Saturday, May 3, 2025

ಅಪ್ಪನ ಧೈರ್ಯ, ಶಿಕ್ಷಕರ ಮಾರ್ಗದರ್ಶನ, ನಿರಂತರ ಪರಿಶ್ರಮ

ರೈತನ ಮಗನಿಗೆ ೬೨೫ಕ್ಕೆ ೬೧೫ ಅಂಕ 

೬೨೫ಕ್ಕೆ ೬೧೫ ಅಂಕ ಪಡೆದಿರುವ ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಿತಿನ್‌ಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕುಟುಂಬಸ್ಥರು, ಗ್ರಾಮಸ್ಥರು ನಿತಿನ್‌ಗೆ ಸಿಹಿ ತಿನಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ. 
    ಭದ್ರಾವತಿ : ಅಪ್ಪ ಕೊಟ್ಟ ಧೈರ್ಯ, ಶಿಕ್ಷಕರ ಮಾರ್ಗದರ್ಶನ, ನಿರಂತರ ಪರಿಶ್ರಮ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಪಡೆಯಲು ಸಾಧ್ಯವಾಯಿತು ಎಂದು ೬೨೫ಕ್ಕೆ ೬೧೫ ಅಂಕ ಪಡೆದಿರುವ ತಾಲೂಕಿನ ಹಂಚಿನ ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಿತಿನ್ ಫಲಿತಾಂಶ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿದ್ದು, ಈ ನಡುವೆ ರೈತನ ಮಗನ ಸಾಧನೆಗೆ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. 
    ನಿತಿನ್ ತನ್ನ ಯಶಸ್ಸಿನ ಹಿಂದಿನ ರಹಸ್ಯ ಹಂಚಿಕೊಳ್ಳುತ್ತಾ ಪ್ರತಿದಿನ ಕನಿಷ್ಠ ೫ ರಿಂದ ೬ ಗಂಟೆ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದು, ಪಠ್ಯಪುಸ್ತಕಗಳ ಜೊತೆಗೆ ಹೆಚ್ಚುವರಿ ಪ್ರಶ್ನೆಪತ್ರಿಕೆಗಳು, ಶಿಕ್ಷಕರ ಮಾರ್ಗದರ್ಶನ ಹಾಗೂ ವಸತಿ ಶಾಲೆಯ ಶಾಂತಿಯುತ ಪರಿಸರ ಪ್ರತಿ ಬಾರಿ ಮಾಡುವ ಚಟುವಟಿಕೆಗೆ, ನನ್ನ ಸಾಧನೆಗೆ ಕಾರಣಗಳಾದವು. ವಿಶೇಷವಾಗಿ ಶಾಲಾ ಶಿಕ್ಷಕರ ಪ್ರೋತ್ಸಾಹ ಹಾಗೂ ಪೋಷಕರ ಬೆಂಬಲ ಅಪ್ಪನ ಧೈರ್ಯ ನನಗೆ ಪರೀಕ್ಷೆ ಸುಲಭವಾಗಿ ಎದುರಿಸಲು ಕಾರಣವಾಯಿತು. ಪರೀಕ್ಷೆಯ ಸಮಯದಲ್ಲಿ ಆತ್ಮವಿಶ್ವಾಸ ಕಳೆದುಕೊಂಡಿಲ್ಲ. ಅದರಲ್ಲೂ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಕಲಿಕೆಯಲ್ಲಿ ಹಗಲು ರಾತ್ರಿ ಹೆಚ್ಚಿನ ಶ್ರಮವಹಿಸಿದ ಪರಿಣಾಮ ಹೆಚ್ಚಿನ ಪಡೆಯಲು ಸಾಧ್ಯವಾಯಿತು ಎಂದರು.   
    ನಿತಿನ್ ತಾಲೂಕಿನ ಕಲ್ಪನಹಳ್ಳಿ ತಾಂಡದ ರೈತ ಹಾಲೇಶ್ವರನಾಯ್ಕ ಮಗನಾಗಿದ್ದು, ಮಗನ ಸಾಧನೆಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕುಟುಂಬಸ್ಥರು, ಗ್ರಾಮಸ್ಥರು ನಿತಿನ್‌ಗೆ ಸಿಹಿ ತಿನಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ. 
 

