Wednesday, September 7, 2022

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ೧೫೦೦ಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿಗಳ ನಿಯೋಜನೆ

ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವದಲ್ಲಿ ಭಕ್ತಾಧಿಗಳಿಗೆ ವಿತರಿಸಲು ಸಿದ್ದಗೊಳ್ಳುತ್ತಿರುವ ಮೈಸೂರು ಪಾಕ್.  
    ಭದ್ರಾವತಿ, ಸೆ. ೭:  ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ವತಿಯಿಂದ ಹೊಸಮನೆ ತಮಿಳು ಶಾಲೆ ಬಳಿ ಪ್ರತಿಷ್ಠಾಪಿಸಲಾಗಿರುವ ಶ್ರೀವಿನಾಯಕ ಮೂರ್ತಿ ವಿಸರ್ಜನೆ ಗುರುವಾರ ನಡೆಯಲಿದ್ದು, ಈ ಬಾರಿ ಬಿಗಿ ಪೊಲೀಸ್ ಬಂದೋಬಸ್ತ್  ಕೈಗೊಳ್ಳಲು ಪೊಲೀಸ್ ಇಲಾಖೆ ವತಿಯಿಂದ ಜಿಲ್ಲಾ ರಕ್ಷಣಾಧಿಕಾರಿ ಹಾಗು ಹೆಚ್ಚುವರಿ ರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ೧೫೦೦ಕ್ಕೂ ಮಂದಿ ನಿಯೋಜನೆಗೊಳಿಸಲಾಗಿದೆ.
    ಈಗಾಗಲೇ ರಾಜಬೀದಿ ಉತ್ಸವ ಮೆರವಣಿಗೆ ನಡೆಯುವ ಪ್ರಮುಖ ರಸ್ತೆಗಳ ಆಯಾಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ನಗರಸಭೆ ವತಿಯಿಂದ ಬ್ಯಾರಿಗೇಡಿಗಳನ್ನು ನಿರ್ಮಿಸಿಕೊಡಲಾಗಿದೆ.
    ಬಿಗಿ ಪೊಲೀಸ್ ಪೊಲೀಸ್ ಬಂದೋಬಸ್ತ್‌ಗಾಗಿ ೬ ಪೊಲೀಸ್ ಉಪಾಧೀಕ್ಷಕರು, ೧೯ ವೃತ್ತ ನಿರೀಕ್ಷಕರು, ೩೧ ಠಾಣಾಧಿಕಾರಿಗಳು, ೮೨ ಸಹಾಯಕ ಠಾಣಾಧಿಕಾರಿಗಳು, ೯೨೨ ಕಾನ್ಸ್‌ಸ್ಟೇಬಲ್‌ಗಳು ಮತ್ತು ೪೦೮ ಗೃಹ ರಕ್ಷಕದಳ ಸಿಬ್ಬಂದಿ ಹಾಗು ೭ ಕ್ಯಾಮೆರಾ ಮೆನ್‌ಗಳು ಸೇರಿದಂತೆ ಒಟ್ಟು ೧೫೦೦ಕ್ಕೂ ಹೆಚ್ಚು ಮಂದಿ ನಿಯೋಜನೆಗೊಳಿಸಲಾಗಿದೆ. ಪೊಲೀಸ್ ಇಲಾಖೆ ಜೊತೆಗೆ ರ‍್ಯಾಪಿಡ್ ಆಕ್ಷನ್ ಫೋರ್ಸ್(ಆರ್‌ಎಎಫ್) ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸಹ ನಿಯೋಜನೆಗೊಳಿಸುವ ಸಾಧ್ಯತೆ ಇದೆ.
    ವಿನಾಯಕ ಮೂರ್ತಿ ಪ್ರತಿಷ್ಠಾಪನಾ ಸ್ಥಳದಿಂದ ಬೆಳಿಗ್ಗೆ ಆರಂಭಗೊಳ್ಳುವ ರಾಜಬೀದಿ ಉತ್ಸವ ಮೆರವಣಿಗೆ ಸಂಜೆ ನಗರಸಭೆ ಮುಂಭಾಗ ಅಂತ್ಯಗೊಳ್ಳಲಿದ್ದು, ನಂತರ ಭದ್ರಾ ನದಿಯಲ್ಲಿ ವಿಸರ್ಜನೆ ನಡೆಯಲಿದೆ.
     ಸಾರ್ಥಕ ಸಮಾಜಮುಖಿ ಟ್ರಸ್ಟ್ ವತಿಯಿಂದ ೧೦ ಸಾವಿರ ಮೈಸೂರು ಪಾಕ್ ವಿತರಣೆ:
    ೫೦ನೇ ವರ್ಷದ ಶ್ರೀವಿನಾಯಕ ಮೂರ್ತಿ ವಿಸರ್ಜನೆ ಹಿನ್ನಲೆಯಲ್ಲಿ ಸಾರ್ಥಕ ಸಮಾಜಮುಖಿ ಟ್ರಸ್ಟ್ ವತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜೊತೆಗೆ ವಿಶೇಷವಾಗಿ ಸುಮಾರು ೧೦ ಸಾವಿರ ಮೈಸೂರು ಪಾಕ್ ವಿತರಣೆ ನಡೆಯಲಿದೆ.
  ಸಾರ್ಥಕ ಸಮಾಜಮುಖಿ ಟ್ರಸ್ಟ್ ಹಲವಾರು ವರ್ಷಗಳಿಂದ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಈ ಬಾರಿ ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಕೊಡಬೇಕೆಂದು  ಟ್ರಸ್ಟ್ ಸಂಸ್ಥಾಪಕ ಚಂದ್ರಶೇಖರ್ ಬಿ ಮಾನಾಚಾರಿ ಕೋರಿದ್ದಾರೆ.

