Monday, December 20, 2021

ಡಿ.೨೨ರಂದು ಬಿ.ಆರ್ ಪ್ರಾಜೆಕ್ಟ್‌ನಲ್ಲಿ ಉಚಿತ ನೇತ್ರ ತಪಾಸಣಾ, ಶಸ್ತ್ರಚಿಕಿತ್ಸೆ ಶಿಬಿರ

    ಭದ್ರಾವತಿ, ಡಿ. ೨೦: ಲಯನ್ಸ್ ಅಂತರರಾಷ್ಟ್ರೀಯ ಸಂಸ್ಥೆ, ಬಿ.ಆರ್ ಪ್ರಾಜೆಕ್ಟ್, ಶಿವಮೊಗ್ಗ ಶಂಕರ ಕಣ್ಣಿ ಆಸ್ಪತ್ರೆ ವತಿಯಿಂದ  ಚಲನಚಿತ್ರ ನಟ, ಸಮಾಜ ಸೇವಕ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಉಚಿತ ನೇತ್ರ ತಪಾಸಣಾ, ನೇತ್ರ ಶಸ್ತ್ರ ಚಿಕಿತ್ಸೆ, ಮಸೂರ ಅಳವಡಿಕೆ ಮತ್ತು ನೇತ್ರದಾನ ಶಿಬಿರ ಡಿ.೨೨ರಂದು ಹಮ್ಮಿಕೊಳ್ಳಲಾಗಿದೆ.
    ಸಿಂಗನಮನೆ ಮತ್ತು ತಾವರಘಟ್ಟ ಗ್ರಾಮ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಮತ್ತು ಸರ್ಕಾರಿ ಸಂಯುಕ್ತ ಆಸ್ಪತ್ರೆ, ಸಿಂಗನಮನೆ ಇವುಗಳ ಸಹಯೋಗದೊಂದಿಗೆ ಶಿಬಿರ ನಡೆಯುತ್ತಿದ್ದು, ಬೆಳಿಗ್ಗೆ ೯ ಗಂಟೆಗೆ ಬಿ.ಆರ್ ಪ್ರಾಜೆಕ್ಟ್ ಸರ್ಕಾರಿ ಸಂಯುಕ್ತ ಆಸ್ಪತ್ರೆಯಲ್ಲಿ ಆರಂಭಗೊಳ್ಳಲಿದೆ. ಕೋವಿಡ್ ನಿಯಮ ಪಾಲನೆಗಳೊಂದಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗಪಡೆದುಕೊಳ್ಳುವ ಜೊತೆಗೆ ಯಶಸ್ವಿಗೊಳಿಸುವಂತೆ ಸ್ವರೂಪ್ ಜೈನ್ ಕೋರಿದ್ದಾರೆ.

