Friday, April 23, 2021

ಸಮಾಜವಾದಿ ರಾಜಕಾರಣ ಬೆಂಬಲಿಸಿ : ಮಹಿಮಾ ಜೆ. ಪಟೇಲ್

ಜನತಾದಳ(ಸಂಯುಕ್ತ) ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಭದ್ರಾವತಿ ನಗರಸಭೆ  ೩೨ನೇ ವಾರ್ಡಿನ ಜೆಡಿಯು ಬೆಂಬಲಿತ ಅಭ್ಯರ್ಥಿ ದಿವ್ಯಶ್ರೀ ಶಶಿಕುಮಾರ್ ಗೌಡ ಪರವಾಗಿ ಮತಯಾಚನೆ ನಡೆಸಿದರು.
ಭದ್ರಾವತಿ, ಏ. ೨೩: ಸಮಾಜವಾದಿ ರಾಜಕಾರಣ ಹುಟ್ಟಿದ ಜಿಲ್ಲೆಯಲ್ಲಿ ಸಮಾಜ ವಾದಕ್ಕೆ ನೆಲೆ ಕಲ್ಪಿಸಿಕೊಟ್ಟ ನಗರ ಭದ್ರಾವತಿಯಾಗಿದ್ದು, ಇಂತಹ ನೆಲದಲ್ಲಿ ಪ್ರಸ್ತುತ ರಾಜಕಾರಣದಲ್ಲಿ ಸಮಾಜವಾದವನ್ನು ಎತ್ತಿ ಹಿಡಿಯಬೇಕೆಂಬ ಮನೋಭಾವನೆಯೊಂದಿಗೆ ನಗರಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಜನತಾದಳ(ಸಂಯುಕ್ತ) ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಮನವಿ ಮಾಡಿದರು.
    ಅವರು ಶುಕ್ರವಾರ ನಗರಸಭೆ  ೩೨ನೇ ವಾರ್ಡಿನ ಜೆಡಿಯು ಬೆಂಬಲಿತ ಅಭ್ಯರ್ಥಿ ದಿವ್ಯಶ್ರೀ ಶಶಿಕುಮಾರ್ ಗೌಡ ಪರವಾಗಿ ಮತಯಾಚನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ರಾಜಕಾರಣದಲ್ಲಿ ಸಮಾಜವಾದ ಉಳಿಯಬೇಕು. ಎಲ್ಲರೂ ಸಮಾನರು, ಎಲ್ಲರೂ ಸರ್ಕಾರದಲ್ಲಿ ಸಮಾನ ಭಾಗಿಗಳು, ಈ ನಿಟ್ಟಿನ ಪರಿಕಲ್ಪನೆಯಲ್ಲಿ ಪ್ರಾಮಾಣಿಕ, ಪರಿಶುದ್ಧ ರಾಜಕಾರಣಕ್ಕೆ ಮುನ್ನುಡಿ ಬರೆದ ಜಿಲ್ಲೆಯಲ್ಲಿ ಅಂದು ಭದ್ರಾವತಿ ವಿಧಾನಸಭಾ ಕ್ಷೇತ್ರದಿಂದ ಖುದ್ದೂಸ್ ಅನ್ವರ್‌ರವರು ಸ್ಪರ್ಧಿಸಿ ಆಯ್ಕೆಯಾಗಿ ಬಂದಿದ್ದರು. ಈ ಹಿನ್ನಲೆಯಲ್ಲಿ ಈ ನಗರದಲ್ಲಿ ಸಮಾಜವಾದ ರಾಜಕಾರಣದ ಪರಿಕಲ್ಪನೆ ಇಂದಿಗೂ ಜೀವಂತವಾಗಿ ಉಳಿದುಕೊಂಡಿದೆ ಎಂಬುದು ನನ್ನ ಆಶಯವಾಗಿದೆ.  ಸಮಾಜವಾದಿ ಗುಣಗಳನ್ನು ರೂಢಿಸಿಕೊಂಡಿರುವ ಪಕ್ಷದ ಶಶಿಕುಮಾರ್ ಗೌಡರವರು ಇದೀಗ ನಗರಸಭೆಗೆ ಪತ್ನಿ ದಿವ್ಯಶ್ರೀಯವರನ್ನು ಕಣಕ್ಕಿಳಿಸಿದ್ದು, ಇವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
     ವಾರ್ಡಿನ ಪ್ರಮುಖ ರಸ್ತೆಗಳಲ್ಲಿ ಪಟೇಲ್‌ರವರು ಕರಪತ್ರಗಳನ್ನು ವಿತರಿಸಿ ಮತಯಾಚನೆ ನಡೆಸಿದರು. ಅಭ್ಯರ್ಥಿ ದಿವ್ಯಶ್ರೀ, ಮುಖಂಡ ಶಶಿಕುಮಾರ್ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭದ್ರಾವತಿ ಭಯ ಮುಕ್ತವನ್ನಾಗಿಸುವುದು ಬಿಜೆಪಿ ಗುರಿ : ಕೆ.ಎಸ್ ಈಶ್ವರಪ್ಪ

ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಅಣ್ಣಾ ಡಿಎಂಕೆ ಪಕ್ಷ ನಗರಸಭೆ ಬೆಂಬಲಿಸುವ ದೃಢೀಕರಣ ಪತ್ರವನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ವೇಲಾಯುದನ್‌ರವರಿಂದ ಸ್ವೀಕರಿಸಿದರು.
     ಭದ್ರಾವತಿ, ಏ. ೨೩: ಭದ್ರಾವತಿಯನ್ನು  ಭಯ ಮುಕ್ತ ನಗರವನ್ನಾಗಿಸುವುದು  ಭಾರತೀಯ ಜನತಾ ಪಕ್ಷದ ಗುರಿಯಾಗಿದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
       ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ನಗರಸಭೆಯಲ್ಲಿ ಕೇವಲ ೨ ಜನ ಬಿಜೆಪಿ ಪಕ್ಷದ ಸದಸ್ಯರಿದ್ದರು. ಆದರೆ ಈ ಬಾರಿ ಸಂಪೂರ್ಣ ಬಹುಮತ ಪಡೆಯುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ. ನನ್ನನ್ನು ಒಳಗೊಂಡಂತೆ ಸಂಸದ ಬಿ.ವೈ ರಾಘವೇಂದ್ರ, ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್, ವಿಧಾನಸಭೆ ಸದಸ್ಯ ಕೆ.ಬಿ ಅಶೋಕ್‌ನಾಯ್ಕ್, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಎಸ್. ದತ್ತಾತ್ರಿ, ಗಿರೀಶ್ ಪಟೇಲ್ ಸೇರಿದಂತೆ ಇನ್ನಿತರನ್ನು ಒಳಗೊಂಡಿರುವ ತಂಡ ಈ ಬಾರಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದರು.
    ಎಲ್ಲಾ ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಕಳೆದ ೪೦ ದಿನಗಳಿಂದ ನಿರಂತರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ. ಎದುರಾಳಿಗಳು ಅವರ ರಾಜಕಾರಣ ಅವರು ಮಾಡಲಿ, ಇಲ್ಲಿನ ರಾಜಕಾರಣಿಗಳು ನಗರವನ್ನು ಭಯಭೀತರನ್ನಾಗಿಸಿದ್ದಾರೆ.  ಇಲ್ಲಿನ ಜನರಿಗೆ ಶಾಂತಿ ನೆಮ್ಮದಿ ಕಲ್ಪಿಸಿಕೊಡುವುದು ಬಿಜೆಪಿ ಪಕ್ಷದ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮದೇ ರೀತಿಯಲ್ಲಿ  ರಾಜಕಾರಣ ನಾವು ಮಾಡುತ್ತೇವೆ.  ಇಲ್ಲಿನ ಜನರು ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವ ವಿಶ್ವಾಸವಿದೆ.  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳು ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಲಿವೆ. ಈ ಹಿನ್ನಲೆಯಲ್ಲಿ ಈ ಬಾರಿ ಸಂಪೂರ್ಣ ಬಹುಮತ ಪಡೆಯುವ ವಿಶ್ವಾಸವಿದೆ ಎಂದರು.  
    ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರೀತಿಯಲ್ಲೂ ರಾಜಕಾರಣ ಮಾಡಿಲ್ಲ. ವಿನಾಕಾರಣ ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಬಿಜೆಪಿ ಜಿಲ್ಲಾಧ್ಯಕ್ಷ ಡಿ. ಟಿ ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಶಿವರಾಜ್, ಎಸ್ ದತ್ತಾತ್ರಿ, ಗಿರೀಶ್ ಪಟೇಲ್, ಮಂಗೋಟೆ ರುದ್ರೇಶ್, ರಾಮಣ್ಣ, ತೀರ್ಥೇಶ್, ಅವಿನಾಶ್,  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
      ಅಣ್ಣಾ ಡಿಎಂಕೆ ಬೆಂಬಲ:
    ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತ ನೇತೃತ್ವದ ಅಣ್ಣಾ ಡಿಎಂಕೆ ಪಕ್ಷ ಈ ಬಾರಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬೆಂಬಲಿಸುವುದಾಗಿ ಘೋಷಿಸಿದೆ.
ಬಿಜೆಪಿ ಪಕ್ಷ ಬೆಂಬಲಿಸುವ ದೃಢೀಕರಣ ಪತ್ರವನ್ನು ಕೆ.ಎಸ್ ಈಶ್ವರಪ್ಪನವರಿಗೆ ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ವೇಲಾಯುದನ್ ನೀಡುವ ಮೂಲಕ ಪಕ್ಷದ ಅಧ್ಯಕ್ಷರ ಆದೇಶದ ಮೇರೆಗೆ ಬೆಂಬಲ ಘೋಷಿಸಲಾಗುತ್ತಿದೆ ಎಂದು ತಿಳಿಸಿದರು.
    ನಗರಸಭೆ ಚುನಾವಣೆಯಲ್ಲಿ ಅಣ್ಣಾ ಡಿಎಂಕೆ ಬೆಂಬಲ ನೀಡುತ್ತಿರುವುದು ಸ್ವಾಗತಾರ್ಹವಾಗಿದ್ದು, ಬಿಜೆಪಿ ಪಕ್ಷ ಬೆಂಬಲಿಸುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಈಶ್ವರಪ್ಪ ತಿಳಿಸಿದರು.

