Tuesday, February 28, 2023

ಬಿಎಸ್‌ವೈ ಹುಟ್ಟುಹಬ್ಬದಂದು ಶವದ ಪ್ರತಿಕೃತಿ ನಿರ್ಮಿಸಿ ವಿಕೃತಿ : ಕಿಡಿಗೇಡಿಗಳ ಬಂಧನಕ್ಕೆ ಬಿಜೆಪಿ ಆಗ್ರಹ

ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಪ್ರತಿಕೃತಿ ಶವಯಾತ್ರೆ ನಡೆಸಿ ಆಕ್ರೋಶ

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗು ಸಂಸದ ಬಿ.ವೈ ರಾಘವೇಂದ್ರರವರ ಶವದ ಪ್ರತಿಕೃತಿ ನಿರ್ಮಿಸಿ ದುರ್ವರ್ತನೆ  ತೋರಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಭದ್ರಾವತಿಯಲ್ಲಿ ಬಿಜೆಪಿ ಮಂಡಲ ವತಿಯಿಂದ ಮಂಗಳವಾರ ಸಂಜೆ ರಸ್ತೆತಡೆ ನಡೆಸಿ ಪ್ರತಿಭಟಿಸಲಾಯಿತು.
    ಭದ್ರಾವತಿ, ಫೆ. ೨೮: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗು ಸಂಸದ ಬಿ.ವೈ ರಾಘವೇಂದ್ರರವರ ಶವದ ಪ್ರತಿಕೃತಿ ನಿರ್ಮಿಸಿ ದುರ್ವರ್ತನೆ  ತೋರಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಬಿಜೆಪಿ ಮಂಡಲ ವತಿಯಿಂದ ಮಂಗಳವಾರ ಸಂಜೆ ರಸ್ತೆತಡೆ ನಡೆಸಿ ಪ್ರತಿಭಟಿಸಲಾಯಿತು.
    ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಪ್ರಮುಖರು, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಹುಟ್ಟುಹಬ್ಬದಂದು ಕಾಂಗ್ರೆಸ್ ಹಾಗು ಜೆಡಿಎಸ್ ಪಕ್ಷದ ಕೆಲ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ. ಇದಕ್ಕೆ ಇಲ್ಲಿನ ಪೊಲೀಸರು ಸಹ ಸಹಕರಿಸಿದ್ದಾರೆಂದು ಆರೋಪಿಸಿದರು.
    ರಾಜ್ಯ ಹಾಗು ಜಿಲ್ಲೆಗೆ ಬಿ.ಎಸ್ ಯಡಿಯೂರಪ್ಪನವರ ಕೊಡುಗೆ ಅಪಾರವಾಗಿದ್ದು, ಸಂಸದ ಬಿ.ವೈ ರಾಘವೇಂದ್ರರವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಕ್ಷೇತ್ರದ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕೈಗಾರಿಕೆಗಳ ಇಂದಿನ ಸ್ಥಿತಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ದುರಾಡಳಿತ ಕಾರಣವಾಗಿದೆ. ಬಿಜೆಪಿ ಪಕ್ಷ ಎಂದಿಗೂ ಅಭಿವೃದ್ದಿ ವಿಚಾರದಲ್ಲಿ ರಾಜಕಾರಣ ಮಾಡಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಈ ಎರಡು ಕಾರ್ಖಾನೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿವೆ. ಕಾರ್ಮಿಕರ ದಿಕ್ಕು ತಪ್ಪುಸುವ ಕೆಲಸದಲ್ಲಿ ತೊಡಗಿವೆ. ಭವಿಷ್ಯದಲ್ಲಿ ಈ ಎರಡು ಪಕ್ಷಗಳು ಕ್ಷೇತ್ರದಲ್ಲಿ ನೆಲೆ ಕಳೆದುಕೊಳ್ಳಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಕಿಡಿಗೇಡಿಗಳು ನಡೆಸಿರುವ ಶವದ ಪ್ರತಿಕೃತಿಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರುಗಳದ್ದಾಗಿವೆ. ಅವುಗಳು ಕೊಳೆತು ದುರ್ವಾಸನೆ ಬರುವ ಮೊದಲು ಅವುಗಳಿಗೆ ಮುಕ್ತಿ ನೀಡುವ ಕಾರ್ಯದಲ್ಲಿ ಬಿಜೆಪಿ ತೊಡಗಿದೆ. ಈ ಬಾರಿ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳನ್ನು ಕ್ಷೇತ್ರದ ಜನರು ತಿರಸ್ಕರಿಸಲಿದ್ದಾರೆ ಎಂದರು.
    ಪಕ್ಷದ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ನೇತೃತ್ವ ವಹಿಸಿದ್ದರು. ಪ್ರಮುಖರಾದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಕೆ.ಬಿ ಪವಿತ್ರ ರಾಮಯ್ಯ, ನಗರಸಭಾ ಸದಸ್ಯರಾದ ವಿ. ಕದಿರೇಶ್, ಅನುಪಮ, ಅನ್ನಪೂರ್ಣ, ಕರೀಗೌಡ, ಪ್ರಮುಖರಾದ ತೀರ್ಥಯ್ಯ, ಎಸ್. ಕುಮಾರ್, ಎಂ. ಮಂಜುನಾಥ್, ಜಿ. ಆನಂದಕುಮಾರ್, ಎಂ. ಪ್ರಭಾಕರ್, ಚಂದ್ರಪ್ಪ, ಚನ್ನೇಶ್, ಗೋಕುಲ್ ಕೃಷ್ಣ, ಗಣೇಶ್‌ರಾವ್, ಚಂದ್ರು ದೇವರನರಸೀಪುರ, ನಕುಲ್, ರಾಜಶೇಖರ್, ಹೇಮಾವತಿ ವಿಶ್ವನಾಥ್, ಸುಲೋಚನ, ಅನ್ನಪೂರ್ಣ ಸಾವಂತ್, ಕವಿತಾ ರಾವ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು. ಕೊನೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪ್ರತಿಕೃತಿ ಶವಯಾತ್ರೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಿದರು.

ಕೈಗಾರಿಕೆಗಳಿಗೆ ಮೊದಲ ಆದ್ಯತೆ, ಯುವಕರಿಗೆ ಉದ್ಯೋಗ ನೀಡಿ : ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ

ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಶಿವಮೊಗ್ಗ ಜಿಲ್ಲೆ ವೀರಶೈವ ಲಿಂಗಾಯತ ಮಠಾಧೀಶರ ಮಹಾಸಭಾವತಿಯಿಂದ ಬೆಂಬಲ ಸೂಚಿಸಿ ಆನಂದಪುರ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು.
    ಭದ್ರಾವತಿ, ಫೆ. ೨೮ : ಕಾರ್ಖಾನೆಗಳು ಮುಚ್ಚಿದ ಮೇಲೆ ವಿಮಾನ ನಿಲ್ದಾಣದಿಂದ ಯಾರಿಗೆ ಪ್ರಯೋಜನ. ಮೊದಲು ಕೈಗಾರಿಕೆಗಳು ಅಭಿವೃದ್ಧಿಗೊಂಡು ಯುವಕರಿಗೆ ಉದ್ಯೋಗ ಲಭಿಸಬೇಕೆಂದು ಶಿವಮೊಗ್ಗ ಜಿಲ್ಲೆ ವೀರಶೈವ ಲಿಂಗಾಯತ ಮಠಾಧೀಶರ ಮಹಾಸಭಾ ಅಧ್ಯಕ್ಷರಾದ ಆನಂದಪುರ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
    ನಗರದ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಮಹಾಸಭಾವತಿಯಿಂದ ಬೆಂಬಲ ಸೂಚಿಸಿ ಶ್ರೀಗಳು ಮಾತನಾಡಿದರು.
    ಜನರ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವುದು ಮಠಾಧೀಶರ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಮಹಾಸಭಾ ಸಂಪೂರ್ಣ ಬೆಂಬಲ ಸೂಚಿಸುತ್ತದೆ. ಮಲೆನಾಡಿನ ಭಾಗದಲ್ಲಿರುವ ಬೃಹತ್ ಕಾರ್ಖಾನೆಗಳು ಒಂದೊಂದಾಗಿ ಮುಚ್ಚುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ವಿಐಎಸ್‌ಎಲ್ ಈ ಭಾಗದಲ್ಲಿರುವ ಏಕೈಕ ಕಬ್ಬಿಣ ಕಾರ್ಖಾನೆಯಾಗಿದ್ದು, ಇದು ಕೇವಲ ಭದ್ರಾವತಿ ಜನರಿಗೆ ಮಾತ್ರ ಸೀಮಿತವಾಗಿಲ್ಲ. ಇಡೀ ಮಲೆನಾಡಿನ ಜನರ ಬದುಕಿಗೆ ಆಧಾರವಾಗಿದೆ. ತನ್ನದೇ ಆದ ಪರಂಪರೆ ಹೊಂದುವ ಜೊತೆಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಕೊಡುಗೆ ನೀಡಿದೆ. ಈ ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಳುವ ಸರ್ಕಾರಗಳು ಪುನರ್ ಪರಿಶೀಲನೆ ನಡೆಸಬೇಕಾಗಿದೆ ಎಂದರು.
    ವಿಐಎಸ್‌ಎಲ್ ಕಾರ್ಖಾನೆಯನ್ನು ಆಧುನೀಕರಣಗೊಳಿಸಿ ಇನ್ನೂ ಹೆಚ್ಚಿನ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸುವ ನಿಟ್ಟಿನಲ್ಲಿ ಅಗತ್ಯವಿರುವ ಬಂಡವಾಳ ಹೂಡಬೇಕು. ಇಂದಿನ ಮಾರುಕಟ್ಟೆಗೆ ಪೈಪೋಟಿ ನೀಡುವಂತೆ ಶಕ್ತಿ ತುಂಬಬೇಕು. ಇದ್ಯಾವುದನ್ನೂ ಸಹ ಮಾಡದೆ ಲಾಭ ಪಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು. ಮೊದಲು ಅಗತ್ಯವಿರುವ ಬಂಡವಾಳ ತೊಡಗಿಸಿ ಯುವಕರಿಗೆ ಉದ್ಯೋಗ ನೀಡಿ. ಇದರಿಂದ ಭವಿಷ್ಯದಲ್ಲಿ ಎಲ್ಲಾ ರೀತಿಯ ಬೆಳವಣಿಗೆ ಕಾಣಲು ಸಾಧ್ಯ ಎಂದರು.
    ಅಂದಿನ ಮೈಸೂರು ಮಹಾರಾಜರು ಹೊಂದಿದ್ದ ಸಾಮಾಜಿಕ ಕಾಳಜಿ, ಅಭಿವೃದ್ಧಿ ಕಾರ್ಯಗಳನ್ನು ಪರಿಪೂರ್ಣಗೊಳಿಸುವ ನಿಟ್ಟಿನಲ್ಲಿ ದಿವಾನರು, ತಂತ್ರಜ್ಞರು ಹೊಂದಿದ್ದ ಬದ್ಧತೆ ಇಂದಿನ ಸರ್ಕಾರಗಳಲ್ಲಿ ಕಂಡು ಬರುವುದಿಲ್ಲ. ಶತಮಾನ ಪೂರೈಸಿರುವ ವಿಐಎಸ್‌ಎಲ್ ನಮ್ಮೆಲ್ಲರ ಸ್ವಾಭಿಮಾನದ ಸಂಕೇತವಾಗಿದೆ. ಮೇಡ್ ಇನ್ ಇಂಡಿಯಾ ಹಾಗು ಮೇಕ್ ಇನ್ ಇಂಡಿಯಾ ಈ ಎರಡೂ ಪದಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಒಂದು ಉತ್ಪಾದನೆಗೆ ಬೇಕಾದ ಎಲ್ಲಾ ಉತ್ಪನ್ನಗಳನ್ನು ನಮ್ಮಲ್ಲಿಯೇ ಉತ್ಪಾದಿಸುವ ಮೂಲಕ ನಮ್ಮದೇ ಆದ ಒಂದು ಅಸ್ತಿತ್ವ ಕಂಡುಕೊಳ್ಳುವುದು ಮೇಕ್ ಇನ್ ಇಂಡಿಯಾ ಎಂಬುದಾಗಿದೆ. ಈ ಪದದ ಅರ್ಥಕ್ಕೆ ಚ್ಯುತಿ ಬರದಂತೆ ಆಳುವ ಸರ್ಕಾರಗಳು ಎಚ್ಚರ ವಹಿಸಬೇಕೆಂದರು.
    ವಿಮಾನ ನಿಲ್ದಾಣಗಳಿಂದ ಉದ್ಯಮಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಆದರೆ ಇಲ್ಲಿ ಯಾವುದೇ ಕೈಗಾರಿಕೆಗಳು ಇಲ್ಲದಿದ್ದಲ್ಲಿ ಉದ್ಯಮಿಗಳು ಬರಲು ಸಾಧ್ಯವೇ. ಮೊದಲು ಕೈಗಾರಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಈ ಕುರಿತು ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.
    ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಾರು ೨೦ಕ್ಕೂ ಹೆಚ್ಚು ವಿವಿಧ ಮಠಗಳ ಸ್ವಾಮೀಜಿಗಳು ಪಾಲ್ಗೊಂಡಿದ್ದರು.

Monday, February 27, 2023

ಭದ್ರಾ ಜಲಾಶಯದಿಂದ ೭ ಟಿಎಂಸಿ ನೀರು ಹರಿಸುವ ಸರ್ಕಾರದ ಆದೇಶಕ್ಕೆ ರೈತರ ವಿರೋಧ

ತುಂಗಭದ್ರಾ ಜಲಾಶಯಕ್ಕೆ ಭದ್ರಾ ಜಲಾಶಯದಿಂದ ೭ ಟಿಎಂಸಿ ನೀರು ಹರಿಸುವ ಸರ್ಕಾರದ ಆದೇಶ ಕುರಿತು ಭದ್ರಾವತಿಯಲ್ಲಿ ತಾಲೂಕು ರೈತ ಸಂಘದ ಸಭೆಯಲ್ಲಿ ಚರ್ಚಿಸಲಾಯಿತು.
    ಭದ್ರಾವತಿ, ಫೆ. ೨೭ : ತುಂಗಭದ್ರಾ ಜಲಾಶಯಕ್ಕೆ ಭದ್ರಾ ಜಲಾಶಯದಿಂದ ೭ ಟಿಎಂಸಿ ನೀರು ಹರಿಸುವ ಸರ್ಕಾರದ ಆದೇಶಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.
    ತಾಲೂಕು ರೈತ ಸಂಘದ ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಸಾಮೂಹಿಕ ನಾಯಕತ್ವ )   ವರಿಷ್ಠರಾದ ಕೆ ಟಿ ಗಂಗಾಧರ್, ಭದ್ರಾ ಜಲಾಶಯದ ಅಚ್ಚುಕಟ್ಟು ೧ ಲಕ್ಷ ಹೆಕ್ಟರ್ ಪ್ರದೇಶದಲ್ಲಿ ದೀರ್ಘಾವಧಿ ಹಾಗು ಅಲ್ಪಾವಧಿ ಬೇಸಿಗೆ ಬೆಳೆ ಹಂಗಾಮಿಗೆ ನೀರಾವರಿ ಸಲಹಾ ಸಮಿತಿ ನಿರ್ಣಯ ಆದೇಶ ಹೊರಡಿಸಿ ಎಡದಂಡೆ, ಬಲದಂಡೆ, ಮಲೆಬೆನ್ನೂರು, ಗೊಂದಿ ಜಲಾಶಯಕ್ಕೆ ೧೩೬ ದಿನಗಳಿಗೆ ನೀರಿನ ಪ್ರಮಾಣ ನಿರ್ಧರಿಸಿ ನೀರನ್ನು ಬೆಳೆಗಳಿಗೆ ಈಗಾಗಲೇ ೪೭ ದಿನಗಳ ನೀರನ್ನು ಒದಗಿಸಲಾಗಿದೆ.  ಇನ್ನು ೮೯ ದಿನಗಳ ನೀರನ್ನು ರೈತರ ಬೆಳೆಗೆ ಒಟ್ಟು ೩೬.೭೧ ಟಿಎಂಸಿ ನೀರನ್ನು ಹರಿಸಬೇಕಾಗಿದೆ. ಬೃಹತ್ ನಗರಗಳಿಗೆ ಕುಡಿಯುವ ನೀರು, ಕೈಗಾರಿಕೆಗಳಿಗೆ ಮಾತ್ರವಲ್ಲದೆ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ೭.೦೪೮ ಟಿಎಂಸಿ ನೀರನ್ನು ಜೋಪಾನ ಮಾಡಬೇಕಾಗಿದೆ. ಪ್ರಸ್ತುತ ನೀರಿನ ಪ್ರಮಾಣ ಗಮನಿಸಿದರೆ ಉಪಯೋಗಕ್ಕೆ ಅಗತ್ಯವಿರುವ ನೀರಿನ ಪ್ರಮಾಣ ೩೭.೫೮೬ ಟಿಎಂಸಿ ಇದ್ದು, ಆದರೆ ಜಲಾಶಯದಲ್ಲಿ ಬಳಸಬಹುದಾದ ನೀರಿನ ಪ್ರಮಾಣ ಲಭ್ಯತೆ ೩೫.೩೬೮ ಟಿಎಂಸಿ ಆಗಿದೆ.  ೨.೨೧೮ ಟಿಎಂಸಿ ಪ್ರಮಾಣದ ನೀರಿನ ಕೊರತೆ ಎದುರಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ಭದ್ರಾ ಜಲಾಶಯದಿಂದ ೭ ಟಿಎಂಸಿ ನೀರನ್ನು ತುಂಗಭದ್ರಾ ಜಲಾಶಯಕ್ಕೆ ಯಾವುದೇ ಕಾರಣಕ್ಕೂ ಹರಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನಲೆಯಲ್ಲಿ ಸರ್ಕಾರ ೭ ಟಿಎಂಸಿ ನೀರು ಹರಿಸುವ ಆದೇಶ ಹಿಂಪಡೆಯಬೇಕೆಂದರು.
    ಜಿಲ್ಲಾ ರೈತ ಸಂಘದ ಕಾರ್ಯಧ್ಯಕ್ಷ ಯಶವಂತರಾವ್ ಘೋರ್ಪಡೆ ಮಾತನಾಡಿ, ಭದ್ರಾ ಜಲಾಶಯದಿಂದ ತುಂಗಭದ್ರಾ ಜಲಾಶಯಕ್ಕೆ ಯಾವುದೇ ಕಾರಣಕ್ಕೂ ೭ ಟಿಎಂಸಿ ನೀರು ಹರಿಸಬಾರದು. ಸರ್ಕಾರದ ಪ್ರಸ್ತುತ ಹೊರಡಿಸಿರುವ ಆದೇಶದ ವಿರುದ್ಧ ಚಳುವಳಿ ರೂಪಿಸಬೇಕೆಂದರು.
    ಶಿವಮೊಗ್ಗ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಪುಟ್ಟಪ್ಪ ಮಾತನಾಡಿ, ನೀರಾವರಿ ಸಲಹಾ ಸಮಿತಿ ನಿರ್ಣಯದಂತೆ ನೀರು ಪಡೆದುಕೊಳ್ಳುವುದು ನಮ್ಮ ಹಕ್ಕು. ಮೊದಲು ಅಚ್ಚುಕಟ್ಟುದಾರರ ಬೆಳೆಗಳನ್ನು ಸಂರಕ್ಷಿಸುವುದು ಸರ್ಕಾರದ ಕರ್ತವ್ಯ ಹಾಗೂ ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಈ ಹಿನ್ನಲೆಯಲ್ಲಿ ಯಾವುದೇ ಕಾರಣಕ್ಕೂ ಜಲಾಶಯದಿಂದ ನೀರು ಹರಿಸಬಾರದು ಎಂದರು.
    ತಾಲೂಕು ರೈತ ಸಂಘದ ಅಧ್ಯಕ್ಷ ಹಿರಣ್ಣಯ್ಯ, ಅಗಸನಹಳ್ಳಿ ಹಿರಿಯ ರೈತ ಮುಖಂಡರಾದ ಯಲ್ಲಪ್ಪ, ಮೂರ್ತಣ್ಣ ಸೇರಿದಂತೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪಾದಯಾತ್ರೆ ವೇಳೆ ನಡುರಸ್ತೆಯಲ್ಲಿಯೇ ಕುಳಿತು ಉಪಹಾರ ಸೇವಿಸಿದ ಮಾಜಿ ಶಾಸಕರ ಪುತ್ರ