ಮುರುಘಾ ಶ್ರೀಗಳ ಮೇಲಿನ ಪ್ರಕರಣ ನಿಷ್ಪಕ್ಷಪಾತ ತನಿಖೆ ನಡೆಯಲಿ, ಸಂತ್ರಸ್ಥ ಅಪ್ರಾಪ್ತ ಬಾಲಕಿಯರಿಗೆ ಭದ್ರೆತೆ, ನ್ಯಾಯ ಒದಗಿಸಿ

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಕೆ

ಚಿತ್ರದುರ್ಗ ಮುರುಘಾ ಮಠದ ಶ್ರೀಗಳ ಮೇಲಿನ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಸಂತ್ರಸ್ಥ ಅಪ್ರಾಪ್ತ ಬಾಲಕಿಯರಿಗೆ ನ್ಯಾಯ ಒದಗಿಸಿಕೊಡುವ ಜೊತೆಗೆ ಬಿಗಿ ಭದ್ರತೆ ನೀಡಬೇಕೆಂದು ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ವತಿಯಿಂದ ಭದ್ರಾವತಿ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಸೆ. ೭: ಚಿತ್ರದುರ್ಗ ಮುರುಘಾ ಮಠದ ಶ್ರೀಗಳ ಮೇಲಿನ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಸಂತ್ರಸ್ಥ ಅಪ್ರಾಪ್ತ ಬಾಲಕಿಯರಿಗೆ ನ್ಯಾಯ ಒದಗಿಸಿಕೊಡುವ ಜೊತೆಗೆ ಬಿಗಿ ಭದ್ರತೆ ನೀಡಬೇಕೆಂದು ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ವತಿಯಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಹಾಗು ಒಕ್ಕೂಟದ ರಾಜ್ಯಾಧ್ಯಕ್ಷ ವಿ. ವಿನೋದ್ ಸೇರಿದಂತೆ  ಪ್ರಮುಖರು ಮಾತನಾಡಿ, ಶ್ರೀಗಳು ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿದ್ದು, ಕಾನೂನು ಪ್ರಕಾರ ಎಲ್ಲರೂ ಒಂದೇ ಆಗಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ(ಪೋಕ್ಸೋ)ಯಡಿ ಪ್ರಕರಣ ದಾಖಲಾದ ೨೪ ಗಂಟೆಯೊಳಗೆ ಆರೋಪ ಎದುರಿಸುತ್ತಿರುವವರನ್ನು ಬಂಧಿಸಬೇಕು. ಆದರೆ ಶ್ರೀಗಳನ್ನು ವಿಳಂಬವಾಗಿ ಬಂಧಿಸಲಾಗಿದೆ. ಆರೋಪ ಎದುರಿಸುವ ಸಾಮಾನ್ಯ ಜನರಿಗೆ ಒಂದು ರೀತಿ ಕಾನೂನು, ಶ್ರೀಗಳಿಗೆ ಒಂದು ರೀತಿ ಕಾನೂನು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಶ್ರೀಗಳು ತಮ್ಮ ಮೇಲೆ ಬಂದಿರುವ ಆರೋಪವನ್ನು ಏಸು, ಬುದ್ಧ, ಸೆಕ್ರಿಟಿಸ್ ಮತ್ತು ಬಸವಣ್ಣನವರ ಮೇಲೆ ಬಂದ ಆರೋಪಗಳೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಶ್ರೀಗಳು ಮಹಾನ್ ವ್ಯಕ್ತಿಯಾಗಿ ಬಿಂಬಿಸಿಕೊಳ್ಳಲು ಯತ್ನಿಸುವ ಮೂಲಕ ಜನಸಾಮಾನ್ಯರ ದಿಕ್ಕು ತಪ್ಪಿಸುತ್ತಿದ್ದಾರೆಂದು ಆರೋಪಿಸಿದರು.
    ಏಸು, ಬುದ್ಧ, ಸೆಕ್ರಿಟಿಸ್ ಮತ್ತು ಬಸವಣ್ಣನವರಂತಹ ಮಹಾಪುರುಷರೇ ಅವರ ಮೇಲೆ ಆರೋಪಗಳು ಬಂದಾಗ ಅವರು ನಿಷ್ಪಕ್ಷವಾಗಿ ಸ್ವಯಂ ತಾವುಗಳೇ ತನಿಖೆಗೆ ಒಳಪಡಲು ಸಿದ್ದರಾಗಿ ನಂತರ ಅವರ ಮೇಲಿನ ಎಲ್ಲಾ ಆರೋಪಗಳಿಂದ ಮುಕ್ತರಾಗಿ ಹೊರ ಬಂದಿರುತ್ತಾರೆ. ಇದೆ ರೀತಿ ಶ್ರೀಗಳು ಸಹ ಸ್ವಯಂ ತನಿಖೆಗೆ ಒಳಪಟ್ಟು ನಿರಪರಾಧಿ ಎಂದು ಸಾಬೀತು ಮಾಡಬೇಕು. ಅಲ್ಲಿಯ ವರೆಗೂ ಮಠದ ಅಧಿಕಾರದಿಂದ ದೂರವಿರಬೇಕೆಂದು ಆಗ್ರಹಿಸಿದರು.
    ಮುಖ್ಯಮಂತ್ರಿಗಳು ಶ್ರೀಗಳ ಮೇಲಿನ ಪ್ರಕರಣ ನಿಷ್ಪಕ್ಷವಾಗಿ ತನಿಖೆ ನಡೆಯುವಂತೆ ನೋಡಿಕೊಳ್ಳಬೇಕು. ಸಂತ್ರಸ್ಥ ಅಪ್ರಾಪ್ತ ಬಾಲಕಿಯರಿಗೆ ನ್ಯಾಯ ಒದಗಿಸಿಕೊಡುವ ಜೊತೆಗೆ ಬಿಗಿ ಭದ್ರತೆ ನೀಡಬೇಕೆಂದು ಆಗ್ರಹಿಸಿದರು.
    ಒಕ್ಕೂಟದ ಪ್ರಮುಖರಾದ ಎಸ್. ವೆಂಕಟೇಶ್, ವಿ. ಅರವಿಂದ್, ಸಂಧ್ಯಾ, ಕುಮಾರ್, ರಾಮು, ಸುಶೀಲಮ್ಮ, ಎಚ್. ನಿಂಗರಾಜ್, ಮಹೇಶ್ವರಿ, ಬಸವರಾಜ್, ಭಾನುಪ್ರಿಯ, ಎನ್. ವೆಂಕಟೇಶ್, ಚಲುವರಾಜ್, ಅರುಳ್, ಕೆ. ರಾಜು, ಗೀತಾ, ಎಸ್. ಕುಮಾರ್, ಸುಬ್ರಮಣಿ, ಸುಧಾಕರ್, ನಾಗರಾಜ್ ಮತ್ತು ಬಾಷಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶಾಸಕರಿಂದ ಪೊಲೀಸ್ ಠಾಣೆಗೆ ಟಿ.ವಿ ಕೊಡುಗೆ

