Wednesday, March 8, 2023

ವಿವಿಧೆಡೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಭದ್ರಾವತಿ ಕೆಎಸ್‌ಆರ್‌ಟಿಸಿ ಬಸ್ ಘಟಕದಲ್ಲಿ ಬುಧವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಭದ್ರಾವತಿ, ಮಾ. ೮ : ಕೆಎಸ್‌ಆರ್‌ಟಿಸಿ ಬಸ್ ಘಟಕ ಸೇರಿದಂತೆ ನಗರದ ವಿವಿಧೆಡೆ ಬುಧವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಕೆಎಸ್‌ಆರ್‌ಟಿಸಿ ಬಸ್ ಘಟಕದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಘಟಕ ವ್ಯವಸ್ಥಾಪಕಿ ಅಂಬಿಕಾ ಸುಧೀರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಇಲಾಖೆ ನಿರೀಕ್ಷಕಿ ಮುಮ್ತಾಜ್ ಬೇಗಂ, ಶಾಶ್ವತಿ ಮಹಿಳಾ ಸಮಾಜದ ಅಧ್ಯಕ್ಷೆ ರೂಪರಾವ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಆಕಾಶ ನೀಲಿ ಬಣ್ಣದ ಸೀರೆಯುಟ್ಟು ಸಂಭ್ರಮಿಸಿದ ಉದ್ಯೋಗಸ್ಥ ಮಹಿಳೆಯರು :
ನಗರದ ಅಂಡರ್‌ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಭಾರತೀಯ ಜೀವವಿಮಾ ನಿಗಮದ ಕಛೇರಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಆಕಾಶ ನೀಲಿ ಬಣ್ಣದ ಸೀರೆಯುಟ್ಟು ಸಂಭ್ರಮಿಸಿದರು. ಮಹಿಳಾ ದಿನಾಚರಣೆ ಶುಭಾಶಯ ಹಂಚಿಕೊಂಡರು.


ಭದ್ರಾವತಿ ಭಾರತೀಯ ಜೀವವಿಮಾ ನಿಗಮದ ಕಛೇರಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಆಕಾಶ ನೀಲಿ ಬಣ್ಣದ ಸೀರೆಯುಟ್ಟು ಸಂಭ್ರಮಿಸಿದರು.