ಭದ್ರಾವತಿ ವಿಐಎಸ್‌ಎಲ್ ಮುಚ್ಚುವ ಆದೇಶದ ವಿರುದ್ಧ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಬೆಂಬಲ ಸೂಚಿಸಿ ಸೋಮವಾರ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ಯುವ ಘಟಕದ ತಾಲೂಕು ಅಧ್ಯಕ್ಷ, ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪುತ್ರ ಎಂ.ಎ ಅಜಿತ್ ನಡುರಸ್ತೆಯಲ್ಲಿ ಕುಳಿತು ಉಪಹಾರ ಸೇವಿಸಿ ಗಮನ ಸೆಳೆದರು. 
    ಭದ್ರಾವತಿ, ಫೆ. ೨೭: ವಿಐಎಸ್‌ಎಲ್ ಮುಚ್ಚುವ ಆದೇಶದ ವಿರುದ್ಧ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಬೆಂಬಲ ಸೂಚಿಸಿ ಸೋಮವಾರ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ಯುವ ಘಟಕದ ತಾಲೂಕು ಅಧ್ಯಕ್ಷ, ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪುತ್ರ ಎಂ.ಎ ಅಜಿತ್ ನಡುರಸ್ತೆಯಲ್ಲಿ ಕುಳಿತು ಉಪಹಾರ ಸೇವಿಸಿ ಗಮನ ಸೆಳೆದರು.
    ಶಿವಮೊಗ್ಗ ಸೋಗಾನೆಯಲ್ಲಿ ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ಮೋದಿಯವರಿಗೆ ಮನವಿ ಸಲ್ಲಿಸುವ ಉದ್ದೇಶದಿಂದ ಗುತ್ತಿಗೆ ಕಾರ್ಮಿಕರು ಕೈಗೊಂಡಿದ್ದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಎಂ.ಎ ಅಜಿತ್ ಹಾಗು ಜೆಡಿಎಸ್ ಪಕ್ಷದ ಮುಖಂಡರು ಬಿಳಿಕಿ ಕ್ರಾಸ್‌ವರೆಗೂ ಸಾಗಿದರು. ಈ ಸಂದರ್ಭದಲ್ಲಿ ಪೊಲೀಸರು ಪಾದಯಾತ್ರೆ ತಡೆಯುವಲ್ಲಿ ಯಶಸ್ವಿಯಾದರು. ಪಾದಯಾತ್ರೆಯಲ್ಲಿ ಪಾಲ್ಗೊಂಡವರನ್ನು ವಶಕ್ಕೆ ಪಡೆದರು.
    ಈ ಅವಧಿಯಲ್ಲಿ ಎಂ.ಎ ಅಜಿತ್ ನಡುರಸ್ತೆಯಲ್ಲಿಯೇ  ಕುಳಿತು ಉಪಹಾರ ಸೇವಿಸಿದರು. ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾರ್ಖಾನೆ-ಕಾರ್ಮಿಕರ ಹಿತಕಾಪಾಡುವ ಹೋರಾಟಕ್ಕೆ ಬೆಂಬಲ : ಬಿ.ಕೆ ಸಂಗಮೇಶ್ವರ್

ಮನವಿ ಸಲ್ಲಿಸಲು ಅವಕಾಶ ನೀಡದೆ ವಶಕ್ಕೆ ಪಡೆದು ಪ್ರಜಾಪ್ರಭುತ್ವ ಕಗ್ಗೊಲೆ

ಭದ್ರಾವತಿಯಲ್ಲಿ ಗುತ್ತಿಗೆ ಕಾರ್ಮಿಕರ ಪರ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಬೆಂಬಲಿಗರನ್ನು ಪೊಲೀಸರು ವಶಕ್ಕೆ ಕಾಗದನಗರದ ಚಂದ್ರಾಲಯಕ್ಕೆ ಕರೆ ತಂದಿರುವುದು.
    ಭದ್ರಾವತಿ, ಫೆ. ೨೭: ಕಾರ್ಖಾನೆ ಹಾಗು ಕಾರ್ಮಿಕರ ಹಿತಕಾಪಾಡಲು ಮತ್ತು ಕ್ಷೇತ್ರದ ಅಭಿವೃದ್ಧಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲು ಪಾದಯಾತ್ರೆ ನಡೆಸಿದ ನಮ್ಮನ್ನು ವಶಕ್ಕೆ ಪಡೆಯುವ ಮೂಲಕ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಲಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.
    ಅವರು ಕಾಗದನಗರದ ಚಂದ್ರಾಲಯದಲ್ಲಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಬರೆದಿರುವ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಜನಪ್ರತಿನಿಧಿಯಾಗಿರುವ ನನ್ನ ಮೇಲೆಯೇ ಇಷ್ಟೊಂದು ದೌರ್ಜನ್ಯ ನಡೆಸಿದರೆ ಜನಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದರು.
ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಈ ಕಾರ್ಖಾನೆಯನ್ನು ಮುಚ್ಚಲು ಹುನ್ನಾರ ನಡೆಸುತ್ತಿವೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದರು.
    ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಜೆ.ಎನ್ ಚಂದ್ರಹಾಸ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮನವಿ ಸಲ್ಲಿಸುವುದು ಸಂವಿಧಾನದ ಹಕ್ಕು ಇದನ್ನು ಮೊಟಕುಗೊಳಿಸಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಈ ಕಾರ್ಖಾನೆಯನ್ನು ಮುಚ್ಚಬಾರದು. ಇದಕ್ಕೆ ಅಗತ್ಯವಿರುವ ಬಂಡವಾಳ ತೊಡಗಿಸಿ ಕಾಯಂ ಹಾಗು ಗುತ್ತಿಗೆ ಕಾರ್ಮಿಕರ ಹಿತಕಾಪಾಡುವ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕೆಂದರು.
    ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ.ಚಂದ್ರೇಗೌಡ ಮಾತನಾಡಿ, ಓರ್ವ ಜನಪ್ರತಿನಿಧಿಗೆ ಮನವಿ ಸಲ್ಲಿಸಲು ಅವಕಾಶ ನೀಡದಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ. ಇಂತಹ ಸರ್ಕಾರಗಳಿಗೆ ಧಿಕ್ಕಾರ ಹಾಕಬೇಕು. ಮೋದಿ ಗೋ ಬ್ಯಾಕ್ ಎಂದು ಕೂಗಬೇಕಾಗಿದೆ ಎಂದರು.
    ಎಎಪಿ ಪಕ್ಷದ ಮುಖಂಡ ಎಚ್. ರವಿಕುಮಾರ್, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಅಧ್ಯಕ್ಷ ಸುದೀಪ್‌ಕುಮಾರ್, ಸದಸ್ಯರಾದ ಸರ್ವಮಂಗಳ ಭೈರಪ್ಪ, ಲತಾ ಚಂದ್ರಶೇಖರ್, ಕಾಂತರಾಜ್, ಶೃತಿ ವಸಂತ, ಕಾರ್ಮಿಕ ಮುಖಂಡರಾದ ಬಸವಂತಪ್ಪ, ಬಂಜಾರ ರೈತ ಸಂಘದ ರಾಜ್ಯಾಧ್ಯಕ್ಷ ಕೃಷ್ಣನಾಯಕ, ಶ್ರೀನಿವಾಸ್, ಲೋಕೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬಿಎಸ್‌ವೈ-ಬಿವೈಆರ್ ನೀಚಮಟ್ಟದ ರಾಜಕಾರಣ : ಶಾರದ ಅಪ್ಪಾಜಿ

ಭದ್ರಾವತಿಯಲ್ಲಿ ಗುತ್ತಿಗೆ ಕಾರ್ಮಿಕರ ಪರ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ ಹಾಗು ಬೆಂಬಲಿಗರನ್ನು ಪೊಲೀಸರು ವಶಕ್ಕೆ ಕಾಗದನಗರದ ಚಂದ್ರಾಲಯಕ್ಕೆ ಕರೆ ತಂದಿರುವುದು.
    ಭದ್ರಾವತಿ, ಫೆ. ೨೭ : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರರವರು ಇಷ್ಟೊಂದು ನೀಚಮಟ್ಟಕ್ಕೆ ರಾಜಕಾರಣ ನಡೆಸುತ್ತಾರೆ ಎಂಬುದು ನನಗೆ ತಿಳಿದಿರಲಿಲ್ಲ. ಗುತ್ತಿಗೆ ಕಾರ್ಮಿಕರು ಮನವಿ ಕೊಡಲು ಸಹ ಅವಕಾಶ ನೀಡದೆ ನಮ್ಮನ್ನು ಕಳ್ಳರಂತೆ ವಶಕ್ಕೆ ಪಡೆದು ಕರೆತರುವ ಮೂಲಕ ದೌರ್ಜನ್ಯ ನಡೆಸಿದ್ದಾರೆಂದು ಜೆಡಿಎಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ ಆಕ್ರೋಶ ವ್ಯಕ್ತಪಡಿಸಿದರು.
    ಅವರು ಕಾಗದನಗರ ಚಂದ್ರಾಲಯದಲ್ಲಿ ಮಾತನಾಡಿ, ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟ ಕುರಿತು ಬಿ.ಎಸ್ ಯಡಿಯೂರಪ್ಪ ಮತ್ತು ಅವರ ಮಗ ರಾಘವೇಂದ್ರರವರು ಪ್ರಧಾನಿ ಮೋದಿಯವರ ಗಮನಕ್ಕೆ ತಂದಿದ್ದಾರೋ, ಇಲ್ಲವೋ ಗೊತ್ತಿಲ್ಲ. ಸುಮಾರು ೧೫೦೦ ಗುತ್ತಿಗೆ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಇಂದು  ೨-೩ ಕೋಟಿ ರು. ವೆಚ್ಚದಲ್ಲಿ ಅವರ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕನಿಷ್ಠ ೫೦೦ ಕೋ.ರು. ಬಂಡವಾಳ ವಿಐಎಸ್‌ಎಲ್ ಕಾರ್ಖಾನೆಗೆ ನೀಡಿದರೆ ಸಾಕು ಬಡ ಕಾರ್ಮಿಕರು ಬದುಕಿಕೊಳ್ಳುತ್ತಾರೆ ಎಂದರು.
    ಗುತ್ತಿಗೆ ಕಾರ್ಮಿಕರು ಮನವಿ ಕೊಡಲು ಸಹ ಅವಕಾಶ ನೀಡದಿರಲು ಕಾರಣ ಸ್ಪಷ್ಟಪಡಿಸಬೇಕು. ನಾವು ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಸದಾ ಬೆಂಬಲ ನೀಡುದ್ದೇವೆ. ಯಡಿಯೂರಪ್ಪ ಮತ್ತು ರಾಘವೇಂದ್ರರವರು ಅವರು ಮಾಡಿರುವ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾರೆ ಎಂದರು.
    ಪಕ್ಷದ ನಗರದ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ ಮಾತನಾಡಿ, ಪ್ರಧಾನಿಯವರಿಗೆ ಮನವಿ ಕೊಡುವುದು ನಮ್ಮ ಹಕ್ಕು ಇದನ್ನು ಕಿತ್ತುಕೊಳ್ಳುವ ಮೂಲಕ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಖಂಡನೀಯ. ಕೇಂದ್ರ ಮತ್ತು ರಾಜ್ಯದ ಡಬ್ಬಲ್ ಇಂಜಿನ್ ಸರ್ಕಾರ ಕಾರ್ಮಿಕರ ಹಿತಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
    ಪಕ್ಷದ ರಾಜ್ಯ ಕಾರ್ಯದರ್ಶಿ ಜೆ.ಪಿ ಯೋಗೇಶ್ ಮಾತನಾಡಿ, ಕೇಂದ್ರ ಹಾಗು ರಾಜ್ಯಸರ್ಕಾರಗಳು ಗುತ್ತಿಗೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ವಿಷಾದನೀಯ ಬೆಳವಣಿಗೆಯಾಗಿದೆ. ಕಾರ್ಖಾನೆ ಮುಚ್ಚುವುದರಿಂದ ಕೇವಲ ೧೫೦೦ ಮಂದಿ ಗುತ್ತಿಗೆ ಕಾರ್ಮಿಕರು ಮಾತ್ರವಲ್ಲ ಅವರ ಕುಟುಂಬ ವರ್ಗದವರು, ರೈತರು ಹಾಗು ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಅವಲಂಬಿತರು ಸಹ ಸಂಕಷ್ಟಕ್ಕೆ ಒಳಗಾಗುವಂತಾಗಿದೆ ಎಂದರು.
    ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ನಗರಸಭಾ ಸದಸ್ಯರಾದ ಬಸವರಾಜ ಬಿ ಆನೇಕೊಪ್ಪ, ಉದಯ್‌ಕುಮಾರ್, ಮೈಲಾರಪ್ಪ, ಮಧುಸೂದನ್, ಸುರೇಶ್, ವೆಂಕಟೇಶ್ ಉಜ್ಜನಿಪುರ, ಭಾಗ್ಯಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, February 26, 2023

ಬ್ಯಾರಿಕೇಡ್ ಕಿತ್ತು ಹಾಕಿ ಮುನ್ನುಗ್ಗಿದ ಗುತ್ತಿಗೆ ಕಾರ್ಮಿಕರು : ಶಾಸಕರ ನೇತೃತ್ವದಲ್ಲಿ ಪಾದಯಾತ್ರೆ

 


ಭದ್ರಾವತಿ, ಫೆ. 27:  ಪೊಲೀಸರು ಗುತ್ತಿಗೆ ಕಾರ್ಮಿಕರ ಹೋರಾಟವನ್ನು ಆರಂಭಿಕ ಹಂತದಲ್ಲಿ ತಡೆಯಲು ಸಾಕಷ್ಟು ಪ್ರಯತ್ನಿಸಿದರು. ಆದರೆ ಪೊಲೀಸರನ್ನು ಮುನ್ನುಗ್ಗಿದ  ಗುತ್ತಿಗೆ ಕಾರ್ಮಿಕರು ಶಾಸಕ ಬಿ.ಕೆ ಸಂಗಮೇಶ್ವರ ನೇತೃತ್ವದಲ್ಲಿ  ಪಾದಯಾತ್ರೆ ಆರಂಭಿಸಿದರು.
    ಇದಕ್ಕೂ ಮೊದಲು ಮಾತನಾಡಿದ ಶಾಸಕರು ಹಾಗೂ ಕಾರ್ಮಿಕ ಮುಖಂಡರು, ಹೋರಾಟವನ್ನು ತಡೆಯಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಘಟನೆಯಾಗಿದೆ. ಕಾರ್ಮಿಕ ನಾಯಕರನ್ನು ಬಂಧಿಸಿರುವುದು ವಿಪರ್ಯಾಸದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
        ಶಾಂತಿಯುತವಾಗಿ ಹೋರಾಟ ನಡೆಸಲು ಮುಂದಾಗಿರುವ ಕಾರ್ಮಿಕರನ್ನು ಪೊಲೀಸರ ಮೂಲಕ ತಡೆಯಲು ಯತ್ನಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳಿಗೆ ಧಿಕ್ಕಾರ ಎಂದು ಘೋಷಣೆಗಳನ್ನು ಹಾಕಿದರು.  ಕಾರ್ಖಾನೆ ಮುಂಭಾಗದಿಂದ ಡಬ್ಬಲ್ ರಸ್ತೆಯಲ್ಲಿ ಸಾಗಿದ ಗುತ್ತಿಗೆ ಕಾರ್ಮಿಕರನ್ನು ಅಲ್ಲಿಯೇ ತಡೆಯಲು ಪೊಲೀಸರು ಸಾಕಷ್ಟು ಪ್ರಯತ್ನಿಸಿದ್ದು. ಆದರೆ ಸಾಧ್ಯವಾಗಲಿಲ್ಲ. 
      ನಂತರ ಮುನ್ನುಗ್ಗಿದ ಗುತ್ತಿಗೆ ಕಾರ್ಮಿಕರೊಂದಿಗೆ ಶಾಸಕ ಬಿ ಕೆ ಸಂಗಮೇಶ್ವರ್ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಆರಂಭಿಸಿದರು.  

ಗುತ್ತಿಗೆ ಕಾರ್ಮಿಕರಿಂದ ಪಾದಯಾತ್ರೆಗೆ ಸಿದ್ಧತೆ: ವಶಕ್ಕೆ ಪಡೆಯಲು ಮುಂದಾಗಿರುವ ಪೊಲೀಸರು

   ಭದ್ರಾವತಿ, ಫೆ. 27: ನಗರದ  ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ  ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರ ಸೋಮವಾರ ಸಹ ಮುಂದುವರೆದಿದೆ. 
   ಗುತ್ತಿಗೆ ಕಾರ್ಮಿಕರ ಹೋರಾಟ ನಿಯಂತ್ರಿಸಲು ಪೊಲೀಸರು ಭಾನುವಾರ ರಾತ್ರಿಯಿಂದಲೇ ಕಾರ್ಯಚರಣೆಕ್ಕೆ ನಡೆಸಿದ್ದು, ಕಾರ್ಖಾನೆ ಮುಂಭಾಗ ಹೆಚ್ಚಿನ ಪೋಲಿಸ್ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. 
   ಶಿವಮೊಗ್ಗ ಸೋಗನೆಯಲ್ಲಿ ನೂತನ ವಿಮಾನ ನಿಲ್ದಾಣ ಉದ್ಘಾಟನೆ ಸ್ಥಳಕ್ಕೆ ಪಾದಯಾತ್ರೆ ಮೂಲಕ ತೆರಳಲು ಗುತ್ತಿಗೆ ಕಾರ್ಮಿಕರು  ಸಿದ್ಧತೆ ನಡೆಸುತ್ತಿದ್ದು, ಪೊಲೀಸರು ಕಾರ್ಮಿಕರನ್ನು ವಶಕ್ಕೆ ಪಡೆಯಲು  ಮುಂದಾಗಿದ್ದಾರೆ.  ಈ ನಡುವೆ ಹೋರಾಟ ಬೆಂಬಲಿಸಲು ವಿವಿಧ ಸಂಘಟನೆಗಳು ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ಬೆಳಿಗ್ಗೆಯಿಂದ ಕಾರ್ಖಾನೆ ಮುಂಭಾಗ ಬಿಗುವಿನ ಪರಿಸ್ಥಿತಿ ನಿರ್ಮಾಣಗೊಂಡಿದೆ.




ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮ : ಶೂನ್ಯ ಸಂಚಾರ, ಪರ್ಯಾಯ ಮಾರ್ಗ ಅಧಿಸೂಚನೆ



    ಭದ್ರಾವತಿ, ಫೆ. ೨೬:  ಶಿವಮೊಗ್ಗ ಸೋಗಾನೆಯಲ್ಲಿ ನಿರ್ಮಿಸಲಾಗಿರುವ ನೂತನ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭಕ್ಕೆ ಫೆ. ೨೭ ರಂದು ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ಶೂನ್ಯ ಸಂಚಾರ ಮತ್ತು ಪರ್ಯಾಯ ಮಾರ್ಗಗಳನ್ನು ಗುರುತಿಸಿ ತಾತ್ಕಾಲಿಕ ಅಧಿಸೂಚನೆ ಹೊರಡಿಸಲಾಗಿದೆ.
    ಶೂನ್ಯ ಸಂಚಾರ ರಸ್ತೆ ಮಾರ್ಗ :
    ಫೆ. ೨೬ ಮತ್ತು ೨೭ರಂದು ಬೆಳಿಗ್ಗೆ ೬-೦೦ ಗಂಟೆಯಿಂದ ಸಂಜೆ ೬-೦೦ ಗಂಟೆಯವರೆಗೆ ಎಂ.ಆರ್.ಎಸ್ ಸರ್ಕಲ್ ನಿಂದ ಎನ್.ಆರ್ ಪುರ ರಸ್ತೆ ಲಕ್ಕಿನಕೊಪ್ಪ ಸರ್ಕಲ್ ವರೆಗೆ. ಹಾಗು ಮತ್ತೂರು-ಮಂಡೇನಕೊಪ್ಪ-ಸೋಗಾನೆ ವಿಮಾನ ನಿಲ್ದಾಣದವರೆಗೆ ಮಾರ್ಗಗಳಲ್ಲಿ ಶೂನ್ಯ ಸಂಚಾರ ರಸ್ತೆ ಎಂದು ಅಧಿಸೂಚನೆ ಹೊರಡಿಸಿದೆ.
    ಫೆ. ೨೭ರಂದು ಸಾರ್ವಜನಿಕ ವಾಹನಗಳ ಮಾರ್ಗ ಬದಲಾವಣೆ :
    ಎನ್.ಆರ್ ಪುರದಿಂದ ಭದ್ರಾವತಿ ಕಡೆಗೆ ಹೋಗುವ ವಾಹನಗಳು ಉಂಬ್ಳೆಬೈಲ್-ಹುಣಸೆಕಟ್ಟೆ - ಜಂಕ್ಷನ್ ಮೂಲಕ ಭದ್ರಾವತಿಗೆ ಹೋಗುವುದು.
    ಶಿಕಾರಿಪುರ-ಹೊನ್ನಾಳಿ-ದಾವಣಗೆರೆ ಕಡೆಯಿಂದ ಎನ್.ಆರ್ ಪುರಕ್ಕೆ ಹೋಗುವ ವಾಹನಗಳು ಶಿವಮೊಗ್ಗ ನಗರಕ್ಕೆ ಬಂದು ತೀರ್ಥಹಳ್ಳಿ ರಸ್ತೆ(ಎನ್.ಟಿ ರಸ್ತೆ) ಮೂಲಕ ಎನ್.ಆರ್ ಪುರಕ್ಕೆ ಹೋಗುವುದು.
    ತೀರ್ಥಹಳ್ಳಿ ರಸ್ತೆ ಕಡೆಯಿಂದ ಸಾಗರ ರಸ್ತೆ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ನ್ಯೂ ಮಂಡ್ಲಿ ಸರ್ಕಲ್-ಗೋಪಾಳ-ಸರ್ಕಲ್-ಆಲ್ಕೊಳ ಸರ್ಕಲ್ ಮಾರ್ಗವಾಗಿ ಸಾಗರ ರಸ್ತೆಗೆ ಬಂದು ಸೇರುವುದು.
    ಸಾಗರ ರಸ್ತೆ ಕಡೆಯಿಂದ ತೀರ್ಥಹಳ್ಳಿ ರಸ್ತೆ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ಆಲ್ಕೊಳ ಸರ್ಕಲ್-ಗೋಪಾಳ ಸರ್ಕಲ್ -ನ್ಯೂಮಂಡ್ಲಿ ಸರ್ಕಲ್ ಮಾರ್ಗವಾಗಿ ತೀರ್ಥಹಳ್ಳಿ ರಸ್ತೆಗೆ ಸೇರುವುದು.
    ಫೆ. ೨೭ರಂದು ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳ ಮಾರ್ಗ :
    ಕಾರ್ಯಕ್ರಮಕ್ಕೆ ಆಗಮಿಸುವ ವಿವಿಐಪಿ ಪಾಸ್ ಹೊಂದಿರುವಂತಹ ಗಣ್ಯರು ಶಿವಮೊಗ್ಗ ನಗರದಿಂದ ಬೈಪಾಸ್-ಊರಗಡೂರು ಸರ್ಕಲ್ -ಸೂಳೆಬೈಲು-ಮತ್ತೂರು ರಸ್ತೆ ಎಡಭಾಗಕ್ಕೆ ತಿರುವು ಪಡೆದುಕೊಂಡು-ಮಂಡೇನಕೊಪ್ಪ ಮುಖಾಂತರ ಸೋಗಾನೆ ವಿಮಾನ ನಿಲ್ದಾಣಕ್ಕೆ ತಲುಪುವುದು.
    ತೀರ್ಥಹಳ್ಳಿ ಕೊಪ್ಪ, ಶೃಂಗೇರಿ, ಎನ್.ಆರ್ ಪುರ ಭಾಗದಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ತೀರ್ಥಹಳ್ಳಿ ರಸ್ತೆ-ಮುಡುಬ ಬಲಕ್ಕೆ ತಿರುಗಿ ಶಂಕರಪುರ-ಉಂಬ್ಳೆಬೈಲು ಮುಖಾಂತರ ಲಕ್ಕಿನಕೊಪ್ಪ ಸರ್ಕಲ್‌ಗೆ ಬಂದು ಸೇರುವುದು. ನಂತರ ಲಕ್ಕಿನಕೊಪ್ಪ ಮತ್ತು ಸೋಗಾನೆ ಏರ್ ಪೋರ್ಟ್ ನಡುವಿನ ಗುರುತಿಸಿದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು.
    ಸಾಗರ, ಶಿಕಾರಿಪುರ, ಸೊರಬ,ಹೊಸನಗರ ದಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ಶಿವಮೊಗ್ಗ ನಗರದಿಂದ ಅಶೋಕ ಸರ್ಕಲ್-ಬಿ.ಹೆಚ್ ರಸ್ತೆ-ಎ.ಎ ಸರ್ಕಲ್-ಶಂಕರ ಮಠ ಸರ್ಕಲ್-ಹೊಳೆಹೊನ್ನೂರು ಸರ್ಕಲ್-ಎಂ.ಆರ್.ಎಸ್ ಸರ್ಕಲ್ ಗೆ ಬಂದು ಬಲಕ್ಕೆ ತಿರುಗಿ ಸಂತೇಕಡೂರು ಸೋಗಾನ ಏರ್ ಪೋರ್ಟ್ ನಡುವೆ ಗುರುತಿಸಿದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು.
    ಶಿಕಾರಿಪುರ, ಹೊನ್ನಾಳಿ,ದಾವಣಗೆರೆ ಕಡೆಯಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ಎಂ.ಆರ್.ಎಸ್. ಸರ್ಕಲ್ ಗೆ ಬಂದು ಬಲಕ್ಕೆ ತಿರುಗಿ ಸಂತೇಕಡೂರು ಸೋಗಾನೆ ಏರ್ ಪೋರ್ಟ್ ನಡುವೆ ಗುರುತಿಸಿದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು.
    ಶಿವಮೊಗ್ಗ ನಗರದಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ಎಂ.ಆರ್.ಎಸ್ ಸರ್ಕಲ್‌ಗೆ ಬಂದು ಬಲಕ್ಕೆ ತಿರುಗಿ ಸಂತೇಕಡೂರು ಸೋಗಾನೆ ಏರ್ ಪೋರ್ಟ್ ನಡುವೆ ಗುರುತಿಸಿದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು.
    ತರಿಕೆರೆ, ಭದ್ರಾವತಿ, ಕಡೂರು, ಚಿಕ್ಕಮಗಳೂರು, ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ಭದ್ರಾವತಿ ನಗರದ ಕೃಷ್ಣಪ್ಪ ಸರ್ಕಲ್ ನಿಂದ ಎಡಕ್ಕೆ ತಿರುಗಿ-ಹಿರಿಯೂರು ಸರ್ಕಲ್-ತಾರೀಕಟ್ಟೆ ಸರ್ಕಲ್, ಹೆಚ್.ಕೆ ಜಂಕ್ಷನ್-ಲಕ್ಕಿನಕೊಪ್ಪ ಸರ್ಕಲ್‌ಗೆ ಬಂದು ಸೇರುವುದು. ನಂತರ ಲಕ್ಕಿನಕೊಪ್ಪ ಮತ್ತು ಸೋಗಾನೆ ಏರ್ ಪೋರ್ಟ್ ನಡುವಿನ ಗುರುತಿಸಿದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು.
    ಶೂನ್ಯ ಸಂಚಾರ ಮತ್ತು ಪರ್ಯಾಯ ಮಾರ್ಗಗಳಿಗೆ ತಾತ್ಕಾಲಿಕ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಸಾರ್ವಜನಿಕರು ಸಹಕರಿಸಲು ಕೋರಿದೆ.

ಪ್ರಧಾನಿ ಮೋದಿ ಗಮನ ಸೆಳೆಯಲು ಗುತ್ತಿಗೆ ಕಾರ್ಮಿಕರಿಂದ ಪಾದಯಾತ್ರೆ

ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು ಫೆ.೨೭ರಂದು ಪ್ರಧಾನಿ ಮೋದಿಯವರ ಗಮನ ಸೆಳೆಯಲು ಕುಟುಂಬ ಸಮೇತ ಪಾದಯಾತ್ರೆ ನಡೆಸಲು ಸಿದ್ದತೆ ಕೈಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಕಾರ್ಖಾನೆ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
    ಭದ್ರಾವತಿ, ಫೆ. ೨೬: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು ಫೆ.೨೭ರಂದು ಪ್ರಧಾನಿ ಮೋದಿಯವರ ಗಮನ ಸೆಳೆಯಲು ಕುಟುಂಬ ಸಮೇತ ಪಾದಯಾತ್ರೆ ನಡೆಸಲು ಸಿದ್ದತೆ ಕೈಗೊಂಡಿದ್ದಾರೆ.
    ಬೆಳಿಗ್ಗೆ ೬.೩೦ಕ್ಕೆ ಕಾರ್ಖಾನೆ ಮುಂಭಾಗದಿಂದ ಪಾದಯಾತ್ರೆ ಆರಂಭಿಸುತ್ತಿದ್ದು, ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ವಿವಿಧ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
    ಈಗಾಗಲೇ ಫೆ.೨೪ರಂದು ಕರೆ ನೀಡಲಾಗಿದ್ದ ಭದ್ರಾವತಿ ಬಂದ್ ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ಪಾದಯಾತ್ರೆ ಸಹ ಯಶಸ್ವಿಯಾಗುವ ಹುಮ್ಮಸ್ಸು ಗುತ್ತಿಗೆ ಕಾರ್ಮಿಕರು ಹೊಂದಿದ್ದಾರೆ.
    ಈ ಹಿಂದೆ ಗುತ್ತಿಗೆ ಕಾರ್ಮಿಕರು ಖುದ್ದಾಗಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನಲೆಯಲ್ಲಿ ಬೈಕ್ ರ‍್ಯಾಲಿ ಬದಲಿಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ. ಗುತ್ತಿಗೆ ಕಾರ್ಮಿಕರು ಪಾದಯಾತ್ರೆ ನಡೆಸಲು ನಿರ್ಧಸಿರುವುದರಿಂದ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಸುಮಾರು ೨೫ ಸಾವಿರ ಮಂದಿ

೧೮೦ಕ್ಕೂ ಹೆಚ್ಚು ಬಸ್ಸು, ೩೦೦೦ಕ್ಕೂ ಹೆಚ್ಚು ಬೈಕ್ : ಜಿ. ಧರ್ಮಪ್ರಸಾದ್

ಜಿ. ಧರ್ಮಪ್ರಸಾದ್ 
    ಭದ್ರಾವತಿ, ಫೆ. ೨೬ : ನಗರದಲ್ಲಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಕಳೆದ ಸುಮಾರು ೪೦ ದಿನಗಳಿಂದ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ. ಈ ನಡುವೆ ಫೆ. ೨೭ರಂದು ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಲಿರುವ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುಮಾರು ೨೫ ಸಾವಿರ ಮಂದಿ ತೆರಳಲಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ತಿಳಿಸಿದ್ದಾರೆ.
    ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿ, ಸುಮಾರು ೧೮೦ಕ್ಕೂ ಹೆಚ್ಚು ಬಸ್ಸು, ಸುಮಾರು ೩೦೦೦ಕ್ಕೂ ಹೆಚ್ಚು ಬೈಕ್ ಹಾಗು ಉಳಿದಂತೆ ಮ್ಯಾಕ್ಸಿಕ್ಯಾಬ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಪಕ್ಷದ ಜಿಲ್ಲಾ ಮುಖಂಡರ ಮಾರ್ಗದರ್ಶನದಲ್ಲಿ ಆಯಾ ಬೂತ್‌ಗಳ ಅಧ್ಯಕ್ಷರು, ಪದಾಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ.
    ಆಯಾ ಭಾಗದ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಶ್ರಮವಹಿಸುವ ಮೂಲಕ ಯಶಸ್ವಿಗೆ ಸಹಕರಿಸಬೇಕು. ಬೆಳಿಗ್ಗೆ ೭ ಗಂಟೆಗೆ ಜನರನ್ನು ಕರೆದೊಯ್ಯುವ ಮೂಲಕ ೮.೩೦ರೊಳಗಾಗಿ ವಿಮಾನ ನಿಲ್ದಾಣ ತಲುಪುವಂತೆ ಕೋರಲಾಗಿದೆ ಎಂದರು.  

೫ ದಶಕಗಳ ಹಿಂದೆಯೇ ಸಣ್ಣ ಮಾದರಿ ವಿಮಾನಗಳ ಹಾರಾಟ

ಭದ್ರಾವತಿಯಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ೭೦ರ ದಶಕದಲ್ಲಿ ಸಣ್ಣ ಮಾದರಿಯ ವಿಮಾನಗಳು ಬಂದಿಳಿಯಲು ನಿರ್ಮಿಸಲಾಗಿದ್ದ ಮಣ್ಣಿನ ರನ್‌ವೇ ಕುರುಹು ಇಂದಿಗೂ ಕಂಡು ಬರುತ್ತಿದೆ.
    ಭದ್ರಾವತಿ, ಫೆ. ೨೬: ಇದೀಗ ಜಿಲ್ಲೆಯಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣಗೊಂಡಿದೆ. ಇಲ್ಲಿನ ಜನರು ಕಳೆದ ೧ ವಾರದಿಂದ ವಿಮಾನಗಳ ಹಾರಾಟ ಕಂಡು ಸಂಭ್ರಮಿಸುತ್ತಿದ್ದಾರೆ. ನೂತನ ವಿಮಾನ ನಿಲ್ದಾಣಕ್ಕೆ ಇದುವರೆಗೂ ೨ ವಿಮಾನಗಳು ಬಂದಿಳಿದಿವೆ. ಆದರೆ ೫ ದಶಕ ಹಿಂದೆಯೇ ಇಲ್ಲಿ ವಿಮಾನಗಳ ಹಾರಾಟ ಕಂಡು ಬರುತ್ತಿದ್ದವು. ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ಸಣ್ಣ ಮಾದರಿ ವಿಮಾನಗಳು ಬಂದಿಳಿಯಲು ಸುಮಾರು ೧ ಕಿ.ಮೀ ಉದ್ದದ ರನ್‌ವೇ ಬೊಮ್ಮನಕಟ್ಟೆ-ಹೊಸನಂಜಾಪುರ ಮಾರ್ಗದಲ್ಲಿ ನಿರ್ಮಿಸಲಾಗಿತ್ತು. 
    ಹಳ್ಳದಿಂದ ಕೂಡಿದ್ದ ಜಾಗವನ್ನು ಅಂದಿನ ಕಾಲದಲ್ಲಿಯೇ ಕೋಟ್ಯಾಂತರ ವೆಚ್ಚದಲ್ಲಿ ಸಮತಟ್ಟು ಮಾಡಿ ಮಣ್ಣಿನ ಗಟ್ಟಿಮುಟ್ಟಾದ ರನ್‌ವೇ ನಿರ್ಮಿಸಲಾಗಿತ್ತು. ೧೯೭೦ರ ಅವಧಿಯಲ್ಲಿ ಕಾರ್ಖಾನೆ ಕೈಗೊಂಡಿದ್ದ ಹಲವು ಯೋಜನೆಗಳಲ್ಲಿ ಇದು ಸಹ ಒಂದಾಗಿತ್ತು.
    ಇದನ್ನು ಏರ್‌ಪೋರ್ಟ್ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿತ್ತು. ದೇಶ ವಿದೇಶಗಳಿಂದ ಕಾರ್ಖಾನೆಗೆ ಇಂಜಿನಿಯರ್‌ಗಳು, ಅಧಿಕಾರಿಗಳು ಬಂದು ಹೋಗುತ್ತಿದ್ದರು. ಅಂದು ವಿಮಾನಗಳ ಹಾರಾಟ ಕಂಡಿರುವ ಬಹಳಷ್ಟು ನಿವೃತ್ತ ಕಾರ್ಮಿಕರು ಇಂದಿಗೂ ಹಳೇಯ ದಿನಗಳನ್ನು ನೆನಪಿಸಿಕೊಂಡು ಸಂಭ್ರಮಿಸುತ್ತಾರೆ.      ಈ ಹಿಂದೆ ಕೇಂದ್ರ ಸರ್ಕಾರದಲ್ಲಿ ಕೇಂದ್ರ ವಿಮಾನ ಖಾತೆ ಸಚಿವರಾಗಿದ್ದ ದಿವಂಗತ ಅನಂತಕುಮಾರ್‌ರವರು ಇದೆ ರನ್‌ವೇ ಬಳಸಿಕೊಂಡು ನೂತನ ವಿಮಾನ ನಿಲ್ದಾಣ ನಿರ್ಮಿಸಲು ಮುಂದಾಗಿದ್ದರು. ಆದರೆ ಹಲವಾರು ಕಾರಣಗಳಿಂದ ಇದು ಸಾಧ್ಯವಾಗಲಿಲ್ಲ. ಈ ರನ್‌ವೇ ಕುರುಹುಗಳು ಇಂದಿಗೂ ಉಳಿದುಕೊಂಡಿದ್ದು, ಈ ನಡುವೆ ಈ ಜಾಗದ ಸ್ವಲ್ಪ ಭಾಗ ನಿವೇಶನಗಳಾಗಿ ಬದಲಾಗಿದೆ. ಕೆಲವು ವಸತಿಗಳು ನಿರ್ಮಾಣಗೊಂಡಿದ್ದು, ಇನ್ನೂ ಸ್ವಲ್ಪ ಭಾಗ ಅರಣ್ಯ ಇಲಾಖೆಗೆ ಬಿಟ್ಟು ಕೊಡಲಾಗಿದೆ. ಈ ಭಾಗದಲ್ಲಿ ಟೀ ಪಾರ್ಕ್ ನಿರ್ಮಾಣಗೊಂಡಿದೆ. ಮತ್ತೊಂದೆಡೆ ಸರ್.ಎಂ ವಿಶೇಶ್ವರಾಯ ವಿಜ್ಞಾನ ಕಾಲೇಜು ವಿಸ್ತರಿಸಿಕೊಂಡಿದೆ