ಭದ್ರಾವತಿಯಲ್ಲಿ ಪೊಲೀಸ್ ಇಲಾಖೆಗೆ ಸಿ.ಸಿ ಕ್ಯಾಮೆರಾ ಮೂಲಕ ನಗರದ ಪ್ರಮುಖ ವೃತ್ತಗಳ ವೀಕ್ಷಣೆಗೆ ಅನುಕೂಲವಾಗುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಟಿ.ವಿ ಕೊಡುಗೆಯಾಗಿ ನೀಡಿದ್ದಾರೆ.
    ಭದ್ರಾವತಿ, ಸೆ. ೭: ಪೊಲೀಸ್ ಇಲಾಖೆಗೆ ಸಿ.ಸಿ ಕ್ಯಾಮೆರಾ ಮೂಲಕ ನಗರದ ಪ್ರಮುಖ ವೃತ್ತಗಳ ವೀಕ್ಷಣೆಗೆ ಅನುಕೂಲವಾಗುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಟಿ.ವಿ ಕೊಡುಗೆಯಾಗಿ ನೀಡಿದ್ದಾರೆ.
    ಪೊಲೀಸ್ ನಗರ ವೃತ್ತ ನಿರೀಕ್ಷಕರ ಕಛೇರಿಗೆ ಟಿ.ವಿ ಅಗತ್ಯತೆ ಮನಗಂಡು ಕೊಡುಗೆಯಾಗಿ ನೀಡಲಾಗಿದ್ದು, ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮ, ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಹಾಗು ಸಿಬ್ಬಂದಿಗಳು ಟಿ.ವಿ ಸ್ವೀಕರಿಸಿದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಬಸವೇಶ್, ನಗರಸಭಾ ಸದಸ್ಯ ಆರ್. ಶ್ರೇಯಸ್(ಚಿಟ್ಟೆ) ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಳಾಸ ದೃಢೀಕರಣ ಮಾಹಿತಿ ನೀಡಿ ಸಹಕರಿಸಿ

    ಭದ್ರಾವತಿ, ಸೆ. ೭ : ನಗರದ ಚನ್ನಗಿರಿ ರಸ್ತೆಯ ಶ್ರೀ ಭವಾನಿ ಸಂಕೀರ್ಣದಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ಸರ್ವ ಸದಸ್ಯರ ಸಭೆ ನಡೆಸಲು ಉದ್ದೇಶಿಸಲಾಗಿದ್ದು, ಒಂದು ವೇಳೆ ಸದಸ್ಯರ ವಿಳಾಸ ಬದಲಾವಣೆಯಾಗಿದ್ದಲ್ಲಿ ವಿಳಾಸದ ದೃಢೀಕರಣ ದಾಖಲಾತಿಯೊಂದಿಗೆ ಸಂಘದ ಕಛೇರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
    ಸರ್ವ ಸದಸ್ಯರ ಸಭೆ ಹಿನ್ನಲೆಯಲ್ಲಿ ಈಗಾಗಲೇ ಸದಸ್ಯರಿಗೆ ಅಂಚೆ ಮೂಲಕ ಆಹ್ವಾನ ಪತ್ರಿಕೆಗಳನ್ನು ಕಳುಹಿಸಲಾಗಿದೆ. ಆದರೆ ಕೆಲವು ಆಹ್ವಾನ ಪತ್ರಿಕೆಗಳು ಹಿಂದಿರುಗಿವೆ. ಒಂದು ವೇಳೆ ಸದಸ್ಯರ ವಿಳಾಸಗಳು ಬದಲಾವಣೆಯಾಗಿದ್ದಲ್ಲಿ ಅಥವಾ ತಾಲೂಕಿನ ಹೊರಗೆ ವಾಸಿಸುತ್ತಿದ್ದರೇ ತಕ್ಷಣ ವಿಳಾಸ ದೃಡೀಕರಣದ ಮಾಹಿತಿಯನ್ನು ಸಂಘದ ಕಛೇರಿಗೆ ತಿಳಿಸುವಂತೆ ಸಂಘದ ಕಾರ್ಯದರ್ಶಿ ವಿಶ್ವೇಶ್ವರರಾವ್ ಗಾಯಕ್‌ವಾಡ್ ಕೋರಿದ್ದಾರೆ.

