Friday, December 31, 2021

ತಾವರಘಟ್ಟ ಗ್ರಾಮ ಪಂಚಾಯಿತಿ ಮೊದಲ ಗ್ರಾಮ ಸಭೆ

ಭದ್ರಾವತಿ ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿಯ ಮೊದಲ ಗ್ರಾಮ ಸಭೆ ಯಶಸ್ವಿಯಾಗಿ ಜರುಗಿತು.
ಭದ್ರಾವತಿ, ಡಿ. ೩೧: ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿಯ ಮೊದಲ ಗ್ರಾಮ ಸಭೆ ಯಶಸ್ವಿಯಾಗಿ ಜರುಗಿತು.
ಪಂಚಾಯಿತಿ ಅಧ್ಯಕ್ಷ ಜಿ.ಎಸ್ ಮಹೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ನಿವೇಶನ ಹಂಚಿಕೆ, ಕೃಷಿ ಹಾಗು ಆರೋಗ್ಯ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಹಾಗು ಕುಂದು ಕೊರತೆ ಬಗ್ಗೆ ಚರ್ಚೆ ನಡೆಸಲಾಯಿತು.


    ಗ್ರಾಮದ ಹಿರಿಯ ಮುಖಂಡ ತ್ಯಾಗರಾಜ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಲಿ ಇರುವ ಗ್ರಾಮ ಠಾಣಾ ಜಾಗಗಳನ್ನು ಸಂಘ-ಸಂಸ್ಥೆಗಳಿಗೆ ನೀಡಬಾರದು. ಬದಲಿಗೆ ನಿವೇಶನಗಳನ್ನು ನಿರ್ಮಿಸಿ ಗ್ರಾಮದ ನಿವೇಶನ ರಹಿತ ಅರ್ಹ ಬಡವರಿಗೆ ಹಂಚುವಂತೆ ಮನವಿ ಸಲ್ಲಿಸಿದರು. ಇದಕ್ಕೆ ಸಭೆಯಲ್ಲಿ ಪೂರಕ ಪ್ರತಿಕ್ರಿಯೆ ವ್ಯಕ್ತವಾಯಿತು. ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಹಾಗು ಗ್ರಾಮಸ್ಥರು ಪಾಲ್ಗೊಂಡಿದ್ದರು.

ನಗರಸಭೆ ಆವರಣದಲ್ಲಿಯೇ ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಮೆ ಪ್ರತಿಷ್ಠಾಪನೆ



ನಾಡಹಬ್ಬ ದಸರಾ ಆಚರಣೆಗಾಗಿ ಭದ್ರಾವತಿ ನಗರಸಭೆ ವತಿಯಿಂದ ಕೆಲವು ವರ್ಷಗಳ ಹಿಂದೆ ಖರೀದಿಸಲಾಗಿದ್ದ ತಾಯಿ ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಮೆಯನ್ನು ಕೊನೆಗೂ ನಗರಸಭಾ ಆವರಣದಲ್ಲಿಯೇ ಪ್ರತಿಷ್ಠಾಪನೆ ಮಾಡಲಾಯಿತು.
    ಭದ್ರಾವತಿ, ಡಿ. ೩೧: ನಾಡಹಬ್ಬ ದಸರಾ ಆಚರಣೆಗಾಗಿ ನಗರಸಭೆ ವತಿಯಿಂದ ಕೆಲವು ವರ್ಷಗಳ ಹಿಂದೆ ಖರೀದಿಸಲಾಗಿದ್ದ ತಾಯಿ ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಮೆಯನ್ನು ಕೊನೆಗೂ ನಗರಸಭಾ ಆವರಣದಲ್ಲಿಯೇ ಪ್ರತಿಷ್ಠಾಪನೆ ಮಾಡಲಾಯಿತು.
    ಈ ಹಿಂದೆ ನಾಡಹಬ್ಬ ದಸರಾ ಆಚರಣೆಗಾಗಿ ತಾಯಿ ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಮೆಯನ್ನು ಬಾಡಿಗೆ ಆಧಾರದಲ್ಲಿ ಪಡೆಯಲಾಗುತ್ತಿತ್ತು. ಇದರಿಂದ ನಗರಸಭೆಗೆ ಹೆಚ್ಚಿನ ಹೊರೆ ಕಂಡು ಬರುತ್ತಿತ್ತು. ಈ ಹಿಂದಿನ ಪೌರಾಯುಕ್ತರಾಗಿದ್ದ ಮನೋಹರ್‌ರವರು ಸದಸ್ಯರ ಒತ್ತಾಯದ ಮೇರೆಗೆ ನಗರಸಭೆ ವತಿಯಿಂದ ಪ್ರತಿಮೆಯನ್ನು ಖರೀದಿಸಿದ್ದರು. ಆದರೆ ಪ್ರತಿಮೆ ಪ್ರತಿಷ್ಠಾಪಿಸಲು ಸೂಕ್ತ ಸ್ಥಳವಕಾಶವಿರಲಿಲ್ಲ. ಇದರಿಂದಾಗಿ ಕೆಲವು ದಿನಗಳವರೆಗೆ ಗ್ರಾಮ ದೇವತೆ ಹಳೇನಗರದ ಶ್ರೀ ಹಳದಮ್ಮ ದೇವಿ ದೇವಸ್ಥಾನದಲ್ಲಿ ಪ್ರತಿಮೆ ಇಡಲಾಗಿತ್ತು. ನಂತರ ದಿನಗಳಲ್ಲಿ ಪ್ರತಿಮೆಯನ್ನು ನಗರಸಭೆ ಆವರಣಕ್ಕೆ ಸ್ಥಳಾಂತರಿಸಿ ಸ್ಥಾಯಿ ಸಮಿತಿ ಅಧ್ಯಕ್ಷರ ಕೊಠಡಿಯಲ್ಲಿಯೇ ಇಡಲಾಗಿತ್ತು. ಇದೀಗ ಪ್ರತಿಮೆಗೆ ಪ್ರತ್ಯೇಕವಾಗಿ ಕೊಠಡಿ ನಿರ್ಮಿಸಿ ಶಾಶ್ವತ ನೆಲೆ ಕಲ್ಪಿಸಿಕೊಡಲಾಗಿದೆ.
    ಶುಕ್ರವಾರ ಪ್ರತಿಷ್ಠಾಪನೆ ಅಂಗವಾಗಿ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕ ಪವನ್‌ಕುಮಾರ್ ಉಡುಪ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.
    ನಗರಸಭೆ ಅಧ್ಯಕ್ಷೆ ಗೀತಾರಾಜ್, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಕೆ. ಪರಮೇಶ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ನಗರಸಭಾ ಸದಸ್ಯರು, ಸಿಬ್ಬಂದಿಗಳು, ಪೌರಕಾರ್ಮಿಕರು, ರಮಾಕಾಂತ್, ನರಸಿಂಹಚಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಹೊರ ರಾಜ್ಯಗಳಿಂದ ಕದ್ದು ತಂದ ಮೊಬೈಲ್‌ಗಳ ಮಾರಾಟ : ಓರ್ವನ ಸೆರೆ


ಹೊರ ರಾಜ್ಯಗಳಿಂದ ಕದ್ದು ತಂದ ಮೊಬೈಲ್‌ಗಳನ್ನು ಮಾರಾಟ ಮಾಡುತ್ತಿದ್ದ ಅಡ್ಡೆಯೊಂದರ ಮೇಲೆ ಭದ್ರಾವತಿ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ದಾಳಿ ನಡೆಸಿದ್ದು, ಓರ್ವನನ್ನು ಬಂಧಿಸಿ ಕದ್ದ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಒಟ್ಟು ೬,೬೮,೪೦೦ ರು. ಮೌಲ್ಯದ ವಿವಿಧ ಕಂಪನಿಗಳ ಒಟ್ಟು ೫೫ ಮೊಬೈಲ್‌ಗಳು ವಶ

     ಭದ್ರಾವತಿ, ಡಿ. ೩೧: ಹೊರ ರಾಜ್ಯಗಳಿಂದ ಕದ್ದು ತಂದ ಮೊಬೈಲ್‌ಗಳನ್ನು ಮಾರಾಟ ಮಾಡುತ್ತಿದ್ದ ಅಡ್ಡೆಯೊಂದರ ಮೇಲೆ ನಗರದ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ.
      ಅನ್ವರ್ ಕಾಲೋನಿ ನಿವಾಸಿ ಸಯ್ಯದ್ ಅಲ್ವಿ (೨೫) ಎಂಬ ಯುವಕನನ್ನು ಸೆರೆ ಹಿಡಿಯಲಾಗಿದ್ದು, ಒಟ್ಟು ೬,೬೮,೪೦೦ ರು. ಮೌಲ್ಯದ ವಿವಿಧ ಕಂಪನಿಗಳ ಒಟ್ಟು ೫೫ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
      ಮಹಾರಾಷ್ಟ್ರದ ವಿವಿಧೆಡೆ ಮೊಬೈಲ್‌ಗಳನ್ನು ಕದ್ದು ತಂದು ನಗರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧಾರದ ಮೇರೆಗೆ ಹೊಸಮನೆ ಸಂತೆ ಮೈದಾನದಲ್ಲಿ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಮೂವರ ಪೈಕಿ ಇಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಪೊಲೀಸ್ ಉಪಾಧೀಕ್ಷಕ ಗಜಾನನ ಸುತಾರಾ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಶಾಂತಲಾ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಮೌನೇಶ್, ಮಂಜುನಾಥ್, ರಾಜು, ಕಲ್ಲೇಶ್ ಉಪಸ್ಥಿತರಿದ್ದರು.


ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಶಾಸಕರಿಗೆ ಮನವಿ

ರಾಜ್ಯ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಕೋರಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಭದ್ರಾವತಿಯಲ್ಲಿ ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೩೧: ರಾಜ್ಯ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಕೋರಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಯಿತು.
    ಮಧ್ಯಾಹ್ನ ೧ ಗಂಟೆಗೆ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದ ಸರ್ಕಾರಿ ನೌಕರರು, ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ಹಾಗು ಭತ್ಯೆ ಜಾರಿಗೊಳಿಸುವುದು. ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವುದು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದು ಹಾಗೂ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರು ಮತ್ತು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು.
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ದಬಸಪ್ಪ ನೇತೃತ್ವ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಎ.ಜೆ ರಂಗನಾಥ ಪ್ರಸಾದ್, ಕಾರ್ಯದರ್ಶಿ ಡಿ.ಎಸ್ ರಾಜಪ್ಪ, ಉಪಾಧ್ಯಕ್ಷರಾದ ಎಂ.ಎಸ್ ಬಸವರಾಜ, ಆರ್. ಅಶೋಕ್‌ರಾವ್, ಸಿ. ಮಂಜಾನಾಯ್ಕ ಮತ್ತು ರಾಜ್‌ಕುಮಾರ್, ಜಂಟಿ ಕಾರ್ಯದರ್ಶಿಗಳಾದ ಎಂ. ಪುಟ್ಟಲಿಂಗಮೂರ್ತಿ, ಜೆ. ಕಾಂತರಾಜ್ ಮತ್ತು ಬಿ.ಆರ್ ದಿನೇಶ್‌ಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ಆರ್. ಜನಾರ್ಧನ, ಡಿ. ನಾಗರತ್ನ ಮತ್ತು ಎ. ರಂಗನಾಥ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಆರ್. ಶಿವಾಜಿರಾವ್ ಮತ್ತು ಕೃಷ್ಣ, ಕ್ರೀಡಾ ಕಾರ್ಯದರ್ಶಿಗಳಾದ ಶ್ರೀಕಾಂತ್ ಮತ್ತು ಜಾನ್ ನಿರ್ಮಲ್  ಹಾಗು ಆಂತರಿಕ ಲೆಕ್ಕ ಪರಿಶೋಧಕ ಎಚ್.ಎಂ ನಾಗರಾಜಪ್ಪ , ಯು. ಮಹಾದೇವಪ್ಪ, ಬಸವಂತರಾವ್‌ದಾಳೆ, ಎಸ್.ಕೆ ಮೋಹನ್, ರೇವಣಪ್ಪ, ಎ. ತಿಪ್ಪೇಸ್ವಾಮಿ, ಪ್ರಕಾಶ್, ಡಾ.ಜಿ.ಎಂ ನಟರಾಜ್, ಸಿ. ಜಯಪ್ಪ, ಡಾ. ಶಿವಪ್ರಸಾದ್ ಸೇರಿದಂತೆ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಪಾಲ್ಗೊಂಡಿದ್ದರು.  

Thursday, December 30, 2021

ಬಾಬಳ್ಳಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಭದ್ರಾವತಿ ತಾಲೂಕಿನ ಬಾಬಳ್ಳಿ ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
    ಭದ್ರಾವತಿ, ಡಿ. ೩೦: ತಾಲೂಕಿನ ಬಾಬಳ್ಳಿ ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
    ಗ್ರಾಮದಲ್ಲಿ ಬಸ್ ನಿಲ್ದಾಣ ಹಾಗು ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಶಾಸಕರು, ಗ್ರಾಮದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಎಲ್ಲಾ ಜಾತಿ, ಧರ್ಮದವರೊಂದಿಗೆ ಜಾತ್ಯಾತೀತ ಮನೋಭಾವನೆಯಿಂದ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
    ಗ್ರಾಮದಲ್ಲಿ ಸಾರ್ವಜನಿಕ ಗ್ರಂಥಾಲಯ ಮತ್ತು ಕುಡಿಯುವ ನೀರಿನ ಬೃಹತ್ ಟ್ಯಾಂಕ್ ಮಂಜೂರು ಮಾಡಿಸುವ ಜೊತೆಗೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.
    ಸರ್‌ಎಂವಿ ಸರಕಾರಿ ಕಾಲೇಜಿನ ಉಪನ್ಯಾಸಕ ಡಾ. ಬಿ.ಎಂ ನಾಸೀರ್‌ಖಾನ್ ಶಿಕ್ಷಣದ ಮಹತ್ವದ ಕುರಿತು ಹಾಗು ಡಾ. ಧನಂಜಯ ಗ್ರಾಮೀಣಾಭಿವೃದ್ಧಿ ಕುರಿತು ಮತ್ತು ಹಿರಿಯ ನಾಗರೀಕ ಇಸ್ಮಾಯಿಲ್ ಖಾನ್ ರಾಷ್ಟ್ರೀಯ ಏಕೀಕರಣ ಕುರಿತು ಮಾತನಾಡಿದರು.
    ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೋಪಾಲಗಿರಿ, ಶೇಷಗಿರಿ, ಬಲರಾಮ್ ಗಿರಿ, ನ್ಯಾಯವಾದಿ ಪರಮೇಶಿ, ಶಂಕರ್ ನಾಯ್ಕ್ ಮತ್ತು ಆಸಿಫ್ ಅಲಿ ಹಾಗು ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವೈಶಾಲಿ ಸಿಂಗ್ ನಿರೂಪಿಸಿದರು. ರಸೂಲ್ ಖಾನ್ ಸ್ವಾಗತಿಸಿ, ವಂದಿಸಿದರು.