ಎಎಪಿ ಪಕ್ಷದಲ್ಲಿ ಹಣವಂತರಿಗೆ ಮಣೆ : ಎಚ್. ರವಿಕುಮಾರ್ ರಾಜೀನಾಮೆ

ಭದ್ರಾವತಿಯಲ್ಲಿ ಬುಧವಾರ ಆಮ್ ಆದ್ಮಿ ಪಾರ್ಟಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಪಕ್ಷದ ಮುಖಂಡರಾದ ಎಚ್. ರವಿಕುಮಾರ್, ರಮೇಶ್ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. 
    ಭದ್ರಾವತಿ, ಮಾ. ೮ : ಆಮ್ ಆದ್ಮಿ ಪಾರ್ಟಿ(ಎಎಪಿ) ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲ. ರಾಜ್ಯದ ನಾಯಕರು ಹಣವಂತರಿಗೆ ಮಣೆ ಹಾಕುತ್ತಿರುವುದು ಬೇಸರ ತಂದಿದೆ. ಈ ಹಿನ್ನಲೆಯಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಪಕ್ಷದ ಮುಖಂಡರಾದ ಎಚ್. ರವಿಕುಮಾರ್ ಮತ್ತು ರಮೇಶ್ ಹೇಳಿದರು.
    ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರವರ ನೇತೃತ್ವದಲ್ಲಿ ಆಮ್ ಆದ್ಮಿ ಪಾರ್ಟಿ ಭ್ರಷ್ಟಾಚಾರ ಮುಕ್ತ ಆಡಳಿತದ ಜೊತೆಗೆ ಶ್ರೀಸಾಮಾನ್ಯರ ಪಕ್ಷವಾಗಿ ಗುರುತಿಸಿಕೊಂಡಿದೆ. ಪಕ್ಷದ ತತ್ವ, ಸಿದ್ದಾಂತಗಳನ್ನು ಮೆಚ್ಚಿ ಸುಮಾರು ೧ ದಶಕದಿಂದ ತಾಲೂಕಿನಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ. ಪಕ್ಷ ಸಂಘಟನೆಗಾಗಿ ಎಲ್ಲವನ್ನು ತ್ಯಾಗಮಾಡಿದ್ದೇವೆ. ಆದರೆ ಇಂದು ಪ್ರಾಮಾಣಿಕ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.
    ಪಕ್ಷದಿಂದ ಯಾವುದೇ ರೀತಿ ಪ್ರತಿಫಲ ಬಯಸಲಿಲ್ಲ. ಇಂದಿಗೂ ಸಹ ಬದ್ದತೆಯನ್ನು ಉಳಿಸಿಕೊಂಡು ಬಂದಿದ್ದೇನೆ. ಇತ್ತೀಚೆಗೆ ರಾಜ್ಯದ ಮುಖಂಡರು ಪಕ್ಷಕ್ಕಾಗಿ ದುಡಿದವರನ್ನು ನಿರ್ಲಕ್ಷ್ಯ ಮಾಡಿ ಹಣವಂತರಿಗೆ ಮಣೆ ಹಾಕುತ್ತಿದ್ದಾರೆ. ಇದರಿಂದಾಗಿ ಮನಸ್ಸಿಗೆ ತುಂಬಾ ಬೇಸರ ಉಂಟಾಗಿದೆ. ಪಕ್ಷದಿಂದ ಹೊರಬರಲು ನಿರ್ಧರಿಸಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಅಥವಾ ಅಮಿಷಗಳಿಗೆ ಬಲಿಯಾಗಿ ಪುನಃ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಿಲ್ಲ ಎಂದರು.
    ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಸೂಕ್ತ ನಿರ್ಧಾರ ಕೈಗೊಂಡು ಮುನ್ನಡೆಯಲಾಗುವುದು. ಪಕ್ಷ ಸಂಘಟನೆಯಲ್ಲಿ ಸಹಕರಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ವಿಶ್ವ ಮಹಿಳಾ ದಿನಾಚರಣೆ : ವಿಐಎಸ್‌ಎಲ್ ಹೋರಾಟಕ್ಕೆ ಚುಂಚಾದ್ರಿ ಮಹಿಳಾ ವೇದಿಕೆ ಬೆಂಬಲ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಬುಧವಾರ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಬೆಂಬಲ ಸೂಚಿಸುವ ಮೂಲಕ ಈ ಬಾರಿ ವಿಶ್ವ ಮಹಿಳಾ ದಿನಾಚರಣೆ ವಿಶಿಷ್ಟವಾಗಿ ಆಚರಿಸಲಾಯಿತು. ಪಾದಯಾತ್ರೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಮಾ. ೮ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಬುಧವಾರ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಬೆಂಬಲ ಸೂಚಿಸುವ ಮೂಲಕ ಈ ಬಾರಿ ವಿಶ್ವ ಮಹಿಳಾ ದಿನಾಚರಣೆ ವಿಶಿಷ್ಟವಾಗಿ ಆಚರಿಸಲಾಯಿತು.
    ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸಬೇಕೆಂಬ ಮನೋಭಾವನೆಯೊಂದಿಗೆ ವೇದಿಕೆವತಿಯಿಂದ ಈ ಬಾರಿ ವಿಶ್ವ ಮಹಿಳಾ ದಿನಾಚರಣೆಯನ್ನು ಯಾವುದೇ ಸಡಗರ ಸಂಭ್ರಮವಿಲ್ಲದೆ ವಿಶಿಷ್ಟವಾಗಿ ಆಚರಿಸಲು ತೀರ್ಮಾನಿಸುವ ಮೂಲಕ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು.
ಮಧ್ಯಾಹ್ನ ಕಾರ್ಖಾನೆ ಮುಂಭಾಗದಿಂದ ಗುತ್ತಿಗೆ ಕಾರ್ಮಿಕರೊಂದಿಗೆ ತಾಲೂಕು ಕಛೇರಿವರೆಗೂ ಪಾದಯಾತ್ರೆ ನಡೆಸುವ ಮೂಲಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಸುಮಾರು ೩೦ ಸಾವಿರಕ್ಕೂ ಹೆಚ್ಚು ಕಾರ್ಮಿಕರು ೩ ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದು, ಲಕ್ಷಾಂತರ ಜನರ ಬದುಕಿಗೆ ಆಧಾರವಾಗಿತ್ತು. ಈ ಕಾರ್ಖಾನೆ ಗುಣಮಟ್ಟದ ಉಕ್ಕು ತಯಾರಿಕೆಗೆ ವಿಶ್ವದಲ್ಲಿಯೇ ಹೆಸರುವಾಸಿಯಾಗಿದ್ದು, ಪ್ರಸ್ತುತ ಕಾರ್ಖಾನೆಯಲ್ಲಿ ಸುಮಾರು ೧೪೦೦ ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಾರ್ಖಾನೆ ಮುಚ್ಚುವ ಸ್ಥಿತಿ ಇದೀಗ ಎದುರಾಗಿದ್ದು, ಇದರಿಂದಾಗಿ ಗುತ್ತಿಗೆ ಕಾರ್ಮಿಕರ ಬದುಕಿಗೆ ತೊಂದರೆಯಾಗಿದೆ ಎಂದು  ಅಳಲು ವ್ಯಕ್ತಪಡಿಸಲಾಗಿದೆ.
ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಹೂಡದೆ, ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಉನ್ನತೀಕರಿಸದೇ ನಷ್ಟದ ಲೆಕ್ಕಾಚಾರ ತೋರಿಸಿ ಮುಚ್ಚುವ ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಕಾರ್ಖಾನೆ ಹಾಗು ಕಾರ್ಮಿಕರ ಹಿತದೃಷ್ಟಿಯಿಂದ ಸರ್ಕಾರ ಕಾರ್ಖಾನೆಯನ್ನು ಮುಚ್ಚುವ ಪ್ರಕ್ರಿಯೆ ಹಿಂಪಡೆಯಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
    ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ನೇತೃತ್ವ ವಹಿಸಿದ್ದರು. ಉಪಾಧ್ಯಕ್ಷೆ ಎಂ.ಬಿ ಸುಮ, ಕಾರ್ಯದರ್ಶಿ ಲತಾ, ಸಹ ಕಾರ್ಯದರ್ಶಿ ಶೀಲಾ, ಖಜಾಂಚಿ ಭಾರತಿ, ನಿರ್ದೇಶಕರಾದ ಪುಷ್ಪ, ಮಂಗಳ, ಸುಧಾ, ನೂತನ್, ಸರಸ್ವತಿ, ಆಶಾ, ಮಮತ, ದೀಪಾ, ಗೀತ, ಕುಸುಮ, ಲತಾ ರವೀಂದ್ರ, ಪ್ರತಿಭಾ, ಸವಿತ, ಮಂಜುಳ, ಸೌಮ್ಯ, ಆಶಾ ಜಯಂತ್ ಸೇರಿದಂತೆ ವೇದಿಕೆ ಸದಸ್ಯರು, ಗುತ್ತಿಗೆ ಕಾರ್ಮಿಕರು ಪಾಲ್ಗೊಂಡಿದ್ದರು.

