Saturday, August 19, 2023

ಆ.೨೦ರಂದು ಅರಸು ೧೦೮ನೇ ಜನ್ಮದಿನ ಆಚರಣೆ

    ಭದ್ರಾವತಿ, ಆ. ೧೯: ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗು ನಗರಸಭೆ ವತಿಯಿಂದ ಮಾಜಿ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ನೇತಾರ, ಸಾಮಾಜಿಕ ನ್ಯಾಯದ ಹರಿಕಾರ  ಡಿ. ದೇವರಾಜ ಅರಸುರವರ ೧೦೮ನೇ ಜನ್ಮದಿನ ಆ.೨೦ರಂದು  ಬೆಳಿಗ್ಗೆ ೧೦ ಗಂಟೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಚರಿಸಲಾಗುತ್ತಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್ಯಾನಾಯ್ಕ್‌ ಉದ್ಘಾಟಿಸಲಿದ್ದಾರೆ. ಸಚಿವರಾದ ಎಸ್. ಮಧು ಬಂಗಾರಪ್ಪ, ಶಿವರಾಜ ಸಂಗಪ್ಪ ತಂಗಡಗಿ, ಡಿ. ಸುಧಾಕರ್‌, ಸಂಸದ ಬಿ.ವೈ ರಾಘವೇಂದ್ರ, ವಿಧಾನಪರಿಷತ್‌ ಸದಸ್ಯರಾದ ಎಸ್.ಎಲ್‌ ಭೋಜೇಗೌಡ, ಎಸ್. ರುದ್ರೇಗೌಡ, ಭಾರತಿ ಶೆಟ್ಟಿ, ಡಿ.ಎಸ್‌ ಅರುಣ್‌, ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್‌, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್‌, ತಹಸೀಲ್ದಾರ್‌ ಕೆ.ಆರ್‌ ನಾಗರಾಜ್‌, ಗ್ರೇಡ್‌-೨ ತಹಸೀಲ್ದಾರ್‌ ವಿ. ರಂಗಮ್ಮ, ಪೌರಾಯುಕ್ತ ಮನುಕುಮಾರ್‌, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ ಸೇರಿದಂತೆ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಟಿ. ರಾಜೇಶ್ವರಿ ಕೋರಿದ್ದಾರೆ.

ವೇದಾವತಿ ನಿಧನ

ವೇದಾವತಿ
    ಭದ್ರಾವತಿ, ಆ. ೧೯: ಹಳೇನಗರದ ಭೂತನಗುಡಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಮೀಪದ ನಿವಾಸಿ ವೇದಾವತಿ(೯೨) ನಿಧನ ಹೊಂದಿದರು.
    ಜನ್ನಾಪುರ ಕಾರುಣ್ಯ ಚಾರಿಟಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುರೇಶ್‌ಕುಮಾರ್ ಸೇರಿದಂತೆ ೪ ಜನ ಪುತ್ರರು ಹಾಗು ಓರ್ವ ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ಶನಿವಾರ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂರುದ್ರ ಭೂಮಿಯಲ್ಲಿ ನೆರವೇರಿತು.
    ಕಾರುಣ್ಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಿ. ರಾಜು ಹಾಗು ಪದಾಧಿಕಾರಿಗಳು, ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಕೆ.ಎಲ್ ಅಶೋಕ್, ಉದ್ಯಮಿಗಳಾದ ಬಿ.ಕೆ ಜಗನ್ನಾಥ್, ಬಿ.ಕೆ ಶಿವಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಸೇರಿದಂತೆ ಗಣ್ಯರು, ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