Saturday, February 25, 2023

ಫೆ.೨೬ರಂದು ಶೃಂಗೇರಿ ಶಂಕರ ಮಠದಲ್ಲಿ ಶ್ರೀ ಸರಸ್ವತಿ ಪೂಜಾ

    ಭದ್ರಾವತಿ, ಫೆ. ೨೫ : ಸಿದ್ದಾರೂಢನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಫೆ.೨೬ರಂದು ಬೆಳಿಗ್ಗೆ ೧೦ ಗಂಟೆಗೆ ಶ್ರೀ ಸರಸ್ವತಿ ಪೂಜಾ ಮತ್ತು ಹೋಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಪ್ರತಿ ವರ್ಷದಂತೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳಿಂದ ಸಹಸ್ರನಾಮ ಅರ್ಚನೆ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳು ಸೇರಿದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಧರ್ಮಾಧಿಕಾರಿ ಕೆ.ಆರ್ ಸುಬ್ಬರಾವ್ ಮೊ: ೯೯೪೫೮೪೬೯೦೫ ಅಥವಾ ೯೯೦೦೨೪೯೩೦೨ ಸಂಖ್ಯೆಗೆ ಕರೆ ಮಾಡಬಹುದಾಗಿದೆ. 
--

ಫೆ.೨೭ರಂದು ಗುತ್ತಿಗೆ ಕಾರ್ಮಿಕರ ಸಂಘದಿಂದ ಬೈಕ್ ರ್‍ಯಾಲಿ : ಪ್ರಧಾನಿಗೆ ಮನವಿ


ಭದ್ರಾವತಿ  ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಫೆ.೨೭ರಂದು ಮನವಿ ಸಲ್ಲಿಸುವುದಾಗಿ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್.ಜಿ ಸುರೇಶ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 
ಭದ್ರಾವತಿ, ಫೆ. ೨೫ : ನಗರದ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಫೆ.೨೭ರಂದು ಮನವಿ ಸಲ್ಲಿಸುವುದಾಗಿ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್.ಜಿ ಸುರೇಶ್ ಹೇಳಿದರು.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೋಗಾನೆಯಲ್ಲಿ ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯುವುದು, ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಈಗಾಗಲೇ ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಮೋದಿಯವರಿಗೆ ಖುದ್ದಾಗಿ ಮನವಿ ಸಲ್ಲಿಸಲು ಅವಕಾಶ ನೀಡುವಂತೆ ಕೋರಲಾಗಿದೆ. ಆದರೆ ಜಿಲ್ಲಾಧಿಕಾರಿಗಳು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದು, ಅಲ್ಲಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು. 
ಫೆ.೨೭ರಂದು ಬೆಳಿಗ್ಗೆ ೭ ಗಂಟೆಗೆ ಕಾರ್ಖಾನೆ ಮುಂಭಾಗದಿಂದ ಬೈಕ್ ರ್‍ಯಾಲಿ ನಡೆಸಲಿದ್ದು, ನಂತರ ವಿಮಾನ ನಿಲ್ದಾಣ ತಲುಪಿ ಮನವಿ ಸಲ್ಲಿಸಲಾಗುವುದು. ಈ ಹಿನ್ನಲೆಯಲ್ಲಿ ಕ್ಷೇತ್ರದ ವಿವಿಧ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು ಸೇರಿದಂತೆ ಸಮಸ್ತ ನಾಗರೀಕರು ಪಕ್ಷಾತೀತವಾಗಿ ಬೆಂಬಲಿಸಿ ಪಾಲ್ಗೊಳ್ಳುವಂತೆ ಕೋರಿದರು.
ಫೆ.೨೪ರಂದು ಕರೆ ನೀಡಲಾಗಿದ್ದ ಭದ್ರಾವತಿ ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು, ಈ ಹಿನ್ನಲೆಯಲ್ಲಿ ಗುತ್ತಿಗೆ ಕಾರ್ಮಿಕರ ಸಂಘಟನೆಗಳು ಕೃತಜ್ಞತೆ ಸಲ್ಲಿಸಲಿವೆ ಎಂದರು.  
ಉಪಾಧ್ಯಕ್ಷ ಎಸ್. ವಿನೋದ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಪಿ. ರಾಕೇಶ್, ಕಾರ್ಯದರ್ಶಿ ಅಂತೋಣಿದಾಸ್, ಖಜಾಂಚಿ ಜಿ. ಆನಂದ್, ಆರ್. ಅರುಣ್‌ಕುಮಾರ್, ಜೆ. ಕಿರಣ್, ಎಐಟಿಯುಸಿ ಅಧ್ಯಕ್ಷ ಕುಮಾರಸ್ವಾಮಿ, ಉಪಾಧ್ಯಕ್ಷ ಧನಂಜಯ, ಕಾರ್ಯದರ್ಶಿ ಐಸಾಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ವಿಐಎಸ್‌ಎಲ್ ಉಳಿಸಲು ಎಲ್ಲಾ ರಾಜಕೀಯ ಪಕ್ಷಗಳು ಇಚ್ಛಾಶಕ್ತಿ ಪ್ರದರ್ಶಿಸಲಿ : ಎಚ್. ವಿಶ್ವನಾಥ್

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಶನಿವಾರ ಬೆಂಬಲ ಸೂಚಿಸಿ ಮಾತನಾಡಿದರು.
       
    ಭದ್ರಾವತಿ, ಫೆ. ೨೫ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ಆಡಳಿತ ಮತ್ತು ವಿರೋಧ ಪಕ್ಷಗಳು ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದು ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.
    ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಅವರು ಶನಿವಾರ ಬೆಂಬಲ ಸೂಚಿಸಿ ಮಾತನಾಡಿದರು.
    ಮೈಸೂರು ಮಹಾರಾಜರು ದುಡಿಯುವ ಕೈಗಳಿಗೆ ಉದ್ಯೋಗ ನೀಡಿ ಲಕ್ಷಾಂತರ ಜನರ ಬದುಕಿಗೆ ಆಧಾರವಾಗುವಂತೆ ಆ ಮೂಲಕ ನಾಡಿನ, ದೇಶದ ಅಭಿವೃದ್ಧಿಗಾಗಿ ನಿರ್ಮಿಸಿರುವ ಕೈಗಾರಿಕೆ ಇದಾಗಿದೆ. ಈ ಕೈಗಾರಿಕೆ ಉಳಿಯಬೇಕಾಗಿದ್ದು, ಇದು ನಾಡಿನ ಆಸ್ತಿ, ನಮ್ಮೆಲ್ಲರ ಅಸ್ಮಿತೆಯ ಸಂಕೇತವಾಗಿದೆ. ಪ್ರಸ್ತುತ ಈ ಕಾರ್ಖಾನೆಯ ಶತಮಾನೋತ್ಸವ ಸಂಭ್ರಮದಲ್ಲಿ ಶೋಕೋತ್ಸವ ಮಾಡುವಂತಾಗಿರುವುದು ವಿಷಾದನೀಯ ಬೆಳವಣಿಗೆಯಾಗಿದೆ ಎಂದರು.
    ಜನರ ಬದುಕು ಬೇರೆ, ರಾಜಕಾರಣ ಬೇರೆಯಾಗಿದೆ. ರಾಜಕಾರಣಿಗಳು ಮೊದಲು ಜನರಿಗೆ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ. ಈ ಕಾರ್ಖಾನೆ ವಿಚಾರ ನಮಗೆ ಸಂಬಂಧಿಸಿದ್ದಲ್ಲ ಎಂಬ ಧೋರಣೆ ಸರಿಯಲ್ಲ. ವಿರೋಧ ಪಕ್ಷದವರು ನಮಗೆ ಅಧಿಕಾರ ನೀಡಿ ಎನ್ನುವ ಬದಲು ನೀಡಿರುವ ಅಧಿಕಾರದ ಮಹತ್ವ ಅರಿತುಕೊಂಡು ಆಡಳಿತ ಪಕ್ಷದೊಂದಿಗೆ ಈ ಕಾರ್ಖಾನೆ ಉಳಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
    ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ ಕುಮಾರಸ್ವಾಮಿ ಅವರಿಗೂ ಅಧಿಕಾರವಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೂ ಅಧಿಕಾರವಿದೆ. ಎಲ್ಲರೂ ಸೇರಿ ಈ ಕಾರ್ಖಾನೆ ಉಳಿವಿಗೆ ಪ್ರಯತ್ನಿಸಬೇಕು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರರವರು ಹೆಚ್ಚಿನ ವಿಶೇಷ ಕಾಳಜಿವಹಿಸಿ ಕಾರ್ಖಾನೆ ಇಂದಿನ ಪರಿಸ್ಥಿತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಗಮನಕ್ಕೆ ತರಬೇಕೆಂದು ಮನವಿ ಮಾಡಿದರು.
    ರಾಜ್ಯದಲ್ಲಿರುವ ಬಿಜೆಪಿ ಡಬ್ಬಲ್ ಇಂಜಿನ್ ಸರ್ಕಾರ ಬಜೆಟ್‌ನಲ್ಲಿ ಅನ್ಯಗತ್ಯವಾಗಿ ಸಾವಿರಾರು ಕೋಟಿ ಬಂಡವಾಳ ವ್ಯಯಮಾಡಲು ಮುಂದಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಕಾರ್ಮಿಕರ ಬದುಕಿಗಾಗಿ, ನಾಡಿನ ಅಭಿವೃದ್ಧಿಗಾಗಿ ಕನಿಷ್ಠ ೫೦೦ ಕೋ. ರು ಬಂಡವಾಳ ಹೂಡಲು ಮುಂದೆ ಬರುತ್ತಿಲ್ಲ. ಖಾಸಗಿ ಕಂಪನಿಗಳು, ಬಂಡವಾಳ ಶಾಹಿಗಳ ಮೇಲೆ ತೋರಿಸುತ್ತಿರುವ ಕಾಳಜಿ ಈ ಕಾರ್ಖಾನೆ ಮೇಲೆ ಏಕೆ ತೋರಿಸುತ್ತಿಲ್ಲ ಎಂದು ಪ್ರಶ್ನಿಸಿದರು.
    ಫೆ.೨೭ರಂದು ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಮಿಕರ ಬವಣೆ ಕೇಳಬೇಕು. ಈ ನಿಟ್ಟಿನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಒಗ್ಗಟ್ಟಾಗಿ ಗಮನ ಸೆಳೆಯುವಂತಾಗಬೇಕು. ನಾನು ಸಹ ಈ ಕಾರ್ಖಾನೆ ಉಳಿವಿಗಾಗಿ ಪ್ರಧಾನಿ ಮೋದಿಯವರಿಗೆ ಮನವಿ ಮಾಡುತ್ತೇನೆ ಎಂದರು.
    ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾಯಂ ಹಾಗು ನಿವೃತ್ತ ಕಾರ್ಮಿಕ ಮುಖಂಡರು, ಗುತ್ತಿಗೆ ಕಾರ್ಮಿಕರು ಉಪಸ್ಥಿತರಿದ್ದರು. ಎಚ್. ವಿಶ್ವನಾಥ್ ಅವರಿಗೆ ಕಾರ್ಮಿಕ ಸಂಘಟನೆಗಳಿಂದ ಮನವಿ ಸಲ್ಲಿಸಲಾಯಿತು.

Friday, February 24, 2023

ಭದ್ರಾವತಿ ಬಂದ್ ಬೆಂಬಲಿಸಿ ಹೋರಾಟದಲ್ಲಿ ಪಾಲ್ಗೊಂಡ ಶಾರದ ಅಪ್ಪಾಜಿ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಗುತ್ತಿಗೆ ಕಾರ್ಮಿಕರು ಶುಕ್ರವಾರ ಹಮ್ಮಿಕೊಂಡಿದ್ದ ಭದ್ರಾವತಿ ಬಂದ್ ಹೋರಾಟಕ್ಕೆ ಜೆಡಿಎಸ್ ಪಕ್ಷ ಸಂಪೂರ್ಣ ಬೆಂಬಲ ಸೂಚಿಸುವ ಜೊತೆಗೆ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಪುನಶ್ಚೇತನಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
    ಭದ್ರಾವತಿ, ಫೆ. ೨೪: ವಿಐಎಸ್‌ಎಲ್ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಗುತ್ತಿಗೆ ಕಾರ್ಮಿಕರು ಶುಕ್ರವಾರ ಹಮ್ಮಿಕೊಂಡಿದ್ದ ಭದ್ರಾವತಿ ಬಂದ್ ಹೋರಾಟಕ್ಕೆ ಜೆಡಿಎಸ್ ಪಕ್ಷ ಸಂಪೂರ್ಣ ಬೆಂಬಲ ಸೂಚಿಸುವ ಜೊತೆಗೆ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಪುನಶ್ಚೇತನಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
    ಕಾರ್ಖಾನೆ ಮುಂಭಾಗದಿಂದ ತಾಲೂಕು ಕಛೇರಿವರೆಗೂ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಶಾರದ ಅಪ್ಪಾಜಿ ಸಾಗುವ ಮೂಲಕ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಿದರು.
ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಮೂರ್ತಿ, ತಾಲೂಕು ಯುವ ಘಟಕದ ಅಧ್ಯಕ್ಷ ಎಂ.ಜೆ ಅಜಿತ್, ನಗರಸಭೆ ಸದಸ್ಯರಾದ ಬಸವರಾಜ್ ಬಿ ಆನೆಕೊಪ್ಪ, ಕೋಟೇಶ್ವರರಾವ್, ಉದಯಕುಮಾರ್, ರೂಪಾವತಿ ಗುಣಿಶೇಖರ್, ನಾಗರತ್ನ ಅನಿಲ್ ಕುಮಾರ್, ಸವಿತಾ ಉಮೇಶ್, ಮಂಜುಳಮ್ಮ ಸುಬ್ಬಣ್ಣ, ಆರ್. ಮೋಹನ್ ಕುಮಾರ್, ಭಾಗ್ಯಮ್ಮ, ತಾಲೂಕು ಕಾರ್ಯಾಧ್ಯಕ್ಷ ಡಿ.ಟಿ ಶ್ರೀಧರ್, ಪರಿಶಿಷ್ಟ ಜಾತಿ ವಿಭಾಗದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಉಜ್ಜನಿಪುರ ಮತ್ತು ವಿವೇಕ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.  

ಭದ್ರಾವತಿ ಬಂದ್ ಬೆಂಬಲಿಸಿ ನಗರಸಭೆ ಉಪಾಧ್ಯಕ್ಷರ ಚುನಾವಣೆ ಬಹಿಷ್ಕಾರ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭದ್ರಾವತಿ ಬಂದ್ ಹಿನ್ನಲೆಯಲ್ಲಿ ನಗರಸಭೆ ಸದಸ್ಯರು ಉಪಾಧ್ಯಕ್ಷರ ಚುನಾವಣೆಯನ್ನು ಬಹಿಷ್ಕರಿಸಿ ಹೋರಾಟ ಬೆಂಬಲಿಸಿದರು. 
    ಭದ್ರಾವತಿ, ಫೆ. ೨೪ : ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭದ್ರಾವತಿ ಬಂದ್ ಹಿನ್ನಲೆಯಲ್ಲಿ ನಗರಸಭೆ ಸದಸ್ಯರು ಉಪಾಧ್ಯಕ್ಷರ ಚುನಾವಣೆಯನ್ನು ಬಹಿಷ್ಕರಿಸಿರುವ ಘಟನೆ ನಡೆದಿದೆ.
    ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಅಧಿಕಾರವನ್ನು ಆಂತರಿಕವಾಗಿ ಹಂಚಿಕೆ ಮಾಡಿಕೊಂಡಿದ್ದು, ಒಪ್ಪಂದದ ಪ್ರಕಾರ ಉಪಾಧ್ಯಕ್ಷ ಸ್ಥಾನವನ್ನು ವಾರ್ಡ್ ನಂ.೨೬ರ ಸದಸ್ಯೆ ಸರ್ವಮಂಗಳ ಭೈರಪ್ಪರಿಗೆ ಬಿಟ್ಟುಕೊಡಬೇಕಾಗಿತ್ತು. ಈ ಹಿನ್ನಲೆಯಲ್ಲಿ ಹಾಲಿ ಉಪಾಧ್ಯಕ್ಷ ಚನ್ನಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದರಂತೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು.
    ಚುನಾವಣಾಧಿಕಾರಿಯಾಗಿರುವ ಶಿವಮೊಗ್ಗ ಉಪವಿಭಾಗಾಧಿಕಾರಿಗಳು ಬೆಳಿಗ್ಗೆ ಚುನಾವಣೆ ಪ್ರಕ್ರಿಯೆ ಆರಂಭಿಸಿದ್ದರು. ಸರ್ವಮಂಗಳ ಭೈರಪ್ಪರವರು ನಾಮಪತ್ರ ಸಲ್ಲಿಸಿದ್ದರು. ಆದರೆ ಗುತ್ತಿಗೆ ಕಾರ್ಮಿಕರ ಹೋರಾಟದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಮುಖಂಡರು ಚುನಾವಣೆ ಬಹಿಷ್ಕರಿಸುವುದಾಗಿ ಭರವಸೆ ನೀಡಿದ್ದರು. ಇದಕ್ಕೆ ಜೆಡಿಎಸ್ ಪಕ್ಷ ಸಹ ಬೆಂಬಲ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಸದಸ್ಯರೆಲ್ಲರೂ ಚುನಾವಣೆ ಬಹಿಷ್ಕರಿಸಿ ಹೊರಬಂದು ಹೋರಾಟವನ್ನು ಬೆಂಬಲಿಸಿದರು. ಕೊನೆಗೆ ಚುನಾವಣಾಧಿಕಾರಿಗಳು ಚುನಾವಣೆ ಮುಂದೂಡುವುದಾಗಿ ಘೋಷಿಸಿದರು.

ಯುವ ಕಾಂಗ್ರೆಸ್ ರಾಜ್ಯ ವಕ್ತಾರ ವರುಣ್‌ಗೌಡರಿಗೆ ಜೀವಬೆದರಿಕೆ ; ದೂರು ದಾಖಲು

ವರುಣ್‌ಗೌಡ
    ಭದ್ರಾವತಿ, ಫೆ. ೨೪ : ಯುವ ಕಾಂಗ್ರೆಸ್ ರಾಜ್ಯ ವಕ್ತಾರ, ಕಾಗದನಗರ ನಿವಾಸಿ ವರುಣ್‌ಗೌಡರಿಗೆ ವ್ಯಕ್ತಿಯೋರ್ವ ಮೊಬೈಲ್‌ಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
    ಈ ಸಂಬಂಧ ವರುಣ್‌ಗೌಡ ಪೇಪರ್‌ಟೌನ್ ಪೊಲೀಸ್ ಠಾಣೆಗೆ ಶುಕ್ರವಾರ ಸಂಜೆ ದೂರು ನೀಡಿದ್ದಾರೆ. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಬಿ.ವಿ ಶ್ರೀನಿವಾಸ್ ಹಾಗು ಶಾಸಕ ಬಿ.ಕೆ ಸಂಗಮೇಶ್ವರ್‌ರವರು ನನ್ನನ್ನು ರಾಜ್ಯ ವಕ್ತಾರಾಗಿ ನನ್ನನ್ನು ಆಯ್ಕೆ ಮಾಡಿರುತ್ತಾರೆ. ಕಳೆದ ಸುಮಾರು ಒಂದು ತಿಂಗಳಿನಿಂದ ಅಧಿಕಾರ ಪಡೆದು ಪಕ್ಷ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಫೆ.೨೩ರ ಗುರುವಾರ ರಾತ್ರಿ ಸುಮಾರು ೧೦.೩೦ರ ಸಮಯದಲ್ಲಿ ಗಗನ್ ಎಂಬ ವ್ಯಕ್ತಿ ಜೆಡಿಎಸ್ ಪಕ್ಷ ಎಂದು ಹೇಳಿಕೊಂಡು ಕರೆ ಮಾಡಿದ್ದು, ಜೀವ ಬೆದರಿಕೆ ಹಾಕಿರುತ್ತಾರೆಂದು ದೂರಿದ್ದಾರೆ.
    ಈ ಹಿನ್ನಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ನಾನು ಹೊರಗಡೆ ತಿರುಗಾಡುವಾಗ ದ್ವಿಚಕ್ರ ವಾಹನದಲ್ಲಿ ಅಡ್ಡಗಟ್ಟಿ ಹಿಂಬಾಲಿಸಿ ನಿಂದಿಸುತ್ತಾರೆ. ನನಗೆ ರಕ್ಷಣೆ ಅವಶ್ಯಕತೆ ಇದ್ದು, ಈ ಹಿನ್ನಲೆಯಲ್ಲಿ ರಕ್ಷಣೆ ನೀಡುವಂತೆ ಕೋರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕೈಗೊಂಡಿದ್ದಾರೆ.

