Monday, June 30, 2025

ಜು.೨ರಂದು ರಸ್ತೆ ತಡೆ ಚಳುವಳಿ, ಬೃಹತ್ ಪ್ರತಿಭಟನೆ


    ಭದ್ರಾವತಿ : ಭದ್ರಾ ಬಲದಂಡೆ ನಾಲೆ ಸೀಳಿ ಸರ್ಕಾರ ಕೈಗೊಳ್ಳುತ್ತಿರುವ ಅವೈಜ್ಞಾನಿಕ ಕಾಮಗಾರಿ ಖಂಡಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗು ಹಸಿರುಸೇನೆ ಮತ್ತು ಭದ್ರಾ ಅಚ್ಚುಕಟ್ಟು ರೈತರ ಹಿತರಕ್ಷಣಾ ಸಮಿತಿ ತಾಲೂಕು ಶಾಖೆ ವತಿಯಿಂದ ಜು.೨ರಂದು ರಸ್ತೆ ತಡೆ ಚಳುವಳಿ ಹಾಗು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 
    ತಾಲೂಕಿನ ಅರಹತೊಳಲು ಕೈಮರ, ಎನ್.ಡಿ ಸುಂದರೇಶ್ ವೃತ್ತದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ರಸ್ತೆ ತಡೆ ಚಳುವಳಿ ಹಾಗು ಮಧ್ಯಾಹ್ನ ೧೨.೩೦ಕ್ಕೆ ತಾಲೂಕು ಕಛೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 
    ರೈತ ಮುಖಂಡ ಕೆ.ಟಿ ಗಂಗಾಧರ್ ನೇತೃತ್ವವಹಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಪ್ರಧಾನ ಮಂತ್ರಿ ಅವಾಸ್ ಯೋಜನೆ ೨.೦ ಯೋಜನೆಯಡಿ ಅರ್ಜಿ ಆಹ್ವಾನ

ನಗರ ವ್ಯಾಪ್ತಿಯ ಕಂಪ್ಯೂಟರ್ ಸಿಬ್ಬಂದಿಗಳಿಗೆ ಮಾಹಿತಿ 

ಪ್ರಧಾನ ಮಂತ್ರಿ ಅವಾಸ್ ಯೋಜನೆ ೨.೦ ಯೋಜನೆಯಡಿ ಭದ್ರಾವತಿ ನಗರಸಭೆ ವ್ಯಾಪ್ತಿಯ ವಸತಿ ರಹಿತ ಹಾಗು ನಿವೇಶನ ರಹಿತ ಕುಟುಂಬಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಈ ಸಂಬಂಧ ಸೋಮವಾರ ನಗರಸಭೆ ಸಭಾಂಗಣದಲ್ಲಿ ಕಂಪ್ಯೂಟರ್ ಸೆಂಟರ್ ಸಿಬ್ಬಂದಿಗಳ ಜೊತೆ ಸಭೆ ನಡೆಸಲಾಯಿತು.
    ಭದ್ರಾವತಿ: ಪ್ರಧಾನ ಮಂತ್ರಿ ಅವಾಸ್ ಯೋಜನೆ ೨.೦ ಯೋಜನೆಯಡಿ ನಗರಸಭೆ ವ್ಯಾಪ್ತಿಯ ವಸತಿ ರಹಿತ ಹಾಗು ನಿವೇಶನ ರಹಿತ ಕುಟುಂಬಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಈ ಸಂಬಂಧ ಸೋಮವಾರ ನಗರಸಭೆ ಸಭಾಂಗಣದಲ್ಲಿ ಕಂಪ್ಯೂಟರ್ ಸೆಂಟರ್ ಸಿಬ್ಬಂದಿಗಳ ಜೊತೆ ಸಭೆ ನಡೆಸಲಾಯಿತು. 
    ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಅವಾಸ್ ೨.೦ ಯೋಜನೆಯನ್ನು ರಾಜ್ಯ ಸರ್ಕಾರದ ನಗರ ವಸತಿ ಯೋಜನೆಗಳೊಂದಿಗೆ ಸಂಯೋಜನೆಗೊಳಿಸಿ ಅನುಷ್ಠಾನಗೊಳಿಸುತ್ತಿದ್ದು, ನಗರಸಭೆ ವ್ಯಾಪ್ತಿಯ ವಸತಿ ರಹಿತ(ಕಚ್ಚಾ ಮನೆ ಹೊಂದಿರುವ) ಮತ್ತು ನಿವೇಶನ ರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ಯೂನಿಫೈಡ್ ವೆಬ್ ಪೋರ್ಟಲ್ (Unified Web Portal )  ನಲ್ಲಿ ಅರ್ಜಿ ಆಹ್ವಾನಿಸಿದೆ. 
    ನಗರ ವ್ಯಾಪ್ತಿಯ ಯಾವುದೇ ಕಂಪ್ಯೂಟರ್ ಸೆಂಟರ್‌ಗಳಲ್ಲಿ ದಿನಾಂಕ ಜು.೧೭, ೨೦೨೫ರೊಳಗಾಗಿ ಕೇಂದ್ರ ಸರ್ಕಾರದ https//pmay.urban.gov.in  ಈ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನಲೆಯಲ್ಲಿ ಅರ್ಜಿ ಸಲ್ಲಿಸಲು ಕಂಪ್ಯೂಟರ್ ಸೆಂಟರ್‌ಗಳಿಗೆ ಬರುವ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡುವ ಮೂಲಕ ಅರ್ಜಿ ಸಲ್ಲಿಸಲು ನೆರವಾಗುವಂತೆ ಕಂಪ್ಯೂಟರ್ ಸೆಂಟರ್ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಯಿತು. 
ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್ ಮತ್ತು ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ನಗರ ವಸತಿ ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ ಉಪಸ್ಥಿತರಿದ್ದರು. 

೧೧ ವರ್ಷ ಅಧಿಕಾರಾವಧಿಯಲ್ಲಿ ಸಂಸದರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳು

ಭದ್ರಾವತಿಯಲ್ಲಿ ಬಿಜೆಪಿ ಪಕ್ಷದ ನಗರ ಮಂಡಲದ ಹುತ್ತ  ಹಾಗೂ ಜನ್ನಾಪುರ ಮಹಾಶಕ್ತಿ ಕೇಂದ್ರಗಳ ವತಿಯಿಂದ ಬಿ.ಎಚ್ ರಸ್ತೆ ಶ್ರೀ ಭದ್ರೇಶ್ವರ ಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ವಿಕಸಿತ ಭಾರತ ಸಾಧನ ಸಮಾವೇಶ ಜರುಗಿತು. 
    ಭದ್ರಾವತಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ೧೧ ವರ್ಷ ಅಧಿಕಾರಾವಧಿ ಯಶಸ್ವಿಯಾಗಿ ಪೂರೈಸಿದ್ದು,  ಜಿಲ್ಲೆಯಲ್ಲಿ ಸಂಸದ ಬಿ.ವೈ ರಾಘವೇಂದ್ರರವರು ಕೈಗೊಂಡಿರುವ ಹಲವಾರು ಅಭಿವೃದ್ಧಿ ಕಾರ್ಯಗಳು ಕೇಂದ್ರ ಸರ್ಕಾರದ ಸಾಧನೆಗೆ ಸಾಕ್ಷಿ ಎಂಬಂತೆ ಕಂಡು ಬರುತ್ತಿವೆ ಎಂದು ಪಕ್ಷದ ಜಿಲ್ಲಾ ಮುಖಂಡರು ಹೇಳಿದರು.  
    ಪಕ್ಷದ ನಗರ ಮಂಡಲದ ಹುತ್ತ  ಹಾಗೂ ಜನ್ನಾಪುರ ಮಹಾಶಕ್ತಿ ಕೇಂದ್ರಗಳ ವತಿಯಿಂದ ಬಿ.ಎಚ್ ರಸ್ತೆ ಶ್ರೀ ಭದ್ರೇಶ್ವರ ಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಕಸಿತ ಭಾರತ ಸಾಧನ ಸಮಾವೇಶದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ್, ಜಿಲ್ಲಾ ಖಜಾಂಚಿ ರಾಮಣ್ಣ ಮತ್ತು ಶಿವಮೊಗ್ಗ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ದೀನ್ ದಯಾಳುರವರು, ಜಿಲ್ಲೆಯಲ್ಲಿ ಸಂಸದ ಬಿ.ವೈ ರಾಘವೇಂದ್ರರವರ ನೇತೃತ್ವದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಬಹುಮುಖ್ಯವಾಗಿ ವಿಮಾನ ನಿಲ್ದಾಣ, ಹೆದ್ದಾರಿ, ರೈಲ್ವೆ ಅಭಿವೃದ್ಧಿ ಕಾರ್ಯಗಳು, ಸಿಗಂದೂರು ಸೇತುವೆ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಲಾಗಿದೆ ಎಂದರು. 
    ಕೇಂದ್ರ ಸರ್ಕಾರದ ಹಲವಾರು ಯೋಜನೆಗಳು ರೈತರು, ಕಾರ್ಮಿಕರು, ಬಡವರು, ಮಕ್ಕಳು-ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸರ್ವರ ಅಭಿವೃದ್ಧಿಗೆ ಪೂರಕವಾಗಿವೆ ಎಂದರು. 
      ಮಹಾಶಕ್ತಿ ಕೇಂದ್ರಗಳ  ಅಧ್ಯಕ್ಷರಾದ ಸತೀಶ್ ಕುಮಾರ್ ಹಾಗೂ ರಘುರಾವ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಆಪರೇಷನ್ ಸಿಂಧೂರದ ಯಶಸ್ವಿಗೆ ಕಾರಣಕರ್ತರಾದ ಭಾರತೀಯ ವೀರಯೋಧರಿಗೆ ಗೌರವ ನಮನಗಳನ್ನು ಸಮರ್ಪಿಸಿ ದೇಶ ಸೇವೆ ಮಾಡಿದ ಮಾಜಿ ಸೈನಿಕರಿಗೆ ಗೌರವಿಸಿ ಸನ್ಮಾನಿಸಲಾಯಿತು. ಅಲ್ಲದೆ ವಿಕಸಿತ ಭಾರತದ ಅಮೃತಕಾಲದ ಸಂಕಲ್ಪ  ಮಾಡಲಾಯಿತು. 
    ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ, ಮಾಜಿ ಸೈನಿಕ ಸಂಘದ ತಾಲೂಕು ಅಧ್ಯಕ್ಷ ಸುಬೇದಾರ್ ಗುಲ್ಗುಲೆ, ಸುಬೇದಾರ್ ಶ್ರೀನಿವಾಸ್, ಕಮಾಂಡೋ ಗಿರೀಶ್, ಹವಲ್ದಾರ್‌ಗಳಧ ಸುರೇಶ್, ಧರ್ಮಕುಮಾರ್ ಮತ್ತು ಜಿ. ವಾಸುದೇವನ್,  ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್ ಹಾಗೂ ಮೊಸರಳ್ಳಿ ಅಣ್ಣಪ್ಪ,  ಪ್ರಮುಖರಾದ  ಜಿ. ರಾಮುಲಿಂಗಯ್ಯ, ಜಿಲ್ಲಾ ವಿಶೇಷ ಆಹ್ವಾನಿತ ಎಂ. ಮಂಜುನಾಥ್, ಪ್ರಮುಖರಾದ ಪ್ರೇಮ್ ಕುಮಾರ್, ಸುಲೋಚನಾ ಪ್ರಕಾಶ್, ಅನ್ನಪೂರ್ಣ, ರಾಜಶೇಖರ್ ಉಪ್ಪಾರ್, ಲತಾ ಪ್ರಭಾಕರ್, ರವಿಕುಮಾರ್, ಚಂದ್ರಪ್ಪ, ನಂಜಪ್ಪ, ಶೋಭಾ ಪಾಟೀಲ್, ಆಶಾ ಪುಟ್ಟಸ್ವಾಮಿ, ಆಟೋ ಮೂರ್ತಿ, ಮಂಜುಳ, ಉಮಾವತಿ, ಮಂಜುನಾಥ್, ದೀಪಕ್, ಧರ್ಮಣ್ಣ, ಮಂಜೇಗೌಡ, ಶ್ರೀನಿವಾಸ್ ಕಾರಂತ್, ಮಹಾಶಕ್ತಿ ಕೇಂದ್ರ ಹಾಗೂ ಬೂತ್ ಪ್ರಮುಖ ಕಾರ್ಯಕರ್ತರು ಪಾಲ್ಗೊಂಡಿದ್ದರು. 

ಫೈಲ್ವಾನ್ ಕೆಂಚಪ್ಪ ನಿಧನ

ಫೈಲ್ವಾನ್ ಕೆಂಚಪ್ಪ 
    ಭದ್ರಾವತಿ : ಹಳೇನಗರದ ಜಟ್‌ಪಟ್ ನಗರದ ನಿವಾಸಿ, ಕಂಚಿ ಗರಡಿ ಮನೆ ಹಿರಿಯ ಕುಸ್ತಿಪಟು, ಫೈಲ್ವಾನ್ ಕೆಂಚಪ್ಪ(೮೭) ಭಾನುವಾರ ನಿಧನ ಹೊಂದಿದರು. 
    ಇಬ್ಬರು ಪತ್ನಿಯರು, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. 
    ಕೆಂಚಪ್ಪ ನಗರದ ಪ್ರಸಿದ್ದ ಕುಸ್ತಿಪಟುಗಳಲ್ಲಿ ಒಬ್ಬರಾಗಿದ್ದು, ಇವರಿಂದ ಹಲವಾರು ಯುವಕರು ಕುಸ್ತಿ ತರಬೇತಿ ಪಡೆದು ಗುರುತಿಸಿಕೊಂಡಿದ್ದಾರೆ. ಕೆಂಚಪ್ಪ ಶಾಸಕ ಬಿ.ಕೆ ಸಂಗಮೇಶ್ವರ್ ಆಪ್ತರಲ್ಲಿ ಒಬ್ಬರಾಗಿದ್ದು, ಇವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ಇವರ ಸಹೋದರರಾದ ಬಿ.ಕೆ ಮೋಹನ್, ಬಿ.ಕೆ ಶಿವಕುಮಾರ್, ಯುವ ಮುಖಂಡ ಬಿ.ಎಸ್ ಗಣೇಶ್, ಸ್ಥಳೀಯ ಫೈಲ್ವಾನ್‌ಗಳು ಸಂತಾಪ ಸೂಚಿಸಿದ್ದಾರೆ. 

ಎಚ್. ಸಿದ್ದಲಿಂಗಸ್ವಾಮಿಗೆ ಪಿಎಚ್‌ಡಿ ಪದವಿ

ಎಚ್. ಸಿದ್ದಲಿಂಗಸ್ವಾಮಿ 
    ಭದ್ರಾವತಿ: ನಗರದ ಚಮನ್ ಷಾ ವಲಿ ಉರ್ದು ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಎಚ್. ಸಿದ್ದಲಿಂಗಸ್ವಾಮಿ ಅವರು ಶ್ರೀನಿವಾಸವನಮ್, ಕುಪ್ಪಮ್, ದ್ರಾವಿಡಿಯನ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ  ಪದವಿ ಪಡೆದುಕೊಂಡಿದ್ದಾರೆ. 
    ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಘಟನೋತ್ತರ ಪ್ರಾಂಶುಪಾಲ ಡಾ. ಕೆ.ಬಿ ಧನಂಜಯರವರ ಮಾರ್ಗದರ್ಶನಲ್ಲಿ `ಪ್ರಾಬ್ಲಮ್ಸ್ ಅಂಡ್ ಪ್ರಾಸ್ಪೆಕ್ಟಸ್ ಆಫ್ ಸ್ಮಾಲ್ ಇಂಡಸ್ಟ್ರೀಸ್ ಇನ್ ಕರ್ನಾಟಕ ವಿತ್ ಸ್ಪೆಷಲ್ ರೆಫೆರೆನ್ಸ್ ಆಫ್ ಶಿವಮೊಗ್ಗ ಡಿಸ್ಟ್ರಿಕ್ಟ್' ಎಂಬ ವಿಷಯ ಕುರಿತು ಅರ್ಥಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ನಡೆಸಿ ವರದಿ ಮಂಡಿಸಿದ್ದರು. ಸಿದ್ದಲಿಂಗಸ್ವಾಮಿಯವರು ಮೂಲತಃ ಶಿವಮೊಗ್ಗ ಹರಿಗೆ ನಿವಾಸಿಯಾಗಿದ್ದು, ಹನುಮಂತಪ್ಪ-ಗೌರಮ್ಮ ದಂಪತಿ ಪುತ್ರರಾಗಿದ್ದಾರೆ. 

Sunday, June 29, 2025

ಮಾದಕ ವಸ್ತುಗಳಿಗೆ ಯುವ ಸಮೂಹ ಬಲಿ : ಆತಂಕ

ಆರ್‌ಎಎಫ್ ಬೆಟಾಲಿಯನ್‌ನಲ್ಲಿ ಮಾದಕ ವಸ್ತುಗಳ ವಿರೋಧಿ ದಿನ ಆಚರಣೆ 

ಭದ್ರಾವತಿ: ನಗರದ ಮಿಲ್ಟ್ರಿಕ್ಯಾಂಪ್ ಕ್ಷಿಪ್ರ ಕಾರ್ಯ ಪಡೆ (ಆರ್‌ಎಎಫ್) ೯೭ನೇ ಬೆಟಾಲಿಯನ್ ಆವರಣದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮ ಕಮಾಂಡರ್-೨ ಸಂತೋರವರು ಮಾತನಾಡಿದರು. 
    ಭದ್ರಾವತಿ: ನಗರದ ಮಿಲ್ಟ್ರಿಕ್ಯಾಂಪ್ ಕ್ಷಿಪ್ರ ಕಾರ್ಯ ಪಡೆ (ಆರ್‌ಎಎಫ್) ೯೭ನೇ ಬೆಟಾಲಿಯನ್ ಆವರಣದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಚರಿಸಲಾಯಿತು.
    ಬೆಟಾಲಿಯನ್ ಕಮಾಂಡರ್-೨(ಪಿಪಿಎಂಜಿ) ಸಂತೋರವರು ಮಾದಕ ವಸ್ತು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ವಿವರಿಸಿ, ಇತ್ತೀಚೆಗೆ ಯುವ ಸಮೂಹ ದುಶ್ಚಟಗಳಿಗೆ ಹೆಚ್ಚಾಗಿ ಬಲಿಯಾಗುತ್ತಿರುವ ಸುದ್ದಿಗಳು ಕೇಳಿ ಬರುತ್ತಿವೆ. ಇದರಿಂದಾಗಿ ದೇಶದ ಭವಿಷ್ಯದ ಪ್ರಜೆಗಳಾದ ಯುವಕರ ಬದುಕು ಹಾಗು ಕುಟುಂಬಗಳು ನಾಶವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. 
    ಯುವ ಸಮೂಹ ಮಾದಕ ವಸ್ತುಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದಾಗ ಮಾತ್ರ ದೇಶ ಸುಭಿಕ್ಷೆಯಾಗುತ್ತದೆ. ಈ ದಿಸೆಯಲ್ಲಿ ಯುವ ಸಮೂಹ ಸೇರಿದಂತೆ ದೇಶದ ಭದ್ರತೆಗಾಗಿ ಪ್ರತಿಯೊಬ್ಬ ನಾಗರಿಕರು ಶ್ರಮವಹಿಸಿ ಮಾದಕ ವಸ್ತುಗಳನ್ನು ತೊಲಗಿಸಬೇಕಾಗಿದೆ ಎಂದು ಕರೆ ನೀಡಿದರು.
  ಕಮಾಂಡರ್-೨ ಸಚಿನ್ ಗಾಯಕ್ವಾಡ್, ಉಪ ಕಮಾಂಡರ್ ರಮೇಶ್ ಸಿಂಗ್, ಸಹಾಯಕ ಕಮಾಂಡರ್ ಅನಿಲ್‌ಕುಮಾರ್ ಮುಂತಾದವರು ಉಪಸ್ಥಿತದ್ದರು.

