Saturday, August 19, 2023

ಭೂತಾನ್‌ ಅಡಕೆ ಆತಂಕ ಬೇಡ : ಅಡಕೆ ಬೆಳೆಗಾರರ ಹಿತರಕ್ಷಣೆಗೆ ಬದ್ಧ

ಷೇರುದಾರರ ಸಭೆಯಲ್ಲಿ ಮಾಮ್ಕೋಸ್‌ ಉಪಾಧ್ಯಕ್ಷ ಮಹೇಶ್‌ ಎಚ್.ಎಸ್‌ ಹುಲ್ಕುಳಿ

ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘದ ಭದ್ರಾವತಿ ಶಾಖೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಷೇರುದಾರರ ಸಭೆಯಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಮಹೇಶ್‌ ಎಚ್. ಎಸ್‌ ಹುಲ್ಕುಳಿ ಮಾತನಾಡಿದರು.  
    ಭದ್ರಾವತಿ, ಆ. ೧೯: ಅಡಕೆ ಬೆಳೆಗಾರರು ಭೂತಾನ್‌ ಅಡಕೆ ಕುರಿತು ಆತಂಕಪಡುವ ಅಗತ್ಯವಿಲ್ಲ. ನಮ್ಮ ಅಡಕೆ ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ಪೈಪೋಟಿ ನೀಡಲು ಸಿದ್ದವಿದೆ ಎಂದು ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘದ ಉಪಾಧ್ಯಕ್ಷ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಮಹೇಶ್‌ ಎಚ್. ಎಸ್‌ ಹುಲ್ಕುಳಿ ಹೇಳಿದರು.
    ಅವರು ಶನಿವಾರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ಸಂಘದ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಷೇರುದಾರರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
    ವಿದೇಶದಿಂದ ಆಮದು ಮಾಡಿಕೊಳ್ಳುವ ಅಡಕೆಯಿಂದ ಯಾವುದೇ ರೀತಿ ಆತಂಕ ಬೇಡ. ಈ ಸಂಬಂಧ ಅಡಕೆ ಬೆಳೆಗಾರರ ಹಿತಕಾಪಾಡುವಂತೆ ಸಂಘದ ವತಿಯಿಂದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಫೆ.೧೪ರಿಂದ ಆಮದು ದರ ಕೆ.ಜಿ ಒಂದಕ್ಕೆ ೨೫೧ ರಿಂದ ೩೫೧ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ ನಮ್ಮ ಅಡಕೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ ಎಂದರು.
    ಪ್ರಸ್ತುತ ಸಂಘದಲ್ಲಿ ೨೯,೮೬೨ ಸದಸ್ಯರಿದ್ದು, ಸದೃಢ ಆರ್ಥಿಕ ತಳಹದಿಯನ್ನು ಹೊಂದಿದೆ. ಮುಖ್ಯವಾಗಿ ಪ್ರಾರಂಭದಿಂದಲ್ಲೂ ಲಾಭದಲ್ಲಿಯೇ ಮುನ್ನಡೆಯುತ್ತಿದೆ. ಪ್ರಸ್ತುತ  ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳ ಒಟ್ಟು ೧೭ ತಾಲೂಕುಗಳ ಆಡಳಿತ ವ್ಯಾಪ್ತಿಯನ್ನು ಹೊಂದಿದೆ. ೧೨ ಶಾಖೆಗಳನ್ನು ಹಾಗು ೧೮ ಅಡಕೆ ಸಂಗ್ರಹಣ ಏಜೆನ್ಸಿಗಳನ್ನು ಹೊಂದಿರುತ್ತದೆ. ೨೦೨೨-೨೩ನೇ ಸಾಲಿನಲ್ಲಿ ರು.೪೪೧ ಲಕ್ಷ ನಿವ್ವಳ ಲಾಭ ಗಳಿಸಿದ್ದು, ಕಳೆದ ಸಾಲಿಗಿಂತ ರು.೪೯.೬೧ ಲಕ್ಷ ಹೆಚ್ಚು ಲಾಭ ಗಳಿಸಿದೆ. ಒಟ್ಟು ವ್ಯವಹಾರ ರು.೧೨೭೭.೭೧ ಕೋಟಿಗಳಾಗಿದ್ದು, ಕಳೆದ ಸಾಲಿಗಿಂತ ರು.೪೦೪.೩೭ ಕೋಟಿ ಹೆಚ್ಚಿಗೆ ವ್ಯವಹಾರ ನಡೆದಿದೆ ಎಂದರು.