ಬಾರ್ ಮುಂಭಾಗ ನಿಂತಿದ್ದ ಇಬ್ಬರ ಮೇಲೆ ಹಲ್ಲೆ : ದೂರು ದಾಖಲು

    ಭದ್ರಾವತಿ, ಮಾ. ೮ : ಬಾರ್‌ನಲ್ಲಿ ಊಟ ಮುಗಿಸಿಕೊಂಡು ಮಾತನಾಡುತ್ತಾ ಹೊರಗಡೆ ನಿಂತಿದ್ದಾಗ ಇಬ್ಬರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
    ಜೇಡಿಕಟ್ಟೆ ನಿವಾಸಿ ರವೀಂದ್ರ ಪ್ರಸಾದ್ ಮತ್ತು ವರಣ್ ಇಬ್ಬರು ಸ್ನೇಹಿತರೊಂದಿಗೆ ಮಂಗಳವಾರ ಸಂಜೆ ಬ್ಲೂಬಲ್ ಬಾರ್‌ಗೆ ಹೋಗಿದ್ದು, ಊಟ ಮುಗಿಸಿ ಹೊರಗಡೆ ಮಾತನಾಡುತ್ತಾ ನಿಂತಿದ್ದಾಗ ಬಾರ್‌ನಲ್ಲಿದ್ದ ಸೈಯದ್ ಇಮ್ರಾನ್, ನಯಾಜ್ ಸೇರಿದಂತೆ ಇನ್ನಿತರರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸುವ ಮೂಲಕ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ವರುಣ್ ಚಿಕಿತ್ಸೆಗಾಗಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮಾ.೯ರಂದು ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ಮಹಾರಥೋತ್ಸವ

