Sunday, July 11, 2021

ಬಿ.ವೈ ಗೋವಿಂದ ನಿಧನ

ಬಿ.ವೈ ಗೋವಿಂದ
   ಭದ್ರಾವತಿ, ಜು. ೧೧: ಗಾಂಧಿನಗರದ ನಿವಾಸಿ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಬಿ.ವೈ ಗೋವಿಂದ ಭಾನುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗು ಮೊಮ್ಮಕ್ಕಳನ್ನು ಹೊಂದಿದ್ದರು. ಬಿ.ವೈ ಗೋವಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿಯಾಗಿ ಹಾಗು ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಮೃತರ ನಿಧನಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎನ್. ಕೃಷ್ಣಪ್ಪ ಸಂತಾಪ ಸೂಚಿಸಿದ್ದಾರೆ.

ಸಮಾಜದಲ್ಲಿ ಪತ್ರಕರ್ತರ ಸೇವೆ ಅಪಾರ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ಹಳೇನಗರದ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪತ್ರಕರ್ತರ ದಿನಾಚರಣೆ ಹಾಗು ಪತ್ರಿಕಾಭವನದ ಮುಂದುವರೆದ ಕಾಮಗಾರಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಬದರಿನಾರಾಯಣ ಶ್ರೇಷ್ಠಿ ದಂಪತಿಯನ್ನು ಸನ್ಮಾಸಿ ಗೌರವಿಸಲಾಯಿತು.
    ಭದ್ರಾವತಿ, ಜು. ೧೧: ಪತ್ರಕರ್ತರು ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆ ಅಪಾರವಾಗಿದ್ದು, ಪತ್ರಕರ್ತರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಭಾನುವಾರ ಹಳೇನಗರದ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಕರ್ತರ ದಿನಾಚರಣೆ ಹಾಗು ಪತ್ರಿಕಾಭವನದ ಮುಂದುವರೆದ ಕಾಮಗಾರಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
     ಎಲ್ಲರಿಗೂ ಸಮಾಜದ ಪ್ರತಿಯೊಂದು ಮಾಹಿತಿಗಳು ತಲುಪಬೇಕಾದರೆ ಪತ್ರಕರ್ತರ ಅವಶ್ಯಕತೆ ಅನಿವಾರ್ಯವಾಗಿದೆ. ಸಮಾಜದಲ್ಲಿನ ಒಳಿತು, ಕೆಡಕು ಎಲ್ಲವನ್ನು ತಿಳಿಸಿಕೊಡುವ ಜೊತೆಗೆ ಪತ್ರಕರ್ತರು ಸಮಾಜದ ಸ್ವಾರ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಸಮಾಜದಲ್ಲಿ ಪ್ರತಿಕೆಗಳು ಹಾಗು ಪತ್ರಕರ್ತರು ಅನುಭವಿಸುತ್ತಿರುವ ಸಂಕಷ್ಟಗಳು ಬಹಳಷ್ಟಿವೆ. ಹಲವಾರು ಸಂಕಷ್ಟಗಳ ನಡುವೆಯೂ ಪತ್ರಕರ್ತರು ತಮ್ಮ ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಪತ್ರಕರ್ತರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ಜೊತೆಗೆ ಏಳಿಗೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
     ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈದ್ಯ ಮಾತನಾಡಿ, ಸಮಾಜದೊಂದಿಗೆ ಪತ್ರಕರ್ತರು ಗುರುತಿಸಿಕೊಂಡಿರುವ ಪರಿ ಹಾಗು ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳನ್ನು ವಿವರಿಸುವ ಜೊತೆಗೆ ಸಂಘಟನೆಯ ಮಹತ್ವ ತಿಳಿಸಿದರು.
    ಪತ್ರಿಕಾಭವನ ಕಟ್ಟಡ ಸಮಿತಿ ಅಧ್ಯಕ್ಷ ಕಣ್ಣಪ್ಪ ಮಾತನಾಡಿ, ಸಮಾಜದಲ್ಲಿ ಪತ್ರಕರ್ತರ ಜೊತೆಗೆ ಪತ್ರಿಕೆಗಳು ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಿದರು. ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಅಧ್ಯಕ್ಷತೆ ವಹಿಸಿದ್ದರು. ಸುಭಾಷ್ ಸಿಂದ್ಯಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷ ಕೂಡ್ಲಿಗೆರೆ ಮಂಜುನಾಥ್ ನಿರೂಪಿಸಿದರು. ಹಿರಿಯ ಪತ್ರಕರ್ತ ಬದರಿನಾರಾಯಣ ಶ್ರೇಷ್ಠಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಕಾರ್ಯದರ್ಶಿ ಬಸವರಾಜ್ ಸ್ವಾಗತಿಸಿದರು. ಸಹಕಾರ್ಯದರ್ಶಿ ಫಿಲೋಮಿನಾ, ಖಜಾಂಚಿ ಅನಂತಕುಮಾರ್, ಹಿರಿಯ ಪತ್ರಕರ್ತರಾದ ನಾರಾಯಣ, ಗಣೇಶ್‌ರಾವ್ ಸಿಂಧ್ಯಾ, ಶಿವಶಂಕರ್, ಟಿ.ಎಸ್ ಆನಂದಕುಮಾರ್, ಸುದರ್ಶನ್, ಶೈಲೇಶ್‌ಕೋಠಿ, ಕೆ.ಇ ಪ್ರಶಾಂತ್, ರವೀಂದ್ರನಾಥ್(ಬ್ರದರ್), ಮೋಹನ್‌ಕುಮಾರ್, ಸಯ್ಯದ್‌ಖಾನ್ ಹಾಗು ಆರ್ಯವೈಶ್ಯ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.