ಎಂಇಎಸ್ ಪುಂಡರನ್ನು ಗಡಿಪಾರು ಮಾಡಿ, ಸಂಘಟನೆ ನಿಷೇಧಿಸಿ : ಆಗ್ರಹ

ತಾಲೂಕು ಕುರುಬರ ಸಂಘದಿಂದ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ


ಅಪ್ರತಿಮಾ ದೇಶ ಭಕ್ತ, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿರುವ ಎಂಇಎಸ್ ಪುಂಡರ ಮೇಲೆ ನಾಡದ್ರೋಹ, ದೇಶದ್ರೋಹ ಪ್ರಕರಣ ದಾಖಲಿಸಿ ತಕ್ಷಣ ಗಡಿಪಾರು ಮಾಡುವಂತೆ ಹಾಗು ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸುವಂತೆ ಆಗ್ರಹಿಸಿ ಸೋಮವಾರ ಭದ್ರಾವತಿಯಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೨೦: ಅಪ್ರತಿಮಾ ದೇಶ ಭಕ್ತ, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿರುವ ಎಂಇಎಸ್ ಪುಂಡರ ಮೇಲೆ ನಾಡದ್ರೋಹ, ದೇಶದ್ರೋಹ ಪ್ರಕರಣ ದಾಖಲಿಸಿ ತಕ್ಷಣ ಗಡಿಪಾರು ಮಾಡುವಂತೆ ಹಾಗು ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸುವಂತೆ ಆಗ್ರಹಿಸಿ ಸೋಮವಾರ ತಾಲೂಕು ಕುರುಬರ ಸಂಘದ ವತಿಯಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಈ ಸಂದರ್ಭದಲ್ಲಿ ಮಾತನಾಡಿ ಪ್ರಮುಖರು, ರಾಜ್ಯದಲ್ಲಿ ಎಂಇಎಸ್ ಪುಂಡರು ಮನಬಂದಂತೆ ವರ್ತಿಸುತ್ತಿದ್ದಾರೆ. ಬೆಳಗಾವಿಯಲ್ಲಿ ನಾಡಧ್ವಜ ಸುಟ್ಟು ಹಾಕಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಅಲ್ಲದೆ ಅಪ್ರತಿಮಾ ದೇಶ ಭಕ್ತ, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿ ದೇಶ ಭಕ್ತನನ್ನು ಅವಮಾನಗೊಳಿಸಿದ್ದಾರೆ. ಅದರಲ್ಲೂ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಯಾವುದೇ ಭಯವಿಲ್ಲದೆ ಪುಂಡಾಟಿಕೆ ಮಾಡುತ್ತಿದ್ದಾರೆ. ಪ್ರತಿ ಬಾರಿ ನಾಡು, ನುಡಿ  ವಿಷಯದಲ್ಲಿ ಕನ್ನಡಿಗರನ್ನು ಅವಮಾನಿಸಿ ಹಾಗು ನಾಡಿನ ಮಹಾನ್ ವ್ಯಕ್ತಿಗಳನ್ನು ಅಡ್ಡತಂದು ಅಶಾಂತಿ ವಾತಾವರಣ ನಿರ್ಮಿಸುತ್ತಿದ್ದಾರೆಂದು ಆರೋಪಿಸಿದರು.
    ತಕ್ಷಣ ಆಶಾಂತಿ ವಾತಾವರಣ ನಿರ್ಮಾಣಗೊಳ್ಳಲು ಕಾರಣಕರ್ತರಾಗಿರುವ ಪುಂಡರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ನಾಡದ್ರೋಹ, ದೇಶದ್ರೋಹ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು. ರಾಜ್ಯದಲ್ಲಿ ಎಂಇಎಸ್ ಕಾರ್ಯಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿದರು.
    ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಎಂ ಸಂತೋಷ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ನಗರಸಭಾ ಸದಸ್ಯರಾದ ಕಾಂತರಾಜ್, ಶ್ರೇಯಸ್, ಮಹಿಳಾ ಪ್ರಮುಖರಾದ ಶಾರದಮ್ಮ, ಹೇಮಾವತಿ ಶಿವಾನಂದ್, ಸಂಘದ ಪ್ರಮುಖರಾದ ಕಾರ್ಯದರ್ಶಿ ಬಿ.ಎ ರಾಜೇಶ್, ಸಹ ಕಾರ್ಯದರ್ಶಿ ಶ್ರೀನಿವಾಸ್, ನಿರ್ದೇಶಕರಾದ ಬಿ.ಎಚ್ ರಾಜಪ್ಪ, ಚಂದ್ರಪ್ಪ, ಬಿ.ಎಸ್ ಮಂಜುನಾಥ್, ಎನ್.ಸತೀಶ್, ವಸಂತ್, ಮಾಜಿ ಅಧ್ಯಕ್ಷ ತಿಮ್ಮಣ್ಣ, ಕೆ.ಎನ್ ನಾಗರಾಜ್, ನಾಗಭೂಷಣ್, ಸಣ್ಣಯ್ಯ, ನಗರಸಭೆ ಮಾಜಿ ಸದಸ್ಯ ಸುಬ್ಬಣ್ಣ,  ಆಮ್‌ ಆದ್ಮಿ ಪಾರ್ಟಿಯ ಎಚ್.‌ ರವಿಕುಮಾರ್‌, ಕೇಸರಿ ಪಡೆ ಅಧ್ಯಕ್ಷ ಕೆ.ಪಿ ಗಿರೀಶ್‌, ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಕಾರ್ಯಾಧ್ಯಕ್ಷ ಅಭಿಲಾಷ್, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ವಿನೋದ್‌ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಎನ್ವಿರಾನ್ಮೆಂಟ್ ಮ್ಯಾನೇಜ್‌ಮೆಂಟ್ ಪ್ರಶಸ್ತಿ