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ ಪೂರ್ಣ ಪ್ರಮಾಣದ ತರಗತಿ ಆರಂಭಕ್ಕೆ ಆಗ್ರಹ

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ  


ಪದವಿ ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತರಗತಿಗಳನ್ನು ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭದ್ರಾವತಿಯಲ್ಲಿ ಗುರುವಾರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
    ಭದ್ರಾವತಿ, ಡಿ. ೩೦: ಪದವಿ ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತರಗತಿಗಳನ್ನು ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಕೋವಿಡ್-೧೯ ಸೋಂಕಿನ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ಶಾಲಾ-ಕಾಲೇಜುಗಳಲ್ಲಿ ೨ನೇ ಲಾಕ್‌ಡೌನ್ ನಂತರ ತರಗತಿಗಳು ಆರಂಭಗೊಂಡಿವೆ. ಪಾಠ-ಪ್ರವಚನಗಳು ಭರದಿಂದ ಸಾಗುತ್ತಿವೆ. ಅಲ್ಲದೆ ಅನೇಕ ವಿದ್ಯಾರ್ಥಿಗಳು ವಿವಿಧ ಕೋರ್ಸುಗಳಿಗೆ ಪ್ರವೇಶ ಪಡೆಯಲು ಮುಂದಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತರಗತಿಗಳನ್ನು ಬಹಿಷ್ಕರಿಸಿರುವುದರಿಂದ ಪೂರ್ಣಪ್ರಮಾಣದಲ್ಲಿ ತರಗತಿಗಳು ನಡೆಯುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಸರ್ಕಾರ ತಕ್ಷಣ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವ ಜೊತೆಗೆ ಪೂರ್ಣಪ್ರಮಾಣದಲ್ಲಿ ತರಗತಿಗಳನ್ನು ಆರಂಭಿಸುವಂತೆ ಆಗ್ರಹಿಸಲಾಯಿತು.
    ರಾಜ್ಯದ ಸರ್ಕಾರಿ ಹಾಗು ಖಾಸಗಿ ವಿಶ್ವ ವಿದ್ಯಾಲಯಗಳಲ್ಲಿ ಸರ್ಕಾರಿ ಕೋಟಾದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ೨೦೨೧-೨೨ನೇ ಸಾಲಿನಲ್ಲಿ ೨೦,೦೦೦ ರು. ಕಾಲೇಜು ಶುಲ್ಕ ಹಾಗು ಸ್ಕಿಲ್ ಲ್ಯಾಬ್ ಸೌಲಭ್ಯಕ್ಕಾಗಿ ೧೦,೦೦೦ ರು. ಗಳಿಂದ ೨೦,೦೦೦ ರು.ಗಳ ವರೆಗೆ ಹೆಚ್ಚುವರಿ ಶುಲ್ಕ ವಸೂಲಿಗೆ ಸರ್ಕಾರ ಕಾಲೇಜುಗಳಿಗೆ ಅವಕಾಶ ಕಲ್ಪಿಸಿದೆ. ಇದರಿಂದಾಗಿ ೪೦,೦೦೦ ರು. ಶುಲ್ಕವನ್ನು ಹೆಚ್ಚುವರಿಯಾಗಿ ವಿದ್ಯಾರ್ಥಿಗಳು ಭರಿಸುವಂತಾಗಿದೆ. ಕೋವಿಡ್-೧೯ರ ಪರಿಣಾಮ ಪ್ರಸ್ತುತ ಎಲ್ಲೆಡೆ ಆರ್ಥಿಕ ಸಂಕಷ್ಟ ಎದುರಾಗಿದೆ. ಮಧ್ಯಮ ಹಾಗು ಬಡವರ್ಗದವರು ಶುಲ್ಕ ಪಾವತಿಸುವುದು ಕಷ್ಟಕರವಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಶುಲ್ಕ ಹೆಚ್ಚಳಕ್ಕೆ ಹೊರಡಿರುವ ಆದೇಶವನ್ನು ತಕ್ಷಣ ಹಿಂಪಡೆಯುವ ಮೂಲಕ ಮಧ್ಯಮ ಹಾಗು ಬಡವರ್ಗದವರ ಹಿತ ಕಾಯ ಬೇಕೆಂದು ಮನವಿ ಮಾಡಲಾಯಿತು.  
    ಇದಕ್ಕೂ ಮೊದಲು ವಿದ್ಯಾರ್ಥಿಗಳು ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಿಂದ ವಿಐಎಸ್‌ಎಲ್ ಕ್ರೀಡಾಂಗಣ ರಸ್ತೆ, ಡಬ್ಬಲ್ ರಸ್ತೆ, ಅಂಡರ್ ಬ್ರಿಡ್ಜ್ ಮೂಲಕ ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ ಮತ್ತು ರಂಗಪ್ಪ ವೃತ್ತ ಮೂಲಕ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.
    ವಿದ್ಯಾರ್ಥಿ ಪ್ರಮುಖರಾದ ಆಕಾಶ್, ಮನು, ಅಭಿಲಾಷ್, ವಿಜಯ್, ಸುಚಿತ್ರ, ಸ್ಪೂರ್ತಿ ಮತ್ತು ಸಹನಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಗಿರಿಜಮ್ಮ ನಿಧನ


ಗಿರಿಜಮ್ಮ
    ಭದ್ರಾವತಿ, ಡಿ. ೩೦: ಶಿವಮೊಗ್ಗ ಶಾಂತಲಾ ಸ್ಪೆರೋಕ್ಯಾಸ್ಟ್ ಪ್ರೈವೇಟ್ ಲಿಮಿಟೆಡ್ ಆಡಳಿತ ಮಂಡಳಿ ನಿರ್ದೇಶಕ ಜಿ.ಎಸ್ ಯೋಗೇಶ್ ಕುಮಾರ್‌ರವರ ತಾಯಿ, ಜನ್ನಾಪುರ ಕಿತ್ತೂರು ರಾಣಿ ಚೆನ್ನಮ್ಮ ಬಡಾವಣೆ ನಿವಾಸಿ ಗಿರಿಜಮ್ಮ(೯೬) ನಿಧನ ಹೊಂದಿದರು.
    ಇವರ ಅಂತ್ಯಕ್ರಿಯೆ ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ಗುರುವಾರ ಮಧ್ಯಾಹ್ನ ನೆರವೇರಿತು. ಗಿರಿಜಮ್ಮನವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಪರಮೇಶ್ವರ್, ಬಸವರಾಜ್, ಜೇಡಿಕಟ್ಟೆ ಶ್ರೀ ಮರುಳಸಿದ್ದೇಶ್ವರ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ಎಸ್. ವಾಗೀಶ್, ವೀರಶೈವ ಸೇವಾ ಸಮಿತಿ ಅಧ್ಯಕ್ಷ ಮಹೇಶ್‌ಕುಮಾರ್, ಶಾಂತಲಾ ಸ್ಪೆರೋಕ್ಯಾಸ್ಟ್ ಪ್ರೈವೇಟ್ ಲಿಮಿಟೆಡ್ ಆಡಳಿತ ಮಂಡಳಿ ಹಾಗು ಇನ್ನಿತರ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.  

Wednesday, December 29, 2021

ಜಯಕರ್ನಾಟಕ ಸಂಘಟನೆ ವತಿಯಿಂದ ಕುವೆಂಪು ಜನ್ಮದಿನ ಆಚರಣೆ

ಡಿ.೩೧ರ ಕರ್ನಾಟಕ ಬಂದ್‌ಗೆ ಬೆಂಬಲ ಇಲ್ಲ


ಕುವೆಂಪು ಜನ್ಮದಿನದ ಅಂಗವಾಗಿ ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಕುವೆಂಪು ಅವರ ಪ್ರತಿಮೆಗೆ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಡಾ. ದೀಪಕ್ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಿದ ಸಂಘಟನೆ ಪ್ರಮುಖರು ನಂತರ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದರು.
    ಭದ್ರಾವತಿ: ಜಯಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಬುಧವಾರ ರಾಷ್ಟ್ರಕವಿ ಕುವೆಂಪು ಜನ್ಮದಿನ ಆಚರಿಸಲಾಯಿತು.
    ಕುವೆಂಪು ಜನ್ಮದಿನದ ಅಂಗವಾಗಿ ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಕುವೆಂಪು ಅವರ ಪ್ರತಿಮೆಗೆ ಸಂಘಟನೆ ಜಿಲ್ಲಾಧ್ಯಕ್ಷ ಡಾ. ದೀಪಕ್ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಲಾಯಿತು.
    ಡಾ. ದೀಪಕ್ ಮಾತನಾಡಿ, ಸಂಘಟನೆ ಸದಾ ನಾಡು-ನುಡಿ ಹೋರಾಟಕ್ಕೆ ಬದ್ಧವಾಗಿದೆ. ಡಿ.೩೧ ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್‌ಗೆ ಸಂಘಟನೆ ಯಾವುದೇ ರೀತಿ ಬೆಂಬಲ ನೀಡುವುದಿಲ್ಲ. ಆದರೆ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.
    ಕಾರ್ಯಾಧ್ಯಕ್ಷ ಅಬ್ದುಲ್ ರಹೀಮ್, ಪ್ರಧಾನ ಕಾರ್ಯದರ್ಶಿ ನಾಸಿರ್, ಜಿಲ್ಲಾ ಪ್ರಧಾನ ಸಂಚಾಲಕ ದಿವ್ಯರಾಜ್, ಸಂಘಟನಾ ಕಾರ್ಯದರ್ಶಿ ಶ್ರೀಕಾಂತ್, ನಗರ ಅಧ್ಯಕ್ಷ ಸಿಕಂದರ್, ಹೊಳೆಹೊನ್ನೂರು ಅಧ್ಯಕ್ಷ ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶಾರದ ಕಾರಂತ್ ನಿಧನ

ಶಾರದ ಕಾರಂತ್
    ಭದ್ರಾವತಿ, ಡಿ. ೨೯: ನಗರಸಭೆ ವಾರ್ಡ್ ನಂ.೨, ಬಿ.ಎಚ್ ರಸ್ತೆ ನಿವಾಸಿ ಶಾರದ ಕಾರಂತ್(೬೮) ಬುಧವಾರ ನಿಧನ ಹೊಂದಿದರು.
    ಶಾರದ ಅವರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಿಎಸ್‌ಎನ್‌ಎಲ್ ಮಳಿಗೆಯ ಗಣೇಶ್ ಕಾರಂತ್ ಸೇರಿದಂತೆ ೩ ಗಂಡು ಹಾಗು ೩ ಹೆಣ್ಣು ಮಕ್ಕಳನ್ನು ಹೊಂದಿದ್ದರು. ಮೃತರ ಅಂತ್ಯಕ್ರಿಯೆ ಹುತ್ತಾ ಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಮೃತರ ನಿಧನಕ್ಕೆ ನಗರದ ಅನೇಕ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸರ್ಕಾರ ಸರ್ವರ್ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಲಿ

ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ


ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಬುಧವಾರ ಭದ್ರಾವತಿಯಲ್ಲಿ ಪಡಿತರ ವಿತರಕರ ಸಂಘದ ಪ್ರಮುಖರನ್ನು ಭೇಟಿ ಮಾಡಿ ಮಾತನಾಡಿದರು.
    ಭದ್ರಾವತಿ, ಡಿ. ೨೯: ಪಡಿತರ ವಿತರಕರಿಗೆ ಸರ್ವರ್ ಸಮಸ್ಯೆ ದೊಡ್ಡ ಸಮಸ್ಯೆಯಾಗಿದ್ದು, ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗಳಲ್ಲೂ ಒಂದೊಂದು ಸರ್ವರ್ ಕೇಂದ್ರಗಳನ್ನು ತೆರೆಯುವಂತೆ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಮನವಿ ಮಾಡಿದರು.
    ಅವರು ಬುಧವಾರ ನಗರದ ಪಡಿತರ ವಿತರಕರ ಸಂಘದ ಪ್ರಮುಖರನ್ನು ಭೇಟಿ ಮಾಡಿ ಮಾತನಾಡಿದರು.
    ಸರ್ಕಾರ ಮೊದಲು ಸರ್ವರ್ ಸಮಸ್ಯೆ ಬಗೆಹರಿಸಬೇಕು. ಸರ್ವರ್ ಸಮಸ್ಯೆಯಿಂದಾಗಿ ಕೂಲಿಗಾರರು, ಬಡ ಕಾರ್ಮಿಕರು ಹಾಗು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರು ತೊಂದರೆ ಅನುಭವಿಸುವಂತಾಗಿದೆ. ಪ್ರಸ್ತುತ ರಾಜ್ಯದಲ್ಲಿ ೪.೭೦ ಕೋಟಿ ಜನರಿಗೆ ಪಡಿತರ ವಿತರಿಸಲಾಗುತ್ತಿದೆ. ದೊಡ್ಡಮಟ್ಟದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರೂ ಸಹ ಬೆಂಗಳೂರು, ಗುಲ್ಬರ್ಗ ಮತ್ತು ಮೈಸೂರು-ಬೆಳಗಾವಿ ಸೇರಿ ಒಟ್ಟು ೩ ಕಡೆ ಮಾತ್ರ ಸರ್ವರ್ ಕೇಂದ್ರಗಳನ್ನು ಸರ್ಕಾರ ತೆರೆದಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಸರ್ವರ್ ಕೇಂದ್ರಗಳನ್ನು ತೆರೆಯುವುದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು.
    ಪಡಿತರ ವಿತರಕರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.  ತಾಂತ್ರಿಕ ಸಮಸ್ಯೆಗಳಿಗೆ ಇಲಾಖೆಗಳ ಅಧಿಕಾರಿಗಳು ವಿತರಕರನ್ನು ಹೊಣೆಗಾರರನ್ನಾಗಿ ಮಾಡುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ವಿತರಕರನ್ನು ಹೊಣೆಗಾರರನ್ನಾಗಿ ಮಾಡದಿರುವಂತೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ಸಹ ನೀಡಲಾಗಿದೆ ಎಂದರು.
    ರಾಜ್ಯದಲ್ಲಿ ವಿತರಕರಿಗೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಂದ ನಿಗದಿತ ಸಮಯಕ್ಕೆ ಕಮಿಷನ್ ಹಣ ಬರುತ್ತಿಲ್ಲ. ಈ ಹಿಂದೆ ಸಿದ್ದರಾಮಯ್ಯನವರ ಅವಧಿಯಲ್ಲಿ ಈ ರೀತಿ ಸಮಸ್ಯೆ ಕಂಡು ಬರುತ್ತಿರಲಿಲ್ಲ. ಈಗಿನ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತಿಂಗಳ ಆರಂಭದಲ್ಲಿಯೇ ಕಮಿಷನ್ ಹಣ ನೀಡುವ ವ್ಯವಸ್ಥೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಪಡಿತರ ವಿತರಕರ ಸಂಘದ ಪ್ರಮುಖರಾದ ಸಿದ್ದಲಿಂಗಯ್ಯ, ರಾಜು, ಯೋಗೇಶ್‌ನಾಯ್ಕ, ಕುಮಾರ್, ಮುಖಂಡರಾದ ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷ ಸಿ.ಎನ್ ರಾಮಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tuesday, December 28, 2021

ಇ-ಶ್ರಮ್ ಯೋಜನೆಯಡಿ ಅಸಂಘಟಿತ ಕಾರ್ಮಿಕರ ನೋಂದಾಣಿಗೆ ಚಾಲನೆ

ಸೌಲಭ್ಯಪಡೆದುಕೊಳ್ಳಲು ಎಲ್ಲಾ ರೀತಿಯ ಸಹಕಾರ : ಮುಮ್ತಾಜ್ ಬೇಗಂ


ಭದ್ರಾವತಿ ಹಳೇನಗರದ ಸವಿತಾ ಸಮಾಜದಲ್ಲಿ ಇ-ಶ್ರಮ್ ಕಾರ್ಡ್ ನೋಂದಾಣಿಗೆ ಚಾಲನೆ ನೀಡಿದ ಕಾರ್ಮಿಕ ನಿರೀಕ್ಷಕಿ ಮುಮ್ತಾಜ್ ಬೇಗಂ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಡಿ. ೨೮: ಇ-ಶ್ರಮ್ ಯೋಜನೆಯಡಿ ಸರ್ಕಾರದಿಂದ ಸೌಲಭ್ಯಗಳನ್ನು ಪಡೆದುಕೊಳ್ಳಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಕಾರ್ಮಿಕ ನಿರೀಕ್ಷಕಿ ಮುಮ್ತಾಜ್ ಬೇಗಂ ಹೇಳಿದರು.
    ಅವರು ಮಂಗಳವಾರ ಹಳೇನಗರದ ಸವಿತಾ ಸಮಾಜದಲ್ಲಿ ಇ-ಶ್ರಮ್ ಕಾರ್ಡ್ ನೋಂದಾಣಿಗೆ ಚಾಲನೆ ನೀಡಿ ಮಾತನಾಡಿದರು.
    ಇ-ಶ್ರಮ್ ಯೋಜನೆ ಅಸಂಘಟಿತ ಕಾರ್ಮಿಕರಿಗೆ ಹೆಚ್ಚಿನ ಸಹಕಾರಿಯಾಗಿದ್ದು, ಇದರ ಸದುಪಯೋಗಪಡೆದುಕೊಳ್ಳುವಂತೆ ಮನವಿ ಮಾಡಿದರು.
    ಕರ್ನಾಟಕ ಸ್ಟೇಟ್ ಕನ್ಸಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು ಹಾಗು ಸರ್.ಎಂ ವಿಶ್ವೇಶ್ವರಾಯ ದ್ವಿಚಕ್ರ ವಾಹನ ದುರಸ್ತಿಗಾರರ ಸಂಘದ ಅಧ್ಯಕ್ಷ ಬಾಬು ಯೋಜನೆಯ ಮಹತ್ವ ಕುರಿತು ವಿವರಿಸಿದರು.
    ಸವಿತಾ ಸಮಾಜದ ಅಧ್ಯಕ್ಷ ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಎಂ. ಪರಮೇಶ್, ಸವಿತಾ ಸಮಾಜದ ಪದಾಧಿಕಾರಿಗಳು ಹಾಗು ಕಾರ್ಮಿಕ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇಸ್ರೋ ಮಾಜಿ ಅಧ್ಯಕ್ಷ ಡಾ. ಎ.ಎಸ್ ಕಿರಣ್‌ಕುಮಾರ್‌ಗೆ ಅದ್ದೂರಿ ಸ್ವಾಗತ

ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಡಿ. ೨೯ರಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಆಯೋಜಿಸಲಾಗಿರುವ ರಾಜ್ಯಮಟ್ಟದ ಪ್ರಥಮ ವೈಜ್ಞಾನಿಕ ಸಮ್ಮೇಳನ, ಅಜಾದಿ ಕಾ ಅಮೃತ ಮಹೋತ್ಸವ, ವಿಶ್ವ ಮಾನವ ದಿನಾಚರಣೆ, ರಾಜ್ಯಮಟ್ಟದ 'ಎಚ್.ಎನ್ ಪ್ರಶಸ್ತಿ' ಪ್ರಧಾನ ಸಮಾರಂಭದ ಸಮ್ಮೇಳನ ಸರ್ವಾಧ್ಯಕ್ಷ, ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್ ಕಿರಣ್‌ಕುಮಾರ್ ಅವರನ್ನು ಮಂಗಳವಾರ ಸಂಜೆ ಭದ್ರಾವತಿ ಬೈಪಾಸ್ ರಸ್ತೆ ಬಾರಂದೂರಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.  
    ಭದ್ರಾವತಿ, ಡಿ. ೨೮: ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಡಿ. ೨೯ರಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಆಯೋಜಿಸಲಾಗಿರುವ ರಾಜ್ಯಮಟ್ಟದ ಪ್ರಥಮ ವೈಜ್ಞಾನಿಕ ಸಮ್ಮೇಳನ, ಅಜಾದಿ ಕಾ ಅಮೃತ ಮಹೋತ್ಸವ, ವಿಶ್ವ ಮಾನವ ದಿನಾಚರಣೆ, ರಾಜ್ಯಮಟ್ಟದ 'ಎಚ್.ಎನ್ ಪ್ರಶಸ್ತಿ' ಪ್ರಧಾನ ಸಮಾರಂಭದ ಸಮ್ಮೇಳನ ಸರ್ವಾಧ್ಯಕ್ಷ, ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್ ಕಿರಣ್‌ಕುಮಾರ್ ಅವರನ್ನು ಮಂಗಳವಾರ ಸಂಜೆ ನಗರದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
    ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಪದಾಧಿಕಾರಿಗಳು, ಸದಸ್ಯರು ಹಾಗು ನಗರದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಬೆಂಗಳೂರು-ತುಮಕೂರು ಮಾರ್ಗವಾಗಿ ಆಗಮಿಸಿದ ಡಾ.ಎ.ಎಸ್ ಕಿರಿಣ್‌ಕುಮಾರ್ ಹಾಗು ಪರಿಷತ್‌ನ ರಾಜ್ಯಾಧ್ಯಕ್ಷ ಡಾ. ಹುಲಿಕಲ್ ನಟರಾಜ್ ಸೇರಿದಂತೆ ಇನ್ನಿತರರನ್ನು ನಗರದ ಬೈಪಾಸ್ ರಸ್ತೆ ಬಾರಂದೂರಿನಲ್ಲಿ ಸನ್ಮಾನಿಸಿ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ವಿ.ಟಿ ಸ್ವಾಮಿ, ಜಿಲ್ಲಾಧ್ಯಕ್ಷ ರಾಜೇಂದ್ರ ಮತ್ತು ತಾಲೂಕು ಅಧ್ಯಕ್ಷ ಸಿ. ಜಯಪ್ಪ ಅಭಿನಂದನಾ ನುಡಿಗಳನ್ನಾಡಿದರು.
    ಪರಿಷತ್ ಜಿಲ್ಲಾ ಉಪಾಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ತಾಲೂಕು ಉಪಾಧ್ಯಕ್ಷರಾದ ಎಸ್. ಉಮಾ, ಜಿ. ರಾಜು, ಕಾರ್ಯದರ್ಶಿ ಎ. ತಿಪ್ಪೇಸ್ವಾಮಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ದಬಸಪ್ಪ, ಸದಸ್ಯರಾದ ಈಶ್ವರಪ್ಪ, ಲೋಕೇಶ್ ಮಾಳೇನಹಳ್ಳಿ, ಸಿ. ರಾಮಾಚಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕನ್ನಡಿಗರ ಭಾವನೆಗಳಿಗೆ ಧಕ್ಕೆ : ಶಿವಸೇನೆ, ಎಂಇಎಸ್ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ

ಕನ್ನಡ ಧ್ವಜ ಸುಟ್ಟು ಹಾಕಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿರುವ ಹಾಗು ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಮಸಿ ಬಳಿದು ಕನ್ನಡಿಗರ ಭಾವನೆಗಳೊಂದಿಗೆ ಪುಂಡಾಟಿಕೆ ನಡೆಸುತ್ತಿರುವ ಶಿವಸೇನೆ ಹಾಗು ಎಂಇಎಸ್ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸಬೇಕೆಂದು ಆಗ್ರಹಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಭದ್ರಾವತಿಯಲ್ಲಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೨೮: ಕನ್ನಡ ಧ್ವಜ ಸುಟ್ಟು ಹಾಕಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿರುವ ಹಾಗು ವಿಶ್ವಗುರು ಬಸವಣ್ಣನವರ ಪ್ರತಿಮೆಗೆ ಮಸಿ ಬಳಿದು ಕನ್ನಡಿಗರ ಭಾವನೆಗಳೊಂದಿಗೆ ಪುಂಡಾಟಿಕೆ ನಡೆಸುತ್ತಿರುವ ಶಿವಸೇನೆ ಹಾಗು ಎಂಇಎಸ್ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸಬೇಕೆಂದು ಆಗ್ರಹಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ವೇದಿಕೆ ಅಧ್ಯಕ್ಷ ಎಂ. ಪರಮೇಶ್ ಮಾತನಾಡಿ, ಶಿವಸೇನೆ ಹಾಗು ಎಂಇಎಸ್ ಪುಂಡರು ಪ್ರತಿ ಬಾರಿ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಕನ್ನಡ ನಾಡು-ನುಡಿ ವಿಚಾರದಲ್ಲಿ ಕನ್ನಡಿಗರಿಗೆ ಅವಮಾನ ಮಾಡುವ ಮೂಲಕ ಪುಂಡಾಟಿಕೆ ನಡೆಸುತ್ತಿರುವುದು ಸರಿಯಲ್ಲ. ಅಲ್ಲದೆ ಇದುವರೆಗೂ ಯಾವುದೇ ಸರ್ಕಾರ ಶಿವಸೇನೆ ಹಾಗು ಎಂಇಎಸ್ ಪುಂಡರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಬೆಳವಣಿಗೆಯಾಗಿದೆ ಎಂದರು.
    ತಕ್ಷಣ ಸರ್ಕಾರ ಶಿವಸೇನೆ ಹಾಗು ಎಂಇಎಸ್ ಪುಂಡರ ವಿರುದ್ಧ ಗೂಂಡಾ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ರಾಜ್ಯದಲ್ಲಿ ಎಂಇಎಸ್ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.
ಸಂಘಟನಾ ಕಾರ್ಯದರ್ಶಿ ಎಚ್. ರಾಮಕೃಷ್ಣ, ಪ್ರಮುಖರಾದ ಜವರಪ್ಪ, ರಮೇಶ್, ಎನ್. ಮಲ್ಲಿಕಾರ್ಜುನ, ಆರ್. ದಿಲೀಪ್, ಸುರೇಶ್ ಮತ್ತು ಉಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ರಾಜಲಕ್ಷ್ಮಿ ನಿಧನ

ರಾಜಲಕ್ಷ್ಮಿ
ಭದ್ರಾವತಿ ಡಿ ೨೮: ಹಳೇನಗರದ ಎನ್‌ಎಸ್‌ಟಿ ರಸ್ತೆ ನಿವಾಸಿ ರಾಜಲಕ್ಷ್ಮಿ(೯೦) ಸೋಮವಾರ ರಾತ್ರಿ ನಿಧನ ಹೊಂದಿದರು.
ರಾಜಲಕ್ಷ್ಮೀ ಓರ್ವ ಪುತ್ರ ಹಾಗು ಮೂವರು ಪುತ್ರಿಯರನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಮಂಗಳವಾರ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಮೃತರ ನಿಧನಕ್ಕೆ ಚಿನ್ನಬೆಳ್ಳಿ ವರ್ತಕರು ಸೇರಿದಂತೆ ನಗರದ ವಿವಿಧ ಸಂಘ-ಸಂಸ್ಥೆಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.

Monday, December 27, 2021

ಕೆ.ಸಿ ವೀರಭದ್ರಗೌಡ್ರುರವರು ಸಮಾಜಕ್ಕೆ ಸಲ್ಲಿಸಿರುವ ಸೇವೆ ಅಪಾರ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿ ಕಣಕಟ್ಟೆಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಲಯನ್ಸ್ ಕೆ.ಸಿ ವೀರಭದ್ರಗೌಡ್ರುರವರ ಕೈಲಾಸ ಶಿವಗಣಾರಾಧನೆ ಹಾಗು ಸರ್ವಶರಣ ಸಮ್ಮೇಳನದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಡಿ. ೨೭: ದಿವಂಗತ ಲಯನ್ಸ್ ಕೆ.ಸಿ ವೀರಭದ್ರಗೌಡ್ರುರವರು ಸಮಾಜಕ್ಕೆ ಸಲ್ಲಿಸಿರುವ ಸೇವೆ ಅಪಾರವಾಗಿದ್ದು, ಇವರ ಆದರ್ಶತನ ಎಲ್ಲರಿಗೂ ಮಾದರಿಯಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಸ್ಮರಿಸಿದರು.
    ಅವರು ಸೋಮವಾರ ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿ ಕಣಕಟ್ಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಲಯನ್ಸ್ ಕೆ.ಸಿ ವೀರಭದ್ರಗೌಡ್ರುರವರ ಕೈಲಾಸ ಶಿವಗಣಾರಾಧನೆ ಹಾಗು ಸರ್ವಶರಣ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜದ ಎಲ್ಲರೊಂದಿಗೆ ಉತ್ತಮ ಬಾಂಧವ್ಯ, ಜೊತೆಗೆ ಸೇವಾ ಮನೋಭಾವನೆ ಹೊಂದಿದ್ದ ವೀರಭದ್ರಗೌಡ್ರುರವರು ಸಮಾಜಕ್ಕೆ ಸಲ್ಲಿಸಿರುವ ಸೇವೆ ಶ್ಲಾಘನೀಯ ಎಂದರು.
    ಚಿತ್ರದುರ್ಗ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ರೈತ ಮುಖಂಡ ಎಚ್.ಆರ್ ಬಸವರಾಜಪ್ಪ, ಕರ್ನಾಟಕ ನೀರು ಸರಬರಾಜು, ಒಳಚರಂಡಿ ಮಂಡಳಿ ಸದಸ್ಯ ಮಂಗೋಟೆ ರುದ್ರೇಶ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಪ್ರಧಾನ ಕಾರ್ಯದರ್ಶಿ ಬಿ.ಎಸ್ ಮಹೇಶ್‌ಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಾನಕಿ ನಿಧನ

ಜಾನಕಿ
ಭದ್ರಾವತಿ, ಡಿ. ೨೭:  ಹಳೇನಗರದ ಭೂತನಗುಡಿ ನಿವಾಸಿ ಜಾನಕಿ(೬೭) ಭಾನುವಾರ ನಿಧನ ಹೊಂದಿದರು.
ಪತಿ, ಓರ್ವ ಪುತ್ರಿ ಹಾಗು ಇಬ್ಬರು ಪುತ್ರರನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸುಗ್ರಾಮ ಅಧ್ಯಕ್ಷೆಗೆ ಅಭಿನಂದನೆ

    ಗೌರಮ್ಮ ಎಸ್. ಮಹಾದೇವ
ಭದ್ರಾವತಿ, ಡಿ. ೨೭: ತಾಲೂಕು ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗೌರಮ್ಮ ಎಸ್. ಮಹಾದೇವ ಅವರನ್ನು ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಸದಸ್ಯರು ಅಭಿನಂದಿಸಿದ್ದಾರೆ.
    ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಗೌರಮ್ಮ ಅವರು ಅಧ್ಯಕ್ಷರಾಗಿವುದು ಪಂಚಾಯಿತಿಗೆ ಹೆಮ್ಮೆಯ ವಿಚಾರವಾಗಿದ್ದು, ತಾಲೂಕಿನಾದ್ಯಂತ ಮಹಿಳಾ ಸದಸ್ಯರಿಗೆ ಗ್ರಾಮ ಪಂಚಾಯಿತಿ ಆಡಳಿತದ ಪರಿಕಲ್ಪನೆ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಒದಗಿಸುವ ಜೊತೆಗೆ ಪಂಚಾಯಿತಿ ಆಡಳಿತ ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಮನವಿ ಮಾಡಿದ್ದಾರೆ.
    ಗೌರಮ್ಮ ಅವರಿಗೆ  ಬ್ಲಾಕ್ ಕಾಂಗ್ರೆಸ್ ಸಮಿತಿ ಎಸ್.ಟಿ ಘಟಕದ ತಾಲೂಕು ಅಧ್ಯಕ್ಷ ಎಸ್. ಮಹಾದೇವ ಹಾಗು ಮೇದಾರ ಸಮಾಜದ ಪ್ರಮುಖರು ಸೇರಿದಂತೆ ಇನ್ನಿತರರು ಸಹ ಅಭಿನಂದಿಸಿದ್ದಾರೆ.

ನಗರಸಭೆ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕೆ. ಸುದೀಪ್‌ಕುಮಾರ್


ಭದ್ರಾವತಿ ನಗರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ೧೨ನೇ ವಾರ್ಡ್ ನಗರಸಭಾ ಸದಸ್ಯ ಕೆ. ಸುದೀಪ್ ಕುಮಾರ್ ಸೋಮವಾರ ಅಧಿಕಾರ ಸ್ವೀಕರಿಸಿದರು.  
    ಭದ್ರಾವತಿ, ಡಿ. ೨೭: ನಗರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ೧೨ನೇ ವಾರ್ಡ್ ನಗರಸಭಾ ಸದಸ್ಯ ಕೆ. ಸುದೀಪ್ ಕುಮಾರ್ ಸೋಮವಾರ ಅಧಿಕಾರ ಸ್ವೀಕರಿಸಿದರು.                                    
    ನಗರಸಭೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ  ಸುದೀಪ್ ಕುಮಾರ್  ಅವಿರೋಧವಾಗಿ ಆಯ್ಕೆಯಾಗಿದ್ದು, ಚುನಾವಣಾಧಿಕಾರಿಯಾಗಿ ಪೌರಾಯುಕ್ತ ಕೆ. ಪರಮೇಶ್ ಕರ್ತವ್ಯ ನಿರ್ವಹಿಸಿದರು.                                  
      ವಿ.ಕದಿರೇಶ್, ಮಣಿ ಎಎನ್ ಎಸ್, ಬಷೀರ್ ಅಹ್ಮದ್, ಲತಾ ಚಂದ್ರಶೇಖರ್,  ಶೃತಿ ವಸಂತ್, ಜಯಶೀಲ ಸುರೇಶ್, ಕೋಟೇಶ್ವರ ರಾವ್, ಸೈಯದ್ ರಿಯಾಜ್, ರೇಖಾ ಪ್ರಕಾಶ್ ಮತ್ತು ಉದಯ್ ಕುಮಾರ್ ನೂತನ ಸ್ಥಾಯಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.                            
   ನೂತನ ಅಧ್ಯಕ್ಷರು ಮತ್ತು ಸದಸ್ಯರನ್ನು  ನಗರಸಭೆ ಅಧ್ಯಕ್ಷೆ ಗೀತಾ ರಾಜ್ ಕುಮಾರ್  ಮತ್ತು  ಉಪಾಧ್ಯಕ್ಷ ಚನ್ನಪ್ಪ ಅಭಿನಂದಿಸಿದರು.