    ಭದ್ರಾವತಿ, ಮಾ. ೮ : ತಾಲೂಕಿನ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಮಾ.೯ರಂದು ಮಧ್ಯಾಹ್ನ ೧೨ ಗಂಟೆಗೆ ಮಹಾರಥೋತ್ಸವ ನಡೆಯಲಿದೆ.
    ಬೆಳಗ್ಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ೧೨ ಗಂಟೆಗೆ ರಥೋತ್ಸವ, ಭಕ್ತರಿಗೆ ಅನ್ನ ಸಂತರ್ಪಣೆ, ಸಂಜೆ ಅಷ್ಟಾವದಾನ ಸೇವೆ, ಶಯನೋತ್ಸವ, ೧೦ರಂದು ಸಂಜೆ ರಾಜಬೀದಿ ಉತ್ಸವ, ೧೧ರಂದು ಕಲಾ ತತ್ವ ಹೋಮ, ಕುಂಭಾಭಿಷೇಕ ಮತ್ತು ಮಂಗಳಾರತಿ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಹಾರಥೋತ್ಸವ ಯಶಸ್ವಿಗೊಳಿಸಲು ದೇವಾಲಯ ಸಮಿತಿ ಕೋರಿದೆ. 

Tuesday, March 7, 2023

ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿಯಾಗಿಲ್ಲ

ಅಂದು ವಿರೋಧ ಪಕ್ಷದಲ್ಲಿ ಪ್ರತಿಭಟಿಸಿದವರು, ಇಂದು ೩ ಲಕ್ಷ ಅರ್ಜಿ ವಜಾ ಮಾಡಿಸಿದ್ದಾರೆ : ತೀ.ನ ಶ್ರೀನಿವಾಸ್ ಆರೋಪ

ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ, ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ತೀ.ನ. ಶ್ರೀನಿವಾಸ್ ಮಂಗಳವಾರ ಭದ್ರಾವತಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ಮಾ. ೭: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಸುಮಾರು ೮ ವರ್ಷ ಕಳೆದರೂ ಸಹ ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲು ಪ್ರಯತ್ನಿಸಿಲ್ಲ. ಅಲ್ಲದೆ ರೈತರ ಸುಮಾರು ೩ ಲಕ್ಷ ಅರ್ಜಿಗಳನ್ನು ವಜಾ ಮಾಡಿಸಿದ್ದಾರೆಂದು ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ, ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ತೀ.ನ. ಶ್ರೀನಿವಾಸ್ ಆರೋಪಿಸಿದರು.
    ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದು ಸುಮಾರು ೧೫ ವರ್ಷಗಳು ಕಳೆದಿವೆ. ದೇಶದ ಇತರೆ ರಾಜ್ಯಗಳಲ್ಲಿ ಅರಣ್ಯ ವಾಸಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಆದರೆ ರಾಜ್ಯದಲ್ಲಿ ಇದುವರೆಗೂ ಹಕ್ಕು ಪತ್ರ ವಿತರಿಸಿಲ್ಲ. ಈ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್‌ರವರು ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ೩ ಪತ್ರಗಳನ್ನು ಬರೆದು ೨೦೦೯ ಡಿಸೆಂಬರ್ ಒಳಗೆ ಹಕ್ಕುಪತ್ರ ಕೊಡಲು ಸೂಚಿಸಿದ್ದರು. ಆದರೆ ಯಡಿಯೂರಪ್ಪರವರು ಹಕ್ಕುಪತ್ರ ಕೊಡುವ ಬದಲು ಕಾನೂನು ಬಾಹಿರವಾಗಿ, ಅರಣ್ಯ ಹಕ್ಕು ಕಾಯ್ದೆ ಉಲ್ಲಂಘಸಿ ರೈತರು ಸಲ್ಲಿಸಿದ್ದ ಸುಮಾರು ೩ ಲಕ್ಷ ಅರ್ಜಿಗಳನ್ನು ವಜಾಮಾಡಿ ನೋಟಿಸ್ ಕೊಡಿಸಿದ್ದರು ಎಂದು ಆರೋಪಿಸಿದರು.
    ವಿರೋಧ ಪಕ್ಷದಲ್ಲಿದ್ದಾಗ ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ, ಸಚಿವ ಅರಗ ಜ್ಞಾನೇಂದ್ರ, ವಿಧಾನಸಭೆ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪ್ರತಿಭಟನೆ ನಡೆಸಿ ಅರಣ್ಯ ಹಕ್ಕು ಕಾಯ್ದೆಯಲ್ಲಿ ೭೫ ವರ್ಷದ ಅನುಭವದ ಹಕ್ಕು ಕೇಳಲಾಗಿದೆ. ಇದನ್ನು ಕಾಯ್ದೆಗೆ ತಿದ್ದುಪಡಿ ತಂದು ೨೫ ವರ್ಷಕ್ಕೆ ಇಳಿಸಬೇಕೆಂದು ಆಗ್ರಹಿಸಿದ್ದರು. ಕೇಂದ್ರದಲ್ಲಿ ಸುಮಾರು ೮ ವರ್ಷಗಳಿಂದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಸಹ ಕಾಯ್ದೆ ತಿದ್ದುಪಡಿ ಬಗ್ಗೆ ಪ್ರಯತ್ನಿಸಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅವಧಿಯಲ್ಲಿ ಸರ್ವೋಚ್ಛ ನ್ಯಾಯಾಲಯ ಫೆಬ್ರವರಿ ೨೦೧೯ರಲ್ಲಿ ನೀಡಿದ ಆದೇಶ ಮತ್ತು ಅರಣ್ಯ ಹಕ್ಕು ಕಾಯ್ದೆಯನ್ನು ಕಸದ ಬುಟ್ಟಿಗೆ ಹಾಕಿ ಪುನಃ ೩ ಲಕ್ಷ ಅರ್ಜಿಗಳನ್ನು ವಜಾಮಾಡಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