ದ್ವಿಚಕ್ರ ವಾಹನ ದುರಸ್ತಿಗಾರರ ಬದುಕು ಉತ್ತಮಗೊಳ್ಳಲಿ : ಬಿ.ಕೆ ಮೋಹನ್

ಭದ್ರಾವತಿ ಮಹಾತ್ಮಗಾಂಧಿ(ಟಿ.ಕೆ ರಸ್ತೆ)ಯ ಪಾಂಡುರಂಗ ಮಂದಿರದಲ್ಲಿ ಸರ್.ಎಂ ವಿಶ್ವೇಶ್ವರಯ್ಯ ದ್ವಿಚಕ್ರ ವಾಹನ ದುರಸ್ತಿಗಾರರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೩೭ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ : ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ ವತಿಯಿಂದ ವಿವಿಧ ಸೌಲಭ್ಯಗಳನ್ನು ಸರ್ಕಾರ ದ್ವಿಚಕ್ರ ವಾಹನ ದುರಸ್ತಿಗಾರರಿಗೂ ಕಲ್ಪಿಸಿಕೊಟ್ಟಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು. 
    ಅವರು ಭಾನುವಾರ ನಗರದ ಮಹಾತ್ಮಗಾಂಧಿ(ಟಿ.ಕೆ ರಸ್ತೆ)ಯ ಪಾಂಡುರಂಗ ಮಂದಿರದಲ್ಲಿ ಸರ್.ಎಂ ವಿಶ್ವೇಶ್ವರಯ್ಯ ದ್ವಿಚಕ್ರ ವಾಹನ ದುರಸ್ತಿಗಾರರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೩೭ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 
    ನಗರದಲ್ಲಿ ದ್ವಿಚಕ್ರ ವಾಹನ ದುರಸ್ತಿಗಾರರು ಬಹಳ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದು, ಇವರಿಗೂ ಉತ್ತಮ ಜೀವನ ನಿರ್ವಹಣೆಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕಾಗಿದೆ. ಸರ್ಕಾರ ವಿವಿಧ ಸೌಲಭ್ಯಗಳು ಇವರಿಗೂ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಸಂಘಟನೆ ನೇತೃತ್ವವಹಿಸಿರುವವರು ಗಮನ ಹರಿಸಬೇಕೆಂದರು. 
    ಸರ್ಕಾರದ ವಿವಿಧ ಯೋಜನೆಗಳಿಗೆ ಕಾರ್ಮಿಕ ಇಲಾಖೆ ಮೂಲಕ ಅರ್ಹರು ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದಾಗಿದೆ. ಈ ಹಿನ್ನಲೆಯಲ್ಲಿ ಸಂಬಂಧಿಸಿದ ಮಾಹಿತಿಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಸಂಘಟನೆ ಇನ್ನೂ ಹೆಚ್ಚು ಬಲಗೊಳ್ಳಬೇಕು. ಆಗ ಮಾತ್ರ ನಮ್ಮ ಬೇಡಿಕೆಗಳು ಈಡೇರುತ್ತವೆ ಎಂದರು.  ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಎಸ್. ಮಣಿಶೇಖರ್ ಪಾಲ್ಗೊಂಡು ಮಾತನಾಡಿ, ಗ್ಯಾರಂಟಿ ಯೋಜನೆಯಡಿ ಅರ್ಹ ಕಾರ್ಮಿಕರು ಪಡೆದುಕೊಳ್ಳಬಹುದಾದ ಯೋಜನೆಗಳ ಕುರಿತು ಮಾಹಿತಿ ನೀಡಿದರು. 
    ಸಮಾರಂಭದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಮೆಸ್ಕಾಂ ಸಲಹಾ ಸಮಿತಿ ತಾಲೂಕು ಅಧ್ಯಕ್ಷ ಬಸವಂತಪ್ಪ, ಅಖಲ ಕರ್ನಾಟಕ ಕಟ್ಟಡ ಹಾಗು ಅಸಂಘಟಿತ ಕಾರ್ಮಿಕರ ಒಕ್ಕೂಟದ ಸುಂದರ್ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಬಾಬು ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ದ್ವಿಚಕ್ರ ವಾಹನ ಬಿಡಿಭಾಗಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿತ್ತು. 

Saturday, June 28, 2025

ಯಶಸ್ಸಿಗೆ ಕನಸು ಕಂಡರೆ ಸಾಲದು ದೃಢ ಸಂಕಲ್ಪ ಮುಖ್ಯ : ಡಿ. ಪ್ರಭಾಕರ್ ಬೀರಯ್ಯ

ಭದ್ರಾವತಿ ದೈವಜ್ಞ ಕಲ್ಯಾಣ ಮಂದಿರದಲ್ಲಿ ಗಾಂಧಿನಗರದ ಸೇಂಟ್ ಜೋಸೆಫ್ ಪಿಯು ಕಾಲೇಜ್ ಆಫ್ ಎಕ್ಸಲೆನ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತಿಸುವ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ, ಶ್ರೀ ಸತ್ಯಸಾಯಿ ಬಾಬಾ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ ಉದ್ಘಾಟಿಸಿ ಮಾತನಾಡಿದರು.
    ಭದ್ರಾವತಿ : ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಶಸ್ಸು ಕಾಣಲು ಕನಸು ಕಂಡರೆ ಸಾಲದು, ಛಲ ಹೊತ್ತು ದೃಢ ಸಂಕಲ್ಪದೊಂದಿಗೆ ಶ್ರಮವಹಿಸಿದಾಗ ಮಾತ್ರ ಕನಸು ನನಸಾಗಿಸಬಹುದೆಂದು ನಗರದ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ, ಶ್ರೀ ಸತ್ಯಸಾಯಿ ಬಾಬಾ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ ಹೇಳಿದರು.
     ಅವರು ಶನಿವಾರ ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಗಾಂಧಿನಗರದ ಸೇಂಟ್ ಜೋಸೆಫ್ ಪಿಯು ಕಾಲೇಜ್ ಆಫ್ ಎಕ್ಸಲೆನ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತಿಸುವ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
    ಮಹಾತ್ಮಗಾಂಧಿ, ಸಚಿನ್ ತೆಂಡೋಲ್ಕರ್, ವಿಶ್ವನಾಥ್‌ಆನಂದ್, ಸ್ವಾಮಿ ವಿವೇಕಾನಂದ ಸೇರಿದಂತೆ ಇನ್ನೂ ಮುಂತಾದವರು ಛಲ ಮತ್ತು ದೃಢ ಸಂಕಲ್ಪದ ಹಾದಿಯಲ್ಲಿ ಸಾಗಿ ಸಾಕರಾಗಿದ್ದಾರೆ. ಇನ್‌ಫೋಸಿಸ್ ನಾರಾಯಣಮೂರ್ತಿ, ಸುಧಾಮೂರ್ತಿ ಅವರಿಗೆ ಟಾಟಾ ಕೊಡುಗೆ ನೀಡಿದ ನೂರು ರು. ಗಳಿಂದ ಇಂದು ಲಕ್ಷ ಲಕ್ಷ ಕೋಟಿ ರು. ಒಡೆಯರಾಗಿರುವುದು ಅವರ ದೃಢತೆ, ಗುರಿ, ಸಾಧನೆಯಿಂದ ಜಗತ್ತಿಗೆ ಹೆಸರಾಗಿದ್ದಾರೆ. 
    ವಿದ್ಯಾರ್ಥಿಗಳಲ್ಲಿ ಅನೇಕ ಚಿಂತನೆಗಳನ್ನು ಹೊತ್ತ ಚಂಚಲತೆಯ ಮನಸ್ಸನ್ನು ನಿಗ್ರಹಿದರೆ ಮಾತ್ರ ನಿಮ್ಮ ಆಲೋಚನೆಗಳು ಉಪಯೋಗಕ್ಕೆ ಬರುತ್ತವೆ. ಸಮಯ ಪ್ರಜ್ಞೆ, ಸಮಯ ನಿಗದಿಯನ್ನು ಮರೆಯಬಾರದು. ೫ ವರ್ಷದ ಅವಧಿಯಲ್ಲಿ ಪದವಿ ಪಡೆಯಲು ನಿಗದಿಯಂತೆ ಭವಿಷ್ಯದಲ್ಲೂ ಸಂಕಲ್ಪದ ನಿಗದಿ ಪಡಿಸಿಕೊಳ್ಳಬೇಕು. ಆಸೆ, ಆಕಾಂಕ್ಷೆಗಳಿಗೆ ಅಡಿಪಾಯವಿಲ್ಲವಾಗಿದೆ. ಪೋಷಕರು ಮಕ್ಕಳಿಗೆ ಸಂಸ್ಕೃತಿ, ನೀತಿ ಮಾರ್ಗಗಳ ವಿವೇಚನೆ ತೋರಬೆಕು. ಸನ್ನಡತೆಯಲ್ಲಿ ಸಾಗುವಂತೆ ಪ್ರೇರೇಪಿಸಬೇಕೆಂದರು.
    ಜ್ಞಾನ ಜ್ಯೋತಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಸಂಧ್ಯಾಬಾಯಿ ಮಾತನಾಡಿ, ವಿದ್ಯಾರ್ಥಿಗಳಿಗೆ ಯಶಸ್ಸು ಸುಮ್ಮನೆ ಬರಲ್ಲ. ಅದನ್ನು ಹುಡುಕಿ ಹೋಗಬೇಕು. ಭಕ್ತಿಯಿಂದ ಗುರಿ ಮುಟ್ಟಬಹುದು. ಕಷ್ಟ ಪಟ್ಟು ಶ್ರದ್ದೆಯಿಂದ ಗುರಿ ಮುಟ್ಟಿದಾಗ ಮಾತ್ರ ಸುಖ ಲಭಿಸುತ್ತದೆ ಎಂದರು. 


ಭದ್ರಾವತಿ ದ್ವಿತೀಯ ಪಿಯು ಫಲಿತಾಂಶದಲ್ಲಿ ರಾಜ್ಯ ಮಟ್ಟದಲ್ಲಿ ರ್‍ಯಾಂಕ್ ಗಳಿಸಿ ಕೀರ್ತಿ ತಂದ ಹೆಚ್.ವಾಣಿ ಮತ್ತು ಪೋಷಕರನ್ನು ಸನ್ಮಾನಿಸಿ ೫೦ ಸಾವಿರ ನಗದು ಬೆಳ್ಳಿ ನಾಣ್ಯ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.      
    ಕಾಲೇಜಿನ ಪ್ರಾಂಶುಪಾಲರಾದ ಲತಾ ರಾಬರ್ಟ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಮಕ್ಕಳಲ್ಲಿ ಸಂಸ್ಕಾರ, ವಿವೇಚನೆ, ಶ್ರದ್ದೆ, ನಯ-ವಿನಯ, ಹಿರಿಯರಿಗೆ ಗೌರವಿಸುವ ಅನೇಕ ಉತ್ತಮ ಮೌಲ್ಯಗಳನ್ನು ತಿಳಿಸಿಕೊಡುವ ವಿದ್ಯಾಸಂಸ್ಥೆ ನಮ್ಮದಾಗಿದೆ. ಇಂತಹ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳೇ ಧನ್ಯರು ಎಂದರು. 
    ಜ್ಞಾನ ಜ್ಯೋತಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಪುಷ್ಪರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಉಪಾಧ್ಯಕ್ಷ ವೆಂಕಟರಮಣ ಶೇಟ್, ಟ್ರಸ್ಟ್ ಖಜಾಂಚಿ ರಾಬರ್ಟ್ ಡಿಸೋಜಾ ಮಾತನಾಡಿದರು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿಯೇ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಕೀರ್ತಿ ತಂದಿರುವ ವಿದ್ಯಾರ್ಥಿನಿ ಎಚ್.ವಾಣಿ ಮತ್ತು ಪೋಷಕರನ್ನು ಸನ್ಮಾನಿಸಿ ೫೦ ಸಾವಿರ ನಗದು, ಬೆಳ್ಳಿ ನಾಣ್ಯ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. 
    ಅತಿಹೆಚ್ಚು ಅಂಕ ಪಡೆದು ಉತ್ತೀರ್ಣರಾದ ೬೮ ವಿದ್ಯಾರ್ಥಿಳಿಗೆ ಮತ್ತು ಅವರ ಪೋಷಕರಿಗೆ ಬೆಳ್ಳಿ ನಾಣ್ಯ ಮತ್ತು ಪ್ರಶಸ್ತಿ ಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಆರಂಭದಲ್ಲಿ ತೆರೇಸಾ ಡೆಲ್ಸಿ ಸ್ವಾಗತ ನೃತ್ಯ ಪ್ರದರ್ಶಿಸಿದರೆ, ಆದಿತಿ ಲೋಕೇಶ್, ಆರ್.ಪಿ.ವರ್ಷ ಪ್ರಾರ್ಥಿಸಿದರು. ಡಿ.ವರ್ಷ ಸ್ವಾಗತಿಸಿ, ವಸಂತ್ ಅತಿಥಿಗಳ ಪರಿಚಯಿಸಿದರು, ಬಿ.ಬಿ ಲಕ್ಷ್ಮಿಶ್ರೀ ವಂದಿಸಿದರೆ, ಆನಂ ನಶ್ರ, ಸುಹಾ ಕಮಲ್ ನಿರೂಪಿಸಿದರು.

ಭದ್ರಾ ಜಲಾಶಯದಲ್ಲಿ ಒಂದೆಡೆ ಅವೈಜ್ಞಾನಿಕ, ಮತ್ತೊಂದೆಡೆ ಕಳಪೆ ಕಾಮಗಾರಿ ಭೀತಿ

ಜಲಾಶಯದಲ್ಲಿ ನೀರಿದ್ದರೂ ಬೆಳೆ ಬೆಳೆಯದಂತಹ ಸ್ಥಿತಿ 

ಭದ್ರಾ ಜಲಾಶಯ 

    * ಅನಂತಕುಮಾರ್ 
    ಭದ್ರಾವತಿ: ತಾಲೂಕಿನ ಭದ್ರಾ ಜಲಾಶಯ ಮಧ್ಯ ಕರ್ನಾಟಕದ ರೈತರ ಜೀವನಾಡಿಯಾಗಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ರೈತರಿಗೆ ವ್ಯವಸಾಯ ಹಾಗೂ ಗದಗ-ಬೆಟಗೇರಿ ಪಟ್ಟಣದವರೆಗೂ ಜನರಿಗೆ ಕುಡಿಯುವ ನೀರಿಗೆ ಆಧಾರವಾಗಿದೆ. ಭದ್ರಾ ಜಲಾಶಯದ ನೀರನ್ನು ನೆಚ್ಚಿಕೊಂಡು ರೈತರು ಭತ್ತ, ಕಬ್ಬು, ಅಡಕೆ, ತೆಂಗು ಮುಂತಾದ ಬೆಳೆಗಳನ್ನು ಬೆಳೆದು ಬದುಕು ಕಟ್ಟಿಕೊಂಡಿರುತ್ತಾರೆ. ಇದೀಗ ಜಲಾಶಯದಲ್ಲಿ ನೀರಿನ ಕೊರತೆ ಇಲ್ಲದಿದ್ದರೂ ಸಹ ಎಡದಂಡೆ ನಾಲೆ ರೈತರು ಬೆಳೆ ಬೆಳೆಯದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಒಂದೆಡೆ ರೈತರು ಆತಂಕಕ್ಕೆ ಒಳಗಾಗಿದ್ದರೆ, ಮತ್ತೊಂದೆಡೆ ಜಲಾಶಯದ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. 
    ಬಲದಂಡೆ ನಾಲೆಯಲ್ಲಿ ಅವೈಜ್ಞಾನಿಕ ಕಾಮಗಾರಿ : 
    ಮಧ್ಯ ಕರ್ನಾಟಕದ ಬೃಹತ್ ಜಲಾಶಯದ ಸುರಕ್ಷತೆಯನ್ನು ನಿರ್ಲಕ್ಷಿಸಿ ರಾಜ್ಯ ಸರ್ಕಾರ ೧೬೬೦ ಹಳ್ಳಿಗಳಿಗೆ ಕುಡಿಯಲು ನೀರನ್ನು ಒದಗಿಸುವ ಬೃಹತ್ ಕಾಮಗಾರಿಯನ್ನು ಭದ್ರಾ ಜಲಾಶಯದ ನಿರ್ಬಂಧಿತ ಪ್ರದೇಶದಲ್ಲಿ (ಬಫರ್ ಜೋನ್‌ನಲ್ಲಿ) ಕೈಗೊಂಡಿದೆ. ಈ  ಕಾಮಗಾರಿ ಕೈಗೊಂಡಿರುವ ಪ್ರದೇಶವು ಅತೀ ಸೂಕ್ಷ್ಮ ಪ್ರದೇಶವಾಗಿರುತ್ತದೆ. ಈ ಪ್ರದೇಶದಲ್ಲಿ ಯಾವುದೇ ಕಾಮಗಾರಿಯನ್ನು ಕೈಗೊಳ್ಳಬಾರದೆಂಬ ನಿಯಮಾವಳಿಗಳಿದ್ದರೂ ಬಹುಗ್ರಾಮ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿ ಕುಡಿಯುವ ನೀರಿನ ಘಟಕಗಳಿಗೆ ನೀರು ಸರಬರಾಜು ಮಾಡಲು ಜಲಾಶಯದ ಬಲದಂಡೆ ನಾಲೆಯನ್ನು ಸೀಳಿ ನಡೆಸುತ್ತಿರುವ ಕಾಮಗಾರಿ ಅವೈಜ್ಞಾನಿಕವಾಗಿರುತ್ತದೆ.
    ಜಲಾಶಯದ ನಿರ್ಬಂಧಿತ ಮತ್ತು ಸೂಕ್ಷ್ಮ ಪ್ರದೇಶದಲ್ಲಿ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಜಲಾಶಯ ತುಂಬಿದಾಗ ನೀರಿನ ಒತ್ತಡದಿಂದಾಗಿ ಯಾವುದೇ ರೀತಿಯ ಅಪಾಯಗಳು ಸಂಭವಿಸಬಹುದಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಮಳೆಬಿದ್ದು ಗುಡ್ಡಗಳು ಕುಸಿಯುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಇವೆಲ್ಲವನ್ನೂ ಸರ್ಕಾರ ಮನಗಂಡಿದ್ದರೂ ಜಲಾಶಯದ ಸುರಕ್ಷತೆ ಮತ್ತು ಜನರ ಹಿತಾಸಕ್ತಿಯನ್ನು ಕಡೆಗಣಿಸಿ ಈ ಕಾಮಗಾರಿ ಕೈಗೊಂಡಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. 

ಸುರೇಶ್, ರೈತ ಮುಖಂಡರು. 