Sunday, December 26, 2021

ವಿಕಲಚೇತನ ಪ್ರತಿಭೆಗಳು ಹೊರಹೊಮ್ಮಲು ಕ್ರೀಡಾಕೂಟಗಳು ಸಹಕಾರಿ : ಶೇಖರ್‌ನಾಯ್ಕ್

ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಭಾನುವಾರ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಮತ್ತು ಬೆಂಗಳೂರಿನ ಶೇಖರ್ ನಾಯ್ಕ್ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಅಂಧರ ತ್ರಿಕೋನಾ ಕ್ರಿಕೆಟ್ ಪಂದ್ಯಾವಳಿಯನ್ನು ಭಾರತ ರಾಷ್ಟ್ರೀಯ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್‌ನಾಯ್ಕ್ ಉದ್ಘಾಟಿಸಿದರು.  
    ಭದ್ರಾವತಿ, ಡಿ. ೨೬: ಕ್ರಿಕೆಟ್ ತರಬೇತಿ ಹಾಗೂ ಕ್ರೀಡಾಕೂಟ ಆಯೋಜನೆಯಿಂದ ವಿಕಲಚೇತನರಿಗೆ ಸಾಕಷ್ಟು ಅನುಕೂಲವಾಗಿದ್ದು, ಭವಿಷ್ಯದಲ್ಲಿ ಸಾವಿರಾರರು ವಿಕಲಚೇತನ ಪ್ರತಿಭೆಗಳು ಹೊರಹೊಮ್ಮುವಂತಾಗಬೇಕೆಂದು ಭಾರತ ರಾಷ್ಟ್ರೀಯ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್‌ನಾಯ್ಕ್ ಹೇಳಿದರು.
    ಅವರು ಭಾನುವಾರ ನಗರದ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಮತ್ತು ಬೆಂಗಳೂರಿನ ಶೇಖರ್ ನಾಯ್ಕ್ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಅಂಧರ ತ್ರಿಕೋನಾ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
    ಸಿದ್ದಾರ್ಥ ಅಂಧರ ಕೇಂದ್ರದ ಸಹಕಾರದೊಂದಿಗೆ ತರಬೇತಿ ಹಾಗು ಕ್ರೀಡಾಕೂಟ ಆಯೋಜನೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಅಂಧ ವಿಕಲಚೇತನರಲ್ಲಿನ ಕ್ರೀಡಾ ಪ್ರತಿಭೆಯನ್ನು ಗುರುತಿಸಬೇಕೆಂಬುದು ನನ್ನ ಆಶಯವಾಗಿದೆ. ಈ ನಿಟ್ಟಿನಲ್ಲಿ ಸಹಕಾರ ನೀಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಡಿಆರ್‌ಟಿ ಬೆಂಗಳೂರು ತಂಡದ ಉಪಾಧ್ಯಕ್ಷೆ ಕವಿತಾ, ಸ್ನೇಹ ದೀಪಾ ತಂಡ ವ್ಯವಸ್ಥಾಪಕ ಮಹೇಶ್, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎಲ್. ದೇವರಾಜ್, ಅತಿಥಿ ಉಪನ್ಯಾಸಕಿ ಸೃಷ್ಟಿ ಮತ್ತು ಬಿಆರ್‌ಸಿ ಸಿ. ಚನ್ನಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಶಿವಮೊಗ್ಗ ಶಾರದದೇವಿ ಅಂಧರ ವಿಕಾಸ ಕೇಂದ್ರದ ದೈಹಿಕ ಶಿಕ್ಷಕ ಸುರೇಶ್ ಮತ್ತು ಚಿಕ್ಕಮಗಳೂರು ಆಶಾಕಿರಣದ ದೈಹಿಕ ಶಿಕ್ಷಕ ಮಂಜುನಾಥ್ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಕ್ರೀಡಾಕೂಟದ ನೇತೃತ್ವ ವಹಿಸಿದ್ದರು.

ಅಧಿವೇಶನದಲ್ಲಿ ವಿನಾಕಾರಣ ಕಾಲಹರಣ : ರಾಜ್ಯದ ಜನತೆಗೆ ದ್ರೋಹ

ಸಾರ್ವಜನಿಕರ ಕುಂದುಕೊರತೆ ಹೋರಾಟ ಸಮಿತಿಯ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಆರೋಪ


ಭದ್ರಾವತಿ ಜಯಶ್ರೀ ವೃತ್ತದ ಸಮೀಪದಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆ ಹೋರಾಟ ಸಮಿತಿಯ ನೂತನ ದಿನದರ್ಶಿಕೆ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಬಿಡುಗಡೆಗೊಳಿಸಿದರು.

    ಭದ್ರಾವತಿ, ಡಿ. ೨೬: ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಜನರ ಸಮಸ್ಯೆಗಳಿಗೆ ಚರ್ಚಿಸದೆ ವಿನಾಕಾರಣ ಕಾಲಹರಣ ಮಾಡುವ ಮೂಲಕ ರಾಜ್ಯದ ಜನತೆಗೆ ದ್ರೋಹ ಬಗೆದಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಆರೋಪಿಸಿದರು.
    ಅವರು ನಗರದ ಜಯಶ್ರೀ ವೃತ್ತದ ಸಮೀಪದಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆ ಹೋರಾಟ ಸಮಿತಿಯ ನೂತನ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
    ರಾಜ್ಯದಲ್ಲಿ ಕೊರೋನಾ ಸೇರಿದಂತೆ ಪ್ರಾಕೃತಿಕ ವಿಕೋಪಗಳಿಂದ ರೈತರು, ಕಾರ್ಮಿಕರು, ವ್ಯಾಪರಸ್ಥರು ಸೇರಿದಂತೆ ಶ್ರೀಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇವುಗಳ ಕುರಿತು ಸದನದಲ್ಲಿ ಚರ್ಚಿಸದೆ ಕಾಲಹರಣ ಮಾಡಲಾಗಿದೆ. ಸರ್ಕಾರ ಮೊದಲು ಜನರ ಸಂಕಷ್ಟದಲ್ಲಿ ಪೂರಕವಾಗಿ ಸ್ಪಂದಿಸಬೇಕೆಂದರು.
ಕ್ಷೇತ್ರದಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಅವನತಿಹೊಂದಿರುವುದರ ಪರಿಣಾಮ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಈ ನಡುವೆಯೂ ೩ ಬಾರಿ ಶಾಸಕರಾಗಿ ಆಯ್ಕೆಮಾಡಿರುವ ಮತದಾರರ ಋಣ ತೀರಿಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಶಕ್ತಿ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದೇನೆ. ಮುಂದಿನ ದಿನಗಳಲ್ಲೂ ಇದೆ ರೀತಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.
    ಸಮಿತಿ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಸಮಿತಿ ಪೂರಕವಾಗಿ ಸ್ಪಂದಿಸುವ ಮೂಲಕ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದೆ. ಶಾಸಕರು ನಮ್ಮ ಬಹಳಷ್ಟು ಹೋರಾಟಗಳಿಗೆ ಪೂರಕವಾಗಿ ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲೂ ಹೋರಾಟ ಮುಂದುವರೆಸಿಕೊಂಡು ಹೋಗುವುದಾಗಿ ಭರವಸೆ ನೀಡಿದರು.
    ನಗರಸಭಾ ಸದಸ್ಯ ಕಾಂತರಾಜ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಪ್ರಮುಖರಾದ ಎಸ್.ಎಸ್ ಭೈರಪ್ಪ, ಶ್ರೀನಿವಾಸ್, ಕಟ್ಟಡ ಕಾರ್ಮಿಕರ ಸಂಘದ ತಾಂತ್ರಿಕ ಸಲಹೆಗಾರ ಮನೋಹರ್, ಹಿರಿಯ ನಾಗರೀಕರಾದ ದೊಡ್ಡಯ್ಯ, ವೆಂಕಟೇಶ್, ಲಾರ್ಜರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಟ್ಟಡ ಕಾರ್ಮಿಕರ ಸಂಘದ ಕಾರ್ಯಾಧ್ಯಕ್ಷ ಅಭಿಲಾಷ್ ನಿರೂಪಿಸಿದರು.

ಮರಳಿ ಮಾತೃ ಧರ್ಮಕ್ಕೆ ಸೇರ್ಪಡೆಗೊಂಡ ೯ ಜನರ ಕುಟುಂಬ

ಭದ್ರಾವತಿ ತಾಲೂಕಿನ ೯ ಜನರ ಕುಟುಂಬವೊಂದು ಕ್ರಿಶ್ಚಿಯನ್ ಧರ್ಮ ತೊರೆದು ಮಾತೃ ಧರ್ಮಕ್ಕೆ ಮರಳಿ ಬಂದಿರುವ ಘಟನೆ ಭಾನುವಾರ ನಡೆದಿದೆ.
    ಭದ್ರಾವತಿ, ಡಿ. ೨೬:  ತಾಲೂಕಿನ ೯ ಜನರ ಕುಟುಂಬವೊಂದು ಕ್ರಿಶ್ಚಿಯನ್ ಧರ್ಮ ತೊರೆದು ಮಾತೃ ಧರ್ಮಕ್ಕೆ ಮರಳಿ ಬಂದಿರುವ ಘಟನೆ ಭಾನುವಾರ ನಡೆದಿದೆ.
    ತಾಲೂಕಿನ ಅಂತರಗಂಗೆಯ ಗ್ರಾಮದ ನಿವಾಸಿ ಜಯಶೀಲನ್ ಕುಟುಂಬದ ಪತ್ನಿ ಜಯಮ್ಮ, ಕುಟುಂಬ ಸದಸ್ಯರಾದ ಪ್ರಭಾಕರನ್, ಲಲಿತಾ ಪ್ರಭಾಕರನ್ ಮತ್ತು ಇವರ ಮಕ್ಕಳಾದ ಭರತ್ ಕುಮಾರ್, ಭಾವನಾ ಹಾಗೂ ದ್ವಿತೀಯ ಪುತ್ರ ಪ್ರಕಾಶ ಮತ್ತು ಈತನ ಪತ್ನಿ ಶ್ವೇತಾ ಪ್ರಕಾಶ್ ಹಾಗೂ ಇವರ ಪುತ್ರಿ ಪೃಥ್ವಿ ಸೇರಿ ೯ ಜನರು ವಿಶ್ವ ಹಿಂದೂ ಪರಿಷದ್, ಬಜರಂಗದಳ ನೇತೃತ್ವದಲ್ಲಿ ಜನ್ನಾಪುರದಲ್ಲಿ ನೂತನವಾಗಿ ಪುನರ್ ನಿರ್ಮಾಣಗೊಂಡಿರುವ ಸಾರ್ವಜನಿಕ ಶ್ರೀ ರಾಮ ಭಜನಾ ಮಂದಿರದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಪ್ರಧಾನ ಅರ್ಚಕ ವೇದಬ್ರಹ್ಮ ಕೃಷ್ಣಮೂರ್ತಿ ಸೋಮಯಾಜಿ ಹಾಗು ಅರಕೆರೆ ವಿರಕ್ತ ಮಠದ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿಯವರ ಸಮ್ಮುಖದಲ್ಲಿ ಹಿಂದೂ ಧರ್ಮಕ್ಕೆ ಮರಳಿ ಸೇರ್ಪಪಡೆಗೊಂಡರು.
    ಮೂಲತಃ ಹಿಂದೂ ಧರ್ಮದವರಾದ ಜಯಶೀಲನ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಇದೀಗ ಸ್ವಯಂ ಪ್ರೇರಣೆಯಿಂದ ಇಡೀ ಕುಟುಂಬ ಮಾತೃಧರ್ಮಕ್ಕೆ ಮರಳಿದೆ. ಈ ಸಂದರ್ಭದಲ್ಲಿ ಹಿಂದೂ ಧರ್ಮದ ಪ್ರಮುಖರು ಕುಟುಂಬ ಸದಸ್ಯರನ್ನು ಅಭಿನಂದಿಸುವ ಮೂಲಕ ಮುಂದಿನ ಭವಿಷ್ಯಕ್ಕೆ ಶುಭ ಕೋರಿದರು.  
    ವಿಶ್ವಹಿಂದೂ ಪರಿಷದ್ ಪ್ರಮುಖರಾದ ಹಾ. ರಾಮಪ್ಪ, ಡಿ.ಆರ್. ಶಿವಕುಮಾರ್, ವೈ.ಎಸ್ ರಾಮಮೂರ್ತಿ, ಎಸ್. ನಾರಾಯಣ್, ಪಿ ಮಂಜುನಾಥ್ ರಾವ್. ಶೈಲೇಶ್ ಕೋಟಿ, ಸಿ. ಮಹೇಶ್ವರಪ್ಪ,  ಶಿವಮೂರ್ತಿ. ಮುತ್ತುರಾಮಲಿಂಗಂ, ಯಶೋದ ವೀರಭದ್ರಪ್ಪ. ಪಂಚ ರತ್ನಮ್ಮ, ಕೆ.ಆರ್. ವೇದಾವತಿ, ಗಾಯತ್ರಿ, ಆರ್.ಎಸ್ ಶೋಭಾ, ಮಂಜುಳಾ, ಅನ್ನಪೂರ್ಣ ಸತೀಶ್, ಹೇಮಾವತಿ, ಪರಿವಾರದ ಪ್ರಮುಖರಾದ ಬಾ.ನಿ ಮಹದೇವ, ಕುಲಕರ್ಣಿ, ಕೃಷ್ಣಮೂರ್ತಿ, ಚಂದ್ರಪ್ಪ, ಸುಬ್ರಮಣಿ, ಸುರೇಶ್ ಬಾಬು,  ಬಜರಂಗದಳದ ರಾಘವನ್ ವಡಿವೇಲು, ದಿನೇಶ್, ರವಿಕುಮಾರ್, ವಸಂತಕುಮಾರ್, ಬೆಟ್ಟೇಗೌಡ ಮತ್ತು ಶ್ರೀರಾಮ ಸೇನೆಯ ಉಮೇಶ್ ಗೌಡ ಸೇರಿದಂತೆ ಹಿಂದೂ ಪರ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.  


Saturday, December 25, 2021

ಕರ್ನಾಟಕ ರತ್ನ ಲಿಂಕೈಗ್ಯ ಡಾ. ಶಿವಕುಮಾರ ಸ್ವಾಮೀಜಿಯವರಿಗೆ ವಿಶ್ವ ಮಾನವ ಬಿರುದು

ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ಸಾರ್ವಜನಿಕರಿಗೆ ಪ್ರಶಸ್ತಿ ಸಮರ್ಪಣೆ

ತುಮಕೂರಿನ ಸಿದ್ದಗಂಗಾ ಮಠದ ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಲಿಂಕೈಗ್ಯ ಡಾ. ಶಿವಕುಮಾರ ಸ್ವಾಮೀಜಿಯವರಿಗೆ ಭದ್ರಾವತಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಶನಿವಾರ ವಿಶ್ವ ಮಾನವ ಬಿರುದು ನೀಡಿ ಶ್ರೀಗಳನ್ನು ಸ್ಮರಿಸಲಾಯಿತು.
    ಭದ್ರಾವತಿ, ಡಿ. ೨೫: ತುಮಕೂರಿನ ಸಿದ್ದಗಂಗಾ ಮಠದ ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಲಿಂಕೈಗ್ಯ ಡಾ. ಶಿವಕುಮಾರ ಸ್ವಾಮೀಜಿಯವರಿಗೆ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಶನಿವಾರ ವಿಶ್ವ ಮಾನವ ಬಿರುದು ನೀಡಿ ಶ್ರೀಗಳನ್ನು ಸ್ಮರಿಸಲಾಯಿತು.
    ಹಳೇನಗರದ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿ, ಸಿದ್ದಗಂಗಾ ಮಠದಲ್ಲಿ ಎಲ್ಲಾ ಜಾತಿ-ಮತದ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಅನ್ನ, ಆಶ್ರಯ, ಶಿಕ್ಷಣವನ್ನು ಲಕ್ಷಾಂತರ ಜನಕ್ಕೆ ನೀಡುವ ಮೂಲಕ  'ಜನ ಸೇವೆಯೇ ಜನಾರ್ಧನ ಸೇವೆ' ಎಂಬಂತೆ ಬಸವಣ್ಣನವರ ದಾರಿಯನ್ನೇ ಎತ್ತಿ ಹಿಡಿದ ಶ್ರೀಗಳ ಕಾರ್ಯ ಅತ್ಯಂತ ಶ್ರೇಷ್ಠವಾಗಿದೆ. ಅಲ್ಲದೆ ಶ್ರೀಗಳ ಸೇವಾ ಕಾರ್ಯಗಳು ಪ್ರಪಂಚದ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿವೆ. ಈ ಹಿನ್ನಲೆಯಲ್ಲಿ ಶ್ರೀಗಳನ್ನು ಗೌರವ ಪೂರ್ವಕವಾಗಿ ಸ್ಮರಣೆ ಮಾಡಿಕೊಳ್ಳುವ ಮೂಲಕ ಪ್ರಪಂಚದ ನಾಗರೀಕರ ಪರವಾಗಿ ವಿಶ್ವ ಮಾನವ ಬಿರುದನ್ನು ನೀಡಿ ಪ್ರಶಸ್ತಿಯನ್ನು ಸಾರ್ವಜನಿಕರಿಗೆ ಸಮರ್ಪಿಸಲಾಗುತ್ತಿದೆ ಎಂದರು.
    ಶಾಸಕ ಬಿ.ಕೆ ಸಂಗಮೇಶ್ವರ್, ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ವರಿಷ್ಠ ಕೆ.ಟಿ ಗಂಗಾಧರ್, ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ. ಚಂದ್ರಶೇಖರಯ್ಯ, ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ, ಜೇಡಿಕಟ್ಟೆ ಶ್ರೀ ಮರುಳಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ಹಾಗು ವಿವಿಧ ಸಮಾಜಗಳ ಅಧ್ಯಕ್ಷರು, ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
 

