Friday, April 16, 2021

ಬಿ.ಇಡಿ ಕಾಲೇಜಿಗೆ ಶೇ.೧೦೦ರಷ್ಟು ಫಲಿತಾಂಶ




ಬಿ.ಇಡಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಬಿ.ಇಡಿ ಕಾಲೇಜಿನ ವಿದ್ಯಾರ್ಥಿಗಳು.   
ಭದ್ರಾವತಿ, ಏ. ೧೬: ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಬಿ.ಇಡಿ ಕಾಲೇಜಿಗೆ ಈ ಬಾರಿ ಶೇ.೧೦೦ರಷ್ಟು ಫಲಿತಾಂಶ ಲಭಿಸಿದೆ.
      ಒಟ್ಟು ೫೦ ವಿದ್ಯಾರ್ಥಿಗಳ ಪೈಕಿ ೪೨  ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು ೮ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸೈಯದ ಗುಲ್ನಾಜ್ ಪರ್ವಿನ್ ಶೇ.೯೦.೬೦, ಕವಿತಾ ಎ. ಎಸ್ ಶೇ. ೮೯.೧೫ ಮತ್ತು ನಂದಿನಿ ಟಿ .ಪಿ ಶೇ. ೮೯.೦೫ರಷ್ಟು ಅತಿಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದಾರೆ.
     ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಿ.ಎಲ್ ರಂಗಸ್ವಾಮಿ, ಪದನಿಮಿತ್ತ ಅಧ್ಯಕ್ಷ  ಎನ್. ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಡಿ. ಎಸ್. ರಾಜಪ್ಪ, ಬಿ.ಇಡಿ ವಿಭಾಗದ ಕಾರ್ಯದರ್ಶಿ ಎ .ಜೆ. ರಂಗನಾಥ್ ಪ್ರಸಾದ್ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಪ್ರಾಂಶುಪಾಲರು, ಉಪನ್ಯಾಸಕ ಹಾಗು ಸಿಬ್ಬಂದಿ ವೃಂದದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ನಾಮಪತ್ರ ಪರಿಶೀಲನೆ : ೧೯೫ ಪುರಸ್ಕೃತ

ಏಕೈಕ ಜೆಡಿಯು ನಾಮಪತ್ರ ಸೇರಿದಂತೆ ೫೩ ತಿರಸ್ಕಾರ

ಭದ್ರಾವತಿ, ಏ. ೧೬: ನಗರಸಭೆ ೩೫ ವಾರ್ಡ್‌ಗಳ ಚುನಾವಣೆಗೆ ಸಂಬಂಧಿಸಿದಂತೆ ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆದಿದ್ದು, ಒಟ್ಟು ೨೪೮ ನಾಮಪತ್ರಗಳ ಪೈಕಿ ೧೯೫ ನಾಮಪತ್ರಗಳು ಪುರಸ್ಕೃತಗೊಂಡಿವೆ.
ನಾಮಪತ್ರ ಸಲ್ಲಕೆಗೆ ಕೊನೆಯ ದಿನವಾದ ಗುರುವಾರ ಒಟ್ಟು ೨೪೮ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಓರ್ವ ಅಭ್ಯರ್ಥಿಗಳಿಂದ ೨-೩ ಬಾರಿ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ನಡುವೆ ವಿವಿಧ ರಾಜಕೀಯ ಪಕ್ಷಗಳ ಆಕಾಂಕ್ಷಿಗಳಾಗಿ ನಾಮಪತ್ರ ಸಲ್ಲಿಸಿದ್ದವರ ಪೈಕಿ ಪಕ್ಷದ ಅಧಿಕೃತ ಬಿ ಫಾರಂ ನೀಡದವರ ನಾಮಪತ್ರಗಳು ಹಾಗೂ ಸೂಕ್ತ ದಾಖಲೆಗಳನ್ನು ಸಲ್ಲಿಸದವರ ನಾಮಪತ್ರಗಳು ಒಟ್ಟು ೫೩ ನಾಮಪತ್ರಗಳು ತಿರಸ್ಕಾರಗೊಂಡಿವೆ.
ನಾಮಪತ್ರಗಳ ಪರಿಶೀಲನೆ ನಂತರ ಕಾಂಗ್ರೆಸ್-೩೫, ಜೆಡಿಎಸ್-೩೫, ಬಿಜೆಪಿ-೩೫, ಎಎಪಿ-೭, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ-೨, ಎಐಎಂಐಎಂ-೨, ಎಸ್‌ಡಿಪಿಐ-೩ ಮತ್ತು ಪಕ್ಷೇತರ-೭೬ ನಾಮಪತ್ರಗಳು ಪುರಸ್ಕೃತಗೊಂಡಿವೆ.
ಏಕೈಕ ಜೆಡಿಯು ಅಭ್ಯರ್ಥಿ ನಾಮಪತ್ರ ತಿರಸ್ಕಾರ:
ಜನತಾದಳ(ಸಂಯುಕ್ತ) ಕರ್ನಾಟಕ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡರವರ ಪತ್ನಿ ದಿವ್ಯಶ್ರೀ ನಗರಸಭೆ ೩೨ನೇ ವಾರ್ಡ್‌ಗೆ ಮೊದಲ ಬಾರಿಗೆ ಜನತಾದಳ(ಸಂಯುಕ್ತ) ಕರ್ನಾಟಕ ಪಕ್ಷದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದು, ಇವರ ನಾಮಪತ್ರ ತಿರಸ್ಕೃತಗೊಂಡಿದೆ. ಇದರಿಂದಾಗಿ ಈ ಪಕ್ಷದಿಂದ ಯಾವುದೇ ಅಭ್ಯರ್ಥಿ ಇಲ್ಲದಂತಾಗಿದೆ.

