Monday, March 8, 2021

ಉಕ್ಕಿನ ನಗರಕ್ಕೆ ಶೂನ್ಯ, ಉದ್ಯೋಗ ಸೃಷ್ಟಿ ಇಲ್ಲದ ಬಜೆಟ್

ಶಶಿಕುಮಾರ್ ಎಸ್ ಗೌಡ
     ಭದ್ರಾವತಿ, ಮಾ. ೮: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೋಮವಾರ ಮಂಡಿಸಿದ ೮ನೇ ಬಜೆಟ್ ತಾಲೂಕಿನ ಮಟ್ಟಿಗೆ ಶೂನ್ಯ ಬಜೆಟ್ ಆಗಿದ್ದು, ಕ್ಷೇತ್ರದ ಜನರು ಹೊಂದಿದ್ದ ಹಲವು ನಿರೀಕ್ಷೆಗಳು ಹುಸಿಯಾಗಿವೆ ಎಂದು ಬಜೆಟ್ ಕುರಿತು ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು ಟೀಕಿಸಿದ್ದಾರೆ.
     ಉಕ್ಕಿನ ನಗರಕ್ಕೆ ಶೂನ್ಯ ಕೊಡುಗೆ ಬಜೆಟ್:
   ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ಬಜೆಟ್ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿ ಪ್ರಮುಖವಾಗಿ ಎಂಪಿಎಂ ಕಾರ್ಖಾನೆ ಕುರಿತು ಯಾವುದೇ ಪ್ರಸ್ತಾಪ ಮಾಡದಿರುವುದು ಹಾಗು ಕ್ಷೇತ್ರದ ಮಟ್ಟಿಗೆ ಯಾವುದೇ ಹೊಸ ಯೋಜನೆಗಳನ್ನು ಜಾರಿಗೊಳಿಸುವ ಸಂಬಂಧ ಘೋಷಣೆ ಮಾಡಿಲ್ಲ. ೮ನೇ ಬಜೆಟ್ ಸಹ ಕ್ಷೇತ್ರಕ್ಕೆ ಶೂನ್ಯ ಕೊಡುಗೆ ನೀಡಿದೆ ಎಂದು ಟೀಕಿಸಿದ್ದಾರೆ.


ಎಚ್. ರವಿಕುಮಾರ್
        
       ಉದ್ಯೋಗ ಸೃಷ್ಟಿ ಇಲ್ಲದ ನಿರಾಶದಾಯಕ ಬಜೆಟ್:
    ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಪ್ರತಿಕ್ರಿಯಿಸಿ ಸುಮಾರು ೫ ವರ್ಷಗಳಿಂದ ಸ್ಥಗಿತಗೊಂಡಿರುವ ಮೈಸೂರು ಕಾಗದ ಕಾರ್ಖಾನೆಗೆ ಈ ಬಾರಿ ಬಜೆಟ್‌ನಲ್ಲಿ ಕನಿಷ್ಠ ಬಂಡವಾಳ ಹೂಡುವ ಮೂಲಕ ಆರಂಭಿಸಬಹುದೆಂಬ ನಿರೀಕ್ಷೆಯನ್ನು ಕಾರ್ಮಿಕ ಕುಟುಂಬಗಳು ಹೊಂದಿದ್ದವು. ಆದರೆ ನಿರೀಕ್ಷೆ ಹುಸಿಯಾಗಿದೆ. ಅಲ್ಲದೆ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸುವ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ. ಅದರಲ್ಲೂ ಯುವ  ಸಮುದಾಯದ ಪಾಲಿಗೆ ಈ ಬಾರಿ ಬಜೆಟ್ ನಿರಾಶದಾಯಕ ಬಜೆಟ್ ಆಗಿದೆ ಎಂದು ಟೀಕಿಸಿದ್ದಾರೆ.



ಬಿ.ಎನ್ ರಾಜು

      ಅಂಬೇಡ್ಕರ್ ಭವನ ಕಾಮಗಾರಿಗೆ ಅನುದಾನ ನೀಡದ ಬಜೆಟ್:
   ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಬಜೆಟ್ ಕುರಿತು ಪ್ರತಿಕ್ರಿಯಿಸಿ ನಗರದಲ್ಲಿ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ಕಾಮಗಾರಿಗೆ ಈ ಬಜೆಟ್‌ನಲ್ಲಿ ಹಣ ಬಿಡುಗಡೆಗೊಳಿಸುವಂತೆ ಹಲವಾರು ಹೋರಾಟ ನಡೆಸಲಾಗಿತ್ತು. ಅಲ್ಲದೆ ತಾಲೂಕು ಆಡಳಿತ, ಜಿಲ್ಲಾಡಳಿತ ಹಾಗು ಮುಖ್ಯಮಂತ್ರಿಗಳಿಗೆ ಮತ್ತು ಸಂಸದರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು. ಆದರೂ ಸಹ ಹಣ ಬಿಡುಗಡೆಗೊಳಿಸಿಲ್ಲ. ಈ ಸಂಬಂಧ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.