ಭೂತಾನ್‌ ಅಡಕೆ ಆತಂಕ ಬೇಡ : ಅಡಕೆ ಬೆಳೆಗಾರರ ಹಿತರಕ್ಷಣೆಗೆ ಬದ್ಧ

ಷೇರುದಾರರ ಸಭೆಯಲ್ಲಿ ಮಾಮ್ಕೋಸ್‌ ಉಪಾಧ್ಯಕ್ಷ ಮಹೇಶ್‌ ಎಚ್.ಎಸ್‌ ಹುಲ್ಕುಳಿ

ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘದ ಭದ್ರಾವತಿ ಶಾಖೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಷೇರುದಾರರ ಸಭೆಯಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಮಹೇಶ್‌ ಎಚ್. ಎಸ್‌ ಹುಲ್ಕುಳಿ ಮಾತನಾಡಿದರು.  
    ಭದ್ರಾವತಿ, ಆ. ೧೯: ಅಡಕೆ ಬೆಳೆಗಾರರು ಭೂತಾನ್‌ ಅಡಕೆ ಕುರಿತು ಆತಂಕಪಡುವ ಅಗತ್ಯವಿಲ್ಲ. ನಮ್ಮ ಅಡಕೆ ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ಪೈಪೋಟಿ ನೀಡಲು ಸಿದ್ದವಿದೆ ಎಂದು ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘದ ಉಪಾಧ್ಯಕ್ಷ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಮಹೇಶ್‌ ಎಚ್. ಎಸ್‌ ಹುಲ್ಕುಳಿ ಹೇಳಿದರು.
    ಅವರು ಶನಿವಾರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ಸಂಘದ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಷೇರುದಾರರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
    ವಿದೇಶದಿಂದ ಆಮದು ಮಾಡಿಕೊಳ್ಳುವ ಅಡಕೆಯಿಂದ ಯಾವುದೇ ರೀತಿ ಆತಂಕ ಬೇಡ. ಈ ಸಂಬಂಧ ಅಡಕೆ ಬೆಳೆಗಾರರ ಹಿತಕಾಪಾಡುವಂತೆ ಸಂಘದ ವತಿಯಿಂದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಫೆ.೧೪ರಿಂದ ಆಮದು ದರ ಕೆ.ಜಿ ಒಂದಕ್ಕೆ ೨೫೧ ರಿಂದ ೩೫೧ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ ನಮ್ಮ ಅಡಕೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ ಎಂದರು.
    ಪ್ರಸ್ತುತ ಸಂಘದಲ್ಲಿ ೨೯,೮೬೨ ಸದಸ್ಯರಿದ್ದು, ಸದೃಢ ಆರ್ಥಿಕ ತಳಹದಿಯನ್ನು ಹೊಂದಿದೆ. ಮುಖ್ಯವಾಗಿ ಪ್ರಾರಂಭದಿಂದಲ್ಲೂ ಲಾಭದಲ್ಲಿಯೇ ಮುನ್ನಡೆಯುತ್ತಿದೆ. ಪ್ರಸ್ತುತ  ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳ ಒಟ್ಟು ೧೭ ತಾಲೂಕುಗಳ ಆಡಳಿತ ವ್ಯಾಪ್ತಿಯನ್ನು ಹೊಂದಿದೆ. ೧೨ ಶಾಖೆಗಳನ್ನು ಹಾಗು ೧೮ ಅಡಕೆ ಸಂಗ್ರಹಣ ಏಜೆನ್ಸಿಗಳನ್ನು ಹೊಂದಿರುತ್ತದೆ. ೨೦೨೨-೨೩ನೇ ಸಾಲಿನಲ್ಲಿ ರು.೪೪೧ ಲಕ್ಷ ನಿವ್ವಳ ಲಾಭ ಗಳಿಸಿದ್ದು, ಕಳೆದ ಸಾಲಿಗಿಂತ ರು.೪೯.೬೧ ಲಕ್ಷ ಹೆಚ್ಚು ಲಾಭ ಗಳಿಸಿದೆ. ಒಟ್ಟು ವ್ಯವಹಾರ ರು.೧೨೭೭.೭೧ ಕೋಟಿಗಳಾಗಿದ್ದು, ಕಳೆದ ಸಾಲಿಗಿಂತ ರು.೪೦೪.೩೭ ಕೋಟಿ ಹೆಚ್ಚಿಗೆ ವ್ಯವಹಾರ ನಡೆದಿದೆ ಎಂದರು.