ಓ.ಸಿ-ಮಟ್ಕಾ ಜೂಜಾಟ ಅಡ್ಡೆ ಮೇಲೆ ದಾಳಿ : ಓರ್ವನ ವಿರುದ್ಧ ಪ್ರಕರಣ ದಾಖಲು



    ಭದ್ರಾವತಿ, ಫೆ. ೨೪ : ಓ.ಸಿ-ಮಟ್ಕಾ ಜೂಜಾಟ ಅಡ್ಡೆಯೊಂದರ ಮೇಲೆ ದಾಳಿ ನಡೆಸಿ ಓರ್ವನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.
    ಪೇಪರ್‌ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ೨ನೇ ಡಿವಿಜನ್ ಅಂಗನವಾಡಿ ಎದುರಿನ ರಸ್ತೆಯಲ್ಲಿ ಬೊಮ್ಮನಕಟ್ಟೆ ನಿವಾಸಿ ಸಾಧಿಕ್ ಎಂಬಾತ ಗುರುವಾರ ಸಂಜೆ ಜನರನ್ನು ಗುಂಪು ಸೇರಿಸಿಕೊಂಡು ಓ.ಸಿ-ಮಟ್ಕಾ ಜೂಜಾಟದಲ್ಲಿ ತೊಡಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  

ಭದ್ರಾವತಿ ಬಂದ್ ಸಂಪೂರ್ಣ ಯಶಸ್ವಿ : ಬೃಹತ್ ಪ್ರತಿಭಟನಾ ಮೆರವಣಿಗೆ

ಪ್ರಮುಖ ವೃತ್ತಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭದ್ರಾವತಿ ಬಂದ್ ಹಿನ್ನಲೆಯಲ್ಲಿ ಗುತ್ತಿಗೆ ಕಾರ್ಮಿಕರು ಅಂಡರ್‌ಬ್ರಿಡ್ಜ್ ಬಳಿ ಟೈರ್‌ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಹಾಗು ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
    ಭದ್ರಾವತಿ, ಫೆ.೨೪: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ  ಮುಚ್ಚುವ ಆದೇಶದ ವಿರುದ್ಧ ಶುಕ್ರವಾರ ಹಮ್ಮಿಕೊಂಡಿದ್ದ ಭದ್ರಾವತಿ ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು, ವಿವಿಧ ರಾಜಕೀಯ ಪಕ್ಷಗಳಿಂದ,  ಸಂಘ-ಸಂಸ್ಥೆಗಳಿಂದ, ನಾಗರೀಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು.
    ಸ್ವಯಂ ಪ್ರೇರಿತರಾಗಿ ಬೆಳಿಗ್ಗೆಯಿಂದಲೇ ಹೋಟೆಲ್‌ಗಳು, ಪೆಟ್ರೋಲ್ ಬಂಕ್‌ಗಳು, ಚಿತ್ರಮಂದಿರಗಳು ಸೇರಿದಂತೆ ಅಂಗಡಿ-ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಸರ್ಕಾರಿ ಹಾಗು ಖಾಸಗಿ ಬಸ್‌ಗಳು, ಆಟೋ ಸಂಚಾರ ಸ್ಥಗಿತಗೊಂಡಿತ್ತು. ಶಾಲಾ-ಕಾಲೇಜುಗಳು ರಜೆ ಘೋಷಿಸಿದ್ದವು.  ಉಳಿದಂತೆ ಕೆಲವು ಸರ್ಕಾರಿ ಕಛೇರಿಗಳು ಸಹ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ರಜೆ ಘೋಷಿಸಿದ್ದವು. ನಗರದ ವಕೀಲರು ಸಹ ನ್ಯಾಯಾಲಯಗಳಲ್ಲಿ ಕಲಾಪಗಳಿಂದ ದೂರ ಉಳಿದು ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಬೆಂಬಲ ವ್ಯಕ್ತಪಡಿಸಿದರು.


ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭದ್ರಾವತಿ ಬಂದ್ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಬಿಕೋ ಎನ್ನುತ್ತಿರುವುದು.
    ನಗರದ ಪ್ರಮುಖ ವೃತ್ತಗಳಲ್ಲಿ ಗುತ್ತಿಗೆ ಕಾರ್ಮಿಕರು ಟೈರ್‌ಗಳಿಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಕ್ಷೇತ್ರದಾದ್ಯಂತ ಬೈಕ್ ರ‍್ಯಾಲಿ ನಡೆಸಿ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು. ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾಯಂ ಹಾಗು ನಿವೃತ್ತ ಕಾರ್ಮಿಕ ಸಂಘಟನೆಗಳ ಪ್ರಮುಖರು, ತಾಲೂಕು ವರ್ತಕರ ಸಂಘ, ರೈತ ಸಂಘ, ಕನ್ನಡ ಸಾಹಿತ್ಯ ಪರಿಷತ್, ಕೇರಳ ಸಮಾಜ, ಕ್ರೈಸ್ತ ಸಮಾಜ, ಮಾಜಿ ಸೈನಿಕರ ಸಂಘ, ಮಾದಿಗ ಸಮಾಜ, ಜಯಕರ್ನಾಟಕ ಸಂಘಟನೆ, ಒಕ್ಕಲಿಗರ ಸಂಘ, ಭದ್ರಾವತಿ ಪ್ರಜಾ ವಿಮೋಚನೆ ಸಂಘ, ಮಾನವ ಹಕ್ಕುಗಳ ಹೋರಾಟ ಸಮಿತಿ, ಕರುನಾಡು ಪ್ರಜಾ ಸಂರಕ್ಷಣಾ ವೇದಿಕೆ, ಅಂಜುಮಾನ್ ಇಸ್ಲಾವುಲ್ ಮುಸ್ಲಿಮೀನ್, ಸರ್ಕಾರಿ ಪಡಿತರ ವಿತರಕರ ಸಂಘ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವಾಲ್ಮೀಕಿ ಸಮಾಜ, ಅಂಬೇಡ್ಕರ್ ಯುವ ಪಡೆ, ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಕಾಂಗ್ರೆಸ್, ಜೆಡಿಎಸ್, ಎಎಪಿ, ಕೆಆರ್‌ಎಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ಬೆಂಬಲ ಸೂಚಿಸಿದ್ದವು.


ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭದ್ರಾವತಿ ಬಂದ್ ಹಿನ್ನಲೆಯಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಪ್ರಮುಖರು ಮಾತನಾಡಿದರು.
    ಬಂದ್ ಹಿನ್ನಲೆಯಲ್ಲಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ವಾಣಿಜ್ಯ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಹಾಲು, ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ ಎಂದಿನಂತೆ ನಡೆಯಿತು.
    ವಿಐಎಸ್‌ಎಲ್ ಕಾರ್ಖಾನೆ ಮುಂಭಾಗದಿಂದ ತಾಲೂಕು ಕಛೇರಿವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ರೈತ ಮುಖಂಡ ಕೆ.ಟಿ ಗಂಗಾಧರ್ ಸೇರಿದಂತೆ ಸಂಘ-ಸಂಸ್ಥೆಗಳ ಪ್ರಮುಖರು ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮಧ್ಯಾಹ್ನ ವರ್ತಕರ ಸಂಘದ ವತಿಯಿಂದ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಲಾಯಿತು.  



ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭದ್ರಾವತಿ ಬಂದ್ ಹಿನ್ನಲೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಶಾಸಕ ಬಿ.ಕೆ ಸಂಗಮೇಶ್ವರ್, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Thursday, February 23, 2023

ಫೆ.೨೪ರ ಭದ್ರಾವತಿ ಬಂದ್ ಬೆಂಬಲಿಸಲು ಗುತ್ತಿಗೆ ಕಾರ್ಮಿಕರಿಂದ ಬೈಕ್ ರ‍್ಯಾಲಿ

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು ಶುಕ್ರವಾರ 'ಭದ್ರಾವತಿ ಬಂದ್' ಹೋರಾಟಕ್ಕೆ ಕರೆ ನೀಡಿದ್ದು, ಈ ಹಿನ್ನಲೆಯಲ್ಲಿ ಗುರುವಾರ ಕ್ಷೇತ್ರದಾದ್ಯಂತ ಬೈಕ್ ರ‍್ಯಾಲಿ ನಡೆಸಿ ಬಂದ್‌ಗೆ ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದರು. 
    ಭದ್ರಾವತಿ, ಫೆ. ೨೩: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು ಶುಕ್ರವಾರ 'ಭದ್ರಾವತಿ ಬಂದ್' ಹೋರಾಟಕ್ಕೆ ಕರೆ ನೀಡಿದ್ದು, ಈ ಹಿನ್ನಲೆಯಲ್ಲಿ ಗುರುವಾರ ಕ್ಷೇತ್ರದಾದ್ಯಂತ ಬೈಕ್ ರ‍್ಯಾಲಿ ನಡೆಸಿ ಬಂದ್‌ಗೆ ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದರು.
    ಗುತ್ತಿಗೆ ಕಾರ್ಮಿಕರ ಹೋರಾಟ ಗುರುವಾರ ೩೫ ದಿನಗಳನ್ನು ಪೂರೈಸಿದ್ದು, ಹೋರಾಟಕ್ಕೆ ವಿವಿಧ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು, ಮಠಾಧೀಶರು, ಗಣ್ಯರು ಬೆಂಬಲ ಸೂಚಿಸಿದ್ದಾರೆ. ಇದುವರೆಗೂ ಕೇಂದ್ರ ಸರ್ಕಾರ ಹೋರಾಟಕ್ಕೆ ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ. ಇದೀಗ ಹೋರಾಟ ಮತ್ತಷ್ಟು ತೀವ್ರಗೊಳಿಸುವ ಅನಿವಾರ್ಯತೆಯಿಂದ 'ಭದ್ರಾವತಿ ಬಂದ್'ಗೆ ಕರೆ ನೀಡಲಾಗಿದೆ.
    ಈ ನಡುವೆ ಫೆ.೨೭ರಂದು ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
    ಈ ಎರಡು ಹೋರಾಟಗಳಿಗೂ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು, ವಾಪಾರಸ್ಥರು ಸೇರಿದಂತೆ ನಾಗರೀಕರು ಸಂಪೂರ್ಣ ಸಹಕಾರ ನೀಡುವಂತೆ ಗುತ್ತಿಗೆ ಕಾರ್ಮಿಕರು ಕೋರಿದ್ದಾರೆ.

ಶ್ರೀ ಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ನೂತನ ವಿಗ್ರಹ, ಗೋಪುರ ಕಳಶ ಪ್ರತಿಷ್ಠಾಪನೆ

ಭದ್ರಾವತಿ ಬಿ.ಎಚ್ ರಸ್ತೆ ವಾರ್ಡ್ ನಂ.೩ರ ಚಾಮೇಗೌಡ ಏರಿಯಾದಲ್ಲಿರುವ ಶ್ರೀ ಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ನೂತನ ವಿಗ್ರಹ ಹಾಗು ಗೋಪುರ ಕಳಶ ಪ್ರತಿಷ್ಠಾಪನೆ ಅಂಗವಾಗಿ ಗುರುವಾರ ಶ್ರೀ ಮಾರಿಯಮ್ಮ ದೇವಿಯ ನೂತನ ವಿಗ್ರಹ ಮತ್ತು ಗೋಪುರ ಕಲಶ ಮೆರವಣಿಗೆ ನಡೆಯಿತು.
    ಭದ್ರಾವತಿ, ಫೆ. ೨೩: ನಗರದ ಬಿ.ಎಚ್ ರಸ್ತೆ ವಾರ್ಡ್ ನಂ.೩ರ ಚಾಮೇಗೌಡ ಏರಿಯಾದಲ್ಲಿರುವ ಶ್ರೀ ಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ನೂತನ ವಿಗ್ರಹ ಹಾಗು ಗೋಪುರ ಕಳಶ ಪ್ರತಿಷ್ಠಾಪನೆ ಶುಕ್ರವಾರ ನಡೆಯಲಿದೆ.
    ಪ್ರತಿಷ್ಠಾಪನೆ ಅಂಗವಾಗಿ ಗುರುವಾರ ಬೆಳಿಗ್ಗೆ ಪ್ರಾರ್ಥನೆ, ಗಣಪತಿ ಪೂಜೆ, ಮಧ್ಯಾಹ್ನ ಕಂಕಣ ಧಾರಣೆ, ಅಂಕುರಾರ್ಪಣೆ, ಧ್ವಜಸ್ಥಾಪನೆ, ನಂತರ ಮಹಾಮಂಗಳಾರತಿ, ಸಂಜೆ ಗಂಗೆಪೂಜೆ ವಿಗ್ರಹ ಮೆರವಣಿಗೆ ನಂತರ ದೇವಾಲಯ ಪ್ರವೇಶ, ಬಿಂಬಶುದ್ಧಿ, ಅಧಿವಾಸಂಗ, ಪೂಜಾ ಹೋಮ ಪ್ರಸಾದ ವಾಸ್ತು ಹೋಮ, ರಾಕ್ಷೋಜ್ಞ ಹೋಮ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಶುಕ್ರವಾರ ಬ್ರಾಹ್ಮೀ ಮುಹೂರ್ತದಲ್ಲಿ ವಿಗ್ರಹ ಪ್ರತಿಷ್ಠಾಪನೆ, ಕಲಾ ಪ್ರತಿಷ್ಠಾಪನೆ, ನೇತ್ರೋನ್ಮಿಲನ ಪ್ರತಿಷ್ಠಾಪನಾಂಗ ಹೋಮ, ಪೂರ್ಣಾಹುತಿ, ನವಕಲಾಶಾಭಿಷೇಕ, ಮಹಾ ಮಂಗಳಾರತಿಯೊಂದಿಗೆ ತೀರ್ಥಪ್ರಸಾದ ವಿನಿಯೋಗ ಹಾಗು ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿವೆ.


    ಶ್ರೀ ಮಾರಿಯಮ್ಮ ದೇವಿಯ ನೂತನ ವಿಗ್ರಹ ಮತ್ತು ಗೋಪುರ ಕಲಶ ಮೆರವಣಿಗೆಯಲ್ಲಿ ಡಾ. ರಾಜ್‌ಕುಮಾರ್, ಡಾ. ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘ ಮತ್ತು ನೃಪತುಂಗ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ದೇವಸ್ಥಾನ ಸಮಿತಿಯ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷರಾದ ಎಂ.ಪಿ ಉಮೇಶ್, ಬಿ.ಎಂ ಮಹಾದೇವಯ್ಯ, ಶ್ರೀನಿವಾಸ್ ನಾಯ್ಡ್, ಕಾರ್ಯದರ್ಶಿ ಗೋವಿಂದಪ್ಪ, ಖಜಾಂಚಿ ಮಾಣಿಕ್ಯಂ, ಸದಸ್ಯರಾದ ಜಾರ್ಜ್(ನಗರಸಭಾ ಸದಸ್ಯ), ದೇವು, ಬಿ.ಎನ್ ವಾಸು, ಎಂ. ಮಹಾದೇವ, ಗುರುಸ್ವಾಮಿ, ಎಂ.ಪಿ ಕೃಷ್ಣ, ತಿಮ್ಮಯ್ಯ, ಭೂಮಿನಾಥನ್, ಶರವಣ, ಮಂಜುನಾಥ್, ಎಸ್. ಕುಮಾರ ಮತ್ತು ಬಿ.ಎನ್ ರವಿ ಹಾಗು ವಾರ್ಡ್ ಹಿರಿಯ ಮುಖಂಡರು ಮತ್ತು ನಿವಾಸಿಗಳು ಪಾಲ್ಗೊಂಡಿದ್ದರು.
    ಮಂಗಳವಾದ್ಯ ಸೇರಿದಂತೆ ಕಲಾತಂಡಗಳು ಹಾಗು ಪೂರ್ಣಕುಂಭಗಳೊಂದಿಗೆ ನೂತನ ವಿಗ್ರಹ ಮತ್ತು ಗೋಪುರ ಕಲಶ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ಸಿಡಿಮದ್ದು ಪ್ರದರ್ಶನ ನಡೆಯಿತು. ಶಂಕರಮಠದ ಅರ್ಚಕ ಗಣೇಶ್ ಪ್ರಸಾದ್ ನೇತೃತ್ವದ ತಂಡದಿಂದ ಧಾರ್ಮಿಕ ಆಚರಣೆಗಳು ಜರುಗುತ್ತಿವೆ.  