 ಭದ್ರಾವತಿ, ಡಿ. ೨೦ : ಉಕ್ಕು ವಲಯಕ್ಕೆ ನೀಡುವ ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಎನ್ವಿರಾನ್ಮೆಂಟ್ ಮ್ಯಾನೇಜ್‌ಮೆಂಟ್ ಪ್ರಶಸ್ತಿಯನ್ನು ಈ ಬಾರಿ ಸಹ ಭಾರತೀಯ ಉಕ್ಕು ಪ್ರಾಧಿಕಾರ (ಸೈಲ್) ಪಡೆದುಕೊಂಡಿದೆ.
    ಸತತವಾಗಿ ೩ ವರ್ಷಗಳಿಂದ ಈ ಪ್ರಶಸ್ತಿಯನ್ನು ಸೈಲ್ ತನ್ನದಾಗಿಸಿಕೊಂಡು ಬಂದಿದೆ. ಸುಸ್ಥಿರ ಮತ್ತು ಜವಾಬ್ದಾರಿಯುತ ಪರಿಸರ ಉಕ್ಕಿನ ತಯಾರಿಕೆಗಾಗಿ ಕಂಪನಿಯು ಮಾಡಿದ ಪ್ರಯತ್ನಗಳಿಗೆ ಈ ಪ್ರಶಸ್ತಿ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಾರದು.
    ಹವಾಮಾನ ಬದಲಾವಣೆಯ ಬಗೆಯಿರುವ ಜಾಗತಿಕ ಕಾಳಜಿಗೆ ಸೈಲ್ ಸಂವೇದನಾಶೀಲವಾಗಿದೆ. ಕಾರ್ಬನ್ ಹೆಜ್ಜೆ ಗುರುತಿನ ಕಡಿತವು ಕಂಪನಿಯ ಕಾರ್ಪೊರೇಟ್ ನೀತಿಗಳು ಮತ್ತು ಕಾರ್ಯಾಚರಣೆಗಳ ಅವಿಭಾಜ್ಯ ಅಂಗವಾಗಿದೆ. ಅತ್ಯಾಧುನಿಕ ಪರಿಸರ ಸ್ನೇಹಿ ತಂತ್ರಜ್ಞಾನದ ನಿಯೋಜನೆ, ಸಂಪನ್ಮೂಲ ದಕ್ಷತೆಗಾಗಿ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ ಆರ್ ಮತ್ತು ಡಿ ಉಪಕ್ರಮಗಳು, ಬೃಹತ್ ಪ್ರಮಾಣದಲ್ಲಿ ಸಸಿಗಳನ್ನು ನೆಡುವ ಮೂಲಕ ಕಾರ್ಬನ್ ಸಿಂಕ್‌ಗಳ ರಚನೆ, ಎಲ್.ಇ.ಡಿ ದೀಪಗಳಿಗೆ ಕ್ರಮೇಣ ಬದಲಾವಣೆ, ನವೀಕರಿಸಬಹುದಾದ ಇಂಧನಗಳ ಪಾಲನ್ನು ಹೆಚ್ಚಿಸುವುದು ಸೇರಿದಂತೆ ಇತ್ಯಾದಿ ಪ್ರಮುಖ ಉಪಕ್ರಮಗಳನ್ನು ಸೈಲ್ ರೂಪಿಸಿಕೊಂಡಿದೆ.