ಭದ್ರಾ ಜಲಾಶಯದಲ್ಲಿ ಪ್ರಸ್ತುತ ಪ್ರಗತಿಯಲ್ಲಿರುವ ಎರಡು ಕಾಮಗಾರಿಗಳನ್ನು ತಕ್ಷಣ ಸ್ಥಗಿತಗೊಳಿಸಿ ರೈತರ ಹಿತಾಸಕ್ತಿ ಕಾಪಾಡುವಂತೆ ಹಾಗು ಜಲಾಶಯದ ಸುರಕ್ಷತೆಗೆ ಗಮನ ಹರಿಸುವಂತೆ ಜಲಾಶಯದ ಬಳಿ ನಿರಂತರವಾಗಿ ಹೋರಾಟ ನಡೆಸಲಾಗುತ್ತಿದೆ. ಈ ಎರಡು ಕಾಮಗಾರಿಗಳಿಂದ ಎದುರಾಗಬಹುದಾದ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು, ಸಚಿವರು, ಸ್ಥಳೀಯ ಜನಪ್ರತಿನಿಧಿಗಳು ಹಾಗು ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಹಿಂದೆ ಸಹ ಕಳಪೆ ಕಾಮಗಾರಿ ಸಂಬಂಧ ಸರ್ಕಾರದ ಗಮನಕ್ಕೆ ತರಲಾಗಿತ್ತು. ಈ ಹಿನ್ನಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಈ ಬಾರಿ ಯಾರ ಗಮನಕ್ಕೂ, ಕಾಮಗಾರಿ ಕುರಿತು ಯಾವ ವಿಚಾರವೂ ತಿಳಿಸದೆ ತರಾತುರಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ತಕ್ಷಣ ಕಾಮಗಾರಿ ಸ್ಥಗಿತಗೊಳಿಸಬೇಕು. ಪ್ರಸ್ತುತ ಕೈಗೊಂಡಿರುವ ಕಾಮಗಾರಿಯಿಂದ ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ಎಚ್ಚರವಹಿಸಬೇಕು. 
                                                                                                          -ಸುರೇಶ್, ರೈತ ಮುಖಂಡರು.
       ಎಡದಂಡೆ ನಾಲೆಯಲ್ಲಿ ಕಳಪೆ ಕಾಮಗಾರಿ : 
    ಬಲದಂಡೆ ನಾಲೆಯಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಎಡದಂಡೆ ನಾಲೆಯಲ್ಲಿ ಕಳಪೆ ಕಾಮಗಾರಿ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. 
    ಎಡದಂಡೆ ನಾಲೆಯ ಮುಖ್ಯ ಗೇಟ್‌ನಲ್ಲಿ ನೀರಿನ ಸೋರಿಕೆ ತಡೆಯಲು ಕಾಮಗಾರಿ ನಡೆಸಲಾಗುತ್ತಿದ್ದು, ದೊಡ್ಡ ಮಟ್ಟದ ಅಂಡರ್ ವಾಟರ್ ಮತ್ತು ದೊಡ್ಡ ಮಟ್ಟದ ಗೇಟ್ ಅಳವಡಿಸಿರುವ ಕಾಮಗಾರಿಗಳನ್ನು ನಿರ್ವಹಿಸಿರುವ ಪ್ರಮಾಣ ಪತ್ರ ಪಡೆಯದಿರುವ ಉತ್ತರ ಪ್ರದೇಶದ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಈ ಕಂಪನಿಗೆ ಕಾಮಗಾರಿ ನಡೆಸಿರುವ ಕುರಿತು ಅನುಭವ ಇಲ್ಲದಿರುವುದು ಆರಂಭದಲ್ಲಿಯೇ ತಿಳಿಯುತ್ತಿದ್ದು, ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇರುವ ಅವಧಿಯಲ್ಲಿ ಕಾಮಗಾರಿ ನಡೆಸಬೇಕಿತ್ತು. ಆದರೆ ಅದನ್ನು ಮಾಡದೆ ಜಲಾಶಯ ಭರ್ತಿಯಾಗುತ್ತಿರುವ ಸಂದರ್ಭದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಈಗಾಗಲೇ ಜಲಾಶಯದ ಮುಖ್ಯಗೇಟ್ ತೆಗೆದು ಹಾಕಲಾಗಿದ್ದು, ಅಂದಾಜಿನ ಪ್ರಕಾರ ಈ ಕಾಮಗಾರಿ ಮುಕ್ತಾಯಗೊಳ್ಳಲು ಇನ್ನೂ ೨-೩ ತಿಂಗಳ ಬೇಕಾಗಿರುತ್ತದೆ. ಆದರೆ ೪೫ ದಿನಗಳಲ್ಲಿ ಕಾಮಗಾರಿ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ಗುಣಮಟ್ಟದ ಕಾಮಗಾರಿ ನಿರೀಕ್ಷಿಸಲು ಸಾಧ್ಯವೇ ಎಂಬ ಪ್ರಶ್ನೆ ರೈತ ಮುಖಂಡರದ್ದಾಗಿದೆ. 
    ಬೆಳೆ ಬೆಳೆಯದಂತೆ ರೈತರಿಗೆ ಸೂಚನೆ: 
    ಎಡದಂತೆ ನಾಲೆಯಲ್ಲಿ ಮುಖ್ಯಗೇಟ್ ಅಳವಡಿಸುವ ಕಾಮಗಾರಿ ಕೈಗೊಂಡಿರುವ ಹಿನ್ನಲೆಯಲ್ಲಿ ೪೫ ದಿನಗಳ ವರೆಗೆ ನಾಲೆಯಲ್ಲಿ ನೀರು ಹರಿಸುವುದಿಲ್ಲ.  ಈ ಹಿನ್ನಲೆಯಲ್ಲಿ ರೈತರು ಯಾವುದೇ ಬೆಳೆ ಬೆಳೆಯದಂತೆ ಅಧಿಕಾರಿಗಳು ಸೂಚಿಸಿದ್ದಾರೆ. 
    ಇದರಿಂದಾಗಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಪ್ರತಿ ವರ್ಷ ಜಲಾಶಯದ ನೀರನ್ನು ನಂಬಿಕೊಂಡು ಬದುಕುತ್ತಿರುವ ರೈತರು ಭತ್ತ, ಮುಸುಕಿನ ಜೋಳ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಬಹುಮುಖ್ಯವಾಗಿ ಭತ್ತದ ಬೆಳೆ ಬೆಳೆಯಲೇ ಬೇಕಾಗಿದೆ. ಜಾನುವಾರುಗಳಿಗೆ ಮೇವು ಅಗತ್ಯವಿರುವುದರಿಂದ ಭತ್ತದ ಬೆಳೆ ಅನಿವಾರ್ಯವಾಗಿದೆ. ಬಹುತೇಕ ಕೃಷಿಕರು ಹಾಲು ಮಾರಾಟ ಮಾಡಿ ಬದುಕುತ್ತಿದ್ದಾರೆ. ಬೆಳೆ ಬೆಳೆಯದಿದ್ದರೆ ಸಂಕಷ್ಟ ಎದುರಾಗಲಿದೆ. ಈ ಹಿನ್ನಲೆಯಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದೆ. ರೈತರಿಗೆ ಪರ್ಯಾಯ ವ್ಯವಸ್ಥೆ ಕೈಗೊಂಡು ಕಾಮಗಾರಿ ಮುಂದುವರೆಸಬೇಕೆಂಬುದು ರೈತರ ಮುಖಂಡರ ಒತ್ತಾಯವಾಗಿದೆ.  
- ಎಚ್.ಆರ್ ಬಸವರಾಜಪ್ಪ, ರೈತ ಮುಖಂಡರು. 

ಕುಡಿಯುವ ನೀರಿಗಾಗಿ ಕಾಮಗಾರಿ ನಡೆಸಲು ಯಾವುದೇ ಅಭ್ಯಂತರವಿಲ್ಲ. ಆದರೆ ಅವೈಜ್ಞಾನಿಕ ಕಾಮಗಾರಿ ಕೈಬಿಟ್ಟು ನದಿ ಪಾತ್ರದಿಂದಲ್ಲೇ ಜಾಕ್ವೆಲ್ ಮೂಲಕ ನೀರು ಹರಿಸುವ ಕಾಮಗಾರಿ ಕೈಗೊಳ್ಳಬಹುದಾಗಿದೆ. ತಕ್ಷಣ ಅವೈಜ್ಞಾನಿಕ ಕಾಮಗಾರಿ ಸ್ಥಗಿತಗೊಳಿಸಿ ಮುಂದಿನ ದಿನಗಳಲ್ಲಿ ಬಲದಂಡೆ ನಾಲೆಗೆ ಯಾವುದೇ ರೀತಿ ಅಪಾಯಗಳು ಸಂಭವಿಸದಂತೆ ಎಚ್ಚರವಹಿಸಬೇಕು. ಅಲ್ಲದೆ ಎಡದಂಡೆ ನಾಲೆಯ ಮುಖ್ಯಗೇಟ್ ಕಾಮಗಾರಿ ತಕ್ಷಣ ಮುಕ್ತಾಯಗೊಳಿಸಿ ನಾಲೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ.  
                                                                                  - ಎಚ್.ಆರ್ ಬಸವರಾಜಪ್ಪ, ರೈತ ಮುಖಂಡರು. 

    ದೊಡ್ಡ ಅಪಾಯ ಎದುರಾಗುವ ಸಾಧ್ಯತೆ : 
    ಪ್ರಸ್ತುತ ಜಲಾಶಯದಲ್ಲಿ ಕೈಗೊಳ್ಳಲಾಗುತ್ತಿರುವ ಬಲದಂಡೆ ಅವೈಜ್ಞಾನಿಕ ಕಾಮಗಾರಿ ತಕ್ಷಣ ಸ್ಥಗಿತಗೊಳಿಸಿ ಕೈಗೊಂಡಿರುವ ಕಾಮಗಾರಿ ಸ್ಥಳವನ್ನು ಮೊದಲಿನಂತೆ ಭದ್ರಪಡಿಸಬೇಕಾಗಿದೆ. ಒಂದು ವೇಳೆ ವಿಳಂಬದಲ್ಲಿ ಮಳೆ ಅಧಿಕವಾಗಿ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾದ್ದಲ್ಲಿ ಬಲದಂಡೆಯೇ ಸಂಪೂರ್ಣ ನಾಶವಾಗುವ ಭೀತಿ ಎದುರಾಗಿದೆ. ಮತ್ತೊಂದೆಡೆ ಎಡದಂಡೆ ಮುಖ್ಯ ಗೇಟ್ ಅಳವಡಿಕೆ ಕಾಮಗಾರಿ ಸಹ ಮೊದಲಿನಂತೆ ಕಾಯ್ದುಕೊಳ್ಳಬೇಕಾಗಿದೆ. ಒಂದು ವೇಳೆ ವಿಳಂಬವಾದಲ್ಲಿ ಹೊಸಪೇಟೆ ಜಲಾಶಯದಲ್ಲಿ ಕಳೆದ ವರ್ಷ ಸಂಭವಿಸಿದ ದುರಂತ ಮರುಕಳುಹಿಸುವ ಸಾಧ್ಯತೆ ಇಲ್ಲಿ ತಳ್ಳಿಹಾಕುವಂತಿಲ್ಲ. ಜಲಾಶಯದಲ್ಲಿನ ಅಪಾರ ಪ್ರಮಾಣದ ನೀರು ಪೋಲಾಗುವ ಭೀತಿ ಎದುರಾಗಿದೆ. 
    ಒಟ್ಟಾರೆ ಭದ್ರಾ ಜಲಾಶಯ ವ್ಯಾಪ್ತಿಯ ರೈತರು ಒಂದಡೆ ಅವೈಜ್ಞಾನಿಕ ಕಾಮಗಾರಿ, ಮತ್ತೊಂದೆಡೆ ಕಳಪೆ ಕಾಮಗಾರಿ ಭೀತಿಯಲ್ಲಿ ನಲುಗಿಹೋಗಿದ್ದಾರೆ. ಸರ್ಕಾರ ರೈತರ ಭೀತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ. 

Friday, June 27, 2025

ತಾಲೂಕು ಕಛೇರಿಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

ಭದ್ರಾವತಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಶುಕ್ರವಾರ ತಹಸೀಲ್ದಾರ್ ಕಛೇರಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲಾಯಿತು. ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿದರು. 
    ಭದ್ರಾವತಿ : ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಶುಕ್ರವಾರ ತಹಸೀಲ್ದಾರ್ ಕಛೇರಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲಾಯಿತು. 
    ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕೆಂಪೇಗೌಡರ ಆಡಳಿತ ವ್ಯವಸ್ಥೆ, ಭವಿಷ್ಯದ ಚಿಂತನೆ, ನಾಡಿಗೆ ನೀಡಿರುವ ಕೊಡುಗೆ ಸ್ಮರಿಸಲಾಯಿತು. 
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ರಿಯಾಜ್ ಅಹಮದ್, ಸದಸ್ಯರಾದ ಬಿ.ಕೆ ಮೋಹನ್, ಮಂಜುಳ ಸುಬ್ಬಣ್ಣ, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ತಹಸೀಲ್ದಾರ್ ಪರುಸಪ್ಪ ಕುರುಬರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಉಪತಹಸೀಲ್ದಾರ್ ಮಂಜಾನಾಯ್ಕ,  ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕರ್ನಾಟಕ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕು ಕಛೇರಿ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

ಆಟೋ ಮಾಲೀಕರು, ಚಾಲಕರು, ಅಪ್ಪಾಜಿ ಅಭಿಮಾನಿಗಳಿಂದ ಕೆಂಪೇಗೌಡ ಜಯಂತಿ ಆಚರಣೆ

ಭದ್ರಾವತಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗದ ಆಟೋ ನಿಲ್ದಾಣದಲ್ಲಿ ಶುಕ್ರವಾರ ಆಟೋ ಮಾಲೀಕರು, ಚಾಲಕರು ಹಾಗು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಅಭಿಮಾನಿಗಳಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ನಾಡಪ್ರಭು ಕೆಂಪೇಗೌಡರ ಜನ್ಮದಿನ ಆಚರಿಸಲಾಯಿತು. 
    ಭದ್ರಾವತಿ: ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗದ ಆಟೋ ನಿಲ್ದಾಣದಲ್ಲಿ ಶುಕ್ರವಾರ ಆಟೋ ಮಾಲೀಕರು, ಚಾಲಕರು ಹಾಗು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಅಭಿಮಾನಿಗಳಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ನಾಡಪ್ರಭು ಕೆಂಪೇಗೌಡರ ಜನ್ಮದಿನ ಆಚರಿಸಲಾಯಿತು. 
    ತಾಲೂಕು ಒಕ್ಕಲಿಗರ ಸಂಘದ ಗೌರವಾಧ್ಯಕ್ಷೆ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ಕಾರ್ಯಕ್ರಮ ಉದ್ಘಾಟಿಸಿ, ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಪಟಾಕಿ ಸಿಡಿಸಿ ಸಂಭ್ರಮಿಸಿ ಸಾರ್ವಜನಿಕರಿಗೆ ಲಾಡು ಹಂಚಲಾಯಿತು. 
    ಮುಖಂಡರಾದ ತಿಮ್ಮೇಗೌಡ, ಆಟೋ ಚಾಲಕ ಸಂಘದ ಲಕ್ಷ್ಮಣ್, ಅರುಣ್, ವಿಶ್ವೇಶ್ವರ ಗಾಯಕ್ವಾಡ್, ಕಾರ್ಮಿಕ ಮುಖಂಡ ಎನ್. ಶ್ರೀನಿವಾಸ್, ಭಾಗ್ಯಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ನಾಡಪ್ರಭು ಕೆಂಪೇಗೌಡರ ಜಯಂತಿ : ಭವ್ಯ ಮೆರವಣಿಗೆ

ಭದ್ರಾವತಿಯಲ್ಲಿ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಶುಕ್ರವಾರ ನಗರದ ಲೋಯರ್ ಹುತ್ತಾ ಬಸ್ ನಿಲ್ದಾಣದಿಂದ ಕೆಂಪೇಗೌಡರ ಹಾಗು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಭಾವಚಿತ್ರ ಮತ್ತು ವಿವಿಧ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು. 
    ಭದ್ರಾವತಿ : ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಶುಕ್ರವಾರ ನಗರದ ಲೋಯರ್ ಹುತ್ತಾ ಬಸ್ ನಿಲ್ದಾಣದಿಂದ ಕೆಂಪೇಗೌಡರ ಹಾಗು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಭಾವಚಿತ್ರ ಮತ್ತು ವಿವಿಧ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು. 
    ಮೆರವಣಿಗೆಗೆ ಸಂಘದ ಗೌರವಾಧ್ಯಕ್ಷೆ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ಚಾಲನೆ ನೀಡಿದರು. ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಶಿವಮೊಗ್ಗ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿಯವರು ದಿವ್ಯ ಸಾನಿಧ್ಯವಹಿಸಿದ್ದರು. 
    ವೀರಗಾಸೆ, ಡೊಳ್ಳು ಕುಣಿತ ಸೇರಿದಂತೆ ಇನ್ನಿತರ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದ್ದವು. ಲೋಯರ್ ಹುತ್ತಾದಿಂದ ಆರಂಭಗೊಂಡ ಮೆರವಣಿಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತದವರೆಗೆ ಸಾಗಿತು. 
    ಮೆರವಣಿಗೆಯಲ್ಲಿ ಸಂಘದ ಅಧ್ಯಕ್ಷ ಎಸ್. ಆನಂದ್ ಹಾಗು ಪದಾಧಿಕಾರಿಗಳು, ಒಕ್ಕಲಿಗ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಮೆರವಣಿಯಲ್ಲಿ ಪಾಲ್ಗೊಂಡಿದ್ದರು. 
 

ನಾಡಪ್ರಭು ಕೆಂಪೇಗೌಡರ ಆದರ್ಶತನ ಮೈಗೂಡಿಸಿಕೊಳ್ಳಿ : ಶಾರದ ಅಪ್ಪಾಜಿ

ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆಯಿಂದ ಜಯಂತಿ ಕಾರ್ಯಕ್ರಮ 


ಭದ್ರಾವತಿ ಅಪ್ಪರ್ ಹುತ್ತಾದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶಾರದ ಅಪ್ಪಾಜಿ  ಉದ್ಘಾಟಿಸಿದರು.
    ಭದ್ರಾವತಿ : ನಾಡಪ್ರಭು ಕೆಂಪೇಗೌಡರು ನಾಡುಕಂಡ ಅಪ್ರತಿಮ ನಾಯಕರಾಗಿದ್ದು, ಇಂತಹ ನಾಯಕನ ಆದರ್ಶತನಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶಾರದ ಅಪ್ಪಾಜಿ ಹೇಳಿದರು. 
    ಅವರು ನಗರದ ಅಪ್ಪರ್ ಹುತ್ತಾದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
    ಕೆಂಪೇಗೌಡರ ಜನ್ಮದಿನ ನಾವೆಲ್ಲರೂ ಒಗ್ಗಟ್ಟಾಗಿ ಮನೆ ಮಕ್ಕಳಂತೆ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಎಲ್ಲರಿಗೂ ಕೆಂಪೇಗೌಡರ ಜಯಂತಿ ಶುಭಾಶಯಗಳು ಎಂದರು. 


ಭದ್ರಾವತಿ ಅಪ್ಪರ್ ಹುತ್ತಾದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. 
        ವೇದಿಕೆ ಅಧ್ಯಕ್ಷ, ನ್ಯಾಯವಾದಿ ಟಿ. ಚಂದ್ರೇಗೌಡ ಮಾತನಾಡಿ, ಈ ನಾಡಿಗೆ ಕೆಂಪೇಗೌಡರ ಕೊಡುಗೆ ಅಪಾರವಾಗಿದೆ. ವೇದಿಕೆ ವತಿಯಿಂದ ಕೆಂಪೇಗೌಡರ ಜಯಂತಿ ಪ್ರತಿ ವರ್ಷ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು. 
    ಜಯಂತಿ ಅಂಗವಾಗಿ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವೇದಿಕೆ ಪ್ರಧಾನ ಕಾರ್ಯದರ್ಶಿ, ನಗರಸಭೆ ಮಾಜಿ ಸದಸ್ಯ ಬಾಲಕೃಷ್ಣ, ಖಜಾಂಚಿ ವೆಂಕಟೇಶ್, ಉಪಾಧ್ಯಕ್ಷರಾದ ಕಬಡ್ಡಿ ಕೃಷ್ಣೇಗೌಡ, ಮಣಿ ಎಎನ್‌ಎಸ್, ಶಶಿಕುಮಾರ್, ಕಾರ್ಯದರ್ಶಿ ದೇವರಾಜ್, ನಗರಸಭೆ ಮಾಜಿ ಸದಸ್ಯ ಮಹೇಶ್, ಭಾಗ್ಯಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಒಕ್ಕಲಿಗ ಸಮಾಜದ ಮುಖಂಡರು, ಗಣ್ಯರು, ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು. 