Tuesday, September 6, 2022

ವೇಳಾಂಗಣಿ ಆರೋಗ್ಯಮಾತೆಯ ಪುಣ್ಯಕ್ಷೇತ್ರದಲ್ಲಿ ಜಯಂತ್ಯೋತ್ಸವ, ವಾರ್ಷಿಕೋತ್ಸವ

ಭದ್ರಾವತಿ ಗಾಂಧಿನಗರದಲ್ಲಿರುವ ವೇಳಾಂಗಣಿ ಆರೋಗ್ಯಮಾತೆಯ ಪುಣ್ಯಕ್ಷೇತ್ರದಲ್ಲಿ ಮಾತೆಯ ಜಯಂತ್ಯೋತ್ಸವ ಹಾಗು ಪುಣ್ಯಕ್ಷೇತ್ರದ ವಾರ್ಷಿಕೋತ್ಸವ ಜರುಗುತ್ತಿವೆ.
  ಭದ್ರಾವತಿ, ಸೆ. ೬: ಗಾಂಧಿನಗರದಲ್ಲಿರುವ ವೇಳಾಂಗಣಿ ಆರೋಗ್ಯಮಾತೆಯ ಪುಣ್ಯಕ್ಷೇತ್ರದಲ್ಲಿ ಮಾತೆಯ ಜಯಂತ್ಯೋತ್ಸವ ಹಾಗು ಪುಣ್ಯಕ್ಷೇತ್ರದ ವಾರ್ಷಿಕೋತ್ಸವ ನಡೆಯುತ್ತಿದ್ದು, ನಗರದ ವಿವಿಧೆಡೆಗಳಿಂದ ಭಕ್ತರು ಪಾಲ್ಗೊಳ್ಳುವ ಮೂಲಕ ತಮ್ಮ ನಿವೇದನೆಗಳನ್ನು ಸಮರ್ಪಿಸಿಕೊಳ್ಳುತ್ತಿದ್ದಾರೆ.
    ಈ ಭಾಗದಲ್ಲಿ ವೇಳಾಂಗಣಿ ಆರೋಗ್ಯಮಾತೆಯ ಪುಣ್ಯಕ್ಷೇತ್ರ ಇಂದಿಗೂ ತನ್ನದೇ ಆದ ವಿಶಿಷ್ಟತೆಯನ್ನು ಕಾಯ್ದುಕೊಂಡು ಬಂದಿದೆ. ಕ್ಯಾಥೋಲಿಕ್ ಕ್ರೈಸ್ತ ಸಮುದಾಯದವರ ಧಾರ್ಮಿಕ ಅಗತ್ಯತೆಗಳನ್ನು ಪೂರೈಸುವ ಜೊತೆಗೆ ಪವಾಡ ಕ್ಷೇತ್ರವಾಗಿ ಸಹ ಗುರುತಿಸಿಕೊಂಡಿದೆ.
    ಆ.೨೯ರಿಂದ ಮಾತೆಯ ಜಯಂತ್ಯೋತ್ಸವ ಹಾಗು ಪುಣ್ಯಕ್ಷೇತ್ರದ ವಾರ್ಷಿಕೋತ್ಸವ ನಡೆಯುತ್ತಿದ್ದು, ಮಾತೆ ಧರ್ಮಸಭೆಯ ಮಕ್ಕಳನ್ನು ಅನ್ಯೋನ್ಯತೆಯೆಡೆಗೆ ಮುನ್ನಡೆಸುವ ಮಹಾಮಾತೆ ಎಂಬ ಧ್ಯೇಯ ವಾಕ್ಯದೊಂದಿಗೆ ಮಕ್ಕಳ ದಿನ, ಕ್ರಿಸ್ತನೊಂದಿಗೆ ಪಯಣಿಸುವ ಮಾತೆ, ಯುವಜನತೆಯನ್ನು ಸಹಭಾಗಿತ್ವದಲ್ಲಿ ನಡೆಸುವ ಕೃಪಾದಾತೆ ಎಂಬ ಧ್ಯೇಯ ವಾಕ್ಯದೊಂದಿಗೆ ಯುವಜನರ ದಿನ, ಮರಿಯ ಪ್ರೇಷಿತರ ಸಮಾಗಮ, ಕುಟುಂಬದಲ್ಲಿ ಐಕ್ಯತೆಯ ಉಗಮ ಎಂಬ ಧ್ಯೇಯ ವಾಕ್ಯದೊಂದಿಗೆ ಕುಟುಂಬದ ದಿನ, ಮಾತೆಯ ಮಧ್ಯಸ್ಥಿಕೆ ಹಿರಿಯರಲ್ಲಿ ಚೇತರಿಕೆ ಎಂಬ ಧ್ಯೇಯ ವಾಕ್ಯದೊಂದಿಗೆ ಹಿರಿಯರ ದಿನ, ಮಾತೆಯ ಪ್ರಾರ್ಥನಾ ಸಾಂಗತ್ಯ ದಂಪತಿಗಳಿಗೆ ಅಗತ್ಯ ಎಂಬ ಧ್ಯೇಯ ವಾಕ್ಯದೊಂದಿಗೆ ದಂಪತಿಗಳ ದಿನ, ಮಾತೆಯ ವಿಶ್ವಾಸದ ಹಾದಿ, ಕಾರ್ಮಿಕರ ಬಾಳಿಗೆ ಭದ್ರ ಬುನಾದಿ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಮಿಕರ ದಿನ, ಮಾತೆಯ ದೈವ ವಾಕ್ಯದ ಅನುಸರಣೆ, ಶಿಕ್ಷಕರ ಬಾಳಿಗಾಗಲಿ ಪ್ರೇರಣೆ ಎಂಬ ವಾಕ್ಯದೊಂದಿಗೆ ಶಿಕ್ಷಕರ ದಿನ ಹಾಗು ಆರೋಗ್ಯ ಮಾತೆ ನಮ್ಮೆಲ್ಲರ ಸೌಖ್ಯ ದಾತೆ ಎಂಬ ಧ್ಯೇಯ ವಾಕ್ಯದೊಂದಿಗೆ ವೈದ್ಯ/ದಾದಿಯರ ದಿನಾಚರಣೆಗಳು ಈಗಾಗಲೇ ಜರುಗಿವೆ.
    ಸೆ.೭ರಂದು ಕ್ರೈಸ್ತ ತಾಯಿ ಮರಿಯಮ್ಮ, ಸುವಾರ್ತಿಕರ ಹರಸಮ್ಮ ಎಂಬ ಧೈಯ ವಾಕ್ಯದೊಂದಿಗೆ ಧಾರ್ಮಿಕರ ದಿನ ನಡೆಯಲಿದ್ದು, ಸಂಜೆ ೫ ಗಂಟೆಗೆ ಜಪಸರ, ಬಲಿಪೂಜೆ, ಪ್ರಬೋಧನೆ ಮತ್ತು ನವೇನ, ೬.೩೦ಕ್ಕೆ ನಗರದ ಪ್ರಮುಖ ರಸ್ತೆಗಳಲ್ಲಿ ಮಾತೆಯ ಅಲಂಕೃತ ತೇರಿನ ಮೆರವಣಿಗೆ ನಡೆಯಲಿದೆ.
    ಸೆ.೮ರಂದು ಮಾತೆ ಮರಿಯ : ಸರ್ವರ ಪೋಷಕಿ, ಸುವಾರ್ತಿಕರ ಪ್ರೇರಕಿ ಎಂಬ ಧ್ಯೇಯ ವಾಕ್ಯದೊಂದಿಗೆ ಸರ್ವರ ದಿನ ನಡೆಯಲಿದ್ದು, ಬೆಳಿಗ್ಗೆ ೭ ಗಂಟೆಯಿಂದ ೧೧ ಗಂಟೆವರೆಗೆ ಪೂಜೆಗಳು, ಮಧ್ಯಾಹ್ನ ೧೨.೩೦ಕ್ಕೆ ಅನ್ನದಾನ, ಸಂಜೆ ೫.೩೦ಕ್ಕೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆ ಜರುಗಲಿವೆ.
    ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಯಂತ್ಯೋತ್ಸವ ಹಾಗು ಪುಣ್ಯಕ್ಷೇತ್ರದ ವಾರ್ಷಿಕೋತ್ಸವ ಯಶಸ್ವಿಗೊಳಿಸುವಂತೆ ಧರ್ಮಗುರುಗಳು ಕೋರಿದ್ದಾರೆ.

