Wednesday, July 2, 2025

ಆಧ್ಯಾತ್ಮಿಕದೊಂದಿಗೆ ಧ್ಯಾನ-ಯೋಗ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ : ಡಾ. ಅನುರಾಧ ಪಟೇಲ್

ಭದ್ರಾವತಿಯಲ್ಲಿ ಬುಧವಾರ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಹಾಗು ಚಿಂತನ ಮಂಥನ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಳ್ಳಲಾಯಿತು. 
    ಭದ್ರಾವತಿ: ಮಹಿಳೆಯರು ಆಧ್ಯಾತ್ಮಿಕವಾಗಿ ಸಹ ಉನ್ನತಿ ಹೊಂದಬೇಕು. ಆಧ್ಯಾತ್ಮಿಕದೊಂದಿಗೆ ಧ್ಯಾನ-ಯೋಗ ನಮ್ಮ ಎಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ನೀಡುವ ಶಕ್ತಿ ಹೊಂದಿವೆ. ಇದನ್ನು ಅರ್ಥ ಮಾಡಿಕೊಳ್ಳಬೇಕೆಂದು ಚುಂಚಾದ್ರಿ ಮಹಿಲಾ ವೇದಿಕೆ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್ ಹೇಳಿದರು. 
    ಅವರು ಬುಧವಾರ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಹಾಗು ಚಿಂತನ ಮಂಥನ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು. 
    ಮಹಿಳೆಯರು ಪ್ರಸ್ತುತ ಕೃಷಿ, ಕೈಗಾರಿಕೆ, ಶಿಕ್ಷಣ, ಸಾಮಾಜಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆಂಬುದು ಹೆಮ್ಮೆಯ ವಿಚಾರವಾಗಿದೆ. ಸ್ವಂತ ಆರ್ಥಿಕ ಬಲದ ಮೇಲೆ ಮುನ್ನಡೆಯುತ್ತಿರುವ ಮಹಿಳೆಯರು ಸಾಮಾಜಿಕ ಸೇವಾ ಕಾರ್ಯಗಳು, ಹೋರಾಟಗಳಲ್ಲಿ ತೊಡಗಿಸಿಕೊಂಡಿರುವುದಕ್ಕೆ ಸೀಮಿತಗೊಳ್ಳಬಾರದು ಆಧ್ಯಾತ್ಮಿಕವಾಗಿ ಸಹ ಬಲಗೊಳ್ಳಬೇಕು. ಆಧ್ಯಾತ್ಮಿಕತೆ ಎಂದರೆ ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ದೇವರನ್ನು ಕಾಣುವುದಾಗಿದೆ. ಆದರೆ ಧಾರ್ಮಿಕತೆ ಮೂಲಕ ನಾವೆಲ್ಲರೂ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಈ ನಿಟ್ಟಿನಲ್ಲಿ ಧಾರ್ಮಿಕತೆಯ ಮೂಲ ಅರಿವು ತಿಳಿದುಕೊಳ್ಳಬೇಕು. ಮೌಡ್ಯದಿಂದ ಹೊರಬರಬೇಕು ಎಂದರು. 
    ಅಷಾಡ ಮಾಸ ಪವಿತ್ರವಾದ ಮಾಸವಾಗಿದ್ದು, ಬಹುತೇಕ ಜನರು ಈ ಮಾಸ ಕುರಿತು ತಪ್ಪು ಅರಿವು ಹೊಂದಿದ್ದಾರೆ. ಈ ಮಾಸ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಇದರ ಕುರಿತು ಮಹಿಳೆಯರು ತಿಳಿದುಕೊಳ್ಳುವ ಮೂಲಕ ಇತರರಿಗೆ ತಿಳಿಸಬೇಕೆಂದರು. 
    ಹುಬ್ಬಳ್ಳಿಯ ಸ್ವಯಂ ಸೇವಾ ಸಂಸ್ಥೆಯ ಮಾಣಿಕ್ಯ ಚಿಲ್ಲೂರು, ಹಾಸನದ ಜವಳಿ ಉದ್ಯಮಿ ಸುಧಾರಾಣಿ, ಬಯೋಟೆಕ್ ಸಂಸ್ಥೆಯ ತಾರಾಮಣಿ ಮತ್ತು ಶಿವಮೊಗ್ಗ ಅಂಭ್ರಣಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಗಾಯಿತ್ರಿ ಮತ್ತು ಚಿಕ್ಕಮಗಳೂರಿನ ಕೃಷ್ಣವೇಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತ ಅನಂತಕುಮಾರ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.  ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಪದಾಧಿಕಾರಿಗಳು, ನಿರ್ದೇಶಕರು ಉಪಸ್ಥಿತರಿದ್ದರು. ಪ್ರತಿಭಾ ಸ್ವಾಗತಿಸಿ, ಶೀಲಾ ರವಿ ವಂದಿಸಿದರು. 