Thursday, June 26, 2025

ಕಾನೂನುಬಾಹಿರವಾಗಿ ಅನುದಾನ ಬಿಡುಗಡೆ ಆರೋಪ : ಬಿಆರ್‌ಎಲ್‌ಬಿಸಿ ಕಚೇರಿ ಮುಂಭಾಗ ಪ್ರತಿಭಟನೆ

ಕರ್ನಾಟಕ ನೀರಾವರಿ ನಿಗಮ ಇಲಾಖೆ ವತಿಯಿಂದ ಸಮುದಾಯ ಭವನಗಳಿಗೆ ಕಾನೂನುಬಾಹಿರವಾಗಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿ ಭದ್ರಾವತಿ ಫಿಲ್ಟರ್ ಶೆಡ್ ನಾಗರಿಕರ ಹಿತರಕ್ಷಣ ಸಮಿತಿ ವತಿಯಿಂದ ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಬಿಆರ್‌ಎಲ್‌ಬಿಸಿ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ: ಕರ್ನಾಟಕ ನೀರಾವರಿ ನಿಗಮ ಇಲಾಖೆ ವತಿಯಿಂದ ಸಮುದಾಯ ಭವನಗಳಿಗೆ ಕಾನೂನುಬಾಹಿರವಾಗಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿ ಫಿಲ್ಟರ್ ಶೆಡ್ ನಾಗರಿಕರ ಹಿತರಕ್ಷಣ ಸಮಿತಿ ವತಿಯಿಂದ ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಬಿಆರ್‌ಎಲ್‌ಬಿಸಿ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಲಾಯಿತು.
    ನಗರದ ಜನ್ನಾಪುರ ಶ್ರೀ ಅಂತರ ಘಟ್ಟಮ್ಮ ಸಾರ್ವಜನಿಕ ಸಮುದಾಯ ಭವನದ ಕಾಮಗಾರಿಗೆ  ೨೦೧೯-೨೦೨೦ರಲ್ಲಿ ೧೫ ಲಕ್ಷ ರು. ಅನುದಾನ ಬಿಡುಗಡೆಯಾಗಿರುತ್ತದೆ. ಟ್ರಸ್ಟ್ ಅಧಿಕೃತವಾಗಿ ನೋಂದಣಿಯಾಗಿರುವುದಿಲ್ಲ. ಅಲ್ಲದೆ ಸರ್ಮಪಕ ದಾಖಲೆಗಳಿರುವುದಿಲ್ಲ. ಆದರೂ ಸಹ ಅನುದಾನ ಬಿಡುಗಡೆ ಮಾಡಿರುತ್ತಾರೆ. ಈ ಹಿನ್ನಲೆಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
    ಸಮುದಾಯ ಭವನದ ಟ್ರಸ್ಟ್ ನೋಂದಣಿಯಾಗಿರುವುದು ೨೦೨೨-೨೩ರಲ್ಲಿ ಭವನಕ್ಕೆ ನಗರಸಭೆಯವರು ವಿಐಎಸ್‌ಎಲ್‌ಗೆ ಸೇರಿದ ಜಾಗಕ್ಕೆ ಆಕ್ರಮವಾಗಿ ಸರ್ಕಾರಿ ಜಾಗವೆಂದು ಖಾತೆ ಮಾಡಿ ಕೊಟ್ಟಿರುವುದು ದುರಂತ. ಆದ್ದರಿಂದ ಸೂಕ್ತ ತನಿಖೆ ನಡೆಸಿ ಅಕ್ರಮದಲ್ಲಿ ಭಾಗಿವಾಗಿರುವ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳುವಂತೆ ಆಗ್ರಹಿಸಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.
    ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್ ಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ದಿವ್ಯಶ್ರೀ, ಇಂದ್ರಮ್ಮ, ಮಾಲಮ್ಮ, ಮುನಿಯಮ್ಮ, ಮಾದೇವಿ, ಸುರೇಶ್, ಪರಮೇಶ್ವರಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ಪ್ರಧಾನಿ ಮೋದಿ ಆಡಳಿತದಲ್ಲಿ ಬಡವ, ರೈತ, ಮಹಿಳೆ, ಯುವಕರ ಅಭಿವೃದ್ಧಿ

ವಿಕಸಿತ ಭಾರತ ಸಂಕಲ್ಪ ಸಮಾವೇಶದಲ್ಲಿ ಜಿಲ್ಲಾಧ್ಯಕ್ಷ ಎನ್.ಕೆ ಜಗದೀಶ್

ಬಿಜೆಪಿ ಪಕ್ಷದ ಭದ್ರಾವತಿ ಗ್ರಾಮಾಂತರ ಮಂಡಲ ವತಿಯಿಂದ ಹಿರಿಯೂರು ಮಹಾಶಕ್ತಿ ಕೇಂದ್ರದ ಬಾರಂದೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಕಸಿತ ಭಾರತ ಸಂಕಲ್ಪ ಸಮಾವೇಶ ಪಕ್ಷದ ಜಿಲ್ಲಾಧ್ಯಕ್ಷ ಎನ್.ಕೆ ಜಗದೀಶ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಕಾರ ಇರುವುದು ಕೇವಲ ನಾಲ್ಕು ಜಾತಿ. ಮೊದಲು ಬಡವ, ಎರಡನೇಯದು ರೈತ, ಮೂರನೇಯದು ಮಹಿಳೆ ಮತ್ತು ನಾಲ್ಕನೇಯದು ಯುವಕರು. ಇವರ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ ಜಗದೀಶ್ ಹೇಳಿದರು. 
    ಅವರು ಗುರುವಾರ ಪಕ್ಷದ ಗ್ರಾಮಾಂತರ ಮಂಡಲ ವತಿಯಿಂದ ಹಿರಿಯೂರು ಮಹಾಶಕ್ತಿ ಕೇಂದ್ರದ ಬಾರಂದೂರಿನಲ್ಲಿ ವಿಕಸಿತ ಭಾರತ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದರು.  ಪ್ರಧಾನಿ ನರೇಂದ್ರ ಮೋದಿಯವರ ೧೧ ವರ್ಷದ ಯಶಸ್ವಿ ಆಡಳಿತದ ಅವಧಿಯಲ್ಲಿ ಅವರು ಕೈಗೊಂಡ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು.  ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಎಲ್ಲಾ ಸೌಲಭ್ಯಗಳು ದೊರಕುವಂತಾಗಬೇಕು. ಭಾರತ ಜಗತ್ತಿನಲ್ಲಿಯೇ ರ್ವಶಕ್ತ ರಾಷ್ಟ್ರವಾಗಬೇಕು ಎಂಬುದಾಗಿ ಸಂಕಲ್ಪ ಮಾಡಿದ್ದಾರೆ. ಅವರೊಂದಿಗೆ ನಾವೆಲ್ಲ ಕೈಜೋಡಿಸೋಣ ಎಂದು ಕರೆ ನೀಡಿದರು. 
    ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸನ್ನ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಯುವ ಮೋರ್ಚಾ ಕಾರ್ಯದರ್ಶಿ ಭರತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ ಹರಿಕೃಷ್ಣ,  ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಜಿಲ್ಲಾ ಖಜಾಂಚಿ ಸತೀಶ್, ಮಂಡಲ ಪ್ರಧಾನ ಕಾರ್ಯದರ್ಶಿ ಮೊಸರಳ್ಳಿ ಅಣ್ಣಪ್ಪ,  ಶಾಂತಣ್ಣ, ತೀರ್ಥಪ್ಪ, ಹನುಮಂತ ನಾಯ್ಕ, ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು ಕಾರ್ಯಕರ್ತರು, ಉಪಸ್ಥಿತರಿದ್ದರು..

ಮೆಸ್ಕಾಂ ದೂರುಗಳಿಗೆ ೨೪*೭ ಸೇವಾ ಕೇಂದ್ರ

    ಭದ್ರಾವತಿ : ಮೆಸ್ಕಾಂ ವತಿಯಿಂದ ನಗರ ವ್ಯಾಪ್ತಿಯ ಗ್ರಾಹಕರು ವಿದ್ಯುತ್ ಅಡಚಣೆಗೆ ಸಂಬಂಧಿಸಿದ ದೂರುಗಳನ್ನು ನೀಡಲು ೨೪*೭ ಸೇವಾ ಕೇಂದ್ರ ತೆರೆಯಲಾಗಿದೆ. 
    ದೂರು ಸಲ್ಲಿಸುವವರು ೦೮೨೮೨-೨೬೬೭೮೬ ಅಥವಾ ೦೮೨೮೨-೨೬೨೬೩೯ ಅಥವಾ ಟೋಲ್ ಫ್ರೀ ಸಂಖ್ಯೆ-೧೯೧೨ ಸಂಖ್ಯೆಗೆ ಕರೆ ಮಾಡಿ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ. 

ತುಳುನಾಡಿಗರು ಮಾತೃಭಾಷೆ ಮೇಲೆ ಅಭಿಮಾನ ಬೆಳೆಸಿಕೊಳ್ಳಿ : ತಾರನಾಥ್ ಗಟ್ಟಿ ಕಾಪಿಕಾಡ್

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ಭದ್ರಾವತಿ ನಗರದ ತುಳುಕೂಟ ವತಿಯಿಂದ ನ್ಯೂಟೌನ್ ಬಂಟರ ಭವನದಲ್ಲಿ ಆಯೋಜಿಸಲಾಗಿದ್ದ ತುಳು ಉತ್ಸವ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಉದ್ಘಾಟಿಸಿದರು. 
    ಭದ್ರಾವತಿ: ತುಳು ಭಾಷೆಗೆ ತನ್ನದೇ ಆದ ವಿಶಿಷ್ಟತೆ, ಪರಂಪರೆ ಇದೆ. ತುಳುನಾಡಿಗರು ತಮ್ಮ ಮಾತೃಭಾಷೆ ಮೇಲೆ ಅಭಿಮಾನ ಬೆಳೆಸಿಕೊಂಡು ತಮ್ಮ ಮಕ್ಕಳಿಗೆ ಭಾಷೆ ಕಲಿಸಿಕೊಡಬೇಕೆಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಹೇಳಿದರು. 
    ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ನಗರದ ತುಳುಕೂಟ ವತಿಯಿಂದ ನ್ಯೂಟೌನ್ ಬಂಟರ ಭವನದಲ್ಲಿ ಆಯೋಜಿಸಲಾಗಿದ್ದ ತುಳು ಉತ್ಸವ ಉದ್ಘಾಟಿಸಿ ಮಾತನಾಡಿದರು. 
    ತುಳು ಭಾಷೆಗೆ ಎಲ್ಲೆಡೆ ಹೆಚ್ಚಿನ ಮಾನ್ಯತೆ ಲಭಿಸುತ್ತಿದ್ದು, ಭಾಷೆ ಜೊತೆಗೆ ತುಳು ಸಂಸ್ಕೃತಿ, ಆಚಾರ-ವಿಚಾರಗಳು ಸಹ ನಾವೆಲ್ಲರೂ ರೂಢಿಸಿಕೊಂಡು ಮುಂದಿನ  ಪೀಳಿಗೆಗೆ ಕೊಂಡೊಯ್ಯಬೇಕಾಗಿದೆ. ಇಲ್ಲಿನ ತುಳುಕೂಟ ವಿಶಿಷ್ಟ ಕಾರ್ಯ ಚಟುವಟಿಕೆಗಳೊಂದಿಗೆ ಮುನ್ನಡೆದುಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು. 
    ತುಳುಕೂಟದ ಅಧ್ಯಕ್ಷ ಪಿ. ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಡಾ. ವೈ. ಆನಂದ್, ಉಪಾಧ್ಯಕ್ಷ ನಾರಾಯಣ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡಾ. ಹರೀಶ್ ದೇಲಂತಬೆಟ್ಟು ಮತ್ತು ಕಾರ್ಯದರ್ಶಿ ಬಿ. ಸುಬ್ಬಣ್ಣ ರೈ, ಉದ್ಯಮಿ ಬಿ.ಕೆ ಜಗನ್ನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಬಿ. ದಿವಾಕರ ಶೆಟ್ಟಿ ಸ್ವಾಗತಿಸಿದರು. ತುಳು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 
 

ರಾಜ್ಯದಲ್ಲಿ ಅಹಿಂದ ಒಗ್ಗೂಡಿದಾಗ ಹೆಚ್ಚಿನ ಬಲ : ಮಹಮದ್ ಸನಾವುಲ್ಲಾ

ಭದ್ರಾವತಿ ಹಳೇನಗರದ ಜಾಮೀಯಾ ಶಾದಿ ಮಹಲ್‌ನಲ್ಲಿ ಆಯೋಜಿಸಲಾಗಿದ್ದ ಹುಟ್ಟಹಬ್ಬದಲ್ಲಿ ವಿವಿಧ ಧರ್ಮದ, ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷದ ಪ್ರಮುಖರಿಂದ ಹುಟ್ಟುಹಬ್ಬದ ಅಭಿಮಾನದ ಮಾತುಗಳನ್ನು ಆಲಿಸಿ ಎಂದು ಅಹಿಂದ ರಾಜ್ಯ ಸಂಚಾಲಕ, ಮಾಜಿ ಉಪಮೇಯರ್ ಮಹಮದ್ ಸನಾವುಲ್ಲಾ ಮಾತನಾಡಿದರು. 
    ಭದ್ರಾವತಿ : ರಾಜ್ಯದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದವರು ಹಾಗು ದಲಿತರು ಒಗ್ಗೂಡಿದಾಗ ಹೆಚ್ಚಿನ ಬಲ ಬರಲಿದ್ದು, ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದಾಗಿದೆ ಎಂದು ಅಹಿಂದ ರಾಜ್ಯ ಸಂಚಾಲಕ, ಮಾಜಿ ಉಪಮೇಯರ್ ಮಹಮದ್ ಸನಾವುಲ್ಲಾ ಹೇಳಿದರು. 
    ಅವರು ಹಳೇನಗರದ ಜಾಮೀಯಾ ಶಾದಿ ಮಹಲ್‌ನಲ್ಲಿ ಆಯೋಜಿಸಲಾಗಿದ್ದ ತಮ್ಮ ಹುಟ್ಟಹಬ್ಬದಲ್ಲಿ ವಿವಿಧ ಧರ್ಮದ, ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷದ ಪ್ರಮುಖರಿಂದ ಹುಟ್ಟುಹಬ್ಬದ ಅಭಿಮಾನದ ಮಾತುಗಳನ್ನು ಆಲಿಸಿ ಮಾತನಾಡಿದರು. 
    ರಾಜ್ಯದಲ್ಲಿ ಅಹಿಂದ ಸಂಘಟಿಸುವ ಉದ್ದೇಶದಿಂದ ಅಹಿಂದ ನಾಯಕರು ಒಗ್ಗಟ್ಟಾಗಿ, ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನನ್ನ ಹುಟ್ಟುಹಬ್ಬದಲ್ಲಿ ಅಭಿಮಾನದಿಂದ ಪಾಲ್ಗೊಂಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 
    ಸಮಾಜ ಸೇವಕ ಸಿ. ಮಹೇಶ್ ಕುಮಾರ್, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸುರೇಶ್, ಶಿಮುಲ್ ಮಾಜಿ ಅಧ್ಯಕ್ಷ ಡಿ. ಆನಂದ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬದರಿನಾರಾಯಣ ಶ್ರೇಷ್ಠಿ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಅಮೀರ್ ಜಾನ್, ಬಾಬಾಜಾನ್, ಕರಿಯಪ್ಪ, ಡಿ.ಟಿ ಶ್ರೀಧರ್ ಸೇರಿದಂತೆ ಇನ್ನಿತರರು ಮಹಮದ್ ಸನಾವುಲ್ಲಾ ಅವರನ್ನು ಅಭಿನಂದಿಸಿ ಮಾತನಾಡಿ, ಎಲ್ಲಾ ಧರ್ಮ, ಜಾತಿ ಜನಾಂಗದವರೊಂದಿಗೆ ಉತ್ತಮ ಸೌಹರ್ದತೆ ಕಾಯ್ದುಕೊಂಡು ಬಂದಿರುವ ಮಹಮದ್ ಸನಾವುಲ್ಲಾರವರು ಹೃದಯ ಶ್ರೀಮಂತಿಕೆ ವ್ಯಕ್ತಿಯಾಗಿದ್ದಾರೆ.  ಸಮಾಜದಲ್ಲಿ ಇಂತಹವರು ಅಪರೂಪವಾಗಿದ್ದು, ಇನ್ನೂ ಹೆಚ್ಚಿನ ಆಯುರಾರೋಗ್ಯ ಭಗವಂತ ಕರುಣಿಸಲಿ ಎಂದರು. 
    ಪ್ರಮುಖರಾದ ಭಾಸ್ಕರ್ ಬಾಬು, ಚೌಡಪ್ಪ, ತರುಣ್‌ಕುಮಾರ್, ರಮೇಶ್, ಶಂಕರ್ ರಾವ್, ಇಬ್ರಾಹಿಂ ಖಾನ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. 

ಜೂ.೨೭ರಂದು ಶ್ರೀ ಕೆಂಪೇಗೌಡ ಜಯಂತಿ


ನಾಡಪ್ರಭು ಶ್ರೀ ಕೆಂಪೇಗೌಡ 
    ಭದ್ರಾವತಿ : ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ನಾಡಪ್ರಭು ಶ್ರೀ ಕೆಂಪೇಗೌಡ  ಜಯಂತಿ ಜೂ.೨೭ರ ಶುಕ್ರವಾರ ಅಪ್ಪರ್‌ಹುತ್ತಾ ಶ್ರೀ ಕೆಂಪೇಗೌಡ ಸಮುದಾಯ ಭವನದಲ್ಲಿ ಸಂಜೆ ೫ ಗಂಟೆಗೆ ಆಯೋಜಿಸಲಾಗಿದೆ. 
    ಶ್ರೀ ಕ್ಷೇತ್ರ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ದಿವ್ಯ ಸಾನಿಧ್ಯವಹಿಸಲಿದ್ದು, ಶಿವಮೊಗ್ಗ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿಯವರು ಉಪಸ್ಥಿತರಿವರು. ಸಂಘದ ಅಧ್ಯಕ್ಷ ಎಸ್. ಆನಂದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘದ ಗೌರವಾಧ್ಯಕ್ಷೆ ಶಾರದಾ ಅಪ್ಪಾಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. 
    ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ, ನ್ಯಾಯವಾದಿ ಶ್ರೀಪಾಲ ಉಪನ್ಯಾಸ ನೀಡಲಿದ್ದು, ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ, ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಧರ್ಮೇಶ್ ಸಿರಿಬೈಲು, ಸಂಘದ ಜಿಲ್ಲಾಧ್ಯಕ್ಷ ರಮೇಶ್ ಹೆಗ್ಡೆ, ತಾಲೂಕು ಒಕ್ಕಲಿಗರ ಸಂಘದ ಮಹಾ ಪೋಷಕ ಎಲ್.ಜಿ ನಾಗರಾಜ್, ಎಚ್.ಎಸ್ ಶಶಾಂಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