ಭದ್ರಾವತಿ ನಗರಸಭೆ ೩೫ ವಾರ್ಡ್‌ಗಳಿಗೆ ೨೪೮ ನಾಮಪತ್ರ ಸಲ್ಲಿಕೆ : ವಾರ್ಡ್ ನಂ.೩ರಲ್ಲಿ ಅತಿ ಹೆಚ್ಚು ೧೮ ನಾಮಪತ್ರ ಸಲ್ಲಿಕೆ

ಕಾಂಗ್ರೆಸ್, ಜೆಡಿಎಸ್‌ನಲ್ಲಿ ಅಸಮಾಧಾನ ಸ್ಪೋಟ 
: ಬಂಡಾಯ ಶಮನಕ್ಕೆ ಯತ್ನ
     ಭದ್ರಾವತಿ, ಏ. ೧೬: ಇದೀಗ ಎಲ್ಲೆಡೆ ಕೊರೋನಾ ೨ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವೆಯೂ ಇಲ್ಲಿನ ನಗರಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ೨ ವರ್ಷಗಳ ನಂತರ ನಗರಸಭೆ ೩೫ ವಾರ್ಡ್‌ಗಳಿಗೆ ಎದುರಾಗಿರುವ ಚುನಾವಣೆಗೆ ಒಟ್ಟು ೨೪೮ ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ಬಾರಿ ಕಾಂಗ್ರೆಸ್, ಜೆಡಿಎಸ್  ಮತ್ತು ಬಿಜೆಪಿ ಪಕ್ಷಗಳ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಕಂಡು ಬರುತ್ತಿದೆ.
    ಹೆಬ್ಬಂಡಿ, ಜೇಡಿಕಟ್ಟೆ ಒಳಗೊಂಡಿರುವ ವಾರ್ಡ್ ನಂ.೧ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೨ ಮತ್ತು ಪಕ್ಷೇತರ-೧ ಸೇರಿದಂತೆ ಒಟ್ಟು ೬ ನಾಮಪತ್ರ, ಲೋಯರ್ ಹುತ್ತಾ ಒಳಗೊಂಡಿರುವ ವಾರ್ಡ್ ನಂ.೨ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೧ ಹಾಗು ಪಕ್ಷೇತರ-೪ ಸೇರಿದಂತೆ ಒಟ್ಟು ೮ ನಾಮಪತ್ರ, ಬಿ.ಎಚ್ ರಸ್ತೆ ಮತ್ತು ಒಲಭಾಗ ಚಾಮೇಗೌಡ ಏರಿಯಾ ಒಳಗೊಂಡಿರುವ ವಾರ್ಡ್ ನಂ.೩ಕ್ಕೆ ಕಾಂಗ್ರೆಸ್ ೨, ಬಿಜೆಪಿ-೧, ಜೆಡಿಎಸ್-೩ ಮತ್ತು ೧೨ ಸೇರಿದಂತೆ ಒಟ್ಟು ೧೮ ನಾಮಪತ್ರ, ಕನಕಮಂಟಪ ಪ್ರದೇಶ ಒಳಗೊಂಡಿರುವ ವಾರ್ಡ್ ನಂ.೪ಕ್ಕೆ ಕಾಂಗ್ರೆಸ್-೧, ಬಿಜೆಪಿ-೨, ಜೆಡಿಎಸ್-೧, ಎಎಪಿ-೨ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೮ ನಾಮಪತ್ರ, ಕೋಟೆ ಏರಿಯಾ ಒಳಗೊಂಡಿರುವ ವಾರ್ಡ್ ನಂ.೫ಕ್ಕೆ ಕಾಂಗ್ರೆಸ್-೫, ಬಿಜೆಪಿ-೧, ಜೆಡಿಎಸ್-೧, ಎಎಪಿ-೨, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ-೧, ಎಸ್‌ಡಿಪಿಐ-೧ ಮತ್ತು ಪಕ್ಷೇತರ-೧ ಸೇರಿದಂತೆ ಒಟ್ಟು ೧೨ ನಾಮಪತ್ರ, ಸಿದ್ದಾರೂಢನಗರ ಒಳಗೊಂಡಿರುವ ವಾರ್ಡ್ ನಂ.೬ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೨ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೭ ನಾಮಪತ್ರ, ದುರ್ಗಿಗುಡಿ ಹಾಗು ಖಲಂದರ್ ನಗರ ಒಳಗೊಂಡಿರುವ ವಾರ್ಡ್ ನಂ.೭ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಎಸ್‌ಡಿಪಿಐ-೧ ಸೇರಿದಂತೆ ಒಟ್ಟು ೪ ನಾಮಪತ್ರ, ಅನ್ವರ್‌ಕಾಲೋನಿ ಹಾಗು ಸೀಗೆಬಾಗಿ ಒಳಗೊಂಡಿರುವ ವಾರ್ಡ್ ನಂ.೮ಕ್ಕೆ  ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೧, ಎಎಪಿ-೧, ಎಸ್‌ಡಿಪಿಐ-೧, ವೇಲೆಫೇರ್ ಪಾರ್ಟಿ ಆಫ್ ಇಂಡಿಯಾ-೧, ಎಐಎಂಐಎಂ-೧ ಮತ್ತು ಪಕ್ಷೇತರ-೭ ಸೇರಿದಂತೆ ಒಟ್ಟು ೧೫ ನಾಮಪತ್ರ, ಭದ್ರಾಕಾಲೋನಿ ಒಳಗೊಂಡಿರುವ ವಾರ್ಡ್ ನಂ.೯ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೧ ಸೇರಿದಂತೆ ೪ ನಾಮಪತ್ರ ಹಾಗು ಹನುಮಂತನಗರ ಮತ್ತು ಅಶ್ವಥ್‌ನಗರ ಒಳಗೊಂಡಿರುವ ವಾರ್ಡ್ ನಂ.೧೦ಕ್ಕೆ ಕಾಂಗ್ರೆಸ್-೧, ಬಿಜೆಪಿ-೨, ಜೆಡಿಎಸ್-೧ ಸೇರಿದಂತೆ ೪ ನಾಮಪತ್ರ ಸಲ್ಲಿಕೆಯಾಗಿವೆ.
     ಸುಭಾಷ್ ನಗರ ಒಳಗೊಂಡಿರುವ ವಾರ್ಡ್ ನಂ.೧೧ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಹಾಗು ಪಕ್ಷೇತರ-೩ ಸೇರಿದಂತೆ ಒಟ್ಟು ೬ ನಾಮಪತ್ರ, ಅಣ್ಣಾನಗರ ಒಳಗೊಂಡಿರುವ ವಾರ್ಡ್ ನಂ.೧೨ಕ್ಕೆ ಕಾಂಗ್ರೆಸ್-೩, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೭ ನಾಮಪತ್ರ, ಭೂತನಗುಡಿ ಒಳಗೊಂಡಿರುವ ವಾರ್ಡ್ ನಂ. ೧೩ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಹಾಗು ಪಕ್ಷೇತರ-೧ ಸೇರಿದಂತೆ ಒಟ್ಟು ೪ ನಾಮಪತ್ರ, ಹೊಸ ಭೋವಿ ಕಾಲೋನಿ ಒಳಗೊಂಡಿರುವ ವಾರ್ಡ್ ನಂ.೧೪ಕ್ಕೆ ಕಾಂಗ್ರೆಸ್-೪, ಬಿಜೆಪಿ-೨, ಜೆಡಿಎಸ್-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೯ ನಾಮಪತ್ರ, ಹೊಸಮನೆ ಹಾಗು ಅಶ್ವಥ್ ನಗರ ಬಲಭಾಗ ಒಳಗೊಂಡಿರುವ ವಾರ್ಡ್ ನಂ. ೧೫ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೩ ಹಾಗು ಪಕ್ಷೇತರ-೨ ಸೇರಿದಂತೆ ಒಟ್ಟು ೭ ನಾಮಪತ್ರ, ಗಾಂಧಿನಗರ ಒಳಗೊಂಡಿರುವ ವಾರ್ಡ್ ನಂ.೧೬ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೩ ಹಾಗು ಪಕ್ಷೇತರ-೧ ಸೇರಿದಂತೆ ಒಟ್ಟು ೭ ನಾಮಪತ್ರ, ನೆಹರು ನಗರ ಒಳಗೊಂಡಿರುವ ವಾರ್ಡ್ ನಂ.೧೭ಕ್ಕೆ  ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೩ ಸೇರಿದಂತೆ ಒಟ್ಟು ೭ ನಾಮಪತ್ರ, ಎಂ.ಎಂ ಕಾಂಪೌಂಡ್ ಒಳಗೊಂಡಿರುವ ವಾರ್ಡ್ ನಂ.೧೮ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೧, ಎಎಪಿ-೧, ಎಐಎಂಐಎಂ-೧ ಮತ್ತು ಪಕ್ಷೇತರ-೧ ಸೇರಿದಂತೆ ಒಟ್ಟು ೭ ನಾಮಪತ್ರ, ಎಂಪಿಎಂ ಆಸ್ಪತ್ರೆ ಒಳಗೊಂಡಿರುವ ವಾರ್ಡ್ ನಂ.೧೯ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೧ ಸೇರಿದಂತೆ ಒಟ್ಟು ೪ ನಾಮಪತ್ರ, ಸುರಗಿತೋಪು ಒಳಗೊಂಡಿರುವ ವಾರ್ಡ್ ನಂ.೨೦ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧, ಎಎಪಿ-೧ ಮತ್ತು ಪಕ್ಷೇತರ ೧ ಸೇರಿದಂತೆ ಒಟ್ಟು ೫ ನಾಮಪತ್ರಗಳು ಸಲ್ಲಿಕೆಯಾಗಿವೆ.