ಮತಾಂತರ ಕಾಯ್ದೆ ಭೀತಿ ನಡುವೆಯೂ ಸಡಗರ ಸಂಭ್ರಮದಿಂದ ಕ್ರಿಸ್‌ಮಸ್ ಆಚರಣೆ

ಭದ್ರಾವತಿ ನ್ಯೂಟೌನ್ ವೇನ್ಸ್ ಮೆಮೋರಿಯಲ್ ಚರ್ಚ್ ಮುಂಭಾಗ ನಿರ್ಮಿಸಲಾಗಿರುವ ಏಸುಕ್ರಿಸ್ತನ ಜನ್ಮ ವೃತ್ತಾಂತ ಸಾರುವ ಆಕರ್ಷಕ ಗೋದೋಲಿ.
    ಭದ್ರಾವತಿ, ಡಿ. ೨೫: ನಗರದೆಲ್ಲೆಡೆ ಏಸುಕ್ರಿಸ್ತನ ಜನ್ಮದಿನ ಶನಿವಾರ ಕ್ರೈಸ್ತ ಸಮುದಾಯದವರು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.
    ರಾಜ್ಯದಲ್ಲಿ ಒಂದೆಡೆ ಮತಾಂತರ ಕಾಯ್ದೆ ಜಾರಿಗೊಳಿಸಲು ರಾಜ್ಯ ಸರ್ಕಾರ ಸಿದ್ದತೆ ನಡೆಸುತ್ತಿದೆ. ಈಗಾಗಲೇ ಮತಾಂತರ ಕಾಯ್ದೆಗೆ ವಿಧಾನಸಭೆಯಲ್ಲಿ ಅನುಮೋದನೆ ಪಡೆದುಕೊಂಡಿದೆ. ಆದರೆ ವಿಧಾನಪರಿಷತ್‌ನಲ್ಲಿ ಅನುಮೋದನೆ ಬಾಕಿ ಉಳಿದಿದೆ. ಆತಂಕದ ನಡುವೆಯೂ ಏಸುಕ್ರಿಸ್ತನ ಜನ್ಮದಿನ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುವ ಮೂಲಕ ಶಾಂತಿ ಸಂದೇಶ ಸಾರಿದರು. ಶುಕ್ರವಾರ ರಾತ್ರಿಯೇ ನಗರದ ಪ್ರಮುಖ ಚರ್ಚ್‌ಗಳಲ್ಲಿ ಹಬ್ಬದ ಸಂಭ್ರಮ ಕಂಡು ಬಂದಿತು. ಏಸುಕ್ರಿಸ್ತನಿಗೆ ಪ್ರಾರ್ಥನೆ ಸಲ್ಲಿಸಿದರು. ಚರ್ಚ್‌ಗಳ ಬಳಿ ಏಸುಕ್ರಿಸ್ತನ ಜನ್ಮ ವೃತ್ತಾಂತ ಸಾರುವ ಆಕರ್ಷಕವಾದ ಗೋದೋಲಿ ನಿರ್ಮಾಣ ಮಾಡಿರುವುದು ಕಂಡು ಬಂದಿತು. ಕೊರೊನಾ ಸೋಂಕು ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಕೆಲವು ಚರ್ಚ್‌ಗಳಲ್ಲಿ ಒಳಭಾಗದಲ್ಲಿ ಗೋದೋಲಿ ನಿರ್ಮಾಣ ಮಾಡಿದರೆ, ಬಹುತೇಕ ಚರ್ಚ್‌ಗಳಲ್ಲಿ ಹೊರಭಾಗದಲ್ಲಿ ಗೋದೋಲಿಗಳನ್ನು ನಿರ್ಮಾಣ ಮಾಡಲಾಗಿತ್ತು.
    ಶನಿವಾರ ಬೆಳಿಗ್ಗೆ ಸಹ ಏಸುಕ್ರಿಸ್ತನಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಅನ್ಯಧರ್ಮಿಯರೊಂದಿಗೆ ಸೌಹಾರ್ದತೆಯಿಂದ ಹಬ್ಬದ ಸಂಭ್ರಮ ಹಂಚಿಕೊಂಡರು.

Friday, December 24, 2021

೫೦ನೇ ವರ್ಷದ ಅಯ್ಯಪ್ಪಸ್ವಾಮಿ ದೀಪೋತ್ಸವ : ಡಿ.೨೫ರಂದು ಸಾಮೂಹಿಕ ಅನ್ನದಾನ

ಭದ್ರಾವತಿ ನ್ಯೂಟೌನ್ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ವತಿಯಿಂದ ೫೦ನೇ ವರ್ಷದ ಅಯ್ಯಪ್ಪಸ್ವಾಮಿ ದೀಪೋತ್ಸವ ಹಮ್ಮಿಕೊಳ್ಳಲಾಗಿದ್ದು, ಈ ಸಂಬಂಧ ಧ್ವಜಾರೋಹಣ ನೆರವೇರಿಸಲಾಯಿತು.
    ಭದ್ರಾವತಿ, ಡಿ. ೨೪: ನ್ಯೂಟೌನ್ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ವತಿಯಿಂದ ೫೦ನೇ ವರ್ಷದ ಅಯ್ಯಪ್ಪಸ್ವಾಮಿ ದೀಪೋತ್ಸವ ಹಮ್ಮಿಕೊಳ್ಳಲಾಗಿತ್ತು.
    ಗುರುವಾರ ಬೆಳಿಗ್ಗೆ ನಿರ್ಮಾಲ್ಯ ದರ್ಶನಂ, ಉಷೆ ಪೂಜಾ, ಸಾಮೂಹಿಕ ಅಷ್ಟದ್ರವ್ಯ ಗಣಪತಿ ಹೋಮ, ಪರಿಸಾರ ಶುದ್ಧಿ, ಬಿಂಬ ಶುದ್ಧಿ, ಧ್ವಜಾರೋಹಣ ಹಾಗು ಸಂಜೆ ಉತ್ಸವ ಮೂರ್ತಿ ಮೆರವಣಿಗೆ, ದೀಪಾರಾಧನೆ, ಅತ್ತಾಳ ಪೂಜೆ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಿದವು.
    ಶುಕ್ರವಾರ ಬೆಳಿಗ್ಗೆ ನಿರ್ಮಾಲ್ಯ ದರ್ಶನಂ, ಉಷೆ ಪೂಜಾ, ಸಾಮೂಹಿಕ ಅಷ್ಟದ್ರವ್ಯ ಗಣಪತಿ ಹೋಮ, ಮಹಾಮೃತ್ಯುಂಜಯ ಹೋಮ, ಧ್ವಜಸ್ತಂಭ ಪೂಜೆ ಹಾಗು ಸಂಜೆ ಸಾಮೂಹಿಕ ಭಗವತಿ ಸೇವೆ, ಅತ್ತಾಳ ಪೂಜೆ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಿದವು.
    ಶನಿವಾರ ಬೆಳಿಗ್ಗೆ ನಿರ್ಮಾಲ್ಯ ದರ್ಶನಂ, ಸಾಮೂಹಿಕ ಅಷ್ಟದ್ರವ್ಯ ಗಣಪತಿ ಹೋಮ, ಶ್ರೀ ಅಯ್ಯಪ್ಪ ಸ್ವಾಮಿಗೆ ಅಷ್ಟಾಭಿಷೇಕಂ, ಚಂಡೇವಾದ್ಯ, ಧ್ವಜಸ್ತಂಭ ಪೂಜೆ, ಸಾಮೂಹಿಕ ಸುದರ್ಶನಹೋಮ ನಂತರ ಸಾಮೂಹಿಕ ಅನ್ನದಾನ ಹಾಗು ಸಂಜೆ ಹಳೇನಗರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಿಂದ ನಗರದ ಪ್ರಮುಖ ರಸ್ತೆಗಳ ಮೂಲಕ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಸ್ವಾಮಿಯ ಆಗಮನ. ಅತ್ತಾಳ ಪೂಜೆ, ಧ್ವಜ ಇಳಿಸುವುದು ಹಾಗು ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಲಿವೆ. ಭಕ್ತಾಧಿಗಳು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.


ಎಂಪಿಎಂ ಸಹಕಾರ ಸಂಘದ ೭೦ನೇ ಸರ್ವ ಸದಸ್ಯರ ಸಭೆ

ರಾಜ್ಯ ಸರ್ಕಾರಿ ಸ್ವಾಮ್ಯದ ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಯ ಸಹಕಾರ ಸಂಘದ ೭೦ನೇ ಸರ್ವ ಸದಸ್ಯರ ಸಭೆ ಕಾಗದನಗರದ ವನಿತಾ ಸಮಾಜದಲ್ಲಿ ಯಶಸ್ವಿಯಾಗಿ ನಡೆಯಿತು.
    ಭದ್ರಾವತಿ, ಡಿ. ೨೪: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ಸಹಕಾರ ಸಂಘದ ೭೦ನೇ ಸರ್ವ ಸದಸ್ಯರ ಸಭೆ ಕಾಗದನಗರದ ವನಿತಾ ಸಮಾಜದಲ್ಲಿ ಯಶಸ್ವಿಯಾಗಿ ನಡೆಯಿತು.
    ಕಳೆದ ಸುಮಾರು ೬ ವರ್ಷಗಳಿಂದ ಕಾರ್ಖಾನೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಉಳಿದುಕೊಂಡಿರುವ ಅಲ್ಪ ಪ್ರಮಾಣದ ಕಾರ್ಮಿಕರು ಸಂಘವನ್ನು ಸಂಕಷ್ಟದಲ್ಲಿಯೇ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
    ಸರ್ವಸದಸ್ಯರ ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ದಿನೇಶ್ ವಹಿಸಿದ್ದರು. ಕೃಷ್ಣಸ್ವಾಮಿ ಸಂಘದ ನಡಾವಳಿ ನಡೆಸಿಕೊಟ್ಟರು. ಸಂಘದ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿಗಳು, ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಸುಗ್ರಾಮ ಅಧ್ಯಕ್ಷೆಯಾಗಿ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಸದಸ್ಯೆ ಗೌರಮ್ಮ ಎಸ್. ಮಹಾದೇವ ಆಯ್ಕೆ

ಭದ್ರಾವತಿ ದುರ್ಗಾ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ದಿ ಹಂಗರ್ ಪ್ರಾಜೆಕ್ಟ್, ಕರ್ನಾಟಕ ಮತ್ತು ತರೀಕೆರೆ, ವಿಕಸನ ಸಂಸ್ಥೆ ನೇತೃತ್ವದಲ್ಲಿ ತಾಲೂಕು ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಚುನಾವಣೆ ನಡೆದು ನೂತನ ಪದಾಧಿಕಾರಿಗಳು ಆಯ್ಕೆಯಾದರು.
    ಭದ್ರಾವತಿ, ಡಿ. ೨೪: ತಾಲೂಕು ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಅಧ್ಯಕ್ಷರಾಗಿ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಸದಸ್ಯೆ ಗೌರಮ್ಮ ಎಸ್. ಮಹಾದೇವ ಆಯ್ಕೆಯಾಗಿದ್ದಾರೆ.
    ದುರ್ಗಾ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ದಿ ಹಂಗರ್ ಪ್ರಾಜೆಕ್ಟ್, ಕರ್ನಾಟಕ ಮತ್ತು ತರೀಕೆರೆ, ವಿಕಸನ ಸಂಸ್ಥೆ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು ೧೩ ಸ್ಪರ್ಧಿಗಳು ಕಣದಲ್ಲಿದ್ದರು. ಈ ಪೈಕಿ ಗೌರಮ್ಮ-೫೬, ಪಲ್ಲವಿ-೪೬, ಗೀತಾ-೪೧, ಕವಿತಾ-೪೧, ಮಾಲತಿ-೩೯, ನಜೀಮಾ ಸುಲ್ತಾನ-೨೮ ಮತ್ತು ಶಾಂತಿಬಾಯಿ-೨೪ ಮತಗಳನ್ನು ಪಡೆದುಕೊಂಡು ಕ್ರಮವಾಗಿ ಅಧ್ಯಕ್ಷರಾಗಿ ಗೌರಮ್ಮ, ಉಪಾಧ್ಯಕ್ಷರಾಗಿ ಪಲ್ಲವಿ, ಕಾರ್ಯದರ್ಶಿಯಾಗಿ ಗೀತಾ, ಖಜಾಂಚಿಯಾಗಿ ಕವಿತಾ ಮತ್ತು ನಿರ್ದೇಶಕರಾಗಿ ಮಾಲತಿ, ನಜೀಮಾ ಸುಲ್ತಾನ ಮತ್ತು ಶಾಂತಿಬಾಯಿ ಆಯ್ಕೆಯಾಗಿದರು.
    ದಿ ಹಂಗರ್ ಪ್ರಾಜೆಕ್ಟ್, ಕರ್ನಾಟಕದ ಪದ್ಮಿನಿ ಅನಂತ್,  ಬೆಳಗಾವಿ      ಸ್ಪಂದನ ಸಂಸ್ಥೆಯ ಉಮಾ ಮತ್ತು ಶಂಕರ್ ವಿಕಸನ ಸಂಸ್ಥೆ ಯ ಶಾಲಿನಿ, ತರೀಕೆರೆ ವಿಕಸನ ಸಂಸ್ಥೆಯ ಶಬಾನ ಬೇಗಂ, ರೂಪ ಮತ್ತು ಶ್ರೀನಿವಾಸ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

ಒಕ್ಕಲಿಗರ ಸಂಘದ ನೂತನ ನಿರ್ದೇಶಕ ಧರ್ಮೇಶ್ ಸಿರಿಬೈಲ್‌ಗೆ ಅಭಿನಂದನೆ

ಸಮುದಾಯದವರ ಆರ್ಥಿಕ, ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಿನ ಗಮನ


ಭದ್ರಾವತಿ ಅಪ್ಪರ್‌ಹುತ್ತಾ ಒಕ್ಕಲಿಗರ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಶಿವಮೊಗ್ಗ-ಉತ್ತರ ಕನ್ನಡ ಕ್ಷೇತ್ರದ ನೂತನ ನಿರ್ದೇಶಕ ಧರ್ಮೇಶ್ ಸಿರಿಬೈಲ್ ಅವರನ್ನು ಅಭಿನಂದಿಸಲಾಯಿತು.
    ಭದ್ರಾವತಿ, ಡಿ. ೨೪: ಒಕ್ಕಲಿಗ ಸಮುದಾಯದವರ ಏಳಿಗೆಗೆ ಬದ್ಧವಿದ್ದು, ಸಮುದಾಯದವರ ಆರ್ಥಿಕ, ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಿನ ಗಮನ ಹರಿಸುವುದಾಗಿ ರಾಜ್ಯ ಒಕ್ಕಲಿಗರ ಸಂಘದ ಶಿವಮೊಗ್ಗ-ಉತ್ತರ ಕನ್ನಡ ಕ್ಷೇತ್ರದ ನೂತನ ನಿರ್ದೇಶಕ ಧರ್ಮೇಶ್ ಸಿರಿಬೈಲ್ ಹೇಳಿದರು.
    ಅವರು ಶುಕ್ರವಾರ ನಗರದ ಅಪ್ಪರ್‌ಹುತ್ತಾ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ಸಮಾಜದಲ್ಲಿ ಒಕ್ಕಲಿಗ ಸಮುದಾಯದವರಿಗೆ ಹೆಚ್ಚಿನ ಗೌರವವಿದ್ದು, ಸಮುದಾಯವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಈ ಚುನಾವಣೆಯನ್ನು ಯಾರು ಸಹ ರಾಜಕೀಯವಾಗಿ ನೋಡಬಾರದು. ಸಮುದಾಯದ ಅಭಿವೃದ್ಧಿ ಮಾತ್ರ ಚುನಾವಣೆಯ ಹಿಂದಿನ ಉದ್ದೇಶ ಎಂಬುದನ್ನು ಅರಿತುಕೊಳ್ಳಬೇಕು. ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ತಾಲೂಕಿನ ಒಕ್ಕಲಿಗ ಸಮುದಾಯದವರ ಪ್ರೀತಿ, ವಿಶ್ವಾಸಕ್ಕೆ ಪ್ರತಿಯಾಗಿ ಸ್ನೇಹಜೀವಿ ಬಳಗದ ಪೊಲೀಸ್ ಉಮೇಶ್ ಅವರ ಸಹಕಾರದೊಂದಿಗೆ ನಾಡಹಬ್ಬ ಪ್ರಭು ಕೆಂಪೇಗೌಡ ಪ್ರತಿಮೆಯನ್ನು ಕೊಡುಗೆಯಾಗಿ ನೀಡುತ್ತೇನೆ ಎಂದು ಭರವಸೆ ನೀಡಿದರು.
ಸಮುದಾಯದ ಪ್ರಮುಖರು ಮಾತನಾಡಿ, ಒಕ್ಕಲಿಗರ ಸಮುದಾಯದ ಏಳಿಗೆಗಾಗಿ ಶ್ರಮಿಸುವ ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂಬ ಆಶಯದೊಂದಿಗೆ ಈ ಬಾರಿ ಧರ್ಮೇಶ್ ಅವರನ್ನು ಬೆಂಬಲಿಸಲಾಗಿದೆ. ಮುಂದಿನ ದಿನಗಳಲ್ಲಿ ಧರ್ಮೇಶ್ ಅವರು ಯಾವುದೇ ಸಂದರ್ಭದಲ್ಲೂ ಸಮುದಾಯದವರ ಪರವಾಗಿ ನಿಲ್ಲುವಂತಾಗಬೇಕು. ಚುನಾವಣೆ ಮುಗಿದ ನಂತರ ಸೋಲು-ಗೆಲುವು ಸಹಜ. ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುವ  ಮನೋಭಾವ ಬಹಳ ಮುಖ್ಯವಾಗಿದೆ. ಒಕ್ಕಲಿಗ ಸಮುದಾಯದ ಪ್ರತಿಯೊಬ್ಬರ ಧ್ವನಿಯಾಗಬೇಕೆಂದರು.
    ವೇದಿಕೆಯಲ್ಲಿ ಒಕ್ಕಲಿಗ ಸಮುದಾಯದ ಪ್ರಮುಖರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಸ್. ಮಣಿಶೇಖರ್, ಜೆ.ಪಿ ಯೋಗೇಶ್, ಸ್ನೇಹಜೀವಿ ಬಳಗದ ಪೊಲೀಸ್ ಉಮೇಶ್, ನಗರಸಭೆ ಮಾಜಿ ಸದಸ್ಯ ಬಾಲಕೃಷ್ಣ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಸಹಕಾರ ಧುರೀಣ ಗೊಂದಿ ಜಯರಾಮ್, ಲೋಹಿತಾ ನಂಜಪ್ಪ, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ನಾಗೇಶ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ದೇವರಾಜ್, ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಮಾಜಿ ನಗರಸಭಾ ಮಾಜಿ ಅಧ್ಯಕ್ಷ ಸಿ.ಎನ್ ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಅನ್ನಪೂರ್ಣ ಸತೀಶ್ ಕಾರ್ಯಕ್ರಮ ನಿರೂಪಿಸಿದರು.