Wednesday, June 25, 2025

ಎಂಪಿಎಂ ನಿವೃತ್ತ ಕಾರ್ಮಿಕರಿಗೆ ಅನ್ಯಾಯ : ವ್ಯವಸ್ಥಾಪಕರ ವಿರುದ್ಧ ಮುಖ್ಯಮಂತ್ರಿಗಳಿಗೆ ದೂರು

ರಾಜ್ಯ ಸರ್ಕಾರಿ ಸ್ವಾಮ್ಯದ ಭದ್ರಾವತಿ ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕರಿಗೆ ಉಂಟಾಗಿರುವ ಅನ್ಯಾಯ ಸರಿಪಡಿಸದೆ ನಿರ್ಲಕ್ಷ್ಯವಹಿಸಿರುವ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಮೈಸೂರು ಕಾಗದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ವತಿಯಿಂದ ಬುಧವಾರ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಲು ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು. 
    ಭದ್ರಾವತಿ: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕರಿಗೆ ಉಂಟಾಗಿರುವ ಅನ್ಯಾಯ ಸರಿಪಡಿಸದೆ ನಿರ್ಲಕ್ಷ್ಯವಹಿಸಿರುವ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಮೈಸೂರು ಕಾಗದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ವತಿಯಿಂದ ಬುಧವಾರ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಲಾಯಿತು. 
    ಕಾರ್ಖಾನೆಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಮತ್ತು ಸ್ವಯಂ ನಿವೃತ್ತಿ ಹೊಂದಿರುವ ಕಾರ್ಮಿಕರಿಗೆ ಆಡಳಿತ ಮಂಡಳಿ ನೀಡಬೇಕಾಗಿರುವ ಹಲವಾರು ಬಾಕಿಗಳನ್ನು ಇಲ್ಲಿಯವರೆಗೂ ವಿತಸಿರುವುದಿಲ್ಲ. ಈ ಕುರಿತು ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಹಲವಾರು ಬಾರಿ ಮನದಟ್ಟು ಮಾಡಿದ ಮೇಲೆ ಸರ್ಕಾರಕ್ಕೆ ಪತ್ರ ಬರೆದಿರುತ್ತಾರೆ. ಆದರೆ ಇದುವರೆಗೂ ನ್ಯಾಯ ಲಭಿಸಿರುವುದಿಲ್ಲ. ಈಗಿನ ವ್ಯವಸ್ಥಾಪಕ ನಿರ್ದೇಶಕರು ಬಂದು ೧ ವರ್ಷಗಳಾಗಿದ್ದು, ನಿವೃತ್ತ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಲಿಖಿತವಾಗಿ ಮನವಿ ಕೊಟ್ಟರೂ ಸಹ ಯಾವುದನ್ನು ಪರಿಗಣಿಸದೆ ಅನ್ಯಾಯ ಮಾಡುತ್ತಿದ್ದಾರೆ. ಬಹು ಮುಖ್ಯವಾಗಿ ಸೂಪರ್ ಆನ್ಯುಯೇಷನ್ ಹಣದ ಬಗ್ಗೆ ಸುಮಾರು ೫೫೦ ನಿವೃತ್ತ ಕಾರ್ಮಿಕರು ಸಹಿ ಮಾಡಿದ ಲಿಖಿತ ಮನವಿ ಸಲ್ಲಿಸಲಾಗಿದೆ. ಇದನ್ನು ಸಹ ಪರಿಗಣಿಸದೆ ಇದರ ಮಾತನಾಡದೆ ಬಹಳಷ್ಟು ಅನ್ಯಾಯ ಮಾಡುತ್ತಿದ್ದಾರೆ. ಇದರಿಂದಾಗಿ ಪ್ರತಿ ತಿಂಗಳು ರು. ೩೦೦ ರಿಂದ ೧೦೦೦ ವರೆಗೆ ಹಣ ನಿವೃತ್ತ ಕಾರ್ಮಿಕರಿಗೆ ಲಭಿಸದೆ ಅನ್ಯಾಯವಾಗಿದೆ. ೨೦೧೭ರಲ್ಲಿ ಸ್ವಯಂ ನಿವೃತ್ತಿ ಹೊಂದಿದ ಮತ್ತು ಸಹಜ ನಿವೃತ್ತಿ ಹೊಂದಿದ ಕಾರ್ಮಿಕರುಗಳಿಗೆ ಬರಬೇಕಾದ ಬಾಕಿ ಹಣ ಇಲ್ಲಿಯವರೆಗೂ ಲೆಕ್ಕಾಚಾರ ಮಾಡಿ ವಿತರಿಸದೆ ಮೋಸ ಮಾಡಲಾಗಿದೆ. ೨೦೧೨ರ ವೇತನ ಒಪ್ಪಂದಕ್ಕಾಗಿ ನೀಡಿದ್ದ ೩೫ ಕೋ. ರು. ಕಾರ್ಮಿಕರಿಗೆ ಪಾವತಿ ಮಾಡದೆ ಮೋಸ ಮಾಡಿದ್ದು, ಈ ನಡುವೆ ವಿನಾಕಾರಣ ನಿವೃತ್ತ ಕಾರ್ಮಿಕರು ನ್ಯಾಯಾಲಯಗಳಿಗೆ ಅಲೆದಾಡುವಂತಾಗಿದೆ ಎಂದು ನಿವೃತ್ತ ಕಾರ್ಮಿಕರು ಅಳಲು ತೋರ್ಪಡಿಸಿಕೊಂಡರು. 


ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕರಿಗೆ ಉಂಟಾಗಿರುವ ಅನ್ಯಾಯ ಸರಿಪಡಿಸದೆ ನಿರ್ಲಕ್ಷ್ಯವಹಿಸಿರುವ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಮೈಸೂರು ಕಾಗದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ವತಿಯಿಂದ ಬುಧವಾರ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಲಾಯಿತು. 

    ಜೀವವಿಮಾ ನಿಗಮದ ಕಾರ್ಮಿಕರ ಖಾತೆಗೆ ಪ್ರತಿವರ್ಷ ಪಾವತಿಸಬೇಕಾಗಿದ್ದ ಸೂಪರ್ ಅನ್ಯುಯೇಷನ್ ಹಣ ಯಾವುದೇ ಸೈಜ ಕಾರಣಗಳಿಲ್ಲದೆ ಪಾವತಿಯನ್ನು ನಿಲ್ಲಿಸಿ ಸುಮಾರು ಹದಿನೈದು ವರ್ಷಗಳ ನಂತರ ಬಡ್ಡಿಯನ್ನು ಸೇರಿಸದೆ ಪಾವತಿ ಮಾಡಿದ್ದು, ಇದರಿಂದ ಪ್ರತಿಯೊಬ್ಬ ಕಾರ್ಮಿಕರಿಗೆ ೧ ರಿಂದ ೧.೫ ಲಕ್ಷ ರು. ಮೋಸವಾಗಿದೆ. ರಾಜ್ಯ ಸರ್ಕಾರದ ಆದೇಶದಂತೆ ಕಾರ್ಮಿಕರಿಗೆ ತುಟ್ಟಿಭತ್ಯೆ ನೀಡಬೇಕೆಂಬ ತ್ರಿಪಕ್ಷೀಯ ಒಪ್ಪಂದವಿದ್ದರೂ ೨೦೧೨ ಮತ್ತು ೨೦೧೭ರಲ್ಲಿ ತುಟ್ಟಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸದೆ ಕಾಮಿಕರಿಗೆ ಎರಡು-ಮೂರು ಲಕ್ಷ ರು. ನಷ್ಟವನ್ನುಟು ಮಾಡಲಾಗಿದೆ. ಇದನ್ನೆಲ್ಲಾ ಪರಿಹರಿಸಬೇಕಾಗಿರುವ ಕಾರ್ಮಿಕ ಇಲಾಖೆಯವರು ವಿಚಾರಣೆ ನಡೆಸಿ ಫೈಲ್ಯೂರ್ ವರದಿ ಮಾಡಿ ಕಾರ್ಮಿಕರನ್ನು ನ್ಯಾಯಾಲಯಕ್ಕೆ  ಅಲೆಯುವಂತೆ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. 
    ಎಂಪಿಎಂ ಕಂಪನಿಯು ೨೦೧೬ ರಿಂದ ಉತ್ಪಾದನೆ ನಿಲ್ಲಿಸಿ ೨೦೨೧ ರಲ್ಲಿ ಅಂದಿನ ಸರ್ಕಾರದ ಆದೇಶದಂತೆ ಕಂಪನಿ ಮುಚ್ಚಿ (ಕ್ಲೋಸರ್ ಆಗಿ) ೩ ವರ್ಷಗಳಾಗಿವೆ. ಆದರೂ ಇಲ್ಲಿ ಅನಧಿಕೃತ ವ್ಯಕ್ತಿಗಳು ಅಂದರೆ ಸ್ವಯಂನಿವೃತ್ತಿ ಹೊಂದಿದವರು, ನಿವೃತ್ತರು, ೬೮ರ ವಯಸ್ಸು ದಾಟಿರುವವರು ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಅಧಿಕಾರ ಅನುಭವಿಸುತ್ತಿದ್ದಾರೆ. ೬೦ ವರ್ಷ ಮೇಲ್ಪಟ್ಟವರು ಮತ್ತು ಸ್ವಯಂ ನಿವೃತ್ತಿ ಹೊಂದಿದವರು ಸರ್ಕಾರದ ಕಂಪನಿಗಳಲ್ಲಿ ಮತ್ತೆ ಮರುನೇಮಕ ಮಾಡಿಕೊಳ್ಳುವಂತಿಲ್ಲ ಎಂಬ ಕಾನೂನು ಇದ್ದರೂ ಈ ಕಂಪನಿಯಲ್ಲಿ ಕೆಲವರು ಯಾವುದೇ ನೇಮಕಾತಿ ಆದೇಶ, ಸಂದರ್ಶನ ಪ್ರಕ್ರಿಯೆ ಇಲ್ಲದೆ ಹಿಂಬಾಗಿಲಿಂದ ಕೆಲಸಕ್ಕೆ ತೂರಿಕೊಂಡಿದ್ದಾರೆ. ಕಳೆದ ಎಂಟು ವರ್ಷಗಳಿಂದ ಇವರ ನೇಮಕಾತಿಯ ಹಿಂದಿನ ಮರ್ಮ ತಿಳಿಯದಾಗಿದೆ. ಇದನ್ನೆಲ್ಲಾ ಸರಿಪಡಿಸಬೇಕಾದ ವ್ಯವಸ್ಥಾಪಕ ನಿರ್ದೇಶಕರುಗಳು ಅನಧಿಕೃತ ವ್ಯಕ್ತಿಗಳಿಗೆ ಕಂಪನಿಯ ಎಲ್ಲಾ ಆಡಳಿತವನ್ನೂ ಮತ್ತು ಹಣಕಾಸು ವ್ಯವಹಾರವನ್ನೂ ಅಧಿಕೃತವಾಗಿ ಕೊಟ್ಟದ್ದು,  ಈ ಕಂಪನಿಯನ್ನು ಮತ್ತೊಂದು ವಾಲ್ಮೀಕಿ ನಿಗಮದ ಹಗರಣದಂತೆ ಕೋಟ್ಯಾಂತರ ರು. ಹಗರಣವು ಈ ಕಪಟಿಗಳಿಂದ ನಡೆಸುತ್ತಾರೆ. ಇದರ ಬಗ್ಗೆ ವಶಾಸಕರಿಗೆ ಹಾಗೂ ಅವರ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಸಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಇಲ್ಲಿ ಹಗರಣಗಳ ಸುರಮಾಲೆಯೇ ನಡೆಯುತ್ತಿದೆ. ಸುಮಾರು ೧೫೦೦ ಕ್ಕೂ ಹೆಚ್ಚು ಕಂಪನಿ ವಸತಿಗೃಹಗಳಲ್ಲಿನ ವಸ್ತುಗಳನ್ನೂ ಇಲ್ಲಿನ ಅಧಿಕಾರಿಗಳು ಲೂಟಿ ಮಾಡಿದ್ದಾರೆ. ಕಂಪನಿಯ ಒಳಗಿನ ನೂರಾರು ಕೋಟಿ ಬೆಲೆಬಾಳುವ ಅನೇಕ ವಸ್ತುಗಳನ್ನೂ ಅನಧಿಕೃತ ವ್ಯಕ್ತಿಗಳು ಬಿಕರಿ ಮಾಡುತ್ತಿದ್ದಾರೆ. ಎಂಪಿಎಂ ಅರಣ್ಯ ವಿಭಾಗದಲ್ಲಿ ಸಾವಿರಾರು ಕೋಟಿ ರೂಪಾಯಿ ಬೆಲೆಯ ಅಕೇಶಿಯಾ, ನೀಲಗಿರಿ ಮರಗಳಿದ್ದು ಅದರಲ್ಲಿ ಬಹಳಷ್ಟು ಲೂಟಿ ನಡೆಯುತ್ತಿದೆ. ಈಗಲೂ ಎಂಪಿಎಂ ಸೆಕ್ಯುರಿಟಿ ವಿಭಾಗದಲ್ಲಿ ಪ್ರತಿ ತಿಂಗಳೂ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ನಡೆಸುತ್ತಿದ್ದಾರೆ. ಅಲ್ಲದೆ ನಿವೃತ್ತ ಕಾರ್ಮಿಕರಿಗೆ ಮತ್ತು ಅವರ ಪತಿ/ಪತ್ನಿಗೆ ಜೀವನ ಪರ್ಯಂತ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಬೇಕೆಂದು ಒಪ್ಪಂದವಿದ್ದರೂ ಅದನ್ನು ಪಾಲಿಸದೆ ನಮ್ಮ ಜೀವನದ ಜೊತೆ ವ್ಯವಸ್ಥಾಪಕ ನಿರ್ದೇಶಕರು ಮತ್ತು ಅನಧಿಕೃತ ವ್ಯಕ್ತಿಗಳು ಆಟವಾಡುತ್ತಿದ್ದಾರೆಂದು ನಿವೃತ್ತ ಕಾರ್ಮಿಕರು ಆರೋಪಿಸಿ ಇವೆಲ್ಲವನ್ನೂ ತಡೆಯಬೇಕೆಂದು ಆಗ್ರಹಿಸಿದರು.  
    ಕಾರ್ಖಾನೆಯನ್ನು ಪುನರ್ ಆರಂಭಿಸುವುದಾಗಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗು ಶಾಸಕರು ಭರವಸೆ ನೀಡಿ ೨ ವರ್ಷಗಳಾಗಿವೆ. ಆದರೂ ಸಹ ಕಾರ್ಖಾನೆ ಇದುವರೆಗೂ ಆರಂಭಗೊಂಡಿಲ್ಲ. ಕಾರ್ಖಾನೆ ಪುನರ್ ಆರಂಭಗೊಂಡಲ್ಲಿ ಸಾವಿರಾರು ಮಂದಿಗೆ ಉದ್ಯೋಗ ಲಭಿಸಲಿದೆ. ನಗರ ಬೆಳವಣಿಗೆ ಹೊಂದಲಿದ್ದು, ಆರ್ಥಿಕ ವಯಿವಾಟು ಹೆಚ್ಚಳವಾಗಲಿದೆ. ಈ ಹಿನ್ನಲೆಯಲ್ಲಿ ತಕ್ಷಣ ಕಾರ್ಖಾನೆ ಆರಂಭಿಸಬೇಕೆಂದು ಮನವಿ ಮಾಡಿದರು.  
    ಮನವಿ ಸಲ್ಲಿಸುವ ಮೊದಲು ಹಳೇನಗರದ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ ಬಸವರಾಜಯ್ಯರವರು ನಿವೃತ್ತ ಕಾರ್ಮಿಕರಿಗೆ ಎದುರಿಸುತ್ತಿರುವ ಸಮಸ್ಯೆಗಳು, ಸರ್ಕಾರದಿಂದ ನ್ಯಾಯಯುತವಾಗಿ ಲಭಿಸಬೇಕಾದ ಸೌಲಭ್ಯಗಳು ಹಾಗು ಬಾಕಿ ಕುರಿತು ವಿವರಿಸಿದರು. ಸಂಚಾಲಕರಾದ ವಿ. ಗೋವಿಂದಪ್ಪ, ಕೆ.ಜಿ ವೆಂಕಟೇಶ್ ಮೂರ್ತಿ, ಎನ್. ರಘುನಾಥರಾವ್, ಶಿವಲಿಂಗಯ್ಯ ಮತ್ತು ಆರ್. ಬಾಪು ಉಪಸ್ಥಿತರಿದ್ದರು. ನೂರಾರು ನಿವೃತ್ತ ಕಾರ್ಮಿಕರು ಸಭೆಯಲ್ಲಿ ಪಾಲ್ಗೊಂಡಿದ್ದರು. 
  ನಂತರ ಮಧ್ಯಾಹ್ನ ೧೨.೪೫ಕ್ಕೆ ಬಸವೇಶ್ವರ ವೃತ್ತದಿಂದ ಮಾಧವಚಾರ್ ವೃತ್ತ ಹಾಗು ರಂಗಪ್ಪ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ ನಂತರ ತಾಲೂಕು ಕಛೇರಿಗೆ ತೆರಳಿ ಉಪ ತಹಸೀಲ್ದಾರ್ ಮಂಜಾನಾಯ್ಕರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ನಿವೃತ್ತ ಕಾರ್ಮಿಕರ ಹೋರಾಟಕ್ಕೆ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್. ರವಿಕುಮಾರ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ತಾಲೂಕು ಅಧ್ಯಕ್ಷ ತೀರ್ಥೇಶ ಸೇರಿದಂತೆ ಇನ್ನಿತರರು ಬೆಂಬಲ ಸೂಚಿಸಿ ಪಾಲ್ಗೊಂಡಿದ್ದರು.  

Tuesday, June 24, 2025

ಜೂ.೨೫ರಂದು ಎಂಪಿಎಂ ವ್ಯವಸ್ಥಾಪಕರ ವಿರುದ್ಧ ಮುಖ್ಯಮಂತ್ರಿಗಳಿಗೆ ದೂರು


    : ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕರಿಗೆ ಉಂಟಾಗಿರುವ ಅನ್ಯಾಯ ಸರಿಪಡಿಸದೆ ನಿರ್ಲಕ್ಷ್ಯವಹಿಸಿರುವ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಮೈಸೂರು ಕಾಗದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ವತಿಯಿಂದ ಜೂ.೨೫ರಂದು ಮುಖ್ಯಮಂತ್ರಿಗಳಿಗೆ ದೂರು ನೀಡಲಾಗುತ್ತಿದೆ. 
    ಕಾರ್ಖಾನೆಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಮತ್ತು ಸ್ವಯಂ ನಿವೃತ್ತಿ ಹೊಂದಿರುವ ಕಾರ್ಮಿಕರಿಗೆ ಆಡಳಿತ ಮಂಡಳಿ ನೀಡಬೇಕಾಗಿರುವ ಹಲವಾರು ಬಾಕಿಗಳನ್ನು ಇಲ್ಲಿಯವರೆಗೂ ವಿತಸಿರುವುದಿಲ್ಲ. ಈ ಕುರಿತು ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಹಲವಾರು ಬಾರಿ ಮನದಟ್ಟು ಮಾಡಿದ ಮೇಲೆ ಸರ್ಕಾರಕ್ಕೆ ಪತ್ರ ಬರೆದಿರುತ್ತಾರೆ. ಆದರೆ ಇದುವರೆಗೂ ನ್ಯಾಯ ಲಭಿಸಿರುವುದಿಲ್ಲ. ಈಗಿನ ವ್ಯವಸ್ಥಾಪಕ ನಿರ್ದೇಶಕರು ಬಂದು ೧ ವರ್ಷಗಳಾಗಿದ್ದು, ನಿವೃತ್ತ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಲಿಖಿತವಾಗಿ ಮನವಿ ಕೊಟ್ಟರೂ ಸಹ ಯಾವುದನ್ನು ಪರಿಗಣಿಸದೆ ಅನ್ಯಾಯ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗುತ್ತಿದೆ. 
    ಅಲ್ಲದೆ ಕಾರ್ಖಾನೆಯನ್ನು ಪುನರ್ ಆರಂಭಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿ ೨ ವರ್ಷಗಳಾಗಿವೆ. ಆದರೂ ಸಹ ಕಾರ್ಖಾನೆ ಇದುವರೆಗೂ ಆರಂಭಗೊಂಡಿಲ್ಲ. ತಕ್ಷಣ ಕಾರ್ಖಾನೆ ಆರಂಭಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಗುತ್ತಿದೆ. ಮಧ್ಯಾಹ್ನ ೧೨.೪೫ಕ್ಕೆ ಬಸವೇಶ್ವರ ವೃತ್ತದಿಂದ ಮಾಧವಚಾರ್ ವೃತ್ತ, ರಂಗಪ್ಪ ವೃತ್ತ ಮೂಲಕ ಶಾಸಕರ ಗೃಹ ಕಛೇರಿ ತೆರಳಿ ಶಾಸಕರ ಮೂಲಕ ಅಥವಾ ತಹಸೀಲ್ದಾರ್ ಕಛೇರಿಗೆ ತೆರಳಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ನಿವೃತ್ತ ಕಾರ್ಮಿಕರು, ಕಾರ್ಮಿಕ ಮುಖಂಡರು ಸೇರಿದಂತೆ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ ಬಸವರಾಜಯ್ಯ ಕೋರಿದ್ದಾರೆ. 

ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ೨ ದಿನಗಳ ಕಾಲ ವಿಜೃಂಭಣೆಯಿಂದ ಜರುಗಿದ ವಿಶೇಷ ಧಾರ್ಮಿಕ ಆಚರಣೆಗಳು

ಭದ್ರಾವತಿ ನಗರಸಭೆ ವ್ಯಾಪ್ತಿಯ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನದ ದೇವಿಯ ಆಲಯ ಪ್ರವೇಶ, ಸ್ಥಿರಬಿಂಬ ಪ್ರತಿಷ್ಠಾಪನೆ, ದೇವಿಯ ಗೋಪುರ ಪ್ರತಿಷ್ಠೆ, ಕಳಸಾರೋಹಣ ಮತ್ತು ದೀಪ ಸ್ತಂಭ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯ ೪೮ ದಿನ ಪೂರೈಸಿದ ಹಿನ್ನಲೆಯಲ್ಲಿ ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ೨ ದಿನಗಳ ಕಾಲ ವಿಶೇಷ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲಾಯಿತು.
ಭದ್ರಾವತಿ : ನಗರಸಭೆ ವ್ಯಾಪ್ತಿಯ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನದ ದೇವಿಯ ಆಲಯ ಪ್ರವೇಶ, ಸ್ಥಿರಬಿಂಬ ಪ್ರತಿಷ್ಠಾಪನೆ, ದೇವಿಯ ಗೋಪುರ ಪ್ರತಿಷ್ಠೆ, ಕಳಸಾರೋಹಣ ಮತ್ತು ದೀಪ ಸ್ತಂಭ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯ ೪೮ ದಿನ ಪೂರೈಸಿದ ಹಿನ್ನಲೆಯಲ್ಲಿ ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ೨ ದಿನಗಳ ಕಾಲ ವಿಶೇಷ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲಾಯಿತು.
ಸೋಮವಾರ ಬೆಳಿಗ್ಗೆ ಕಲಾ ಹೋಮ ಹಾಗು ಮಧ್ಯಾಹ್ನ ಅನ್ನ ಸಂತರ್ಪಣೆ, ಮಂಗಳವಾರ ಬೆಳಿಗ್ಗೆ ತಂಬಿಟ್ಟಿನ ಆರತಿಯೊಂದಿಗೆ ದೇವಸ್ಥಾನದ ಆವರಣದಲ್ಲಿ ಉತ್ಸವಮೂರ್ತಿ ಮೆರವಣಿಗೆ ನಡೆಸಲಾಯಿತು. ಚೌಡೇಶ್ವರಿ ಅಮ್ಮನವರಿಗೆ ಹಾಗೂ ಮುನೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮತ್ತು ವಿಶೇಷ ಪೂಜೆ, ಮಧ್ಯಾಹ್ನ ಸಹಸ್ರರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.  
ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ಆಡಳಿತ ಮಂಡಳಿಯವರು, ದೇವಸ್ಥಾನದ ಅರ್ಚಕರು, ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳು, ಗಣ್ಯರು, ಸುರಗಿತೋಪು, ಕಾಗದನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು. 
 
 

Mob: 9738801478
: 9482007466

ಕೆಂಪೇಗೌಡ ಜಯಂತಿ ಅಂಗವಾಗಿ ಜೂ.೨೫ರಂದು ನೇತ್ರ ತಪಾಸಣೆ, ನೇತ್ರ ಪೊರೆ ಶಸ್ತ್ರ ಚಿಕಿತ್ಸೆ

    ಭದ್ರಾವತಿ : ತಾಲೂಕು ಒಕ್ಕಲಿಗರ ಸಂಘ, ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ವತಿಯಿಂದ ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜು ಸಹಯೋಗದೊಂದಿಗೆ ನಾಡಪ್ರಭು ಕೆಂಪೇಗೌಡರ ೫೧೬ನೇ ಜಯಂತ್ಯೋತ್ಸವ ಅಂಗವಾಗಿ ಉಚಿತ ನೇತ್ರ ತಪಾಸಣೆ, ನೇತ್ರ ಪೊರೆ ಶಸ್ತ್ರ ಚಿಕಿತ್ಸೆ, ನೇತ್ರದಾನ ನೊಂದಣಿ ಹಾಗು ಮಸೂರ ಅಳವಡಿಕೆ ಶಿಬಿರ ಜೂ.೨೫ರಂದು ಹಮ್ಮಿಕೊಳ್ಳಲಾಗಿದೆ.
    ಅಪ್ಪರ್ ಹುತ್ತಾ ತಾಲೂಕು ಒಕ್ಕಲಿಗರ ಸಂಘದಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೧ ಗಂಟೆವರೆಗೆ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದರ ಸದುಪಯೋಗಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮೊ: ೭೨೫೯೪೫೮೪೧೯ ಅಥವಾ ತಾಲೂಕು ಒಕ್ಕಲಿಗರ ಸಂಘ ಪ್ರಧಾನ ಕಾರ್ಯದರ್ಶಿ ಮೊ: ೯೯೧೬೨೮೦೬೦೭  ಸಂಖ್ಯೆಗೆ ಕರೆ ಮಾಡಬಹುದಾಗಿದೆ. 

ಶ್ರೀಗಂಧ, ಇತರೆ ಜಾತಿ ಮರಗಳ ಕಡಿತಲೆ : ವಲಯ ಅರಣ್ಯಾಧಿಕಾರಿಗೆ ದೂರು

ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಶ್ರೀಗಂಧ ಮರ ಹಾಗೂ ಇತರೆ ಜಾತಿಯ ಮರಗಳನ್ನು ಕಡಿತಲೆ ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು  ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯಿಂದ ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. 
ಭದ್ರಾವತಿ: ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಶ್ರೀಗಂಧ ಮರ ಹಾಗೂ ಇತರೆ ಜಾತಿಯ ಮರಗಳನ್ನು ಕಡಿತಲೆ ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು  ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. 
  ಎರಡು ಶ್ರೀಗಂಧ ಮರ ಹಾಗು ಇತರೆ ಜಾತಿಯ ಮರಗಳನ್ನು ಕಡಿತಲೆ ಮಾಡಲಾಗಿದ್ದು, ಈ ಘಟನೆಗೆ ಸಂಬಂಧಿಸಿದ ಸೂಕ್ತ ಸಾಕ್ಷಿಗಳು ಇವೆ. ಈ ಹಿನ್ನಲೆಯಲ್ಲಿ ಕಾಲೇಜು ಆಡಳಿತ ಮಂಡಳಿಯ ಎಸ್ಟೇಟ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಯಾವುದೇ ಒತ್ತಡಕ್ಕೆ ಮಣಿಯದೆ ಪ್ರಾಮಾಣಿಕವಾಗಿ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಲಾಗಿದೆ. 
ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷ ತೀರ್ಥೇಶ್, ಕರವೇ ಮುಖಂಡರಾದ ಮೊಹಮ್ಮದ್ ಸಲ್ಮಾನ್, ಅಮ್ಜದ್, ಮಂಜುನಾಥಗೌಡ ಮತ್ತು ಪ್ರಶಾಂತ್ ಉಪಸ್ಥಿತರಿದ್ದರು. 

Monday, June 23, 2025

ಭದ್ರಾ ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನ : ಜೂ.೨೮ರಂದು ದಾವಣಗೆರೆ ನಗರ ಬಂದ್‌ಗೆ ಕರೆ

ಭದ್ರಾ ಅಚ್ಚುಕಟ್ಟು ರೈತರ ಬದುಕಿಗೆ ಮಾರಕವಾಗುವಂತೆ ಭದ್ರಾ ಜಲಾಶಯದ ಬಲದಂಡೆ ನಾಲೆ ಸೀಳಿ ನೀರು ಪೂರೈಸುವ ಕಾಮಗಾರಿ ತಕ್ಷಣ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಪ್ರಮುಖರು ಮಾತನಾಡಿದರು. 
    ಭದ್ರಾವತಿ :  ಭದ್ರಾ ಅಚ್ಚುಕಟ್ಟು ರೈತರ ಬದುಕಿಗೆ ಮಾರಕವಾಗುವಂತೆ ಭದ್ರಾ ಜಲಾಶಯದ ಬಲದಂಡೆ ನಾಲೆ ಸೀಳಿ ನೀರು ಪೂರೈಸುವ ಕಾಮಗಾರಿ ತಕ್ಷಣ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದವರನ್ನು ತಡೆದು ಪೊಲೀಸರು ವಶಕ್ಕೆ ಪಡೆದರು. 
    ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ, ಮಾಜಿ ಶಾಸಕ ಮಾಯಕೊಂಡ ಬಸವರಾಜನಾಯ್ಕ ಸೇರಿದಂತೆ ದಾವಣಗೆರೆ ಜಿಲ್ಲಾ ರೈತ ಒಕ್ಕೂಟ ಹಾಗೂ ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಪ್ರಮುಖರು, ರೈತರು ಸೇರಿದಂತೆ ಪ್ರತಿಭಟನಾನಿರತನ್ನು ಪೊಲೀಸರು ತಡೆದು ವಶಕ್ಕೆ ಪಡೆದರು. 
    ಜೂ.೨೮ರಂದು ದಾವಣಗೆರೆ ಬಂದ್: 
    ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಕಾಮಗಾರಿ ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ಉಗ್ರ ಹೋರಾಟ ನಡೆಸಲಾಗುವುದು. ಈ ನಡುವೆ ಜೂ.೨೫ರ ಬುಧವಾರ ಬೆಳಿಗ್ಗೆ ದಾವಣಗೆರೆ ಬಾಡಾ ಕ್ರಾಸ್‌ನಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು. ಜೂ.೨೮ರ ಶನಿವಾರ ದಾವಣಗೆರೆ ನಗರ ಬಂದ್‌ಗೆ ಕರೆ ನೀಡಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು. 
 

ಭದ್ರಾ ನಾಲೆ ಸೀಳಿ ನೀರು ಪೂರೈಸುವ ಕಾಮಗಾರಿ ವಿರೋಧಿಸಿ ಪ್ರತಿಭಟನಾ ಮೆರವಣಿಗೆ

ತಕ್ಷಣ ಕಾಮಗಾರಿ ಸ್ಥಗಿತಗೊಳಿಸದಿದ್ದಲ್ಲಿ ಉಗ್ರ ಹೋರಾಟ : ಎಚ್ಚರಿಗೆ 

ಭದ್ರಾ ಅಚ್ಚುಕಟ್ಟು ರೈತರ ಬದುಕಿಗೆ ಮಾರಕವಾಗುವಂತೆ ಭದ್ರಾ ಜಲಾಶಯದ ಬಲದಂಡೆ ನಾಲೆ ಸೀಳಿ ನೀರು ಪೂರೈಸುವ ಕಾಮಗಾರಿ ತಕ್ಷಣ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ದಾವಣಗೆರೆ ಜಿಲ್ಲಾ ರೈತ ಒಕ್ಕೂಟ ಹಾಗೂ ಬಿಜೆಪಿ ಜಿಲ್ಲಾ ರೈತ ಮೋರ್ಚಾ ವತಿಯಿಂದ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. 
    ಭದ್ರಾವತಿ :  ಭದ್ರಾ ಅಚ್ಚುಕಟ್ಟು ರೈತರ ಬದುಕಿಗೆ ಮಾರಕವಾಗುವಂತೆ ಭದ್ರಾ ಜಲಾಶಯದ ಬಲದಂಡೆ ನಾಲೆ ಸೀಳಿ ನೀರು ಪೂರೈಸುವ ಕಾಮಗಾರಿ ತಕ್ಷಣ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ದಾವಣಗೆರೆ ಜಿಲ್ಲಾ ರೈತ ಒಕ್ಕೂಟ ಹಾಗೂ ಬಿಜೆಪಿ ಜಿಲ್ಲಾ ರೈತ ಮೋರ್ಚಾ ವತಿಯಿಂದ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. 
    ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ, ಯುವ ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ್, ಮಂಗೋಟೆ ರುದ್ರೇಶ್ ಸೇರಿದಂತೆ ಪ್ರಮುಖರು ಮಾತನಾಡಿ, ಜಲಾಶಯದ ನಿರ್ಬಂಧಿತ ಪ್ರದೇಶದಲ್ಲಿ ಯಾವುದೇ ಕಾಮಗಾರಿಗಳನ್ನು  ಕೈಗೊಳ್ಳಬಾರದು ಎಂಬ ನಿಯಮವಿದ್ದರೂ ಸಹ ಬಲದಂಡೆ ನಾಲೆ ಸೀಳಿ ನೆರೆ ಜಿಲ್ಲೆಗಳಾದ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿನ ೩೪೬ ಗ್ರಾಮಗಳು, ಚಿಕ್ಕಮಗಳೂರು ಜಿಲ್ಲೆ ತರೀಕೆರೆ, ಕಡೂರು ತಾಲೂಕುಗಳ ೧೭೨ ಗ್ರಾಮಗಳಿಗೆ ನೀರು ಪೂರೈಸುವ ಕಾಮಗಾರಿ ನಡೆಸುತ್ತಿರುವುದು ಸರಿಯಲ್ಲ.  ಮಧ್ಯ ಕರ್ನಾಟಕದ ಜೀವನದಿ ಭದ್ರಾ ಬೃಹತ್ ಜಲಾಶಯದ ಸುರಕ್ಷತೆ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು. 
    ರಾಜ್ಯ ಸರ್ಕಾರ ೧೬೬೦ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿರುವ ಬೃಹತ್ ಕಾಮಗಾರಿ ಭದ್ರಾ ಜಲಾಶಯದ ನಿರ್ಬಂಧಿತ ಪ್ರದೇಶದಲ್ಲಿ(ಬಫರ್‌ಜೋನ್) ಕೈಗೊಂಡಿದೆ. ಸರ್ಕಾರ ಸೌಜನ್ಯಕ್ಕಾದರೂ ಭದ್ರಾ ಅಚ್ಚುಕಟ್ಟಿನ ಪ್ರದೇಶದ ಜನಪ್ರತಿನಿಧಿಗಳು, ರೈತರ ಸಭೆಯನ್ನು ನಡೆಸದೆ ಕಾಮಗಾರಿ ಕೈಗೊಂಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದು ಅಚ್ಚುಕಟ್ಟು ರೈತರ ಕತ್ತು ಹಿಸುಕುವ ಅಮಾನವೀಯ ಕೃತ್ಯವಾಗಿದೆ ಎಂದು ದೂರಿದರು. 
    ಕುಡಿಯುವ ನೀರಿನ ಪೂರೈಕೆಗೆ ಯಾವುದೇ ವಿರೋಧ ಇಲ್ಲ. ಸರ್ಕಾರ ಪರ್ಯಾಯ ವ್ಯವಸ್ಥೆ ಕೈಗೊಂಡು ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. 
    ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್‌, ಮಾಯಕೊಂಡ ಮಾಜಿ ಶಾಸಕ ಬಸವರಾಜನಾಯ್ಕ, ಮಾಜಿ ಮೇಯರ್ ಅಜಯ್‌ಕುಮಾರ್, ಹರಿಹರ ಕ್ಷೇತ್ರದ ಪೂಜಾರ್, ಬಿ.ಎಂ.ಸತೀಶ ಕೊಳೇನಹಳ್ಳಿ, ಲೋಕಿಕೆರೆ ನಾಗರಾಜ, ಸ್ಥಳೀಯ ರೈತ ಮುಖಂಡ ಆನಂದಕುಮಾರ್, ಮಾಳೇನಹಳ್ಳಿ ವಿಶ್ವನಾಥ್ ಸೇರಿದಂತೆ ದಾವಣಗೆರೆ ಜಿಲ್ಲಾ ರೈತ ಒಕ್ಕೂಟ ಹಾಗೂ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರಮುಖರು, ರೈತರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. 

ಮಹಿಳೆ ಆರೋಗ್ಯವಾಗಿದ್ದರೆ ಕುಟುಂಬದಲ್ಲಿ ನೆಮ್ಮದಿ : ಡಾ. ಶಾಂತಲಾ

ಭಾವಸಾರ ಕ್ಷತ್ರಿಯ ಸಮಾಜ, ಭಾವಸಾರ ಮಹಿಳಾ ಮಂಡಳಿ, ಭಾವಸಾರ ಯುವಕ ಸಂಘ ಮತ್ತು ಭಾವಸಾರ ವಿಷನ್ ಇವುಗಳ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ನಂಜಪ್ಪ ಲೈಫ್ ಕೇರ್ ಸಹಯೋಗದೊಂದಿಗೆ ಭದ್ರಾವತಿ ತರೀಕೆರೆ ರಸ್ತೆಯ ಶ್ರೀ ಪಾಂಡುರಂಗ ಮಂದಿರಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಶಿವಮೊಗ್ಗ ನಂಜಪ್ಪ ಆಸ್ಪತ್ರೆ ವೈದ್ಯೆ ಡಾ. ಶಾಂತಲ, ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರ ರಾವ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ : ಕುಟುಂಬದಲ್ಲಿ ಮಹಿಳೆ ಆರೋಗ್ಯವಾಗಿದ್ದರೆ ಆ ಕುಟುಂಬ ನೆಮ್ಮದಿ, ಶಾಂತಿಯಿಂದ ಇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಂದು ವೇಳೆ ಕುಟುಂಬದ ಮಹಿಳೆ ಆನಾರೋಗ್ಯಕ್ಕೆ ಒಳಗಾದಲ್ಲಿ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಕುಟುಂಬದಲ್ಲಿ ಮಹಿಳೆಯರ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕೆಂದು ಶಿವಮೊಗ್ಗ ನಂಜಪ್ಪ ಆಸ್ಪತ್ರೆ ವೈದ್ಯೆ ಡಾ. ಶಾಂತಲ ಹೇಳಿದರು. 
    ಅವರು ನಗರದ ಭಾವಸಾರ ಕ್ಷತ್ರಿಯ ಸಮಾಜ, ಭಾವಸಾರ ಮಹಿಳಾ ಮಂಡಳಿ, ಭಾವಸಾರ ಯುವಕ ಸಂಘ ಮತ್ತು ಭಾವಸಾರ ವಿಷನ್ ಇವುಗಳ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ನಂಜಪ್ಪ ಲೈಫ್ ಕೇರ್ ಸಹಯೋಗದೊಂದಿಗೆ ತರೀಕೆರೆ ರಸ್ತೆಯ ಶ್ರೀ ಪಾಂಡುರಂಗ ಮಂದಿರಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
    ಸಮಾಜದಲ್ಲಿ ಇಂದು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಆರೋಗ್ಯದ ಸಮಸ್ಯೆಗಳು ಕಾಣಿಸುತ್ತಿವೆ. ಅವರ ತಮ್ಮ ಮಾಸಿಕ ಋತು ಚಕ್ರ, ಶುಚಿತ್ವ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆರೋಗ್ಯದಲ್ಲಿ ಏನಾದರೂ ಸಮಸ್ಯೆಗಳು ಕಾಣಿಕೊಂಡಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಕಾಯಿಲೆ ಉಲ್ಬಣವಾಗಿ ಹೆಚ್ಚಿನ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. 
    ಪ್ರಸ್ತುತ ಜೀವನ ಕ್ರಮ ಸರಿಯಾದ ನಿಟ್ಟಿನಲ್ಲಿ ಸಾಗಬೇಕು. ಅದರಲ್ಲೂ ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮಗಳನ್ನುಂಟು ಮಾಡುತ್ತವೆ. ಪ್ರಸ್ತುತ ಜಂಕ್ ಫುಡ್‌ಗಳ ಬಳಕೆ ಹೆಚ್ಚುತ್ತಿದೆ. ಶ್ರಮದಾಯಕ ಕೆಲಸಗಳನ್ನು ಮಾಡದೆ ಕುಳಿತಲ್ಲೆ ಗಂಟೆಗಟ್ಟಲೆ ಕೆಲಸಗಳನ್ನು ಮಾಡುತ್ತಿರುವ ಕಾರಣ ಹಲವಾರು ರೀತಿಯ ಕಾಯಿಲೆಗಳು ಕಂಡು ಬರುತ್ತಿವೆ. ಅದರಲ್ಲೂ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಗರ್ಭಕೊರಳ ಹಾಗು ಗರ್ಭಕಂಠ ಕ್ಯಾನ್ಸರ್ ಸರ್ವೆ ಸಾಮಾನ್ಯವಾಗಿ ಕಂಡು ಬರುತ್ತಿವೆ. ಈ ಕಾಯಿಲೆಗಳ ಗುಣ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಂಡು ಆರಂಭದ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಸಲಹೆ ವ್ಯಕ್ತಪಡಿಸಿದರು.  
       ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ಗೆ ಆಧುನಿಕ ಚಿಕಿತ್ಸೆಗಳು ಕಂಡು ಹಿಡಿಯಲಾಗಿದೆ. ಅದರಲ್ಲೂ ೯-೧೩ ವರ್ಷ ಹಾಗು ೨೫ನೇ ವರ್ಷದವರಿಗೆ ಕ್ಯಾನ್ಸರ್ ನಿರೋಧಕ ಚುಚ್ಚುಮದ್ದು ನೀಡುವ ಮೂಲಕ ಭವಿಷ್ಯದಲ್ಲಿ ಕ್ಯಾನ್ಸರ್ ಬರುವ ಅಪಾಯ ಕಡಿಮೆಗೊಳಿಸಲಾಗುತ್ತಿದೆ ಎಂದರು.
    ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ಭಾವಸಾರ ಸಹಕಾರ ಸಂಘದ ಅಧ್ಯಕ್ಷ ಟಿ.ಎಸ್ ದುಗ್ಗೇಶ್ ಶಿಬಿರ ಉದ್ಘಾಟಿಸಿದರು. ಡಾ.ಕಾವ್ಯ, ಶಿಲ್ಪಾ, ಕಲ್ಪನಾ, ರಘುಪತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಭಾವಸಾರ ಯುವಕ ಮಂಡಳಿಯವರು ಶಿಬಿರದ ಔಷಧ ವಿತರಣೆ ಪ್ರಾಯೋಜಕತ್ವ ವಹಿಸಿಕೊಂಡಿದ್ದರು. ಶಿಬಿರದಲ್ಲಿ ಸುಮಾರು ೧೨೦ಕ್ಕೂ ಹೆಚ್ಚು ಜನರು ಭಾಗವಹಿಸಿ ಸದುಪಯೋಗ ಪಡೆದುಕೊಂಡರು. 
       ಸ್ವಪ್ನಕುಮಾರ್ ತೇಲ್ಕರ್ ಪ್ರಾರ್ಥಿಸಿ, ವಿಶ್ವನಾಥ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಲ್ಪನಾ ವಂದಿಸಿದರು. 