ಹೆಲಿಪ್ಯಾಡ್ ಬಳಿ ಹಸುವಿನ ಮೃತದೇಹ ಪತ್ತೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೫ರ ಹುಡ್ಕೋ ಕಾಲೋನಿ ಹೆಲಿಪ್ಯಾಡ್ ಬಳಿ ಹಸುವಿನ ಮೃತದೇಹ ಪತ್ತೆಯಾಗಿದೆ.
    ಭದ್ರಾವತಿ, ಸೆ. ೬: ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೫ರ ಹುಡ್ಕೋ ಕಾಲೋನಿ ಹೆಲಿಪ್ಯಾಡ್ ಬಳಿ ಹಸುವಿನ ಮೃತದೇಹ ಪತ್ತೆಯಾಗಿದೆ.
    ಈ ಭಾಗದಲ್ಲಿ ವಾಯು ವಿಹಾರಕ್ಕೆ ಸಂಚರಿಸುವವರಿಗೆ ಮೃತದೇಹ ಕಂಡು ಬಂದಿದ್ದು, ಕೊಳೆತ ಸ್ಥಿತಿಯಲ್ಲಿರುವ ಮೃತದೇಹ ನಾಯಿ-ನರಿಗಳಿಗೆ ಆಹಾರವಾಗಿದೆ.
    ೨-೩ ದಿನಗಳು ಕಳೆದರೆ ಮೃತದೇಹ ಮತ್ತಷ್ಟು ಕೊಳೆತು ದುರ್ವಾಸನೆ ಬೀರುವ ಜೊತೆಗೆ ರೋಗರುಜಿನಗಳು ಹರಡುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಕ್ಷಣ ಮೃತದೇಹದ ಅಂತ್ಯಸಂಸ್ಕಾರ ನಡೆಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಸೆ.೮ರಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ : ರಾಜಬೀದಿ ಉತ್ಸವ ಮೆರವಣಿಗೆಗೆ ಸಕಲ ಸಿದ್ದತೆ