    ಮಾಲಿನ್ಯ ನಿಯಂತ್ರಣ ಸೌಲಭ್ಯಗಳನ್ನು ನವೀಕರಿಸುವುದು, ಶೂನ್ಯ ದ್ರವ ವಿಸರ್ಜನೆಯನ್ನು ಸಾಧಿಸುವ ಗುರಿಯೊಂದಿಗೆ ನೀರಿನ ಸಂರಕ್ಷಣೆಯ ಪ್ರಯತ್ನಗಳು ಕಂಪನಿಯ ಪರಿಸರ ಸಂರಕ್ಷಣಾ ಕ್ರಮಗಳಾಗಿವೆ. ವಿವಿಧ ಘನತಾಜ್ಯಗಳ ಸಮರ್ಥ ನಿರ್ವಹಣೆ (ಅಂದರೆ ಪ್ರಕ್ರಿಯೆ ತ್ಯಾಜ್ಯ, ಅಪಾಯಕಾರಿ ತ್ಯಾಜ್ಯ, ಕ್ಯಾಂಟೀನ್/ ನಗರಪ್ರದೇಶದ ತ್ಯಾಜ್ಯ) ಸೇರಿದಂತೆ ವಿವಿಧ ಪರಿಸರ ಸಂರಕ್ಷಣ ಕ್ರಮಗಳನ್ನು ಅಳವಡಿಸಿಕೊಳ್ಳುವುದರ ಮೇಲೆ ಕೇಂದ್ರೀಕೃತವಾಗಿವೆ. ಅರಣ್ಯೀಕರಣದ ಮೂಲಕ ಇಂಗಾಲದ ವಶಪಡಿಸಿಕೊಳ್ಳುವಿಕೆ, ಗಣಿಗಾರಿಕೆಯಿಂದ ಹೊರಗಿರುವ ಪ್ರದೇಶದ ಪರಿಸರ ಮರುಸ್ಥಾಪನೆ ಇತ್ಯಾದಿ ಗುರಿ ಹೊಂದಿದೆ.
    ಇತ್ತೀಚೆಗೆ ನಡೆದ ವರ್ಚುಯಲ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಸೈಲ್ ಸ್ವೀಕರಿಸಿದೆ. ಸತತವಾಗಿ ೩ ಬಾರಿ ಪ್ರಶಸ್ತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಸೈಲ್‌ ಆಡಳಿತ ಮಂಡಳಿಗೆ ನಗರ ವಿಐಎಸ್‌ಎಲ್‌ ಕಾರ್ಖಾನೆಯ ಸಮುದಾಯ ಅಭಿನಂದನೆ ಸಲ್ಲಿಸಿದೆ.  

Sunday, December 19, 2021

ಭದ್ರಾವತಿಯಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆ

 ಖಾಸಗಿ ಆಸ್ಪತ್ರೆ ನರ್ಸಿಂಗ್ ವಿದ್ಯಾರ್ಥಿನಿಯಲ್ಲಿ ಸೋಂಕು


ಭದ್ರಾವತಿ: ನಗರದಲ್ಲಿ ಮೊದಲ ಬಾರಿಗೆ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದು, ಈ ಕುರಿತು ಆರೋಗ್ಯ ಸಚಿವ ಡಾ. ಸುಧಾಕರ್ ಸೋಮವಾರ ಸ್ಪಷ್ಟಪಡಿಸಿದ್ದಾರೆ.     