    ಸಂಘದ ಎಲ್ಲಾ ವ್ಯವಹಾರ ಸಂಪೂರ್ಣವಾಗಿ ಗಣಕೀಕರಣಗೊಳಿಸಲಾಗಿದೆ. ಅಡಕೆ ತಂತ್ರಜ್ಞಾನ ಮತ್ತು ಮಾರುಕಟ್ಟೆ ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ. ಮ್ಯಾಮ್‌ಕೋಸ್‌ ಎಂಬ ಮೊಬೈಲ್‌ ಆಪ್‌ ಮತ್ತು ಅಂತರ್ಜಾಲ(ವೆಬ್‌ಸೈಟ್) ಹೊಂದಿದೆ. ಇದರ ಮೂಲಕ ಸದಸ್ಯರು ಸದಾಕಾಲ ಸಂಘದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
    ಸಂಘದ ಸದಸ್ಯರ ಹಿತಕಾಪಾಡುವ ನಿಟ್ಟಿನಲ್ಲಿ ಸದಸ್ಯರ ಬಹುದಿನಗಳ ಬೇಡಿಕೆಯಂತೆ ಅಡಕೆ ಆಧಾರ ಸಾಲ, ಕಟಾವು ಸಾಲ, ಕೊಳೆ ಔಷಧಿ ಸಾಲ, ನಿಗದಿತ ಠೇವಣಿ ಆಧಾರ ಸಾಲ, ವಿವಿಧ ಠೇವಣಿ ಯೋಜನೆಗಳು, ಸದಸ್ಯರ ಕ್ಷೇಮಾಭಿವೃದ್ಧಿ ನಿಧಿ, ಅಡಕೆ ಸಂಶೋಧನಾ ನಿಧಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ.
    ಅಲ್ಲದೆ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳು, ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪಾರಿತೋಷಕ ಬಹುಮಾನ, ಗುಂಪು ವಿಮಾ ಯೋಜನೆ, ಆರೋಗ್ಯ ವಿಮೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
    ನಿರ್ದೇಶಕರಾದ ಈಶ್ವರಪ್ಪ ಸಿ.ಬಿ ಚಂದವಳ್ಳಿ, ಕೃಷ್ಣಮೂರ್ತಿ ಕೆ.ವಿ ಕಿರುಗುಳಿಗೆ, ಕೆ. ರತ್ನಾಕರ, ತಿಮ್ಮಪ್ಪ ಎಸ್.ಎಂ ಶ್ರೀಧರಪುರ ಗ್ರಾಮ, ವೈ.ಎಸ್‌ ಸುಬ್ರಹ್ಮಣ್ಯ, ಎಚ್.ಟಿ  ಸುಬ್ರಹ್ಮಣ್ಯ ವಡ್ಡಿನಬೈಲು, ಸುರೇಶಚಂದ್ರ .ಎ, ಅಂಬ್ಲೂರು, ಬಡಿಯಣ್ಣ ಎಚ್.ಎಂ ಹೊಲಗೋಡು ಮತ್ತು ವಿಜಯಲಕ್ಷ್ಮಿ ಸೇರಿದಂತೆ ಶಾಖೆ ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
        ಉಪಾಧ್ಯಕ್ಷ ಮಹೇಶ್‌ ಎಚ್. ಎಸ್‌ ಹುಲ್ಕುಳಿ ಮತ್ತು ನೂತನ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಬರುವೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಷೇರುದಾರರು ಪ್ರತಿವರ್ಷ ಷೇರುದಾರರ ಸಭೆ ನಡೆಸಬೇಕು. ಯಾವುದೇ ಕಾರಣಕ್ಕೂ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.
    ನಿರ್ದೇಶಕರಾದ ಜಿ.ಈ ವಿರುಪಾಕ್ಷಪ್ಪ ಸ್ವಾಗತಿಸಿ, ಕೆ.ಕೆ ಜಯಶ್ರೀ ಸಂಗಡಿಗರು ಪ್ರಾರ್ಥಿಸಿದರು. ಟಿ.ಆರ್‌ ಭೀಮರಾವ್‌ ನಿರೂಪಿಸಿ, ಆರ್. ದೇವಾನಂದ್‌ ವಂದಿಸಿದರು. ಇನ್ನಿತರರು ಉಪಸ್ಥಿತರಿದ್ದರು.