ಭದ್ರಾವತಿಯಲ್ಲಿ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ವತಿಯಿಂದ ನಿರ್ಮಿಸಲಾಗಿರುವ ರಾಜಮಹಾರಾಜರ ಕಾಲದ ಕೋಟೆಯಂತೆ ಕಾಣುವ ಮಹಾದ್ವಾರ.

    ಭದ್ರಾವತಿ, ಸೆ. ೬: ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ವತಿಯಿಂದ ಹೊಸಮನೆ ತಮಿಳು ಶಾಲೆ ಬಳಿ ಪ್ರತಿಷ್ಠಾಪಿಸಲಾಗಿರುವ ಶ್ರೀವಿನಾಯಕ ಮೂರ್ತಿ ವಿಸರ್ಜನೆ ಸೆ.೮ರಂದು ನಡೆಯಲಿದ್ದು, ಈ ಹಿನ್ನಲೆಯಲ್ಲಿ ರಾಜಬೀದಿ ಉತ್ಸವ ಮೆರವಣಿಗೆಗೆ ಸಕಲ ಸಿದ್ದತೆಗಳು ನಡೆಯುತ್ತಿವೆ.
    ಈ ಬಾರಿ ೫೦ನೇ ವರ್ಷದ ಸುವರ್ಣ ಮಹೋತ್ಸವ ಆಚರಣೆ ಹಿನ್ನಲೆಯಲ್ಲಿ ಹಲವಾರು ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ೯ ದಿನಗಳ ಕಾಲ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಹಲವಾರು ಕಾರ್ಯಕ್ರಮಗಳು ಯಶಸ್ವಿಯಾಗಿನಡೆದಿವೆ. ಸೆ.೮ರಂದು ವಿಸರ್ಜನೆ ನಡೆಯಲಿದ್ದು, ಈ ಸಂಬಂಧ ನಡೆಯುವ ರಾಜಬೀದಿ ಉತ್ಸವ ಮೆರವಣಿಗೆಗೆ ಸಕಲ ಸಿದ್ದತೆಗಳು ನಡೆಯುತ್ತಿವೆ. ಈ ಬಾರಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಅಭಿಮಾನಿಗಳು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
    ಕೇಸರಿ ಪಡೆಯಿಂದ ೨೫ ಸಾವಿರ ಲಾಡು ವಿತರಣೆ :
    ಪ್ರತಿ ವರ್ಷ ರಾಜಬೀದಿ ಉತ್ಸವದಲ್ಲಿ ವಿಶಿಷ್ಟ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಹಿಂದೂಪರ ಸಂಘಟನೆಗಳಲ್ಲಿ ಒಂದಾದ ಕೇಸರಿ ಪಡೆ ವತಿಯಿಂದ ಈ ಬಾರಿ ೨೫ ಸಾವಿರ ಲಾಡು ವಿತರಣೆ ನಡೆಯಲಿದೆ. ಈಗಾಗಲೇ ಲಾಡು ತಯಾರಿಕೆ ಕಾರ್ಯ ನಡೆಯುತ್ತಿದ್ದು, ಈ ಹಿಂದೆ ಸಹ ಲಾಡು ವಿತರಣೆ ಮಾಡಲಾಗಿತ್ತು.