     ಎಂಪಿಎಂ ೬ ಮತ್ತು ೮ನೇ ವಾರ್ಡ್ ಒಳಗೊಂಡಿರುವ ವಾರ್ಡ್ ನಂ.೨೧ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೨ ಸೇರಿದಂತೆ ೪ ನಾಮಪತ್ರ, ಉಜ್ಜನಿಪುರ ಒಳಗೊಂಡಿರುವ ವಾರ್ಡ್ ನಂ.೨೨ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೫ ನಾಮಪತ್ರ, ತಿಮ್ಲಾಪುರ ಮತ್ತು ಡಿ.ಜಿ ಹಳ್ಳಿ ಒಳಗೊಂಡಿರುವ ವಾರ್ಡ್ ನಂ.೨೩ರಲ್ಲಿ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೫ ನಾಮಪತ್ರ, ಬೊಮ್ಮನಕಟ್ಟೆ ಒಳಗೊಂಡಿರುವ ವಾರ್ಡ್ ನಂ.೨೪ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್ -೧, ಎಎಪಿ-೧ ಮತ್ತು ಪಕ್ಷೇತರ-೫ ಸೇರಿದಂತೆ ಒಟ್ಟು ೧೦ ನಾಮಪತ್ರ, ಹುಡ್ಕೋ ಹೊಸಬುಳ್ಳಾಪುರ ಒಳಗೊಂಡಿರುವ ವಾರ್ಡ್ ನಂ.೨೫ಕ್ಕೆ ಕಾಂಗ್ರೆಸ್-೧, ಜೆಡಿಎಸ್-೧, ಬಿಜೆಪಿ-೨ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೫ ನಾಮಪತ್ರ, ಬಾಲಭಾರತಿ-ಬೆಣ್ಣೆಕೃಷ್ಣ ಸರ್ಕಲ್ ಒಳಗೊಂಡಿರುವ ವಾರ್ಡ್ ನಂ.೨೬ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧, ಎಎಪಿ-೧ ಮತ್ತು ಪಕ್ಷೇತರ-೩ ಸೇರಿದಂತೆ ಒಟ್ಟು ೭ ನಾಮಪತ್ರ, ಆಂಜನೇಯ ಅಗ್ರಹಾರ-ಕೂಲಿಬ್ಲಾಕ್ ಶೆಡ್ ಒಳಗೊಂಡಿರುವ ವಾರ್ಡ್ ನಂ.೨೭ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೫ ನಾಮಪತ್ರ, ಗಣೇಶ್ ಕಾಲೋನಿ-ವಿದ್ಯಾಮಂದಿರ ಒಳಗೊಂಡಿರುವ ವಾರ್ಡ್ ನಂ.೨೮ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೬ ನಾಮಪತ್ರ, ಕಿತ್ತೂರು ರಾಣಿ ಚನ್ನಮ್ಮ ಲೇ ಔಟ್-ಎನ್‌ಟಿಬಿ ಲೇ ಔಟ್  ಒಳಗೊಂಡಿರುವ ವಾರ್ಡ್ ನಂ.೨೯ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೧ ಸೇರಿದಂತೆ ಒಟ್ಟು ೪ ನಾಮಪತ್ರ ಹಾಗು ಹೊಸಸಿದ್ದಾಪುರ ಒಳಗೊಂಡಿರುವ ವಾರ್ಡ್ ನಂ.೩೦ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೨ ಮತ್ತು ಪಕ್ಷೇತರ-೩ ಸೇರಿದಂತೆ ಒಟ್ಟು ೭ ನಾಮಪತ್ರ ಸಲ್ಲಿಕೆಯಾಗಿವೆ.
    ಜಿಂಕ್‌ಲೈನ್  ಒಳಗೊಂಡಿರುವ ವಾರ್ಡ್ ನಂ.೩೧ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೨ ಮತ್ತು ಪಕ್ಷೇತರ-೧ ಸೇರಿದಂತೆ ಒಟ್ಟು ೬ ನಾಮಪತ್ರ, ಜನ್ನಾಪುರ ಒಳಗೊಂಡಿರುವ ವಾರ್ಡ್ ನಂ.೩೨ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೧, ಜೆಡಿಯು-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೬ ನಾಮಪತ್ರ, ಹುತ್ತಾ ಕಾಲೋನಿ ಒಳಗೊಂಡಿರುವ ವಾರ್ಡ್ ನಂ.೩೩ಕ್ಕೆ ಕಾಂಗ್ರೆಸ್-೧, ಬಿಜೆಪಿ-೧, ಜೆಡಿಎಸ್-೭ ಮತ್ತು ಪಕ್ಷೇತರ ೫ ಸೇರಿದಂತೆ ಒಟ್ಟು ೧೪ ನಾಮಪತ್ರ,  ಅಪ್ಪರ್ ಹುತ್ತಾ ಒಳಗೊಂಡಿರುವ ವಾರ್ಡ್ ನಂ.೩೪ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೩ ಮತ್ತು ಪಕ್ಷೇತರ-೩ ಸೇರಿದಂತೆ ಒಟ್ಟು೯ ನಾಮಪತ್ರ ಹಾಗೂ ಭಂಡಾರಹಳ್ಳಿ ಒಳಗೊಂಡಿರುವ ವಾರ್ಡ್ ನಂ.೩೫ಕ್ಕೆ ಕಾಂಗ್ರೆಸ್-೨, ಬಿಜೆಪಿ-೧, ಜೆಡಿಎಸ್-೧ ಮತ್ತು ಪಕ್ಷೇತರ-೨ ಸೇರಿದಂತೆ ಒಟ್ಟು ೬ ನಾಮಪತ್ರ ಸಲ್ಲಿಕೆಯಾಗಿವೆ.
ಒಟ್ಟು ನಾಮಪತ್ರ ೨೪೮ರ ಪೈಕಿ ಕಾಂಗ್ರೆಸ್-೫೬, ಬಿಜೆಪಿ-೩೮, ಜೆಡಿಎಸ್-೫೪, ಎಎಪಿ-೯, ವೆಲ್‌ಫೇರ್ ಪಾರ್ಟಿ ಆಫ್  ಇಂಡಿಯಾ-೨, ಜೆಡಿಯು-೧, ಎಐಎಂಐಎಂ-೨, ಎಸ್‌ಡಿಪಿಐ-೩ ಹಾಗು ಪಕ್ಷೇತರ-೮೩ ನಾಮಪತ್ರಗಳಾಗಿವೆ. ವಾರ್ಡ್ ನಂ.೩ರಲ್ಲಿ ಅತಿ ಹೆಚ್ಚು ೧೮ ನಾಮಪತ್ರ, ಸುಮಾರು ೭ ವಾರ್ಡ್‌ಗಳಲ್ಲಿ ಅತಿ ಕಡಿಮೆ ೪ ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿವೆ.
       ಅಸಮಾಧಾನ ಸ್ಪೋಟ :
    ನಾಮಪತ್ರ ಸಲ್ಲಿಕೆ ಮುಕ್ತಾಯಗೊಂಡ ನಂತರ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ಬಂಡಾಯ ಶಮನಕ್ಕೆ ಸಾಕಷ್ಟು ಕಸರತ್ತು ನಡೆಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕೊನೆ ಘಳಿಗೆಯಲ್ಲಿ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಕೊನೆಯ ದಿನ ಬಿ ಫಾರಂ ನೀಡಿದ್ದವು. ಇದರಿಂದಾಗಿ ಬಿ ಫಾರಂ ವಂಚಿತರಾದವರು ಇದೀಗ ಬಂಡಾಯಕ್ಕೆ ಮುಂದಾಗಿದ್ದಾರೆ. ಶನಿವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುವ ಹಿನ್ನಲೆಯಲ್ಲಿ ಶುಕ್ರವಾರ ಬಂಡಾಯ ಶಮನಕ್ಕೆ ಎರಡು ಪಕ್ಷಗಳ ಮುಖಂಡರು ಸಾಕಷ್ಟು ಪ್ರಯತ್ನಿಸಿದ್ದು, ಸಂಧಾನ ಮಾತುಕತೆ ಫಲ ಶೃತಿ ನಿರೀಕ್ಷೆಯಲ್ಲಿದ್ದಾರೆ.  