Saturday, July 10, 2021

ಕಾರು ಅಪಘಾತ ಅರಣ್ಯ ಇಲಾಖೆ ಗುತ್ತಿಗೆದಾರ ನಿಧನ

ಭದ್ರಾವತಿ: ತಾಲೂಕಿನ ಮಲ್ಲಿಗೇನಹಳ್ಳಿ ಕ್ಯಾಂಪ್ ನಿವಾಸಿ, ಅರಣ್ಯ ಇಲಾಖೆ ಗುತ್ತಿಗೆದಾರರೊಬ್ಬರು ಕಾರು ಅಪಘಾತದಲ್ಲಿ ಮೃತಪಟ್ಟಿರುವುದು.
   ಭದ್ರಾವತಿ, ಜು. ೧೦: ತಾಲೂಕಿನ ಮಲ್ಲಿಗೇನಹಳ್ಳಿ ಕ್ಯಾಂಪ್ ನಿವಾಸಿ, ಅರಣ್ಯ ಇಲಾಖೆ ಗುತ್ತಿಗೆದಾರರೊಬ್ಬರು ಕಾರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
   ಲಿಂಗರಾಜ್(೩೨) ಮೃತಪಟ್ಟಿದ್ದು, ಲಿಂಗರಾಜ್ ಅವರ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ. ಲಿಂಗರಾಜ್ ಪತ್ನಿ, ೨ ಗಂಡು ಮಕ್ಕಳನ್ನು ಹೊಂದಿದ್ದರು. ಮೃತ ದೇಹದ ಶವ ಪರೀಕ್ಷೆ ಹಳೇನಗರ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಲಾಯಿತು. ಲಿಂಗರಾಜ್ ನಿಧನಕ್ಕೆ ಮಲ್ಲಿಗೇನಹಳ್ಳಿ ಗ್ರಾಮ ಹಾಗು ಮಲ್ಲಿಗೇನಹಳ್ಳಿ ಕ್ಯಾಂಪ್ ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.