Friday, May 2, 2025

ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ಬಿ.ಎ ಮಂಜುನಾಥ್‌ಗೆ ಗೆಳೆಯರ ಬಳಗದಿಂದ ಅಭಿನಂದನಾ ಕಾರ್ಯಕ್ರಮ

ಮೇ.೪ರಂದು ಲಯನ್ಸ್ ಕ್ಲಬ್ ಶುಗರ್ ಟೌನ್ ಸಭಾಂಗಣದಲ್ಲಿ ಸ್ನೇಹ ಸಮ್ಮಿಲನ ಸಂಭ್ರಮ  

ಬಿ.ಎ ಮಂಜುನಾಥ್    
    ಭದ್ರಾವತಿ : ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಸುಮಾರು ೩೯ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಬಿ.ಎ ಮಂಜುನಾಥ್‌ರವರಿಗೆ ಗೆಳೆಯರ ಬಳಗದ ವತಿಯಿಂದ ಸ್ನೇಹ ಸಮ್ಮಿಲನ ಸಂಭ್ರಮ ಕಾರ್ಯಕ್ರಮ ಮೇ.೪ರ ಭಾನುವಾರ ನಗರದ ಜೆಟಿಎಸ್ ಶಾಲೆ ಸಮೀಪದಲ್ಲಿರುವ ಲಯನ್ಸ್ ಕ್ಲಬ್ ಶುಗರ್ ಟೌನ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. 
    ಮಂಜುನಾಥ್‌ರವರು ನಗರದ ಸರ್.ಎಂ.ವಿ ಕಲಾ ಮತ್ತು ವಾಣಿಜ್ಯ ಕಾಲೇಜು, ಶ್ರೀ ಕೃಷ್ಣ ಕಾಲೇಜು, ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗು ತರೀಕೆರೆ ಸರ್ಕಾರಿ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ಒಟ್ಟು  ೩೯ ವರ್ಷ ಸುಧೀರ್ಘ ಸೇವೆ ಸಲ್ಲಿಸಿ ಏ.೩೦ರಂದು ನಿವೃತ್ತಿ ಹೊಂದಿದ್ದಾರೆ. 
    ಮಂಜುನಾಥ್‌ರವರು ಸರ್ಕಾರಿ ವೃತ್ತಿ ಬದುಕಿನ ಜೊತೆಗೆ ಗಾಯಕರಾಗಿ ಗುರುತಿಸಿಕೊಂಡಿದ್ದು, ತಮ್ಮದೇ ಗಾಯಕರ ತಂಡವನ್ನು ಕಟ್ಟಿಕೊಂಡು ರಾಜ್ಯದ ವಿವಿಧೆಡೆ ಕಾರ್ಯಕ್ರಮಗಳನ್ನು ನೀಡುವ ಮೂಲಕ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.  ಪ್ರಸ್ತುತ ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷರಾಗಿದ್ದಾರೆ. 
    ಇವರ ಸರ್ಕಾರಿ ಸೇವೆಯ ಸಾರ್ಥಕ ಬದುಕನ್ನು ಗುರುತಿಸಿ ಗೆಳೆಯರ ಬಳಗ ವಿಶಿಷ್ಟವಾಗಿ ಅಭಿನಂದಿಸಲು ಮುಂದಾಗಿದೆ. ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಟಿ. ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. 
    ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಸೇರಿದಂತೆ ನಗರಸಭೆ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳು ಮುಖಂಡರು, ಗಣ್ಯರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಗೆಳೆಯರ ಬಳಗ ಕೋರಿದೆ.

ತರಂಗ ಕಿವುಡು ಮಕ್ಕಳ ಶಾಲೆಗೆ ಶೇ.೧೦೦ ಫಲಿತಾಂಶ

ಭದ್ರಾವತಿ ನ್ಯೂಟೌನ್ ಶಿವಭದ್ರ ಟ್ರಸ್ಟ್, ತರಂಗ ಕಿವುಡು ಮಕ್ಕಳ ಪ್ರಾಥಮಿಕ ಮತ್ತು ಪ್ರೌಢಶಾಲೆ 
    ಭದ್ರಾವತಿ : ನಗರದ ನ್ಯೂಟೌನ್ ಶಿವಭದ್ರ ಟ್ರಸ್ಟ್, ತರಂಗ ಕಿವುಡು ಮಕ್ಕಳ ಪ್ರಾಥಮಿಕ ಮತ್ತು ಪ್ರೌಢಶಾಲೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ ಪಡೆದುಕೊಳ್ಳುವ ಮೂಲಕ ಗಮನ ಸೆಳೆದಿದೆ. 
    ಈ ಬಾರಿ ಪರೀಕ್ಷೆ ಎದುರಿಸಿದ ಶಾಲೆಯ ೮ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ೬ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗು ೨ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶೇ.೧೦೦ಕ್ಕೆ ೧೦೦ರಷ್ಟು ಫಲಿತಾಂಶ ಲಭಿಸಿದೆ. 
    ವಿಕಲಚೇತನ ವಿದ್ಯಾರ್ಥಿಗಳ ಸಾಧನೆಗೆ ಟ್ರಸ್ಟ್ ಆಡಳಿತ ಮಂಡಳಿ, ಲಯನ್ಸ್ ಕ್ಲಬ್ ಶುಗರ್ ಟೌನ್-ಲಯನ್ಸ್ ಎಜುಕೇಷನ್ ಟ್ರಸ್ಟ್ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು, ಶಿಕ್ಷಕ ವೃಂದ ಹಾಗು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆಂದು ಟ್ರಸ್ಟ್ ಕಾರ್ಯದರ್ಶಿ ಎಸ್.ಎನ್ ಸುಭಾಷ್ ತಿಳಿಸಿದ್ದಾರೆ.  

ಮಾಜಿ ಸೈನಿಕರ ಪುತ್ರ ಬಿ.ಎಸ್ ಇಶಾಂತ್ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ

ಬಿ.ಎಸ್ ಇಶಾಂತ್ 
 ಭದ್ರಾವತಿ: ನಗರದ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ(ಎಸ್‌ಎವಿ)ಯ ಪ್ರೌಢಶಾಲೆ ವಿದ್ಯಾರ್ಥಿ ಬಿ.ಎಸ್ ಇಶಾಂತ್ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶೇ.೯೬ ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 
    ಒಟ್ಟು ೬೨೫ಕ್ಕೆ ೫೯೮ ಅಂಕಗಳನ್ನು ಪಡೆದುಕೊಂಡಿದ್ದು, ಸಾಮಾಜಿಕ ವಿಜ್ಞಾನ ವಿಷಯದಲ್ಲಿ ೧೦೦ಕ್ಕೆ ೧೦೦ ಅಂಕಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಇಶಾಂತ್ ಕಡದಕಟ್ಟೆ ನಿವಾಸಿ, ಮಾಜಿ ಸೈನಿಕ(ಪ್ರಸ್ತುತ ಕೆಎಸ್‌ಆರ್‌ಟಿಸಿ ನೌಕರ) ಬಿ.ಟಿ ಸತೀಶ್ ಹಾಗು ಎಸ್. ಇಂದಿರ ದಂಪತಿ ಪುತ್ರರಾಗಿದ್ದಾರೆ.  ಭಂಡಾರಹಳ್ಳಿ ನಿವಾಸಿ, ಪ್ರಗತಿಪರ ಕೃಷಿಕ ಶ್ರೀಧರ್ ಸೇರಿದಂತೆ ಸ್ಥಳೀಯರು ಇಶಾಂತ್ ಅವರನ್ನು ಅಭಿನಂದಿಸಿದ್ದಾರೆ. 

ನಂಜುಂಡೇಗೌಡರಿಗೆ ಪವರ್‌ಲಿಫ್ಟಿಂಗ್‌ನಲ್ಲಿ ಚಿನ್ನ ಪದಕ



ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಕಾರ್ಮಿಕ, ಪವರ್‌ಲಿಫ್ಟರ್ ನಂಜುಂಡೇಗೌಡರವರು ಕರ್ನಾಟಕ ರಾಜ್ಯ ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್  ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನದ ಪದಕದೊಂದಿಗೆ ಎಂ-೩ ಕ್ಲಾಸಿಕ್ ಬೆಸ್ಟ್ ಲಿಫ್ಟರ್-೨೦೨೫ ಬಿರುದು ತಮ್ಮದಾಗಿಸಿಕೊಂಡಿದ್ದಾರೆ. 
    ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಕಾರ್ಮಿಕ, ಪವರ್‌ಲಿಫ್ಟರ್ ನಂಜುಂಡೇಗೌಡರವರು ಕರ್ನಾಟಕ ರಾಜ್ಯ ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್  ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. 
    ಬೆಂಗಳೂರಿನ ಕಬ್ಬನ್ ಪಾರ್ಕ್, ಕೆಜಿಎಸ್ ಕ್ಲಬ್‌ನಲ್ಲಿ ಏ.೨೬ ರಿಂದ ೨೮ರವರೆಗೆ ಜರುಗಿದ ಪಂದ್ಯಾವಳಿಯಲ್ಲಿ  ಭಾಗವಹಿಸಿ ಪವರ್‌ಲಿಫ್ಟಿಂಗ್ ಸ್ಪಧೆಯಲ್ಲಿ ಚಿನ್ನದ ಪದಕದೊಂದಿಗೆ ಎಂ-೩ ಕ್ಲಾಸಿಕ್ ಬೆಸ್ಟ್ ಲಿಫ್ಟರ್-೨೦೨೫ ಬಿರುದು ಪಡೆದುಕೊಂಡಿದ್ದಾರೆ. ಅಲ್ಲದೆ ಆಗಸ್ಟ್ ತಿಂಗಳಿನಲ್ಲಿ ನಡೆಯಲಿರುವ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. 
    ರಾಷ್ಟ್ರೀಯ ತೀರ್ಪುಗಾರ ಮಹೇಶ್ವರಯ್ಯ ಪ್ರಶಸ್ತಿ ವಿತರಿಸಿದರು. ತರಬೇತಿದಾರ ಪ್ರಕಾಶ್‌ಕಾರಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ಕಾರ್ಮಿಕರು, ಕ್ರೀಡಾಪಟುಗಳು ನಂಜುಂಡೇಗೌಡ ಅವರನ್ನು ಸನ್ಮಾನಿಸಿ ಅಭಿನಂದಿಸಿದ್ದಾರೆ. 

Thursday, May 1, 2025

ಚಿರತೆ ದಾಳಿಗೆ ಕರು ಬಲಿ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಈ ಭಾಗದ ಕಲ್ಪನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಕರು ಮೇಲೆ ದಾಳಿ ನಡೆಸಿ ಬಲಿ ತೆಗೆದುಕೊಂಡಿರುವ ಘಟನೆ ನಡೆದಿದೆ. 
    ಭದ್ರಾವತಿ : ತಾಲೂಕಿನ ಕೂಡ್ಲಿಗೆರೆ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಈ ಭಾಗದ ಕಲ್ಪನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಕರು ಮೇಲೆ ದಾಳಿ ನಡೆಸಿ ಬಲಿ ತೆಗೆದುಕೊಂಡಿರುವ ಘಟನೆ ನಡೆದಿದೆ. 
    ಕಳೆದ ಎರಡು ದಿನಗಳ ಹಿಂದೆ ಎಪಿಎಂಸಿ ಮಾಜಿ ಸದಸ್ಯೆ ಸುಜಾತರವರ ಟಿವಿಎಸ್ ಫಾರಂ ತೋಟದ ಮನೆಯಲ್ಲಿ ಚಿರತೆ ಕಾಣಿಸಿಕೊಂಡು ಭಯದ ವಾತಾವರಣ ಉಂಟು ಮಾಡಿತ್ತು. ಅಲ್ಲದೆ ಮಂಗಳವಾರ ನಾಯಿ ಬಲಿ ತೆಗೆದುಕೊಂಡಿದ್ದ  ಚಿರತೆ ಇದೀಗ ಕರು ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದೆ. ಇದರಿಂದ ಈ ಭಾಗದ ಗ್ರಾಮಸ್ಥರಲ್ಲಿ ಆತಂಕ ಮರೆ ಮಾಡಿದೆ. ಅರಣ್ಯ ಇಲಾಖೆ ತಕ್ಷಣ ಮುನ್ನಚ್ಚರಿಕೆವಹಿಸಿ ಚಿರತೆ ಸೆರೆ ಹಿಡಿಯಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ. 

ಮೇ.೯ರಂದು ದೇವಿಯ ಆಲಯ ಪ್ರವೇಶ ಸ್ಥಿರಬಿಂಬ ಪ್ರತಿಷ್ಠಾಪನೆ, ಗೋಪುರ ಪ್ರತಿಷ್ಠೆ ಕಳಸಾರೋಹಣ



ಭದ್ರಾವತಿ ಕಾಗದನಗರ, ಸುರಗಿತೋಪು ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನ. 
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಕಾಗದನಗರ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನದ ದೇವಿಯ ಆಲಯ ಪ್ರವೇಶ ಸ್ಥಿರಬಿಂಬ ಪ್ರತಿಷ್ಠಾಪನೆ ಹಾಗು ದೇವಿಯ ಗೋಪುರ ಪ್ರತಿಷ್ಠೆ ಕಳಸಾರೋಹಣ ಹಾಗು ದೀಪ ಸ್ಥಂಭ ಪ್ರತಿಷ್ಠಾಪನೆ ಮೇ.೯ರಂದು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದೆ. 
    ಈ ಕುರಿತು ಗುರುವಾರ ಸಂಜೆ ದೇವಸ್ಥಾನದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ದೇವಸ್ಥಾನ ಟ್ರಸ್ಟ್ ಪ್ರಮುಖರು, ಇಲ್ಲಿನ ನಿವಾಸಿಗಳು ಶ್ರೀ ಚೌಡೇಶ್ವರಿ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿದ್ದಾರೆ. ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ಕೈಗೊಳ್ಳಲು ಟ್ರಸ್ಟ್ ರಚಿಸಿಕೊಂಡಿದ್ದು, ಈ ಮೂಲಕ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಇನ್ನೂ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿದ್ದು, ದಾನಿಗಳು, ಭಕ್ತರು ಇನ್ನೂ ಹೆಚ್ಚಿನ ಆರ್ಥಿಕ ನೆರವಿನೊಂದಿಗೆ ಎಲ್ಲಾ ರೀತಿಯ ಸಹಕಾರ ನೀಡಬೇಕೆಂದು ಮನವಿ ಮಾಡಿದರು. 
    ಈ ನಡುವೆ ಮೇ.೯ರಂದು ದೇವಿಯ ಆಲಯ ಪ್ರವೇಶ ಸ್ಥಿತಬಿಂಬ ಪ್ರತಿಷ್ಠಾಪನೆ ಹಾಗು ದೇವಿಯ ಗೋಪುರ ಪ್ರತಿಷ್ಠೆ ಕಳಸಾರೋಹಣ ಹಾಗು ದೀಪ ಸ್ಥಂಭ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಗುತ್ತಿದೆ.  ಇದರ ಅಂಗವಾಗಿ ಮೇ.೭ರ ಬುಧವಾರ ಸಂಜೆ ೬-೩೦ ಗೋದೋಳಿ ಲಗ್ನದಲ್ಲಿ ಮಹಾಗಣಪತಿ ಪೂಜೆ, ರಕ್ಷಾ ಬಂಧನ, ಮೃತ್ಯುಗ್ರಹಣ, ಅಂಕುರಾರ್ಪಣ, ವಾಸ್ತು ಪೂಜೆ, ವಾಸ್ತು ಹೋಮ, ವಾಸ್ತು ಬಲಿ ಹಾಗು ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಜರುಗಲಿವೆ. ೮ರ ಗುರುವಾರ ಬೆಳಗ್ಗೆ ೮-೩೦ ಕ್ಕೆ ನೈರ್ಮಲ್ಯ ವಿಸರ್ಜನೆ, ಮಹಾಗಣಪತಿ ಹೋಮ,  ಅದಿವಾಸಿಗಳು ನವಗ್ರಹ ಪೂಜೆ, ಹೋಮ, ಸಪ್ತದಶ ಕಳಶ ಸ್ಥಾಪನೆ, ಮಹಾಮಂಗಳಾರತಿ ಹಾಗು ತೀರ್ಥ ಪ್ರಸಾದ ವಿನಿಯೋಗ ಮತ್ತು ಸಂಜೆ ೬ಕ್ಕೆ ಗೋದೋಳಿ ಲಗ್ನದಲ್ಲಿ ದ್ವಾರ ತೋರಣ, ಕುಂಭ ಪೂಜೆ, ಪುಷ್ಪಾದಿವಾಸ, ತತ್ವನ್ಯಾಸ, ಪ್ರಾಣ ಪ್ರತಿಷ್ಠಾಪನೆ ಹೋಮ, ಶಯೋ ದಿವಸ ಪಿಂಡಿತಾ ಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿವೆ. 