ಕಸಾಪ ರಾಜ್ಯಾಧ್ಯಕ್ಷರಿಂದ ಸರ್ವಾಧಿಕಾರಿ ಧೋರಣೆ : ಟಿ. ತಿಮ್ಮಪ್ಪ ಆರೋಪ

ಭದ್ರಾವತಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಟಿ. ತಿಮ್ಮಪ್ಪ ಮಾತನಾಡಿದರು.
    ಭದ್ರಾವತಿ: ಶತಮಾನದ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಪ್ರಸ್ತುತ ರಾಜ್ಯಾಧ್ಯಕ್ಷರಾಗಿರುವ ಡಾ. ಮಹೇಶ್‌ಜೋಶಿಯವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ಇದನ್ನು ತಾಲೂಕು ಘಟಕ ಸಹ ಖಂಡಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಟಿ. ತಿಮ್ಮಪ್ಪ ತಿಳಿಸಿದರು. 
    ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಷತ್ ತನ್ನದೇ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಶತಮಾನದ ಇತಿಹಾಸ ಹೊಂದಿರುವ ಪರಿಷತ್‌ನಲ್ಲಿ ಹಲವಾರು ಮಂದಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿನ ಬೆಳವಣಿಗೆಯಲ್ಲಿ ರಾಜ್ಯಾಧ್ಯಕ್ಷರು ಎಲ್ಲಾ ವಿಚಾರಗಳಲ್ಲೂ ಸ್ವತಂತ್ರ ನಿಲುವುಗಳನ್ನು ಕೈಗೊಳ್ಳುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. 
    ಶಿವಮೊಗ್ಗ ಜಿಲ್ಲೆಯಲ್ಲಿ ಪರಿಷತ್ ಕಾರ್ಯ ಚಟುವಟಿಕೆಗಳು ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಮಂಜುನಾಥ್‌ರವರ ನೇತೃತ್ವದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಗಳು, ಮಕ್ಕಳ ಸಾಹಿತ್ಯ ಸಮ್ಮೇಳನಗಳು ಹಾಗು ಇನ್ನಿತರ ಸಾಹಿತ್ಯ ಚಟುವಟಿಕೆಗಳು ಯಶಸ್ವಿಯಾಗಿ ನಡೆದಿವೆ. ಇವರು ಸಹ ಸಾಂವಿಧಾನಿಕವಾಗಿ ಚುನಾಯಿತರಾಗಿ ಅಧ್ಯಕ್ಷರಾದವರು ಇವರ ವಿರುದ್ಧ ಸಹ ರಾಜ್ಯಾಧ್ಯಕ್ಷರು ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಂಡಿರುವುದು ಸರಿಯಲ್ಲ. ಇದನ್ನು ತಾಲೂಕು ಪರಿಷತ್ ಖಂಡಿಸುತ್ತವೆ. ಮುಂದಿನ ಸರ್ವಸದಸ್ಯರ ಸಭೆಯಲ್ಲಿ ಈ ಎಲ್ಲಾ ವಿಚಾರಗಳ ಕುರಿತು ಪ್ರಶ್ನಿಸಲಾವುದು ಎಂದರು. 
     ಆರಂಭದ ಹಂತದಲ್ಲಿ ಭವನ ಕಾಮಗಾರಿ: 
     ತಾಲೂಕು ಸಾಹಿತ್ಯ ಪರಿಷತ್ ವತಿಯಿಂದ ಸುಮಾರು 3.8 ಕೋ. ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕನ್ನಡ ಸಾಹಿತ್ಯ ಭವನ ಕಾಮಗಾರಿ ಆರಂಭಗೊಂಡಿದ್ದು, ನೆಲಹಂತದ ಕಾಮಗಾರಿಗೆ ಇದೀಗ ಚಾಲನೆ ನೀಡಲಾಗಿದೆ. ನಗರಸಭೆ ವತಿಯಿಂದ 25 ಲಕ್ಷ ರು. ಮತ್ತು ಪರಿಷತ್‌ನಲ್ಲಿ ಪ್ರಸ್ತುತ ಸಂಗ್ರಹವಾಗಿರುವ ಹಣ ಒಟ್ಟು 32 ಲಕ್ಷ ರು. ಬಳಸಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ಸರ್ಕಾರಿ ನೌಕರರ ಒಂದು ದಿನದ ವೇತನ ನೀಡುವಂತೆ ಮನವಿ ಸಲ್ಲಿಸಲಾಗಿದ್ದು, ಸರ್ಕಾರದ ಅನುದಾನ ಸಹ ನಿರೀಕ್ಷಿಸಲಾಗುತ್ತಿದೆ ಎಂದರು. 
     ಸಾಹಿತ್ಯ ಚಟುವಟಿಕೆಗಳಿಗೆ ವೇಗ : 
    ತಾಲೂಕು ಪರಿಷತ್‌ಗೆ ನೂತನವಾಗಿ ನೇಮಕಗೊಂಡಿರುವ ಪದಾಧಿಕಾರಿಗಳು ಸಾಹಿತ್ಯ ಚಟುವಟಿಕೆಗಳನ್ನು ಮತ್ತಷ್ಟು ಕ್ರಿಯಾಶೀಲಗೊಳಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ರೂಪುರೇಷೆಗಳನ್ನು ಸಿದ್ದಪಡಿಸಿಕೊಳ್ಳಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾವುದು. ಸಾಹಿತ್ಯಾಸಕ್ತರು ಹಾಗು ಸಾಹಿತ್ಯ ಚಟುವಟಿಕೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುವುದು ಎಂದರು. 
    ಪತ್ರಿಕಾಗೋಷ್ಠಿಯಲ್ಲಿ ಪರಿಷತ್ ಪ್ರಮುಖರಾದ ಎಂ.ಈ ಜಗದೀಶ್, ನಾಗೋಜಿರಾವ್, ಕಮಲಕರ, ಶೈಲೇಶ್‌ಕೋಠಿ, ಪ್ರಕಾಶ್, ನಾಗೇಶ್, ನಾಗರತ್ನ ವಾಗೀಶ್ ಕೋಠಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Sunday, June 22, 2025

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ ಕೀರ್ತನಾಗೆ ಶ್ರೀಗಳಿಂದ ಸನ್ಮಾನ, ಅಭಿನಂದನೆ

ಭದ್ರಾವತಿ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವಿಶ್ವಕರ್ಮ ಸಮಾಜ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ಅತಿಹೆಚ್ಚು ಅಂಕಪಡೆದ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಕೀರ್ತನಾ ಅವರನ್ನು ಶ್ರೀ ಸತಶ್ರೀ ಶಂಕರಾತ್ಮನಂದ ಸರಸ್ವತಿ ಸ್ವಾಮೀಜಿಯವರು ಸನ್ಮಾನಿಸಿ ಅಭಿನಂದಿಸಿದರು. 
    ಭದ್ರಾವತಿ: ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವಿಶ್ವಕರ್ಮ ಸಮಾಜ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ಅತಿಹೆಚ್ಚು ಅಂಕಪಡೆದ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಕೀರ್ತನಾ ಅವರನ್ನು ಶ್ರೀ ಸತಶ್ರೀ ಶಂಕರಾತ್ಮನಂದ ಸರಸ್ವತಿ ಸ್ವಾಮೀಜಿಯವರು ಸನ್ಮಾನಿಸಿ ಅಭಿನಂದಿಸಿದರು. 
    ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೧೧ ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಈಕೆ ಕನ್ನಡಪ್ರಭ ಪತ್ರಿಕಾವಿತರಕ ಕೃಷ್ಣಮೂರ್ತಿ ಮತ್ತು ಸ್ವಣಾಂಬ ದಂಪತಿ ಪುತ್ರಿಯಾಗಿದ್ದಾರೆ. 
    ವೇದಿಕೆಯಲ್ಲಿ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ವಿಶ್ವಕರ್ಮ ಸಮಾಜ ತಾಲೂಕು ಅಧ್ಯಕ್ಷ ಬಿ.ಕೆ ಶ್ರೀನಾಥ್ ಹಾಗು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ನಿರ್ದೇಶಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಸಮಾಜದ ಏಳಿಗೆ ಜೊತೆಗೆ ಪ್ರಾಮಾಣಿಕತೆ ಸಹ ಬಹಳ ಮುಖ್ಯ : ಶ್ರೀ ಸತಶ್ರೀ ಶಂಕರಾತ್ಮನಂದ ಸರಸ್ವತಿ ಸ್ವಾಮೀಜಿ

ಭದ್ರಾವತಿ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವಿಶ್ವಕರ್ಮ ಸಮಾಜ ಉದ್ಘಾಟನೆ ಸಮಾರಂಭದ ದಿವ್ಯ ಸಾನಿಧ್ಯವಹಿಸಿದ್ದ ಶ್ರೀ ಸತಶ್ರೀ ಶಂಕರಾತ್ಮನಂದ ಸರಸ್ವತಿ ಸ್ವಾಮೀಜಿಗಳು ನೂತನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ನಿರ್ದೇಶಕರಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಸನ್ಮಾನಿಸಿ ಅಭಿನಂದಿಸಿದರು. 
    ಭದ್ರಾವತಿ: ಸಮಾಜದ ಏಳಿಗೆ ಜೊತೆಗೆ ಪ್ರಾಮಾಣಿಕತೆ ಸಹ ಬಹಳ ಮುಖ್ಯವಾಗಿದೆ. ಸಮಾಜವನ್ನು ಉತ್ತಮವಾಗಿ ಸಂಘಟಿಸುವ ಜೊತೆಗೆ ಮತ್ತಷ್ಟು ಬಲಿಷ್ಠಗೊಳ್ಳಬೇಕು. ಆಗ ಮಾತ್ರ ಸಮಾಜಕ್ಕೆ ಬಲ ಬರುತ್ತದೆ ಎಂದು ಶ್ರೀ ಸತಶ್ರೀ ಶಂಕರಾತ್ಮನಂದ ಸರಸ್ವತಿ ಸ್ವಾಮೀಜಿ ಹೇಳಿದರು. 
ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವಿಶ್ವಕರ್ಮ ಸಮಾಜ ಉದ್ಘಾಟನೆ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಶ್ರೀಗಳು ಮಾತನಾಡಿದರು. 
ಯಾವ ಸಮಾಜ ದುರ್ಬಲವಾಗಿರುತ್ತದೆಯೋ ಆ ಸಮಾಜದ ಏಳಿಗೆ ಕಷ್ಟಸಾಧ್ಯ ಎಂಬುದನ್ನು ಸಮಾಜದ ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಂಡವರು ಸ್ವಾರ್ಥ ಮನೋಭಾವದಿಂದ ಹೊರಬಂದು ಯಾವುದೇ ಅಪಸ್ವರಗಳಿಗೆ ಎಡೆಮಾಡಿಕೊಡದೆ ಪ್ರಾಮಾಣಿಕವಾಗಿ ಶ್ರಮಿಸಬೇಕು. ಈ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕೆಂದು ಆಶಿಸಿದರು. 
ಎಲ್ಲಾ ಯುಗದಲ್ಲೂ ಸಮಾಜಕ್ಕೆ ಋಣಿಯಾದ ಸಮಾಜ ಎಂದರೆ ಅದು ವಿಶ್ವಕರ್ಮ. ಇಂತಹ ಸಮಾಜದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. ಶಾಸಕರು ಇಲ್ಲಿನ ಸಮಾಜಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವ ಜೊತೆಗೆ ನಿವೇಶನ ಮಂಜೂರಾತಿ ಮಾಡಿಸಬೇಕು ಎಂದರು. 
ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜೊತೆಗೆ ಶಿಕ್ಷಣವಂತರನ್ನಾಗಿಸಬೇಕು. ಆ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಬೇಕೆಂದರು. 
ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ವಿಶ್ವಕರ್ಮ ಸಮಾಜಕ್ಕೆ ತನ್ನದೇ ಆದ ಪರಂಪರೆ ಇದೆ. ಈ ಸಮಾಜದ ಕೊಡುಗೆ ಅನನ್ಯವಾಗಿದೆ. ಇಂತಹ ಸಮಾಜ ಇನ್ನೂ ಸಂಘಟಿತಗೊಂಡು ಬಲಗೊಳ್ಳಬೇಕು. ಶಾಸಕರು ಹಾಗು ಕುಟುಂಬ ವರ್ಗದವರು ಈ ಸಮಾಜದ ಅಭಿವೃದ್ಧಿಗೆ ಬದ್ಧರಾಗಿದ್ದಾರೆ ಎಂದರು. 
ಸಮಾಜದ ಅಧ್ಯಕ್ಷ ಬಿ.ಕೆ ಶ್ರೀನಾಥ್ ಅಧ್ಯಕ್ಷತೆವಹಿಸಿ ಮಾತನಾಡಿ, ಸಮಾಜದಲ್ಲಿ ನಾವು ಗುರುತಿಸಿಕೊಳ್ಳಬೇಕಾದರೆ ಹೆಚ್ಚು ಸಂಘಟಿತಗೊಳ್ಳಬೇಕು. ಸಮಾಜದ ಪ್ರತಿಯೊಬ್ಬರಿಗೂ ಜವಾಬ್ದಾರಿ ಇದೆ. ಇದನ್ನು ಅರ್ಥಮಾಡಿಕೊಂಡು ಸಮಾಜದ ಏಳಿಗೆಗೆ ಕೈಜೋಡಿಬೇಕೆಂದರು. 
ಸಮಾಜದ ಗೌರವಾಧ್ಯಕ್ಷ ಬಿ.ಎಲ್ ನಾಗರಾಜ್, ಕಾರ್ಯಾಧ್ಯಕ್ಷ ಸಿ. ರಾಮಚಾರಿ, ಉಪಾಧ್ಯಕ್ಷರಾದ ರವಿಶಂಕರಚಾರಿ, ಆರ್. ದೊಡ್ಡವೀರಚಾರ್, ಪ್ರಧಾನ ಕಾರ್ಯದರ್ಶಿ ಬಿ. ಮಂಜುನಾಥ್, ಸಹ ಕಾರ್ಯದರ್ಶಿ ಪಿ. ಮಂಜುನಾಥ್, ಖಜಾಂಚಿ ಎ. ಬಸವರಾಜಚಾರಿ, ಸಂಘಟನಾ ಕಾರ್ಯದರ್ಶಿ ಕುಮಾರಚಾರಿ, ಸಹ ಸಂಘಟನಾಕಾರ್ಯದರ್ಶಿಗಳಾದ ಎಸ್. ಸುಭಾಷ್, ಮಂಜೇಶ್ ವಸಿಷ್ಠ, ಎಸ್. ಭಾನುಪ್ರಕಾಶ್, ಎನ್. ರಘು ಮತ್ತು ಕಾರ್ಯಕಾರಿ ಸಮಿತಿ ನಿರ್ದೇಶಕರು ಶ್ರೀಗಳಿಂದ ಪ್ರಮಾಣ ಪತ್ರ ಸ್ವೀಕರಿಸಿದರು. 
ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿನಿ ಕೀರ್ತನಾ ಅವರನ್ನು ಶ್ರೀಗಳು ಸನ್ಮಾನಿಸಿ ಅಭಿನಂದಿಸಿದರು. ಈಕೆ ಪತ್ರಿಕಾವಿತರಕ ಕೃಷ್ಣಮೂರ್ತಿ ಮತ್ತು ಸ್ವಣಾಂಬ ದಂಪತಿ ಪುತ್ರಿಯಾಗಿದ್ದಾರೆ. 
ಇದಕ್ಕೂ ಮೊದಲು ಹಳೇನಗರದ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಎನ್‌ಎಸ್‌ಟಿ ರಸ್ತೆಯಲ್ಲಿ ನೂತನ ಕಛೇರಿ ಉದ್ಘಾಟಿಸಲಾಯಿತು. 