    ಸಂಘದ ಎಲ್ಲಾ ವ್ಯವಹಾರ ಸಂಪೂರ್ಣವಾಗಿ ಗಣಕೀಕರಣಗೊಳಿಸಲಾಗಿದೆ. ಅಡಕೆ ತಂತ್ರಜ್ಞಾನ ಮತ್ತು ಮಾರುಕಟ್ಟೆ ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ. ಮ್ಯಾಮ್‌ಕೋಸ್‌ ಎಂಬ ಮೊಬೈಲ್‌ ಆಪ್‌ ಮತ್ತು ಅಂತರ್ಜಾಲ(ವೆಬ್‌ಸೈಟ್) ಹೊಂದಿದೆ. ಇದರ ಮೂಲಕ ಸದಸ್ಯರು ಸದಾಕಾಲ ಸಂಘದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
    ಸಂಘದ ಸದಸ್ಯರ ಹಿತಕಾಪಾಡುವ ನಿಟ್ಟಿನಲ್ಲಿ ಸದಸ್ಯರ ಬಹುದಿನಗಳ ಬೇಡಿಕೆಯಂತೆ ಅಡಕೆ ಆಧಾರ ಸಾಲ, ಕಟಾವು ಸಾಲ, ಕೊಳೆ ಔಷಧಿ ಸಾಲ, ನಿಗದಿತ ಠೇವಣಿ ಆಧಾರ ಸಾಲ, ವಿವಿಧ ಠೇವಣಿ ಯೋಜನೆಗಳು, ಸದಸ್ಯರ ಕ್ಷೇಮಾಭಿವೃದ್ಧಿ ನಿಧಿ, ಅಡಕೆ ಸಂಶೋಧನಾ ನಿಧಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ.
    ಅಲ್ಲದೆ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳು, ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪಾರಿತೋಷಕ ಬಹುಮಾನ, ಗುಂಪು ವಿಮಾ ಯೋಜನೆ, ಆರೋಗ್ಯ ವಿಮೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
    ನಿರ್ದೇಶಕರಾದ ಈಶ್ವರಪ್ಪ ಸಿ.ಬಿ ಚಂದವಳ್ಳಿ, ಕೃಷ್ಣಮೂರ್ತಿ ಕೆ.ವಿ ಕಿರುಗುಳಿಗೆ, ಕೆ. ರತ್ನಾಕರ, ತಿಮ್ಮಪ್ಪ ಎಸ್.ಎಂ ಶ್ರೀಧರಪುರ ಗ್ರಾಮ, ವೈ.ಎಸ್‌ ಸುಬ್ರಹ್ಮಣ್ಯ, ಎಚ್.ಟಿ  ಸುಬ್ರಹ್ಮಣ್ಯ ವಡ್ಡಿನಬೈಲು, ಸುರೇಶಚಂದ್ರ .ಎ, ಅಂಬ್ಲೂರು, ಬಡಿಯಣ್ಣ ಎಚ್.ಎಂ ಹೊಲಗೋಡು ಮತ್ತು ವಿಜಯಲಕ್ಷ್ಮಿ ಸೇರಿದಂತೆ ಶಾಖೆ ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
        ಉಪಾಧ್ಯಕ್ಷ ಮಹೇಶ್‌ ಎಚ್. ಎಸ್‌ ಹುಲ್ಕುಳಿ ಮತ್ತು ನೂತನ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಬರುವೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಷೇರುದಾರರು ಪ್ರತಿವರ್ಷ ಷೇರುದಾರರ ಸಭೆ ನಡೆಸಬೇಕು. ಯಾವುದೇ ಕಾರಣಕ್ಕೂ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.
    ನಿರ್ದೇಶಕರಾದ ಜಿ.ಈ ವಿರುಪಾಕ್ಷಪ್ಪ ಸ್ವಾಗತಿಸಿ, ಕೆ.ಕೆ ಜಯಶ್ರೀ ಸಂಗಡಿಗರು ಪ್ರಾರ್ಥಿಸಿದರು. ಟಿ.ಆರ್‌ ಭೀಮರಾವ್‌ ನಿರೂಪಿಸಿ, ಆರ್. ದೇವಾನಂದ್‌ ವಂದಿಸಿದರು. ಇನ್ನಿತರರು ಉಪಸ್ಥಿತರಿದ್ದರು.