ಫೆ.೨೪ರ ಭದ್ರಾವತಿ ಬಂದ್‌ಗೆ ಬೆಂಬಲಿಸಿ : ಶಾರದ ಅಪ್ಪಾಜಿ

ಭದ್ರಾವತಿಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಅಧ್ಯರ್ಥಿ ಶಾರದ ಅಪ್ಪಾಜಿ ಮಾತನಾಡಿದರು.
    ಭದ್ರಾವತಿ, ಫೆ. ೨೩ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟದಲ್ಲಿ ಪಕ್ಷ ರಾಜಕಾರಣ ಮಾಡುವುದಿಲ್ಲ. ಹೋರಾಟ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವ ಜೊತೆಗೆ ಕ್ಷೇತ್ರದ ಸಮಸ್ತ ನಾಗರೀಕರು ಸಹ ಫೆ.೨೪ರಂದು ಹಮ್ಮಿಕೊಳ್ಳಲಾಗಿರುವ ಭದ್ರಾವತಿ ಬಂದ್ ಹೋರಾಟ ಬೆಂಬಲಿಸುವಂತೆ ಮನವಿ ಮಾಡುವುದಾಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಹೇಳಿದರು.
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಶಾಸಕರಾದ ದಿವಂಗತ ಎಂ.ಜೆ ಅಪ್ಪಾಜಿಯವರು ಕಾರ್ಮಿಕನಾಗಿ ದುಡಿಯುವ ಜೊತೆಗೆ ಕಾರ್ಮಿಕರ ಪರವಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದ್ದರು. ಒಬ್ಬ ಕಾರ್ಮಿಕನ ಹೆಂಡತಿಯಾಗಿರುವ ನಾನು ಸಹ ಈ ಕಾರ್ಖಾನೆ ಉಳಿಯಬೇಕೆಂಬ ಹೋರಾಟದಲ್ಲಿ ತೊಡಗಿಸಿಕೊಂಡಿದ್ದೇನೆ. ಪಕ್ಷದ ವತಿಯಿಂದ ಸಹ ಹೋರಾಟ ನಡೆಸಲಾಗುತ್ತಿದ್ದು, ಗುತ್ತಿಗೆ ಕಾರ್ಮಿಕರ ಹೋರಾಟಕ್ಕೂ ಸಂಪೂರ್ಣ ಬೆಂಬಲ ನೀಡಿದ್ದೇವೆ. ವಿಐಎಸ್‌ಎಲ್ ಕಾರ್ಖಾನೆ ವಿಚಾರದಲ್ಲಿ ಯಾವುದೇ ರೀತಿ ರಾಜಕಾರಣ ಮಾಡುವುದಿಲ್ಲ. ಕ್ಷೇತ್ರದ ನಾಗರೀಕರು ಸ್ವಯಂ ಪ್ರೇರಣೆಯಿಂದ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
    ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಈ ಕಾರ್ಖಾನೆ ಅಭಿವೃದ್ಧಿಗಾಗಿ ಶ್ರಮಿಸಿದ್ದರು. ಅಂದು ಕಾರ್ಖಾನೆಯನ್ನು ಉಕ್ಕು ಪ್ರಾಧಿಕಾರಕ್ಕೆ ವಹಿಸಿಕೊಡುವ ಮೂಲಕ ಕಾರ್ಮಿಕರ ಹಿತ ಕಾಪಾಡುವಲ್ಲಿ ಯಶಸ್ವಿಯಾಗಿದ್ದರು. ಶಿವಮೊಗ್ಗ ನಗರಕ್ಕೆ ಫೆ.೨೭ರಂದು ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರಮೋದಿಯವರು ಈ ಕಾರ್ಖಾನೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ತೋರಿಸುವ ಮೂಲಕ ಕ್ಷೇತ್ರದ ಜನತೆಗೆ ಶುಭ ಸಂದೇಶ ನೀಡಬೇಕೆಂದು ಮನವಿ ಮಾಡಿದರು.
    ಕಳೆದ ದಿನಗಳ ಹಿಂದೆ ಕ್ಷೇತ್ರಕ್ಕೆ ಆಗಮಿಸಿದ್ದ ಪಂಚರತ್ನ ಯಾತ್ರೆ ಯಶಸ್ವಿಯಾಗಿದೆ. ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರಲ್ಲಿ ಮತ್ತಷ್ಟು ಆತ್ಮ ವಿಶ್ವಾಸ ಹೆಚ್ಚಿಸಿದ್ದು, ಯಶಸ್ವಿ ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.  
    ಪಕ್ಷದ ರಾಜ್ಯ ಕಾರ್ಯದರ್ಶಿ ಜೆ.ಪಿ ಯೋಗೇಶ್ ಮಾತನಾಡಿ, ವಿಐಎಸ್‌ಎಲ್ ಉಳಿಸುವ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ತಮ್ಮ ನಿಲುವು ಈಗಾಗಲೇ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ನಾವೆಲ್ಲರೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ನಮ್ಮ ಹೋರಾಟ ಈ ನಿಟ್ಟಿನಲ್ಲಿ ದಾರಿಯಲ್ಲಿಯೇ ಸಾಗಲಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಅಧ್ಯಕ್ಷರುಗಳಾದ ಆರ್. ಕರುಣಾಮೂರ್ತಿ, ಧರ್ಮಕುಮಾರ್, ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ಪ್ರಮುಖರಾದ ತಿಮ್ಮೇಗೌಡ, ಕರಿಯಪ್ಪ, ಮೈಲಾರಪ್ಪ, ಉಮೇಶ್, ಮಧುಸೂದನ್, ಲೋಕೇಶ್ವರ್‌ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನೂತನ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರು ಸೂಚಿಸಿ

ಭದ್ರಾವತಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಮಾತನಾಡಿದರು.
    ಭದ್ರಾವತಿ, ಫೆ. ೨೩ ; ಶಿವಮೊಗ್ಗ ಸೋಗಾನೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪುರವರ ಹೆಸರು ಸೂಚಿಸುವಂತೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ ಎಂದು ಪರಿಷತ್ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.
    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರರವರ ಪರಿಶ್ರಮದ ಫಲವಾಗಿ ಸಹ್ಯಾದ್ರಿ ಗಿರಿಶೃಂಗಗಳ ತಪ್ಪಲಿನಲ್ಲಿರುವ ಮಲೆನಾಡಿನ ಹೆಬ್ಬಾಗಿಲೆಂದೇ ಪ್ರಖ್ಯಾತವಾಗಿರುವ ಶಿವಮೊಗ್ಗದ ಸೋಗಾನೆಯಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣಗೊಂಡಿದೆ. ಈ ಹಿನ್ನಲೆಯಲ್ಲಿ ಪರಿಷತ್ ವತಿಯಿಂದ ಇವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
    ನಿಲ್ದಾಣಕ್ಕೆ ಹೆಸರನ್ನು ನಾಮಕರಣ ಮಾಡುವ ವಿಷಯದಲ್ಲಿ ಹಲವರ ಹೆಸರುಗಳು ಪ್ರಸ್ತಾಪವಾಗಿದ್ದು, ಈ ಹೆಸರುಗಳ ಪೈಕಿ ಸ್ವತಃ ಬಿ.ಎಸ್ ಯಡಿಯೂರಪ್ಪನವರು ತಮ್ಮ ಹೆಸರಿನ ಬದಲಿಗೆ ರಾಷ್ಟ್ರಕವಿ ಕುವೆಂಪುರವರ ಹೆಸರಿನ್ನಿಡಲು ಸೂಚಿಸಿರುತ್ತಾರೆ. ಅನೇಕ ಕವಿವರ್ಯರು ಹುಟ್ಟಿ ಮೆರೆದ ಹಾಗೂ ಶಿವಪ್ಪನಾಯಕರಂತಹ ಹಲವು ರಾಜಮಹಾರಾಜರುಗಳು ಆಳಿದ ಇಂತಹ ಮಲೆನಾಡಿನಲ್ಲಿ ಜನಿಸಿದಂತಹ ಕುವೆಂಪುರವರು ಸಾಹಿತ್ಯ ಕ್ಷೇತ್ರದಲ್ಲಿ ದಿಗ್ಗಜರೆನಿಸಿಕೊಂಡು, ಶ್ರೀ ರಾಮಾಯಣ
ದರ್ಶನಂ ಮಹಾಕಾವ್ಯವನ್ನು ರಚಿಸಿ ಕನ್ನಡದ ಸರ್ವಶ್ರೇಷ್ಟ ಸಾಹಿತಿ ಹಾಗೂ ಕವಿ ಎಂದು ಖ್ಯಾತಿಗೊಳಗಾಗಿ, ನಾಡಿಗೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ
ಮಹಾನ್ ವ್ಯಕ್ತಿಯಾಗಿದ್ದಾರೆ ಎಂದರು.
    ದೇಶಕ್ಕೆ ವಿಶ್ವಮಾನವ ಸಂದೇಶ ಸಾರಿದ ಮಹಾನ್ ಚೇತನ, ಕವಿ ಕುವೆಂಪುರವರ ಹೆಸರನ್ನು ನಿರ್ಮಾಣಕ್ಕೆ ನಾಮಕರಣ ಮಾಡುವುದು ಸೂಕ್ತವಾಗಿದ್ದು, ಈ ಹಿನ್ನಲೆಯಲ್ಲಿ ಪರಿಷತ್ ವತಿಯಿಂದ ಹಕ್ಕೊತ್ತಾಯ ಮಾಡುವ ಮೂಲಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಎಚ್. ತಿಮ್ಮಪ್ಪ, ಸಂಘಟನಾ ಕಾರ್ಯದರ್ಶಿ ಬಿ. ಕಮಲಾಕರ್, ಕಾರ್ಯಕಾರಿ ಸಮಿತಿ ಸದಸ್ಯೆ ಎಂ.ಎಸ್ ಸುಧಾಮಣಿ, ಕೋಡ್ಲುಯಜ್ಞಯ್ಯ, ರೇವಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, February 22, 2023

ಕುಮಾರಸ್ವಾಮಿ-ಸಿದ್ದರಾಮಯ್ಯ ಅಭಿಮಾನಿಗಳ ನಡುವೆ ಮಾತಿನಚಕಮಕಿ : ವ್ಯಕ್ತಿಯೋರ್ವನ ಮೇಲೆ ಹಲ್ಲೆ


    ಭದ್ರಾವತಿ, ಫೆ. ೨೨ : ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗು ಎಚ್.ಡಿ ಕುಮಾರಸ್ವಾಮಿ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದು ವ್ಯಕ್ತಿಯೋರ್ವನ ಮೇಲೆ ನಡೆಸಿರುವ ಘಟನೆ ನಡೆದಿದೆ.
    ತಾಲೂಕಿನ ಮಲ್ಲಿಗೇನಹಳ್ಳಿ ಕ್ಯಾಂಪ್‌ನಲ್ಲಿ ಉದ್ಯಮಿ ಆಕಾಶ್‌ಗೆ ಗೋಣಿಬೀಡು ನಿವಾಸಿಗಳಾದ ದಿನೇಶ್, ಯೋಗೇಶ್ ಮತ್ತು ಇತರೆ ಮೂವರು ಅಡ್ಡಗಟ್ಟಿದ್ದಾರೆ. ಈ ಹಿಂದೆ ಆಕಾಶ್ ೨೦೧೩ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು ಹಾಗಾಗಿ ೨೦೨೩ ರಲ್ಲಿಯೂ ಸಿದ್ದರಾಮಯ್ಯನೇ ಮುಖ್ಯಮಂತ್ರಿ ಆಗೋದು ಎಂದು ಹೇಳಿದ್ದರು.
    ಇದೇ ವಿಚಾರವಾಗಿ ದಿನೇಶ್, ಯೋಗೀಶ್ ಮತ್ತು ಇತರೆ ಮೂವರು ಕುಮಾರ ಸ್ವಾಮಿಯವರೇ ಈ ಬಾರಿ ಮುಖ್ಯಮಂತ್ರಿಯಾಗೋದು ಎಂದು ಮಾತಿನ ಚಕಮಕಿ ನಡೆಸಿ ಆಕಾಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಸಂದರ್ಭದಲ್ಲಿ ಕೊರಳಿನಲ್ಲಿ ಇದ್ದ ಬಂಗಾರದ ಸರ ಕಳುವಾಗಿದೆ ಎಂದು ಆಕಾಶ್ ದೂರಿನಲ್ಲಿ ದಾಖಲಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೆ.ಎಂ ಶೋಭ ನಿಧನ

ಕೆ.ಎಂ ಶೋಭ
    ಭದ್ರಾವತಿ, ಫೆ. ೨೨ : ನಗರದ ಹಿರಿಯ ಪತ್ರಕರ್ತ ಕೆ.ಎನ್ ರವೀಂದ್ರನಾಥ್(ಬ್ರದರ್)ರವರ ಅತ್ತಿಗೆ ಹುತ್ತಾ ಕಾಲೋನಿ ಚಂದ್ರಾಲಯ ಹಿಂಭಾಗದ ನಿವಾಸಿ ಕೆ.ಎಂ ಶೋಭ(೬೪) ನಿಧನ ಹೊಂದಿದರು.
    ೩ ಪುತ್ರರು, ಇಬ್ಬರು ಸೊಸೆಯಂದಿರು, ಮೊಮ್ಮಕ್ಕಳು ಇದ್ದರು. ಕೆ.ಎಂ ಶೋಭರವರು ಬಾಂಬೆ ಟೈಲರ್ ಎಂದು ಕರೆಯಲ್ಪಡುತ್ತಿದ್ದ ದಿವಂಗತ ಕೆ.ಎನ್ ಮಹೇಂದ್ರನಾಥ್‌ರವರ ಪತ್ನಿಯಾಗಿದ್ದಾರೆ. ಇವರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ ಹುತ್ತಾ ಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಇವರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅರಣ್ಯ ಇಲಾಖೆ ಮಣ್ಣು ದರ ನಿಗದಿಯಲ್ಲಿ ಕೋಟ್ಯಾಂತರ ರು. ಭ್ರಷ್ಟಾಚಾರ

ಮುಖ್ಯಸ್ಥರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಅನುಮತಿ ನೀಡಿ

ಶಿವಕುಮಾರ್, ಸಾಮಾಜಿಕ ಹೋರಾಟಗಾರ
    ಭದ್ರಾವತಿ, ಫೆ. ೨೨:  ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಅರಣ್ಯಪಡೆ ಮುಖ್ಯಸ್ಥರು) ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಅನುಮತಿ ನೀಡುವಂತೆ ತಾಲೂಕಿನ ಉಕ್ಕುಂದ ಗ್ರಾಮದ ನಿವಾಸಿ, ಸಾಮಾಜಿಕ ಹೋರಾಟಗಾರ ಶಿವಕುಮಾರ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.
    ಅರಣ್ಯ ಇಲಾಖೆಯ ಮುಂಗಡ ಗುಂಡಿ ತೆಗೆಯುವ ಕಾಮಗಾರಿಯಲ್ಲಿ ಎಸ್.ಎಸ್.ಆರ್ ದರದಲ್ಲಿ ಯಾವುದೇ ರೀತಿಯ ಮಣ್ಣು ಪರೀಕ್ಷೆ ಮಾಡಿಸದೇ ಗಟ್ಟಿ ಮಣ್ಣು ಎಂದು ಹೆಚ್ಚಿನ ದರ ಅಳವಡಿಸಿಕೊಂಡು ರಾಜ್ಯದ ಬೊಕ್ಕಸಕ್ಕೆ ಪ್ರತಿ ವರ್ಷ ನೂರಾರು ಕೋಟಿ ನಷ್ಟ ಉಂಟುಮಾಡುತ್ತಿದ್ದು, ಇದನ್ನು ಆಯಾ ವಿಭಾಗದ ಮತ್ತು ಸರ್ಕಲ್ ವ್ಯಾಪ್ತಿಯ ಸಿಸಿಎಫ್ ಮತ್ತು ಡಿಸಿಎಫ್ ಗಳನ್ನು ಮಾಹಿತಿ ಹಕ್ಕಿನಡಿ ದಾಖಲಾತಿಗಳನ್ನು ಕೇಳಿದರೆ ಮುಂಗಡ ಕಾಮಾಗಾರಿಯನ್ನು ಕೈಗೊಳ್ಳಲು ಪ್ರಧಾನ ಮುಖ್ಯ ಅರಣ್ಯ
    ಸಂರಕ್ಷಣಾಧಿಕಾರಿ(ಅರಣ್ಯ ಪಡೆ ಮುಖ್ಯಸ್ಥರು), ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಅಭಿವೃದ್ಧಿ) ಹಾಗೂ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸಿಇಓ(ಕಾಂಪಾ), ಅರಣ್ಯ ಭವನ ಬೆಂಗಳೂರುರವರು ನಿಗದಿಪಡಿಸಿರುವ ದತ್ತಪತ್ರಗಳನ್ವಯ ದರಗಳನ್ನು ಅಳವಡಿಸಿಕೊಂಡು ಕಾಮಗಾರಿಗಳನ್ನು ನಿರ್ವಹಿಸಲಾಗಿರುತ್ತದೆ ಎಂದು ಐಎಫ್‌ಎಸ್ ಅಧಿಕಾರಿಯಾದ ಶಿವಶಂಕರ್ ಡಿಸಿಎಫ್, ಶಿವಮೊಗ್ಗ ಹಾಗೂ ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ ಹನುಮಂತಪ್ಪರವರು ಮಾಹಿತಿ ನೀಡಿರುತ್ತಾರೆ.
    ೨೦೧೮ ರಿಂದ ೨೦೨೧ರವರೆಗಿನ ಎ.ಜೆ ಆಡಿಟ್ ವರದಿಯಲ್ಲಿ ಯಾವುದೇ ರೀತಿಯ ಮಣ್ಣು ಪರೀಕ್ಷೆ ಮಾಡದೇ ರಾಜ್ಯದ ಬೊಕ್ಕಸಕ್ಕೆ ಶಿವಮೊಗ್ಗ ಸಿಸಿಎಫ್ ವಿಭಾಗಗಳಲ್ಲಿ ಅಧಿಕಾರಿಗಳು ೨-೩ ಕೋಟಿ ಹಣ ದುರುಪಯೋಗಪಡಿಸಿಕೊಂಡಿರುವುದು ರುಜುವಾಗಿದೆ. ಅರಣ್ಯ ಇಲಾಖೆಯಲ್ಲಿ ಈ ಹಿಂದಿನಿಂದ ಸಾವಿರಾರು ಕೋಟಿ ಹಣ ದಾಖಲೆಗಳಿಲ್ಲದೆ ಅಧಿಕಾರಿಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ನಿರಂತರವಾಗಿ ನಡೆಯುತ್ತಿದೆ. ಇದನ್ನು ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕೆಂದು ದೂರನ್ನು ನೀಡಿದ್ದು, ಇದುವರೆಗೂ ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗಿಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ.  
    ಪುನಃ ೨೦೨೨-೨೩ನೇ ಸಾಲಿನಲ್ಲಿ ಮುಂಗಡ ಗುಂಡಿ ತೆಗೆಯುವ ಕಾಮಗಾರಿಯಲ್ಲಿ ಗಟ್ಟಿ ಮಣ್ಣು ಎಂದು ನಮೂದಿಸಿಕೊಂಡು ಮಣ್ಣು ಪರೀಕ್ಷೆ ಮಾಡಿಸದೇ ಸರ್ಕಾರಿ ಹಣ ಹೆಚ್ಚಿನ ದರ ನಿಗದಿಪಡಿಸಿಕೊಂಡು ಹಣ ಲಪಟಾಯಿಸಿರುತ್ತಾರೆ. ರಾಜ್ಯದ ಅರಣ್ಯ ಇಲಾಖೆಯಲ್ಲಿ ೧೩ ಸರ್ಕಲ್‌ಗಳು ಇದ್ದು, ಇದೇ ರೀತಿಯ ಗಟ್ಟಿ ಮಣ್ಣಿನ ದರ ಅಳವಡಿಸಿಕೊಂಡಿರುವುದು ಮಾಹಿತಿ ಹಕ್ಕಿನಡಿ ದಾಖಲಾತಿಯನ್ನು ಪಡೆದಿರುತ್ತೇನೆ. ರಾಜ್ಯದ ಅರಣ್ಯ ಇಲಾಖೆಯಲ್ಲಿ ಎಸ್‌ಎಸ್‌ಆರ್ ದರ ಉಲ್ಲಂಘನೆ ಮಾಡಿ ಕರ್ನಾಟಕ ಆರ್ಥಿಕ ಸಂಹಿತೆಯ ವಿರುದ್ಧವಾಗಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದರೂ ಇವರದೆ ಡಾಟ ಶೀಟಿನಂತೆ ಹೆಚ್ಚಿನ ದರ ಅಳವಡಿಸಿಕೊಂಡಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದ ರಾಜ್ಯದ ಎಲ್ಲಾ ಅಧಿಕಾರಿಗಳು ಇವರ ಆದೇಶದ ಮೇರೆಗೆ ಕೆಲಸ ನಿರ್ವಹಿಸುತ್ತಿರುವುದರಿಂದ ೨೦೨೧-೨೨-೨೩ನೇ ಸಾಲಿನ ಈ ಅಕ್ರಮಗಳಿಗೆ ಇವರೇ ನೇರ ಕಾರಣಕರ್ತರಾಗಿದ್ದು, ಅರಣ್ಯ ಪಡೆ ಮುಖ್ಯಸ್ಥರ ವಿರುದ್ಧ ಮಾನ್ಯ ಘನ ನ್ಯಾಯಾಲಯದಲ್ಲಿ ಪ್ರಶ್ನಿಸಲು ಇವರ ವಿರುದ್ಧ ದೂರು ದಾಖಲಿಸಲು ತುರ್ತಾಗಿ ಅನುಮತಿ ನೀಡುವಂತೆ ಕೋರಿದ್ದಾರೆ.  