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ವಚನ ಪಿತಾಮಹ ಡಾ. ಫ.ಗು ಹಳಕಟ್ಟಿ ಜನ್ಮ ದಿನ ಆಚರಣೆ

ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಅಂಗವಾಗಿ ಭದ್ರಾವತಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವಚನ ಪಿತಾಮಹ ಡಾ. ಫ.ಗು ಹಳಕಟ್ಟಿಯವರ ಜನ್ಮದಿನ ಆಚರಿಸಲಾಯಿತು.  
    ಭದ್ರಾವತಿ: ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಅಂಗವಾಗಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವಚನ ಪಿತಾಮಹ ಡಾ. ಫ.ಗು ಹಳಕಟ್ಟಿಯವರ ಜನ್ಮದಿನ ಆಚರಿಸಲಾಯಿತು. 
    ಡಾ. ಫ.ಗು ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಪ್ರಮುಖರಾದ ಗಂಗಾ ಕುಬ್ಸದ್, ಎಂಪಿಎಂ ನಿವೃತ್ತ ನೌಕರ ಬಸವರಾಜ್ ಮತ್ತು ವೈ.ಬಿ ನಂದಿನಿಯವರು ಹಳಕಟ್ಟಿಯವರು ವಚನ ಸಾಹತ್ಯಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿದರು. 
    ತಹಸೀಲ್ದಾರ್ ಪರುಸಪ್ಪ ಕುರುಬರ, ಉಪತಹಸೀಲ್ದಾರ್ ಮಂಜಾನಾಯ್ಕ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕತ್ತಲಗೆರೆ ತಿಮ್ಮಪ್ಪ, ಹಳೇನಗರದ ಮಾಲೀಕರ ಸಂಘದ ಅಧ್ಯಕ್ಷ ಬಸವರಾಜಯ್ಯ, ರಾಜಣ್ಣ, ಸುವರ್ಣಮ್ಮ ಹಿರೇಮಠ್, ಮಲ್ಲಿಕಾಂಬ, ಗೌರಮ್ಮ, ಸರ್ವೇಶ್ವರಿ, ಕಾಂತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಶರಣ ಸಾಹಿತ್ಯ ಪರಿಷತ್ ಮಹಿಳೆಯರು ಪ್ರಾರ್ಥಿಸಿದರು. ಹಿರಿಯ ಸಾಹಿತಿ ಜೆ.ಎನ್ ಬಸವರಾಜಪ್ಪ ಜಗಜ್ಯೋತಿ ಬಸವಣ್ಣನವರ ವಚನಗಳನ್ನು ವಾಚಿಸಿದರು.
 