Thursday, April 22, 2021

ನಿರ್ದೇಶಕರ ಚುನಾವಣೆ ಮುಂದೂಡಿಕೆ

    ಭದ್ರಾವತಿ, ಏ. ೨೩:  ಹಳೇನಗರದ ಶ್ರೀ ಬಸವೇಶ್ವರ ವೃತ್ತದ ಬಳಿ ಇರುವ ಶ್ರೀ ಕನ್ಯಕಾ ಪರಮೇಶ್ವರಿ ವಿವಿದೋದ್ದೇಶ ಸಹಕಾರ ಸಂಘದ ತೆರವಾಗಿದ್ದ ಒಂದು ನಿರ್ದೇಶಕರ ಸ್ಥಾನಕ್ಕೆ ಏ. ೨೪ ರಂದು ನಡೆಯಬೇಕಿದ್ದ ಚುನಾವಣೆಯನ್ನು ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರದ ಅದೇಶದಂತೆ ಮುಂದೂಡಲಾಗಿದೆ.
    ಮುಂದೂಡಿದ ಚುನಾವಣೆಯು ಮೇ.೩ರ ಸೋಮವಾರ ವಾಸವಿ ಮಹಲ್‌ನಲ್ಲಿ ನಡೆಯಲಿದೆ. ಸದಸ್ಯರು ತಪ್ಪದೇ ಚುನಾವಣೆಯಲ್ಲಿ ಭಾಗವಹಿಸುವ ಮೂಲಕ ಸಹಕರಿಸುವಂತೆ ಕೋರಲಾಗಿದೆ.  