    ಇತ್ತೀಚೆಗೆ ನಗರದ ಖಾಸಗಿ ಆಸ್ಪತ್ರೆಯ ಒಟ್ಟು  27 ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ 20 ವರ್ಷದ ಓರ್ವ ವಿದ್ಯಾರ್ಥಿನಿಯಲ್ಲಿ ರೂಪಾಂತರಿ ವೈರಸ್ ಒಮಿಕ್ರಾನ್ ಪತ್ತೆಯಾಗಿದೆ.  ಶಿವಮೊಗ್ಗದಲ್ಲಿ ಪರೀಕ್ಷೆ ಬರೆಯಲು ತೆರಳಿದ್ದ ವಿದ್ಯಾರ್ಥಿಗಳಲ್ಲಿ ಓರ್ವ ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳ ತಪಾಸಣೆ ಪಡಿಸಲಾಗಿತ್ತು. ಈ ಸಂದರ್ಭದಲ್ಲಿ 27 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು.    

     ಈ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಸೀಲ್ ಡೌನ್  ಮಾಡಿ ಆಸ್ಪತ್ರೆಯಲ್ಲಿ ಇರುವವರ ಮೇಲೆ ನಿಗಾ ವಹಿಸಲಾಗಿತ್ತು. ಈ ನಡುವೆ ಸೋಂಕಿತರ  ಮಾದರಿಯನ್ನು ಹೆಚ್ಚಿನ ತಪಾಸಣೆಗೆ  ಜಿನೋಮಿಕ್ ಸೀಕ್ವೆನ್ಸಿಂಗ್‌ಗೆ ರವಾನೆ ಮಾಡಲಾಗಿತ್ತು.  ಇದರ ಫಲಿತಾಂಶ ಭಾನುವಾರ  ಹೊರಬಿದ್ದಿದ್ದು   ಈ ಪೈಕಿ ಓರ್ವ ವಿದ್ಯಾರ್ಥಿನಿಯಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿದೆ.   ಈ   ವಿದ್ಯಾರ್ಥಿನಿಗೆ  ಹೆಚ್ಚಿನ ಚಿಕಿತ್ಸೆ  ಮುಂದುವರಿಸಲು ಸೂಚಿಸಲಾಗಿದೆ.

ಈ ಬಾರಿ ಅಧಿವೇಶನದಲ್ಲಿ ತಡವಾಗಿ ಪಾಲ್ಗೊಳ್ಳುತ್ತಿರುವ ಶಾಸಕ ಬಿ.ಕೆ ಸಂಗಮೇಶ್ವರ್

ಬಿ.ಕೆ ಸಂಗಮೇಶ್ವರ್
    ಭದ್ರಾವತಿ, ಡಿ. ೧೯: ಕಳೆದ ೨-೩ ವಿಧಾನಸಭೆ ಅಧಿವೇಶನದಲ್ಲಿ ಒಂದಿಲ್ಲೊಂದು ಕಾರಣದಿಂದ ರಾಜ್ಯದ  ಗಮನ ಸೆಳೆದಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಈ ಬಾರಿ ಬೆಳಗಾವಿ ಅಧಿವೇಶನದಲ್ಲಿ ತಡವಾಗಿ ಪಾಲ್ಗೊಳ್ಳುತ್ತಿದ್ದಾರೆ.
    ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಶಾಸಕರು ಈ ಬಾರಿ ಬೆಳಗಾವಿ ಅಧಿವೇಶನದಿಂದ ದೂರ ಉಳಿಯುವ ಲಕ್ಷಣಗಳು ಕಂಡು ಬರುತ್ತಿದ್ದವು. ಈ ನಡುವೆ ಶಾಸಕರು ಪತ್ರಿಕೆಗೆ ಮಾಹಿತಿ ನೀಡಿ ಸೋಮವಾರದಿಂದ ಅಧಿವೇಶನದಲ್ಲಿ ಪಾಲ್ಗೊಳ್ಳುವುದಾಗಿ ಸ್ಪಷ್ಟಪಡಿಸಿದರು.
    ಈ ನಡುವೆ ವಿಧಾನಪರಿಷತ್ ಚುನಾವಣೆ ಎದುರಾದ ಹಿನ್ನಲೆಲ್ಲಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿದ್ದು, ಬೆಳಗಾವಿ ಅಧಿವೇಶನದಲ್ಲಿ ಇವುಗಳ ಕುರಿತು ಚರ್ಚಿಸಲಿದ್ದಾರೆ ಎನ್ನಲಾಗಿದೆ. 