    ವಿರೋಧ ಪಕ್ಷದಲ್ಲಿದ್ದಾಗ ಅರ್ಜಿಗಳನ್ನು ವಜಾ ಮಾಡಬೇಡಿ ಎಂದು ಪ್ರತಿಭಟಿಸಿದವರು ಪ್ರಸ್ತುತ ಅಧಿಕಾರದಲ್ಲಿದ್ದರೂ ಸಹ ಮೌನವಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಸಾವಿರಾರು ಅರ್ಜಿಗಳು ಬಾಕಿ ಉಳಿದಿದ್ದು, ತಕ್ಷಣ ಮಾತಿನಂತೆ ನಡೆದುಕೊಂಡು ಅರಣ್ಯವಾಸಿಗಳಿಗೆ ಹಕ್ಕು ಪತ್ರ ಕೊಡಬೇಕೆಂದು ಆಗ್ರಹಿಸಿದರು.
    ಕೇಂದ್ರ ಹಾಗು ರಾಜ್ಯ ಸರ್ಕಾರದ ಸುಮಾರು ೧೦ ಆದೇಶಗಳು ೨೭.೦೪.೧೯೭೮ರ ಹಿಂದೆ ಭೂಮಿ ಸಾಗುವಳಿ ಮಾಡಿಕೊಂಡಿದ್ದು, ಟಿ.ಟಿ ಕೈ ಬರಹದ ಪಾಣಿಗಳನ್ನು ಹೊಂದಿದ್ದರೆ ಅವರುಗಳು ಬಡವರು, ಭೂ ರಹಿತರು, ಸಣ್ಣ ಹಿಡುವಳಿದಾರರು, ಪರಿಶಿಷ್ಟಜಾತಿಯವರಾಗಿದ್ದರೆ ೩ ಎಕರೆ ಭೂಮಿ ಮಂಜೂರು ಮಾಡಬೇಕೆಂದು ಆದೇಶವಿದ್ದರೂ ದಲಿತರ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು ದೂರಿದರು.
    ಇದೆ ರೀತಿ ೨೭.೦೪.೧೯೭೮ರ ಹಿಂದೆ ಅರಣ್ಯ ಭೂಮಿ ಸಾಗುವಳಿ ಮಾಡಿಕೊಂಡವರಿಗೆ ಭೂ ಮಂಜೂರು ಮಾಡಲು ೧೦ ಸರ್ಕಾರಿ ಆದೇಶಗಳಿದ್ದರೂ ಸಹ ಇದುವರೆಗೂ ರಾಜ್ಯದ ರೈತರಿಗೆ ಹಕ್ಕು ಪತ್ರ ನೀಡಿಲ್ಲ. ಅರಣ್ಯ ಇಲಾಖೆ ಶಿಫಾರಸ್ಸು ಮಾಡಿ ಬೆಂಗಳೂರಿನ ಅರಣ್ಯ ಭವನಕ್ಕೆ ಕಳಿಸಿದ ೨೦ ಸಾವಿರ ಅರ್ಜಿಗಳು ದೂಳು ಹಿಡಿದಿದ್ದು, ಹರಿದು ಹೋಗಿವೆ ಎಂದು ಆಕ್ರೋಶ ಹೊರ ಹಾಕಿದರು. ತಕ್ಷಣ ಇವರಿಗೆ ದೇಶದ ಕಾನೂನಿನ ಅನುಸಾರ ಹಕ್ಕು ಪತ್ರ ಕೊಡಬೇಕೆಂದು ಒತ್ತಾಯಿಸಿದರು.
    ಕೇಂದ್ರ ಹಾಗು ರಾಜ್ಯ ಸರ್ಕಾರಗಳು ರಾಜ್ಯದ ಉಚ್ಛ ನ್ಯಾಯಾಲಯ ಹಾಗು ದೇಶದ ಸರ್ವೋಚ್ಛ ನ್ಯಾಯಾಲಯಗಳಲ್ಲಿ ಪ್ರಕರಣಗಳಿದ್ದಾಗ ವಸ್ತುಸ್ಥಿತಿಯನ್ನು ನ್ಯಾಯಾಲಯಕ್ಕೆ ತಿಳಿಸದಿದ್ದರಿಂದ ಜಿಲ್ಲೆಯಲ್ಲಿ ಕಂದಾಯ ಇಲಾಖೆಯಿಂದ ಹಕ್ಕುಪತ್ರ ಕೊಟ್ಟ ಪ್ರಕರಣಗಳಲ್ಲೂ ಅರಣ್ಯ ಜಮೀನೆಂದು ನಮೂದಾಗುತ್ತಿದೆ. ಹುಲ್ಲುಬನಿ, ಗೋಮಾಳ ಎಂದು ನಮೂದಿರುವ ಪ್ರದೇಶಗಳನ್ನು ಬೇಕಾಬಿಟ್ಟಿಯಾಗಿ ಅರಣ್ಯ ಎಂದು ನಮೂದು ಮಾಡಲಾಗಿದೆ. ವಾಸದ ಮನೆ, ಜಮೀನಿರುವ ಯಾವುದೇ ಜಾಗಗಳನ್ನು ಅರಣ್ಯ ಎಂದು ನಮೂದಿಸಬಾರದೆಂದು ಆಗ್ರಹಿಸಿದರು.
    ಮಲೆನಾಡು ರೈತರ ಹೋರಾಟ ಸಮಿತಿ ಪದಾಧಿಕಾರಿಗಳು, ಬಗರ್ ಹುಕುಂ ರೈತರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.  