ವಿವಿಧ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳಿಂದ ಅಬ್ಬರದ ಪ್ರಚಾರ

ಭದ್ರಾವತಿ ನಗರಸಭೆ ವಾರ್ಡ್ ನಂ.೨೪ರ ಆಮ್ ಆದ್ಮಿ ಪಾರ್ಟಿ ಅಧಿಕೃತ ಅಭ್ಯರ್ಥಿ ಎ. ಮಸ್ತಾನ್ ಗುರುವಾರ ಮತದಾರರಿಗೆ ಪಕ್ಷದ ಮಾಸ್ಕ್‌ಗಳನ್ನು ವಿತರಿಸುವ ಮೂಲಕ ಮತಯಾಚನೆ ನಡೆಸಿದರು.
    ಭದ್ರಾವತಿ, ಏ. ೨೨: ಕೋವಿಡ್-೧೯ರ ನಡುವೆಯೂ ನಗರಸಭೆ ೩೫ ವಾರ್ಡ್‌ಗಳಲ್ಲಿ ಗುರುವಾರ ಸಹ ಅಭ್ಯರ್ಥಿಗಳಿಂದ ಪ್ರಚಾರದ ಭರಾಟೆ ಕಂಡು ಬಂದಿತು. ವಿಶೇಷವಾಗಿ ವಾರ್ಡ್ ನಂ.೨೪ರ ಆಮ್ ಆದ್ಮಿ ಪಾರ್ಟಿ ಅಧಿಕೃತ ಅಭ್ಯರ್ಥಿ ಎ. ಮಸ್ತಾನ್ ಮತದಾರರಿಗೆ ಪಕ್ಷದ ಮಾಸ್ಕ್‌ಗಳನ್ನು ವಿತರಿಸುವ ಮೂಲಕ ಮತಯಾಚನೆ ನಡೆಸಿದರು.
    ಬೊಮ್ಮನಕಟ್ಟೆ ವ್ಯಾಪ್ತಿಯನ್ನು ಒಳಗೊಂಡಿರುವ ವಾರ್ಡ್ ನಂ. ೨೪ರಲ್ಲಿ ಒಟ್ಟು ೩೦೬೯ ಮತದಾರರಿದ್ದು,  ಅರ್ಧದಷ್ಟು ಮುಸ್ಲಿಂ ಮತದಾರರಿದ್ದಾರೆ.  ಉಳಿದಂತೆ ಹಿಂದೂ ಹಾಗು ಕ್ರಿಶ್ಚಿಯನ್ ಮತದಾರರಿದ್ದು, ಒಟ್ಟು ೯ ಮಂದಿ ಚುನಾವಣಾ ಕಣದಲ್ಲಿದ್ದಾರೆ. ಪ್ರಮುಖವಾಗಿ ಕಾಂಗ್ರೆಸ್ ಪಕ್ಷದಿಂದ ಹಾಲಿ ನಗರಸಭಾ ಸದಸ್ಯ ದಿವಂಗತ ಮೆಹಬೂಬ್ ಸಾಬ್‌ರವರ ಪುತ್ರ ಎಸ್.ಎಂ ಅಬ್ದುಲ್ ಮಜೀದ್, ಜೆಡಿಎಸ್ ಪಕ್ಷದಿಂದ ಸಾಮಾನ್ಯ ಕಾರ್ಯಕರ್ತ ಕೋಟೇಶ್ವರರಾವ್(ಕೋಟಿ), ಬಿಜೆಪಿ ಪಕ್ಷದಿಂದ ಎಸ್.ಸಿ ಮೋರ್ಚಾ ತಾಲೂಕು ಅಧ್ಯಕ್ಷ ಪಿ. ಗಣೇಶ್‌ರಾವ್, ಆಮ್ ಆದ್ಮಿ ಪಾರ್ಟಿಯಿಂದ ಯುವ ಮುಖಂಡ ಎ. ಮಸ್ತಾನ್, ವಿಶ್ವ ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಶೇಖ್ ಹುಸೇನ್ ಸಾಬ್, ಖಾಜಾ ಮೈನುದ್ದೀನ್ ಸೇರಿದಂತೆ ೫ ಮಂದಿ ಪಕ್ಷೇತರ ಅಭ್ಯರ್ಥಿಗಳಿದ್ದು, ಒಟ್ಟು ೯ ಮಂದಿ ಕಣದಲ್ಲಿದ್ದಾರೆ.
     ಈ ವಾರ್ಡ್‌ನಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಬೆಂಬಲಿಗರಾಗಿದ್ದ ಮೆಹಬೂಬ್ ಸಾಬ್ ೩ ಬಾರಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಅವರ ನಿಧನದ ನಂತರ  ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಅಭ್ಯರ್ಥಿಗಳು ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಬಿರುಸಿನಿಂದ ಮತಯಾಚನೆ ನಡೆಸುತ್ತಿದ್ದಾರೆ.
     ಹೊಸ ಬುಳ್ಳಾಪುರ, ಹುಡ್ಕೋ ಕಾಲೋನಿ ಒಳಗೊಂಡಿರುವ ವಾರ್ಡ್ ನಂ.೨೫ರಲ್ಲಿ ಒಟ್ಟು ೩೭೭೬ ಮತದಾರರಿದ್ದು, ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.  ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿರುವ ಅಭ್ಯರ್ಥಿಗಳು ಈ ಬಾರಿ ಕಣದಲ್ಲಿದ್ದು, ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹಾಲಿ ನಗರಸಭಾ ಸದಸ್ಯ ಆಂಜನಪ್ಪ ಕಣದಲ್ಲಿದ್ದು, ಜೆಡಿಎಸ್ ಪಕ್ಷದಿಂದ ಸ್ಥಳೀಯ ಮುಖಂಡ ಉದಯ್‌ಕುಮಾರ್, ಬಿಜೆಪಿ ಪಕ್ಷದಿಂದ ತಾಲೂಕು ಬಿಜೆಪಿ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಕೆ. ಚಂದ್ರು, ಪಕ್ಷೇತರ ಅಭ್ಯರ್ಥಿಯಾಗಿ ಸ್ನೇಹಜೀವಿ ಬಳಗದ ಸದಸ್ಯ, ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಸುರೇಶ್ ಸೇರಿದಂತೆ ಒಟ್ಟು ೫ ಮಂದಿ ಕಣದಲ್ಲಿದ್ದಾರೆ. ಈ ಪೈಕಿ ಉದಯ್‌ಕುಮಾರ್, ಕೆ. ಚಂದ್ರು ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದು, ಅಭ್ಯರ್ಥಿಗಳಿಂದ ಅಬ್ಬರದ ಪ್ರಚಾರ ನಡೆಯುತ್ತಿದೆ. ಕಳೆದ ಬಾರಿ ಈ ವಾರ್ಡ್‌ನಲ್ಲಿ ಜೆಡಿಎಸ್ ಪಕ್ಷದ ಎಂ. ರಾಜು ಗೆಲುವು ಸಾಧಿಸಿದ್ದರು.
     ಸಂಪೂರ್ಣವಾಗಿ ವಿಐಎಸ್‌ಎಲ್ ಕಾರ್ಖಾನೆ ವಸತಿಗೃಹಗಳನ್ನು ಒಳಗೊಂಡಿರುವ ಬಾಲಭಾರತಿ-ಬೆಣ್ಣೆ ಕೃಷ್ಣ ಸರ್ಕಲ್ ವ್ಯಾಪ್ತಿಯ ವಾರ್ಡ್ ನಂ.೨೬ರಲ್ಲಿ ಒಟ್ಟು ೨೯೯೫ ಮತದಾರರಿದ್ದು, ಎಲ್ಲಾ ಜಾತಿಯ ಕಾರ್ಮಿಕ ಕುಟುಂಬಗಳು ಇಲ್ಲಿ ನೆಲೆನಿಂತಿವೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ನೌಕರ, ಛಲವಾದಿ ಸಮಾಜದ ಮುಖಂಡ ಎಸ್.ಎಸ್ ಭೈರಪ್ಪನವರ ಪತ್ನಿ ಬಿ.ಪಿ ಸರ್ವಮಂಗಳ ಕಣದಲ್ಲಿದ್ದಾರೆ. ಬಿಜೆಪಿಯಿಂದ ನಾಗಲಕ್ಷ್ಮೀ, ಜೆಡಿಎಸ್ ಪಕ್ಷದಿಂದ ಪರಮೇಶ್ವರಿ, ಆಮ್ ಆದ್ಮಿ ಪಾರ್ಟಿಯಿಂದ ಎನ್. ಶಿಲ್ಪಾ , ಪಕ್ಷೇತರ ಅಭ್ಯರ್ಥಿಗಳಾಗಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ, ಯುವ ಮುಖಂಡ ಎಸ್.ಕೆ ಸುಧೀಂದ್ರರವರ ಪತ್ನಿ ರೇಷ್ಮಾ, ಸರಸ್ವತಮ್ಮ ಸೇರಿದಂತೆ ಒಟ್ಟು ೭ ಮಂದಿ ಕಣದಲ್ಲಿದ್ದಾರೆ. ಕಳೆದ ಬಾರಿ ಈ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಆಂಜನಪ್ಪ ಗೆಲುವು ಸಾಧಿಸಿದ್ದರು. ಅಭ್ಯರ್ಥಿಗಳಿಂದ ಅಬ್ಬರದ ಪ್ರಚಾರ ನಡೆಯುತ್ತಿದ್ದು, ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾರೆ.
    ತಮಿಳು ಸಮುದಾಯದವರು, ಕೂಲಿ ಕಾರ್ಮಿಕರು ಹೆಚ್ಚಾಗಿರುವ ಆಂಜನೇಯ ಅಗ್ರಹಾರ-ಕೂಲಿಬ್ಲಾಕ್ ವ್ಯಾಪ್ತಿಯನ್ನು ಒಳಗೊಂಡಿರುವ ವಾರ್ಡ್ ನಂ.೨೭ರಲ್ಲಿ ಒಟ್ಟು ೩೭೭೯ ಮತದಾರರಿದ್ದಾರೆ. ಪ್ರಮುಖವಾಗಿ ಕಾಂಗ್ರೆಸ್ ಪಕ್ಷದಿಂದ ಯುವ ಮುಖಂಡ ದಾಸ್‌ರವರ ಸಹೋದರಿ ಲಕ್ಷ್ಮೀವೇಲು, ಬಿಜೆಪಿ ಪಕ್ಷದಿಂದ ಶೈಲಾ ರವಿಕುಮಾರ್, ಜೆಡಿಎಸ್‌ನಿಂದ ಹಾಲಿ ಸದಸ್ಯ ಗುಣಶೇಖರ್‌ರವರ ಪತ್ನಿ ರೂಪಾವತಿ ಹಾಗು ಇಬ್ಬರು ಪಕ್ಷೇತರರು ಸೇರಿದಂತೆ ೫ ಮಂದಿ ಕಣದಲ್ಲಿದ್ದಾರೆ. ಈ ವಾರ್ಡ್‌ನಲ್ಲೂ ಅಭ್ಯರ್ಥಿಗಳಿಂದ ಅಬ್ಬರದ ಪ್ರಚಾರ ನಡೆಯುತ್ತಿದೆ.
      ಸಚಿವ ಕೆ.ಎಸ್ ಈಶ್ವರಪ್ಪ ಮತಯಾಚನೆ :
    ಸಚಿವ ಕೆ.ಎಸ್ ಈಶ್ವರಪ್ಪ ಗುರುವಾರ ಬೆಳಿಗ್ಗೆ ವಾರ್ಡ್ ೧೪ರ ಬಿಜೆಪಿ ಅಭ್ಯರ್ಥಿ ಜಿ. ಆನಂದಕುಮಾರ್ ಪರವಾಗಿ ಮತಯಾಚನೆ ನಡೆಸಿದರು. ವಾರ್ಡ್ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.
    ಪಕ್ಷದ ಪ್ರಮುಖರಾದ ಬಿ.ಕೆ ಶ್ರೀನಾಥ್, ನಾಗರಾಜ್, ಸುಬ್ರಮಣ್ಯ, ಶೇಖರಪ್ಪ, ಯಲ್ಲಪ್ಪ, ದುಗ್ಗೇಶ್, ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕೆ.ಎಸ್ ಈಶ್ವರಪ್ಪರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.