ಡಾ.ಬಿ.ಎಂ ನಾಸಿರ್‌ಖಾನ್

        ಮಹಿಳೆಯರಿಗೆ ಹೆಚ್ಚಿನ ಆದ್ಯತೆ :
       ಬಜೆಟ್ ಕುರಿತು ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಥಮಿಕ ಡಾ.ಬಿ.ಎಂ ನಾಸಿರ್‌ಖಾನ್ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಸೋಮವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಂಡಿಸಿರುವ ಬಜೆಟ್‌ನಲ್ಲಿ ಈ ಬಾರಿ ಮಹಿಳೆಯರಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿರುವುದು ವಿಶೇಷವಾಗಿದೆ. ಆದರೆ ರೈತರು, ಕಾರ್ಮಿಕರು, ಸರ್ಕಾರಿ ನೌಕರರು ಹಾಗು ಶ್ರೀಸಾಮಾನ್ಯರ ಹಲವು ನಿರೀಕ್ಷೆಗಳು ಬಜೆಟ್‌ನಲ್ಲಿ ಹುಸಿಯಾಗಿವೆ. ಈ ನಡುವೆಯೂ ಕೊರೋನಾ ಸಂಕಷ್ಟದಲ್ಲೂ ಎಲ್ಲರನ್ನು ಸಂತೃಪ್ತಿಪಡಿಸುವ ಬಜೆಟ್ ಮಂಡಿಸುವಲ್ಲಿ ಮುಖ್ಯಮಂತ್ರಿಗಳು ಯಶಸ್ವಿಯಾಗಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಐಎಸ್‌ಎಲ್ ಸೇರಿದಂತೆ ವಿವಿಧೆಡೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಕರ್ನಾಟಕ ಜನಶಕ್ತಿ ಅಂಗ ಸಂಸ್ಥೆ 'ಮಹಿಳಾ ಮುನ್ನಡೆ' ವತಿಯಿಂದ ಅಂತರಾಷ್ಟ್ರಿಯ ಮಹಿಳಾ ದಿನಾಚರಣೆ ಭದ್ರಾವತಿ ಜನ್ನಾಪುರ ಎನ್‌ಟಿಬಿ ಕಚೇರಿ ರಸ್ತೆಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯಿತು.
   ಭದ್ರಾವತಿ, ಮಾ. ೮: ನಗರದ ವಿವಿಧೆಡೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸೋಮವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಿತು.
       ಮಹಿಳಾ ಮುನ್ನಡೆ'ವತಿಯಿಂದ ಮಹಿಳಾ ದಿನಾಚರಣೆ:
   ಕರ್ನಾಟಕ ಜನಶಕ್ತಿ ಅಂಗ ಸಂಸ್ಥೆ 'ಮಹಿಳಾ ಮುನ್ನಡೆ' ವತಿಯಿಂದ ಅಂತರಾಷ್ಟ್ರಿಯ ಮಹಿಳಾ ದಿನಾಚರಣೆ ಜನ್ನಾಪುರ ಎನ್‌ಟಿಬಿ ಕಚೇರಿ ರಸ್ತೆಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯಿತು.
  ನ್ಯೂಟೌನ್ ಪೊಲೀಸ್ ಠಾಣೆ  ಸಬ್‌ಇನ್ಸ್‌ಪೆಕ್ಟರ್ ಭಾರತಿ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಶ್ವೇತಾ, ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಅರಿವಳಿಕೆ ತಜ್ಞೆ ಡಾ. ಪ್ರೀತಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಿ.ಸಿ ಮಾಯಣ್ಣ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
'ಮಹಿಳಾ ಮನ್ನಡೆ' ಅಧ್ಯಕ್ಷೆ ಎನ್ ನಾಗವೇಣಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ವರಲಕ್ಷ್ಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪಾರ್ವತಿ ಸ್ವಾಗತಿಸಿ, ರೂಪಾ ವಂದಿಸಿದರು.
  ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್, ಕರ್ನಾಟಕ ಜನಸೈನ್ಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಹನುಮಮ್ಮ, ಆಮ್ ಆದ್ಮಿ ಪಾರ್ಟಿ ಪ್ರಮುಖರು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.


ಭದ್ರಾವತಿಯಲ್ಲಿ ಕೇರಳ ಸಮಾಜಂ ಮಹಿಳಾ ವಿಭಾಗಂ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ವಿತರಿಸಲಾಯಿತು.
      ಮಹಿಳಾ ದಿನಾಚರಣೆ : ರೋಗಿಗಳಿಗೆ ಬ್ರೆಡ್, ಹಣ್ಣು ವಿತರಣೆ
  ಕೇರಳ ಸಮಾಜಂ ಮಹಿಳಾ ವಿಭಾಗಂ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ವಿತರಿಸಲಾಯಿತು.
     ಮಹಿಳಾ ವಿಭಾಗಂ ಅಧ್ಯಕ್ಷೆ ವಿಜಯಲಕ್ಷ್ಮಿ, ಉಪಾಧ್ಯಕ್ಷೆ ಶೋಭ ಬಾಲಚಂದ್ರನ್, ಸಹಕಾರ್ಯದಶಿ ಎಸ್.ಎಚ್ ಕಲ್ಯಾಣಿ ಶಶಿಧರನ್, ರೇಖಾ ಚಂದ್ರಶೇಖರ್, ಸದಸ್ಯರಾದ ಶೈಲಜ ಸುರೇಶ್, ಶಾಂತ, ಸ್ವಾತಿ, ಪುಷ್ಪ ಹಾಗೂ ಕೇರಳ ಸಮಾಜಂ ಅಧ್ಯಕ್ಷ ಗಂಗಾಧರ್, ಪ್ರಧಾನP ರ್ಯದರ್ಶಿ ಜಿ. ಸುರೇಶ್, ಖಜಾಂಚಿ ಎ. ಚಂದ್ರಶೇಖರ್, ಎಸ್.ಕುಮಾರ್, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಹಿರಿಯ ವೈದ್ಯ ಡಾ. ರವೀಂದ್ರನಾಥ ಕೋಠಿ, ಡಾ. ವರ್ಷ, ಮೇರಿ ಸಿಸ್ಟರ್, ರಶ್ಮಿ ಕುಲಕರ್ಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಂತರ ನ್ಯೂಟೌನ್ ಮಾರಿಯಮ್ಮ ದೇವಸ್ಥಾನದ ಮುಂಭಾಗ ವಿವಿಧ ಕ್ರೀಡಾ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.  