ತಾಲೂಕು ಪಂಚಾಯಿತಿ ಬೂತ್ ಮಟ್ಟದಲ್ಲಿ ಇವಿಎಂ, ವಿವಿ ಪ್ಯಾರ್ಡ್‌ಗಳ ಜಾಗೃತಿ ಕಾರ್ಯಕ್ರಮ

ಭದ್ರಾವತಿ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇವಿಎಂ ಮತ್ತು ವಿವಿ ಪ್ಯಾಡ್‌ಗಳ ಕಾರ್ಯವೈಕರಿ ಮತ್ತು ಉಪಯೋಗಿಸುವಿಕೆ ಕುರಿತು ಜಾಗೃತಿ ಮತ್ತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕಲ್ಲಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಇವಿಎಂ ಮತ್ತು ವಿವಿ ಪ್ಯಾಡ್‌ಗಳ ಪ್ರಾತ್ಯಕ್ಷತೆ ಮೂಲಕ ಮತದಾನ ಮಾಡಿಸಿ ಜಾಗೃತಿ ಮೂಡಿಸಲಾಯಿತು.
    ಭದ್ರಾವತಿ, ಫೆ. ೨೨: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇವಿಎಂ ಮತ್ತು ವಿವಿ ಪ್ಯಾಡ್‌ಗಳ ಕಾರ್ಯವೈಕರಿ ಮತ್ತು ಉಪಯೋಗಿಸುವಿಕೆ ಕುರಿತು ಜಾಗೃತಿ ಮತ್ತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
    ತಾಲೂಕಿನಲ್ಲಿ ನಗರ ಹಾಗು ಗ್ರಾಮಾಂತರ ಸೇರಿ ಒಟ್ಟು ೨೫೩ ಬೂತ್‌ಗಳಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯಾ ಬೂತ್‌ಗಳಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಹಾಗು ಅರಿವು ಮೂಡಿಸಲಾಗುತ್ತಿದೆ. ಫೆ. ೯ರಿಂದ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದ್ದು, ತಾಲೂಕಿನಲ್ಲಿ ಒಟ್ಟು ೩೯ ಗ್ರಾಮ ಪಂಚಾಯಿತಿಗಳಿವೆ. ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು, ಸಹಾಯಕ ನಿರ್ದೇಶಕರು ಹಾಗು ಚುನಾವಣಾಧಿಕಾರಿಗಳು ಮತ್ತು ಸಿಬ್ಬಂದಿಗಳು ಮುಂದಾಗಿದ್ದಾರೆ.
    ತಾಲೂಕಿನ ಕಲ್ಲಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಇವಿಎಂ ಮತ್ತು ವಿವಿ ಪ್ಯಾಡ್‌ಗಳ ಪ್ರಾತ್ಯಕ್ಷತೆ ಮೂಲಕ ಮತದಾನ ಮಾಡಿಸಿ ಜಾಗೃತಿ ಮೂಡಿಸಲಾಯಿತು. ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಅಭಿವೃದ್ಧಿ ಅಧಿಕಾರಿ ಸವಿತಾ ಮತ್ತು ಪಂಚಾಯಿತಿ ಸದಸ್ಯರು, ಕೈಗಾರಿಕಾ ತರಬೇತಿ ಸಂಸ್ಥೆಯ ಲಿಂಗರಾಜು, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಐಎಸ್‌ಎಲ್ ಉಳಿಸಲು ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಆಗ್ರಹ

ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಪ್ರಧಾನಮಂತ್ರಿಗೆ ಮನವಿ

ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ತಾಲೂಕು ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ವತಿಯಿಂದ ಬುಧವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಫೆ. ೨೨: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ತಾಲೂಕು ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ವತಿಯಿಂದ ಬುಧವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.
    ಭಾರತರತ್ನ ಸರ್ ಎಂ. ವಿಶ್ವೇಶ್ವರಾಯ ಅವರ ದೂರ ದೃಷ್ಟಿಯ ಕಾರಣದಿಂದ ಅಂದಿನ ಮೈಸೂರು ಮಹಾರಾಜರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ನಿರ್ಮಾಣಗೊಂಡು ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಎನ್ನುವ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈ ಕಾರ್ಖಾನೆ ೧೯೨೩ರಲ್ಲಿ ಉತ್ಪಾದನೆ ಪ್ರಾರಂಭಿಸಿತು.  ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭಗೊಂಡ ಸರ್ಕಾರದ ಮಾಲಿಕತ್ವದ ಮೊದಲ ಏಕೈಕ ಕಾರ್ಖಾನೆ ಇದಾಗಿದ್ದು, ನಂತರ ವಿಶ್ವೇಶ್ವರಾಯ ಐರನ್ ಅಂಡ್ ಸ್ಟೀಲ್ ಕಂಪನಿ, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಎಂಬ ಬದಲಾದ ಹೆಸರಿನಿಂದ ವಿಶೇಷ ಉಕ್ಕು ಉತ್ಪಾದನೆಗೆ ದೇಶ ವಿದೇಶಗಳಲ್ಲಿ ಹೆಸರು ಮಾಡಿ ಪ್ರಸ್ತುತ ಭಾರತ ಸರ್ಕಾರದ ನೀತಿಯಿಂದಾಗಿ ಮುಚ್ಚಲ್ಪಡುವ ಹಂತಕ್ಕೆ ಬಂದು ನಿಂತಿರುವುದು ವಿಷಾದನೀಯ ಬೆಳವಣಿಗೆಯಾಗಿದೆ.

ವಿದ್ಯಾರ್ಥಿಗಳು ಭವಿಷ್ಯದ ಪ್ರಜೆಗಳಾಗಿದ್ದು, ಇವರ ಉತ್ತಮ ಭವಿಷ್ಯದ ಹಿನ್ನಲೆಯಲ್ಲಿ ಹಾಗು ಕಾರ್ಖಾನೆಯನ್ನು ನಂಬಿ ಬದುಕುವ ಕಾರ್ಮಿಕರು, ಕುಟುಂಬ ವರ್ಗದವರ ಮತ್ತು ಸಮಸ್ತ ನಾಗರೀಕರಿಗಾಗಿ ಈ ಕಾರ್ಖಾನೆ ಉಳಿಯುವುದು ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ದೇಶದ ಪ್ರಧಾನಮಂತ್ರಿಗಳು ಮನಸ್ಸು ಮಾಡಿ ಈ ಕಾರ್ಖಾನೆಯನ್ನು ಉಳಿಸಿಕೊಡುವ ಮೂಲಕ ನೆರವಿಗೆ ಮುಂದಾಗಬೇಕು.
  - ಶ್ರೀ ಪ್ರಸನ್ನನಾಥ ಸ್ವಾಮೀಜಿ, 
 ಕಾರ್ಯದರ್ಶಿಗಳು, ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠ.

    ಲಕ್ಷಾಂತರ ಕಾರ್ಮಿಕರ ಕುಟುಂಬಗಳ ಜೀವನ ನಿರ್ವಹಣೆಗೆ ಕಾರಣವಾಗಿದ್ದ ಈ ಕಾರ್ಖಾನೆ ದೇಶದ ಪ್ರಗತಿಗೆ ತನ್ನ ಕೊಡುಗೆಯನ್ನು ನೀಡಿದೆ. ನೂರು ವರ್ಷಗಳ ಇತಿಹಾಸವನ್ನು ಹೊಂದಿರುವ ಕರ್ನಾಟಕದ ಹೆಮ್ಮೆಯ ಆಸ್ತಿಯನ್ನು ತನ್ನ ನೀತಿಯ ಹೊರತಾಗಿಯು ಈಗಿನ ತಂತ್ರಜ್ಞಾನ ಬಳಸಿ, ಆಧುನೀಕರಣಗೊಳಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿರುತ್ತದೆ.
    ಈ ಹಿನ್ನಲೆಯಲ್ಲಿ  ಪ್ರಧಾನಮಂತ್ರಿಯವರು ದೇಶದ ಪ್ರತಿಷ್ಠಿತ ಸರ್ಕಾರಿ ಕ್ಷೇತ್ರದ ಕಾರ್ಖಾನೆಗಳಲ್ಲಿ ಹಿರಿಯದಾದ ಈ ಕಾರ್ಖಾನೆಯನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ತಕ್ಷಣವೇ ಕೈಬಿಟ್ಟು, ಆಧುನಿಕ ತಂತ್ರಜ್ಞಾನ ಬಳಸಿ ಆಧುನೀಕರಣಗೊಳಿಸಲು ಬೇಕಾಗುವ ಬಂಡವಾಳ ತೊಡಗಿಸಿ ಅಭಿವೃದ್ಧಿಪಡಿಸಬೇಕಾಗಿ ಮನವಿಯಲ್ಲಿ ಕೋರಲಾಗಿದೆ.
   ಒಕ್ಕೂಟದ ಮಹಾ ಪೋಷಕರು, ಶ್ರೀ ಕ್ಷೇತ್ರ ಆದಿಚುಂಚನಗಿರಿ ಕ್ಷೇತ್ರದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥಸ್ವಾಮೀಜಿ, ಉಪಾಧ್ಯಕ್ಷರಾದ ಡಾ. ವಿನೀತ್ ಆನಂದ್, ಲತಾ ರಾಬರ್ಟ್, ಕಾರ್ಯದರ್ಶಿ ಶಿವಲಿಂಗೇಗೌಡ, ಸಹಕಾರ್ಯದರ್ಶಿಗಳಾದ ಬಿ.ಎಂ ಸಂತೋಷ್, ಬಿ. ದೇವರಾಜ, ಖಜಾಂಚಿ ರೆವರೆಂಡ್ ಫಾಸ್ಟರ್ ಹೇನ್ಸ್ ಜಾನ್, ನಿರ್ದೇಶಕರಾದ ಬಿ. ಜಗದೀಶ್, ಜಿ.ಎಸ್ ಮಹೇಶ್ವರಪ್ಪ, ಕೆ. ನಾಗರಾಜ್, ಸಿಸ್ಟರ್ ರೀತಾ, ಜರೇನಾ ಬೇಗಂ, ಆರ್. ಸುರೇಶ್ ಬಾಬು, ಪ್ರಭಾಕರ್, ಬಿ.ಸಿ ಪ್ರಸಾದ್, ಸಲಹೆಗಾರರಾದ ಬಿ.ಎಲ್ ರಂಗಸ್ವಾಮಿ, ಡಾ. ಮಹಾಬಲೇಶ್ವರ ಮತ್ತು ಕಾಳೇಗೌಡ, ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸೇರಿದಂತೆ ತಾಲೂಕಿನ ಎಲ್ಲಾ ಅನುದಾನರಹಿತ ಶಾಲೆಗಳ ಸುಮಾರು ೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ವಿಐಎಸ್‌ಎಲ್ ಕಾರ್ಖಾನೆ ಮುಂಭಾಗದಿಂದ ಆರಂಭಗೊಂಡ ಮೆರವಣಿಗೆ ಡಬ್ಬಲ್ ರಸ್ತೆ ಮೂಲಕ ಅಂಬೇಡ್ಕರ್ ವೃತ್ತ, ಹಾಲಪ್ಪವೃತ್ತ, ಮಾಧವಚಾರ್ ವೃತ್ತ ಮತ್ತು ರಂಗಪ್ಪ ವೃತ್ತ ಮೂಲಕ ತಾಲೂಕು ಕಛೇರಿ ತಲುಪಿತು.

ವಿದ್ಯಾರ್ಥಿಗಳು, ನಾಗರೀಕರ ಹಿತರಕ್ಷಣೆ ಬಹಳ ಮುಖ್ಯವಾಗಿದ್ದು, ಕಾರ್ಖಾನೆಯನ್ನು ಅನಗತ್ಯವಾಗಿ ರಾಜಕೀಯಕ್ಕೆ ಬಳಸಿಕೊಳ್ಳದೆ ಎಲ್ಲಾ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು ಈ ಕಾರ್ಖಾನೆ ಉಳಿಸಿಕೊಡುವ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಈ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಅಭಿವೃದ್ಧಿಗೊಳಿಸುವಂತೆ ಕೋರುತ್ತೇವೆ.
                         - ಕಾಳೇಗೌಡ,  ಸಲಹೆಗಾರರು, ಹಿರಿಯ ಕಾರ್ಮಿಕರು ಮುಖಂಡರು. 

Tuesday, February 21, 2023

ಶಿವಮೊಗ್ಗ ಜಿಲ್ಲೆಯ ರಾಜಕಾರಣಿಗಳಿಗೆ ರೈತರು, ಕಾರ್ಮಿಕರ ಬಗ್ಗೆ ಕಾಳಜಿ ಇಲ್ಲ : ಎಚ್.ಡಿ ಕುಮಾರಸ್ವಾಮಿ


ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಜೆಡಿಎಸ್ ಪಕ್ಷದ ಬಹು ನಿರೀಕ್ಷಿತ ಪಂಚರತ್ನ ಯಾತ್ರೆ ವೇದಿಕೆ ಕಾರ್ಯಕ್ರಮ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಸಿ.ಎಂ ಇಬ್ರಾಹಿಂ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.  
    ಭದ್ರಾವತಿ, ಫೆ. ೨೧: ಶಿವಮೊಗ್ಗ ಜಿಲ್ಲೆಯಲ್ಲಿ ರೈತರು, ಕಾರ್ಮಿಕರ ಸಮಸ್ಯೆಗಳು ಬಹಳಷ್ಟಿವೆ. ಆದರೆ ಜನರ ಅಗತ್ಯ ಸಮಸ್ಯೆಗಳಿಗೆ ಇಲ್ಲಿನ ರಾಜಕಾರಣಿಗಳು ಸ್ಪಂದಿಸದೆ ಹಣ ಲೂಟಿ ಮಾಡುವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಇದರಿಂದಾಗಿ ದಲಿತರು, ರೈತರು, ಕಾರ್ಮಿಕರು ಬಡವರಾಗಿಯೇ ಉಳಿಯುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದರು.
    ಅವರು ಹಳೇನಗರದ ಕನಕಮಂಟಪ ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಜೆಡಿಎಸ್ ಪಕ್ಷದ ಬಹು ನಿರೀಕ್ಷಿತ ಪಂಚರತ್ನ ಯಾತ್ರೆ ವೇದಿಕೆ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದರು.
    ಜಿಲ್ಲೆಯಲ್ಲಿ ಅಡಕೆ ಬೆಳೆಗಾರರ ಸಮಸ್ಯೆ, ಬಗರ್‌ಹುಕುಂ ರೈತರ ಸಮಸ್ಯೆಗಳಿವೆ. ಅಭಿವೃದ್ಧಿಗಾಗಿ ಭೂಮಿ ಕಳೆದುಕೊಂಡಿರುವ ರೈತರಿಗೆ ಸೂಕ್ತ ಪರಿಹಾರ ನೀಡಿಲ್ಲ. ಬೃಹತ್ ಕಾರ್ಖಾನೆಗಳು ಮುಚ್ಚಿ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಸಾಕಷ್ಟು ಬಡವರಿಗೆ ಮನೆಗಳಿಲ್ಲವಾಗಿದೆ. ಇಂತಹ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಜಿಲ್ಲೆಯ ರಾಜಕಾರಣಿಗಳು ವಿಫಲರಾಗಿದ್ದಾರೆ. ಈ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಡುವ ಉದ್ದೇಶವೇ ಪಂಚರತ್ನ ಯಾತ್ರೆಯಾಗಿದೆ. ಇದನ್ನು ಜನರು ಅರ್ಥ ಮಾಡಿಕೊಂಡು ಈ ಬಾರಿ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸಬೇಕೆಂದರು.
    ಜಿಲ್ಲೆಯ ರಾಜಕಾರಣಿಗಳು ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಕೇವಲ ಅವರು ಹಾಗು ಕುಟುಂಬದವರು ಸಮೃದ್ಧಿಯಾಗುತ್ತಿದ್ದಾರೆ. ಇಂತಹ ರಾಜಕಾರಣ ನಾನು ಎಂದಿಗೂ ಮಾಡಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾದರೂ ಸಹ ಪೂರ್ಣ ಅಧಿಕಾರ ನೀಡದಿದ್ದರೂ ಸಹ ರೈತರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಎರಡು ಬಾರಿ ಸಾಲ ಮನ್ನಾ ಮಾಡಿದ್ದೇನೆ. ಬಡವರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸಲು ೨.೫ ಲಕ್ಷ ಕೋಟಿ ಅನುದಾನದ ಅಗತ್ಯವಿದೆ.  ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಮೂಲಕ ಅಗತ್ಯವಿರುವ ಅನುದಾನವನ್ನು ಜನರ ತೆರಿಗೆ ಹಣದಲ್ಲಿ ಬಳಸಿಕೊಳ್ಳುತ್ತೇನೆ. ಈ ಬಾರಿ ನನಗೆ ಪೂರ್ಣ ಪ್ರಮಾಣದ ಅಧಿಕಾರ ನೀಡುವಂತೆ ಮನವಿ ಮಾಡಿದರು.
    ಕ್ಷೇತ್ರದ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳನ್ನು ಮುಚ್ಚಲು ಹಣ ಬಿಡುಗಡೆ ಮಾಡಿರುವ ಈ ಹಿಂದಿನ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳಿಗೆ ಈ ಕಾರ್ಖಾನೆಗಳನ್ನು ಉಳಿಸಿಕೊಳ್ಳುವುದಾಗಿ ಭರವಸೆ ನೀಡುವ ಯಾವುದೇ ನೈತಿಕತೆ ಇಲ್ಲವಾಗಿದೆ. ನಮ್ಮ ಸರ್ಕಾರ ಈ ಎರಡು ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಲು ಬದ್ಧವಾಗಿದೆ. ರಾಜ್ಯ ಸರ್ಕಾರವೇ ಈ ಎರಡು ಕಾರ್ಖಾನೆಗಳನ್ನು ಮುನ್ನಡೆಸಿಕೊಂಡು ಹೋಗಲಿದೆ. ಅಲ್ಲದೆ ಇಲ್ಲಿನ ಬಗರ್ ಹುಕುಂ ರೈತರ ಸಮಸ್ಯೆಗಳನ್ನು ಪರಿಹರಿಸುತ್ತೇನೆ. ಈ ಬಾರಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಶಾರದ ಅಪ್ಪಾಜಿಯವರನ್ನು ಗೆಲ್ಲಿಸುವ ಮೂಲಕ ವಿಧಾನಸಭೆಗೆ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
    ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದಾ ಅಪ್ಪಾಜಿ, ವಿಧಾನ ಪರಿಷತ್ ಸದಸ್ಯ  ಎಸ್.ಎಲ್  ಬೋಜೇಗೌಡ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಜ್ಮಾ,  ರಾಜ್ಯ ಕಾರ್ಯದರ್ಶಿ ಜೆ.ಪಿ ಯೋಗೇಶ್,  ಜಿಲ್ಲಾಧ್ಯಕ್ಷ  ಎಂ. ಶ್ರೀಕಾಂತ್,  ಯುವ ಘಟಕದ ಜಿಲ್ಲಾಧ್ಯಕ್ಷ ಮಧು ಕುಮಾರ್, ಗೀತಾ,  ನಗರ ಘಟಕದ ಅಧ್ಯಕ್ಷ ಆರ್ ಕರುಣಾ ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಧರ್ಮಕುಮಾರ್, ಯುವ ಘಟಕದ ಅಧ್ಯಕ್ಷ ಎಂ.ಎ ಅಜಿತ್, ಕರಿಯಣ್ಣ, ಮೈಲಾರಪ್ಪ, ಮುರ್ತುಜಾಖಾನ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪಂಚರತ್ನ ಯಾತ್ರೆ ವೇದಿಕೆ ಕಾರ್ಯಕ್ರಮ ಉದ್ಘಾಟನೆ

ಭದ್ರಾವತಿ, ಫೆ. 21:  ಹಳೇನಗರದ ಕನಕಮಂಟಪ ಆಯೋಜಿಸಲಾಗಿದ್ದ  ಜೆಡಿಎಸ್ ಪಕ್ಷದ ಬಹು ನಿರೀಕ್ಷಿತ ಪಂಚರತ್ನ  ಯಾತ್ರೆ ವೇದಿಕೆ ಕಾರ್ಯಕ್ರಮ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಉದ್ಘಾಟಿಸಿದರು.
   ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದಾ ಅಪ್ಪಾಜಿ, ವಿಧಾನ ಪರಿಷತ್ ಸದಸ್ಯ  ಎಸ್.ಎಲ್  ಬೋಜೇಗೌಡ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಜ್ಮಾ,  ರಾಜ್ಯ ಕಾರ್ಯದರ್ಶಿ ಜೆ.ಪಿ ಯೋಗೇಶ್,  ಜಿಲ್ಲಾಧ್ಯಕ್ಷ  ಎಂ. ಶ್ರೀಕಾಂತ್,  ಯುವ ಘಟಕದ ಜಿಲ್ಲಾಧ್ಯಕ್ಷ ಮಧು ಕುಮಾರ್, ಗೀತಾ,  ನಗರ ಘಟಕದ ಅಧ್ಯಕ್ಷ ಆರ್ ಕರುಣಾ ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಧರ್ಮಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪಂಚರತ್ನ ಯಾತ್ರೆಯಲ್ಲಿ ಕುಮಾರ ಸ್ವಾಮಿಗೆ ವಿಶೇಷ ಹಾರತುರಾಯಿ

    ಭದ್ರಾವತಿ, ಫೆ.21: ಉಕ್ಕಿನ ನಗರಕ್ಕೆ ಮಂಗಳವಾರ ಆಗಮಿಸಿದ ಪಂಚರತ್ನ ಯಾತ್ರೆಯಲ್ಲಿ ಹಲವು ವಿಶೇಷತೆಗಳು ಕಂಡುಬಂದವು. ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿಯವರಿಗೆ ಆಭಿಮಾನಿಗಳು, ಕಾರ್ಯಕರ್ತರಿಂದ ವಿಶೇಷ ಹಾರತುರಾಯಿಗಳ ಅದ್ದೂರಿ ಸ್ವಾಗತ ಕಂಡು ಬಂದಿತು.