Friday, August 18, 2023

ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆ. 20ರಂದು



ಭದ್ರಾವತಿ, ಆ. 19: ತಾಲೂಕು ಛಾಯಾಗ್ರಾಹಕರ ಸಂಘ ಮತ್ತು ಛಾಯಾಗ್ರಾಹಕರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸಹಯೋಗದೊಂದಿಗೆ ವಿಶ್ವ ಛಾಯಾಗ್ರಾಹಕ ದಿನಾಚರಣೆ ಪ್ರಯುಕ್ತ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆ. 20ರ ಭಾನುವಾರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2.30ರವರೆಗೆ ಹಳೇನಗರದ ಸಂಚಿಯ  ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
    ಶಿಬಿರದಲ್ಲಿ ಇ.ಸಿ.ಜಿ.ಯೊಂದಿಗೆ ಹೃದಯ, ಕಿಡ್ನಿ, ದಂತ, ಕಣ್ಣು, ಕಿವಿ, ಇ.ಎನ್.ಟಿ, ಮೂಳೆ, ನರರೋಗ, ಚರ್ಮರೋಗ, ಸಕ್ಕರೆ ಖಾಯಿಲೆ, ಮಕ್ಕಳ ಮತ್ತು ಸ್ತ್ರೀಯರ ಖಾಯಿಲೆಗಳು ಹಾಗೂ ಜನರಲ್ ಮೆಡಿಸಿನ್, ಜನರಲ್ ಸರ್ಜರಿ ಇತರೆ ರೋಗಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನಡೆಯಲಿದೆ.   
      ರಕ್ತದಾನ ಶಿಬಿರ :
    ಅಲ್ಲದೆ ರಕ್ತದಾನ ಶಿಬಿರ ನಡೆಯಲಿದ್ದು, ರಕ್ತದಾನ ಮಾಡಿದಂತಹ ದಾನಿಗಳಿಗೆ ಸುಬ್ಬಯ್ಯ ವೈದ್ಯಕೀಯ
ಮಹಾವಿದ್ಯಾಲಯದವತಿಯಿಂದ ಉಚಿತ ಹೆಲ್ತ್‌ಕಾರ್ಡ್ (ಕುಟುಂಬದ ಸದಸ್ಯರಿಗೆ) ನೀಡಲಾಗುತ್ತದೆ. ಹೆಲ್ತ್‌ಕಾರ್ಡ್‌ನ ಅವಧಿ ಒಂದು ವರ್ಷಕ್ಕೆ ಸಿಮೀತವಾಗಿರುತ್ತದೆ.
     ಸಾರ್ವಜನಿಕರು ಜನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.
    ಹೆಚ್ಚಿನ ಮಾಹಿತಿಗಾಗಿ ಅರುಣ್ ಕುಮಾರ್ : 9448329866, ಮಂಜುನಾಥ : 9972387099, 
ಸಂಜೀವರಾವ್ ಸಿಂಧ್ಯಾ : 94494 26872,  ಕುಮಾರ .ಜೆ : 99801 76516, ಮೊಹಮ್ಮದ್: 8951617838
ಮತ್ತು ಕಾಂತರಾಜ್ : 9900131155 ಸಂಪರ್ಕಿಸಬಹುದಾಗಿದೆ.

ರಚನಾ ವೈದ್ಯಕೀಯ ಶಿಕ್ಷಣ ಪ್ರವೇಶ : ಅಭಿನಂದನೆ



ಭದ್ರಾವತಿ, ಆ. 19:  ಯು.ಜಿ ನೀಟ್ 2023-24ನೇ ಸಾಲಿನ  ಸರ್ಕಾರಿ ವೈದ್ಯಕೀಯ ಶಿಕ್ಷಣ ಪ್ರವೇಶ ಪ್ರಥಮ ಪ್ರಯತ್ನದಲ್ಲಿಯೇ ಪಡೆಯುವಲ್ಲಿ ನಗರದ ಎಚ್.ಎನ್ ರಚನಾ ಯಶಸ್ವಿಯಾಗಿದ್ದಾರೆ.  
    ಇವರು ಶಿಕ್ಷಕರಾದ  ಎಚ್.ಎಸ್ ಮಾಯಮ್ಮಹಾಗೂ ಎಚ್.ಎನ್ ನರಸಿಂಹಮೂರ್ತಿ ದಂಪತಿ ಪುತ್ರಿಯಾಗಿದ್ದಾರೆ.  ರಚನಾ ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ   ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ  ಪದವಿ ಪೂರ್ವ ಶಿಕ್ಷಣ(ಪಿಯುಸಿ)  ಪೂರೈಸಿದ್ದು, ಇದೀಗ ಸರ್ಕಾರಿ ವೈದ್ಯಕೀಯ ಶಿಕ್ಷಣ ಪ್ರವೇಶ ಪಡೆದುಕೊಂಡಿದ್ದಾರೆ.   ರಚನಾ ಅವರನ್ನು ಪೋಷಕರು, ಶಿಕ್ಷಕ ವೃಂದದವರು, ವಿವಿಧ ಸಂಘ ಸಂಸ್ಥೆಗಳು ಅಭಿನಂದಿಸಿವೆ.