Thursday, December 23, 2021

ನಗರಸಭೆಯಲ್ಲಿ ಭ್ರಷ್ಟಾಚಾರ, ಮೂಲಸೌಕರ್ಯ ಕೊರತೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಕೊರತೆ, ನಗರಸಭೆ ಕಛೇರಿಯಲ್ಲಿ ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿ ಖಂಡಿಸಿ ಹಾಗು ವಿವಿಧೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ನಗರಸಭೆ ಕಛೇರಿ ಮುಂಭಾಗ ಭಾರತೀಯ ಜನತಾ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಡಿ. ೨೩: ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಕೊರತೆ, ನಗರಸಭೆ ಕಛೇರಿಯಲ್ಲಿ ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿ ಖಂಡಿಸಿ ಹಾಗು ವಿವಿಧೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ನಗರಸಭೆ ಕಛೇರಿ ಮುಂಭಾಗ ಭಾರತೀಯ ಜನತಾ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
    ಪಕ್ಷದ ಪ್ರಮುಖರು ಮಾತನಾಡಿ, ಬಿಜೆಪಿಯಲ್ಲಿ ಅಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳಿಗೆ ಮಾತ್ರ ಹೆಚ್ಚಿನ ಕಾಮಗಾರಿ ನೀಡಲಾಗುತ್ತಿದೆ. ನಗರಸಭೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಹಸ್ತಕ್ಷೇಪ ಹೆಚ್ಚಾಗಿದ್ದು, ಅಭಿವೃದ್ಧಿ ಕಾರ್ಯಗಳಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.
    ಮನೆ ಕಂದಾಯ, ನೀರಿನ ಕಂದಾಯ ಹೆಚ್ಚಳ ಮಾಡಲಾಗಿದೆ. ಪ್ರತಿಯೊಂದು ಕೆಲಸಗಳನ್ನು ಸಿಬ್ಬಂದಿಗಳು ಮಧ್ಯವರ್ತಿಗಳ ಮೂಲಕ ನಿರ್ವಹಿಸುತ್ತಿದ್ದಾರೆ. ಸ್ವತ್ತಿನ ಮಾಲೀಕರು ಕಂದಾಯ ಪಾವತಿಸಿರುವುದು ಕಛೇರಿಯ ಪುಸ್ತಕದಲ್ಲಿ ನಮೂದಾಗುತ್ತಿಲ್ಲ. ದಿನ ಕೂಲಿ ನೌಕರರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಾಜರಾತಿ ದಾಖಲೆಯಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಬೀದಿ ದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಮುಖ್ಯ ನಲ್ಲಿ ನೀರಿನ ಸರಬರಾಜಿಗೆ ತಾಂತ್ರಿಕವಾಗಿ ೬ ಇಂಚಿನ ಪೈಲ್‌ಲೈನ್ ಅಳವಡಿಸುವ ಬದಲು ೩ ಇಂಚಿನ ಪೈಪ್‌ಲೈನ್ ಅಳವಡಿಸಲಾಗಿದೆ. ಹೀಗೆ ಹಲವಾರು ಕಾಮಗಾರಿಗಳನ್ನು ಬೇಕಾಬಿಟ್ಟಿಯಾಗಿ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ತಕ್ಷಣ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. ಗಾಂಧಿ ವೃತ್ತದಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಅವರ ವ್ಯವಹಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವುದು. ಪಂಪ್‌ಹೌಸ್‌ಗಳಲ್ಲಿ ಹಳೇಯ ಯಂತ್ರಗಳನ್ನು ಬದಲಿಸಿ ಹೊಸ ಯಂತ್ರಗನ್ನು ಅಳವಡಿಸುವುದು. ಯುಜಿಡಿ ಕಾಮಗಾರಿಯನ್ನು ತಕ್ಷಣ ಮುಕ್ತಾಯಗೊಳಿಸುವುದು ಹಾಗು ಮಾಧವ್‌ಚಾರ್ ವೃತ್ತದಿಂದ ಸಿ.ಎನ್ ಅಗಲೀಕರಣ ಕಾರ್ಯ ಕೈಗೊಳ್ಳುವುದು ಸೇರಿದಂತೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು. ಕೊನೆಯಲ್ಲಿ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಮತ್ತು ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
    ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಿ. ಧರ್ಮಪ್ರಸಾದ್, ಬಿ.ಕೆ ಶ್ರೀನಾಥ್, ನಗರಸಭಾ ಸದಸ್ಯರಾದ ವಿ. ಕದಿರೇಶ್, ಅನುಪಮ, ಅನಿತಾ ಮಲ್ಲೇಶ್ ಮತ್ತು ಶಶಿಕಲಾ, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ್, ಪ್ರಮುಖರಾದ ಎನ್. ವಿಶ್ವನಾಥರಾವ್, ಟಿ. ವೆಂಕಟೇಶ್, ನರಸಿಂಹಚಾರ್, ಎಂ. ಮಂಜುನಾಥ್, ರಮೇಶ್, ಕೆ.ಆರ್ ಸತೀಶ್, ಚನ್ನೇಶ್, ಬಿ.ಎಸ್ ಶ್ರೀನಾಥ್, ರಾಮನಾಥ್ ಬರ್ಗೆ, ಬಿ.ಕೆ ಚಂದ್ರಪ್ಪ, ಪಿ. ಗಣೇಶ್‌ರಾವ್, ಅವಿನಾಶ್, ಬಿ.ಎಸ್ ನಾರಾಯಣಪ್ಪ, ಮಂಜು, ಜಗದೀಶ್‌ಪಟೇಲ್, ನಕುಲ್,  ಅನ್ನಪೂರ್ಣ ಸಾವಂತ್, ಹೇಮಾವತಿ, ಅನೂಷ, ಕವಿತಾ, ರೇಖಾ, ಸುಶೀಲಾ, ರುಕ್ಮಿಣಿ, ಮಂಗಳಗೌರಿ, ಸರಸ್ವತಿ, ಎಸ್.ಎನ್ ನಾಗಮಣಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Wednesday, December 22, 2021

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಹೊಳೆಹೊನ್ನೂರಿನ ಸತೀಶ್ ಅವಿರೋಧ ಆಯ್ಕೆ

ಭದ್ರಾವತಿ, ಡಿ. ೨೩ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಹೊಳೆಹೊನ್ನೂರಿನ ಸತೀಶ್ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.    ಒಟ್ಟು ೧೭ ಸ್ಥಾನಗಳನ್ನು ಹೊಂದಿರುವ ಸಮಿತಿಯಲ್ಲಿ ಹೊಂದಾಣಿಕೆ ಯಂತೆ ಹಿಂದೆ ಲವೇಶ್ ಗೌಡ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇದೀಗ ನೂತನ ಅಧ್ಯಕ್ಷರಾಗಿ ಸತೀಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಚುನಾವಣಾಧಿಕಾರಿಯಾಗಿ ತಾಲೂಕು ದಂಡಾಧಿಕಾರಿ ತಹಸಿಲ್ದಾರ್ ಆರ್. ಪ್ರದೀಪ್ ಕರ್ತವ್ಯ ನಿರ್ವಹಿಸಿದರು.  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಜಿಲ್ಲಾ ಉಪನಿರ್ದೇಶಕ ಜಯಕುಮಾರ್, ಕಾರ್ಯದರ್ಶಿ ಸತೀಶ್ ಉಪಸ್ಥಿತರಿದ್ದರು.  ಸದಸ್ಯರಾದ ಕುಬೇಂದ್ರಪ್ಪ, ಎಂ.ಎಸ್ ಚಂದ್ರಶೇಖರ್, ಎಂ.ಎಸ್ ಬಸವರಾಜಪ್ಪ, ಟಿ.ಎಂ ರತ್ನಮ್ಮ, ಟಿ.ವಿ ಸುಜಾತ, ಲವೇಶ್‌ಗೌಡ, ರಾಜಾನಾಯ್ಕ, ಜಯರಾಂ, ಖಾಸಿಂ ಸಾಬ್, ಲಕ್ಷ್ಮಣಪ್ಪ ಮತ್ತು ಡಾ. ಎಚ್. ನಾಗೇಶ್ ಸೇರಿದಂತೆ ಒಟ್ಟು ೧೨ ಮಂದಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.  ಅಧ್ಯಕ್ಷ ಸ್ಥಾನಕ್ಕೆ ಕೇವಲ ಒಂದೇ ಒಂದು ನಾಮಪತ್ರ ಸಲ್ಲಿಕ್ಕೆಯಾದ ಹಿನ್ನೆಲೆಯಲ್ಲಿ  ಅವಿರೋಧ ಆಯ್ಕೆ ಘೋಷಿಸಲಾಯಿತು. ನೂತನ ಅಧ್ಯಕ್ಷರನ್ನು ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್ ಕುಮಾರ್, ತಾಲೂಕು ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷ ಯಶವಂತರಾವ್ ಘೋರ್ಪಡೆ ಸೇರಿದಂತೆ ಇನ್ನಿತರರು ಅಭಿನಂದಿಸಿದರು.

ಕಾರ್ಯಾಧ್ಯಕ್ಷರಾಗಿ ಡಾ. ಸಿ. ರಾಮಚಾರಿ ನೇಮಕ

ಡಾ. ಸಿ. ರಾಮಚಾರಿ
    ಭದ್ರಾವತಿ, ಡಿ. ೨೨: ಅಖಿಲ ಭಾರತ ವಿಶ್ವಕರ್ಮ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಎಚ್.ವಿ ಸತೀಶ್‌ಕುಮಾರ್‌ರವರು ತಾಲೂಕಿನ ಬಾರಂದೂರು ನಿವಾಸಿ ಡಾ. ಸಿ. ರಾಮಚಾರಿ ಅವರನ್ನು ರಾಜ್ಯ ಘಟಕದ ಕಾರ್ಯಾಧ್ಯಕ್ಷರನ್ನಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
    ನೂತನ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಡಾ. ಸಿ. ರಾಮಚಾರಿಯವರಿಗೆ ತುಮಕೂರು, ಹಾಸನ, ಚಿಕ್ಕಮಗಳೂರು, ಮೈಸೂರು ಮತ್ತು ಶಿವಮೊಗ್ಗ ಸೇರಿದಂತೆ ಒಟ್ಟು ೫ ಜಿಲ್ಲೆಗಳ ಉಸ್ತುವಾರಿಗಳಾಗಿ ಕಾರ್ಯನಿರ್ವಹಿಸುವಂತೆ ಪರಿಷತ್ತಿನ ರಾಜ್ಯಾಧ್ಯಕ್ಷ ಆರ್. ಪ್ರಸನ್ನಕುಮಾರ್ ಸೂಚಿಸಿದ್ದಾರೆ.
    ಸಿ. ರಾಮಚಾರಿಯವರು ಹಲವಾರು ವರ್ಷಗಳಿಂದ ವಿಶ್ವಕರ್ಮ ಸಮುದಾಯ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದು, ಇದೀಗ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವುದು ಸಮುದಾಯವನ್ನು ಮತ್ತಷ್ಟು ಸಂಘಟಿಸಲು ಸಹಕಾರಿಯಾಗಿದೆ.

ಡಿ.೨೪ರಂದು ಸರ್ವಸದಸ್ಯರ ವಾರ್ಷಿಕ ಮಹಾಸಭೆ

ಭದ್ರಾವತಿ, ಡಿ. ೨೨: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ಕಾರ್ಮಿಕರು ತಮ್ಮ ಮುಂದಿನ ಭವಿಷ್ಯಕ್ಕಾಗಿ ರೂಪಿಸಿಕೊಂಡಿರುವ ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಇದೀಗ ಹಲವು ಸಮಸ್ಯೆಗಳು ಎದುರಾಗಿದ್ದು,  ಸಂಘ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಈ ನಡುವೆ ಡಿ.೨೪ರಂದು ಬೆಳಿಗ್ಗೆ ೧೦ ಗಂಟೆಗೆ ಕಾಗದನಗರದ ಸೀತಾರಾಮ ಸಮುದಾಯ ಭವನದಲ್ಲಿ ೩೨ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಹಮ್ಮಿಕೊಂಡಿದೆ.
    ಸರ್ಕಾರ ಪ್ರಸ್ತುತ ಖಾಲಿ ನಿವೇಶನಗಳಿಗೆ ಸುಮಾರು ೬ ರಿಂದ ೭ ಪಟ್ಟು ಕಂದಾಯ ಹೆಚ್ಚಳ ಮಾಡಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗು ನಗರಸಭೆ ಆಡಳಿತ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ. ಸಂಘಕ್ಕೆ ಪ್ರಸ್ತುತ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಈ ಎಲ್ಲಾ ಬೆಳವಣಿಗೆಗಳ ಕುರಿತು ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ಸದಸ್ಯರು ತಪ್ಪದೇ ಭಾಗವಹಿಸುವಂತೆ ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಕೋರಿದ್ದಾರೆ.