ಭದ್ರಾವತಿಯಲ್ಲಿ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಹಿಂದೂಪರ ಸಂಘಟನೆಗಳಲ್ಲಿ ಒಂದಾದ ಕೇಸರಿ ಪಡೆ ವತಿಯಿಂದ ಈ ಬಾರಿ ೨೫ ಸಾವಿರ ಲಾಡು ವಿತರಣೆ ನಡೆಯಲಿದ್ದು, ಈ ಹಿನ್ನೆಯಲ್ಲಿ ಕಾರ್ಯಕರ್ತರು ಲಾಡು ತಯಾರಿಸುತ್ತಿರುವುದು.

    ಕೋಟೆಯಂತೆ ಮಹಾದ್ವಾರ ನಿರ್ಮಾಣ :
    ೫೦ನೇ ವರ್ಷದ ಸುವರ್ಣ ಮಹೋತ್ಸವ ಆಚರಣೆ ಹಿನ್ನಲೆಯಲ್ಲಿ ವಿನಾಯಕ ಸೇವಾ ಸಮಿತಿ ವತಿಯಿಂದ ಈ ಬಾರಿ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತ, ಮಾಧವಚಾರ್ ವೃತ್ತಗಳಲ್ಲಿ ರಾಜಮಹಾರಾಜರ ಕಾಲದ ಕೋಟೆಯಂತೆ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ಮಹಾದ್ವಾರಗಳು ಆಕರ್ಷಕವಾಗಿ ಕಂಡು ಬರುವ ಜೊತೆಗೆ ಎಲ್ಲರ ಗಮನ ಸೆಳೆಯುತ್ತಿವೆ.
    ಪೊಲೀಸ್ ಇಲಾಖೆ ವತಿಯಿಂದ ಪಥ ಸಂಚಲನ :
    ನಗರದಲ್ಲಿ ಶಾಂತಿ-ಸುವ್ಯವಸ್ಥೆ ಕುರಿತು ಜನರಲ್ಲಿ ಮೂಡಿಸುವ ಜೊತೆಗೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆ ಮೂಡಿಸುವ ಉದ್ದೇಶದೊಂದಿಗೆ ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ಹೊಸಮನೆ ಶಿವಾಜಿ ವೃತ್ತದಿಂದ ರಂಗಪ್ಪ ವೃತ್ತದ ವರೆಗೂ ಪಥ ಸಂಚಲನ ನಡೆಸಲಾಯಿತು.
ಪಥ ಸಂಚಲನದಲ್ಲಿ ಪೊಲೀಸ್ ಇಲಾಖೆ ಹಾಗು ಆರ್‌ಎಎಫ್ ಸಿಬ್ಬಂದಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ವಿಕ್ರಮ್ ಅಮಟೆ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು.


ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ಭದ್ರಾವತಿ ಹೊಸಮನೆ ಶಿವಾಜಿ ವೃತ್ತದಿಂದ ರಂಗಪ್ಪ ವೃತ್ತದ ವರೆಗೂ ಪಥ ಸಂಚಲನ ನಡೆಸಲಾಯಿತು.

    ನಗರಸಭೆ ವತಿಯಿಂದ ಬ್ಯಾರಿಗೇಡ್‌ಗಳ ನಿರ್ಮಾಣ :
ರಾಜಬೀದಿ ಉತ್ಸವ ಮೆರವಣಿಗೆ ಹಿನ್ನಲೆಯಲ್ಲಿ ಪ್ರಮುಖ ವೃತ್ತ ಹಾಗು ರಸ್ತೆಗಳಲ್ಲಿ ನಗರಸಭೆ ವತಿಯಿಂದ ಬ್ಯಾರಿಗೇಡ್‌ಗಳ ನಿರ್ಮಾಣ ನಡೆಯುತ್ತಿದ್ದು, ಈ ಬಾರಿ ಸಹ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ.