Tuesday, December 3, 2024

ಅಮಲಾಮಾತಾ ಆಸ್ಪತ್ರೆಗೆ ಬೆಂಕಿ ನಂದಿಸುವ ಉಪಕರಣ ವಿತರಣೆ

ಎನ್‌ಎಸ್‌ಯುಐ ವತಿಯಿಂದ ಭದ್ರಾವತಿ ಹಿರಿಯೂರು ಹಾಗು ಸಿಂಗನಮನೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಿರಿಯೂರಿನ ಅಮಲಾಮಾತಾ ಆಸ್ಪತ್ರೆಗೆ ತುರ್ತು ಸಂದರ್ಭದಲ್ಲಿ ನೆರವಾಗಲು ಬೆಂಕಿ ನಂದಿಸುವ ಉಪಕರಣ ಉಚಿತವಾಗಿ ವಿತರಿಸಲಾಯಿತು. 
    ಭದ್ರಾವತಿ : ಎನ್‌ಎಸ್‌ಯುಐ ವತಿಯಿಂದ ಹಿರಿಯೂರು ಹಾಗು ಸಿಂಗನಮನೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಿರಿಯೂರಿನ ಅಮಲಾಮಾತಾ ಆಸ್ಪತ್ರೆಗೆ ತುರ್ತು ಸಂದರ್ಭದಲ್ಲಿ ನೆರವಾಗಲು ಬೆಂಕಿ ನಂದಿಸುವ ಉಪಕರಣ ಉಚಿತವಾಗಿ ವಿತರಿಸಲಾಯಿತು. 
    ಅಮಲಾಮಾತಾ ಆಸ್ಪತ್ರೆಗೆ ಪ್ರತಿದಿನ ರೋಗಿಗಳು ಹಾಗು ಅವರ ಕುಟುಂಬಸ್ಥರು ಸೇರಿದಂತೆ ಸಾವಿರಾರು ಮಂದಿ ಆಗಮಿಸುತ್ತಿದ್ದು, ಅಲ್ಲದೆ ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರು ಹಾಗು ಸಿಬ್ಬಂದಿ ವರ್ಗದವರು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ ಬೆಂಕಿ ನಂದಿಸುವ ಉಪಕರಣ ಇಲ್ಲದಿರುವುದನ್ನು ಮನಗಂಡು ತುರ್ತು ಸಂದರ್ಭದಲ್ಲಿ ನೆರವಾಗಲು ಬೆಂಕಿ ನಂದಿಸುವ ಉಪಕರಣ ವಿತರಿಸುವ ಮೂಲಕ ಸದ್ಬಳಕೆ ಮಾಡಿಕೊಳ್ಳುವಂತೆ ಕೋರಲಾಯಿತು. 
    ಅಮಲಾಮಾತಾ ಆಸ್ಪತ್ರೆಯ ವ್ಯವಸ್ಥಾಪಕಿ ಡಾ. ಮೇರಿ ಹಾಗೂ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಸದಸ್ಯ ವೀರೇಶ್, ಎನ್‌ಎಸ್‌ಯುಐ ಗೌರವ ಅಧ್ಯಕ್ಷ ಮುರುಗೇಶ್, ಉಪಾಧ್ಯಕ್ಷ ಗಂಗಾಧರ್ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

Monday, December 2, 2024

ಗ್ರೇಡ್-೧ ತಹಸೀಲ್ದಾರ್ ಕೆ.ಆರ್ ನಾಗರಾಜು ವರ್ಗಾವಣೆ : ಅಭಿನಂದನೆ

ಭದ್ರಾವತಿ ತಾಲೂಕು ದಂಡಾಧಿಕಾರಿಯಾಗಿ ಕಳೆದ ಸುಮಾರು ೧ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರೇಡ್-೧ ತಹಸೀಲ್ದಾರ್ ಕೆ.ಆರ್ ನಾಗರಾಜು ಶಿವಮೊಗ್ಗಕ್ಕೆ ವರ್ಗಾವಣೆಗೊಂಡಿದ್ದು, ಇವರನ್ನು ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಅಭಿನಂದಿಸಲಾಯಿತು. 
    ಭದ್ರಾವತಿ: ತಾಲೂಕು ದಂಡಾಧಿಕಾರಿಯಾಗಿ ಕಳೆದ ಸುಮಾರು ೧ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರೇಡ್-೧ ತಹಸೀಲ್ದಾರ್ ಕೆ.ಆರ್ ನಾಗರಾಜು ಶಿವಮೊಗ್ಗಕ್ಕೆ ವರ್ಗಾವಣೆಗೊಂಡಿದ್ದು, ಇವರನ್ನು ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಅಭಿನಂದಿಸಲಾಯಿತು. 
    ಕಳೆದ ಕೆಲವು ದಿನಗಳ ಹಿಂದೆ ಇವರ ವರ್ಗಾವಣೆ ಆದೇಶ ಹೊರಬಿದ್ದಿದ್ದು, ಈ ಹಿನ್ನಲೆಯಲ್ಲಿ ಇವರನ್ನು ಸಮಿತಿ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವದಲ್ಲಿ ತಹಸೀಲ್ದಾರ್ ಕಛೇರಿಗೆ ತೆರಳಿ ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು. ಡಿಎಸ್‌ಎಸ್ ಮುಖಂಡ ಈಶ್ವರಪ್ಪ ಹಾಗು ಸಮಿತಿ ಪ್ರಮುಖರು ಉಪಸ್ಥಿತರಿದ್ದರು. 
    ತಾಲೂಕು ಕಛೇರಿಯಲ್ಲಿ ಗ್ರೇಡ್-೨ ತಹಸೀಲ್ದಾರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಂಗಮ್ಮ ಅವರಿಂದ ತೆರವಾದ ಹುದ್ದೆ ಕೆಲವು ತಿಂಗಳುಗಳಿಂದ ಖಾಲಿ ಇದ್ದು, ಈ ಹುದ್ದೆಗೆ ಇದೀಗ ಸರ್ಕಾರ ಹೊಸದಾಗಿ ಗ್ರೇಡ್-೨ ತಹಸೀಲ್ದಾರ್ ನೇಮಕಗೊಳಿಸಿ ಆದೇಶ ಹೊರಡಿಸಿದೆ. 

ವಿಐಎಸ್‌ಎಲ್ ನಿವೃತ್ತ ನೌಕರ ಮಹಾದೇವಪ್ಪ ನಿಧನ

ಮಹಾದೇವಪ್ಪ 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರ ಮಹಾದೇವಪ್ಪ(೭೩) ನಿಧನ ಹೊಂದಿದರು. 
    ಪತ್ನಿ, ೩ ಗಂಡು, ೨ ಹೆಣ್ಣು ಮಕ್ಕಳು ಇದ್ದಾರೆ. ಇವರ ಅಂತ್ಯಸಂಸ್ಕಾರ ಶಿಕಾರಿಪುರ ತಾಲೂಕಿನ ಕವಲಿ ಗ್ರಾಮದಲ್ಲಿ ಸೋಮವಾರ ನೆರವೇರಿತು. ಮಹಾದೇವಪ್ಪರವರು ವಿಐಎಸ್‌ಎಲ್ ಕಾರ್ಖಾನೆ ಕ್ಯಾಂಟೀನ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ನಿಧನಕ್ಕೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರ ಸಂತಾಪ ಸೂಚಿಸಿದೆ. 

ಕೃಷ್ಣಾಜಿ ರಾವ್ ನಿಧನ

ಕೃಷ್ಣಾಜಿ ರಾವ್ 
    ಭದ್ರಾವತಿ: ತಾಲೂಕಿನ ತಡಸ ಗ್ರಾಮದ ನಿವಾಸಿ, ಮರಾಠ ಸಮಾಜದ ಮುಖಂಡರಾದ ಕೃಷ್ಣಾಜಿ ರಾವ್ ನಿಧನ ಹೊಂದಿದರು. 
    ಇವರ ಅಂತ್ಯಕ್ರಿಯೆ ತಡಸ ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ಸೋಮವಾರ ಸಂಜೆ ನೆರವೇರಿತು. ಕೃಷ್ಣಾಜಿ ರಾವ್‌ರವರು ಶಿವಮೊಗ್ಗ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಸಂಘದ ನಿರ್ದೇಶಕ ಟಿ.ಕೆ ರಮೇಶ್‌ರವರ ತಂದೆಯಾಗಿದ್ದಾರೆ. ಇವರ ನಿಧನಕ್ಕೆ ಮರಾಠ ಸಮಾಜದ ಪ್ರಮುಖರು, ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ. 

೧ ಕಳವು ಪ್ರಕರಣ ಬೇಧಿಸಿ ೧೦ ದ್ವಿಚಕ್ರ ವಾಹನ ಪತ್ತೆ : ಇಬ್ಬರ ಸೆರೆ

ನ್ಯೂಟೌನ್ ಪೊಲೀಸರ ಕಾರ್ಯಾಚರಣೆ : ಜಿಲ್ಲಾ ರಕ್ಷಣಾಧಿಕಾರಿ ಪ್ರಶಂಸೆ 

ದ್ವಿಚಕ್ರ ವಾಹನ ಕಳವು ಪ್ರಕರಣವೊಂದನ್ನು ಬೇಧಿಸಿದ ಭದ್ರಾವತಿ ನಗರದ ನ್ಯೂಟೌನ್ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ ಕಳವು ಮಾಡಲಾಗಿದ್ದ ೧೦ ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡಿರುವ ಘಟನೆ ನಡೆದಿದೆ. 
    ಭದ್ರಾವತಿ: ದ್ವಿಚಕ್ರ ವಾಹನ ಕಳವು ಪ್ರಕರಣವೊಂದನ್ನು ಬೇಧಿಸಿದ ನಗರದ ನ್ಯೂಟೌನ್ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ ಕಳವು ಮಾಡಲಾಗಿದ್ದ ೧೦ ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡಿರುವ ಘಟನೆ ನಡೆದಿದೆ. 
    ಜೂ.೪ ರಂದು ಅಂತರಗಂಗೆ ವಾಸಿ ಎಸ್. ಷಣ್ಮುಖಪ್ಪ(೬೦) ತಮ್ಮ ಬಜಾಜ್ ಸಿ.ಟಿ-೧೦೦ ದ್ವಿಚಕ್ರ ವಾಹನ ನಗರದ ಬಿಳಕಿ ಕ್ರಾಸ್ ಹತ್ತಿರ ರೇಣುಕಾಂಬ ರೆಸ್ಟೋರೆಂಟ್ ಮುಂದೆ ನಿಲ್ಲಿಸಿದ್ದು, ಪುನಃ ಕೆಲಸ ಮುಗುಸಿಕೊಂಡು ಬಂದಾಗ ಅವರ ವಾಹನ ಕಳವು ಮಾಡಲಾಗಿತ್ತು. ಪ್ರಕರಣ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 
    ಪ್ರಕರಣ ಪತ್ತೆಗಾಗಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ ಮತ್ತು ಎ.ಜಿ ಕಾರಿಯಪ್ಪರವರ ಮಾರ್ಗದರ್ಶನದಲ್ಲಿ, ಉಪ ಪೊಲೀಸ್ ಆಧೀಕ್ಷಕ ಕೆ.ಆರ್ ನಾಗರಾಜುರವರ ಮೇಲ್ವಿಚಾರಣೆ ಯಲ್ಲಿ, ನಗರ ವೃತ್ತ ನಿರೀಕ್ಷಕ  ಶ್ರೀಶೈಲ ಕುಮಾರ್ ನೇತೃತ್ವದಲ್ಲಿ ಠಾಣಾ ಉಪ ನಿರೀಕ್ಷಕ ಟಿ. ರಮೇಶ ಮತ್ತು ಸಹಾಯಕ ಠಾಣಾ ಉಪ ನಿರೀಕ್ಷಕ ಟಿ.ಪಿ ಮಂಜಪ್ಪ ಹಾಗೂ ಸಿಬ್ಬಂದಿಗಳಾದ ನವೀನ, ಪ್ರಸನ್ನ ಮತ್ತು ಬಿ.ಎಂ ರಘುರವರನ್ನೊಳಗೊಂಡ ತನಿಖಾ ತಂಡ ರಚಿಸಲಾಗಿತ್ತು. 
    ತನಿಖಾ ತಂಡ ನ.೨೮ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು, ಕೋಟೆ ಅಗ್ರಹಾರ ವೃತ್ತ, ಸುಗ್ಗಿಹಳ್ಳಿ ಹತ್ತಿರದ ನಿವಾಸಿ ಎಲೆಕ್ಟ್ರಿಷಿಯನ್ ಕೆಲಸ ಮಾಡುವ ಎಂ.ಬಿ ನವೀನ ಕುಮಾರ್(೩೨) ಹಾಗು ತಾಲೂಕಿನ ವೀರಾಪುರ ಗ್ರಾಮ ಬಸ್ ನಿಲ್ದಾಣ ಎದುರಿನ ಗುಜರಿ ವ್ಯಾಪಾರಿ ಉಮ್ಮರ್ ಬೇಗ್(೨೬) ಅವರನ್ನು ಬಂಧಿಸಲಾಗಿದೆ. 
    ಈ ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ ನವೀನ ಈತನು ನಗರ ವ್ಯಾಪ್ತಿಯಲ್ಲಿ ಒಟ್ಟು ೧೦ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದು, ಅದರಲ್ಲಿ ೭ ದ್ವಿಚಕ್ರ ವಾಹನಗಳನ್ನು ಗುಜುರಿ ವ್ಯಾಪಾರಿ ಉಮ್ಮರ್ ಬೇಗ್‌ಗೆ ಮಾರಾಟ ಮಾಡಿರುವುದು ತಿಳಿದು ಬಂದಿರುತ್ತದೆ.   
    ನ್ಯೂಟೌನ್ ಪೊಲೀಸ್ ಠಾಣೆ ೬, ಹಳೇನಗರ ಪೊಲೀಸ್ ಠಾಣೆ ೩ ಮತ್ತು ಹೊಸಮನೆ ಪೊಲೀಸ್ ಠಾಣೆ ೧ ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಸೇರಿ ಒಟ್ಟು ೧೦ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿ, ಅಂದಾಜು ಮೌಲ್ಯ ೫೫ ಸಾವಿರ ರೂಗಳ ಒಟ್ಟು ೩ ದ್ವಿಚಕ್ರ ವಾಹನಗಳನ್ನು ಮತ್ತು ೭ ದ್ವಿಚಕ್ರ ವಾಹನಗಳ ಬಿಡಿ ಭಾಗಗಳನ್ನು ಮಾರಾಟ ಮಾಡಿ ಗಳಿಸಿದ್ದ ರು. ೨,೧೦,೦೦೦ ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ ೬೦ ಸಾವಿರ ರು. ಪಲ್ಸರ್ ದ್ವಿಚಕ್ರ ವಾಹನ ಸೇರಿ ಒಟ್ಟು ರು. ೩,೨೫,೦೦೦ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ. ತನಿಖಾ ತಂಡದ ಉತ್ತಮ ಕಾರ್ಯಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Sunday, December 1, 2024

ಕನ್ನಡ ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ : ಹಿರೇನಲ್ಲೂರು ಶ್ರೀನಿವಾಸ್

ಭದ್ರಾವತಿ ಶುಗರ್‌ಟೌನ್ ಲಯನ್ಸ್ ಕ್ಲಬ್‌ನಲ್ಲಿ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಆಚರಣೆ ಕಾರ್ಯಕ್ರಮ ಹಿರೇನಲ್ಲೂರು ಶ್ರೀನಿವಾಸ್, ಬೆಳ್ಳೋಡಿ ಶಿವಕುಮಾರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ: ನಾಡಿನ ಹಿರಿಯರು ಹಚ್ಚಿರುವ ಕನ್ನಡ ದೀಪ ಎಂದೂ ಆರದಂತೆ ಕಾಪಾಡಿ ಅದನ್ನು ಉಳಿಸಿ ಬೆಳೆಸುವ ಮಹತ್ತರವಾದ ಜವಾಬ್ದಾರಿ ಇಂದಿನವರ ಮೇಲಿದೆ ಎಂದು ಶಿಕ್ಷಕ ಹಿರೇನಲ್ಲೂರು ಶ್ರೀನಿವಾಸ್ ಹೇಳಿದರು.
    ಅವರು ಶುಗರ್‌ಟೌನ್ ಲಯನ್ಸ್ ಕ್ಲಬ್‌ನಲ್ಲಿ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
    ಕನ್ನಡ ಭಾಷೆಯ ಮೂಲಕ ನಮ್ಮ ಎಲ್ಲಾ ರೀತಿಯ ಭಾವನೆಗಳನ್ನು ಹೊರಹಾಕಲು, ವ್ಯಕ್ತಪಡಿಸಲು ಸಾಧ್ಯ. ಇಂತಹ ಶಕ್ತಿ ನಮ್ಮ ಕನ್ನಡ ಭಾಷೆಗಿರುವುದು ನಾಡಿನ ಕನ್ನಡಿಗರ ಹೆಮ್ಮೆಯ ಸಂಗತಿಯಾಗಿದೆ.  ಆದರೆ ಇಂದು ಕನ್ನಡ ಭಾಷೆ ಓದಬೇಕು, ಕಲಿಕಾ ಮಾಧ್ಯಮ ಕನ್ನಡ ಭಾಷೆಯಾಗಬೇಕು ಎಂಬುದು ಕೇವಲ ವೇದಿಕೆಗಳಲ್ಲಿ ಮಾತ್ರ ಸೀಮಿತವಾಗಿ ಕೇಳಿ ಬರುತ್ತಿದೆ. ಇಂದು ಬಹುತೇಕ ಮಕ್ಕಳು ಆಂಗ್ಲ ಭಾಷೆಯಲ್ಲಿ ಓದುತ್ತಿದ್ದು, ಇದೊಂದು ರೀತಿಯ ವಿಪರ್ಯಾಸದ ಸಂಗತಿಯಾಗಿದೆ. ಈ ನಡುವೆ ಆಂಗ್ಲ ಭಾಷೆಯಲ್ಲಿ ಓದುತ್ತಿದ್ದರೂ ಸಹ ಕನ್ನಡ ಭಾಷೆಯ ಬಗ್ಗೆ, ಕನ್ನಡತನದ ಬಗ್ಗೆ ಹಾಗು ನಾಡಿನ ಸಾಹಿತ್ಯ ಸಾಂಸ್ಕೃತಿಕ ಸಂಗತಿಗಳ ಬಗ್ಗೆ ಒಲವನ್ನು ಬೆಳೆಸಿಕೊಳ್ಳಬೇಕೆಂದರು. 
    ಲಯನ್ಸ್ ಕ್ಲಬ್ ೩೧೭ಸಿ ಜಾಗತಿಕ ತಂಡದ ಮುಖ್ಯ ಸಮನ್ವಯಾಧಿಕಾರಿ ಬೆಳ್ಳೋಡಿ ಶಿವಕುಮಾರ್ ಮಾತನಾಡಿ, ನಮ್ಮ ದೇಶದಲ್ಲಿ ದೀಪಾವಳಿ ಹಬ್ಬದ ನಂತರ ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳ ಹೊಸ ಆರ್ಥಿಕ ಚಟುವಟಿಕೆಗಳು ನಡೆಯಲು ನಿರ್ಧಾರವಾಗುತ್ತದೆ. ಹಾಗಾಗಿ ಇದಕ್ಕೆ ವಿಶೇಷ ಮಹತ್ವವಿದೆ. ಅದೇ ರೀತಿಯಲ್ಲಿ ಸಂಘ-ಸಂಸ್ಥೆಗಳಲ್ಲಿ ಸಹ ಆರ್ಥಿಕ ಚಟುವಟಿಕೆಗಳ ಲೆಕ್ಕಪತ್ರಗಳನ್ನು ಸರಿಯಾಗಿ ಪಾರದರ್ಶಕವಾಗಿ ನಿರ್ವಹಿಸಿದಾಗ ಅವುಗಳ ಬಗ್ಗೆ ನಂಬಿಕೆ, ಘನತೆ, ಗೌರವ ಹೆಚ್ಚಾಗುತ್ತದೆ. ಇದನ್ನು ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಲಯನ್ಸ್ ಕ್ಲಬ್‌ನಂತಹ ಅಂತರಾಷ್ಟ್ರೀಯ ಸಂಸ್ಥೆ ಮಂಚೂಣಿಯಲ್ಲಿರುವುದು ಗೌರವದ ಸಂಗತಿ ಎಂದರು.
    ಉಮೇಶ್ ರಾಜು, ಯೋಗೀಶ್, ಶಿವಕುಮಾರ್, ಬಿ.ಎಸ್ ಮಹೇಶ್ ಕುಮಾರ್, ಜಿ.ಎಚ್ ಶಿವಾನಂದಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
    ನಿಂಗೋಜಿರಾವ್ ಪ್ರಾರ್ಥಿಸಿ, ಉಮೇಶ್ ಸ್ವಾಗತಿಸಿದರು. ತಮ್ಮೇಗೌಡ ಕಾರ್ಯಕ್ರಮ ನಿರೂಪಿಸಿ ವರದಿ ಮಂಡಿಸಿದರು. ಯೋಗೀಶ್ ಲೆಕ್ಕಪತ್ರ ಮಂಡಿಸಿ ವಂದಿಸಿದರು. ಅನಂತಕೃಷ್ಣ ನಾಯಕ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಸವಿತ ಅಥಿತಿಗಳ ಪರಿಚಯ ನಡೆಸಿಕೊಟ್ಟರು.  