ಭದ್ರಾವತಿ ನಗರಸಭೆ ವಾರ್ಡ್ ನಂ.೧೪ರ ಬಿಜೆಪಿ ಅಭ್ಯರ್ಥಿಪರ ಮತಯಾಚನೆಗೆ ಆಗಮಿಸಿದ್ದ ಸಚಿವ ಕೆ.ಎಸ್ ಈಶ್ವರಪ್ಪರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.



Wednesday, April 21, 2021

ಸಂಸದ ಬಿ.ವೈ ರಾಘವೇಂದ್ರ ಮತಯಾಚನೆ :

ಭದ್ರಾವತಿ, ಏ. ೨೧: ಸಂಸದ ಬಿ.ವೈ ರಾಘವೇಂದ್ರ ಬುಧವಾರ ಸಂಜೆ ನಗರಸಭೆ ೪ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಅನುಪಮ ಪರವಾಗಿ ಮತಯಾಚನೆ ನಡೆಸಿದರು.
  ಅನುಪಮ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನೇಶ್ ಪತ್ನಿಯಾಗಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ಸಂಬಂಧಿ ಎಚ್. ವಿದ್ಯಾ ಎದುರು ಸ್ಪರ್ಧಿಸಿದ್ದಾರೆ. ಮತಯಾಚನೆ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.



ನಗರಸಭೆ ಚುನಾವಣೆ : ಅಪ್ಪ-ಮಗ ಸ್ಪರ್ಧೆ ಸೇರಿದಂತೆ ಹಲವು ವಿಶೇಷತೆ

ಬಿ.ಕೆ ಮೋಹನ್ ೨೨ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ


ಬಿ.ಎಂ ಮಂಜುನಾಥ್ ೭ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ




ವಿ. ಕದಿರೇಶ್ ೧೬ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ



ಕೆ. ಸುದೀಪ್‌ಕುಮಾರ್ ೧೨ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ



* ಅನಂತಕುಮಾರ್
    ಭದ್ರಾವತಿ, ಏ. ೨೧: ಈ ಬಾರಿ ನಗರಸಭೆ ಚುನಾವಣೆ ಹಲವು ವಿಶೇಷತೆಯಿಂದ ಕೂಡಿದ್ದು, ಅಪ್ಪ-ಮಗ ಸ್ಪರ್ಧೆ ಒಂದೆಡೆಯಾದರೆ, ಅಲ್ಪ ಸಂಖ್ಯಾತರು, ಮಹಿಳೆಯರಿಗೆ  ಹೆಚ್ಚಿನ ಅವಕಾಶ, ನಾನಾ ತಂತ್ರಗಾರಿಕೆ ಮೂಲಕ ಹಾಲಿ ಸದಸ್ಯರಿಂದ ಪುನಃ ಪೈಪೋಟಿ ಹೀಗೆ ಹಲವು ವಿಶೇಷತೆಗಳು ಕಂಡು ಬರುತ್ತಿವೆ.
    ಈ ಬಾರಿ ನಗರಸಭೆ ೩೫ ವಾರ್ಡ್‌ಗಳ ಚುನಾವಣಾ ಕಣದಲ್ಲಿ ಒಟ್ಟು ೧೭೩ ಅಭ್ಯರ್ಥಿಗಳಿದ್ದು,   ಕಾಂಗ್ರೆಸ್ ಪಕ್ಷದ ೨೯ನೇ ವಾರ್ಡಿನ ಮಹಿಳಾ ಅಭ್ಯರ್ಥಿ ಕಳೆದ ೩ ದಿನಗಳ ಹಿಂದೆ ಹೃದಯಾಘಾತದಿಂದ ನಿಧನ ಹೊಂದಿದ್ದು,  ಈ ನಡುವೆ ೧೭ನೇ ವಾರ್ಡಿನ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಡಿ.ಎನ್ ರವಿಕುಮಾರ್ ನಾಮಪತ್ರ ಹಿಂಪಡೆದುಕೊಂಡಿದ್ದಾರೆ.
        ಅಪ್ಪ-ಮಕ್ಕಳ ಸ್ಪರ್ಧೆ :
    ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ವಾರ್ಡ್ ನಂ.೨೨ರಿಂದ ಸ್ಪರ್ಧಿಸಿದ್ದಾರೆ. ಈ ವಾರ್ಡ್‌ನಲ್ಲಿ ಈ ಹಿಂದೆ ೨ ಬಾರಿ ನಗರಸಭೆ ಸದಸ್ಯರಾಗಿದ್ದ ವೆಂಕಟಯ್ಯ ಈ ಬಾರಿ ಬಿ.ಕೆ ಮೋಹನ್ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಬಿ.ಕೆ ಮೋಹನ್‌ರವರ ಪುತ್ರ ಬಿ.ಎಂ ಮಂಜುನಾಥ್ ನಗರಸಭೆ ೭ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಬಿ.ಎಂ ಮಂಜುನಾಥ್ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ. ಈ ಹಿಂದೆ ಈ ವಾರ್ಡಿನ ಸದಸ್ಯರಾಗಿದ್ದ ಟಿಪ್ಪು ಸುಲ್ತಾನ್ ಮಂಜುನಾಥ್ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.
     ಬಿಜೆಪಿ ಪಕ್ಷದ ಹಿರಿಯ ಮುಖಂಡ ವಿ. ಕದಿರೇಶ್ ೭ನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದು, ೩ ಬಾರಿ ಪುರಸಭಾ ಸದಸ್ಯರಾಗಿ, ೩ ಬಾರಿ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಒಂದು ಬಾರಿ ನಗರಸಭೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಬಾರಿ ೧೬ನೇ ವಾರ್ಡಿನ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದು, ಗೆಲುವಿಗಾಗಿ ಪೈಪೋಟಿಗೆ ಮುಂದಾಗಿದ್ದಾರೆ. ಸಂಘ ಪರಿವಾರದ ಮೂಲಕ ರಾಜಕೀಯ ಪ್ರವೇಶಿರುವ ಕದಿರೇಶ್ ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ, ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ ವಿನಾಯಕ ಸೇವಾ ಸಮಿತಿ ಅಧ್ಯಕ್ಷರಾಗಿ, ಸೂಡಾ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪುತ್ರ ಕೆ. ಸುದೀಪ್‌ಕುಮಾರ್ ಈ ಬಾರಿ ೧೨ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಪತ್ನಿ ರೇಣುಕಾರನ್ನು ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ೧೫ನೇ ವಾರ್ಡ್‌ನಲ್ಲಿ ಕಣಕ್ಕಿಳಿಸಿ ಗೆಲುವು ಸಾಧಿಸಿದ್ದರು.
        ಜೆಡಿಎಸ್ ಮತ್ತು ಎಎಪಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನ :
    ೩೫ ವಾರ್ಡ್‌ಗಳ ಪೈಕಿ ಶೇ.೫೦ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಜೆಡಿಎಸ್ ಮತ್ತು ಎಎಪಿ ಪಕ್ಷಗಳು ಬಿಟ್ಟುಕೊಟ್ಟಿವೆ. ಜೆಡಿಎಸ್-೧೯, ಬಿಜೆಪಿ-೧೮, ಕಾಂಗ್ರೆಸ್-೧೭(ಓರ್ವ ಮಹಿಳಾ ಅಭ್ಯರ್ಥಿ ನಿಧನ) ಹಾಗು ಎಎಪಿ-೪(ಒಟ್ಟು ೭ ಸ್ಥಾನಗಳಲ್ಲಿ ಸ್ಪರ್ಧೆ) ಸ್ಥಾನಗಳಲ್ಲಿ ಮಹಿಳೆಯರು ಸ್ಪರ್ಧಿಸಿದ್ದಾರೆ.  ಸರ್ಕಾರ ನಿಗದಿಪಡಿಸಿರುವ ಮೀಸಲಾತಿಕ್ಕಿಂತ ಹೆಚ್ಚಿನ ಸ್ಥಾನಗಳು ಮಹಿಳೆಯರಿಗೆ ಲಭಿಸಿವೆ.
      ಗಮನ ಸೆಳೆಯುತ್ತಿರುವ ಎಎಪಿ:
     ಮೊದಲ ಬಾರಿಗೆ ನಗರಸಭೆ ಚುನಾವಣೆಗೆ ಸ್ಪರ್ಧಿಸಿರುವ ಆಮ್ ಆದ್ಮಿ ಪಾರ್ಟಿ ಒಟ್ಟು ೭ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪೈಕಿ ೪ ಜನ ಮುಸ್ಲಿಂ ಅಭ್ಯರ್ಥಿಗಳಿದ್ದಾರೆ. ಮೊದಲ ಬಾರಿಗೆ ಖಾತೆ ತೆರೆಯುವ ನಿಟ್ಟಿನಲ್ಲಿ ಪಕ್ಷ ಹೆಚ್ಚಿನ ಗಮನ ಹರಿಸುತ್ತಿದ್ದು, ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಹಾಗು ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಪರಮೇಶ್ವರಚಾರ್ ಸೇರಿದಂತೆ ಇನ್ನಿತರರ ನೇತೃತ್ವದಲ್ಲಿ ಪ್ರಚಾರ ಕಾರ್ಯ ಭರದಿಂದ ಕೈಗೊಳ್ಳಲಾಗುತ್ತಿದೆ.
      ಹಾಲಿ ಸದಸ್ಯರಿಂದ ನಾನಾ ರೀತಿಯ ತಂತ್ರಗಾರಿಕೆ:
    ಕೆಲವು ವಾರ್ಡ್‌ಗಳಲ್ಲಿ ಹಿಂದಿನ ಮೀಸಲಾತಿ ಮರುಕಳುಹಿಸಿರುವ ಹಿನ್ನಲೆಯಲ್ಲಿ ಹಾಲಿ ಸದಸ್ಯರು ಪುನಃ ಸ್ಪರ್ಧಿಸಿದ್ದು, ಇನ್ನೂ ಕೆಲವು ಹಾಲಿ ಸದಸ್ಯರು ತಮಗೆ ಅನ್ವಯವಾಗುವ ಮೀಸಲಾತಿ ಇರುವ ವಾರ್ಡ್‌ಗಳಿಗೆ ವಲಸೆ ಬಂದು ಸ್ಪರ್ಧಿಸಿದ್ದಾರೆ.  ಮತ್ತೆ ಕೆಲವು ಹಾಲಿ ಸದಸ್ಯರು ಮಹಿಳಾ ಮೀಸಲಾತಿ ನಿಗದಿಯಾದ ವಾರ್ಡ್‌ಗಳಲ್ಲಿ  ತಮ್ಮ ತಮ್ಮ ಪತ್ನಿಯರು ಹಾಗು ಕುಟುಂಬ ವರ್ಗದವರನ್ನು ಕಣಕ್ಕಿಳಿಸಿದ್ದಾರೆ.
     ಕಾಂಗ್ರೆಸ್ ಪಕ್ಷದಿಂದ ಹಾಲಿ ಸದಸ್ಯರಾದ ಎಂ. ಮಣಿ ೧೧ನೇ ವಾರ್ಡ್, ಟಿಪ್ಪು ಸುಲ್ತಾನ್ ೧೭ನೇ ವಾರ್ಡ್, ಎಸ್. ಲಕ್ಷ್ಮೀದೇವಿ ೨೦ನೇ ವಾರ್ಡ್, ಆಂಜನಪ್ಪ ೨೫ನೇ ವಾರ್ಡ್, ಜೆಡಿಎಸ್ ಪಕ್ಷದಿಂದ ಹಾಲಿ ಸದಸ್ಯರಾದ ಆರ್. ಕರುಣಾಮೂರ್ತಿ, ವಿಶಾಲಾಕ್ಷಿ ಮತ್ತು ರವಿಕುಮಾರ್ ಹಾಗು ಬಿಜೆಪಿ ಪಕ್ಷದಿಂದ ಹಾಲಿ ಸದಸ್ಯರಾದ ವಿ. ಕದಿರೇಶ್ ಮತ್ತು ಜಿ. ಆನಂದಕುಮಾರ್ ಸ್ಪರ್ಧಿಸಿದ್ದಾರೆ.
      ಸ್ಪರ್ಧೆಗೆ ಅವಕಾಶ ಸಿಗದ ಹಾಲಿ ಸದಸ್ಯರಾದ ಮುರ್ತುಜಾ ಖಾನ್ ತಮ್ಮ ಪತ್ನಿ ತಬಸುಮ್ ಸುಲ್ತಾನ್, ಶಿವರಾಜ್ ತಮ್ಮ ಪತ್ನಿ ಎಂ. ರೇಣುಕಾ, ಬದರಿನಾರಾಯಣ ತಮ್ಮ ಪತ್ನಿ ಪ್ರೇಮಾ, ಗುಣಶೇಖರ್ ತಮ್ಮ ಪತ್ನಿ ರೂಪಾವತಿ, ಅನಿಲ್‌ಕುಮಾರ್ ಆರ್. ನಾಗರತ್ನ, ರೇಣುಕಾ ತಮ್ಮ ಪತಿ ಸುದೀಪ್‌ಕುಮಾರನ್ನು ಕಣಕ್ಕಿಳಿಸಿದ್ದಾರೆ.  ಬಿಜೆಪಿಯಲ್ಲಿ ಬಹುತೇಕ ಹೊಸಬರಿಗೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಹಾಲಿ ಮತ್ತು ಮಾಜಿ ಸದಸ್ಯರಿಗೆ ಅವಕಾಶ ನೀಡಲಾಗಿದೆ.