Saturday, June 21, 2025

ಅಡ್ವೋಕೆಸಿ ಕಾರ್ಯಾಗಾರ : ಕೀಟಜನ್ಯ ರೋಗಳ ಬಗ್ಗೆ ಮಾಹಿತಿ

ವಿಶ್ವ ಮಲೇರಿಯಾ ವಿರೋಧಿ ಮಾಸಾಚಾರಣೆ ಅಂಗವಾಗಿ ಶನಿವಾರ ಭದ್ರಾವತಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ತಾಲೂಕಿನ ಎಲ್ಲಾ ಖಾಸಗಿ ಆಸ್ಪತ್ರೆ/ಕ್ಲಿನಿಕ್/ಪ್ರಯೋಗಶಾಲೆ/ಆಯುಷ್/ಹೊಮಿಯೊಪತಿ/ಸಿದ್ದ/ನ್ಯಾಚುರೋಪತಿ ಸೇರಿದಂತೆ ಇತರೆ ಭಾರತೀಯ ವೈದ್ಯಕೀಯ ಪದ್ಧತಿ ಪಾಲಿಸುವವರಿಗೆ, ಅಡ್ವೋಕೆಸಿ  ಕಾರ್ಯಾಗಾರ ಆಯೋಜಿಸಲಾಗಿತ್ತು.
    ಭದ್ರಾವತಿ: ವಿಶ್ವ ಮಲೇರಿಯಾ ವಿರೋಧಿ ಮಾಸಾಚಾರಣೆ ಅಂಗವಾಗಿ ಶನಿವಾರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ತಾಲೂಕಿನ ಎಲ್ಲಾ ಖಾಸಗಿ ಆಸ್ಪತ್ರೆ/ಕ್ಲಿನಿಕ್/ಪ್ರಯೋಗಶಾಲೆ/ಆಯುಷ್/ಹೊಮಿಯೊಪತಿ/ಸಿದ್ದ/ನ್ಯಾಚುರೋಪತಿ ಸೇರಿದಂತೆ ಇತರೆ ಭಾರತೀಯ ವೈದ್ಯಕೀಯ ಪದ್ಧತಿ ಪಾಲಿಸುವವರಿಗೆ, ಅಡ್ವೋಕೆಸಿ  ಕಾರ್ಯಾಗಾರ ಆಯೋಜಿಸಲಾಗಿತ್ತು.
    ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಗುಡದಪ್ಪ ಕಸಬಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ, ಆನೆಕಾಲು ರೋಗ, ಮೆದುಳು ಜ್ವರ ಸೇರಿದಂತೆ ಕೀಟಜನ್ಯ ರೋಗಗಳ ಬಗ್ಗೆ ಮಾಹಿತಿ ನೀಡಿದರು. 
     ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಮಾತನಾಡಿ, ಮಲೇರಿಯಾ ಹಾಗು ಡೆಂಗ್ಯೂ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಶಿಕ್ಷಣ ಆರೋಗ್ಯಾಧಿಕಾರಿ ಸುಶೀಲ ಬಾಯಿ, ಹಿರಿಯ ಆರೋಗ್ಯ ನಿರೀಕ್ಷಕ ಆನಂದಮೂರ್ತಿ, ಜಿಲ್ಲಾ ಆರೋಗ್ಯ ಮೇಲ್ವಿಚಾರಕರು, ತಾಲೂಕು ಆರೋಗ್ಯ ಮೇಲ್ವಿಚಾರಕರು ಹಾಗೂ ಖಾಸಗಿ ಕ್ಲಿನಿಕ್ ವೈದ್ಯರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಉಕ್ಕಿನ ನಗರದ ವಿವಿಧೆಡೆ ೧೧ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಭದ್ರಾವತಿಯಲ್ಲಿ ಬಿಜೆಪಿ ಪಕ್ಷದ ನಗರ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ  "ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ' ಶೀರ್ಷಿಕೆಯಡಿ  ೧೧ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷ  ಕೆ.ಎಚ್ ತೀರ್ಥಯ್ಯರವರ ಉಪಸ್ಥಿತಿಯಲ್ಲಿ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ, ಅಂತರರಾಷ್ಟ್ರೀಯ ಯೋಗಗುರು ಡಾ.ಡಿ ನಾಗರಾಜ್‌ರವರ ನೇತೃತ್ವದಲ್ಲಿ ನಡೆಯಿತು. 
    ಭದ್ರಾವತಿ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಬಿಜೆಪಿ ಮಂಡಲ, ಜನ್ನಾಪುರ ಹ್ಯಾಪಿ ಲಿವಿಂಗ್ ಲೈಫ್ ಯೋಗ ಕೇಂದ್ರ ಸೇರಿದಂತೆ ವಿವಿಧೆಡೆ ೧೧ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಶನಿವಾರ ನಡೆಯಿತು. 
    ಬಿಜೆಪಿ ಮಂಡಲ :  `ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ'  
    ಬಿಜೆಪಿ ಪಕ್ಷದ ನಗರ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ  "ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ' ಶೀರ್ಷಿಕೆಯಡಿ  ೧೧ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷ  ಕೆ.ಎಚ್ ತೀರ್ಥಯ್ಯರವರ ಉಪಸ್ಥಿತಿಯಲ್ಲಿ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ, ಅಂತರರಾಷ್ಟ್ರೀಯ ಯೋಗಗುರು ಡಾ.ಡಿ ನಾಗರಾಜ್‌ರವರ ನೇತೃತ್ವದಲ್ಲಿ ನಡೆಯಿತು. ಅವರು  ಯೋಗದ ಮಹತ್ವ ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನವನ್ನು ತಿಳಿಸಿದರು. 


ಭದ್ರಾವತಿಯಲ್ಲಿ ಬಿಜೆಪಿ ಪಕ್ಷದ ನಗರ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ  "ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ' ಶೀರ್ಷಿಕೆಯಡಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷ  ಕೆ.ಎಚ್ ತೀರ್ಥಯ್ಯರವರ ಉಪಸ್ಥಿತಿಯಲ್ಲಿ ನಡೆದ ೧೧ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ, ಅಂತರರಾಷ್ಟ್ರೀಯ ಯೋಗಗುರು ಡಾ.ಡಿ ನಾಗರಾಜ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಮಂಡಲ ಅಧ್ಯಕ್ಷರಾದ ಜಿ. ಧರ್ಮಪ್ರಸಾದ್ ಹಾಗು ಕೆ.ಎಚ್ ತೀರ್ಥಯ್ಯರವರು  ಮಾತನಾಡಿ, ವಿಶ್ವಕ್ಕೆ ಭಾರತ ಕೊಟ್ಟ ಮಹಾನ್ ಕೊಡುಗೆ ಯೋಗ. ಪ್ರಧಾನಿ ನರೇಂದ್ರ ಮೋದಿರವರು ಯೋಗಕ್ಕೆ ವಿಶ್ವವ್ಯಾಪಿ ಮಾನ್ಯತೆ ಲಭಿಸುವಂತೆ ಮಾಡಿದ್ದಾರೆ. 
    ಮೋದಿಯವರ ಜೀವನದಲ್ಲಿ ಯೋಗ ಕೇವಲ ಅಭ್ಯಾಸವಲ್ಲ. ಆದರ್ಶವನ್ನಾಗಿಸಿಕೊಂಡು ಪ್ರತಿದಿನ ಯೋಗಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ದೇಶ ವಿದೇಶಗಳಲ್ಲಿ ಜನರು ಯೋಗ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ದೇಹ ಹಾಗೂ ಮನಸ್ಸಿನ ಆರೋಗ್ಯಕ್ಕೆ ಪ್ರಯೋಜನಕಾರಿ. ಪ್ರತಿಯೊಬ್ಬರು ಇದನ್ನು ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. 
    ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್ ಹಾಗೂ ಮೊಸರಳ್ಳಿ ಅಣ್ಣಪ್ಪ, ಯೋಗ ಕಾರ್ಯಕ್ರಮದ ವಿಶೇಷ ತಂಡದ ಸದಸ್ಯರಾದ ರಘುರಾವ್, ರಾಜಶೇಖರ್ ಉಪ್ಪಾರ್, ತೀರ್ಥಪ್ಪ, ಸರಸ್ವತಿ, ಜಯಲಕ್ಷ್ಮಿ, ಶಕುಂತಲಾ ಪ್ರದೀಪ್, ಕಾರಾನಾಗರಾಜ್, ಎಂ.ಎಸ್ ಸುರೇಶಪ್ಪ, ನಂಜಪ್ಪ, ಹುತ್ತ ಸತೀಶ್, ಸುಲೋಚನ ಪ್ರಕಾಶ್, ರಾಘವೇಂದ್ರ, ಆಟೋಮೂರ್ತಿ, ರವಿಚಂದ್ರನ್ ಸೇರಿದಂತೆ ಯೋಗಾಸಕ್ತರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
    ಸೈಲ್-ವಿಐಎಸ್‌ಎಲ್ : 'ಯೋಗದ ಮಹತ್ವ ಮತ್ತು ಆರೋಗ್ಯದ ಮೇಲೆ ಅದರ ಪರಿಣಾಮ' 
    ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ೧೧ನೇ ಅಂತರರಾಷ್ಟ್ರೀಯ ಯೋಗ ದಿನ ಸೈಲ್-ವಿಐಎಸ್‌ಎಲ್ ಭದ್ರಾ ಅತಿಥಿ ಗೃಹದಲ್ಲಿ ಆಚರಿಸಲಾಯಿತು.


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ೧೧ನೇ ಅಂತರರಾಷ್ಟ್ರೀಯ ಯೋಗ ದಿನ ಸೈಲ್-ವಿಐಎಸ್‌ಎಲ್ ಭದ್ರಾ ಅತಿಥಿ ಗೃಹದಲ್ಲಿ ಆಚರಿಸಲಾಯಿತು.
    ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಕಾರ್ಯಕ್ರಮ ಉದ್ಘಾಟಿಸಿದರು. ನಗರದ ಪ್ರಸೂತಿ ಹಾಗು ಸ್ತ್ರೀ ರೋಗ ತಜ್ಞೆ, ಯೋಗ ಶಿಕ್ಷಕಿ ಡಾ. ವೀಣಾ ಭಟ್ ರವರು `ಯೋಗದ ಮಹತ್ವ ಮತ್ತು ಆರೋಗ್ಯದ ಮೇಲೆ ಅದರ ಪರಿಣಾಮ' ವಿಷಯ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ವಿಐಎಸ್‌ಎಲ್ ಜಾಲತಾಣದಲ್ಲಿ ಡಾ. ವೀಣಾ ಭಟ್‌ರವರ `ಯೋಗದ ಮಹತ್ವ' ಲೇಖನವನ್ನು ಪ್ರಸರಿಸಲಾಯಿತು.
    ಡಾ. ವೀಣಾ ಭಟ್ ಮತ್ತು ತಂಡದವರಾದ ವಿ.ಜಿ ವಿಂಧ್ಯ, ಡಾ. ಆಶಾ, ಶಾಲಿನಿ ಕಿರಣ್ ಮತ್ತು ಸತ್ಯಮೂರ್ತಿರವರು ವಿವಿಧ ಯೋಗಾಸನ ಭಂಗಿಗಳ ಮೂಲಕ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದವರಿಗೆ ಸಾಮೂಹಿಕವಾಗಿ ಯೋಗಾಸನ ಮಾಡಲು ಮಾರ್ಗದರ್ಶನ ನೀಡಿದರು.


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಆಯೋಜಿಸಲಾಗಿದ್ದ ೧೧ನೇ ಅಂತರರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ, ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಸೇರಿದಂತೆ ಇನ್ನಿತರರು ಯೋಗಾಸನದ ವಿವಿಧ ಭಂಗಿಗಳ ಮೂಲಕ ಗಮನ ಸೆಳೆದರು. 
    ಮುಖ್ಯ ಮಹಾಪ್ರಬಂಧಕರು(ಸ್ಥಾವರ) ಕೆ.ಎಸ್ ಸುರೇಶ್,  ಮಹಾಪ್ರಬಂಧಕರು (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್ ಮತ್ತು ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
    ಉಪ ಪ್ರಬಂಧಕರು (ಮಾನವ ಸಂಪನ್ಮೂಲ) ಕೆ.ಎಸ್. ಶೋಭಾ ಕಾರ್ಯಕ್ರಮ ನಿರೂಪಿಸಿದರು. ಈ ನಡುವೆ ಕಾರ್ಖಾನೆಯ ಕಾರ್ಮಿಕರು ಮತ್ತು ಕುಟುಂಬದವರು ತಮ್ಮ ತಮ್ಮ ಮನೆಗಳಲ್ಲಿ ಯೋಗಾಸನದ ವಿವಿಧ ಭಂಗಿಗಳನ್ನು ಮಾಡುವ ಜೊತೆಗೆ ಅವುಗಳ ಪೋಟೋ ಹಂಚಿಕೊಳ್ಳುವ ಮೂಲಕ ವಿಶ್ವಯೋಗ ದಿನಾಚರಣೆ ಆಚರಿಸಿದರು.  
    ಹ್ಯಾಪಿ ಲಿವಿಂಗ್ ಲೈಫ್ ಯೋಗ ಕೇಂದ್ರ : ಯೋಗ ನಡಿಗೆ 
    ನಗರಸಭೆ ವ್ಯಾಪ್ತಿಯ ಜನ್ನಾಪುರ ಹ್ಯಾಪಿ ಲಿವಿಂಗ್ ಲೈಫ್ ಯೋಗ ಕೇಂದ್ರದಿಂದ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಸಾರ್ವಜನಿಕರಿಗೆ ಯೋಗದ ಅರಿವು ಮೂಡಿಸಲು ಯೋಗ ನಡಿಗೆಯನ್ನು ಆಯೋಜಿಸಲಾಗಿತ್ತು. 
    ಕೇಂದ್ರದ ಯೋಗ ಗುರು ಮಹೇಶ್ ಮಾತನಾಡಿ, ಯೋಗ ಎಂದರೆ ತಿರುಚುವುದು, ಬಗ್ಗಿಸುವುದಲ್ಲ. ಅದು ಅಷ್ಟಾಂಗದ ಒಂದು ಭಾಗ, ಒಂದು ಸಾಧನ, ಒಂದು ಬುದ್ಧಿ ಶಕ್ತಿ. ಆಂತರ್ಯದ ಶಕ್ತಿಗಾಗಿ ಯೋಗ, ಯೋಗದಿಂದ ಐಕ್ಯತೆ, ಇದರಿಂದ ನಮ್ಮಲ್ಲಿ ಸಾಮರಸ್ಯ ಉಂಟಾಗಿ ಉತ್ತಮ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು. 

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಹ್ಯಾಪಿ ಲಿವಿಂಗ್ ಲೈಫ್ ಯೋಗ ಕೇಂದ್ರದಿಂದ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಸಾರ್ವಜನಿಕರಿಗೆ ಯೋಗದ ಅರಿವು ಮೂಡಿಸಲು ಯೋಗ ನಡಿಗೆಯನ್ನು ಆಯೋಜಿಸಲಾಗಿತ್ತು. 
    ಪ್ರಸ್ತುತ ದೇಶದಲ್ಲಿ ಒಂದು ದೊಡ್ಡ ಸಮಸ್ಯೆಯನ್ನು ನಾವುಗಳು ಎದುರಿಸುತ್ತಿದ್ದೇವೆ. ಪ್ರತಿಯೊಂದು ಕುಟುಂಬದಲ್ಲಿ ಮಾನಸಿಕ ಅಸಮತೋಲನದಿಂದ ನರಳುತ್ತಿದ್ದಾರೆ. ಪ್ರತಿ ೪೫ ನಿಮಿಷಕ್ಕೆ ೧೫ ವರ್ಷದೊಳಗಿನ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಮೂಲಭೂತವಾಗಿ ನಾವು ಹಲವಾರು ತಪ್ಪುಗಳನ್ನು ಮಾಡುತ್ತಿದ್ದೇವೆ. ಆತ್ಮಹತ್ಯೆಗೆ ಸಾಮಾಜಿಕ ಸನ್ನಿವೇಶ ಇರಬಹುದು, ಕುಟುಂಬದ ಒತ್ತಡದ ವಾತಾವರಣ ಮತ್ತು ಆಹಾರ ಕ್ರಮ ಸೇರಿದಂತೆ ಇನ್ನಿತರ ಕಾರಣಗಳು ಇರಬಹುದು ಎಂದರು. 
    ಪ್ರಸ್ತುತ ಯೋಗ ಪ್ರತಿಯೊಬ್ಬರಿಗೂ ಅಗತ್ಯವಾಗಿದ್ದು, ಪ್ರತಿದಿನ ಯೋಗಾಭ್ಯಾಸಕ್ಕೆ ಕನಿಷ್ಠ ೩೦ ನಿಮಿಷ ಸಮಯ ಮೀಸಲಿಡಬೇಕು. ಆರೋಗ್ಯಕ್ಕಾಗಿ, ಶಾಂತಿ-ನೆಮ್ಮದಿಗಾಗಿ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು. 
    ನಗರಸಭೆ ಸದಸ್ಯೆ ಅನುಪಮ ಚನ್ನೇಶ್, ದಾಕ್ಷಾಯಿಣಿ ಮಹೇಶ್ ನಾಗಮಣಿ, ಲಕ್ಷ್ಮಿ, ಪುಷ್ಪ, ಲಕ್ಷ್ಮಿದೇವಿ, ಮಂಜುಳ, ಶೈಲ, ಆರತಿ, ಅಶ್ವಿನಿ, ವಾಣಿ, ಡಾ. ಶಿಲ್ಪ, ಮಾಲಾ, ರಶ್ಮಿ, ವಿದ್ಯಾ ಮತ್ತು ಸ್ಪೂರ್ತಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
    ಚುಂಚಾದ್ರಿ ಮಹಿಳಾ ವೇದಿಕೆ : ಮಕ್ಕಳಲ್ಲಿ ಜ್ಞಾನ, ಓದುವ ಆಸಕ್ತಿ 
    ನಗರದ ಚುಂಚಾದ್ರಿ  ಮಹಿಳಾ ವೇದಿಕೆಯಿಂದ ವಿಶ್ವ ಯೋಗ ದಿನ ಹುತ್ತಾ ಕಾಲೋನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು. ಯೋಗ ಶಿಕ್ಷಕ ಮಂಜುನಾಥ್‌ರಾವ್ ಮಕ್ಕಳಿಗೆ ಯೋಗಭ್ಯಾಸ ನಡೆಸಿಕೊಟ್ಟರು.  ಶಾಲೆಯ ಮುಖ್ಯೋಪಾಧ್ಯಾಯ ಪರಶುರಾಮರಾವ್ ಅಧ್ಯಕ್ಷತೆ ವಹಿಸಿದ್ದರು. 
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ವಿಶ್ವಸಂಸ್ಥೆಯಿಂದ ಯೋಗ ದಿನಾಚರಣೆ ಆಚರಿಸಲು ಎಲ್ಲಾ ರಾಷ್ಟ್ರಗಳು ಅಂಗೀಕರಿಸಿವೆ. ಯೋಗ ಮಕ್ಕಳಿಗೆ ಅತ್ಯುತ್ತಮವಾದದ್ದು, ಯೋಗದಿಂದ ಜ್ಞಾನ ಮತ್ತು ಓದುವ ಆಸಕ್ತಿ ಮೂಡುತ್ತದೆ ಎಂದರು. 
    ಚುಂಚಾದ್ರಿ ಮಹಿಳಾ ವೇದಿಕೆ ಸಾಹಿತ್ಯ, ಆರೋಗ್ಯ, ಯೋಗ ಸೇರಿದಂತೆ ಹಲವಾರು ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. 


ಭದ್ರಾವತಿ ನಗರದ ಚುಂಚಾದ್ರಿ  ಮಹಿಳಾ ವೇದಿಕೆಯಿಂದ ವಿಶ್ವ ಯೋಗ ದಿನ ಹುತ್ತಾ ಕಾಲೋನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. 
    ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಗ ಋಷಿಮುನಿಗಳ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಆಧ್ಯಾತ್ಮಿಕ, ಭೌತಿಕ ಹಾಗು ಮಾನಸಿಕ ಚಿಂತನೆಗೆ ಯೋಗ ಮುಖ್ಯವಾದದ್ದಾಗಿದೆ. ಯೋಗ ದೇಹದ ಮಾನಸಿಕ ಒತ್ತಡ ಕಡಿಮೆ ಮಾಡುವ ಜೊತೆಗೆ ದೇಹದ ಸೌಂದರ್ಯಕ್ಕೂ ಸಹಕಾರಿಯಾಗಿದೆ.  ಸರ್ಕಾರಿ ಶಾಲೆ ಮಕ್ಕಳಲ್ಲಿ ಯೋಗದ ಅರಿವು ಮೂಡಿಸುವ ಕಾರ್ಯಕ್ರಮ ವೇದಿಕೆ  ಆಯೋಜಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. 
    ಶಾಲೆಯ ಮುಖ್ಯೋಪಾಧ್ಯಾಯ ಪರಶುರಾಮರಾವ್ ಮಾತನಾಡಿ, ಯೋಗದಲ್ಲಿ ಎಂಟು ಆಯಾಮಗಳಿವೆ.  ಧ್ಯಾನ, ಆಸನ ಪ್ರಮುಖವಾಗಿದ್ದು, ಯೋಗಾಭ್ಯಾಸದಲ್ಲಿ ತೊಡಗುವುದರಿಂದ ಮಕ್ಕಳಲ್ಲಿ ಶಿಸ್ತು, ಸಂಯಮ ಮೂಡುತ್ತದೆ. ಶಾಲೆಯಲ್ಲಿ ಮಕ್ಕಳಿಗೆ ಪ್ರತಿದಿನ ಯೋಗ ಅಭ್ಯಾಸ ಆಯೋಜಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು. 
    ವೇದಿಕೆ ಪದಾಧಿಕಾರಿಗಳಾದ ಉಪಾಧ್ಯಕ್ಷೆ ಪುಷ್ಪ ಕೇಶವ, ಕಾರ್ಯದರ್ಶಿ ಪ್ರತಿಭಾ, ಸಹಕಾಯದರ್ಶಿ ಶೀಲಾರವಿ, ಖಜಾಂಚಿ ಭಾರತಿ ಕುಮಾರ್, ಸಂಘಟನಾ ಕಾರ್ಯದರ್ಶಿ ಪ್ರೇಮ, ಮಂಜು, ಕುಸುಮ ಹಾಗು ವೇದಿಕೆ ಸದಸ್ಯರು ಭಾಗವಹಿಸಿದ್ದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದೇವರಾಜ್ ಸ್ವಾಗತಿಸಿ, ಶಿಕ್ಷಕಿ ವೀಣಾ ನಿರೂಪಿಸಿ, ಸುಮ ವಂದಿಸಿದರು.