ಇಬ್ಬರು ಅಡಕೆ ಕಳ್ಳರ ಬಂಧನ

    ಭದ್ರಾವತಿ, ಆ. ೧೮: ಅಡಕೆ ತೋಟದಲ್ಲಿ ಹಸಿ ಅಡಕೆ ಕದ್ದೊಯ್ಯುತ್ತಿದ್ದವರನ್ನು ಗ್ರಾಮಸ್ಥರು ಹಿಡಿದು ಮಾಲು ಸಮೇತ ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನ ಹೊಳೆಹೊನ್ನೂರಿನ ಹೊಸ ಜಂಬರಗಟ್ಟೆ ಗ್ರಾಮದಲ್ಲಿ ನಡೆದಿದೆ.
    ಹೊಳೆಹೊನ್ನೂರು ಸಮೀಪದ ಕೊಪ್ಪ ಗ್ರಾಮದ ನಿವಾಸಿಗಳಾದ ಅಣ್ಣಪ್ಪ ಹಾಗೂ ಮಂಜು ಎಂಬುವರು ಬಂಧಿತ ಆರೋಪಿಗಳಾಗಿದ್ದು, ಇನ್ನೋರ್ವ ಬಾಬು ಎಂಬಾತ ತಪ್ಪಿಸಿಕೊಂಡಿದ್ದಾನೆ.
    ಹೊಸ ಜಂಬರಗಟ್ಟೆ ಗ್ರಾಮದಲ್ಲಿ ಸೋಮವಾರ ರಾತ್ರಿ ನಂಜಪ್ಪ ಎಂಬುವರ ತೋಟಕ್ಕೆ ಮೂವರು ನುಗ್ಗಿದ್ದು, ತೋಟದಲ್ಲಿನ ಹಸಿ ಅಡಕೆ ಗೊನೆಯನ್ನು ಕಿತ್ತುಕೊಂಡು ಚೀಲದಲ್ಲಿ ತುಂಬಿಕೊಂಡು ಪರಾರಿಯಾಗುತ್ತಿದ್ದಾಗ  ಗ್ರಾಮಸ್ಥರು ಬೆನ್ನು ಹತ್ತಿ ಇಬ್ಬರನ್ನು ಹಿಡಿದಿದ್ದಾರೆ. ನಂತರ ಕದ್ದ ಅಡಕೆ ಸಮೇತ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
    ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
    ಕದ್ದ ಹಸಿ ಅಡಕೆಯನ್ನು ಕಡಿಮೆ ಬೆಲೆಗೆ ಖರೀದಿಸಿ ಅದನ್ನು ಸುಲಿದು, ಬೇಯಿಸಿ, ಒಣ ಅಡಕೆ ಮಾರಾಟ ಮಾಡಿ ಹಣ ಮಾಡಿಕೊಳ್ಳು ವ್ಯಕ್ತಿಗಳು ಇದ್ದಾರೆ. ಇಂತಹ ವ್ಯಕ್ತಿಗಳಿಂದ ರೈತರು ಕಷ್ಟಪಟ್ಟು ಬೆಳೆದ ಅಡಕೆ ಫಸಲನ್ನು ಸುಲಭವಾಗಿ ಕಳ್ಳತನ ಮಾಡುತ್ತಿರುವ ಪ್ರಕರಣ ಹೆಚ್ಚಾಗಿದೆ. ಆದ್ದರಿಂದ ಸಂಬಂಧಪಟ್ಟವರು ಅಡಕೆ ಕಳ್ಳರು ಹಾಗೂ ಕದ್ದ ಅಡಕೆ ಕೊಳ್ಳುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಬೆಳೆಗಾರರ ಹಿತ ಕಾಪಾಡಬೇಕೆಂದು ಜನರು ಆಗ್ರಹಿಸಿದ್ದಾರೆ. 

ಬೀರುವಿನ ಬಾಗಿಲು ಮುರಿದು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳವು


    ಭದ್ರಾವತಿ, ಆ. ೧೮: ಮನೆಯ ಬೀರುವಿನ ಬಾಗಿಲು ಮುರಿದು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ತಾಲೂಕಿನ ಕೋಟೆ ಗಂಗೂರು ಗ್ರಾಮದಲ್ಲಿ ನಡೆದಿದೆ.
    ಗ್ರಾಮದ ನಿವಾಸಿ ಎಂ. ಶೀಲಾರವರು ಆ.೧೬ರಂದು  ತಮ್ಮ ಗಂಡನ ಜೊತೆ ಹಾಲು ಮಾರಾಟ ಮಾಡಲು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು,  ರಾತ್ರಿ ಮನೆಗೆ ಬಂದು ಮನೆಯ ಬೀಗ ತೆಗೆದು ನೋಡಿದಾಗ  ಬೀರುವಿನ ಬಾಗಿಲು ಮುರಿದು ಲಾಕರ್ ನಲ್ಲಿಟ್ಟಿದ್ದ ಸುಮಾರು ೨೯.೫ ಗ್ರಾಂ ತೂಕದ  ಒಟ್ಟು ಸುಮಾರು ೧.೩೦ ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ. ಈ ಸಂಬಂಧ ಶೀಲಾರವರು ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಮನುಷ್ಯರನ್ನು ಹೆಚ್ಚು ಮಾನವೀಯಗೊಳಿಸುವ ಶಕ್ತಿ ಸಾಹಿತ್ಯಕ್ಕಿದೆ : ಎನ್. ಕುಮಾರ್