ನಗರಸಭೆ ಚುನಾವಣೆ : ವಿವಿಧ ಪಕ್ಷಗಳ ಪ್ರಮುಖರಿಂದ ಮತಯಾಚನೆ

ಭದ್ರಾವತಿ ನಗರಸಭೆ ೧೨ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಕೆ. ಸುದೀಪ್‌ಕುಮಾರ್ ಬುಧವಾರ ಬೆಳಿಗ್ಗೆ ಮತಯಾಚನೆ ನಡೆಸಿದರು.
   ಭದ್ರಾವತಿ, ಏ. ೨೧: ನಗರಸಭೆ ಚುನಾವಣೆ ವಿವಿಧೆಡೆ ಅಭ್ಯರ್ಥಿಗಳಿಂದ ಪ್ರಚಾರ ಕಾರ್ಯ ಬಿರುಸಿನಿಂದ ನಡೆಯುತ್ತಿದ್ದು, ಅಭ್ಯರ್ಥಿಗಳು ಖುದ್ದಾಗಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾರೆ. ಈ ಬಾರಿ ಪ್ರಚಾರದಲ್ಲಿ  ಧ್ವನಿವರ್ಧಕ ಮೂಲಕ ಮತಯಾಚನೆ ಹೆಚ್ಚಾಗಿ ಕಂಡು ಬರುತ್ತಿಲ್ಲ. ಅಲ್ಲದೆ ಕೋವಿಡ್ ಹಿನ್ನಲೆಯಲ್ಲಿ ಬಹುತೇಕ ಅಭ್ಯರ್ಥಿಗಳು ಯಾವುದೇ ಅಬ್ಬರದ ಪ್ರಚಾರವಿಲ್ಲದೆ ಸರಳವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
     ಬುಧವಾರ ಬೆಳಿಗ್ಗೆ ನಗರಸಭೆ ೧೨ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಕೆ. ಸುದೀಪ್‌ಕುಮಾರ್ ಪಕ್ಷದ ಕಾರ್ಯಕರ್ತರು ಹಾಗು ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು. ಸುದೀಪ್‌ಕುಮಾರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದು, ಅಲ್ಲದೆ ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಹಾಗು ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.


      ಇದೆ ರೀತಿ ಮೊದಲ ಬಾರಿಗೆ ನಗರಸಭೆ ಚುನಾವಣೆಗೆ ೧೨ನೇ ವಾರ್ಡಿನ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ಮಂಡಲ ಅಧ್ಯಕ್ಷ ಎಂ. ಪ್ರಭಾಕರ ಸ್ಪರ್ಧಿಸಿದ್ದು, ಇವರ ಸಹ ಬುಧವಾರ ಬೆಳಿಗ್ಗೆ ಕಾರ್ಯಕರ್ತರು ಹಾಗು ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು. ಪ್ರಭಾಕರ್ ತಾಲೂಕು ದೇವಾಂಗ ಸಮಾಜ ಹಾಗು ಶ್ರೀ ಬನಶಂಕರಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಆರಂಭದಿಂದಲೂ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ.
       ಎ. ಪಶುಪತಿ ೧೨ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿಯಾಗಿದ್ದು, ಇವರು ಸಹ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆರಂಭದಿಂದಲೂ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ.
       ಮಂಗಳವಾರ ಸಂಜೆ ಸಂಸದ ಬಿ.ವೈ. ರಾಘವೇಂದ್ರ, ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ ಅಶೋಕ್‌ನಾಯ್ಕ ಬಿಜೆಪಿ ಪಕ್ಷದ ೩ನೇ ವಾರ್ಡ್ ಅಭ್ಯರ್ಥಿ ಜೆ. ನಕುಲ್ ಪರವಾಗಿ ಮತಯಾಚನೆ ನಡೆಸಿದರು. ವಾರ್ಡ್ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಬುಧವಾರ ಅಭ್ಯರ್ಥಿಪರವಾಗಿ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ ಮತಯಾಚನೆ ನಡೆಸಿದರು.


     ಇದೆ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಜಾರ್ಜ್ ಬುಧವಾರ ಬೆಳಿಗ್ಗೆಯಿಂದ ಕಾರ್ಯಕರ್ತರು ಹಾಗು ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.