      ನೀರಿನ ಬಾಟಲಿಗಳಿಂದ, ಕಲ್ಲಂಗಡಿ ಹಣ್ಣುಗಳಿಂದ ಹಾಗು ಅಡಕೆ ತಟ್ಟೆಗಳಿಂದ ತಯಾರಿಸಿದ ಬೃಹತ್ ಹಾರಗಳನ್ನು ಕ್ರೇನ್ ಬಳಸಿ ಹಾಕುವ  ಮೂಲಕ ಸಂಭ್ರಮಿಸಿದರು.
   ಹಲವು ಗ್ರಾಮಗಳಲ್ಲಿ ಗ್ರಾಮಸ್ಥರು ತಮ್ಮ ಅಳಲನ್ನು ಕುಮಾರ ಸ್ವಾಮಿ ಬಳಿ ತೋರಿಕೊಂಡರು. ಸುಡು ಬಿಸಿಲಿನಲ್ಲೂ ಆಭಿಮಾನಿಗಳು, ಕಾರ್ಯಕರ್ತರು ಯಾತ್ರೆಯಲ್ಲಿ  ಪಾಲ್ಗೊಂಡು ಸಂಜೆವರೆಗೂ ಹೆಜ್ಜೆ ಹಾಕಿದರು.





ಸೋಗಾನೆ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ

ಶಿವಮೊಗ್ಗ, ಫೆ. 21 :  ಕೊನೆಗೂ ಮಲೆನಾಡಿನ ಜನರ ಬಹು ವರ್ಷಗಳ ಕನಸು ಈಡೇರಿದೆ.   ಸೋಗಾನೆ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ  ಮಂಗಳವಾರ  ಮಧ್ಯಾಹ್ನ ಬಂದಿಳಿದಿದ್ದು, ಜನರಲ್ಲಿ ಸಂಭ್ರಮ ಉಂಟುಮಾಡಿದೆ.  

     ಪ್ರಾಯೋಗಿಕವಾಗಿ ವಾಯು ಸೇನೆಯ ಬೋಯಿಂಗ್ ವಿಮಾನ ಬಂದಿಳಿದಿದೆ.  ಬೋಯಿಂಗ್ 737 – 7HI ಮಾದರಿಯ ವಿಮಾನ  ಮಧ್ಯಾಹ್ನ 12 ಗಂಟೆಗೆ  ದೆಹಲಿಯಿಂದ ಹೊರಟಿದ್ದು, ಮಧ್ಯಾಹ್ನ 2.30ರ ಹೊತ್ತಿಗೆ ಸೋಗಾನೆ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.  

     ಯಾವುದೇ ಅಡೆತಡೆ ಇಲ್ಲದೆ  ವಿಮಾನ ಬಂದಿಳಿದಿದ್ದು, ಮಧ್ಯಾಹ್ನ ವಿಮಾನ  ಬರುತ್ತಿದ್ದಂತೆ ಸುತ್ತಮುತ್ತಲ ಪ್ರದೇಶದ ಜನರು ಕುತೂಹಲದಿಂದ ಗಮನಿಸಿದರು. 

ವಿಐಎಸ್ಎಲ್-ಎಂಪಿಎಂ ಕಾರ್ಖಾನೆಗಳ ಪುನಶ್ಚೇತನಕ್ಕೆ ಬದ್ದ : ಎಚ್.ಡಿ ಕುಮಾರಸ್ವಾಮಿ

ಭದ್ರಾವತಿ , ಫೆ. 21:   ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮತ್ತು ಮೈಸೂರು ಕಾಗದ ಕಾರ್ಖಾನೆ ಪುನಶ್ಚೇತನಗೊಳಿಸುವುದು ನಮ್ಮ ಉದ್ದೇಶವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪುನರುಚ್ಚರಿಸಿದರು.

       ಅವರ ಮಂಗಳವಾರ ತಾಲೂಕಿನ ಗಡಿ ಭಾಗದ  ಕಾರೇನಹಳ್ಳಿಯಲ್ಲಿ   ಜೆಡಿಎಸ್ ಪಕ್ಷದ ಬಹು ನಿರೀಕ್ಷಿತ ಪಂಚರತ್ನ   ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

      ಶಿಕ್ಷಣ, ಆಸ್ಪತ್ರೆ, ಸ್ವಾಭಿಮಾನಿ ರೈತ, ಉದ್ಯೋಗ, ಮನೆ ನಿರ್ಮಾಣ, ಪ್ರತಿ ಕುಟುಂಬದ ಹಿರಿಯರಿಗೆ 5 ಸಾವಿರ ರು., ಮಸಾಶನ 800 ರು. ಬದಲಾಗಿ 2000 ರು. ಏರಿಕೆ, ಶ್ರೀಮಂತ ಮತ್ತು ಬಡವರ ನಡುವಿನ ಆರ್ಥಿಕ ವ್ಯತ್ಯಾಸ ಕುಗ್ಗಿಸುವುದು. ಜನರ ಆತ್ಮವಿಶ್ವಾಸ ಹೆಚ್ಚಿಸಿ  ಸದೃಢ ಸರ್ಕಾರ ನಿರ್ಮಾಣಕ್ಕೆ ಕರೆ ನೀಡುವುದು ಪಂಚರತ್ನ ಯಾತ್ರೆ ಉದ್ದೇಶವಾಗಿದೆ ಎಂದರು.

    ಈ ಬಾರಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ  ಶಾರದ ಅಪ್ಪಾಜಿ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ವಿಧಾನಸಭೆಗೆ ಆಯ್ಕೆ ಮಾಡಬೇಕು. ಆ ಮೂಲಕ ಆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕಾರಣಕರ್ತರಾಗಬೇಕೆಂದು ಮನವಿ ಮಾಡಿದರು.

     ಯಾತ್ರೆ ಕೆಂಪೇಗೌಡ ನಗರ, ಬಾರಂದೂರು, ಕೆಂಚೇನಹಳ್ಳಿ, ಮಾವಿನಕೆರೆ, ತಾಷ್ಕೆಂಟ್‌ನಗರ, ಯರೇಹಳ್ಳಿ, ಮಾರುತಿನಗರ, ಶಿವನಿಕ್ರಾಸ್, ಗೌರಾಪುರ, ಬಸವನಗುಡಿ, ಕೆ.ಎಚ್ ನಗರ, ಅಂತರಗಂಗೆ, ಕಾಚಗೊಂಡನಹಳ್ಳಿ, ಅಶ್ವಥ್‌ನಗರ, ಶಿವಾಜಿ ವೃತ್ತ, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ, ಅಂಡರ್‌ಬ್ರಿಡ್ಜ್, ಹೊಸ ಸೇತುವೆ, ಕೆಎಸ್‌ಆರ್‌ಟಿಸಿ ಬಸ್ ಡಿಪೋ ವೃತ್ತ, ಕಂಚಿಬಾಗಿಲು ವೃತ್ತ ಮೂಲಕ ಕನಕಮಂಟಪ ಮೈದಾನ ತಲುಪಲಿದೆ. ಸಂಜೆ ೪ ಗಂಟೆಗೆ ಕನಕಮಂಟಪ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.  ನವುಲೆ ಬಸಾವಪುರದಲ್ಲಿ ಕುಮಾರ ಸ್ವಾಮಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. 

     ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದಾ ಅಪ್ಪಾಜಿ, ವಿಧಾನ ಪರಿಷತ್ ಸದಸ್ಯ  ಎಸ್.ಎಲ್  ಬೋಜೇಗೌಡ, ರಾಜ್ಯ ಕಾರ್ಯದರ್ಶಿ ಜೆ.ಪಿ ಯೋಗೇಶ್,  ಜಿಲ್ಲಾಧ್ಯಕ್ಷ  ಎಂ. ಶ್ರೀಕಾಂತ್,  ಯುವ ಘಟಕದ ಜಿಲ್ಲಾಧ್ಯಕ್ಷ ಮಧು ಕುಮಾರ್ ನಗರ ಘಟಕದ ಅಧ್ಯಕ್ಷ ಆರ್ ಕರುಣಾ ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಧರ್ಮಕುಮಾರ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.   

Monday, February 20, 2023

‎ ಐ.ವಿ ಸಂತೋಷ್, ಸ್ಟೀವನ್ ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಸೇರ್ಪಡೆ

   ಭದ್ರಾವತಿ, ಜ. 21:  ನ್ಯೂಕಾಲೋನಿ ಭಾಗದ ಯುವ ಮುಖಂಡರು, ಸಮಾಜ ಸೇವಕರುಗಳಾದ ರಾಷ್ಟ್ರೀಯ ಮಾನವ ಹಕ್ಕು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ತಾಲೂಕು ಅಧ್ಯಕ್ಷ  ಐ.ವಿ ಸಂತೋಷ್ ಕುಮಾರ್ ಮತ್ತು ಹಾಗೂ ಕಾಲ್ವರಿ ಕಾರುಣ್ಯ ಟ್ರಸ್ಟ್ ಸಂಸ್ಥಾಪಕ ಸ್ಟೀವನ್ ಜೋನಾಥನ್  ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.      
 ಬೆಣ್ಣೆಕೃಷ್ಣ ವೃತ್ತದಲ್ಲಿ ಮಹಾಶಿವರಾತ್ರಿ ಅಂಗವಾಗಿ ಆಯೋಜಿಸಲಾಗಿದ್ದ  ಕಬಡ್ಡಿ ಪಂದ್ಯಾವಳಿಯಲ್ಲಿ ಯುವ ಮುಖಂಡ ಬಿ.ಎಸ್ ಗಣೇಶ್ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ತೊರೆದು  ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. 
    ನಗರಸಭೆ ಮಾಜಿ ಸದಸ್ಯರಾದ ಬಾಲಕೃಷ್ಣ ಫ್ರಾನ್ಸಿಸ್,  ಎಸ್.ಎಸ್ ಭೈರಪ್ಪ, ಹಾವು ಮಂಜ, ದಾಸ್, ನಾಸೀರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
 

ಪರವಾನಿಗೆ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ : ಸೂಕ್ತ ಕ್ರಮಕ್ಕೆ ಆಗ್ರಹ

ಜಯ ಕರ್ನಾಟಕ ಸಂಘಟನೆವತಿಯಿಂದ ನಗರಸಭೆ ಮುಂಭಾಗ ಪ್ರತಿಭಟನೆ

ಭದ್ರಾವತಿ ನಗರಸಭೆ ವಾರ್ಡ್ ನಂ.೨ರ ಬಿ.ಹೆಚ್ ರಸ್ತೆಯಲ್ಲಿ ನಿಯಮ ಉಲ್ಲಂಘನೆಮಾಡಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಅದನ್ನು ತೆರವುಗೊಳಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಸೋಮವಾರ ನಗರಸಭೆ ಮುಂಭಾಗ ಜಯ ಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.  
    ಭದ್ರಾವತಿ, ಫೆ. ೨೦ : ನಗರಸಭೆ ವಾರ್ಡ್ ನಂ.೨ರ ಬಿ.ಹೆಚ್ ರಸ್ತೆಯಲ್ಲಿ ನಿಯಮ ಉಲ್ಲಂಘನೆಮಾಡಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಅದನ್ನು ತೆರವುಗೊಳಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಸೋಮವಾರ ನಗರಸಭೆ ಮುಂಭಾಗ ಜಯ ಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.  
    ಬಿ.ಹೆಚ್ ರಸ್ತೆ ಖಾತೆ ನಂ. ೧೬೭-೧೮೦, ಪಿ.ಐ.ಡಿ: ೨-೨-೧-೨೮೬ರಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ನಿರ್ಮಾಣ ಹಂತದಲ್ಲಿರುವ ಕಟ್ಟಡ ಪರವಾನಿಗೆ ಪ್ರಕಾರ ನಿರ್ಮಾಣಗೊಳ್ಳುತ್ತಿಲ್ಲ. ನಿಯಮ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಕಂಡು ಬಂದಿರುತ್ತದೆ.  ಕೆರೆ-ಕಟ್ಟೆ ಮೊದಲಾದ ಜಲಕಾಯಗಳಲ್ಲಿನ ಹಾಗೂ ನಿರ್ಬಂಧಿತ ಪ್ರದೇಶದಲ್ಲಿನ (ಬಫರ್ ಝೋನ್) ಅಕ್ರಮ ಕಟ್ಟಡ/ಸಂರಚನೆಗಳನ್ನು ತೆರವುಗೊಳಿಸುವ ಕುರಿತು ಸರ್ಕಾರದ ಸುತ್ತೋಲೆ ದಿನಾಂಕ : ೧೧-೦೮-೨೦೨೧
ಹೊರಡಿಸಿದ್ದು, ಇದರ ಪ್ರಕಾರ ಕೆರೆ-ಕಟ್ಟೆ ಜಲಕಾಯಗಳ ಅಂಚಿನಿಂದ ೩೦ ಮೀಟರ್‌ವರೆಗಿನ ವಲಯದಲ್ಲಿ (ಬಫರ್ ಝೋನ್) ನಿರ್ಮಾಣವಾಗಿರುವ ಅಕ್ರಮ ಕಟ್ಟಡ/ಸಂರಚನೆಗಳನ್ನು ಸಹ ಕಟ್ಟುನಿಟ್ಟಾಗಿ ತೆರವು ಗೊಳಿಸುವಂತೆ ನಿರ್ದೇಶಿಸಿದೆ. ಆದರೆ ಪ್ರಸ್ತುತ ಕಟ್ಟಡ ನಿರ್ಮಾಣದಾರರು ದಿನಾಂಕ : ೨೦-೧೨-೨೦೨೧ರಂದು ಪರವಾನಿಗೆ ಪಡೆದಿರುತ್ತಾರೆ. ಅದರ ಪ್ರಕಾರ ಇವರು ೧೫ ಮೀಟರ್‌ಗಳು ಮಾತ್ರ ಬಫರ್ ಝೋನ್ ಬಿಟ್ಟಿರುತ್ತಾರೆ. ಅಲ್ಲದೆ ದಿನಾಂಕ: ೨೪-೦೧-೨೦೨೦ರ ಕಟ್ಟಡ ಪರವಾನಿಗೆಯ ಪ್ರಕಾರ ಇದು ಪಾರ್ಕಿಂಗ್ ಸ್ಥಳವಾಗಿದ್ದು, ಈ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುತ್ತಿರುವುದು ಕಂಡುಬಂದಿರುತ್ತದೆ ಎಂದು ದೂರಿದರು.
    ಈ ಹಿಂದೆ ವಿಶಾಲ್ ಮಾರ್ಟ್ ಕಟ್ಟಡವನ್ನು ಸಹ ಯಾವುದೇ ಸೆಟ್‌ಬ್ಯಾಕ್ ಜಾಗ ಹಾಗು ಪಾರ್ಕಿಂಗ್ ಜಾಗ ಬಿಡದೆ ಹಾಗೂ ಪರವಾನಿಗೆ ಕಾನೂನುಗಳನ್ನು ದುರುಪಯೋಗ ಮಾಡಿಕೊಂಡು ನಿರ್ಮಿಸಿದ್ದು, ಅಲ್ಲದೆ ನದಿ ಜಾಗ ಒತ್ತುವರಿ ಮಾಡಿಕೊಂಡಿರುತ್ತಾರೆಂದು ಆರೋಪಿಸಿದರು.
    ಈ ಹಿಂದೆ ಸಂಘಟನೆ ವತಿಯಿಂದ ದೂರು ನೀಡಿದ ಹಿನ್ನಲೆಯಲ್ಲಿ ನಗರಸಭೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಕಟ್ಟಡ ನಿರ್ಮಾಣದ ಸರ್ವೆಯನ್ನು ಪೂರ್ಣಗೊಳಿಸಿ ನಮಗೆ ಹಿಂಬರಹದಲ್ಲಿ ಸೆಟ್‌ಬ್ಯಾಕ್ ನಿರ್ಮಾಣದಲ್ಲಿ ಉಲ್ಲಂಘನೆಯಾಗಿರುತ್ತದೆ ಮತ್ತು ನದಿ ಜಾಗ ಒತ್ತುವರಿಯಾಗಿದೆ ಎಂದು ಹಿಂಬರಹ ನೀಡಿರುತ್ತಾರೆ.
    ಈ ಹಿನ್ನಲೆಯಲ್ಲಿ ವಿಶಾಲ್ ಮಾರ್ಟ್ ಕಟ್ಟಡ ಮತ್ತು ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡ ಕಾಮಗಾರಿ ತಕ್ಷಣ ಸ್ಥಗಿತಗೊಳಿಸುವ ಜೊತೆಗೆ ಆಕ್ರಮ ಕಟ್ಟಡ ತೆರವುಗೊಳಿಸಬೇಕು. ಅಲ್ಲದೆ ಈ ಆಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಅಮನಾತುಗೊಳಿಸಬೇಕೆಂದು ಆಗ್ರಹಿಸಿದರು.
    ಸಂಘಟನೆ ಜಿಲ್ಲಾ ಕಾರ್ಯಾಧ್ಯಕ್ಷ ಎಂ. ಮುಕುಂದ, ಗೌರವಾಧ್ಯಕ್ಷ ಶರವಣ, ತಾಲೂಕು ಅಧ್ಯಕ್ಷ ಆರ್. ಅರುಣ, ತಾಲೂಕು ಕಾರ್ಯಾಧ್ಯಕ್ಷ ಚೇತನ್‌ಕುಮಾರ್, ಪ್ರಧಾನ ಕಾರ್ಯಧರ್ಶಿ ಸಿ. ಜೀವನ್‌ಕುಮಾರ್, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ್, ಪ್ರಮುಖರಾದ ಡಿ.ಟಿ ಶಶಿಕುಮಾರ್, ಆಟೋ ಶಂಕರ್, ವರಲಕ್ಷ್ಮೀ, ಬಿ.ಆರ್ ಜಯ, ಚಂದ್ರಶೇಖರ್, ಯೋಗೇಶ್, ತ್ಯಾಗರಾಜ್, ಶಿವಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.