ಭದ್ರಾವತಿ ಹೊಳೆಹೊನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಿಂದ `ಕನ್ನಡ ಮಹಿಳಾ ಸಾಹಿತ್ಯ ಮತ್ತು ಜನಪದ ಮಹಾಕಾವ್ಯಗಳ ಸ್ತ್ರೀ ಓದು' ವಿಷಯ ಕುರಿತು ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಪ್ರಾಂಶುಪಾಲ ಎನ್.ಆರ್ ಶಂಕರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.  
    ಭದ್ರಾವತಿ:  ಸಾಹಿತ್ಯ ಮನುಷ್ಯರನ್ನು ಹೆಚ್ಚು ಮಾನವೀಯಗೊಳಿಸುತ್ತದೆ. ನಮ್ಮನ್ನು ಇನ್ನಷ್ಟು ಸೂಕ್ಷ್ಮಗೊಳಿಸುತ್ತದೆ ಎಂದು ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಎನ್. ಕುಮಾರ್ ಹೇಳಿದರು.
    ಅವರು ಹೊಳೆಹೊನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಿಂದ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು `ಕನ್ನಡ ಮಹಿಳಾ ಸಾಹಿತ್ಯ ಮತ್ತು ಜನಪದ ಮಹಾಕಾವ್ಯಗಳ ಸ್ತ್ರೀ ಓದು' ವಿಷಯ ಕುರಿತು ಮಾತನಾಡಿದರು.
    ಕನ್ನಡ ಸಾಹಿತ್ಯದ ಅನೇಕ ಘಟ್ಟಗಳಲ್ಲಿ ವಚನ ಸಾಹಿತ್ಯ ಹೊರತುಪಡಿಸಿ ಹೆಣ್ಣನ್ನು ವಸ್ತುವಾಗಿಯೇ ನೋಡುತ್ತಾ ಬರಲಾಗಿದೆ. ಇದಕ್ಕಿಂತ ಭಿನ್ನವಾಗಿ ಜನಪದ ಸಾಹಿತ್ಯ ಮಹಿಳೆಯ ದನಿಗೆ ಅವಕಾಶ ನೀಡಿದೆ. ಗೊಂಡ ರಾಮಾಯಣ, ಮಲೆಮಹದೇಶ್ವರ ಕಾವ್ಯಗಳಲ್ಲಿ ಇದಕ್ಕೆ ನಿದರ್ಶನಗಳನ್ನು ಕಾಣಬಹುದು. ಇಂದಿಗೂ ಹೆಣ್ಣನ್ನು ಭೋಗವಸ್ತುವಾಗಿಯೇ ನೋಡುತ್ತಿರುವ ಸಂದರ್ಭದಲ್ಲಿ ಈ ವಿಚಾರವನ್ನು ಅರಿತುಕೊಳ್ಳುವ ಅಗತ್ಯವಿದೆ ಎಂದರು.
  ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪಿ. ಭಾರತಿ ದೇವಿ,  ಸಾಹಿತ್ಯ ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಅನೇಕ ದಾರಿಗಳಿವೆ. ಸ್ತ್ರೀ ಓದು ಹೆಣ್ಣಿನ ಕಣ್ಣೋಟದಲ್ಲಿ ಕೃತಿಯನ್ನು ನೋಡುತ್ತದೆ. ಕನ್ನಡ ಜನಪದ ಮಹಾಕಾವ್ಯಗಳ ಸ್ತ್ರೀಪಾತ್ರಗಳು ಅತ್ಯಂತ ಚೈತನ್ಯಮಯವಾಗಿ ಅನಾವರಣಗೊಳ್ಳುತ್ತವೆ ಎಂದರು.
ಪ್ರಾಂಶುಪಾಲ ಎನ್.ಆರ್ ಶಂಕರ್ ಅಧ್ಯಕ್ಷತೆ ವಹಿಸಿದ್ದರು.  ಪ್ರಮುಖರಾದ ಎಂ.ರಾಜಪ್ಪ, ಕಾಲೇಜಿನ ಪ್ರಾಧ್ಯಾಪಕರಾದ ಡಾ ನಾಗರಾಜ ನಾಯ್ಕ್ ಮತ್ತು ರವಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಯನೂರು ದೈಹಿಕ ನಿರ್ದೇಶಕ ಡಾ. ರೋಹನ್ ಡಿ ಕಾಸ್ಟ, ಕಾಲೇಜಿನ ಐಕ್ಯೂಎಸಿ ಸಂಚಾಲ ಡಾ.ಟಿ ಚಂದ್ರಶೇಖರ್ ಹಾಗೂ ಕಾಲೇಜಿನ ಗ್ರಂಥಪಾಲಕ ಡಾ. ಎಸ್. ರಾಜು ನಾಯ್ಕ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕನ್ನಡ ಐಚ್ಛಿಕ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಸಿಮ್ರಾನ್ ಖಾನಂ ಅವರನ್ನು  ಸನ್ಮಾನಿಸಲಾಯಿತು. ಸಹಾಯಕ ಪ್ರಾಧ್ಯಾಪಕ ಎಚ್. ರುದ್ರಮುನಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಸಿ.ಎಚ್  ಶ್ವೇತಾ  ವಂದಿಸಿದರು.