ಜ್ಞಾನದ ಬೆಳಕು ನೀಡುವವರು ನಿಜವಾದ ಗುರುಗಳು : ಶ್ರೀ ಸದ್ಗುರು ಬಸವಾನಂದ ಭಾರತಿ ಮಹಾಸ್ವಾಮೀಜಿ


ಕುಳ್ಳೂರು ಸುಕ್ಷೇತ್ರದ ಶ್ರೀ ಶಿವಯೋಗಿಶ್ವರ ಸಂಸ್ಥಾನ ಮಠದ ಶ್ರೀ ಸದ್ಗುರು ಬಸವಾನಂದ ಭಾರತಿ ಮಹಾಸ್ವಾಮೀಜಿಯವರು ಭದ್ರಾವತಿ ತಾಲೂಕು ಬಲಿಜ ಸಂಘದ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರ ೨೯೭ನೇ ಜಯಂತೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಉದ್ಘಾಟಿಸಿದರು. 
    ಭದ್ರಾವತಿ, ಮಾ. ೭: ಎಲ್ಲರೂ ಸಹ ಗುರುಗಳಾಗಲು ಸಾಧ್ಯವಿಲ್ಲ. ಜ್ಞಾನದ ಬೆಳಕು ನೀಡುವವರು ನಿಜವಾದ ಗುರುಗಳು ಎಂದು ಕುಳ್ಳೂರು ಸುಕ್ಷೇತ್ರದ ಶ್ರೀ ಶಿವಯೋಗಿಶ್ವರ ಸಂಸ್ಥಾನ ಮಠದ ಶ್ರೀ ಸದ್ಗುರು ಬಸವಾನಂದ ಭಾರತಿ ಮಹಾಸ್ವಾಮೀಜಿ ಹೇಳಿದರು.
    ಶ್ರೀಗಳು ಮಂಗಳವಾರ ತಾಲೂಕು ಬಲಿಜ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರ ೨೯೭ನೇ ಜಯಂತೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಮಾತನಾಡಿದರು.  
    ಸಮಾಜದಲ್ಲಿ ಎಲ್ಲರನ್ನು ಒಗ್ಗೂಡಿಸಿ ಮುನ್ನಡೆಯುವಂತೆ ಮಾರ್ಗದರ್ಶನ ಮಾಡುವುದು ಗುರುಗಳ ಕೆಲಸವಾಗಿದೆ. ಈ ನಿಟ್ಟಿನಲ್ಲಿ ತಾತಯ್ಯ ನವರು  ಎಲ್ಲಾ ಸಮಾಜದವರನ್ನು ಒಗ್ಗೂಡಿಸುವ ಮೂಲಕ ಸಮಾಜಕ್ಕೆ ಬೆಳಕಾಗಿದ್ದರು.  ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ಬಲಿಜ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ,  ರಾಜಕೀಯವಾಗಿ ಹಿಂದುಳಿದಿದೆ. ಆದರೂ ಈ ಸಮಾಜ ಸದೃಢವಾಗಲು ಎಲ್ಲರೂ ಸಂಘಟಿತರಾಗಿ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದರು.
   ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭಾ ಸದಸ್ಯ ಅನುಪಮಾ ಚೆನ್ನೇಶ್,  ಸಂಘದ ಗೌರವಾಧ್ಯಕ್ಷ ಎಸ್.ಎನ್ ಸುಬ್ರಮಣ್ಯ, ಉಪಾಧ್ಯಕ್ಷರಾದ ಜಂಗಮಪ್ಪ, ಶಕುಂತಲ, ಪ್ರಧಾನ ಕಾರ್ಯದರ್ಶಿ ಎಂ. ರಮೇಶ್, ಸಹ ಕಾರ್ಯದರ್ಶಿ ಟಿ. ರಮೇಶ್, ಖಜಾಂಚಿ ಬಿ.ಎ ನರೇಂದ್ರಬಾಬು, ಮಹಿಳಾ ಬಲಿಜ ಸಮಾಜದ ಅಧ್ಯಕ್ಷೆ ಶಾಂತಮ್ಮ, ಹಿಂದುಳಿದ ವರ್ಗಗಳ ಮುಖಂಡ ಟಿ. ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಜೆ.ಎಸ್ ಸಂಜೀವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಎಚ್.ಆರ್ ರಂಗನಾಥ್ ಸ್ವಾಗತಿಸಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 


ಭದ್ರಾವತಿ ತಾಲೂಕು ಬಲಿಜ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರ ೨೯೭ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪಾಲ್ಗೊಂಡಿದ್ದರು.