ಏ.೧೭ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ಏ. ೧೬: ೧೧೦/೩೩/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಬರುವ ಎಫ್-೫ ಅಂತರಗಂಗೆ, ಎಫ್-೧೧ ಕಾರೇಹಳ್ಳಿ ಮತ್ತು ಎಫ್-೧೫ ಭದ್ರಾ ಪ್ಯಾಕೇಡ್ಸ್ ಫೀಡರ್‌ಗಳಿಗೆ ಒಳಪಡುವ ಗ್ರಾಮಗಳಲ್ಲಿ ಎನ್‌ಜೆವೈ(ನಿರಂತರ ಜ್ಯೋತಿ)ಯೋಜನೆಯ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಏ.೧೭ರಂದು ಬೆಳಿಗ್ಗೆ ೧೦ ಗಂಟೆಯಿಂದ  ಸಂಜೆ ೬ ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
     ಮೊಸರಹಳ್ಳಿ, ದೇವನರಸೀಪುರ, ಉಕ್ಕುಂದ, ಯರೇಹಳ್ಳಿ, ರಂಗನಾಥಪುರ, ಅಂತರಗಂಗೆ, ಅಂತರಗಂಗೆ ಕ್ಯಾಂಪ್, ದೊಡ್ಡೇರಿ, ಗಂಗೂರು, ಬಸವನಗುಡಿ, ಕೆ.ಎಚ್ ನಗರ, ಕಾಚಗೊಂಡನಹಳ್ಳಿ, ಶಿವಪುರ, ಹಡ್ಲಘಟ್ಟ, ಕೋರಲಕೊಪ್ಪ, ಶ್ರೀನಿವಾಸಪುರ, ಬಾರಂದೂರು, ಕಾರೇಹಳ್ಳಿ, ಬೊಮ್ಮೇನಹಳ್ಳಿ, ಕೆಂಚೇನಹಳ್ಳಿ, ಮಾವಿನಕೆರೆ, ಕಾಳಿಂಗನಹಳ್ಳಿ, ಹಳ್ಳಿಕೆರೆ, ಹಡ್ಲಘಟ್ಟ, ಭದ್ರಾ ಪ್ಯಾಕೇಡ್ಸ್ ೧೧ ಕೆವಿ ಮಾರ್ಗ, ಸಿದ್ದಾಪುರ, ಎಂಪಿಎಂ, ಬೈಪಾಸ್ ರಸ್ತೆ, ಸಿಎಂಸಿ ಕುಡಿಯುವ ನೀರಿನ ಸ್ಥಾವರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

Thursday, April 15, 2021

ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾಗಿ ಎಚ್. ಶ್ರೀನಿವಾಸ್


ಎಚ್. ಶ್ರೀನಿವಾಸ್
   ಭದ್ರಾವತಿ, ಏ. ೧೫: ತಾಲೂಕು ಛಾಯಾಗ್ರಾಹಕರ ಸಂಘದ ನೂತನ ಅಧ್ಯಕ್ಷರಾಗಿ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಯುವ ಮುಖಂಡ ಎಚ್. ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.
   ಉಪಾಧ್ಯಕ್ಷರಾಗಿ ಆರ್. ಮಂಜುನಾಥ್, ಕಾರ್ಯದರ್ಶಿಯಾಗಿ ಶೈಲೇಶ್‌ಕುಮಾರ್ ಮತ್ತು ಖಜಾಂಚಿಯಾಗಿ ರೇಣುಕಯ್ಯ ಆಯ್ಕೆಯಾಗಿದ್ದಾರೆ. ಈ ಹಿಂದೆ ರಾಮಕೃಷ್ಣ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೆಲವು ದಿನಗಳ ಹಿಂದೆ ನಡೆದ ಚುನಾವಣೆಯಲ್ಲಿ ಎಚ್. ಶ್ರೀನಿವಾಸ್ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರನ್ನು ನಗರದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಅಭಿನಂದಿಸಿದ್ದಾರೆ.

ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಪುತ್ರ ಬಿ.ಎಂ ಮಂಜುನಾಥ್ ಸೇರಿದಂತೆ ಹಲವು ಮಂದಿ ನಾಮಪತ್ರ ಸಲ್ಲಿಕೆ

    ಭದ್ರಾವತಿ, ಏ. ೧೫: ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಬಿ.ಕೆ ಮೋಹನ್ ಪುತ್ರ ಬಿ.ಎಂ ಮಂಜುನಾಥ್ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ೭ನೇ ವಾರ್ಡ್‌ಗೆ ಸ್ಪರ್ಧಿಸಿದ್ದು, ಗುರುವಾರ ತಮ್ಮ ಬೆಂಬಲಿಗರು, ಕುಟುಂಬ ವರ್ಗದವರೊಂದಿಗೆ ನಾಮಪತ್ರ ಸಲ್ಲಿಸಿದರು.
    ನಗರಸಭೆ ಮಾಜಿ ಅಧ್ಯಕ್ಷ  ಬಿ.ಕೆ ಮೋಹನ್ ಈ ಬಾರಿ ೨೨ನೇ ವಾರ್ಡ್ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದು, ಇವರ ಪುತ್ರ ಬಿ.ಎಂ ಮಂಜುನಾಥ್ ೭ನೇ ವಾರ್ಡ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
     ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬಿ.ಕೆ ಮೋಹನ್, ಬಿ.ಕೆ ಜಗನ್ನಾಥ್, ಬಿ.ಕೆ ಶಿವಕುಮಾರ್ ಹಾಗು ಕುಟುಂಬ ವರ್ಗದವರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.



     ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ನಾಮಪತ್ರ ಸಲ್ಲಿಕೆ :
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮೂಲಕ ಸಂಘ ಪರಿವಾರದಲ್ಲಿ ಗುರುತಿಸಿಕೊಂಡು ರಾಜಕೀಯ ಪ್ರವೇಶಿಸಿರುವ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ಗುರುವಾರ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.
    ಮೂಲತಃ ಲೆಕ್ಕ ಪರಿಶೋಧಕರಾಗಿರುವ ಧರ್ಮಪ್ರಸಾದ್ ಹಲವು ಹೋರಾಟಗಳ ಮೂಲಕ ಗುರುತಿಸಿಕೊಂಡಿದ್ದು, ಇದೆ ಮೊದಲ ಬಾರಿಗೆ ನಗರಸಭೆ ೧೧ನೇ ವಾರ್ಡ್ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಪ್ರಸ್ತುತ ಬಿಜೆಪಿ ಮಂಡಲದ ಪ್ರಮುಖರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.



      ಹಿಂದೂ ಸಂಘಟನೆಯ ಯುವ ಮುಖಂಡ ಸುನಿಲ್‌ಕುಮಾರ್ ನಾಮಪತ್ರ ಸಲ್ಲಿಕೆ:
   ಹಲವಾರು ವರ್ಷಗಳಿಂದ ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಬಜರಂಗದಳ ಜಿಲ್ಲಾ ಪ್ರಮುಖ್ ಸುನಿಲ್‌ಕುಮಾರ್ ಈ ಬಾರಿ ನಗರಸಭೆ ಚುನಾವಣೆಗೆ  ಬಿಜೆಪಿ ಪಕ್ಷದ ೧೮ನೇ ವಾರ್ಡಿನ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
    ಹಲವಾರು ಹಿಂದೂಪರ ಹೋರಾಟಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಸುನಿಲ್‌ಕುಮಾರ್ ನಗರದಲ್ಲಿ ಯುವ ಸಮುದಾಯ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಇವರ ಸ್ಪರ್ಧೆ ಗಮನ ಸೆಳೆಯುತ್ತಿದೆ. ೫-೬ ದಿನಗಳ ಹಿಂದೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.



      ಅಪ್ಪಾಜಿ ಅಭಿಮಾನಿ ಕೃಷ್ಣರಾಜ್ ನಾಮಪತ್ರ ಸಲ್ಲಿಕೆ :
   ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಅಭಿಮಾನಿಗಳಲ್ಲಿ ಒಬ್ಬರಾಗಿ ಹಲವಾರು ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಯುವ ಮುಖಂಡ ಕೃಷ್ಣರಾಜ್ ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.
   ಇದೀಗ ವಾರ್ಡ್ ನಂ. ೩೩ರ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದು, ಹಲವಾರು ಸೇವಾ ಕಾರ್ಯಗಳ ಮೂಲಕ ಸ್ಥಳೀಯವಾಗಿ ಗುರುತಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಇವರ ಸ್ಪರ್ಧೆ ಗಮನ ಸೆಳೆಯುತ್ತಿದೆ.
       ಸ್ನೇಹ ಜೀವಿ ಬಳಗದ ಸದಸ್ಯರ ಸ್ಪರ್ಧೆ:
    ಹಲವಾರು ವರ್ಷಗಳಿಂದ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪೊಲೀಸ್ ಉಮೇಶ್ ನೇತೃತ್ವದ ಸ್ನೇಹ ಜೀವಿ ಬಳಗದ ಸದಸ್ಯರು ಮೊದಲ ಬಾರಿ ನಗರಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.
    ಈಗಾಗಲೇ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಳಗದ ಸದಸ್ಯರು ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇದೀಗ ವಾರ್ಡ್ ನಂ.೩ ಯೋಗೀಶ್, ವಾರ್ಡ್ ನಂ. ೪ ಸುಷ್ಮ, ವಾರ್ಡ್ ನಂ.೮ ವಿನಯ್, ವಾರ್ಡ್ ನಂ.೧೪ ಶೋಭಾ ರವಿಕುಮಾರ್, ವಾರ್ಡ್ ನಂ. ೧೫ ಕಾಂತ ದಿನೇಶ್, ವಾರ್ಡ್ ನಂ. ೧೯ ಹಾಲೇಶ್, ವಾರ್ಡ್ ನಂ. ೨೦ ವರಲಕ್ಷ್ಮೀ, ವಾರ್ಡ್ ನಂ.೨೩ ಶಾಲಿನಿ, ವಾರ್ಡ್ ನಂ. ೨೫ ಸುರೇಶ್, ವಾರ್ಡ್ ೨೬ ಜೀವ, ವಾರ್ಡ್ ನಂ.೨೭ ಮಹಾಲಕ್ಷ್ಮೀ, ವಾರ್ಡ್ ನಂ.೨೮ ಶ್ರೀಧರಮೂರ್ತಿ, ವಾರ್ಡ್ ನಂ.೨೯ ರಮಾವೆಂಕಟೇಶ್, ವಾರ್ಡ್ ನಂ.೩೧ ಜಯಮ್ಮ, ವಾರ್ಡ್ ನಂ.೩೨ ಲತಾ ಸತೀಶ್, ವಾರ್ಡ್ ನಂ.೩೩ ಶಶಿಕಲಾ, ವಾರ್ಡ್ ನಂ.೩೪ ಲತಾ ಮೋರೆ ಮತ್ತು ವಾರ್ಡ್ ನಂ.೩೫ ಸುಧಾ ಶಿವಪ್ಪ ಸೇರಿದಂತೆ ಒಟ್ಟು ೧೮ ಸದಸ್ಯರು ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ.

ನಗರಸಭೆ ಚುನಾವಣೆ : ನಾಮಪತ್ರ ಸಲ್ಲಿಕೆ ಭರಾಟೆ ಜೋರು

   ಭದ್ರಾವತಿ, ಏ. ೧೫: ನಗರಸಭೆ ೩೫ ವಾರ್ಡ್‌ಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿ ಕಂಡು ಬಂದಿತು.
     ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಎಪಿ, ಎಸ್‌ಡಿಪಿಐ, ಜೆಡಿಯು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಮೊದಲೇ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳು ಪಕ್ಷದ 'ಬಿ' ಫಾರಂ ನೀಡಿದರು. ಉಳಿದಂತೆ ಪಕ್ಷೇತರ ಅಭ್ಯರ್ಥಿಗಳಾಗಿ ಬಹುತೇಕ ಮಂದಿ ನಾಮಪತ್ರ ಸಲ್ಲಿಸಿದರು. ಅಲ್ಲದೆ ಈ ಬಾರಿ ಸ್ನೇಹ ಜೀವಿ ಬಳಗದ ಸದಸ್ಯರು ಚುನಾವಣೆಗೆ ಸ್ಪರ್ಧಿಸಿದ್ದು, ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.  
    ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಅಧಿಕೃತ ಅಭ್ಯರ್ಥಿಗಳನ್ನು ಈಗಾಗಲೇ ಘೋಷಿಸಿಕೊಂಡಿವೆ. ಆದರೆ ಜೆಡಿಎಸ್ ಸೇರಿದಂತೆ ಉಳಿದ ಪಕ್ಷಗಳು ಕೊನೆಯವರೆಗೂ ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸಿಕೊಳ್ಳದೆ ಗೌಪ್ಯತೆ ಕಾಪಾಡಿಕೊಂಡು ಬಂದಿವೆ. ಈ ನಡುವೆ ಕೊನೆ ಘಳಿಗೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಹಿರಂಗಗೊಂಡಿದೆ. ಆದರೆ ಪಕ್ಷ ಇನ್ನೂ ಅಧಿಕೃತವಾಗಿ ಘೋಷಿಸಿಕೊಂಡಿಲ್ಲ.



        ೩೫ ವಾರ್ಡ್‌ಗಳ ಜೆಡಿಎಸ್ ಅಭ್ಯರ್ಥಿಗಳು :
    ಜೆಡಿಎಸ್ ೩೫ ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ವಾರ್ಡ್ ನಂ.೧ಕ್ಕೆ ಟಿ. ರೇಖಾ, ವಾರ್ಡ್ ನಂ.೨ಕ್ಕೆ ಶಾಂತಿ, ವಾರ್ಡ್ ನಂ.೩ಕ್ಕೆ ಬಿ.ಆರ್ ಉಮೇಶ್, ವಾರ್ಡ್ ನಂ.೪ಕ್ಕೆ ಆರ್. ಉಷಾ, ವಾರ್ಡ್ ನಂ.೫ಕ್ಕೆ ತಬಸುಮ್ ಸುಲ್ತಾನ್, ವಾರ್ಡ್ ನಂ.೬ಕ್ಕೆ ಚನ್ನಪ್ಪ, ವಾರ್ಡ್ ನಂ.೭ಕ್ಕೆ ಎಂ. ರೇಣುಕಾ, ವಾರ್ಡ್ ನಂ.೮ಕ್ಕೆ ಸೈಯದ್ ಅಜಮಲ್, ವಾರ್ಡ್  ನಂ.೯ಕ್ಕೆ ಪಿ. ಸುಂದರ್ ಮೂರ್ತಿ, ವಾರ್ಡ್ ನಂ.೧೦ಕ್ಕೆ ಆರ್. ಜಯಂತಿ, ವಾರ್ಡ್ ನಂ.೧೧ಕ್ಕೆ ಎ. ಪಚ್ಚೈಯಪ್ಪನ್, ವಾರ್ಡ್ ನಂ.೧೨ಕ್ಕೆ ಎ. ಪಶುಪತಿ, ವಾರ್ಡ್ ನಂ.೧೩ಕ್ಕೆ ಕೆ. ಸುಜಾತ, ವಾರ್ಡ್ ನಂ.೧೪ಕ್ಕೆ ಎಚ್. ಮಂಜುನಾಥ, ವಾರ್ಡ್ ನಂ.೧೫ಕ್ಕೆ ಕೆ.ಎಂ. ಮಂಜುಳಾ, ವಾರ್ಡ್ ನಂ.೧೬ಕ್ಕೆ ವಿಶಾಲಾಕ್ಷಿ, ವಾರ್ಡ್ ನಂ.೧೭ಕ್ಕೆ ಎಂ. ಯೋಗೀಶ್ ಕುಮಾರ್, ವಾರ್ಡ್ ನಂ.೧೮ಕ್ಕೆ ಆರ್. ಕರುಣಾಮೂರ್ತಿ, ವಾರ್ಡ್ ನಂ.೧೯ಕ್ಕೆ ಬಸವರಾಜ್, ವಾರ್ಡ್ ನಂ.೨೦ಕ್ಕೆ ಜಯಶೀಲ, ವಾರ್ಡ್ ನಂ.೨೧ಕ್ಕೆ ವಿಜಯ, ವಾರ್ಡ್ ನಂ.೨೨ಕ್ಕೆ ಬೋರೇಗೌಡ, ವಾರ್ಡ್ ನಂ.೨೩ಕ್ಕೆ ಕೆ.ಪಿ ಪ್ರೇಮಾ, ವಾರ್ಡ್ ನಂ.೨೪ಕ್ಕೆ ಕೋಟೇಶ್ವರರಾವ್, ವಾರ್ಡ್ ನಂ.೨೫ಕ್ಕೆ ಆರ್. ಉದಯ್ ಕುಮಾರ್, ವಾರ್ಡ್ ನಂ.೨೬ಕ್ಕೆ ಪರಮೇಶ್ವರಿ, ವಾರ್ಡ್ ನಂ.೨೭ಕ್ಕೆ ರೂಪಾವತಿ, ವಾರ್ಡ್ ನಂ.೨೮ಕ್ಕೆ ಎಚ್. ಸಂತೋಷ್, ವಾರ್ಡ್ ನಂ.೨೯ಕ್ಕೆ ಆರ್.  ನಾಗರತ್ನ, ವಾರ್ಡ್ ನಂ. ೩೦ಕ್ಕೆ ಜೆ. ಸೋಮಶೇಖರ್, ವಾರ್ಡ್ ೩೨ಕ್ಕೆ ಎಸ್. ಪಲ್ಲವಿ, ವಾರ್ಡ್ ನಂ.೩೨ಕ್ಕೆ ಕೆ.ಆರ್ ಸವಿತಾ, ವಾರ್ಡ್ ನಂ.೩೩ಕ್ಕೆ ರವಿಕುಮಾರ, ವಾರ್ಡ್ ನಂ.೩೪ಕ್ಕೆ ಎಸ್. ಭಾಗ್ಯಮ್ಮ ಮತ್ತು ವಾರ್ಡ್ ನಂ.೩೫ಕ್ಕೆ ನಿಂಗಮ್ಮ ಅಧಿಕೃತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ.