ಸೆ.೬ರಂದು ಭದ್ರಾವತಿಯಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ

ಆ.೨೪ ಆಯ್ಕೆ ಸ್ಪರ್ಧೆ, ೩೦ ಮೊದಲ ಸುತ್ತಿನ ಸ್ಪರ್ಧೆ, ಸೆ.೬ ಅಂತಿಮ ಸುತ್ತಿನ ಸ್ಪರ್ಧೆ

ಎಸ್‌ಡಿಸಿಎಎ ಕರ್ನಾಟಕ ಸ್ಟಾರ್ ಸಿಂಗರ್-೨೦೨೩ ಸೀಸನ್-೧ ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ ಸೆ.೬ರಂದು ಭದ್ರಾವತಿಯಲ್ಲಿ ಆಯೋಜಿಸಿರುವ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ ಮಾಹಿತಿ ನೀಡಿದರು.
    ಭದ್ರಾವತಿ, ಆ. ೧೮: ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ರೇಣುಕಾ ಟವರ್ಸ್, ರಂಗಪ್ಪ ವೃತ್ತ ಇವರ ಆಶ್ರಯದಲ್ಲಿ ದಿವಂಗತ ಶಂಕರ್‌ನಾಗ್ ಸಂಸ್ಮರಣೆ ಕಾರ್ಯಕ್ರಮದ ಅಡಿಯಲ್ಲಿ ಪ್ರಪ್ರಥಮ ಬಾರಿಗೆ ನಗರದಲ್ಲಿ ಎಸ್‌ಡಿಸಿಎಎ ಕರ್ನಾಟಕ ಸ್ಟಾರ್ ಸಿಂಗರ್-೨೦೨೩ ಸೀಸನ್-೧ ರಾಜ್ಯಮಟ್ಟದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ ಸೆ.೬ರಂದು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ ಹೇಳಿದರು.
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ಪರ್ಧೆಯಲ್ಲಿ ೧೮ ವರ್ಷ ಮೇಲ್ಪಟ್ಟವರು ಭಾಗವಹಿಸಬಹುದಾಗಿದೆ. ಪ್ರಥಮ ಬಹುಮಾನ ೨೫ ಸಾವಿರ, ದ್ವಿತೀಯ ಬಹುಮಾನ ೧೫ ಸಾವಿರ, ತೃತೀಯ ಬಹುಮಾನ ೧೦ ಸಾವಿರ ರು. ಮತ್ತು ಪಾರಿತೋಷಕ ಹಾಗು ಸಮಾಧಾನಕಾರ ಬಹುಮಾನ ೨ ಸಾವಿರ ರು. ನೀಡಲಾಗುವುದು. ಹೆಸರು ನೋಂದಾಯಿಸಲು ಆ.೨೩ ಕಡೆಯ ದಿನವಾಗಿದ್ದು, ಪ್ರವೇಶ ಶುಲ್ಕ ೭೫೦ ರು. ನಿಗದಿಪಡಿಸಲಾಗಿದೆ ಎಂದರು.
    ನಗರದ ನ್ಯೂಟೌನ್ ಉಂಬ್ಳೆಬೈಲು ರಸ್ತೆ ಲಯನ್ಸ್ ಕ್ಲಬ್‌ನಲ್ಲಿ ಆ.೨೪ರಂದು ಬೆಳಿಗ್ಗೆ ೯.೩೦ ರಿಂದ ಸಂಜೆ ೬ ಗಂಟೆವರೆಗೆ ಆಯ್ಕೆ ಸ್ಪರ್ಧೆ ನಡೆಯಲಿದ್ದು, ೩೦ರಂದು ಮೊದಲ ಸುತ್ತಿನ ಸ್ಪರ್ಧೆ ನಡೆಯಲಿದೆ. ಸೆ.೬ರಂದು ಅಂತಿಮ ಸುತ್ತಿನ ಸ್ಪರ್ಧೆ ಸಂಜೆ ೫ ಗಂಟೆಗೆ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಹಿನ್ನಲೆ ಗಾಯಕರಾದ ಗುರುರಾಜ್, ಅಜಯ್ ವಾರಿಯರ್ ಮತ್ತು ಸುರೇಖಾ ಹೆಗಡೆ, ವಾದ್ಯಗೋಷ್ಠಿ ಕಲಾವಿದರಾಗಿ ದೀಪಕ್ ಜಯಶೀಲನ್, ರಾಮರಾವ್ ರಂಗಧೋಳ್, ಮೆಲ್ವಿನ್ ಲೀಮಾ, ರಮೇಶ್, ಮೋನಿಕ್ ಜಯಶೀಲನ್, ವಿಠ್ಠಳ್ ರಂಗಧೋಳ್ ಮತ್ತು ವೀರೇಶ್ ಹಾಗು ನಿರೂಪಕರಾಗಿ ಯೋಗೀಶ್ ಮಿರ್ಜಾನ್ ಭಾಗವಹಿಸಲಿದ್ದಾರೆ ಎಂದರು.
    ಸ್ಪರ್ಧೆ ಜೊತೆಗೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಕಲಾವಿದರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಹಾಗು ಹಿರಿಯ ಕಲಾವಿದರಿಗೆ ಜಯಶೀಲನ್ ಮತ್ತು ಗೀತಾಂಜಲಿ ಪ್ರಶಸ್ತಿ ಪ್ರದಾನ ಹಾಗು ಗೌರವ ಸಮರ್ಪಣೆ ನಡೆಯಲಿದೆ ಎಂದರು.
    ಸಂಘದ ಗೌರವ ಸಲಹೆಗಾರ ಬಿ.ಆರ್ ವಿಕ್ರಂ, ಪ್ರಧಾನ ಕಾರ್ಯದರ್ಶಿ ಬಿ. ಚಿದಾನಂದ, ಸಹ ಕಾರ್ಯದರ್ಶಿ ಚರಣ್ ಕವಾಡ್, ಸದಸ್ಯರಾದ ಶಂಕರ್‌ಬಾಬು, ವೈ.ಕೆ ಹನುಮಂತಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.