ಆರೋಗ್ಯ ರಕ್ಷಾ ಸಮಿತಿಗೆ ೬ ಮಂದಿ ನೂತನ ಸದಸ್ಯರು ನಾಮನಿರ್ದೇಶನ

    ಭದ್ರಾವತಿ, ಡಿ. ೧೯: ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ೬ ಮಂದಿಯನ್ನು ನೂತನ ಸದಸ್ಯರಾಗಿ ಸರ್ಕಾರ ನಾಮನಿರ್ದೇಶನಗೊಳಿಸಿ ಆದೇಶ ಹೊರಡಿಸಿದೆ. 
      ಪರಿಶಿಷ್ಟ ಜಾತಿಯಿಂದ ಹೊಸಮನೆ ಭೋವಿ ಕಾಲೋನಿ ನಿವಾಸಿ ಪಿ. ಗಣೇಶ್‌ರಾವ್, ಮಹಿಳಾ ಸ್ಥಾನದಿಂದ ಹೊಸಮನೆ ಶಿವಾಜಿ ಸರ್ಕಲ್ ನಿವಾಸಿ ಅನುಷಾ, ಸಾಮಾನ್ಯ ವಿಭಾಗದಿಂದ ಹೊಸಮನೆ ಎನ್‌ಎಂಸಿ ನಿವಾಸಿಗಳಾದ ವಿ. ರಾಮನಾಥ್, ಬಿ.ಎಸ್ ಶ್ರೀನಾಥ್, ನ್ಯೂಟೌನ್ ಆಂಜನೇಯ ಅಗ್ರಹಾರ ನಿವಾಸಿ ಎಚ್. ರಘುರಾವ್ ಮತ್ತು ಅಣ್ಣಾನಗರದ ನಿವಾಸಿ ಪಿ. ಕೃಷ್ಣಮೂರ್ತಿ ಅವರನ್ನು ರಾಜ್ಯಪಾಲರ ನಿರ್ದೇಶನ ಮೇರೆಗೆ ನಾಮನಿರ್ದೇಶನಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ವಿ. ಪದ್ಮ ಆದೇಶ ಹೊರಡಿಸಿದ್ದಾರೆ.

ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಸ್‌ಗಳು ಸಮಾಜದ ಮುಖ್ಯ ವಾಹಿನಿಗೆ ಬರಲಿ : ಚಿನ್ನಯ್ಯ