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಸೋಮವಾರ ಕಾರ್ಖಾನೆ ಆಡಳಿತ ಕಛೇರಿ ಆವರಣದಲ್ಲಿರುವ ಮಹಾತ್ಮಗಾಂಧಿ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.
      ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಮಹಿಳಾ ದಿನಾಚರಣೆ:
     ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಸೋಮವಾರ ಕಾರ್ಖಾನೆ ಆಡಳಿತ ಕಛೇರಿ ಆವರಣದಲ್ಲಿರುವ ಮಹಾತ್ಮಗಾಂಧಿ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.
    ಪ್ರಭಾರಿ ಮಹಾಪ್ರಬಂಧಕ (ಸಿಬ್ಬಂದಿ ಮತ್ತು ಆಡಳಿತ), ಮಹಾಪ್ರಬಂಧಕ (ನಗರಾಳಿತ) ವಿಶ್ವನಾಥ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಅಧಿಕಾರಿಗಳ ಸಂಘದ ಅಧ್ಯಕ್ಷ ಎ.ಆರ್. ವೀರಣ್ಣ ಸೇರಿದಂತೆ ಇನ್ನಿತರರು ಕಾರ್ಯಕ್ರಮ ಉದ್ಘಾಟಿಸಿದರು.
    ನ್ಯಾಯವಾದಿ ಬಿ.ಎಸ್ ರೂಪರಾವ್ ಕಾನೂನು ಅರಿವು ಕುರಿತು ಉಪನ್ಯಾಸ ನೀಡಿದರು. ಕರಾಟೆಪಟು ಬಾಲರಾಜ್ ಮತ್ತು ಎಸ್.ಎಲ್ ವಿನೋದ್ ತಂಡದವರು ಮಹಿಳೆಯರಿಗಾಗಿ ಸ್ವಯಂ ರಕ್ಷಣೆ ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ವಿಐಎಸ್‌ಎಲ್ ಆಸ್ಪತ್ರೆ ವೈದ್ಯೆ ಡಾ. ಎಸ್. ಕವಿತಾ ಮಹಿಳೆಯರ ಆರೋಗ್ಯ ರಕ್ಷಣೆ ಹಾಗು ನೈರ್ಮಲ್ಯ ಕುರಿತು ಉಪನ್ಯಾಸ ನಡೆಸಿಕೊಟ್ಟರು.
    ಡಾ. ಎಸ್. ಕವಿತಾ, ಅಮೃತ, ಕುಸುಮ ಮತ್ತು ಚಂದ್ರಾವತಿ ತಂಡದವರು ಪ್ರಾರ್ಥಿಸಿದರು. ಮಂಜುಶ್ರೀ, ತ್ರಿವೇಣಿ, ರಮ್ಯ ಮತ್ತು ರಕ್ಷಿತ ತಂಡದವರು ಗೀ ಗೀ ಪದ ನಡೆಸಿಕೊಟ್ಟರು.
  ರಂಗೋಲೆ ಸ್ಪರ್ಧೆ ಸೇರಿದಂತೆ ಸ್ಪರ್ಧೆಗಳನ್ನು ಆಯೊಜಿಸಲಾಗಿತ್ತು. ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
   ಸಹಾಯಕ ಪ್ರಬಂಧಕಿ ಶೋಭ ನಿರೂಪಿಸಿದರು. ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕೂ ಮೊದಲು ಸೈಲ್ ಅಧ್ಯಕ್ಷೆ ಸೋಮ ಮಂಡಲ್ ಮಹಿಳಾ ಉದ್ಯೋಗಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಂವಾದ ನಡೆಸಿದರು.
      ಮಾ.೯ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ :
   ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ವತಿಯಿಂದ ಮಾ.೯ರಂದು ಬೆಳಿಗ್ಗೆ ೧೦.೩೦ಕ್ಕೆ ಹಳೇನಗರದ ವೀರಶೈವ ಸಭಾಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
     ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರೇಮಠ, ಬಿಳಿಕಿ ದಿವ್ಯ ಸಾನಿಧ್ಯ ವಹಿಸಲಿಸಲಿದ್ದು, ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಎಂ. ಸುವಾಸಿನಿ ಕಾರ್ಯಕ್ರಮ ಉದ್ಘಾಟಿಸುವರು. ಮಹಿಳಾ ಘಟಕದ ಅಧ್ಯಕ್ಷೆ ರೂಪ ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದು, ನ್ಯೂಟೌನ್ ಪೊಲೀಸ್ ಠಾಣಾಧಿಕಾರಿ ಭಾರತಿ ಶ್ರೀನಿವಾಸ್, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷೆ ಸಿದ್ದಲಿಂಗಯ್ಯ, ಜಿಲ್ಲಾ ಉಪಾಧ್ಯಕ್ಷೆ ಅಕ್ಕಮಹಾದೇವಿ ಸಿದ್ದಲಿಂಗಪ್ಪ ಮಂಡಕ್ಕಿ, ರೇಣುಕಾ ನಾಗರಾಜ್, ಬಿ.ಎಸ್ ಮಹೇಶ್‌ಕುಮಾರ್, ಆರ್.ಎಸ್ ಶೋಭ, ನಂದಿನಿ ಮಲ್ಲಿಕಾರ್ಜುನ, ಕವಿತಾ ಸುರೇಶ್, ಡಿ. ಮಂಜುಳಾ ನಂಜುಂಡಪ್ಪ, ಸೌಭಾಗ್ಯ ಆರಾಧ್ಯ ಮತ್ತು ಗೌರಮ್ಮ ಪಾಲಾಕ್ಷಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.    

ಕ್ಷೇತ್ರದಲ್ಲಿ ಪುನಃ ಶಾಂತಿ ನೆಲೆನಿಲ್ಲಲಿ : ವೀರಶೈವ ಸಮಾಜ

ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಸಮಾಜದ ಮುಖಂಡರು ಮಾತನಾಡಿದರು.
    ಭದ್ರಾವತಿ, ಮಾ. ೮: ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ತಾಲೂಕುಮಟ್ಟದ ಕಬಡ್ಡಿ ಪಂದ್ಯಾವಳಿಯ ಮುಕ್ತಾಯದ ವೇಳೆ ನಡೆದಿರುವ ಗಲಾಟೆ ಪ್ರಕರಣದ ನಂತರ ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದ್ದು, ಪುನಃ ಶಾಂತಿ ನೆಲೆನಿಲ್ಲುವ ನಿಟ್ಟಿನಲ್ಲಿ ಎಲ್ಲಾ ಪಕ್ಷದವರು, ಎಲ್ಲಾ ಸಮುದಾಯವರು ಜೊತೆ ಸೇರಿ ಮಾತುಕತೆಗೆ ಮುಂದಾಗಬೇಕೆಂದು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಕೆ.ಸಿ ವೀರಭದ್ರಪ್ಪ ಆಗ್ರಹಿಸಿದರು.
   ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಲಾಟೆ ಪ್ರಕರಣವನ್ನು ವೀರಶೈವ ಸಮಾಜ ಖಂಡಿಸುತ್ತದೆ. ಗಲಾಟೆಗೆ ಸಂಬಂಧಿಸಿದಂತೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆದರೆ ಯಾವುದೇ ಕಾರಣಕ್ಕೂ ತಪ್ಪು ಮಾಡದಿರುವವರಿಗೆ ಶಿಕ್ಷೆಯಾಗಬಾರದು. ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್‌ರವರು ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ ಇರಲಿಲ್ಲ. ಆದರೂ ಸಹ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದರು.
   ಕ್ಷೇತ್ರದ ಶಾಸಕರು ನಮ್ಮ ಸಮುದಾಯದವರೇ ಆಗಿದ್ದರೂ ಸಹ ಸದಾ ಕಾಲ ಎಲ್ಲಾ ಸಮುದಾಯದವರೊಂದಿಗೆ ಗುರುತಿಸಿಕೊಂಡಿದ್ದಾರೆ. ಎಲ್ಲರ ಪ್ರೀತಿ ವಿಶ್ವಾಸ ಗಳಿಸಿಕೊಂಡಿದ್ದಾರೆ. ಇವರ ಮೇಲೆ ಪ್ರಕರಣ ದಾಖಸಿರುವುದು ಸಮಾಜದವರಿಗೆ ನೋವುಂಟು ಮಾಡಿದೆ. ಇವರ ಮೇಲೆ ದೂರು ಕೊಟ್ಟವರು ತಕ್ಷಣ ದೂರು ಹಿಂಪಡೆದುಕೊಳ್ಳಬೇಕೆಂದು ಆಗ್ರಹಿಸಿದರು.
 ಪ್ರಸ್ತುತ ಕ್ಷೇತ್ರದಲ್ಲಿ ಎರಡು ಕಾರ್ಖಾನೆಗಳು ಮುಚ್ಚಿವೆ. ಉದ್ಯೋಗವಿಲ್ಲದೆ ಜನರು ಪರದಾಡುತ್ತಿದ್ದಾರೆ. ಈ ನಡುವೆ ಕೊರೋನಾ ಮಹಾಮಾರಿಯಿಂದ ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಈ ರೀತಿ ಘಟನೆ ನಡೆದಿರುವುದು ವಿಷಾದನೀಯ ಬೆಳವಣಿಗೆಯಾಗಿದೆ. ಕ್ಷೇತ್ರದಲ್ಲಿ ಪುನಃ ಶಾಂತಿ ನೆಲೆ ನಿಲ್ಲಬೇಕೆಂದು ಸಮಾಜ ಬಯಸುತ್ತದೆ ಎಂದರು.
      ಬಿ.ಎಸ್ ಯಡಿಯೂರಪ್ಪ, ಬಿ.ವೈರಾಘವೇಂದ್ರ ನಡೆಗೆ ಆಕ್ರೋಶ:
     ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಾಸಕರು ಹಾಗು ಸಮುದಾಯದವರನ್ನು ಬಳಸಿಕೊಳ್ಳುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರರವರ ನಡೆಗೆ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಎರೆಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎರೇಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
    ಪ್ರತಿ ಬಾರಿ ಲೋಕಸಭಾ ಚುನಾವಣೆಯಲ್ಲಿ ಶಾಸಕರ ಮೂಲಕ ಸಮುದಾಯದವರ ಮತಗಳನ್ನು ಸೆಳೆಯಲಾಗುತ್ತಿದೆ. ಇದೀಗ ಅವರ ಏಳಿಗೆಯನ್ನು ಸಹಿಸದೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ನೆಲೆ ಕಲ್ಪಿಸಿಕೊಳ್ಳಲು ಅವರನ್ನು ರಾಜಕೀಯ ಮುಗಿಸಲು ಹುನ್ನಾರ ನಡೆಸಲಾಗುತ್ತಿದೆ. ಈ ವಿಚಾರದಲ್ಲಿ ವೀರಶೈವ ಸಮಾಜ ತಟಸ್ಥವಾಗಿರುವುದು ಸರಿಯಲ್ಲ. ಇದರ ವಿರುದ್ಧ ಧ್ವನಿ ಎತ್ತಬೇಕೆಂದು ಸಮಾಜದ ಅಧ್ಯಕ್ಷರಿಗೆ ಆಗ್ರಹಿಸಿದರು.
     ಇವರ ಮಾತಿನಿಂದ ವಿಚಲಿತಗೊಂಡ ಅಧ್ಯಕ್ಷ ವೀರಭದ್ರಪ್ಪ, ಒಂದು ಕ್ಷಣ ಚಂದ್ರಶೇಖರ್ ವಿರುದ್ಧ ಹರಿಹಾಯ್ದರು. ಸಮಾಜ ಯಾರ ವಿರುದ್ಧ ಸಹ ಇಲ್ಲ. ನಮ್ಮ ಉದ್ದೇಶ ಕ್ಷೇತ್ರದಲ್ಲಿ ಪುನಃ ಶಾಂತಿ ನೆಲೆನಿಲ್ಲಬೇಕೆಂಬುದಾಗಿದೆ ಅಷ್ಟೆ ಹೊರತು ಬೇರೆ ಯಾವುದೇ ವಿಚಾರಗಳಿಲ್ಲ ಎಂದು ತಿಳಿಸಿ ಗೋಷ್ಠಿ ಮುಕ್ತಾಯಗೊಳಿಸಿದರು.
  ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸಂಜೀವಕುಮಾರ್, ಷಣ್ಮುಖಪ್ಪ, ಶಾಂತಕುಮಾರ್, ಬಸವಂತಪ್ಪ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