ಭದ್ರಾವತಿಯಲ್ಲಿ ೧೦ ಕೊರೋನಾ ಸೋಂಕು ಪತ್ತೆ : ೩ ಬಲಿ

ಭದ್ರಾವತಿ, ಜು. ೧೦: ತಾಲೂಕಿನಲ್ಲಿ ಶನಿವಾರ ಒಟ್ಟು ೧೦ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಜೊತೆಗೆ ೩ ಮಂದಿ ಬಲಿಯಾಗಿದ್ದಾರೆ.
   ಗ್ರಾಮಾಂತರ ಭಾಗದಲ್ಲಿ ೭ ಹಾಗು ನಗರ ಭಾಗದಲ್ಲಿ ೩ ಸೋಂಕು ಪ್ರಕರಣಗಳು ದಾಖಲಾಗಿದೆ. ಈ ನಡುವೆ ೩ ಮಂದಿ ಸೋಂಕಿಗೆ ಬಲಿಯಾಗಿರುವುದು ಕ್ಷೇತ್ರದ ನಾಗರೀಕರನ್ನು ಆತಂಕ್ಕೊಳಗಾಗುವಂತೆ ಮಾಡಿದೆ.

ಲಕ್ಷಾಂತರ ರು. ಮೌಲ್ಯದ ಅಡಕೆ ಚೀಲ ಕಳವು ಪ್ರಕರಣ : ೩ ಜನರ ಸೆರೆ

ಭದ್ರಾವತಿ ಹಳೇನಗರ ಪೊಲೀಸರ ಕಾರ್ಯಾಚರಣೆ


ಲಕ್ಷಾಂತರ ರು. ಮೌಲ್ಯದ ಅಡಕೆ ಚೀಲ ಕಳ್ಳತನ ಮಾಡಿ ಬೇರೆಡೆಗೆ ಸಾಗಿಸುತ್ತಿದ್ದ ೩ ಜನರನ್ನು ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿರುವುದು.
    ಭದ್ರಾವತಿ, ಜು. ೧೦: ಲಕ್ಷಾಂತರ ರು. ಮೌಲ್ಯದ ಅಡಕೆ ಚೀಲ ಕಳ್ಳತನ ಮಾಡಿ ಬೇರೆಡೆಗೆ ಸಾಗಿಸುತ್ತಿದ್ದ ೩ ಜನರನ್ನು ಹಳೇನಗರ ಠಾಣೆ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
    ನೆಹರು ನಗರದ ನಿವಾಸಿ, ಗುಜರಿ ವ್ಯಾಪಾರಿ ದಾದಪೀರ್(೨೯), ಸಾದತ್ ಕಾಲೋನಿ ನಿವಾಸಿ ಸಲೀಂ ಅಲಿಯಾಸ್ ಚನ್ನಗಿರಿ(೪೩) ಹಾಗು ಹನುಮಂತಪ್ಪ ಶೆಡ್ ನಿವಾಸಿ ಷಫಿವುಲ್ಲಾ(೩೨) ಬಂಧಿತರಾಗಿದ್ದು, ಅಡಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ತರೀಕೆರೆ ರಸ್ತೆ ಶಿವನಿ ಕ್ರಾಸ್ ಬಳಿ ೩ ಜನರನ್ನು ಸೆರೆ ಹಿಡಿದಿದ್ದಾರೆ.
     ಬಂಧಿತರಿಂದ ೨೦ ಚೀಲ, ಒಟ್ಟು ೭೦೦ ಕೆ.ಜಿ ತೂಕದ ಸುಮಾರು ೧,೨೯,೫೦೦ ರು. ಮೌಲ್ಯದ ಅಡಕೆ ಹಾಗು ಕೃತ್ಯಕ್ಕೆ ಬಳಸಿದ ೩,೦೦,೦೦೦ ರು. ಮೌಲ್ಯದ ಟಾಟಾ ಏಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
    ಪೊಲೀಸ್ ಉಪಾಧೀಕ್ಷಕ ಐಪಿಎಸ್ ಅಧಿಕಾರಿ ಸಾಹಿಲ್ ಬಾಗ್ಲಾ ಮತ್ತು ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಮಾರ್ಗದರ್ಶನದಲ್ಲಿ ಹಳೇನಗರ ಪೊಲೀಸ್ ಠಾಣಾಧಿಕಾರಿ ಪ್ರಭು ಡಿ ಕೆಳಗಿನ ಮನಿ ಮತ್ತು ಸಿಬ್ಬಂದಿಗಳಾದ ಹಾಲಪ್ಪ, ಫಿರೋಜ್, ಮಂಜುನಾಥ್ ಮತ್ತು ಸುನಿಲ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಯಶಸ್ವಿ ಕಾರ್ಯಾಚರಣೆ ನಡೆಸಿದ ತಂಡವನ್ನು ಜಿಲ್ಲಾ ರಕ್ಷಣಾಧಿಕಾರಿ ಹಾಗು ಹೆಚ್ಚುವರಿ ರಕ್ಷಣಾಧಿಕಾರಿಗಳು ಅಭಿನಂದಿಸಿದ್ದಾರೆ.