ಭದ್ರಾವತಿ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಗರಾಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಮತ್ತು ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಸ್‌ಗಳ ಸಮೀಕ್ಷೆ ಕಾರ್ಯಕ್ರಮದಲ್ಲಿ ಎಂದು ಸಫಾಯಿ ಕರ್ಮಚಾರಿಗಳ ಆಯೋಗದ ಜಿಲ್ಲಾ ಸಮಿತಿ ಸದಸ್ಯ ಚಿನ್ನಯ್ಯ ಮಾತನಾಡಿದರು.
    ಭದ್ರಾವತಿ, ಡಿ. ೧೯: ರಾಜ್ಯದಲ್ಲಿ ೨೦೧೩ರಲ್ಲಿಯೇ ಮಲಹೊರುವ ಪದ್ದತಿ ನಿಷೇಧಿಸಲಾಗಿದ್ದು, ಆದರೂ ಸಹ ಇಂದಿಗೂ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರು ಕಂಡು ಬರುತ್ತಿದ್ದಾರೆ. ಇವರನ್ನು ಗುರುತಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಎಲ್ಲರದ್ದಾಗಿದೆ ಎಂದು ಸಫಾಯಿ ಕರ್ಮಚಾರಿಗಳ ಆಯೋಗದ ಜಿಲ್ಲಾ ಸಮಿತಿ ಸದಸ್ಯ ಚಿನ್ನಯ್ಯ ಹೇಳಿದರು.
    ಅವರು ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಗರಾಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಮತ್ತು ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಸ್‌ಗಳ ಸಮೀಕ್ಷೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಮಲಹೊರುವ ಪದ್ದತಿ ಸಮಾಜದಲ್ಲಿ ಒಂದು ಅನಿಷ್ಟ ಪದ್ದತಿಯಾಗಿದ್ದು, ಈ ಪದ್ದತಿ ಸಂಪೂರ್ಣವಾಗಿ ನಿಷೇಧವಾಗಬೇಕು. ಈ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರು ತಕ್ಷಣ ಈ ವೃತ್ತಿಯನ್ನು ತೊರೆದು ಹೊರಬರಬೇಕು. ಈ ಕುರಿತು ಘೋಷಿಸಿಕೊಂಡ ಕುಟುಂಬಗಳಿಗೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ. ಇಲ್ಲವಾದಲ್ಲಿ ಭವಿಷ್ಯದಲ್ಲಿ ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
    ಈಗಲೂ ಸಹ ಮಲದ ಗುಂಡಿಗಳನ್ನು ಸ್ವಚ್ಛಗೊಳಿಸಲು ಕೆಲವರನ್ನು ಬಳಸಿಕೊಳ್ಳಲಾಗುತ್ತಿದೆ. ಈ ರೀತಿ ಮಾಡುವವರ ವಿರುದ್ಧ ಸಹ ಕಠಿಣ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಜಾರಿಗೆ ತರಲಾಗಿರುವ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಸ್‌ಗಳ ಸಮೀಕ್ಷೆ ಪರಿಣಾಮಕಾರಿ ನಡೆಯಬೇಕೆಂದರು.
    ನಗರಸಭೆ ಉಪಾಧ್ಯಕ್ಷ ಚನ್ನಪ್ಪ ಮಾತನಾಡಿ, ಹಿಂದಿನ ಕಾಲದಲ್ಲಿ ಕೆಲವರು ನಾಗರೀಕ ಸಮಾಜದಲ್ಲಿ ಸತಿಸಹಗಮನ ಪದ್ದತಿ, ಬಾಲ್ಯವಿವಾಹ ಸೇರಿದಂತೆ ಕೆಲವು ಅನಿಷ್ಠ ಪದ್ದತಿಗಳನ್ನು ಜಾರಿಗೆ ತಂದಿದ್ದರು. ಇಂತಹ ಪದ್ದತಿಗಳಲ್ಲಿ ಮಲ ಹೊರುವ ಪದ್ದತಿ ಸಹ ಒಂದಾಗಿದೆ. ಕೆಲಸ ಮಾಡುವುದು ತಪ್ಪಲ್ಲ. ಯಾವ ಕೆಲಸ ಮಾಡಬೇಕು, ಹೇಗೆ ಮಾಡಬೇಕೆಂಬ ಪರಿಕಲ್ಪನೆ ನಮ್ಮಲ್ಲಿರಬೇಕು. ಆಗ ಮಾತ್ರ ಈ ರೀತಿಯ ಅನಿಷ್ಟ ಪದ್ದತಿಗಳು ನಿರ್ಮೂಲನೆಯಾಗಲಿವೆ ಎಂದರು.
    ಪೌರಾಯುಕ್ತ ಕೆ. ಪರಮೇಶ್, ನಗರಸಭೆ ಸದಸ್ಯೆ ಸವಿತಾ ಉಮೇಶ್, ಪರಿಸರ ಅಭಿಯಂತರ ಪ್ರಭಾಕರ್ ಸೇರಿದಂತೆ ಇನ್ನಿತರರು ಮಾತನಾಡಿದರು. ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್, ಜಾನಪದ ಕಲಾವಿದ ತಮಟೆ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.