೭ ದಿನಗಳವರೆಗೆ ಶಾಸಕರ ಅಮಾನತು ಸರಿಯಲ್ಲ : ತಕ್ಷಣ ಅಮಾನತು ಆದೇಶ ಹಿಂಪಡೆಯಲಿ

ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೆಷನ್ ಪತ್ರಿಕಾಗೋಷ್ಠಿಯಲ್ಲಿ ಆಗ್ರಹ


ಭದ್ರಾವತಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಸೆಲ್ವರಾಜ್ ಮಾತನಾಡಿದರು.
   ಭದ್ರಾವತಿ, ಮಾ. ೮: ಕ್ಷೇತ್ರದ ಶಾಸಕರನ್ನು ೭ ದಿನಗಳವರೆಗೆ ಕಲಾಪದಿಂದ ಅಮಾನತುಗೊಳಿಸಿರುವುದು ಸರಿಯಲ್ಲ. ಇದನ್ನು ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಖಂಡಿಸುವ ಜೊತೆಗೆ ತಕ್ಷಣ ಅಮಾನತು ಆದೇಶ ಹಿಂಪಡೆಯುವಂತೆ ಒತ್ತಾಯಿಸುತ್ತದೆ ಎಂದು ಅಧ್ಯಕ್ಷ ಸೆಲ್ವರಾಜ್ ತಿಳಿಸಿದರು.
   ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕ್ಷೇತ್ರದ ಮತದಾರರು ತಮ್ಮ ಪ್ರತಿನಿಧಿಯನ್ನು ವಿಧಾನಸಭೆಗೆ ಆಯ್ಕೆಮಾಡಿ ಕಳುಹಿಸುತ್ತಾರೆ. ಶಾಸಕರು ತಮ್ಮ ಸಮಸ್ಯೆಗಳನ್ನು ತೋರ್ಪಡಿಸಿಕೊಳ್ಳುವ ಮೊದಲೇ ಅವರನ್ನು ೭ ದಿನಗಳ ಕಾಲ ಅಮಾನತು ಮಾಡಿರುವ ಕ್ರಮ ಸರಿಯಲ್ಲ. ತಪ್ಪು ನಡೆದಿರಬಹುದು, ಶಿಕ್ಷೆ ವಿಧಿಸಲಿ ಆದರೆ ೭ ದಿನಗಳವರೆಗೆ ಅಮಾನತು ಶಿಕ್ಷೆ ಸರಿಯಲ್ಲ. ಇದರಿಂದಾಗಿ ಕ್ಷೇತ್ರದ ಮತದಾರರಿಗೆ ಅನ್ಯಾಯವಾಗಿದೆ ಎಂದರು.
    ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳಲ್ಲಿ ಉದ್ಯೋಗವಿಲ್ಲದೆ ಕಾರ್ಮಿಕ ಕುಟುಂಬಗಳು ಬೀದಿಗೆ ಬಿದ್ದಿವೆ. ನಿರುದ್ಯೋಗ, ಆರ್ಥಿಕ ಸಮಸ್ಯೆಗಳು ತಲೆತೋರಿವೆ. ಈ ನಡುವೆ ಹಲವು ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬಿದ್ದಿವೆ. ಇಂತಹ ಸಂದರ್ಭದಲ್ಲಿ ೭ ದಿನಗಳವರೆಗೆ ಅಮಾನತು ಮಾಡಿರುವುದು ಸರಿಯಲ್ಲ. ಸಭಾಧ್ಯಕ್ಷರು ತಮ್ಮ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
     ವಿಧಾನಸಭೆಯಲ್ಲಿ ಶಾಸಕರು ನಡೆದುಕೊಂಡಿರುವ ರೀತಿ ಸರಿ ಇಲ್ಲದಿರಬಹುದು. ಒಬ್ಬ ಶಾಸಕರಿಗೆ ಆ ರೀತಿ ಅನ್ಯಾಯವಾದರೆ ಜನಸಾಮಾನ್ಯರ ಗತಿ ಏನೆಂಬುದನ್ನು ಚಿಂತಿಸಬೇಕಾದ ಅಗತ್ಯವಿದೆ. ಪ್ರಸ್ತುತ ಕ್ಷೇತ್ರದಲ್ಲಿ ನಡೆದಿರುವ ಅಹಿತಕರ ಘಟನೆಗಳು ಪುನಃ ಮರುಕಳುಹಿಸಬಾರದು. ಎಲ್ಲರೂ ಒಂದೆಡೆ ಸೇರಿ ಶಾಂತಿಸಭೆ ಮೂಲಕ ಸಮಸ್ಯೆಗ ಪರಿಹಾರ ಕಂಡುಕೊಳ್ಳಬೇಕೆಂದರು.  
   ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಭಾಸ್ಕರಬಾಬು, ಜಾರ್ಜ್, ಫ್ರಾನ್ಸಿಸ್, ದಾಸ್, ಡೇನಿಯಲ್ ಫಾಸ್ಟರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

