Tuesday, September 14, 2021

ಲಯನ್ಸ್ ಕ್ಲಬ್ ವತಿಯಿಂದ ಸೆ.೧೫ರಂದು ಶಿಕ್ಷಕರ, ತಂತ್ರಜ್ಞರ ದಿನಾಚರಣೆ

ಭದ್ರಾವತಿ, ಸೆ. ೧೪: ಲಯನ್ಸ್ ಕ್ಲಬ್ ವತಿಯಿಂದ ಸೆ.೧೫ರಂದು ಸಂಜೆ ೬.೩೦ಕ್ಕೆ ನ್ಯೂಟೌನ್ ಉಂಬ್ಳೆಬೈಲು ರಸ್ತೆಯಲ್ಲಿರುವ ಕ್ಲಬ್ ಸಭಾಂಗಣದಲ್ಲಿ ಶಿಕ್ಷಕರ ಹಾಗು ತಂತ್ರಜ್ಞರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
    ಕ್ಲಬ್ ಜಿಲ್ಲಾ ವಲಯಾಧಿಕಾರಿಗಳಾದ ಎ.ಎಸ್ ಕುಮಾರಸ್ವಾಮಿ, ಹೆಬ್ಬಂಡಿ ನಾಗರಾಜ್, ಮಾಜಿ ಗೌರ್‍ನರ್‌ಗಳಾದ ಬಿ. ದಿವಾಕರ ಶೆಟ್ಟಿ, ಕೆ.ಸಿ ವೀರಭದ್ರಪ್ಪ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕ್ಲಬ್ ಅಧ್ಯಕ್ಷ ಬಿ.ಎಸ್ ಮಹೇಶ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
    ಜಿಲ್ಲಾಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಅನಿತಾ ಮೇರಿ ಮತ್ತು ವಿರೂಪಾಕ್ಷಪ್ಪ ಹಿರೇಮಠ, ನಿವೃತ್ತ ತಂತ್ರಜ್ಞರಾದ ಆಲ್ವಿನ್ ಡಿಸೋಜಾ ಮತ್ತು ಮೂಡಲಗಿರಿಯಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಅಲ್ಲದೆ ಕ್ಲಬ್ ವಲಯ ಸಲಹಾ ಸಮಿತಿ ಸಭೆ ಸಹ ನಡೆಯಲಿದ್ದು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಜಯಂತಿ ಆಚರಣೆಗಳು ಎಲ್ಲರನ್ನು ಒಗ್ಗೂಡಿಸುವಂತಿರಲಿ : ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ

ಭದ್ರಾವತಿ ಬಿಳಿಕಿ ಹಿರೇಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ, ಮಹಿಳಾ ಘಟಕ ಹಾಗು ಯುವ ಘಟಕ ಮತ್ತು ಬಿಳಿಕಿ ಗ್ರಾಮಸ್ಥರು ಹಾಗು ಶ್ರೀ ಮಠದ ಭಕ್ತರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಶ್ರೀ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ, ಸೆ. ೧೪: ಜಯಂತಿ ಆಚರಣೆಗಳು ಕೇವಲ ಸೀಮಿತ ವ್ಯಾಪ್ತಿಯಲ್ಲಿ ನಡೆಯದೆ ಸಮಾಜದಲ್ಲಿ ಎಲ್ಲರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಮಾದರಿಯಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ನಡೆಯುವಂತಾಗಬೇಕೆಂದು ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
    ಶ್ರೀಗಳು ಮಂಗಳವಾರ ಶ್ರೀ ಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ, ಮಹಿಳಾ ಘಟಕ ಹಾಗು ಯುವ ಘಟಕ ಮತ್ತು ಬಿಳಿಕಿ ಗ್ರಾಮಸ್ಥರು ಹಾಗು ಶ್ರೀ ಮಠದ ಭಕ್ತರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
    ಎಲ್ಲರೂ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ಮುಂದಿನ ದಿನಗಳಲ್ಲಿ ಇನ್ನೂ ವಿಜೃಂಭಣೆಯಿಂದ ನಡೆಯುವ ಮೂಲಕ ಸಮಾಜಕ್ಕೆ ಒಳಿತಾಗಬೇಕೆಂದರು.
    ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರೂಪಾ ನಾಗರಾಜ್ ಮಾತನಾಡಿ, ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ಶ್ರೀ ಮಠದಲ್ಲಿ ಮುಂದಿನ ದಿನಗಳಲ್ಲಿ ಮಹಿಳಾ ಘಟಕದ ವತಿಯಿಂದ ಇನ್ನೂ ವಿಜೃಂಭಣೆ ಆಚರಿಸುವುದಾಗಿ ಭರವಸೆ ನೀಡುವ ಜೊತೆಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
    ಶ್ರೀ ಮರುಳಸಿದ್ದೇಶ್ವರ ಜನ ಕಲ್ಯಾಣ ಧಾರ್ಮಿಕ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ಅಖಿಲ ಭಾರತ ವೀರಶೈವ ಮಹಾಸಭೆ ತಾಲೂಕು ಉಪಾಧ್ಯಕ್ಷ ಎಸ್. ವಾಗೀಶ್, ಸಂಘಟನಾ ಕಾರ್ಯದರ್ಶಿ ಬಾರಂದೂರು ಮಂಜುನಾಥ್, ಜಿ.ಎಂ ಮೂರ್ತಿ, ಯುವ ಘಟಕದ ಅಧ್ಯಕ್ಷ ಮಂಜುನಾಥ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಕವಿತಾ ಸುರೇಶ್,  ಬಿಳಿಕಿ ಗ್ರಾಮದ ಹಿರಿಯರಾದ ಲೋಕೇಶ್ ರಾವ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗಂಗಾಧರ್, ಗ್ರಾಮಸ್ಥರಾದ ಪರ್ವತಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ಇದಕ್ಕೂ ಮೊದಲು ಜಯಂತ್ಯೋತ್ಸವದ ಅಂಗವಾಗಿ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಶ್ರೀ ಮಠದ ಶ್ರೀ ಆನಂದ ಸ್ವಾಮಿ ಮತ್ತು ಶ್ರೀ ತಿಪ್ಪೇಸ್ವಾಮಿ ಶಾಸ್ತ್ರಿಗಳಿಂದ ರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ನೆರವೇರಿಸಲಾಯಿತು.  

ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ : ಪ್ರತಿ ವರ್ಷ ವೀರಗಾಸೆ ಸ್ಪರ್ಧೆ ಆಯೋಜನೆ

