Monday, August 7, 2023

ಬಿಜೆಪಿ, ಸಂಘ ಪರಿವಾರದಿಂದ ಕೋಮು ದ್ವೇಷ : ಆರೋಪ

ಕಠಿಣ ಕ್ರಮಕ್ಕೆ ಎಸ್‌ಡಿಪಿಐ ಆಗ್ರಹ

ಭದ್ರಾವತಿಯಲ್ಲಿ ಸೋಷಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ(ಎಸ್‌ಡಿಪಿಐ)  ವತಿಯಿಂದ ಸೋಮವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಆ. 7 : ಸಂಘ ಪರಿವಾರ ಹರಡಿದ ದ್ವೇಷದ ನಂಜು ದೇಶಕ್ಕೆ ಹಬ್ಬಿದೆ. ಮತೀಯ ಹಿಂಸಾಚಾರ, ಜನಾಂಗೀಯ ಕಲಹ, ಕೋಮು ದ್ವೇಷ ದೇಶವನ್ನು ಹೊತ್ತಿ ಉರಿಸುತ್ತಿದೆ ಎಂದು ಸೋಷಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ(ಎಸ್‌ಡಿಪಿಐ) ಮುಖಂಡರು ಆರೋಪಿಸಿದರು.
    ಸೋಮವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡಿದ ಮುಖಂಡರು, ದಕ್ಷಿಣ ಕನ್ನಡದಲ್ಲಿ ಆ.5ರಂದು ಸಂಘ ಪರಿವಾರ ಹರಡಿದ ದ್ವೇಷದ ನಂಜಿನ ಪರಿಣಾಮ ಇಡೀ ದೇಶವೇ ಹೊತ್ತಿ ಉರಿಯುತ್ತಿದೆ. ಮಣಿಪುರದಲ್ಲಿ ಜನಾಂಗೀಯ ಕಲಹ, ಹರಿಯಾಣದಲ್ಲಿ ಕೋಮು ಗಲಭೆ, ಮಹಾರಾಷ್ಟ್ರದಲ್ಲಿ ಕೋಮು ದ್ವೇಷಕ್ಕೆ ರೈಲಿನಲ್ಲಿ ಅಮಾಯಕರ ಬಲಿ ಸೇರಿದಂತೆ ದೇಶದ ನಾನಾ ಭಾಗಗಲ್ಲಿ ಹಿಂಸಾಚಾರ ಹಬ್ಬಿಕೊಂಡಿದೆ. ಇಂತಹ ಸನ್ನಿವೇಶಕ್ಕೆ ಕಾರಣವಾದ ಬಿಜೆಪಿ ಮತ್ತು ಸಂಘ ಪರಿವಾರದ ದ್ವೇಷದ ರಾಜಕಾರಣವನ್ನು ಖಂಡಿಸುತ್ತೇವೆ ಎಂದರು.
    ಸರ್ಕಾರ ತಕ್ಷಣ ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳುಹಿಸದಂತೆ ಎಚ್ಚರ ವಹಿಸುವಂತೆ ಆಗ್ರಹಿಸಿದರು.
    ತಾಲೂಕು ಅಧ್ಯಕ್ಷ ಎಂ.ಡಿ ಗೌಸ್‌, ಜಿಲ್ಲಾ ಕಾರ್ಯದರ್ಶಿ ಎಂ.ಡಿ ಕಲೀಂಮುಲ್ಲಾ, ಜಿಲ್ಲಾ ಉಪಾಧ್ಯಕ್ಷ ದೇವೇಂದ್ರ ಪಾಟೀಲ್‌, ತಾಲೂಕು ಉಪಾಧ್ಯಕ್ಷ ಎಂ.ಡಿ ತಾಹೀರ್‌  ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಅಮಲೋದ್ಭವಿ ಮಾತೆ ದೇವಾಲಯದ ಆವರಣದಲ್ಲಿ ಕೊಳವೆ ಬಾವಿ ಕಾಮಗಾರಿಗೆ ಚಾಲನೆ