೫ ದಶಕಗಳ ಮಹಿಳಾ ಶಕ್ತಿ ಅನಾವರಣ : ಇತರೆ ಸಂಘಟನೆಗಳಿಗೆ ಸ್ಪೂರ್ತಿ

ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಮಹಿಳಾ ಸೇವಾ ಸಮಾಜ.

* ಅನಂತಕುಮಾರ್
       ಭದ್ರಾವತಿ, ಮಾ. ೭: ಸಮಾಜದಲ್ಲಿ ಸಂಘಟನೆಗಳು ಬಹುಬೇಗನೆ ಹುಟ್ಟಿಕೊಳ್ಳುತ್ತವೆ. ಆದರೆ ಎಲ್ಲಾ ಸಂಘಟನೆಗಳು ಹೆಚ್ಚು ದಿನ ಅಸ್ತಿತ್ವದಲ್ಲಿರುವುದಿಲ್ಲ. ಸಂಘಟನೆಗಳನ್ನು ಮುನ್ನಡೆಸಿಕೊಂಡು ಹೋಗುವುದು ಸುಲಭದ ಕೆಲಸವಲ್ಲ. ಸಂಘಟನೆ ಕಟ್ಟಿದವರಲ್ಲಿ ಕ್ರಿಯಾಶೀಲತೆ, ಸಂಘಟನಾತ್ಮಕ ಚತುರತೆ, ಆಯಾ ಕಾಲ ಘಟ್ಟಕ್ಕೆ ತಕ್ಕಂತೆ ಹೊಂದಿಕೊಳ್ಳುವ ಮನಸ್ಥಿತಿ ಎಲ್ಲವೂ ಬಹಳ ಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಮಹಿಳೆಯರು ಸಂಘಟನೆಗಳನ್ನು ಮುನ್ನಡೆಸಿಕೊಂಡು ಹೋಗುವುದು ಎಂದರೆ ನಿಜಕ್ಕೂ ಸವಾಲಿನ ಕೆಲಸವಾಗಿದೆ. ಸುಮಾರು ೫ ದಶಕಗಳಿಗೂ ಹೆಚ್ಚು ಕಾಲದಿಂದ ಮುನ್ನಡೆಯುತ್ತಿರುವ ಹಳೇನಗರದ ಮಹಿಳಾ ಸೇವಾ ಸಮಾಜ ಇದೀಗ ನಗರದ ಇತರೆ ಮಹಿಳಾ ಸಂಘಟನೆಗಳಿಗೆ ಮಾದರಿಯಾಗಿ ಹೊರಹೊಮ್ಮಿದೆ.
     ಹೌದು..! ಸುಮಾರು ೫ ದಶಕಗಳ ಹಿಂದೆ ಕೆಲವೇ ಕೆಲವು ಮಹಿಳೆಯರು ಒಂದೆಡೆ ಸೇರಿ ಹುಟ್ಟುಹಾಕಿದ ಮಹಿಳಾ ಸಮಾಜ ಇಂದು ಬೃಹದಾಗಿ ಬೆಳೆದಿದೆ. ಅದರಲ್ಲೂ ನಗರದಲ್ಲಿ ಸುಸಜ್ಜಿತವಾದ ಸ್ವಂತ ಕಟ್ಟಡ ಹೊಂದಿರುವ ಏಕೈಕ ಮಹಿಳಾ ಸಮಾಜ ಇದಾಗಿದೆ. ಯಾವುದೇ ಆದಾಯದ ಮೂಲವಿಲ್ಲದಿದ್ದರೂ ಸಹ ಇದುವರೆಗೂ ಕ್ರಿಯಾಶೀಲವಾಗಿ ಮುನ್ನಡೆಸಿಕೊಂಡು ಬಂದಿರುವುದೇ ಈ ಮಹಿಳಾ ಸಮಾಜದ ವಿಶೇಷತೆಯಾಗಿದೆ.
     ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸ್ವಸಹಾಯ ಮಹಿಳಾ ಸಂಘಟನೆಗಳಿಗೂ ಈ ಮಹಿಳಾ ಸಂಘಟನೆಗೂ ಬಹಳಷ್ಟು ವ್ಯತ್ಯಾಸಗಳಿವೆ. ಸ್ವಸಹಾಯ ಸಂಘಟನೆಗಳಲ್ಲಿ ಆರ್ಥಿಕ ಲಾಭದ ಉದ್ದೇಶಕ್ಕಾಗಿ ಮಹಿಳೆಯರು ಒಂದೆಡೆ ಸೇರಿಕೊಳ್ಳುತ್ತಾರೆ. ಆದರೂ ಪೂರ್ಣಪ್ರಮಾನದಲ್ಲಿ ಮಹಿಳೆಯರು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಆದರೆ ಈ ಘಟನೆಯಲ್ಲಿ ಯಾವುದೇ ಆರ್ಥಿಕ ಚಟುವಟಿಕೆಗಳಿಲ್ಲದಿದ್ದರೂ ಸ್ವಯಂ ಪ್ರೇರಣೆಯಿಂದ ಮಹಿಳೆಯರು ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ.