ಅದ್ದೂರಿ ಆಚರಣೆ : ವೀರಶ್ಯೆವ ಸೇವಾ ಸಮಿತಿ ಅಧ್ಯಕ್ಷ ಆರ್. ಮಹೇಶ್‌ಕುಮಾರ್

ಭದ್ರಾವತಿ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿ ಮಂಗಳವಾರ ವೀರಶ್ಯೆವ ಸೇವಾ ಸಮಿತಿ ವತಿಯಿಂದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ಜರುಗಿತು.
    ಭದ್ರಾವತಿ, ಸೆ. ೧೪: ಪ್ರತಿ ವರ್ಷ ತಾಲೂಕು ಮಟ್ಟದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ಅದ್ದೂರಿಯಾಗಿ ಆಚರಿಸುವ ಮೂಲಕ
    ವೀರಗಾಸೆ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಹಳೇನಗರ ವೀರಶ್ಯೆವ ಸೇವಾ ಸಮಿತಿ ಅಧ್ಯಕ್ಷ ಆರ್. ಮಹೇಶ್‌ಕುಮಾರ್ ತಿಳಿಸಿದರು.
    ಅವರು ಮಂಗಳವಾರ ಸಮಿತಿ ವತಿಯಿಂದ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಅನೇಕ ಮಠಾಧೀಶರು ಹಾಗೂ ವೀರಶ್ಯೆವ ಸಂಘಟನೆಗಳು ಕೈಗೊಂಡಿರುವ ತಿರ್ಮಾನದಂತೆ ಸಮಿತಿ ವತಿಯಿಂದ ಪ್ರತಿ ವರ್ಷ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಅಲ್ಲದೆ ತಾಲೂಕು ಮಟ್ಟದಲ್ಲಿ ವೀರಗಾಸೆ ಸ್ಪರ್ಧೆಯನ್ನು ಏರ್ಪಡಿಸಿ ಕಲಾವಿದರನ್ನು  ಪ್ರೋತ್ಸಾಹಿಸಲಾಗುವುದು ಎಂದರು.
    ಶ್ರೀ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ, ರುದ್ರಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
     ಚಿನ್ನಯ್ಯ ಹಿರೇಮಠ, ಶಂಕರಯ್ಯ ಶಾಸ್ತ್ರಿ ಮತ್ತು ಸಿ.ಎಂ ಮಹೇಶ್ವರ ಮೂರ್ತಿ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿಕೊಟ್ಟರು.  ಜಂಗಮ ಸಮಾಜದ ಅಧ್ಯಕ್ಷ ಅಡವೀಶಯ್ಯ, ಜೆ. ಶಿವಕುಮಾರ, ಎಂ. ವಾಗೀಶ್ ಕೋಠಿ, ಚಂದ್ರಶೇಖರ್, ಪಿ.ಹೆಚ್ ಜಗದೀಶ, ಜಿ.ಆರ್ ಸತೀಶ್,  ಅನುಪಮ ಚನ್ನೇಶ್, ವಿ.ಟಿ ನಾಗರತ್ನ, ಆರ್.ಎಸ್ ಶೋಭಾ, ಆರ್.ಎಂ.ಸಿ ಪ್ರಕಾಶ್ ಮತ್ತು ರೂಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹಿಂದಿ ದಿವಸ್ ವಿರೋಧಿಸಿ ಕರಾವೇ ಪ್ರತಿಭಟನೆ : ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ

ಕರ್ನಾಟಕ ರಕ್ಷಣಾ ವೇದಿಕೆ ಭದ್ರಾವತಿ ತಾಲೂಕು ಘಟಕದ ವತಿಯಿಂದ ಹಿಂದಿ ದಿವಸ್ ವಿರೋಧಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಸೆ. ೧೪:  ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ವತಿಯಿಂದ ಹಿಂದಿ ದಿವಸ್ ವಿರೋಧಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಹೆಚ್ಚಿನ ಮಾನ್ಯತೆ ಸಿಗಬೇಕು. ಯಾವುದೇ ಕಾರಣಕ್ಕೂ ಹಿಂದಿ ಭಾಷೆಯನ್ನು ಕನ್ನಡಿಗರ ಮೇಲೆ ಬಲವಂತವಾಗಿ ಹೇರಿಕೆ ಮಾಡಬಾರದು. ಎಲ್ಲಾ ಬ್ಯಾಂಕ್‌ಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿಯೇ ವ್ಯವಹರಿಸಬೇಕು. ಈ ಸಂಬಂಧ ಹಲವಾರು ಬಾರಿ ಬ್ಯಾಂಕ್‌ಗಳ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೂ ಸಹ ಗ್ರಾಹಕರ ಮೇಲೆ ಬಲವಂತಾಗಿ ಹಿಂದಿ ಭಾಷೆಯನ್ನು ಏರಿಕೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
    ಪ್ರಮುಖವಾಗಿ ಕೆನರಾ ಬ್ಯಾಂಕಿನ ಶಾಖೆಗಳಲ್ಲಿ ವ್ಯವಹಾರ ನಡೆಸಲು ಕನ್ನಡಿಗರನ್ನು ಉದ್ಯೋಗಿಗಳಾಗಿ ನೇಮಿಸಿಕೊಳ್ಳಬೇಕು. ಕನ್ನಡ ಬಾರದ ಇತರೆ ರಾಜ್ಯಗಳ ಉದ್ಯೋಗಿಗಳನ್ನು ವಾಪಾಸು ಕಳುಹಿಸಬೇಕು. ಬ್ಯಾಂಕಿನ ಎಲ್ಲಾ ವ್ಯವಹಾರಗಳು ಕನ್ನಡದಲ್ಲಿಯೇ ನಡೆಯುವಂತೆ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಹಾಗು ಬ್ಯಾಂಕಿನ ನಾಮಫಲಕ, ಸೂಚನಾ ಫಲಕಗಳಲ್ಲಿ ಶೇ.೬೦ರಷ್ಟು ಭಾಗ ಕನ್ನಡ ಭಾಷೆಗೆ ಮೀಸಲಿಡಬೇಕೆಂದು ಹಕ್ಕೊತ್ತಾಯಿಸಿ ತಹಸೀಲ್ದಾರ್ ಆರ್. ಪ್ರದೀಪ್  ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ವೇದಿಕೆ ಜಿಲ್ಲಾಧ್ಯಕ್ಷ ಪಿ. ಪ್ರಶಾಂತ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ತಾಲೂಕು ಅಧ್ಯಕ್ಷ ಎಂ. ಪರಮೇಶ್, ಪ್ರಮುಖರಾದ ವಿಶ್ವನಾಥ್, ರೆಡ್‌ಸನ್ ರಾಜು, ಆರ್. ಪ್ರಾಣೇಶ್, ದಿಲೀಪ್, ರಾಮಕೃಷ್ಣ, ಎಚ್.ಎಂ ಉಮೇಶ್, ಚಂದ್ರಪ್ಪ, ಮುನ್ನ, ಬಾಲು, ಆರ್. ರಂಗನಾಥ್ ಮತ್ತು ಅನಿಲ್ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Monday, September 13, 2021

ಈ ಬಾರಿ ಅಧಿವೇಶನದಲ್ಲೂ ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತಿರುವ ಶಾಸಕ ಬಿ.ಕೆ ಸಂಗಮೇಶ್ವರ್

ಸೋಮವಾರದಿಂದ ಆರಂಭಗೊಂಡಿರುವ ಅಧಿವೇಶನದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಧಾನಸೌಧ ಮುತ್ತಿಗೆ ಪ್ರತಿಭಟನೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ವಿಧಾನಸೌಧದ ಗೇಟ್ ತಳ್ಳುತ್ತಿರುವ ಪೋಟೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.
    ಭದ್ರಾವತಿ, ಸೆ. ೧೩: ಶಾಸಕ ಬಿ.ಕೆ ಸಂಗಮೇಶ್ವರ್ ಇತ್ತೀಚೆಗೆ ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತಿರುವುದು ಕಂಡು ಬರುತ್ತಿದ್ದು, ಕಳೆದ ವಿಧಾನಸಭೆ ಅಧಿವೇಶನದಲ್ಲಿ ಅಮಾನತುಗೊಂಡು ಸುದ್ದಿಯಾಗಿದ್ದರು.
    ಕುಟುಂಬ ಸದಸ್ಯರ ವಿರುದ್ಧ ಪೊಲೀಸ್ ದೌರ್ಜನ್ಯ ಖಂಡಿಸಿ ವಿಧಾನಸಭೆ ಅಧಿವೇಶನದಲ್ಲಿಯೇ ಸಭಾಧ್ಯಕ್ಷರ ಎದುರು ಅಂಗಿ ಕಳಚಿ ವಿವಾದಕ್ಕೆ ಒಳಗಾಗುವ ಮೂಲಕ ಕೆಲವು ದಿನಗಳವರೆಗೆ ಅಧಿವೇಶನದಿಂದ ಅಮಾನತುಗೊಂಡಿದ್ದರು. ಈ ಘಟನೆ ರಾಜ್ಯಮಟ್ಟದಲ್ಲಿಯೇ ಸುದ್ದಿಯಾಗುವ ಮೂಲಕ ಗಮನ ಸೆಳೆದಿದ್ದರು.
    ಇದೀಗ ಸೋಮವಾರದಿಂದ ಆರಂಭಗೊಂಡಿರುವ ಅಧಿವೇಶನದಲ್ಲೂ ಗಮನ ಸೆಳೆಯುತ್ತಿದ್ದು, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಧಾನಸೌಧ ಮುತ್ತಿಗೆ ಪ್ರತಿಭಟನೆಯಲ್ಲಿ ವಿಧಾನಸೌಧದ ಗೇಟ್ ತಳ್ಳುತ್ತಿರುವ ಪೋಟೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ಸೆ.೧೪ರಂದು ವಿವಿಧೆಡೆ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ

ಭದ್ರಾವತಿ, ಸೆ. ೧೩: ಲೋಕ ಕಲ್ಯಾಣಾರ್ಥವಾಗಿ ಜಗದೊಡೆಯ ಶಿವನಿಂದ ಉದಯಿಸಿದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಯಂತ್ಯೋತ್ಸವ ತಾಲೂಕಿನ ವಿವಿಧೆಡೆ ಸೆ.೧೪ರಂದು ಹಮ್ಮಿಕೊಳ್ಳಲಾಗಿದೆ.
    ಬಿಳಿಕಿ ಹಿರೇಮಠದಲ್ಲಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳ ದಿನ ಸಾನಿಧ್ಯದಲ್ಲಿ  ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ, ಯುವ ಘಟಕ ಹಾಗು ಮಹಿಳಾ ಘಟಕ ಮತ್ತು ಬಿಳಿಕಿ ಗ್ರಾಮಸ್ಥರ ಸಹಯೋಗದೊಂದಿಗೆ ಬೆಳಿಗ್ಗೆ ೧೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
       ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಜಯಂತ್ಯೋತ್ಸವ:
    ಹಳೇನಗರದ ವೀರಶೈವ ಸೇವಾ ಸಮಿತಿ ವತಿಯಿಂದ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ ತಾಲೂಕು ಕಚೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
    ಬೆಳಿಗ್ಗೆ ೭.೩೦ಕ್ಕೆ ವಿಶೇಷ ಪೂಜೆ, ರುದ್ರಾಭಿಷೇಕ, ಮಹಾಮಂಗಳಾರತಿ ಹಾಗು ಸ್ವಾಮಿಗೆ ಪ್ರಸಾದ ನೈವೆದ್ಯ ಕಾರ್ಯಕ್ರಮಗಳು ಜರುಗಲಿವೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ.

ಸೆ.೧೪ರಿಂದ ೬ ದಿನ ವಿದ್ಯುತ್ ನಿಲುಗಡೆ

    ಭದ್ರಾವತಿ, ಸೆ. ೧೩: ಮೆಸ್ಕಾಂ ನಗರ ಉಪವಿಭಾಗ ಘಟಕ-೨ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸೆ.೧೪ ರಿಂದ ೧೯ರ ವರೆಗೆ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
    ಮಹಾಲಕ್ಷ್ಮೀ ಲೇಔಟ್, ಹೊಸ ಸೇತುವೆ ರಸ್ತೆ, ಸಿದ್ದಾರೂಢ ನಗರ, ಕನಕ ನಗರ, ಕಾಳಿದಾಸ ಬಡಾವಣೆ, ಕೋಟೆ ಏರಿಯಾ, ಖಾಜಿ ಮೊಹಲ್ಲಾ, ಬಸವೇಶ್ವರ ಸಭಾಭವನ ಸುತ್ತಮುತ್ತ ಮತ್ತು ಬನಶಂಕರಿ ದೇವಸ್ಥಾನದ ಸುತ್ತಮುತ್ತ ವಿದ್ಯುತ್ ನಿಲುಗಡೆಯಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.