ಅವೈಜ್ಞಾನಿಕ ಕಾಮಗಾರಿ ನಿಲ್ಲಿಸಿ : ಜು.೧೦ರಿಂದ ಭದ್ರಾ ನಾಲೆಗಳಲ್ಲಿ ನೀರು ಹರಿಸಿ

ಪ್ರತಿಭಟನೆ ನಡೆಸಿ ರೈತರಿಂದ ತಹಸೀಲ್ದಾರ್‌ಗೆ ಮನವಿ 

ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿ ಬಲದಂಡೆ ನಾಲೆ ಸೀಳಿ ಕೈಗೊಳ್ಳುತ್ತಿರುವ ಅವೈಜ್ಞಾನಿಕ ಕಾಮಗಾರಿ ಕೈಬಿಡುವಂತೆ ರೈತ ಮುಖಂಡರು ತಹಸೀಲ್ದಾರ್ ಮನವಿ ಸಲ್ಲಿಸಿ ಆಗ್ರಹಿಸಿದರು. 
    ಭದ್ರಾವತಿ: ಕುಡಿಯುವ ನೀರಿನ ಯೋಜನೆ ನೆಪದಲ್ಲಿ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ತಕ್ಷಣ ಭದ್ರಾ ಜಲಾಶಯದ ಬಲದಂಡೆ ನಾಲೆ ಸೀಳಿ ಕೈಗೊಳ್ಳುತ್ತಿರುವ ಅವೈಜ್ಞಾನಿಕ ಕಾಮಗಾರಿ ಕೈಬಿಡುವಂತೆ ರೈತ ಮುಖಂಡರು ಸರ್ಕಾರಕ್ಕೆ ಆಗ್ರಹಿಸಿದರು. 
    ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ತಾಲೂಕು ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಮುಖಂಡರು, ಕುಡಿಯುವ ನೀರಿನ ಯೋಜನೆ ನೆಪದಲ್ಲಿ ರಾಜಕಾರಣ ಮಾಡುವ ಬದಲು ಯೋಜನೆಯ ತಾಂತ್ರಿಕ ಸಮಿತಿ ನೀಡಿರುವ ವರದಿಯಲ್ಲಿನ ಕಾಮಗಾರಿಯ ೨ನೇ ಆಯ್ಕೆಯನ್ನು ಪರಿಗಣಿಸಿ ಮುಂದುವರೆಯುವುದರಲ್ಲಿ ಯಾವುದೇ ವಿರೋಧವಿಲ್ಲ. ಪ್ರಸ್ತುತ ಕೈಗೊಳ್ಳುತ್ತಿರುವ ಅವೈಜ್ಞಾನಿಕ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಮುಂದುವರೆಸಬಾರದು ಎಂದು ಆಗ್ರಹಿಸಿದರು. 
    ಪ್ರಸ್ತುತ ಕೈಗೊಳ್ಳುತ್ತಿರುವ ಕಾಮಗಾರಿಯಿಂದ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಭವಿಷ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಲಿವೆ. ಜಲಾಶಯದ ನೀರು ನಂಬಿಕೊಂಡು ಬೆಳೆ ಬೆಳೆಯುತ್ತಿರುವ ರೈತರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಕುಡಿಯುವ ನೀರು ಪೂರೈಕೆಗೆ ಯಾವುದೇ ವಿರೋಧವಿಲ್ಲ. ಆದರೆ ಕೈಗೊಳ್ಳುತ್ತಿರುವ ಅವೈಜ್ಞಾನಿಕ ಕಾಮಗಾರಿಯಿಂದ ಒಂದೆಡೆ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದು, ಮತ್ತೊಂದೆಡೆ ಬೃಹತ್ ಜಲಾಶಯದ ಸುರಕ್ಷತೆ ನಿರ್ಲಕ್ಷಿಸಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು. 
    ಪ್ರಸ್ತುತ ಕೈಗೊಳ್ಳುತ್ತಿರುವ ಕಾಮಗಾರಿಗೆ ಸಂಬಂಧಿಸಿದಂತೆ ಯೋಜನೆಯ ತಾಂತ್ರಿಕ ಸಮಿತಿ ಬಲದಂಡೆ ನಾಲೆ ಸೀಳುವ ಬದಲು ನದಿ ನೀರನ್ನು ನೇರವಾಗಿ ಜಾಕ್‌ವೆಲ್‌ಗಳ ಮೂಲಕ ಹರಿಸುವ ಮತ್ತೊಂದು ಆಯ್ಕೆಯನ್ನು ನೀಡಿದೆ. ಇದಕ್ಕೆ ರೈತರ ವಿರೋಧವಿಲ್ಲ. ಜೊತೆಗೆ ಇದರಿಂದ ಜಲಾಶಯಕ್ಕೆ ಯಾವುದೇ ರೀತಿ ಅಪಾಯವಿರುವುದಿಲ್ಲ. ಈ ಆಯ್ಕೆಯ ಪ್ರಕಾರ ಕಾಮಗಾರಿ ನಡೆಸಬಹುದಾಗಿದ್ದು, ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಒಟ್ಟಾಗಿ ಸೇರಿಕೊಂಡು ಹಣ ಲೂಟಿಮಾಡುವ ಉದ್ದೇಶದಿಂದ ಬಲದಂಡೆ ನಾಲೆ ಸೀಳಿ ನೀರು ಪೂರೈಸುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. 
    ತಕ್ಷಣ ಕೈಗೊಂಡಿರುವ ಕಾಮಗಾರಿ ಸ್ಥಗಿತಗೊಳಿಸಿ ಜಲಾಶಯಕ್ಕೆ ಯಾವುದೇ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳುವ ಮೂಲಕ ಪ್ರತಿ ವರ್ಷದಂತೆ ಈ ಬಾರಿ ಸಹ ರೈತರ ಬೆಳೆಗಳಿಗೆ ಜು.೧೦ರಿಂದ ನಾಲೆಯಲ್ಲಿ ನೀರು ಹರಿಸಬೇಕೆಂದು ಆಗ್ರಹಿಸಿದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. 
    ತಹಸೀಲ್ದಾರ್ ಪರುಸಪ್ಪ ಕುರುಬರ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ತಹಸೀಲ್ದಾರ್‌ರವರು ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು. 
    ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವಲಯ ಕಾರ್ಯದರ್ಶಿ ಡಿ.ವಿ ವೀರೇಶ್, ತಾಲೂಕು ಅಧ್ಯಕ್ಷ ಹಿರಣ್ಣಯ್ಯ, ಜಿಲ್ಲಾಧ್ಯಕ್ಷ ಹಾಲೇಶಪ್ಪ ಗೌಡ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥೇಶ್ವರ, ಜಿಲ್ಲಾ ಗೌರವಾಧ್ಯಕ್ಷ ಈರಣ್ಣಪ್ಯಾಟಿ, ಜಿಲ್ಲಾ ಕಾರ್ಯದರ್ಶಿ ಪುಟ್ಟಣ್ಣ ಗೌಡ್ರು ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು. 