Friday, August 18, 2023

ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆ. 20ರಂದು



ಭದ್ರಾವತಿ, ಆ. 19: ತಾಲೂಕು ಛಾಯಾಗ್ರಾಹಕರ ಸಂಘ ಮತ್ತು ಛಾಯಾಗ್ರಾಹಕರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸಹಯೋಗದೊಂದಿಗೆ ವಿಶ್ವ ಛಾಯಾಗ್ರಾಹಕ ದಿನಾಚರಣೆ ಪ್ರಯುಕ್ತ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆ. 20ರ ಭಾನುವಾರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2.30ರವರೆಗೆ ಹಳೇನಗರದ ಸಂಚಿಯ  ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
    ಶಿಬಿರದಲ್ಲಿ ಇ.ಸಿ.ಜಿ.ಯೊಂದಿಗೆ ಹೃದಯ, ಕಿಡ್ನಿ, ದಂತ, ಕಣ್ಣು, ಕಿವಿ, ಇ.ಎನ್.ಟಿ, ಮೂಳೆ, ನರರೋಗ, ಚರ್ಮರೋಗ, ಸಕ್ಕರೆ ಖಾಯಿಲೆ, ಮಕ್ಕಳ ಮತ್ತು ಸ್ತ್ರೀಯರ ಖಾಯಿಲೆಗಳು ಹಾಗೂ ಜನರಲ್ ಮೆಡಿಸಿನ್, ಜನರಲ್ ಸರ್ಜರಿ ಇತರೆ ರೋಗಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನಡೆಯಲಿದೆ.   
      ರಕ್ತದಾನ ಶಿಬಿರ :
    ಅಲ್ಲದೆ ರಕ್ತದಾನ ಶಿಬಿರ ನಡೆಯಲಿದ್ದು, ರಕ್ತದಾನ ಮಾಡಿದಂತಹ ದಾನಿಗಳಿಗೆ ಸುಬ್ಬಯ್ಯ ವೈದ್ಯಕೀಯ
ಮಹಾವಿದ್ಯಾಲಯದವತಿಯಿಂದ ಉಚಿತ ಹೆಲ್ತ್‌ಕಾರ್ಡ್ (ಕುಟುಂಬದ ಸದಸ್ಯರಿಗೆ) ನೀಡಲಾಗುತ್ತದೆ. ಹೆಲ್ತ್‌ಕಾರ್ಡ್‌ನ ಅವಧಿ ಒಂದು ವರ್ಷಕ್ಕೆ ಸಿಮೀತವಾಗಿರುತ್ತದೆ.
     ಸಾರ್ವಜನಿಕರು ಜನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.
    ಹೆಚ್ಚಿನ ಮಾಹಿತಿಗಾಗಿ ಅರುಣ್ ಕುಮಾರ್ : 9448329866, ಮಂಜುನಾಥ : 9972387099, 
ಸಂಜೀವರಾವ್ ಸಿಂಧ್ಯಾ : 94494 26872,  ಕುಮಾರ .ಜೆ : 99801 76516, ಮೊಹಮ್ಮದ್: 8951617838
ಮತ್ತು ಕಾಂತರಾಜ್ : 9900131155 ಸಂಪರ್ಕಿಸಬಹುದಾಗಿದೆ.

ರಚನಾ ವೈದ್ಯಕೀಯ ಶಿಕ್ಷಣ ಪ್ರವೇಶ : ಅಭಿನಂದನೆ



ಭದ್ರಾವತಿ, ಆ. 19:  ಯು.ಜಿ ನೀಟ್ 2023-24ನೇ ಸಾಲಿನ  ಸರ್ಕಾರಿ ವೈದ್ಯಕೀಯ ಶಿಕ್ಷಣ ಪ್ರವೇಶ ಪ್ರಥಮ ಪ್ರಯತ್ನದಲ್ಲಿಯೇ ಪಡೆಯುವಲ್ಲಿ ನಗರದ ಎಚ್.ಎನ್ ರಚನಾ ಯಶಸ್ವಿಯಾಗಿದ್ದಾರೆ.  
    ಇವರು ಶಿಕ್ಷಕರಾದ  ಎಚ್.ಎಸ್ ಮಾಯಮ್ಮಹಾಗೂ ಎಚ್.ಎನ್ ನರಸಿಂಹಮೂರ್ತಿ ದಂಪತಿ ಪುತ್ರಿಯಾಗಿದ್ದಾರೆ.  ರಚನಾ ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ   ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ  ಪದವಿ ಪೂರ್ವ ಶಿಕ್ಷಣ(ಪಿಯುಸಿ)  ಪೂರೈಸಿದ್ದು, ಇದೀಗ ಸರ್ಕಾರಿ ವೈದ್ಯಕೀಯ ಶಿಕ್ಷಣ ಪ್ರವೇಶ ಪಡೆದುಕೊಂಡಿದ್ದಾರೆ.   ರಚನಾ ಅವರನ್ನು ಪೋಷಕರು, ಶಿಕ್ಷಕ ವೃಂದದವರು, ವಿವಿಧ ಸಂಘ ಸಂಸ್ಥೆಗಳು ಅಭಿನಂದಿಸಿವೆ.