ಫಿಲ್ಟರ್‌ಶೆಡ್ ನಿವಾಸಿಗಳ ಸಂಕಷ್ಟಕ್ಕೆ ಜನಪ್ರತಿನಿಧಿಗಳು ಸ್ಪಂದಿಸಲಿ : ಶಶಿಕುಮಾರ್ ಎಸ್. ಗೌಡ

ಭದ್ರಾವತಿ ಜನ್ನಾಪುರ ಫಿಲ್ಟರ್‌ಶೆಡ್‌ನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್. ಗೌಡ ನೇತೃತ್ವವಹಿಸಿ ಮಾತನಾಡಿದರು.
    ಭದ್ರಾವತಿ: ಜನ್ನಾಪುರ ಫಿಲ್ಟರ್‌ಶೆಡ್‌ನಲ್ಲಿ ಬಡ ಜನರು ವಾಸಿಸುತ್ತಿದ್ದು, ಇವರ ಸಂಕಷ್ಟಗಳಿಗೆ ಜನಪ್ರತಿನಿಧಿಗಳು ಸ್ಪಂದಿಸುವ ಮೂಲಕ ನೆರವಿಗೆ ಮುಂದಾಗಬೇಕು. ನ್ಯಾಯಬದ್ಧವಾದ ಹೋರಾಟಗಳಿಗೆ ಎಲ್ಲರೂ ಸಹಕರಿಸಬೇಕೆಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್. ಗೌಡ ಮನವಿ ಮಾಡಿದರು. 
    ಅವರು ಫಿಲ್ಟರ್‌ಶೆಡ್‌ನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು. ಫಿಲ್ಟರ್‌ಶೆಡ್‌ನಲ್ಲಿ ಬಡ ಜನರಿಗೆ ಇನ್ನೂ ಹಕ್ಕು ಪತ್ರ ನೀಡಿಲ್ಲ. ಹಲವು ಮೂಲ ಸೌಕರ್ಯಗಳ ಕೊರತೆ ಇದ್ದು, ಕೆಲವು ವರ್ಷಗಳಿಂದ ಅನಧಿಕೃತವಾಗಿ ನಿರ್ಮಿಸಲಾಗಿರುವ ಸಮುದಾಯ ಭವನದ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ಈ ಹೋರಾಟದ ಹಿಂದೆ ಯಾವುದೇ ದುರುದ್ದೇಶವಿಲ್ಲ. ಸಮುದಾಯ ಭವನ ಫಿಲ್ಟರ್‌ಶೆಡ್ ನಿವಾಸಿಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಸದ್ಬಳಕೆಯಾಗಬೇಕೆಂದರು. 
    ಸ್ಥಳೀಯ ಮುಖಂಡ ಉಮೇಶ್ ಮಾತನಾಡಿ, ಸರ್ಕಾರಿ ಜಾಗದಲ್ಲಿ ವಾಸಿಸುತ್ತಿರುವ ಬಡ ಜನರಿಗೆ ಹಕ್ಕು ಪತ್ರ ನೀಡದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಇಲ್ಲಿನ ಜನರ ಹೋರಾಟಕ್ಕೆ ನಮ್ಮ ಬೆಂಬಲವಿದ್ದು, ಅನಧಿಕೃತ ಸಮುದಾಯ ಭವನದ ವಿರುದ್ಧ ನಡೆಯುತ್ತಿರುವ ನ್ಯಾಯಬದ್ಧವಾದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಅಗತ್ಯವಿದೆ ಎಂದರು.  
    ನಗರಸಭೆ ಸದಸ್ಯರಾದ ಸವಿತಾ ಉಮೇಶ್, ನಾಗರತ್ನ ಅನಿಲ್‌ಕುಮಾರ್, ಆರ್. ಮೋಹನ್ ಕುಮಾರ್ ಸೇರಿದಂತೆ ಇನ್ನಿತರರು ಮಾತನಾಡಿದರು. ಸ್ಥಳೀಯ ಮುಖಂಡರು, ನಿವಾಸಿಗಳು ಪಾಲ್ಗೊಂಡಿದ್ದರು.