Tuesday, July 1, 2025

ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

    ಭದ್ರಾವತಿ : ನಗರಸಭೆ ವತಿಯಿಂದ ೨೦೨೫-೨೬ನೇ ಸಾಲಿನ ಎಸ್‌ಎಫ್‌ಸಿ ಮುಕ್ತ ನಿಧಿಯಡಿ ಶೇ.೭.೨೫ ಹಾಗು ಶೇ.೫ರ ಕ್ರಿಯಾ ಯೋಜನೆಯಡಿಯಲ್ಲಿ ವಿವಿಧ ಸೌಲಭ್ಯಗಳನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
    ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಇತರೆ ಬಡವರ್ಗದವರಿಗೆ(ಮಾರಾಣಾಂತಿಕ ಕಾಯಿಲೆ) ಹಾಗು ವಿಕಲಚೇತನರಿಗೆ(ಶ್ರವಣ ಸಾಧನ, ವೀಲ್‌ಛೇರ್, ವಾಕರ್ ಖರೀದಿಸಲು ಸಹಾಯಧನ) ಶೇ.೭.೨೫ ಹಾಗು ಶೇ.೫ರ ನಿಧಿ ಕ್ರಿಯಾ ಯೋಜನೆಯಡಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು. 
    ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯ ಅರ್ಜಿಯೊಂದಿಗೆ ಎರಡು ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರ, ೫ ವರ್ಷದೊಳಗಿನ ಜಾತಿ ಪ್ರಮಾಣ ಪತ್ರ, ಜಾಲ್ತಿ ಸಾಲಿನ ವಾರ್ಷಿಕ ವರಮಾನ ಪತ್ರ, ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆ,  ತರಬೇತಿ ಪ್ರಮಾಣ ಪತ್ರ, ಪಡಿತರ ಚೀಟಿಯ ನಕಲು ಪ್ರತಿ ಮತ್ತು ನಿವಾಸಿ ದೃಢೀಕರಣ ಪತ್ರಗಳ ನಕಲು ಪ್ರತಿಗಳನ್ನು ಗೆಜೆಟೆಡ್ ಅಧಿಕಾರಿಗಳ ದೃಢೀಕರಣದೊಂದಿಗೆ ಸಲ್ಲಿಸ ತಕ್ಕದ್ದು. 
    ಜು.೧೧ರೊಳಗೆ ಅರ್ಜಿಗಳನ್ನು ಸಲ್ಲಿಸುವುದು. ಹೆಚ್ಚಿನ ಮಾಹಿತಿ ನಗರಸಭೆ ಶೇ.೨೪.೧೦ರ ನಿಧಿ ವಿಭಾಗದಿಂದ ಪಡೆಯಬಹುದಾಗಿದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ. 

ಕೆ. ಸಾರಮ್ಮ ನಿಧನ



ಕೆ. ಸಾರಮ್ಮ 
    ಭದ್ರಾವತಿ: ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಉದ್ಯೋಗಿ, ಕಾಗದ ನಗರದ ೬ನೇ ವಾರ್ಡ್ ನಿವಾಸಿ ಕೆ. ಸಾರಮ್ಮ(೬೮) ಮಂಗಳವಾರ ನಿಧನ ಹೊಂದಿದರು. 
    ಸಾರಮ್ಮ ಅವರು ಎಂಪಿಎಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಹಾಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ನಿಧನಕ್ಕೆ ಎಂಪಿಎಂ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ಸಂತಾಪ ಸೂಚಿಸಿದೆ. 

ವಿಐಎಸ್‌ಎಲ್ ಉದ್ಯೋಗಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

೭ನೇ ತರಗತಿ, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಅತಿಹೆಚ್ಚು ಅಂಕಪಡೆದ ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಉದ್ಯೋಗಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. 
    ಭದ್ರಾವತಿ : ೭ನೇ ತರಗತಿ, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಅತಿಹೆಚ್ಚು ಅಂಕಪಡೆದ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಉದ್ಯೋಗಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. 
    ಕಾರ್ಖಾನೆಯ ಭದ್ರಾ ಅತಿಥಿ ಗೃಹದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಶೇ. ೯೦ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸುವ ಮೂಲಕ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತೆ ಹಾರೈಸಲಾಯಿತು. 
    ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ,  ಮುಖ್ಯ ಮಹಾಪ್ರಬಂಧಕ(ಸ್ಥಾವರ), ಕೆ.ಎಸ್ ಸುರೇಶ್, ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್ ಮತ್ತು ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರಾ ಮಕ್ಕಳಿಗೆ ಅಭಿನಂದನಾ ಪತ್ರ, ನಗದು ಪುರಸ್ಕಾರ ಮತ್ತು ಸಸಿಗಳನ್ನು ನೀಡಿ, ಅವರ ಸಾಧನೆಗಳನ್ನು ಪ್ರಶಂಸಿಸಲಾಯಿತು. 
ಸಮಾರಂಭದಲ್ಲಿ ಕಾರ್ಮಿಕರ ಸಂಘ ಮತ್ತು ಅಧಿಕಾರಿಗಳ ಸಂಘದ ಪದಾಧಿಕಾರಿಗಳು, ಹಿರಿಯ ಅಧಿಕಾರಿಗಳು, ಕಾರ್ಮಿಕರು, ಅವರ ಕುಟುಂಬದವರು ಪಾಲ್ಗೊಂಡಿದ್ದರು. 
    ಮಹಾಪ್ರಬಂಧಕರು (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿ,  ಕಾಖಾನೆಯ ಉದ್ಯೋಗಿಗಳ ಮಕ್ಕಳಿಗೆ ಶೈಕ್ಷಣಿಕವಾಗಿ ಉತ್ತೇಜನ ನೀಡಲು ಇರುವ ಹಲವು ಯೋಜನೆಗಳ ಬಗ್ಗೆ ತಿಳಿಸಿದರು. ಎಸ್. ಅನನ್ಯ ಪ್ರಾರ್ಥಿಸಿದರು. 