ಭದ್ರಾವತಿ ಹಳೇನಗರದ ಮಹಿಳಾ ಸೇವಾ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು.

    ರಾಷ್ಟ್ರೀಯ ಹಬ್ಬಗಳ ಆಚರಣೆ, ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳು, ರಕ್ತದಾನ, ನೇತ್ರದಾನ ಶಿಬಿರ ಸೇರಿದಂತೆ ಇನ್ನಿತರ ಆರೋಗ್ಯ ಶಿಬಿರಗಳು, ಸ್ವಚ್ಛತೆ, ಶ್ರಮದಾನ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಲಯನ್ಸ್, ರೋಟರಿ ಕ್ಲಬ್ ಸೇರಿದಂತೆ ಇನ್ನಿತರ ಸ್ವಯಂ ಸೇವಾ ಸಂಸ್ಥೆಗಳು ಕೈಗೊಳ್ಳುವ ಸೇವಾ ಕಾರ್ಯಗಳಲ್ಲೂ ಸಹಭಾಗಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.      
   ಪ್ರಸ್ತುತ ಈ ಸಂಘಟನೆಯಲ್ಲಿ ಸುಮಾರು ೮೦ ಸದಸ್ಯರಿದ್ದು, ಬಹುತೇಕ ಸದಸ್ಯರು ಗೃಹಿಣಿಯರಾಗಿದ್ದಾರೆ.  ವೈದ್ಯರಾಗಿ, ಶಿಕ್ಷಕಿಯರಾಗಿ, ನ್ಯಾಯವಾದಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವವರು ಸಹ ಸದಸ್ಯರಾಗಿದ್ದಾರೆ. ತಮ್ಮ ದಿನನಿತ್ಯದ ಬದುಕಿನ ಒತ್ತಡದ ನಡುವೆಯೂ ಒಂದಿಷ್ಟು ಸಮಯ ಈ ಸಂಘಟನೆಗಾಗಿ ಮೀಸಲಿಟ್ಟಿದ್ದಾರೆ. ಈ ಸಂಘಟನೆಯ ಬಹುತೇಕ ಸದಸ್ಯರು ಸಂಘಟನಾತ್ಮಕ ಮನೋಭಾವನೆ ಬೆಳೆಸಿಕೊಂಡಿರುವ ಕಾರಣ ಹಾಗು ಪಾರದರ್ಶಕತೆ ಕಾಯ್ದುಕೊಂಡಿರುವ ಹಿನ್ನಲೆಯಲ್ಲಿ ಇದುವರೆಗೂ ಸಂಘಟನೆ ಮುನ್ನಡೆದುಕೊಂಡು ಬರಲು ಸಾಧ್ಯವಾಗಿದೆ ಎಂದರೆ ತಪ್ಪಾಗಲಾರದು.

'ಈ ಮಹಿಳಾ ಸೇವಾ ಸಮಾಜವನ್ನು ಇದುವರೆಗೂ ಮುನ್ನಡೆಸಿಕೊಂಡು ಬಂದಿರುವುದೇ ಹೆಚ್ಚು. ಸುಮಾರು ೨೦ಕ್ಕೂ ಅಧಿಕ ವರ್ಷದಿಂದ ಸದಸ್ಯೆಯಾಗಿದ್ದು, ಪ್ರಸ್ತುತ ಸಮಾಜದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಸುಮಾರು ೧೫ ದಿನಗಳ ಹಿಂದೆ ಸುಮಾರು ೨೦ ಲಕ್ಷ ರು. ನಗರಸಭೆ ಅನುದಾನದಲ್ಲಿ ನಿರ್ಮಾಣಗೊಂಡಿರುವ ಸಮಾಜದ ನೂತನ ಕಟ್ಟಡದ ಉದ್ಘಾಟನೆ ನಡೆದಿದ್ದು, ಮೇಲ್ಭಾಗದ ಕಟ್ಟಡಕ್ಕೆ ಸಂಸದರ ನಿಧಿಯಿಂದ ಸುಮಾರು ೩೦ ಲಕ್ಷ ರು. ಬಿಡುಗಡೆಯಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಸಹ ಆರಂಭಗೊಳ್ಳುತ್ತಿದೆ. ಈ ಸೇವಾ ಸಮಾಜದಲ್ಲಿ ಹಲವು ಒತ್ತಡಗಳ ನಡುವೆಯೂ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ.'
                                       - ಹೇಮಾವತಿ ವಿಶ್ವನಾಥ್, ಅಧ್ಯಕ್ಷರು, ಮಹಿಳಾ ಸೇವಾ ಸಮಾಜ

   ಪ್ರಸ್ತುತ ಗೌರವಾಧ್ಯಕ್ಷರಾಗಿ ವಸುಧ ಮುಕುಂದ್, ಅಧ್ಯಕ್ಷರಾಗಿ ಹೇಮಾವತಿ ವಿಶ್ವನಾಥ್, ಉಪಾಧ್ಯಕ್ಷೆಯಾಗಿ ಕಮಲಕುಮಾರಿ, ಪ್ರಧಾನ ಕಾರ್ಯದರ್ಶಿಯಾಗಿ ಶೋಭಗಂಗರಾಜ್, ಸಹಕಾರ್ಯದರ್ಶಿಯಾಗಿ ಇಂದಿರಾ ರಮೇಶ್, ಖಜಾಂಚಿ ಜಯಂತಿಶೇಟ್ ಹಾಗು ಸದಸ್ಯರಾಗಿ ಅನ್ನಪೂರ್ಣ ಸತೀಶ್, ಚಂದ್ರಕಲಾ ವರದರಾಜ್, ಶಕುಂತಲ ರವಿಕುಮಾರ್, ಭಾಗ್ಯ ನಿಜಗುಣ, ಶಾರದ ಶ್ರೀನಿವಾಸ್, ಕಮಲರಾಯ್ಕರ್ ಹಾಗು ಗೌರವ ಸಲಹೆಗಾರರಾಗಿ ಬಿ.ಎಸ್ ರೂಪರಾವ್ ಮತ್ತು ಯಶೋಧ ವೀರಭದ್ರಪ್ಪ ಸೇರಿದಂತೆ ಇನ್ನಿತರರು ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.  



Sunday, March 7, 2021

ಜಾನಕಮ್ಮ ನಿಧನ


ಜಾನಕಮ್ಮ
   ಭದ್ರಾವತಿ, ಮಾ. ೭: ನಗರದ ಹಿರಿಯ ಪತ್ರಕರ್ತ ರವೀಂದ್ರನಾಥ್(ಬ್ರದರ್‍ಸ್)ರವರ ತಾಯಿ ಜಾನಕಮ್ಮ(೯೩) ಭಾನುವಾರ ನಿಧನ ಹೊಂದಿದರು.
    ಜಾನಕಮ್ಮ ಜನ್ನಾಪುರ ಕುರುಬರ ಬೀದಿ ನಿವಾಸಿವಾಗಿದ್ದು, ೫ ಗಂಡು, ೨ ಹೆಣ್ಣು ಮಕ್ಕಳನ್ನು ಬಿಟ್ಟಗಲಿದ್ದಾರೆ. ಇವರ ಅಂತ್ಯಕ್ರಿಯೆ ಸೋಮವಾರ ಬೆಳಗ್ಗೆ ೧೧ ಗಂಟೆಗೆ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಮೃತರ ನಿಧನಕ್ಕೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.  

ವೈ. ಲೋಹಿತ್‌ಗೆ ಡಾಕ್ಟರೇಟ್ ಪದವಿ

ವೈ. ಲೋಹಿತ್
   ಭದ್ರಾವತಿ, ಮಾ. ೭: ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ವೈ. ಲೋಹಿತ್ ಕುವೆಂಪು ವಿಶ್ವವಿದ್ಯಾಲನಿಲಯದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.
   ಕುವೆಂಪು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎಸ್.ಎಂ ಪ್ರಕಾಶ್ ಮಾರ್ಗದರ್ಶನಲ್ಲಿ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ 'ಎಫಿಕೆಸಿ ಆಫ್ ಫ್ಲೈಮೆಟ್ರಿಕ್ ಟ್ರೈನಿಂಗ್ ಆನ್ ಆಕ್ವ, ಲ್ಯಾಂಡ್ ಅಂಡ್ ಸ್ಯಾಂಡ್ ಸರ್ಫೇಸಸ್' (Efficacy of Plyometric Training on Aqua, Land and Sand Surfaces)  ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.
   ಲೋಹಿತ್ ನಗರದ ಗಣೇಶ್ ಕಾಲೋನಿ ನಿವಾಸಿ, ವಿಐಎಸ್‌ಎಲ್ ನಿವೃತ್ತ ಕಾರ್ಮಿಕ, ಕಬಡ್ಡಿ ಕ್ರೀಡಾಪಟು ಯಲ್ಲೋಜಿ-ಅಂಬುಜಾ ಬಾಯಿ ದಂಪತಿ ಪುತ್ರರಾಗಿದ್ದಾರೆ. ಲೋಹಿತ್ ಸಹ ಅತ್ಯುತ್ತಮ ವಾಲಿಬಾಲ್ ಕ್ರೀಡಾಪುಟ ಆಗಿದ್ದು, ಕುವೆಂಪು ವಿ.ವಿ ಕ್ರೀಡಾಕೂಟ ಹಾಗು ರಾಜ್ಯಮಟ್ಟದ ಪಂದ್ಯಾವಳಿಗಳನ್ನು ಪ್ರತಿನಿಧಿಸಿದ್ದಾರೆ.