      ಎಎಪಿ ೭ ಅಭ್ಯರ್ಥಿಗಳು:
   ಮೊದಲ ಬಾರಿಗೆ ನಗರಸಭೆ ಚುನಾವಣೆಗೆ ಆಮ್ ಆದ್ಮಿ ಪಾರ್ಟಿ ೭ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ವಾರ್ಡ್ ನಂ.೪ರಲ್ಲಿ ಗೀತಾ ಬಸವಕುಮಾರ್, ವಾರ್ಡ್ ನಂ.೫ರಲ್ಲಿ ರೇಷ್ಮ ಬಾನು, ವಾರ್ಡ್ ನಂ.೮ರಲ್ಲಿ ಅಬ್ದುಲ್ ಖದೀರ್, ವಾರ್ಡ್ ನಂ. ೧೮ರಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ ಪುತ್ರ ಮಹಮದ್ ಪರ್ವೀಜ್, ವಾರ್ಡ್ ನಂ. ೨೦ರಲ್ಲಿ ಮೈತ್ರಿ ರಮೇಶ್, ವಾರ್ಡ್ ನಂ.೨೪ರಲ್ಲಿ ಎ. ಮಸ್ತಾನ್ ಮತ್ತು ವಾರ್ಡ್ ನಂ.೨೬ರಲ್ಲಿ ಶಿಲ್ಪ ಅಧಿಕೃತ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.
    ಕಳೆದ ಸುಮಾರು ೧ ವಾರದಿಂದ ನಗರದಲ್ಲಿಯೇ ಬೀಡುಬಿಟ್ಟಿರುವ ಪಕ್ಷದ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಹಾಗು ಸ್ಥಳೀಯರಾದ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಪ್ರಮುಖರಾದ ಪರಮೇಶ್ವರಚಾರ್, ಎನ್.ಪಿ ಜೋಸೆಫ್, ಇಬ್ರಾಹಿಂ ಖಾನ್, ರಮೇಶ್, ಬಸವಕುಮಾರ್, ಪರಮೇಶ್ ನಾಯ್ಕ  ಸೇರಿದಂತೆ ಇನ್ನಿತರರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.  
       
    

      ಎಸ್‌ಡಿಪಿಐ ಅಭ್ಯರ್ಥಿಗಳು:
   ಮೊದಲ ಬಾರಿಗೆ ನಗರಸಭೆ ಚುನಾವಣೆಗೆ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ೩ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ವಾರ್ಡ್ ನಂ.೫ರಲ್ಲಿ ನಸೀಮಾ ಖಾನಂ, ವಾರ್ಡ್ ನಂ. ೭ರಲ್ಲಿ ದೇವೇಂದ್ರ ಪಾಟೀಲ್ ಮತ್ತು ವಾರ್ಡ್ ನಂ.೮ರಲ್ಲಿ ಅರ್ಷದ್ ಖುರೇಶಿ ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಸಕ್ರಿಯವಾಗಿದ್ದು, ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಇದೀಗ ನಗರಸಭೆ ಚುನಾವಣೆಗೆ ಸ್ಪರ್ಧಿಸಿದ್ದು, ನಾಮಪತ್ರ ಸಲ್ಲಿಕೆ ನಂತರ ಕಾರ್ಯಕರ್ತರು ಹಳೇನಗರ ಭಾಗದ ವಿವಿಧೆಡೆ ರೋಡ್ ಶೋ ನಡೆಸುವ ಮೂಲಕ ಗಮನ ಸೆಳೆದರು.