ದ್ವಿಚಕ್ರ ವಾಹನ ಕಳ್ಳತನ : ಓರ್ವ ಯುವಕ ಬಂಧನ

ದ್ವಿಚಕ್ರ ವಾಹನಗಳ ಕಳ್ಳತನದಲ್ಲಿ ತೊಡಗಿದ್ದ ಯುವಕನೋರ್ವನನ್ನು ಬಂಧಿಸಿ ೪ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. 
    ಭದ್ರಾವತಿ: ದ್ವಿಚಕ್ರ ವಾಹನಗಳ ಕಳ್ಳತನದಲ್ಲಿ ತೊಡಗಿದ್ದ ಯುವಕನೋರ್ವನನ್ನು ಬಂಧಿಸಿ ೪ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. 
    ನಗರಸಭೆ ವ್ಯಾಪ್ತಿಯ ಹೊಸಮನೆ ಹನುಮಂತನಗರದ ನಿವಾಸಿ ಹರ್ಷ(೧೯) ಬಂಧಿತ ಯುವಕನಾಗಿದ್ದು, ದಾವಣಗೆರೆ ಜಿಲ್ಲೆ, ಹೊನ್ನಾಳಿ ತಾಲೂಕಿನ ನಿವಾಸಿ ಜಿ. ಮಹೇಶ್ ಎಂಬುವರು ಮೇ.೩೧ರಂದು ಬೆಳಿಗ್ಗೆ ನಗರದ ಬಿ.ಎಚ್ ರಸ್ತೆಯ ಸುರೇಶ್ ಆಟೋ ವರ್ಕ್ಸ ಮುಂಬಾಗದಲ್ಲಿ ನಿಲ್ಲಿಸಿದ್ದ ಬಜಾಜ್ ಡಿಸ್ಕವರಿ ೧೨೫ ದ್ವಿಚಕ್ರ ವಾಹನ ಕಳ್ಳತನ ಮಾಡಲಾಗಿದೆ ಎಂದು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 
     ಈ ಹಿನ್ನಲೆಯಲ್ಲಿ ಪ್ರಕರಣ ಭೇದಿಸಲು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ , ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ ಮತ್ತು ಎ.ಜಿ ಕಾರಿಯಪ್ಪರವರ ಮಾರ್ಗದರ್ಶನದಲ್ಲಿ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಕೆ.ಆರ್ ನಾಗರಾಜು, ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್ ಮೇಲ್ವಿಚಾರಣೆಯಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಟಿ. ರಮೇಶ್‌ರವರ ನೇತೃತ್ವದಲ್ಲಿ ಸಹಾಯಕ ಉಪ ನಿರೀಕ್ಷಕ ಟಿ.ಪಿ ಮಂಜಪ್ಪ, ಸಿಬ್ಬಂದಿಗಳಾದ ನವೀನ್ ಮತ್ತು ಪ್ರಸನ್ನ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.  
    ಪ್ರಕರಣ ಭೇದಿಸಿದ ತಂಡ ಹರ್ಷನನ್ನು ಬಂಧಿಸಿ ಕಳ್ಳತನ ಮಾಡಲಾಗಿದ್ದ ೪ ಮತ್ತು ಕೃತ್ಯಕ್ಕೆ ಬಳಸಿದ ೧ ಒಟ್ಟು ೫ ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಅಂದಾಜು ಮೌಲ್ಯ ಒಟ್ಟು ೨.೪೦ ಲಕ್ಷ ರು. ಗಳಾಗಿವೆ. ಹರ್ಷನ ವಿರುದ್ಧ  ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ೩, ಚಿಕ್ಕಮಗಳೂರು ಜಿಲ್ಲೆ ಬೀರೂರು ಠಾಣೆಯಲ್ಲಿ ೧  ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳ ದಾಖಲಾಗಿದ್ದವು. ತನಿಖಾ ತಂಡವನ್ನು ಜಿಲ್ಲಾ ರಕ್ಷಣಾಧಿಕಾರಿಗಳು ಅಭಿನಂದಿಸಿದ್ದಾರೆ.