ಸಂಘಟನೆಗಳಿಂದ ಮಾತ್ರ ಯಾವುದೇ ಬೇಡಿಕೆ ಈಡೇರಲು ಸಾಧ್ಯ : ಆಯನೂರು ಮಂಜುನಾಥ್

ಭದ್ರಾವತಿ ವಿಐಎಸ್‌ಎಲ್ ಅತಿಥಿಗೃಹದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತೀಯ ಮಜ್ದೂರ್ ಸಂಘದ ೨೧ನೇ ತ್ರೈವಾರ್ಷಿಕ ಅಧಿವೇಶನ(ವರ್ಚ್ಯಲ್)ದಲ್ಲಿ ಕಾರ್ಮಿಕ ಮುಖಂಡ, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಜು. ೧೦: ಯಾವುದೇ ಬೇಡಿಕೆಗಳು ಈಡೇರಬೇಕಾದರೇ ಅದು ಸಂಘಟನೆ ಮೂಲಕ ಮಾತ್ರ ಸಾಧ್ಯವಾಗಿದ್ದು,  ಸಂಘಟನೆಗಳಿಗೆ ಸರ್ಕಾರದ ಜೊತೆ ಗುರುತಿಸಿಕೊಳ್ಳದೆ ಹೋರಾಟ ನಡೆಸುವ ಮನೋಭಾವ ಬಹಳ ಮುಖ್ಯ ಎಂದು ಕಾರ್ಮಿಕ ಮುಖಂಡ, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
     ಅವರು ಶನಿವಾರವಾರ ನಗರದ ವಿಐಎಸ್‌ಎಲ್ ಅತಿಥಿಗೃಹದ ಸಭಾಂಮಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತೀಯ ಮಜ್ದೂರ್ ಸಂಘದ ೨೧ನೇ ತ್ರೈವಾರ್ಷಿಕ ಅಧಿವೇಶನ(ವರ್ಚ್ಯಲ್)ದಲ್ಲಿ ಪಾಲ್ಗೊಂಡು ಮಾತನಾಡಿದರು.
    ದೇಶದಲ್ಲಿ ಶ್ರಮಿಜೀವಿಗಳಾದ ಕಾರ್ಮಿಕ ವರ್ಗದವರ ಧ್ವನಿಯಾಗಿ ತನ್ನದೇ ಆದ ಸೈದ್ದಾಂತಿಕ ಸಿದ್ದಾಂತಗಳೊಂದಿಗೆ ಭಾರತೀಯ ಮಜ್ದೂರ್ ಸಂಘ ಬೃಹತ್ ಸಂಘಟನೆಯಾಗಿ ಬೆಳೆದು ಬಂದಿದೆ. ಈ ಸಂಘಟನೆ ಎಂದಿಗೂ ಸರ್ಕಾರದ ಜೊತೆ ಗುರುತಿಸಿಕೊಳ್ಳದೆ ಕಾರ್ಮಿಕರ ಪರವಾದ ನಿಲುವುಗಳಿಗೆ ಬದ್ಧವಾಗಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
    ಒಬ್ಬ ರಾಜಕಾರಣಿಯಾದರೂ ಸಹ ಈ ಸಂಘಟನೆಯೊಂದಿಗಿನ ಒಡನಾಟದಿಂದಾಗಿ ನಾನು ಸಹ ಕಾರ್ಮಿಕ ಹೋರಾಟಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ಪ್ರಸ್ತುತ ದೇಶದಲ್ಲಿ ಕಾರ್ಮಿಕರು ಅನುಭವಿಸುತ್ತಿರುವ ಸಂಕಷ್ಟಗಳು ಸಾಕಷ್ಟಿವೆ. ಯಾವುದೇ ಸಂಘಟನೆಗಳ  ಪದಾಧಿಕಾರಿಗಳು ಸರ್ಕಾರದ ನಿರ್ಣಯಗಳನ್ನು ಪ್ರಶ್ನಿಸುವ, ಅನ್ಯಾಯದ ವಿರುದ್ಧ ಪ್ರತಿಭಟಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಭಾರತೀಯ ಮಜ್ದೂರು ಸಂಘದ ಪದಾಧಿಕಾರಿಗಳು ಈ ನಿಟ್ಟಿನಲ್ಲಿಯೇ ಸಾಗುತ್ತಿದ್ದು, ಈ ಸಂಘಟನೆಯಲ್ಲಿನ ಬಹಳಷ್ಟು ಹೋರಾಟಗಾರರು ಇಂದಿನವರಿಗೆ ಸ್ಪೂರ್ತಿದಾಯಕರಾಗಿದ್ದಾರೆ ಎಂದರು.
     ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ವಿಶ್ವನಾಥಶೆಟ್ಟಿ ಮಾತನಾಡಿ, ದೇಶ ಇದ್ದರೆ ನಾವು, ಕಾರ್ಮಿಕರು ಈ ದೇಶದ ಸೈನಿಕರಿದಂತೆ ಎಂಬ ಭಾವನೆಯೊಂದಿಗೆ ಸಂಘಟನೆ ಬೆಳೆದು ಬಂದಿದೆ. ದೇಶ ಭಕ್ತಿ ಹಾಗು ರಾಷ್ಟ್ರೀಯ ಹಿತಾಸಕ್ತಿಗಳೊಂದಿಗೆ ಕಾರ್ಮಿಕರ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗೆ ಕಾರ್ಮಿಕರ ಸಮಸ್ಯೆ ಬಗೆಹರಿಸುವುದೇ ಮೊದಲ ಆದ್ಯತೆಯಾಗಿದೆ ಎಂದರು.
    ಸಂಘಟನೆಗಳಿಗೆ ಸದಸ್ಯರ ಸಂಖ್ಯೆ ಹೆಚ್ಚಿಸುವುದು ಮುಖ್ಯವಲ್ಲ. ಗುಣಾತ್ಮಕವಾದ ಸಂಖ್ಯೆ ಹೆಚ್ಚಿಸುವುದು ಮುಖ್ಯವಾಗಿದೆ. ಹೋರಾಟಗಳು ಗುಣಾತ್ಮಕವಾದ ದಾರಿಯಲ್ಲಿಯೇ ಸಾಗಬೇಕು. ಈ ನಿಟ್ಟಿನಲ್ಲಿ ಕಾರ್ಮಿಕರ ಪರವಾದ ಹೋರಾಟಗಳಲ್ಲಿ ಸಂಘಟನೆ ಮುನ್ನಡೆಯುತ್ತಿದೆ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕೆಂದರು.
    ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಕೆ ಪ್ರಕಾಶ್ ಮಾತನಾಡಿ, ೧೯೫೫ರಲ್ಲಿ ಆರಂಭವಾದ ಸಂಘಟನೆ ತನ್ನ ಆದ ಸಿದ್ದಾಂತಗಳೊಂದಿಗೆ ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ. ಪ್ರಸ್ತುತ ದೇಶದಲ್ಲಿಯೇ ಅತಿಹೆಚ್ಚು ಸದಸ್ಯರನ್ನು ಹೊಂದಿರುವ ಸಂಘಟನೆ ಇದಾಗಿದೆ. ರಾಜ್ಯದಲ್ಲಿ ಈ ಸಂಘಟನೆಯನ್ನು ಅನೇಕ ಮಹಾನ್ ನಾಯಕರು ಕಟ್ಟಿ ಬೆಳೆಸಿದ್ದಾರೆ. ಈ ಸಂಘ ಭವಿಷ್ಯದಲ್ಲಿ ಮತ್ತಷ್ಟು ಸಂಘಟಿತಗೊಳ್ಳುವ ವಿಶ್ವಾಸವಿದೆ ಎಂದರು.
    ಇದಕ್ಕೂ ಮೊದಲು ವರ್ಚ್ಯಲ್ ಕಾರ್ಯಕ್ರಮವನ್ನು ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿನಯ್ ಕುಮಾರ್ ಸಿನ್ಹ ಉದ್ಘಾಟಿಸಿ ಮಾತನಾಡಿದರು.
    ರಾಜ್ಯ ಕಾರ್ಯದರ್ಶಿ ಎಚ್.ಎಲ್ ವಿಶ್ವನಾಥ್ ನಿರೂಪಿಸಿದರು. ಗಾಯತ್ರಿ ವಂದೇಮಾತರಂ ಗೀತೆ ಹಾಡಿದರು. ಜಿಲ್ಲಾಧ್ಯಕ್ಷ ಯೋಗೇಶ್ ಪೈ ವಂದಿಸಿದರು. ರಾಜ್ಯದ ವಿವಿಧೆಡೆಗಳಿಂದ ಸಂಘದ ಪ್ರಮುಖರು ಪಾಲ್ಗೊಂಡಿದ್ದರು.