ಇಬ್ಬರು ಅಡಕೆ ಕಳ್ಳರ ಬಂಧನ

    ಭದ್ರಾವತಿ, ಆ. ೧೮: ಅಡಕೆ ತೋಟದಲ್ಲಿ ಹಸಿ ಅಡಕೆ ಕದ್ದೊಯ್ಯುತ್ತಿದ್ದವರನ್ನು ಗ್ರಾಮಸ್ಥರು ಹಿಡಿದು ಮಾಲು ಸಮೇತ ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನ ಹೊಳೆಹೊನ್ನೂರಿನ ಹೊಸ ಜಂಬರಗಟ್ಟೆ ಗ್ರಾಮದಲ್ಲಿ ನಡೆದಿದೆ.
    ಹೊಳೆಹೊನ್ನೂರು ಸಮೀಪದ ಕೊಪ್ಪ ಗ್ರಾಮದ ನಿವಾಸಿಗಳಾದ ಅಣ್ಣಪ್ಪ ಹಾಗೂ ಮಂಜು ಎಂಬುವರು ಬಂಧಿತ ಆರೋಪಿಗಳಾಗಿದ್ದು, ಇನ್ನೋರ್ವ ಬಾಬು ಎಂಬಾತ ತಪ್ಪಿಸಿಕೊಂಡಿದ್ದಾನೆ.
    ಹೊಸ ಜಂಬರಗಟ್ಟೆ ಗ್ರಾಮದಲ್ಲಿ ಸೋಮವಾರ ರಾತ್ರಿ ನಂಜಪ್ಪ ಎಂಬುವರ ತೋಟಕ್ಕೆ ಮೂವರು ನುಗ್ಗಿದ್ದು, ತೋಟದಲ್ಲಿನ ಹಸಿ ಅಡಕೆ ಗೊನೆಯನ್ನು ಕಿತ್ತುಕೊಂಡು ಚೀಲದಲ್ಲಿ ತುಂಬಿಕೊಂಡು ಪರಾರಿಯಾಗುತ್ತಿದ್ದಾಗ  ಗ್ರಾಮಸ್ಥರು ಬೆನ್ನು ಹತ್ತಿ ಇಬ್ಬರನ್ನು ಹಿಡಿದಿದ್ದಾರೆ. ನಂತರ ಕದ್ದ ಅಡಕೆ ಸಮೇತ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
    ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
    ಕದ್ದ ಹಸಿ ಅಡಕೆಯನ್ನು ಕಡಿಮೆ ಬೆಲೆಗೆ ಖರೀದಿಸಿ ಅದನ್ನು ಸುಲಿದು, ಬೇಯಿಸಿ, ಒಣ ಅಡಕೆ ಮಾರಾಟ ಮಾಡಿ ಹಣ ಮಾಡಿಕೊಳ್ಳು ವ್ಯಕ್ತಿಗಳು ಇದ್ದಾರೆ. ಇಂತಹ ವ್ಯಕ್ತಿಗಳಿಂದ ರೈತರು ಕಷ್ಟಪಟ್ಟು ಬೆಳೆದ ಅಡಕೆ ಫಸಲನ್ನು ಸುಲಭವಾಗಿ ಕಳ್ಳತನ ಮಾಡುತ್ತಿರುವ ಪ್ರಕರಣ ಹೆಚ್ಚಾಗಿದೆ. ಆದ್ದರಿಂದ ಸಂಬಂಧಪಟ್ಟವರು ಅಡಕೆ ಕಳ್ಳರು ಹಾಗೂ ಕದ್ದ ಅಡಕೆ ಕೊಳ್ಳುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಬೆಳೆಗಾರರ ಹಿತ ಕಾಪಾಡಬೇಕೆಂದು ಜನರು ಆಗ್ರಹಿಸಿದ್ದಾರೆ. 

ಬೀರುವಿನ ಬಾಗಿಲು ಮುರಿದು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳವು


    ಭದ್ರಾವತಿ, ಆ. ೧೮: ಮನೆಯ ಬೀರುವಿನ ಬಾಗಿಲು ಮುರಿದು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ತಾಲೂಕಿನ ಕೋಟೆ ಗಂಗೂರು ಗ್ರಾಮದಲ್ಲಿ ನಡೆದಿದೆ.
    ಗ್ರಾಮದ ನಿವಾಸಿ ಎಂ. ಶೀಲಾರವರು ಆ.೧೬ರಂದು  ತಮ್ಮ ಗಂಡನ ಜೊತೆ ಹಾಲು ಮಾರಾಟ ಮಾಡಲು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು,  ರಾತ್ರಿ ಮನೆಗೆ ಬಂದು ಮನೆಯ ಬೀಗ ತೆಗೆದು ನೋಡಿದಾಗ  ಬೀರುವಿನ ಬಾಗಿಲು ಮುರಿದು ಲಾಕರ್ ನಲ್ಲಿಟ್ಟಿದ್ದ ಸುಮಾರು ೨೯.೫ ಗ್ರಾಂ ತೂಕದ  ಒಟ್ಟು ಸುಮಾರು ೧.೩೦ ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ. ಈ ಸಂಬಂಧ ಶೀಲಾರವರು ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.