     ೯ರ ಶುಕ್ರವಾರ ಬ್ರಾಹ್ಮಿ ಮುಹೂರ್ತದಲ್ಲಿ ೪:೩೦ ರಿಂದ ೬:೩೦ ರ ಬೆಳಗ್ಗೆ ಗಂಗಾಪೂಜೆ, ಅಲಯ ಪ್ರವೇಶ, ಪಂಚಾಮೃತ ಅಭಿಷೇಕ, ಅಲಂಕಾರ, ಮೂರ್ತಿ ಕ್ಷೇಮ ಮಹಾ ಪ್ರತಿಷ್ಠೆ ಹಾಗೂ ಮಹಾಪೂರ್ಣಾಹುತಿ ಹಾಗೂ ಅಭಿಜಿತ್ ಲಗ್ನದ ಶುಭಮುಹೂರ್ತದಲ್ಲಿ ಮಧ್ಯಾಹ್ನ ೧೨ ಗಂಟೆಗೆ  ಕಳಸಾರೋಣ, ಮತ್ತು ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ಇರುತ್ತದೆ.  ಬೆಳಗ್ಗೆ ೪.೩೦ಕ್ಕೆ ಗಂಗೆ ತರುವ ಕಾರ್ಯಕ್ರಮವಿರುತ್ತದೆ. ಊರಿನ ಸಮಸ್ತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು.
    ಧಾರ್ಮಿಕ ಕಾರ್ಯಕ್ರಮದಲ್ಲಿ ಕೇಂದ್ರ ಉಕ್ಕು ಹಾಗು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ ಕುಮಾರಸ್ವಾಮಿ, ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಬಿ.ಕೆ ಸಂಗಮೇಶ್ವರ್, ಜಿ.ಎಚ್ ಶ್ರೀನಿವಾಸ್, ಡಿ.ಎಸ್ ಅರುಣ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ನಗರಸಭೆ ಸದಸ್ಯೆ ಜಯಶೀಲ ಸುರೇಶ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳುತ್ತಿದ್ದು, ಈ ಧಾರ್ಮಿಕ ಕಾರ್ಯ ವಿಶೇಷವಾಗಿ ನಡೆಯುತ್ತಿರುವುದರಿಂದ ಶಾಂತಿ, ಸಹನೆ, ಸಹಬಾಳ್ವೆಯಿಂದ ಊರಿನ ಸಮಸ್ತರು ವಿಶೇಷವಾಗಿ ಆಚರಿಸುವುದರ ಮೂಲಕ ಪ್ರತಿ ಮನೆಯ ಹಬ್ಬದಂತೆ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಚರಿಸಿ ಸಹಕರಿಸಲು ಮನವಿ ಮಾಡಿದರು. 
    ನಗರಸಭೆ ಸದಸ್ಯೆ ಜಯಶೀಲ ಸುರೇಶ್, ಟ್ರಸ್ಟ್ ಗೌರವಾಧ್ಯಕ್ಷ ಎಂ. ರಾಮಕೃಷ್ಣಪ್ಪ, ಅಧ್ಯಕ್ಷ ಶಿವರಾಜ್, ಉಪಾಧ್ಯಕ್ಷ ಎನ್. ಉಮೇಶ್, ಪ್ರಧಾನ ಕಾರ್ಯದರ್ಶಿ ಕೆ. ಪರಮೇಶ್, ಖಜಾಂಚಿ ಶ್ಯಾಮ್ ಕುಮಾರ್, ಟ್ರಸ್ಟಿಗಳಾದ ಚೇತನ್ ಕುಮಾರ್, ಚಂದ್ರಶೇಖರ್, ಸಿ. ಕಾಶಿ ಹಾಗು ದೇವಸ್ಥಾನ ಪ್ರಧಾನ ಅರ್ಚಕ ಮುರುಳಿಧರ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.