Friday, July 9, 2021

ಕೋವಿಡ್-೧೯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ೧ ಲಕ್ಷ ರು. ದೇಣಿಗೆ

ಕೋವಿಡ್-೧೯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಭದ್ರಾವತಿ ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ (ರಾಮ್ಕೋಸ್) ರು.೧ ಲಕ್ಷ ದೇಣಿಗೆ ನೀಡಿದೆ.
     ಭದ್ರಾವತಿ, ಜು. ೯: ಕೋವಿಡ್-೧೯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನಗರದ ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ (ರಾಮ್ಕೋಸ್) ರು.೧ ಲಕ್ಷ ದೇಣಿಗೆ ನೀಡಿದೆ.
.    ಶಿವಮೊಗ್ಗ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ನಾಗೇಶ್ ಎಸ್ ಡೋಂಗ್ರೆ ಅವರ ಮೂಲಕ ಪರಿಹಾರದ ಚೆಕ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಯಿತು.
    ಸಂಘದ ಅಧ್ಯಕ್ಷ ಸಿ. ಮಲ್ಲೇಶಪ್ಪ. ಉಪಾಧ್ಯಕ್ಷ ಎಂ. ಪರಮೇಶ್ವರಪ್ಪ. ನಿರ್ದೇಶಕರಾದ ಹೆಚ್.ಆರ್ ತಿಮ್ಮಪ್ಪ, ಎಚ್.ಎಸ್.ಸಂಜೀವಕುಮಾರ್. ಎಚ್.ಟಿ ಉಮೇಶ್ ಮತ್ತು ಉಮಾ ಹಾಗು ಆಡಳಿತಾಧಿಕಾರಿ ಎಂ.ವಿರುಪಾಕ್ಷಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.