತುಕತೆ ನಡೆಸಿ ಯಶಸ್ವಿಯಾಗಿದ್ದು, ಈ ಹಿನ್ನಲೆಯಲ್ಲಿ ಇದೀಗ ಪುನಃ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.
     ಬೇಸಿಗೆಯಲ್ಲಿ ರೈತರಿಗೆ, ಜಾನುವಾರುಗಳಿಗೆ ಅನುಕೂಲ ಕಲ್ಪಿಸಿಕೊಡುವ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿಸಲು ನಗರಸಭೆ ವ್ಯಾಪ್ತಿಯಲ್ಲಿನ ಕೆರೆಗಳನ್ನು ಅಭಿವೃದ್ಧಿಗೊಳಿಸುವಂತೆ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಹಲವಾರು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಈ ಸಂಬಂಧ ನಗರಸಭೆಗೆ ಹಲವಾರು ಬಾರಿ ಮನವಿ ಪತ್ರ ಸಹ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಕಳೆದ ಸುಮಾರು ೨ ವರ್ಷಗಳಿಂದ ನಿರಂತರವಾಗಿ ಪೌರಾಯುಕ್ತ ಮನೋಹರ್ ನಗರಸಭೆ ವ್ಯಾಪ್ತಿಯಲ್ಲಿ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ವಹಿಸಿ ತಾಲೂಕು ಆಡಳಿತದ ನೆರವಿನೊಂದಿಗೆ ಬೌಂಡರಿ ನಿಗದಿಪಡಿಸುವ ಮೂಲಕ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ.
   ತೆರವು ಕಾರ್ಯಾಚರಣೆ ವೇಳೆ ಸ್ಥಳೀಯರಾದ ಮುರುಗನ್, ಪ್ರಸನ್ನ, ಯೋಗೇಶ್, ಜಾನಿ, ಸಿಂಗ್, ನಾರಾಯಣಪ್ಪ, ಉಮೇಶ್, ದಶರಥ, ಸುಬ್ಬು ಹಾಗು ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಮತ್ತು ಕಾಗದನಗರ ಪೊಲೀಸ್ ಠಾಣೆ ಸಿಬ್ಬಂದಿಗಳಾದ ರಾಜೇಶ್, ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.