ಎಂ.ಇ.ಎಸ್ ಸಂಘಟನೆ ನಿಷೇಧಿಸಿ : ಬಂಧಿತ ೨೭ ಮಂದಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ

ಜಯಕರ್ನಾಟಕ ಸಂಘಟನೆ ವತಿಯಿಂದ ತಹಸೀಲ್ದಾರ್‌ಗೆ ಮನವಿ


ಬೆಳಗಾವಿಯಲ್ಲಿ ಎಂ.ಇ.ಎಸ್ ಪುಂಡರ ಹಾವಳಿ ಮಿತಿ ಮೀರಿದ್ದು, ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಉರುಳಿಸಿ ಧ್ವಂಸಗೊಳಿಸಿರುವ ಪ್ರಕರಣದಲ್ಲಿ ಬಂಧಿತರಾಗಿರುವ ೨೭ ಮಂದಿ ಎಂ.ಇ.ಎಸ್ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗು ಈ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂದು ಆಗ್ರಹಿಸಿ ಬುಧವಾರ ಭದ್ರಾವತಿಯಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಡಿ. ೨೨: ಬೆಳಗಾವಿಯಲ್ಲಿ ಎಂ.ಇ.ಎಸ್ ಪುಂಡರ ಹಾವಳಿ ಮಿತಿ ಮೀರಿದ್ದು, ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಉರುಳಿಸಿ ಧ್ವಂಸಗೊಳಿಸಿರುವ ಪ್ರಕರಣದಲ್ಲಿ ಬಂಧಿತರಾಗಿರುವ ೨೭ ಮಂದಿ ಎಂ.ಇ.ಎಸ್ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗು ಈ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂದು ಆಗ್ರಹಿಸಿ ಬುಧವಾರ ಜಯ ಕರ್ನಾಟಕ ಸಂಘಟನೆ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರವರ ಪ್ರತಿಮೆಗೆ ಯುವ ಮುಖಂಡ ಬಿ.ಎಸ್ ಗಣೇಶ್ ಹಾಗು ಸಂಘಟನೆ ಜಿಲ್ಲಾಧ್ಯಕ್ಷ ಡಾ. ಜೆ.ಆರ್ ದೀಪಕ್ ಮತ್ತು ತಾಲೂಕು ಅಧ್ಯಕ್ಷ ಆರ್. ಅರುಣ್ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಿದ ಕಾರ್ಯಕರ್ತರು ಎಂ.ಇ.ಎಸ್ ಪುಂಡರ ಪುಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನೆಲ, ಜಲ, ಭಾಷೆಗಾಗಿ ಕನ್ನಡಿಗರು ಯಾವುದೇ ರೀತಿಯ ಹೋರಾಟಕ್ಕೂ ಸಿದ್ದರಿದ್ದು, ರಾಜ್ಯದಲ್ಲಿ ಎಂ.ಇ.ಎಸ್ ಪುಂಡರು ಪೊಲೀಸ್ ವಾಹನಗಳಿಗೆ ಬೆಂಕಿ ಇಡುವ ಜೊತೆಗೆ ಸರ್ಕಾರ ವಾಹನಗಳ ಮೇಲೆ ಮನಸೋ ಇಚ್ಛೆ ಕಲ್ಲು ತೂರಾಟ ನಡೆಸಿ ದೇಶಭಕ್ತ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ಕನ್ನಡಿಗರಿಗೆ ಹಾಗು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿರುವ ಅಪಮಾನವಾಗಿದೆ. ಈ ಹಿನ್ನಲೆ ಸರ್ಕಾರ ತಕ್ಷಣ ಎಂ.ಇ.ಎಸ್ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ನಂತರ ತಾಲೂಕು ಕಛೇರಿ ಮಿನಿವಿಧಾನಸೌಧದವರೆಗೂ ಬೈಕ್ ರ್‍ಯಾಲಿ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಜಿಲ್ಲಾ ಕಾರ್ಯಾಧ್ಯಕ್ಷ ಅಬ್ದುಲ್ ರಹೀಮ್, ತಾಲೂಕು ಗೌರವಾಧ್ಯಕ್ಷ ಪಿ. ಶರವಣ, ತಾಲೂಕು ಉಸ್ತುವಾರಿ ದಿವ್ಯರಾಜ್, ಶಂಕರಘಟ್ಟ ಘಟಕದ ಅಧ್ಯಕ್ಷ ಡಿ.ಟಿ ಶಶಿಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಆರ್. ವರಲಕ್ಷ್ಮಿ, ಆಟೋ ಶಂಕರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಡಿ.೨೪ರಿಂದ ಅಂಧರ ಕ್ರಿಕೆಟ್ ತರಬೇತಿ, ರಾಜ್ಯಮಟ್ಟದ ಪಂದ್ಯಾವಳಿ

ಭದ್ರಾವತಿಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಮಾತನಾಡಿದರು.
    ಭದ್ರಾವತಿ, ಡಿ. ೨೨: ನಗರದ ನ್ಯೂಟೌನ್ ಸಿದ್ದಾರ್ಥ ಟ್ರಸ್ಟ್‌ನ ಸಿದ್ದಾರ್ಥ ಅಂಧರ ಕೇಂದ್ರ ವತಿಯಿಂದ ವತಿಯಿಂದ ಬೆಂಗಳೂರಿನ ಶೇಖರ್‌ನಾಯ್ಕ್ ಫೌಂಡೇಷನ್ ಸಹಯೋಗದೊಂದಿಗೆ ಕ್ರಿಕೆಟ್ ತರಬೇತಿ ಶಿಬಿರ ಹಾಗೂ ರಾಜ್ಯಮಟ್ಟದ ತ್ರಿಕೋನ ಅಂಧರ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಹೇಳಿದರು.
    ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಡಿ.೨೪ ಮತ್ತು ೨೫ರಂದು ಎರಡು ದಿನ ಕ್ರಿಕೆಟ್ ತರಬೇತಿ ಶಿಬಿರ ಹಾಗು ೨೬ರಂದು ರಾಜ್ಯಮಟ್ಟದ ತ್ರಿಕೋನ ಅಂಧರ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
    ಶಿಬಿರವನ್ನು ಡಿ.೨೪ರ ಬೆಳಿಗ್ಗೆ ೯.೩೦ಕ್ಕೆ ಶಾಸಕ ಬಿ.ಕೆ ಸಂಗಮಮೇಶ್ವರ್ ಉದ್ಘಾಟಿಸಲಿದ್ದು, ರಾಷ್ಟ್ರೀಯ ಅಂಧರ ಕ್ರಿಕೆಟ್ ಭಾರತ ತಂಡದ ಮಾಜಿ ನಾಯಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶೇಖರ್‌ನಾಯ್ಕ್,  ಎಸ್‌ಎಲ್‌ಎನ್ ಡೇ ಕೇರ್ ಮತ್ತು ಡಯಗ್ನೋಸ್ಟಿಕ್ ಡಾ. ಸುಶಿತ್ ಶೆಟ್ಟಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಮೇಶ್ ಮತ್ತು ಉದ್ಯಮಿ ಎ. ಮಾದಣ್ಣ, ಆರ್. ಬಾಲಾಜಿ, ಎಂ. ಶಿವಕುಮಾರ್, ಶ್ರೀನಿವಾಸ್ ಪೂಜಾರಿ ಮತ್ತು ಮೈಕೆಲ್ ಹಾಗು ಬಾಬು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು,  ಡಿ.೨೬ರಂದು ರಾಜ್ಯಮಟ್ಟದ ತ್ರಿಕೋನ ಅಂಧರ ಕ್ರಿಕೆಟ್ ಪಂದ್ಯಾವಳಿಯನ್ನು ಪೊಲೀಸ್ ಉಪಾಧೀಕ್ಷಕ ಜೀತೇಂದ್ರ ಕುಮಾರ್ ದಯಾಮ ಉದ್ಘಾಟಿಸಲಿದ್ದು, ತಹಸೀಲ್ದಾರ್ ಆರ್. ಪ್ರದೀಪ್ ಮತ್ತು ಚಿಕ್ಕಮಗಳೂರು ನಗರ ಯೋಜನಾ ನಿರ್ದೇಶಕ ಮನೋಹರ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
       ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ರು.೧೦ ಸಾವಿರ ನಗದು, ಟ್ರೋಫಿ ಹಾಗು ಪ್ರಶಸ್ತಿ ಪತ್ರ, ದ್ವಿತೀಯ ಬಹುಮಾನ ರು.೮ ಸಾವಿರ ನಗದು, ಟ್ರೋಫಿ ಹಾಗು ಪ್ರಶಸ್ತಿ ಪತ್ರ,  ತೃತೀಯ ಬಹುಮಾನ ರು.೬ ನಗದು, ಟ್ರೋಫಿ ಹಾಗು ಪ್ರಶಸ್ತಿ ಪತ್ರ ನೀಡಲಾಗುವುದು. ಬಹುಮಾನ ವಿತರಣೆ ಸಮಾರಂಭದಲ್ಲಿ ವಿಐಎಸ್‌ಎಲ್ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ, ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಮತ್ತು ಸೂಡಾ ಸದಸ್ಯ ರಾಮಲಿಂಗಯ್ಯ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
    ಸೃಷ್ಠಿ, ಭಾಗ್ಯಶ್ರೀ, ಮಾರುತಿ, ನಾಗರತ್ನ, ರಂಜನ್ ಸೇರಿದಂತೆ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Tuesday, December 21, 2021

ಶ್ರೀ ಅಂತರಘಟ್ಟಮ್ಮ, ಚೌಡೇಶ್ವರಿ ದೇವಿ ಪ್ರತಿಷ್ಠಾಪನೆ, ಗೋಪುರ ಕಳಸಾರೋಹಣ

ಭದ್ರಾವತಿ ತಾಲೂಕಿನ ಹಾತಿಕಟ್ಟೆ ಗ್ರಾಮದ ಶ್ರೀ ಅಂತರಘಟ್ಟಮ್ಮ ದೇವಿ ಹಾಗೂ ಶ್ರೀ ಚೌಡೇಶ್ವರಿ ದೇವಿ ಪ್ರತಿಷ್ಠಾಪನೆ ಹಾಗು ಗೋಪುರ ಕಳಸಾರೋಹಣ ಮಂಗಳವಾರ ವಿಜೃಂಭಣೆಯಿಂದ ಜರುಗಿತು.  ಈ ಸಂದರ್ಭದಲ್ಲಿ ಬಿಳಿಕಿ ಶ್ರೀಗಳಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೨೧:  ತಾಲೂಕಿನ ಹಾತಿಕಟ್ಟೆ ಗ್ರಾಮದ ಶ್ರೀ ಅಂತರಘಟ್ಟಮ್ಮ ದೇವಿ ಹಾಗೂ ಶ್ರೀ ಚೌಡೇಶ್ವರಿ ದೇವಿ ಪ್ರತಿಷ್ಠಾಪನೆ ಹಾಗು ಗೋಪುರ ಕಳಸಾರೋಹಣ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಉದ್ಯಮಿ ಬಿ.ಕೆ ಶಿವಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
    ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಬಿಜೆಪಿ ಮುಖಂಡ ಸಂಜಯ್ ಹಾಗು ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮದ ಮುಖಂಡರು ಮತ್ತು ಹಾತಿಕಟ್ಟೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು, ಭಕ್ತಾಧಿಗಳು ಪಾಲ್ಗೊಂಡಿದ್ದರು.    

ಹೋರಾಟಗಾರನ ಹುಟ್ಟುಹಬ್ಬಕ್ಕೆ ಕೈಗಡಿಯಾರದ ಉಡುಗೊರೆ

೩ ದಶಕಗಳಿಗೂ ಹೆಚ್ಚು ಕಾಲ ಹೋರಾಟದಲ್ಲಿ ತೊಡಗಿರುವ ಆರ್. ವೇಣುಗೋಪಾಲ್


ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಹಾಗು ರಾಮಕೃಷ್ಣ ಹೆಗಡೆಯವರ ಅಭಿಮಾನಿಯಾಗಿ ಕಳೆದ ೩ ದಶಕಗಳಿಗೂ ಹೆಚ್ಚು ಕಾಲ ಹೋರಾಟದಲ್ಲಿ ತಮ್ಮ ಜೀವನದ ಅರ್ಧ ಬದುಕು ಸಾಗಿಸಿರುವ ಭದ್ರಾವತಿ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್‌ರವರ ೬೪ನೇ ಹುಟ್ಟುಹಬ್ಬ ಮಂಗಳವಾರ ಹೋರಾಟದ ಮೂಲಕ ವಿಶಿಷ್ಟವಾಗಿ ಆಚರಿಸಿಕೊಳ್ಳಲಾಯಿತು. ಮಹಿಳೆಯರು ಹುಟ್ಟುಹಬ್ಬದ ಅಂಗವಾಗಿ ಕೈಗಡಿಯಾರ ಉಡುಗೊರೆಯಾಗಿ ನೀಡಿದರು. 
    ಭದ್ರಾವತಿ, ಡಿ. ೨೧: ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಹಾಗು ರಾಮಕೃಷ್ಣ ಹೆಗಡೆಯವರ ಅಭಿಮಾನಿಯಾಗಿ ಕಳೆದ ೩ ದಶಕಗಳಿಗೂ ಹೆಚ್ಚು ಕಾಲ ಹೋರಾಟದಲ್ಲಿ ತಮ್ಮ ಜೀವನದ ಅರ್ಧ ಬದುಕು ಸಾಗಿಸಿರುವ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್‌ರವರ ೬೪ನೇ ಹುಟ್ಟುಹಬ್ಬ ಮಂಗಳವಾರ ಹೋರಾಟದ ಮೂಲಕ ವಿಶಿಷ್ಟವಾಗಿ ಆಚರಿಸಿಕೊಳ್ಳಲಾಯಿತು.
    ಜನ್ನಾಪುರ ನಿವಾಸಿಯಾಗಿರುವ ಆರ್. ವೇಣುಗೋಪಾಲ್‌ರವರು ಕೊಳಚೆ ಪ್ರದೇಶಗಳ ಅಭಿವೃದ್ಧಿಗಾಗಿ, ನಗರ ಹಾಗು ಗ್ರಾಮಾಂತರ ಭಾಗಗಳಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳಿಗಾಗಿ ಹೋರಾಟ ನಡೆಸಿಕೊಂಡು ಬಂದವರು. ಇವುಗಳ ಜೊತೆಗೆ ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿ, ಕೆರೆ ಹಾಗು ಉದ್ಯಾನವನಗಳ ಅಭಿವೃದ್ಧಿ ಸೇರಿದಂತೆ ಇನ್ನೂ ಹಲವಾರು ಹೋರಾಟಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬಂದಿದ್ದಾರೆ.
ಹೋರಾಟದ ಜೊತೆ ಜೊತೆಗೆ ಎರಡು ಬಾರಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ವಾರ್ಡ್ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಗಮನ ಸೆಳೆದಿದ್ದಾರೆ. ಇವರ ಹೋರಾಟಕ್ಕೆ ಸ್ಥಳೀಯ ಮಹಿಳೆಯರು ಹೆಚ್ಚಿನ ಸಹಕಾರ ನೀಡುತ್ತಿದ್ದು, ಈಗಲೂ ಸಹ ಮಹಿಳೆಯರು ಹೋರಾಟಕ್ಕೆ ಬೆನ್ನಲುಬಾಗಿ ನಿಂತಿದ್ದಾರೆ.
    ಹೋರಾಟಗಾರನ ೬೪ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಹಿಳೆಯರು ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ನೀರಾವರಿ ಇಲಾಖೆಯ ಬಿಆರ್‌ಎಲ್‌ಬಿಸಿ ಇಂಜಿನಿಯರ್‌ಗೆ ಮನವಿ ಸಲ್ಲಿಸಿ ನಂತರ ಆರ್. ವೇಣುಗೋಪಾಲ್‌ರವರಿಗೆ ಕೈಗಡಿಯಾರ(ವಾಚ್) ಉಡುಗೊರೆಯಾಗಿ ನೀಡುವ ಮೂಲಕ ಹೋರಾಟಕ್ಕೆ ಮತ್ತಷ್ಟು ಬಲ ತಂದುಕೊಡುವ ನಿಟ್ಟಿನಲ್ಲಿ ಮುನ್ನುಡಿ ಬರೆದರು.
    ಮಹಿಳಾ ಪ್ರಮುಖರಾದ ರಮಾ ವೆಂಕಟೇಶ್, ಶೈಲಜಾ ರಾಮಕೃಷ್ಣ, ದೇವಿಕಾ ನಾಗರಾಜ್, ಶೈಲ, ಮುರುಗನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಮಸಿ : ಸೂಕ್ತ ಕ್ರಮಕ್ಕೆ ಮನವಿ

ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ಸಮಾನ, ಸಮತೆಯ ಸಮಾಜ ನಿರ್ಮಾಣದ ಹರಿಕಾರ, ಮಹಾ ಮಾನವತಾವಾದಿ, ವಿಶ್ವ ಗುರು, ಜಗಜ್ಯೋತಿ ಬಸವಣ್ಣನವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಮಸಿ ಬಳೆದು ಅವಮಾನಿಸಿರುವ ಘಟನೆಯನ್ನು ಖಂಡಿಸಿ ಮಂಗಳವಾರ ಭದ್ರಾವತಿಯಲ್ಲಿ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಅಖಿಲ ಭಾರತ ವೀರಶೈವ ಮಹಾಸಭಾ, ಯುವ ಘಟಕ ಹಾಗು ಮಹಿಳಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೨೧: ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ಸಮಾನ, ಸಮತೆಯ ಸಮಾಜ ನಿರ್ಮಾಣದ ಹರಿಕಾರ, ಮಹಾ ಮಾನವತಾವಾದಿ, ವಿಶ್ವ ಗುರು, ಜಗಜ್ಯೋತಿ ಬಸವಣ್ಣನವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಮಸಿ ಬಳೆದು ಅವಮಾನಿಸಿರುವ ಘಟನೆಯನ್ನು ಖಂಡಿಸಿ ಮಂಗಳವಾರ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಅಖಿಲ ಭಾರತ ವೀರಶೈವ ಮಹಾಸಭಾ, ಯುವ ಘಟಕ ಹಾಗು ಮಹಿಳಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಬಸವಣ್ಣನವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಮಸಿ ಬಳೆದು ಅವಮಾನಿಸಿರುವುದು ಖಂಡನೀಯ. ತಕ್ಷಣ ಅವಮಾನಗೊಳಿಸಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು. ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷೆ ನಂದಿನಿ ಮಲ್ಲಿಕಾರ್ಜುನ ನೇತೃತ್ವ ವಹಿಸಿದ್ದರು. ತಹಸೀಲ್ದಾರ್ ಆರ್. ಪ್ರದೀಪ್‌ರವರಿಗೆ ಮನವಿ ಸಲ್ಲಿಸಲಾಯಿತು.
    ಮಹಿಳಾ ಘಟಕದ ಅಧ್ಯಕ್ಷೆ ರೂಪ ನಾಗರಾಜ್, ಯುವಕ ಘಟಕದ ಅಧ್ಯಕ್ಷ ಮಂಜುನಾಥ್, ಜೇಡಿಕಟ್ಟೆ ಶ್ರೀ ಮರುಳಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್  ಅಧ್ಯಕ್ಷ ಸಿದ್ದಲಿಂಗಯ್ಯ, ಮಹಾಸಭಾ ಉಪಾಧ್ಯಕ್ಷ ವಾಗೀಶ್, ಪ್ರಧಾನ ಕಾರ್ಯದರ್ಶಿ ಬಿ.ಎಸ್ ಮಹೇಶ್‌ಕುಮಾರ್, ಸಹ ಕಾರ್ಯದರ್ಶಿ ಬಾರಂದೂರು ಮಂಜುನಾಥ್, ನಿರ್ದೇಶಕ ಜಗದೀಶ್ ಪಾಟೀಲ್, ಮಹಿಳಾ ಘಟಕದ ಉಪಾಧ್ಯಕ್ಷೆ ಶೋಭಾ ಪಾಟೀಲ್, ಕಾರ್ಯದರ್ಶಿ ಕವಿತಾ ಸುರೇಶ್, ಯುವ ಘಟಕದ ಉಪಾಧ್ಯಕ್ಷರಾದ ರುದ್ರೇಶ್, ಮಹಾದೇವ, ಕಾರ್ಯದರ್ಶಿ ಆನಂದ್, ಸಹ ಕಾರ್ಯದರ್ಶಿ ಚೇತನ್, ಖಜಾಂಚಿ ರಮೇಶ್, ಜಿಲ್ಲಾ ನಿರ್ದೇಶಕಿ ಎಸ್. ಪೂರ್ಣಿಮಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Monday, December 20, 2021

ಡಿ.೨೨ರಂದು ಬಿ.ಆರ್ ಪ್ರಾಜೆಕ್ಟ್‌ನಲ್ಲಿ ಉಚಿತ ನೇತ್ರ ತಪಾಸಣಾ, ಶಸ್ತ್ರಚಿಕಿತ್ಸೆ ಶಿಬಿರ

    ಭದ್ರಾವತಿ, ಡಿ. ೨೦: ಲಯನ್ಸ್ ಅಂತರರಾಷ್ಟ್ರೀಯ ಸಂಸ್ಥೆ, ಬಿ.ಆರ್ ಪ್ರಾಜೆಕ್ಟ್, ಶಿವಮೊಗ್ಗ ಶಂಕರ ಕಣ್ಣಿ ಆಸ್ಪತ್ರೆ ವತಿಯಿಂದ  ಚಲನಚಿತ್ರ ನಟ, ಸಮಾಜ ಸೇವಕ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಉಚಿತ ನೇತ್ರ ತಪಾಸಣಾ, ನೇತ್ರ ಶಸ್ತ್ರ ಚಿಕಿತ್ಸೆ, ಮಸೂರ ಅಳವಡಿಕೆ ಮತ್ತು ನೇತ್ರದಾನ ಶಿಬಿರ ಡಿ.೨೨ರಂದು ಹಮ್ಮಿಕೊಳ್ಳಲಾಗಿದೆ.
    ಸಿಂಗನಮನೆ ಮತ್ತು ತಾವರಘಟ್ಟ ಗ್ರಾಮ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಮತ್ತು ಸರ್ಕಾರಿ ಸಂಯುಕ್ತ ಆಸ್ಪತ್ರೆ, ಸಿಂಗನಮನೆ ಇವುಗಳ ಸಹಯೋಗದೊಂದಿಗೆ ಶಿಬಿರ ನಡೆಯುತ್ತಿದ್ದು, ಬೆಳಿಗ್ಗೆ ೯ ಗಂಟೆಗೆ ಬಿ.ಆರ್ ಪ್ರಾಜೆಕ್ಟ್ ಸರ್ಕಾರಿ ಸಂಯುಕ್ತ ಆಸ್ಪತ್ರೆಯಲ್ಲಿ ಆರಂಭಗೊಳ್ಳಲಿದೆ. ಕೋವಿಡ್ ನಿಯಮ ಪಾಲನೆಗಳೊಂದಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗಪಡೆದುಕೊಳ್ಳುವ ಜೊತೆಗೆ ಯಶಸ್ವಿಗೊಳಿಸುವಂತೆ ಸ್ವರೂಪ್ ಜೈನ್ ಕೋರಿದ್ದಾರೆ.

ಎಂಇಎಸ್ ಪುಂಡರನ್ನು ಗಡಿಪಾರು ಮಾಡಿ, ಸಂಘಟನೆ ನಿಷೇಧಿಸಿ : ಆಗ್ರಹ

ತಾಲೂಕು ಕುರುಬರ ಸಂಘದಿಂದ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ


ಅಪ್ರತಿಮಾ ದೇಶ ಭಕ್ತ, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿರುವ ಎಂಇಎಸ್ ಪುಂಡರ ಮೇಲೆ ನಾಡದ್ರೋಹ, ದೇಶದ್ರೋಹ ಪ್ರಕರಣ ದಾಖಲಿಸಿ ತಕ್ಷಣ ಗಡಿಪಾರು ಮಾಡುವಂತೆ ಹಾಗು ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸುವಂತೆ ಆಗ್ರಹಿಸಿ ಸೋಮವಾರ ಭದ್ರಾವತಿಯಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಡಿ. ೨೦: ಅಪ್ರತಿಮಾ ದೇಶ ಭಕ್ತ, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿರುವ ಎಂಇಎಸ್ ಪುಂಡರ ಮೇಲೆ ನಾಡದ್ರೋಹ, ದೇಶದ್ರೋಹ ಪ್ರಕರಣ ದಾಖಲಿಸಿ ತಕ್ಷಣ ಗಡಿಪಾರು ಮಾಡುವಂತೆ ಹಾಗು ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸುವಂತೆ ಆಗ್ರಹಿಸಿ ಸೋಮವಾರ ತಾಲೂಕು ಕುರುಬರ ಸಂಘದ ವತಿಯಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಈ ಸಂದರ್ಭದಲ್ಲಿ ಮಾತನಾಡಿ ಪ್ರಮುಖರು, ರಾಜ್ಯದಲ್ಲಿ ಎಂಇಎಸ್ ಪುಂಡರು ಮನಬಂದಂತೆ ವರ್ತಿಸುತ್ತಿದ್ದಾರೆ. ಬೆಳಗಾವಿಯಲ್ಲಿ ನಾಡಧ್ವಜ ಸುಟ್ಟು ಹಾಕಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಅಲ್ಲದೆ ಅಪ್ರತಿಮಾ ದೇಶ ಭಕ್ತ, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿ ದೇಶ ಭಕ್ತನನ್ನು ಅವಮಾನಗೊಳಿಸಿದ್ದಾರೆ. ಅದರಲ್ಲೂ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಯಾವುದೇ ಭಯವಿಲ್ಲದೆ ಪುಂಡಾಟಿಕೆ ಮಾಡುತ್ತಿದ್ದಾರೆ. ಪ್ರತಿ ಬಾರಿ ನಾಡು, ನುಡಿ  ವಿಷಯದಲ್ಲಿ ಕನ್ನಡಿಗರನ್ನು ಅವಮಾನಿಸಿ ಹಾಗು ನಾಡಿನ ಮಹಾನ್ ವ್ಯಕ್ತಿಗಳನ್ನು ಅಡ್ಡತಂದು ಅಶಾಂತಿ ವಾತಾವರಣ ನಿರ್ಮಿಸುತ್ತಿದ್ದಾರೆಂದು ಆರೋಪಿಸಿದರು.
    ತಕ್ಷಣ ಆಶಾಂತಿ ವಾತಾವರಣ ನಿರ್ಮಾಣಗೊಳ್ಳಲು ಕಾರಣಕರ್ತರಾಗಿರುವ ಪುಂಡರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ನಾಡದ್ರೋಹ, ದೇಶದ್ರೋಹ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು. ರಾಜ್ಯದಲ್ಲಿ ಎಂಇಎಸ್ ಕಾರ್ಯಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿದರು.
    ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಎಂ ಸಂತೋಷ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ನಗರಸಭಾ ಸದಸ್ಯರಾದ ಕಾಂತರಾಜ್, ಶ್ರೇಯಸ್, ಮಹಿಳಾ ಪ್ರಮುಖರಾದ ಶಾರದಮ್ಮ, ಹೇಮಾವತಿ ಶಿವಾನಂದ್, ಸಂಘದ ಪ್ರಮುಖರಾದ ಕಾರ್ಯದರ್ಶಿ ಬಿ.ಎ ರಾಜೇಶ್, ಸಹ ಕಾರ್ಯದರ್ಶಿ ಶ್ರೀನಿವಾಸ್, ನಿರ್ದೇಶಕರಾದ ಬಿ.ಎಚ್ ರಾಜಪ್ಪ, ಚಂದ್ರಪ್ಪ, ಬಿ.ಎಸ್ ಮಂಜುನಾಥ್, ಎನ್.ಸತೀಶ್, ವಸಂತ್, ಮಾಜಿ ಅಧ್ಯಕ್ಷ ತಿಮ್ಮಣ್ಣ, ಕೆ.ಎನ್ ನಾಗರಾಜ್, ನಾಗಭೂಷಣ್, ಸಣ್ಣಯ್ಯ, ನಗರಸಭೆ ಮಾಜಿ ಸದಸ್ಯ ಸುಬ್ಬಣ್ಣ,  ಆಮ್‌ ಆದ್ಮಿ ಪಾರ್ಟಿಯ ಎಚ್.‌ ರವಿಕುಮಾರ್‌, ಕೇಸರಿ ಪಡೆ ಅಧ್ಯಕ್ಷ ಕೆ.ಪಿ ಗಿರೀಶ್‌, ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಕಾರ್ಯಾಧ್ಯಕ್ಷ ಅಭಿಲಾಷ್, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ವಿನೋದ್‌ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಎನ್ವಿರಾನ್ಮೆಂಟ್ ಮ್ಯಾನೇಜ್‌ಮೆಂಟ್ ಪ್ರಶಸ್ತಿ

 ಭದ್ರಾವತಿ, ಡಿ. ೨೦ : ಉಕ್ಕು ವಲಯಕ್ಕೆ ನೀಡುವ ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಎನ್ವಿರಾನ್ಮೆಂಟ್ ಮ್ಯಾನೇಜ್‌ಮೆಂಟ್ ಪ್ರಶಸ್ತಿಯನ್ನು ಈ ಬಾರಿ ಸಹ ಭಾರತೀಯ ಉಕ್ಕು ಪ್ರಾಧಿಕಾರ (ಸೈಲ್) ಪಡೆದುಕೊಂಡಿದೆ.
    ಸತತವಾಗಿ ೩ ವರ್ಷಗಳಿಂದ ಈ ಪ್ರಶಸ್ತಿಯನ್ನು ಸೈಲ್ ತನ್ನದಾಗಿಸಿಕೊಂಡು ಬಂದಿದೆ. ಸುಸ್ಥಿರ ಮತ್ತು ಜವಾಬ್ದಾರಿಯುತ ಪರಿಸರ ಉಕ್ಕಿನ ತಯಾರಿಕೆಗಾಗಿ ಕಂಪನಿಯು ಮಾಡಿದ ಪ್ರಯತ್ನಗಳಿಗೆ ಈ ಪ್ರಶಸ್ತಿ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಾರದು.
    ಹವಾಮಾನ ಬದಲಾವಣೆಯ ಬಗೆಯಿರುವ ಜಾಗತಿಕ ಕಾಳಜಿಗೆ ಸೈಲ್ ಸಂವೇದನಾಶೀಲವಾಗಿದೆ. ಕಾರ್ಬನ್ ಹೆಜ್ಜೆ ಗುರುತಿನ ಕಡಿತವು ಕಂಪನಿಯ ಕಾರ್ಪೊರೇಟ್ ನೀತಿಗಳು ಮತ್ತು ಕಾರ್ಯಾಚರಣೆಗಳ ಅವಿಭಾಜ್ಯ ಅಂಗವಾಗಿದೆ. ಅತ್ಯಾಧುನಿಕ ಪರಿಸರ ಸ್ನೇಹಿ ತಂತ್ರಜ್ಞಾನದ ನಿಯೋಜನೆ, ಸಂಪನ್ಮೂಲ ದಕ್ಷತೆಗಾಗಿ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ ಆರ್ ಮತ್ತು ಡಿ ಉಪಕ್ರಮಗಳು, ಬೃಹತ್ ಪ್ರಮಾಣದಲ್ಲಿ ಸಸಿಗಳನ್ನು ನೆಡುವ ಮೂಲಕ ಕಾರ್ಬನ್ ಸಿಂಕ್‌ಗಳ ರಚನೆ, ಎಲ್.ಇ.ಡಿ ದೀಪಗಳಿಗೆ ಕ್ರಮೇಣ ಬದಲಾವಣೆ, ನವೀಕರಿಸಬಹುದಾದ ಇಂಧನಗಳ ಪಾಲನ್ನು ಹೆಚ್ಚಿಸುವುದು ಸೇರಿದಂತೆ ಇತ್ಯಾದಿ ಪ್ರಮುಖ ಉಪಕ್ರಮಗಳನ್ನು ಸೈಲ್ ರೂಪಿಸಿಕೊಂಡಿದೆ.



    ಮಾಲಿನ್ಯ ನಿಯಂತ್ರಣ ಸೌಲಭ್ಯಗಳನ್ನು ನವೀಕರಿಸುವುದು, ಶೂನ್ಯ ದ್ರವ ವಿಸರ್ಜನೆಯನ್ನು ಸಾಧಿಸುವ ಗುರಿಯೊಂದಿಗೆ ನೀರಿನ ಸಂರಕ್ಷಣೆಯ ಪ್ರಯತ್ನಗಳು ಕಂಪನಿಯ ಪರಿಸರ ಸಂರಕ್ಷಣಾ ಕ್ರಮಗಳಾಗಿವೆ. ವಿವಿಧ ಘನತಾಜ್ಯಗಳ ಸಮರ್ಥ ನಿರ್ವಹಣೆ (ಅಂದರೆ ಪ್ರಕ್ರಿಯೆ ತ್ಯಾಜ್ಯ, ಅಪಾಯಕಾರಿ ತ್ಯಾಜ್ಯ, ಕ್ಯಾಂಟೀನ್/ ನಗರಪ್ರದೇಶದ ತ್ಯಾಜ್ಯ) ಸೇರಿದಂತೆ ವಿವಿಧ ಪರಿಸರ ಸಂರಕ್ಷಣ ಕ್ರಮಗಳನ್ನು ಅಳವಡಿಸಿಕೊಳ್ಳುವುದರ ಮೇಲೆ ಕೇಂದ್ರೀಕೃತವಾಗಿವೆ. ಅರಣ್ಯೀಕರಣದ ಮೂಲಕ ಇಂಗಾಲದ ವಶಪಡಿಸಿಕೊಳ್ಳುವಿಕೆ, ಗಣಿಗಾರಿಕೆಯಿಂದ ಹೊರಗಿರುವ ಪ್ರದೇಶದ ಪರಿಸರ ಮರುಸ್ಥಾಪನೆ ಇತ್ಯಾದಿ ಗುರಿ ಹೊಂದಿದೆ.
    ಇತ್ತೀಚೆಗೆ ನಡೆದ ವರ್ಚುಯಲ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಸೈಲ್ ಸ್ವೀಕರಿಸಿದೆ. ಸತತವಾಗಿ ೩ ಬಾರಿ ಪ್ರಶಸ್ತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಸೈಲ್‌ ಆಡಳಿತ ಮಂಡಳಿಗೆ ನಗರ ವಿಐಎಸ್‌ಎಲ್‌ ಕಾರ್ಖಾನೆಯ ಸಮುದಾಯ ಅಭಿನಂದನೆ ಸಲ್ಲಿಸಿದೆ.