ಭದ್ರಾವತಿ ನ್ಯೂಟೌನ್‌ ಅಮಲೋದ್ಭವಿ ಮಾತೆ ದೇವಾಲಯದ ಆವರಣದಲ್ಲಿ ಕೊಳವೆ ಬಾವಿ ಕಾಮಗಾರಿಗೆ ಸೋಮವಾರ ಮೇರಿ ಇಮ್ಯಾಕ್ಯುಲೇಟ್‌ ಚರ್ಚ್‌ ಧರ್ಮಗುರು ಫಾದರ್‌ ಲ್ಯಾನ್ಸಿ ಡಿಸೋಜಾ ದಿವ್ಯ ಸಾನಿಧ್ಯದಲ್ಲಿ ಚಾಲನೆ ನೀಡಲಾಯಿತು.
    ಭದ್ರಾವತಿ, ಆ. 7 : ನ್ಯೂಟೌನ್‌ ಅಮಲೋದ್ಭವಿ ಮಾತೆ ದೇವಾಲಯದ ಆವರಣದಲ್ಲಿ ಕೊಳವೆ ಬಾವಿ ಕಾಮಗಾರಿಗೆ ಸೋಮವಾರ ಮೇರಿ ಇಮ್ಯಾಕ್ಯುಲೇಟ್‌ ಚರ್ಚ್‌ ಧರ್ಮಗುರು ಫಾದರ್‌ ಲ್ಯಾನ್ಸಿ ಡಿಸೋಜಾ ದಿವ್ಯ ಸಾನಿಧ್ಯದಲ್ಲಿ ಚಾಲನೆ ನೀಡಲಾಯಿತು.
    ದೇವಾಲಯದಲ್ಲಿ ಕೊಳವೆ ಬಾವಿ ಅಗತ್ಯವಿದ್ದು,  ಮಂಜೂರಾತಿ ಮಾಡಿಸಿಕೊಡುವಂತೆ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಗಿತ್ತು.  ಮನವಿಗೆ ಪೂರಕವಾಗಿ ಸ್ಪಂದಿಸಿದ ಶಾಸಕರು ನಗರಸಭೆ ವತಿಯಿಂದ ಕೊಳವೆ ಬಾವಿ ಮಂಜೂರಾತಿ ಮಾಡಿಸಿ ಕೊಟ್ಟಿದ್ದು,  ಕಾಮಗಾರಿಗೆ ಚಾಲನೆ ನೀಡಲಾಯಿತು.
    ದೇವಾಲಯದ ಪಾಲನಾ ಪರಿಷತ್ ಕಾರ್ಯದರ್ಶಿ ಅಂತೋನಿ ವಿಲ್ಸನ್ ಕೊಳವೆ ಬಾವಿ ಮಂಜೂರಾತಿಗೆ ಕಾರಣಕರ್ತರಾದ ಶಾಸಕ  ಬಿ. ಕೆ. ಸಂಗಮೇಶ್ವರ, ನಗರಸಭಾ ಸದಸ್ಯರಾದ  ಬಿ. ಕೆ. ಮೋಹನ್  ಹಾಗೂ  ಜಾರ್ಜ್ ರವರಿಗೆ ಧರ್ಮಕೇಂದ್ರದ ಗುರುಗಳ  ಹಾಗೂ ಸಮಸ್ತ ಭಕ್ತಾದಿಗಳ ಪರವಾಗಿ ಕೃತಜ್ಞತೆ ಸಲ್ಲಿಸಿದರು.
    ನಗರಸಭೆ ಅಧ್ಯಕ್ಷೆ ಶೃತಿ ವಸಂತ್ ಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ,  ಸದಸ್ಯರಾದ ಲತಾ ಚಂದ್ರಶೇಖರ್, ಆರ್. ಮೋಹನ್ ಕುಮಾರ್, ಸೇಂಟ್ ಚಾರ್ಲ್ಸ್ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಜೆಸಿಂತಾ, ಸಿಸ್ಟರ್ ಆಡ್ಲಿನ್, ಆರ್ಥಿಕ ಸಮಿತಿ ಕಾರ್ಯದರ್ಶಿ ಪಾಟ್ರಿಕ್, ವೀನ್ಸoಟ್ ದೆ ಪಾಲ್ ಅಧ್ಯಕ್ಷ  ಅಲ್ವಿನ್, ಪೀಟರ್, ಡೇವಿಡ್,  ಸೆಲಿನ್ ಮತ್ತು  ಮೇರಿ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೃಷಿಕ ನಂಜೇಗೌಡ ನಿಧನ

ನಂಜೇಗೌಡ
    ಭದ್ರಾವತಿ, ಆ. 7: ಕಾಗದನಗರ 6ನೇ ವಾರ್ಡ್‌ ನಿವಾಸಿ, ಕೃಷಿಕ ನಂಜೇಗೌಡ(90) ಸೋಮವಾರ ನಿಧನ ಹೊಂದಿದರು.
    ಪತ್ನಿ, ಪುತ್ರ ಎಂಪಿಎಂ ಪಿ.ಯು ಕಾಲೇಜಿನ ಕ್ಲರ್ಕ್‌ ಶಂಕರಲಿಂಗ ಹಾಗು ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ಬುಳ್ಳಾಪುರ ಬಾಳೆಮಾರನಹಳ್ಳಿ ರಸ್ತೆಯಲ್ಲಿರುವ ಶ್ರೀ ಸತ್ಯಹರಿಶ್ಚಂದ್ರ ಹಿಂದೂ ಭೂಮಿಯಲ್ಲಿ ಮಂಗಳವಾರ ನಡೆಯಲಿದೆ.

ವಸಂತ ರಾಜ್ ನಿಧನ

ವಸಂತರಾಜ್‌ ನಿಧನ
    ಭದ್ರಾವತಿ, ಆ. 7 : ವಿಐಎಸ್‌ಎಲ್ ಕಾರ್ಖಾನೆಯ ನಿವೃತ್ತ ಉದ್ಯೋಗಿ ವಸಂತ ರಾಜ್(೮೩) ನಿಧನ ಹೊಂದಿದರು.
    ಪತ್ನಿ ಸಂಗೀತ ಶಿಕ್ಷಕಿ ವಿಶಾಲಾಕ್ಷಿ, ಪುತ್ರ ಹಾಗು ಪುತ್ರಿ ಇದ್ದಾರೆ. ಇತ್ತೀಚೆಗೆ ಬೆಂಗಳೂರಿನ ಅವರ ಮಗಳ ಮನೆಯಲ್ಲಿ ವಾಸವಾಗಿದ್ದರು. ಇವರ ನಿಧನಕ್ಕೆ  ಮಹಿಳಾ ಸೇವಾ ಸಮಾಜ ಸಂತಾಪ ಸೂಚಿಸಿದೆ.

Sunday, August 6, 2023

ಪುರಸಭೆ ಮಾಜಿ ಸದಸ್ಯ ಟಿ.ವಿ ಗೋವಿಂದಸ್ವಾಮಿ ನಿಧನ

ಟಿ.ವಿ ಗೋವಿಂದಸ್ವಾಮಿ
    ಭದ್ರಾವತಿ, ಆ. 6 : ಹಳೇನಗರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ರಥ ಬೀದಿ ರಸ್ತೆ ನಿವಾಸಿ, ಪುರಸಭೆ ಮಾಜಿ ಸದಸ್ಯ ಟಿ.ವಿ ಗೋವಿಂದಸ್ವಾಮಿ(70) ಭಾನುವಾರ ನಿಧನ ಹೊಂದಿದರು.
    ಪತ್ನಿ, ಇಬ್ಬರು ಪುತ್ರಿ ಹಾಗು ಇಬ್ಬರು ಪುತ್ರರು ಇದ್ದಾರೆ. ಗೋವಿಂದಸ್ವಾಮಿ ಬೆಂಗಳೂರಿನಲ್ಲಿ ನಿಧನ ಹೊಂದಿದ್ದು, ಸೋಮವಾರ ಇವರ ಅಂತ್ಯಕ್ರಿಯೆ ನಡೆಯಲಿದೆ.
    ಗೋವಿಂದಸ್ವಾಮಿ ಹಿರಿಯ ಕಾಂಗ್ರೆಸ್‌ ಮುಖಂಡರಾಗಿದ್ದು, 2 ಬಾರಿ ಪುರಸಭೆ ಸದಸ್ಯರಾಗಿ, ಒಂದು ಬಾರಿ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಬಲಿಜ ಸಮಾಜದ ಮುಖಂಡರಾಗಿ ಸಹ ಗುರುತಿಸಿಕೊಂಡಿದ್ದರು.
    ಇವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್‌, ಕಾಂಗ್ರೆಸ್‌ ಪಕ್ಷದ ಮುಖಂಡರು, ಜಲಿಜ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ಪಾರ್ವತಿ ಇಂಜಿನಿಯರಿಂಗ್‌ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ

ಕಾಂಗ್ರೆಸ್‌ ಪಕ್ಷದಿಂದ ಸನ್ಮಾನ, ಅಭಿನಂದನೆ

ಭದ್ರಾವತಿ ಜನ್ನಾಪುರ ನಿವಾಸಿ ಜ್ಯೋತಿ ಎಸ್ ಸಾಲೇರ-ಐಶ್ವರ್ಯ ದಂಪತಿ ಪುತ್ರಿ  ಪಾರ್ವತಿ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಭದ್ರಾವತಿಗೆ ಕೀರ್ತಿ ತಂದಿದ್ದು, ಇವರನ್ನು ಭಾನುವಾರ ಕಾಂಗ್ರೆಸ್‌ ಪಕ್ಷದ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್‌ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಆ. ೬: ಜನ್ನಾಪುರ ನಿವಾಸಿ ಜ್ಯೋತಿ ಎಸ್ ಸಾಲೇರ-ಐಶ್ವರ್ಯ ದಂಪತಿ ಪುತ್ರಿ  ಪಾರ್ವತಿ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಭದ್ರಾವತಿಗೆ ಕೀರ್ತಿ ತಂದಿದ್ದು, ಇವರನ್ನು ಭಾನುವಾರ ಕಾಂಗ್ರೆಸ್‌ ಪಕ್ಷದ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್‌ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
    ಬ್ಲಾಕ್‌ ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್‌ ನೇತೃತ್ವದಲ್ಲಿ ಪಾರ್ವತಿಯವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.  ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಂತೋನಿ ವಿಲ್ಸನ್, ಮುಖಂಡರಾದ ದೇವು, ನಾಗರಾಜ್‌, ಸೈಯದ್‌  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ವಿಶೇಷ ಎಂದರೆ ಪಾರ್ವತಿಯವರು ಕ್ಷೇತ್ರದ ಮಾಜಿ ಶಾಸಕ ದಿವಂಗತ ಸಾಲೇರ ಸಿದ್ದಪ್ಪನವರ ಮೊಮ್ಮಗಳು. ಇವರಿಗೆ ವಿವಿಧ ಸಂಘ-ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಗಣ್ಯರು ಅಭಿನಂದಿಸಿದ್ದಾರೆ.

Saturday, August 5, 2023

ಪಿಎಸ್‌ಟಿ ಶಿಕ್ಷಕರ ಅನ್ಯಾಯ ಸರಿಪಡಿಸಿ : ಮನವಿ

ಪಿಎಸ್‌ಟಿ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ  ಸರಿಪಡಿಸುವಂತೆ ಒತ್ತಾಯಿಸಿ ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಹಿತ ರಕ್ಷಣಾ ವೇದಿಕೆ ಭದ್ರಾವತಿ ತಾಲೂಕು ಶಾಖೆ ವತಿಯಿಂದ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
     ಭದ್ರಾವತಿ, ಆ. ೬: ಪಿಎಸ್‌ಟಿ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ  ಸರಿಪಡಿಸುವಂತೆ ಒತ್ತಾಯಿಸಿ ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಹಿತ ರಕ್ಷಣಾ ವೇದಿಕೆ ತಾಲೂಕು ಶಾಖೆ ವತಿಯಿಂದ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 
ತಾಲೂಕಿನ ಪಿಎಸ್‌ಟಿ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ನಿಕಟ ಪೂರ್ವ ಸಿಆರ್‌ಪಿ ನಾಗರತ್ನಮ್ಮ, ಸಾಮಿತ್ರಿ ಬಾಯಿ ಪುಲೆ ಸಂಘದ ತಾಲೂಕು ಅಧ್ಯಕ್ಷೆ ಜೇನಮ್ಮ, ಹುಣಸೇಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಮಂಜುಳಮ್ಮ, ಸಿದ್ದಾಪುರ ತಾಂಡ ಸರ್ಕಾರಿ ಹಿರಿಯ ಪ್ರಾಥಮಿ ಶಾಲೆಯ ಡಿ. ಯಲ್ಲಪ್ಪ, ರುದ್ರೇಶ್‌, ಶಿವಕುಮಾರ ಸ್ವಾಮಿ ಸೇರಿದಂತೆ ಇನ್ನಿತರರ ನೇತೃತ್ವದಲ್ಲಿ  ಪ್ರತಿಭಟನೆ ನಡೆಸಿ  ತಮಗೆ ಆಗುತ್ತಿರುವ ಅನ್ಯಾಯ ತೋರ್ಪಡಿಸಿಕೊಂಡರು. 
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮ ೨೦೧೭, ತಿದ್ದುಪಡಿ ನಿಯಮ ೨೦೨೧ರಲ್ಲಿ ಆಗಿರುವ ಸಾಮಾಜಿಕ ತಾರತಮ್ಯ ಹಾಗು ಅನ್ಯಾಯಗಳನ್ನು ಸರಿಪಡಿಸಲು ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪುನರ್‌ ರಚಿಸುವಂತೆ ಕೋರಿದರು. 
ಮನವಿ ಸ್ವೀಕರಿಸಿದ  ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮನವಿಯನ್ನು ಮೇಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದರು.